https://www.facebook.com/share/p/1En7E9Ecir/
👆ವಿಶ್ವವಾಣಿ'ಯ 'ವಿರಾಮ'ದಲ್ಲಿ
'ಕದನ ಕುತೂಹಲ...!'
ಏಪ್ರಿಲ್19ರಂದು ಪ್ರಕಟವಾಗಿದ್ದು ನಿಮ್ಮ ಮುಂದಿದೆ. ಓದಿ ಪ್ರತಿಕ್ರಿಯಿಸಿ🌼
'ವಿಶ್ವವಾಣಿ' ಪತ್ರಿಕಾ ಬಳಗಕ್ಕೆ ಧನ್ಯವಾದಗಳು🙏
ಕದನ ಕುತೂಹಲ...!
ಬಹುಶಃ ಕಿಶೋರಾವಸ್ಥೆಯಿಂದಲೂ ಹೊತ್ತು ಮೂಡಿ ಕುಕ್ಕುಟಗಳು ʼಕೊಕ್ಕೋʼ ಎನ್ನುವ ಮೊದಲೇ ಹಕ್ಕಿಗಳ ಚಿಲಿಪಿಲಿ ಗಾನ ಕಣ್ಮುಚ್ಚಿ ಕನಸು ಕಾಣುತ್ತಿದ್ದ ನಮ್ಮ ಕಿವಿಗಳನ್ನು ತಲುಪುವ ಪೂರ್ವದಲ್ಲಿಯೇ ಅಕ್ಕಪಕ್ಕದವರ ಕರ್ಣಕಠೋರವಾದ ಜಗಳದ ಅಬ್ಬರದ ಸುಪ್ರಭಾತವಾಗುತ್ತಿತ್ತು. ಅಷ್ಟರಲ್ಲಾಗಲೇ ಎದ್ದು ದೇವರ ನಾಮ ಹೇಳಿಕೊಳ್ಳುತ್ತಿದ್ದ ಅಜ್ಜಿ ಜಗಳದಲ್ಲಿನ ಅವಾಚ್ಯಗಳನ್ನು ಸಹಿಸದೆ ಕಿವಿಮುಚ್ಚಿಕೊಂಡು ʼರಾಮ, ರಾಮʼ ಎನ್ನುವಾಗಲೇ ದಿನನಿತ್ಯದ ಕಾರ್ಯ ಪರಂಪರೆಯಲ್ಲಿ ತೊಡಗಿರುತ್ತಿದ್ದ ಅಮ್ಮ ರೇಡಿಯೋ ಆನ್ ಮಾಡಿ ಗರಿಷ್ಟ ವಾಲ್ಯೂಮ್ ಕೊಟ್ಟು ಆ ಕೆಟ್ಟ ಪದಗಳು ಎದ್ದಾಕ್ಷಣವೇ ಮಕ್ಕಳ ಕಿವಿಯ ಮೇಲೆ ಬೀಳದಂತೆ ಜಾಗ್ರತೆ ವಹಿಸುತ್ತಿದ್ದರು. ಜಗಳದಲ್ಲಿ ನಮ್ಮತ್ತೆಯದೂ ಪಾಲಿದ್ದರಂತೂ ಕೇಳುವಂತೆಯೇ ಇರಲಿಲ್ಲ. ಅವರು ಪ್ರತಿದಿನವೂ ತಪ್ಪದೇ ಓದುತ್ತಿದ್ದ ಕುಮಾರವ್ಯಾಸಭಾರತದ ಪ್ರಭಾವದಿಂದಲೋ ಏನೋ ಸುಸಂಸ್ಕೃತ ಪದಪುಂಜಗಳೊಂದಿಗೇ ತಾವು ಪ್ರೀತಿಯಿಂದ ಬೆಳೆಸಿದ ಗಿಡಗಳನ್ನು ಧ್ವಂಸಮಾಡಿದ ದನಗಳ ಮಾಲೀಕರ ಜನ್ಮ ಜಾಲಾಡುತ್ತಿದ್ದರು. ಬೆಳಗಿನಿಂದ ರಾತ್ರಿಯವರೆಗೂ ಸುತ್ತಮುತ್ತಾ ಒಂದಲ್ಲಾ ಒಂದು ಜಗಳವಾಗುತ್ತಿದ್ದರೂ ಅದರಿಂದ ಸ್ವಲ್ಪವೂ ವಿಚಲಿತವಾಗದಂತೆ ನಮ್ಮ ಬಾಲ್ಯ ಮುನ್ನಡೆಯುತ್ತಿತ್ತು. ಆದರೂ ನಮ್ಮನಮ್ಮ ನಡುವೆ ಆಗಾಗ ನಡೆಯುತ್ತಿದ್ದ ಕೋಳಿಜಗಳಗಳನ್ನು ಬಿಡಿಸುವುದರಲ್ಲೇ ಮನೆಯವರಿಗೆ ಸಾಕುಸಾಕಾಗಿ ಮಕ್ಕಳೂ ಎಲ್ಲಿ ಜಗಳಗಂಟರಾಗುತ್ತಾರೋ ಎಂದು ಪರಿತಪಿಸುವಂತಾಗುತ್ತಿತ್ತು. ಇದಕ್ಕೆ ಅಪವಾದವೆನ್ನುವಂತೆ ನಾನು ಮಾತ್ರ ಯಾವ ಜಗಳದಲ್ಲೂ ಭಾಗಿಯಾಗದೇ ಬಲಾಢ್ಯರಿಗೆ ತಗ್ಗಿಬಗ್ಗಿ ನಡೆಯುತ್ತಾ ಸೋಲುವುದರಲ್ಲೇ ಸಂತೃಪ್ತಳಾಗಿ ಹಿರಿಯರ ಮೆಚ್ಚುಗೆಗೆ ಪಾತ್ರಳಾಗಿದ್ದೆ. ಆದರೆ ಸಹಜ ರಾಜಸ ಪ್ರವೃತ್ತಿಯ ನಮ್ಮತ್ತೆ ಮಾತ್ರ ʼಇಷ್ಟೊಂದು ಮೆದುಗಲಾದರೆ ಮುಂದೆ ಹೇಗೆ ನಿಭಾಯಿಸುತ್ತೋʼ ಎಂದು ಅಲವತ್ತುಕೊಳ್ಳುತ್ತಿದ್ದರು.
ನಮ್ಮ ಹಳ್ಳಿಯಲ್ಲಿ ಮಾತುಮಾತಿಗೂ ಜಗಳ ನಡೆಯುತ್ತಿದ್ದು ವಿಕೋಪಕ್ಕೆ ಹೋಗಿ ಹೊಡೆದಾಡುವ ಹಂತವನ್ನೂ ತಲುಪುತ್ತಿತ್ತು. ಕುಟುಂಬದ ಒಳಗಿನ ಕಲಹವಾಗಲೀ, ಕುಟುಂಬಗಳ ನಡುವಿನದಾಗಲೀ ಅಪರಿಹಾರ್ಯವೆನಿಸಿದಾಗ ಶಾಂತಿಪ್ರಿಯರಾದ ನಮ್ಮ ತಂದೆಯ ಬಳಿಗೇ ಬರುತ್ತಿದ್ದರು. ಅವರು ʼಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲʼ ಎಂದು ಒಮ್ಮೊಮ್ಮೆ ಸಮಾಧಾನಿಸಿದರೆ ʼಕಾದ ಮನೆ ಕಲ್ಲಾಯ್ತು, ಹೋರಿದ್ದ ಮನೆ ಹುಲ್ಲಾಯ್ತುʼ ಎಂಬ ಗ್ರಾಮ್ಯ ನುಡಿಗಟ್ಟನ್ನು ಹೇಳಿ ಜಗಳದ ಪರಿಣಾಮವನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದರು. ಆದರೂ ನಾಯಿಬಾಲ ಡೊಂಕು ಎನ್ನುವಂತೆ ಹೊಸಹೊಸ ಕಾರಣಗಳಿಗೆ ಕಾದಾಟ ನಡೆಯುವುದಂತೂ ತಪ್ಪುತ್ತಿರಲಿಲ್ಲ.
ಶಾಲೆಗೆ ಹೋಗಲು ಪ್ರಾರಂಭಿಸಿದ ನಂತರ ಜೊತೆಯವರು ಕ್ಷುಲ್ಲಕ ಕಾರಣಗಳಿಗೂ ಕಿತ್ತಾಡುವುದನ್ನು ನೋಡಿ ಯಾರಬಳಿಯೂ ಸಲುಗೆಯಿಂದಿರಲು ಭಯವಾಗಿ ತಟಸ್ಥಳಾದಾಗ ಮಕ್ಕಳ ಕಿತಾಪತಿಯಿಂದ ತಲೆ ಚಿಟ್ಟುಹಿಡಿಸಿಕೊಂಡ ಶಿಕ್ಷಕರೇನೋ ʼಅವಳನ್ನು ನೋಡಿ ಕಲಿಯಿರಿʼ ಎಂದು ಮೆಚ್ಚುಗೆ ಸೂಸಿದರೂ ಸಹಪಾಠಿಗಳಿಂದ ಒಂಟರಬಡುಕ ಸುಂಟರಗಾಳಿ ಎನಿಸಿಕೊಳ್ಳುವಂತಾಯ್ತು. ಅಂತೂ ಶಾಂತಿಧೂತಳಂತೆ ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೂ ಸೇರಿದ್ದೇನೋ ಆಯ್ತು. ಆದರೆ ಹೀಗೇ ಏಕಾಂಗವೀರಳಾಗಿ ವೈವಾಹಿಕ ಜೀವನದಲ್ಲಿ ಮುನ್ನಡೆಯಲಾಗಲಿಲ್ಲ. ಹೇಗೋ ಏನೋ ಎಂಬ ಅಳುಕಿನಲ್ಲಿ ಹೊಸದರಲ್ಲಿ ಸ್ವಲ್ಪಸ್ವಲ್ಪವೇ ಅಧಿಕಾರ ಚಲಾವಣೆ ಮಾಡುತ್ತಾ ಇದ್ದ ನನ್ನವರು ಸಂಪೂರ್ಣ ಸ್ವಾಮ್ಯಕ್ಕೊಳಪಡಲು ಸಿದ್ದಳಿಲ್ಲವೆನ್ನುವುದನ್ನು ಮನಗಂಡು ಭಿನ್ನಾಭಿಪ್ರಾಯ ತಲೆದೋರಿದಾಗಲೆಲ್ಲಾ ವಾಗ್ಬಾಣಗಳನ್ನು ಪ್ರಯೋಗಿಸುತ್ತಾ ನೇರ ಹೋರಾಟಕ್ಕೇ ಆಹ್ವಾನ ನೀಡಲಾರಂಭಿಸಿದರು. ಮೊದಲೇ ಜಗಳವೆಂದರೇ ಮಾರುದೂರ ಹಾರುತ್ತಿದ್ದ ನಾನು ಹೇಗೂ ತಪ್ಪಿಸಿಕೊಳ್ಳಲಾರದೇ ಪ್ರಾರಂಭಿಕ ಮೌನರೋಧನದ ನಂತರ ಅಸ್ತ್ರಗಳಿಗೆ ಪ್ರತ್ಯಸ್ತ್ರ ಹೂಡುವ ತಂತ್ರಗಳನ್ನು ಅವರ ನಡೆ-ನುಡಿಗಳನ್ನೇ ಗಮನಿಸುತ್ತಾ ಒಂದೊಂದಾಗಿ ಅಭ್ಯಾಸ ಮಾಡಿಕೊಳ್ಳಲಾರಂಭಿಸಿದೆ. ಹೀಗಾಗಿ ಕಲಹಮಲ್ಲರಾದ ನನ್ನವರೇ ನನ್ನ ಕಲಹಕಲಿಕಾ ಮಾರ್ಗದರ್ಶಕರೆಂದು ನಿಸ್ಸಂಶಯವಾಗಿ ಒಪ್ಪಿಕೊಳ್ಳುವಂತಾಯ್ತು. ಕ್ರಮೇಣ ʼಗುರುವಿನಮಿಂಚಿನ ಶಿಷ್ಯʼಳಾಗಿ ಅವರಿಗೆ ಸರಿಪಟ್ಟಿಕೊಂಡು ಕಲಹ ಮಾಡುವ ಕಲೆ ಕರತಲಾಮಲಕವಾಗುವಂತಾಗಿ ಜಗಳಮಾಡುವುದರಲ್ಲಿಯೂ ಎಂಥಾ ಖುಷಿಯಿದೆಯೆಂದು ಅಚ್ಚರಿಪಡುವಂತಾಯಿತು! ಜಗಳವಿರದ ಮನೆಯಿರಲು ಸಾಧ್ಯವೇ ಎಂಬ ಪರಮ ಸತ್ಯದ ಅರಿವಾದ ನಂತರ ಅದರ ಧನಾತ್ಮಕ ಅಂಶವಾದ ಮನದೊಳಗಿನ ಒಂದೊಂದೇ ಮಾತು ಹೊರಬರುವುದರಿಂದ ಮನಸ್ಸಿನ ಒತ್ತಡ ಕಡಿಮೆಯಾಗುವುದು ಎನ್ನುವುದೂ ಮನದಟ್ಟಾಗಿ ನನ್ನ ಸಪ್ಪೆ ಜೀವನಕ್ಕೆ ವಿದಾಯ ಹೇಳಿದೆ. ಆಹಾ ನನ್ನಲ್ಲೇ ಹುದುಗಿದ್ದ ಅಪಾರ ಸಾಮರ್ಥ್ಯವನ್ನು ಹೊರಹೊಮ್ಮಿಸಿದ ಕಲಹಾನಂದವೇ!
ಈ ಕಲಹವೆನ್ನುವುದು ಇವತ್ತು-ನಿನ್ನೆಯದಲ್ಲ. ನಮ್ಮ ಪುರಾಣಗಳಲ್ಲಿರುವಂತೆ ಸಮುದ್ರ ಮಂಥನದ ಸಂದರ್ಭದಲ್ಲಿ ದೇವತೆಗಳು ಮತ್ತು ದಾನವರ ನಡುವೆ ಮಹಾನ್ ಕದನವೇ ನಡೆದಿದೆ. ಮಹಾಭಾರತದಲ್ಲಿ ಅಧಿಕಾರ ಲಾಲಸೆಗಾಗಿ ಕೌರವರು ಮತ್ತು ಪಾಂಡವರ ನಡುವೆ ಘನಘೋರವಾದ ಕುರುಕ್ಷೇತ್ರಯುದ್ಧವೇ ಆಗಿದೆ. ʼಕಲಹ ಪ್ರಿಯ'ರೆಂದೇ ಪ್ರಸಿದ್ಧರಾಗಿದ್ದ ನಾರದ ಮುನಿಗಳು ದೇವ-ದಾನವರು, ರಾಜ-ಮಹಾರಾಜರು, ಋಷಿ-ಮುನಿಗಳ ನಡುವೆ ಕಲಹ ಮಾಡುವಂತೆ ಪ್ರೇರೇಪಿಸಬಲ್ಲವರಾಗಿದ್ದರು. ʼನಾರಾದರೆಲ್ಲೆಲ್ಲಿ ಕದನಕಿಕ್ಕುವರೊ...ʼ ಎಂದು ಕದನ ಕುತೂಹಲಿಯಾಗಿದ್ದ ನಮ್ಮತ್ತೆ ಆಗಾಗ ಹಾಡುತ್ತಿದ್ದರು!
ಇತಿಹಾಸವೂ ರೋಮನ್ ಸಾಮ್ರಾಜ್ಯವು ಪತನಗೊಂಡಿದ್ದು ಆಂತರಿಕ ಕಲಹಗಳಿಂದಲೇ ಎಂದು ಸಾರುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿಯೂ ಜಗತ್ತಿನಾದ್ಯಂತ ವೈಮನಸ್ಯದಿಂದುಂಟಾದ ಸಂಘರ್ಷಗಳ ವೈಪರೀತ್ಯಗಳನ್ನು ನೋಡುತ್ತಲೇ ಇದ್ದೇವೆ.
ಪ್ರಾಣಿಜಗತ್ತಿನಲ್ಲಿಯೂ ಆಹಾರಕ್ಕೆ, ಆವಾಸಸ್ಥಾನಕ್ಕೆ ಕಾದಾಡುವುದು ಸರ್ವೇಸಾಮಾನ್ಯ. ಮರಿಗಳನ್ನು ಕಾಪಾಡುವುದಕ್ಕೆ ತಮ್ಮ ಜೀವವನ್ನೇ ಫಣಕ್ಕಿಟ್ಟು ಹೋರಾಡುತ್ತವೆ. ನಮ್ಮ ಗದ್ದೆಯ ಹತ್ತಿರ ಆಲದ ಮರದ ಪೊಟರೆಯಲ್ಲಿ ಹಕ್ಕಿಯ ಮೊಟ್ಟೆ ಎಗರಿಸಲು ಹಾವು ಬಂದಾಗ ತಾಯಿಹಕ್ಕಿಯ ಆಕ್ರಮಣದ ಹೋರಾಟ-ಚೀತ್ಕಾರ ಬಹಳ ಬೀಭತ್ಸವಾಗಿರುತ್ತಿತ್ತು! ಇನ್ನು ಒಂದು ಹೆಣ್ಣಿಗಾಗಿ ಗಂಡುಗಳೆರಡು ನಡೆಸುವ ಕಾಳಗವಂತೂ ಬಲು ಭೀಕರ. ಮನುಷ್ಯರಲ್ಲೂ ಇಂಥಾ ಮೃಗೀಯ ವರ್ತನೆಯ ಸುದ್ಧಿಗಳು ಆಗಾಗ ಬರುತ್ತಲೇ ಇರುತ್ತವೆ. ನಮ್ಮ ಕಡೆ ವೈಷಮ್ಯದ ದಾಂಪತ್ಯವನ್ನು ʼಬೆಕ್ಕಿನ ಸಂಸಾರʼ ಎನ್ನುವ ವಾಡಿಕೆಯಿದೆ. ನಮ್ಮ ಗಾರ್ಡನ್ ಮತ್ತು ಟೆರೇಸ್ಗಳನ್ನೇ ತಮ್ಮ ಕದನಕ್ಷೇತ್ರವಾಗಿಸಿಕೊಳ್ಳುವ ಬೆಕ್ಕುಗಳ ಹೋರಾಟದ ಪೂರ್ವ ಚೀರಾಟದಿಂದ ಎಷ್ಟೋಬಾರಿ ಬೆಚ್ಚಿಬಿದ್ದಿದ್ದೇವೆ. ನೀರುನಾಯಿಗಳು ಕಾದಾಟವನ್ನೇ ಆಡುತ್ತಾ ಕದನಕಲೆಯಲ್ಲಿ ಪಳಗುತ್ತವಂತೆ!
ಕದನ ಕುತೂಹಲ ರಾಗವು ಪಟ್ನಂ ಸುಬ್ರಮಣ್ಯ ಅಯ್ಯರ್ ಅವರು ಜನಪ್ರಿಯಗೊಳಿಸಿರುವ, ಕೇಳುಗರಲ್ಲಿ ಉತ್ಸಾಹ ಮತ್ತು ಶೌರ್ಯದ ಭಾವನೆಯನ್ನು ಮೂಡಿಸುವ ರಾಗವಾಗಿದೆ. ಶ್ರೋತೃಗಳು ಸಂಗೀತದಲ್ಲಿ ತನ್ಮಯರಾಗಿ ಇನ್ನೇನು ನಿದ್ರಾದೇವಿಗೆ ಶರಣಾಗುವ ವೇಳೆಗೆ ʼರಘುವಂಶ ಸುಧಾಂಬುಧೀ ಚಂದ್ರಿಕೆ…ʼ ಎಂದು ಪ್ರಾರಂಭಿಸಿದಾಕ್ಷಣವೇ ಥಟ್ಟನೆ ಎಚ್ಚರಗೊಳ್ಳುತ್ತಾರೆಂದರೆ ಅದರ ಕೀರ್ತಿ ʼಕದನʼಕ್ಕೇ ಸಲ್ಲಬೇಕಲ್ಲವೆ! ಕದನ ಕುತೂಹಲ ರಾಗವೆನ್ನುವುದು ಯುದ್ಧದ ಮುನ್ನ ವೀರನ ಮನಸ್ಸಿನಲ್ಲಿ ಮೂಡುವ ವಿಶಿಷ್ಟ ಭಾವಸ್ಥಿತಿಯನ್ನು ಸೂಚಿಸುವ ಸಾಹಿತ್ಯಾತ್ಮಕ ಪದಗುಚ್ಛವೆಂದೂ ಹೇಳುತ್ತಾರೆ. ಈಗಂತೂ ಸ್ಟ್ರಾಟಜಿಕ್ ವಾರ್ಗಳು! ಸಾಹಿತ್ಯಕ್ಷೇತ್ರದಲ್ಲಿಯೂ ಆಗಾಗ ಲೇಖಕರು ಹಾಗೂ ವಿಮರ್ಶಕರ ನಡುವೆ ಮುಸುಕಿನೊಳಗಿನ ಗುದ್ದಾಟದಂಥಾ ಕೋಲ್ಡ್ ವಾರ್ಗಳು ನಡೆಯುತ್ತಲೇ ಇರುತ್ತವೆ. ಬಹಳ ಸೀರಿಯಸ್ ಆಯ್ತಲ್ವಾ? ಸಣ್ಣ ಕಿಡಿಯಿಂದ ಬೃಹತ್ ಸ್ಪೋಟವೇ ಆಗುವಂತೆ… ರಿಲ್ಯಾಕ್ಸ್… ರಿಲ್ಯಾಕ್ಸ್…
ಈಗ ಮತ್ತೆ ಕಮಿಂಗ್ ಬ್ಯಾಕ್ ಟು ಅವರ್ ಕುಟುಂಬ ಕಲಹ, ʼಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕʼ ಎಂದರೆ ವಿರಸ ತಾತ್ಕಾಲಿಕವಾಗಿದ್ದು ಸರಸದೊಂದಿಗೆ ಮುಕ್ತಾಯವಾಗುತ್ತದೆ ಎಂಬ ಅತ್ಯಂತ ಜನಜನಿತವಾದ ಉಕ್ತಿಯೊಂದಿದೆ. ಆದರೆ ಈಗೀಗ ಆ ಜಗಳವು ಕೋರ್ಟ್ ಮೆಟ್ಟಿಲೇರುವವರೆಗೂ ಮುಂದುವರೆಯುತ್ತಿರುವುದು ವಿಷಾದನೀಯ. ಏನುಮಾಡುವುದು ಪರಿಸ್ಥಿತಿ, ಮನಃಸ್ಥತಿ… ಆದರೂ ಇತ್ತೀಚೆಗೆ ವಿದೇಶೀ ಹೈಕೋರ್ಟ್ ಒಂದರಲ್ಲಿ ನ್ಯಾಯಾಧೀಶರ ನಡುವೆ ಜಗಳದ ಕಾವೇರಿ ಕೈಕೈಮಿಲಾಯಿಸುವ ವಿಡಿಯೋ ನೋಡಿದಾಗ ಬೇಲಿಯೇ ಎದ್ದು ಹೊಲವನ್ನು ಮೇಯ್ದಂತಾಗಿ ನ್ಯಾಯ ಕೇಳಲು ಹೋಗುವುದಾದರೂ ಎಲ್ಲಿಗೆ ಎನಿಸದಿರುವುದಿಲ್ಲ!
ಮತ್ತದೇ ರಾಗ!...!...!
ನಾನೇನೋ ಜಗಳ ಮಾಡುವುದನ್ನು ಕಲಿತುಬಿಟ್ಟೆನೆಂದು ಬೀಗಬಹುದು, ಮಾತಿಗೆ ಮಾತಿನ ತಿರುಗೇಟು ಕೊಡುತ್ತಾ ಕಲಹಾನಂದವನ್ನೂ ಹೊಂದಬಹುದು, ಆದರೆ ಮನೆಯೇ ಮೊದಲ ಪಾಠಶಾಲೆಯಾದ್ದರಿಂದ ನಮ್ಮಂಥಾ ಕುಟುಂಬಗಳಲ್ಲಿ ಮಾತು ಕಲಿಯುವ ಮುನ್ನವೇ ಮಕ್ಕಳೂ ಜಗಳವಾಡುವುದನ್ನೇ ಕಲಿತುಬಿಟ್ಟರೆ! ʼಕುಟುಂಬದಲ್ಲಿ ಕಲಹ ಉಪ್ಪಿನಷ್ಟು ಇರಬೇಕು, ಜಾಸ್ತಿಯಾಯ್ತೆಂದರೆ ಊಟವೇ ಹಾಳು!ʼ ಎಂಬ ಅಜ್ಜಿಯ ಮಾತಿನಂತೆ ಹಿತಮಿತವಾಗಿದ್ದರೆ ಒಳಿತಲ್ಲವೆ
✍ಪ್ರಭಾಮಣಿ ನಾಗರಾಜ, ಹಾಸನ

















