Wednesday, July 24, 2024

ಮುಗಿಯದ ಆಟ, ಆ ತುಂಟಾಟ!




 ಜುಲೈ 2024ರ 'ಅಪರಂಜಿ' ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನ ಒಂದು ಪುಟ್ಟ ಲಘು ಬರಹ ನಿಮ್ಮ ಪ್ರೀತಿಯ ಓದಿಗೆ😀


🏌️ಮುಗಿಯದ ಆಟ, ಆ ತುಂಟಾಟ!⛹️


ಅಕ್ಕಪಕ್ಕದ ಮನೆಗಳಿಲ್ಲದ ಹಳ್ಳಿಯ ನಮ್ಮ ಮನೆಯಲ್ಲಿ ನಮ್ಮ ಬಾಲ್ಯ ಚಿಕ್ಕ ಮಕ್ಕಳಾಗಿದ್ದ ನಾವು ನಾವೇ ಆಟವಾಡಿಕೊಳ್ಳುವುದರಲ್ಲೇ ಸರಿದುಹೋಯಿತು.

ನಮ್ಮ ಮನೆಯಲ್ಲಿ ಸುಂದರವಾಗಿ ಕೆತ್ತನೆ ಮಾಡಿದ್ದ ಒಂದು ಸಣ್ಣ ಮರದ ತೊಟ್ಟಿಲು ಇತ್ತು. ನಾನು ಚಿಕ್ಕವಳಾಗಿದ್ದಾಗ ಅದನ್ನು ಜಗುಲಿಯ ಮೇಲಿನ ಸೂರಿಗೆ ಕಟ್ಟಿಸಿಕೊಂಡು ತೂಗುವ ಆಟ ಅಡುತ್ತಿದ್ದೆ. ನನಗಿಂತ ಎರಡು ವರ್ಷ ಚಿಕ್ಕವನಾದ ನನ್ನ ತಮ್ಮ ಬಹಳ ಬಲಶಾಲಿಯಾಗಿದ್ದ. ದಿನದಲ್ಲಿ ಕನಿಷ್ಠ ಒಂದು ಸಾರಿಯಾದರೂ ಏನಾದರೂ ಕ್ಯಾತೆ ತೆಗೆದು ಹೊಡೆದು ನನ್ನನ್ನು ಅಳಿಸುತ್ತಿದ್ದ. ಅವತ್ತೂ ಹಾಗೇ ತನ್ಮಯತೆಯಿಂದ ತೊಟ್ಟಿಲು ತೂಗುತ್ತಿದ್ದವಳನ್ನು ಹಿಂದಿನಿಂದ ಅನಾಮತ್ತಾಗಿ ನೂಕಿಬಿಟ್ಟ! ನಾನು ಆಯತಪ್ಪಿ ಜಗುಲಿಯಿಂದ ಕೆಳಗುರುಳಿದಾಗ ನನ್ನ ತಲೆ ಜಗುಲಿಯ ಕೆಳಗೆ ದನಕಟ್ಟಲು ಹೊಡೆದಿದ್ದ ಗೂಟಕ್ಕೆ ಬಡಿದು ಬುರುಡೆ ಒಡೆದು ರಕ್ತ ಸುರಿಯಲಾರಂಭಿಸಿತು. ನನ್ನ ಕಿರುಚಾಟಕ್ಕೆ ಓಡಿಬಂದ ಹಿರಿಯರಲ್ಲಿ ಚಿಕ್ಕತ್ತೆ ನನ್ನ ಗಾಯ ತೊಳೆದು ಆ ಕಾಲದ ಪ್ರಥಮ ಚಿಕಿತ್ಸೆ ಕಾಫಿಪುಡಿ ತುಂಬಿದರೆ ದೊಡ್ಡತ್ತೆ ಹೇಗಾಯಿತು ಎಂದು ವಿಚಾರಿಸುವ ಮೊದಲೇ ನನ್ನ ತಮ್ಮನನ್ನು ಎಳೆದುಕೊಂಡು ಬಂದು ನಾಲ್ಕೇಟು ಬಾರಿಸಿ ಕೈಗಳನ್ನು ಹಿಂದಕ್ಕೆ ಕಟ್ಟಿ ಕಾಲನ್ನೂ ಕಟ್ಟಿ ಕೂರಿಸಿಯಾಗಿತ್ತು! ಅಳುತ್ತಿದ್ದ ನನ್ನ ಮುಂದೆ ಕಡಲೆಕಾಯಿ ಸುರಿದು, ಬೆಲ್ಲ ಕೊಟ್ಟು ರಮಿಸಿದರೆ ಅವನಿಗೆ ಏನನ್ನೂ ಕೊಡದೆ ಮನೆಗೆ ಬಂದವರೆಲ್ಲಾ ಬಯ್ಯುವುದೇ ಆಯಿತು. ದಿನವೂ ಅವನಿಂದ ಹೊಡೆತ ತಿಂದು ಏನೂ ಮಾಡಲಾಗದಿದ್ದ ಅಸಹಾಯಕ ಸ್ಥಿತಿಯಲ್ಲಿದ್ದ ನಾನು ಇದೇ ಸುಸಮಯವೆಂದು ಯಾರಾದರೂ ಬಂದಾಕ್ಷಣವೇ ಹೊಸದಾಗಿ ಅಳುತ್ತಾ ಅವನನ್ನು ಮತ್ತಷ್ಟು ಬೈಸಿ ಸೇಡು ತೀರಿಸಿಕೊಳ್ಳುತ್ತಿದ್ದೆ!

        ಬಹಳ ತುಂಟನಾಗಿದ್ದ ನನ್ನ ತಮ್ಮ ಒಮ್ಮೆ ದನೀನ ಕೊಟ್ಟಿಗೆಯಲ್ಲಿ ಒಂದು ಹಾವಿನಮರಿಯನ್ನು ಹಿಡಿದುಕೊಂಡು ಬಿಟ್ಟ. ಮನೆಯವರೆಲ್ಲರೂ ಜಮೀನು ಹಾಗೂ ಹೊರಗಿನ ಕೆಲಸಗಳಿಗೆ ಹೋಗಿದ್ದು ದೊಡ್ಡವರಾಗಿ ನಮ್ಮ ಚಿಕ್ಕತ್ತೆ ಒಬ್ಬರೇ ಮನೆಯಲ್ಲಿದ್ದದ್ದು. ನಾವೆಲ್ಲಾ ಓಡಿಹೋಗಿ ಅವರನ್ನು ಕರೆದುಕೊಂಡು ಬಂದೆವು. ಪಾಪ, ಕಣ್ಣೂ ಸರಿಯಾಗಿ ಕಾಣದ ಅವರು ಏನು ತಾನೇ ಮಾಡ್ತಾರೆ!  ಅವನು ಹಾವಿನಮರಿ ತಲೆ ಮೇಲೆತ್ತದಂತೆ ಒಂದೇ ಸಮನೆ ಕೊಡವುತ್ತಿದ್ದಾನೆ. ಏನೂ ತೋಚದೆ ಅವರು ಇನ್ನೆಲ್ಲಿ ಸ್ವಲ್ಪ ಹೆಚ್ಚುಕಮ್ಮಿಯಾದ್ರೆ ಕಚ್ಚಿಬಿಡುತ್ತೋ ಅಂತ ದೇವರನ್ನ ಪ್ರಾರ್ಥಿಸುತ್ತಾ, 'ಕಂದಾ, ದೂರಕ್ಕೆ ಎಸೆದುಬಿಡಪ್ಪ ಅಂತ ಗೋಗರೆಯಲಾರಂಭಿಸಿದರು. ಇದ್ದಕ್ಕಿದ್ದಂತೆಯೇ ಅವನು ಜೋರಾಗಿ ಬೀಸಿ ಎಸೆದುಬಿಟ್ಟ! ಅದು ಎಲ್ಲಿ ಹೋಯಿತೋ ಯಾರಿಗೂ ಕಾಣಲಿಲ್ಲ.

             ನನ್ನ ತಮ್ಮನ  ತುಂಟಾಟಗಳಿಗೆ ಕೊನೆಮೊದಲೇ ಇರಲಿಲ್ಲ. ದಿನದಲ್ಲಿ ಒಂದುಸಾರಿಯಾದರೂ ಏನಾದರೂ ಒಂದು ಚೇಷ್ಟೆ ಮಾಡಿ ನಮ್ಮ ದೊಡ್ಡತ್ತೆಯಿಂದ ಹೊಡೆಸಿಕೊಳ್ಳುತ್ತಿದ್ದ. `ಮೂರ್ತಿ ಬರಲಿ ತಾಳು,’ ಎಂದು ಅವರು ತಮ್ಮ ಅಣ್ಣನಿಗೂ ಕಂಪ್ಲೇಂಟ್ ಮಾಡಲು ಹೇಳಿದರೆ ಅಮ್ಮ ರಾತ್ರಿ ಅವರು ಬರುವ ವೇಳೆಗೆ ನಮಗೆಲ್ಲಾ ಊಟಬಡಿಸಿ ಮಲಗಿಸಿಬಿಡುತ್ತಿದ್ದರು! ಎದ್ದಿದ್ದರೆ ನಾವೂ ಸಾಕ್ಷಿ ಹೇಳಬೇಕಲ್ಲ! ಮಲಗಿದ್ದ ಮಕ್ಕಳನ್ನು ಎಬ್ಬಿಸಿ ಹೊಡೆಯುತ್ತಿರಲಿಲ್ಲ ನಮ್ಮ ತಂದೆ!     

       ಹಬ್ಬಗಳು ಬಂತೆಂದರೆ ತಿನ್ನಲು ಸಿಗುತ್ತಿದ್ದ ವಿಶೇಷ ತಿಂಡಿಗಳ ಬಗ್ಗೆ ಆಸೆ ಇದ್ದರೂ, `ಪೂಜೆಯಾಗುವವರೆಗೂ ಮಕ್ಕಳು ಏನೂ ತಿನ್ನುವುದು ಬೇಡ,’ ಎನ್ನುವ ನಿಯಮವಿರುತ್ತಿದ್ದುದರಿಂದ ಸಂಕಟವೇ ಹೆಚ್ಚಾಗುತ್ತಿತ್ತು. ಅದೂ ವಿಶೇಷವಾಗಿ ಗಣಪತಿ ಹಬ್ಬದಲ್ಲಿ ಬಹಳ ಕಟ್ಟುನಿಟ್ಟು! ನನ್ನ ತಮ್ಮನಿಗೋ ಹಸಿವು ತಡೆಯಲೇ ಆಗುತ್ತಿರಲಿಲ್ಲ. ಅಮ್ಮನಿಗೂ ಮಕ್ಕಳು ಉಪವಾಸವಿರುವುದು ಇಷ್ಟವಾಗುತ್ತಿರಲಿಲ್ಲ. ಆದರೆ ಹಿರಿಯರ ಕಣ್ಣುತಪ್ಪಿಸಿ ಏನನ್ನೂ ಕೊಡಲೂ ಆಗುತ್ತಿರಲಿಲ್ಲ. ತಮ್ಮ ಪ್ರೀತಿಯ ಕಿರಿಮಗನ ಪಾಡು ನೋಡಲಾಗದೇ ಅವನಿಗೆ ಒಂದು ಚೊಂಬಿನಲ್ಲಿ ಹಿಂದಿನ ದಿನ ಗೌರಿಹಬ್ಬದ ನಾಲ್ಕು ಒಬ್ಬಟ್ಟುಗಳನ್ನು ಹಾಕಿ ಕೊಡುತ್ತಿದ್ದರು. ಅವನು ಚೊಂಬು ಹಿಡಿದುಕೊಂಡು(!) ನಮ್ಮ ಮನೆ ಹಿಂದಿನ ಬಾವಿಕಟ್ಟೆ ಮೂಲೇಲಿ ಕುಳಿತು ತಿಂದು ಬರುತ್ತಿದ್ದ! `ಅಯ್ಯೋ ಸೂರ್ಯ ನೆತ್ತೀಗೆ ಸಿಕ್ಕಿಹಾಕಿಕೊಂಡರೂ ಇನ್ನೂ ಪೂಜೆ ಆಗಿಲ್ಲ. ಬೇಗ ಮಾಡೋ ಮೂರ್ತಿ, ಪಾಪ ನಮ್ಮ ಚಿಕ್ಕದೂ ಉಪವಾಸ ಇದೆ,’ ಎಂದು ಹಲುಬುತ್ತಿದ್ದರು ನಮ್ಮತ್ತೆ!  

               ಸದಾ ಆಟ, ಓಡಾಟಗಳಲ್ಲೇ ತೊಡಗಿರುತ್ತಿದ್ದ ನಮಗೆ ಅಗಾಧ ಹಸಿವು! ಇನ್ನೂ ಅಡುಗೆ ಪಾತ್ರೆ ಒಲೆಯಿಂದ ಇಳಿಯುವ ಮೊದಲೇ ತಟ್ಟೆ ಇಟ್ಟುಕೊಂಡು ಊಟಕ್ಕೆ ಕುಳಿತುಬಿಡುತ್ತಿದ್ದೆವು. ಪಲ್ಯ, ಗೊಜ್ಜುಗಳ ರುಚಿಗೆ ಇನ್ನಷ್ಟು, ಮತ್ತಷ್ಟು ಎಂದು ದುಂಬಾಲುಬೀಳುತ್ತಿದ್ದೆವು. ಅಮ್ಮ, `ಹಿಂದೆ-ಮುಂದೆ ನೋಡಿಕೊಂಡು ಊಟಮಾಡಿ ಎನ್ನುತ್ತಿದ್ದರು. ಅಮ್ಮ ಈ ಮಾತನ್ನು ನಂತರದವರಿಗೂ ಉಳಿಸಿ ಎಂಬ ಅರ್ಥದಲ್ಲಿ ಹೇಳಿದ್ದರೂ ನಾವು ಹಿಂದೆ ಮುಂದೆ ನೋಡುತ್ತಾ ಗದ್ದಲವೆಬ್ಬಿಸುತ್ತಿದ್ದೆವು! ಹುಳಿ ಮಾಡಿದರಂತೂ , `ಹೋಳು, ಹೋಳು’ ಎಂದು ಕಿರುಚಲಾರಂಭಿಸುತ್ತಿದ್ದೆವು ಅಮ್ಮ, `ಇನ್ನು ಹುಳಿಯೊಳಗೆ ಮುಳುಗಿ ತೆಗೆದು ಹಾಕಬೇಕು ಅಷ್ಟೆ,’ ಎನ್ನುತ್ತಿದ್ದರು. ಸಾರಿನ ಕಲ್ಲುಸೋರೆಯೊಳಗೆ ಘನ ಗಾತ್ರದ ಅಮ್ಮ ಮುಳುಗುವ ಕಲ್ಪನೆಯಲ್ಲಿ ನಮಗೆ ನಕ್ಕನಕ್ಕು ಸಾಕಾಗುತ್ತಿತ್ತು!  

                         ಅನುದಿನವೂ ನವನವೀನವಾಗಿರುತ್ತಿದ್ದ ಈ ಬಾಲ್ಯದಾಟಗಳಿಗೆ ಕೊನೆ ಎಂಬುದೇ ಇರುತ್ತಿರಲಿಲ್ಲ!


(ಇದು 'ಕನ್ನಡ ಕಥಾಗುಚ್ಚದಲ್ಲಿ ಪ್ರಕಟವಾಗಿದೆ.)

                                 ~ಪ್ರಭಾಮಣಿ ನಾಗರಾಜ

Friday, July 19, 2024

ಸುಧಾ ಯುಗಾದಿ ವಿಶೇಷಾಂಕ 2024 ಪ್ರಬಂಧ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನಿತ ಲಲಿತ ಪ್ರಬಂಧ 'ಎಲ್ಲದಕೂ ಕಾರಣ ನೀನೇ ಪ್ರಿಯ ದರ್ಪಣ'

 `ಸುಧಾ ಯುಗಾದಿ ವಿಶೇಷಾಂಕ 2024 ಪ್ರಬಂಧ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನಿತ ಲಲಿತ ಪ್ರಬಂಧ 'ಎಲ್ಲದಕೂ ಕಾರಣ ನೀನೇ ಪ್ರಿಯ ದರ್ಪಣ'  ನಿಮ್ಮ ಪ್ರೀತಿಯ ಓದಿಗೆ❤️🌼

    


ಎಲ್ಲದಕೂ ಕಾರಣ ನೀನೇ ಪ್ರಿಯ ದರ್ಪಣ


        ಅಪ್ಪಟ ಕನ್ನಡಮ್ಮನ ಕಂದನಾದ ಮತ್ತು ಕನ್ನಡ ಮಾಧ್ಯಮದಲ್ಲಿಯೇ ಪ್ರೌಢಶಾಲಾ ವ್ಯಾಸಂಗವನ್ನೂ ಮಾಡಿದ ನನಗೆ ವಿಜ್ಞಾನವನ್ನು ಓದುವಾಗ ʼದರ್ಪಣʼ ಎನ್ನುವ ಒಂದು ಅಧ್ಯಾಯವೇ ಇತ್ತು. ಬಹಳ ಉತ್ಸಾಹಿಯಾಗಿದ್ದ ನಮ್ಮ ವಿಜ್ಞಾನದ ಟೀಚರ್‌ ಸಣ್ಣಸಣ್ಣ ಗಾಜಿನ ಚೂರುಗಳನ್ನು ತಂದು ʼಇದು ಉಬ್ಬಿದೆ ನೋಡಿ, ಇದನ್ನು ಪೀನ ದರ್ಪಣ ಅಂತಾರೆ, ಇದು ತಗ್ಗಾಗಿರೊದರಿಂದ ನಿಮ್ನ ದರ್ಪಣ ಅಂತಾರೆʼ ಎಂದು ನಮ್ಮ ಕೈಗೆ ಕೊಟ್ಟಾಗ ʼಅಯ್ಯೋ ಇದು ಕನ್ನಡಿ ಚೂರುʼ ಎನ್ನುತ್ತಾ ಅದರಲ್ಲಿ ನಮ್ಮ ಮುಖ ನೋಡಿಕೊಂಡಾಗ ಮೂಗು ತುಟಿ ಎಲ್ಲಾ ದಪ್ಪದಪ್ಪಕ್ಕೆ ವಕ್ರವಾಗಿ ಕಂಡು ನಾವೆಲ್ಲಾ ಬಿದ್ದುಬಿದ್ದು ನಕ್ಕಿದ್ದೂ ನಕ್ಕಿದ್ದೇ! ಸಮತಲ ದರ್ಪಣ ಎನ್ನುವ ಪಾಠದ್ದೂ ನೆನಪಾಗಿ ದರ್ಪಣ ಅಂದ್ರೆ ಕನ್ನಡಿ ಎನ್ನುವುದು ಖಚಿತವಾಯ್ತು. ಆದರೆ ಮುಂದೆ ʼಮಸೂರʼ ಅನ್ನೋ ಪಾಠದಲ್ಲೂ ಪೀನ-ನಿಮ್ನ ಅಂತೆಲ್ಲಾ ಬಂದು ನಮ್ಮ ತಲೆ ಕೆಡಿಸಿ ಗೊಬ್ಬರಮಾಡಿತ್ತು.

ನಮ್ಮ ಮನೆಯಲ್ಲಿದ್ದ ಏಕೈಕ ಅಂಗೈ ಅಗಲದ ಕನ್ನಡಿಯನ್ನು ಅಮ್ಮ ಪೆಠಾರಿ ಮೇಲೆ ಕುಂಕುಮದ ಡಬ್ಬಿ ಪಕ್ಕದಲ್ಲಿ ಮರದ ಬಾಚಣಿಗೆ ಜೊತೆ ಇಟ್ಟಿರುತ್ತಿದ್ದರು. ಅದನ್ನು ಬೆಳಿಗ್ಗೆ ಎದ್ದು ಮುಖ ತೊಳೆದಾಕ್ಷಣವೇ ಹಣೆಗೆ ಕುಂಕುಮ ಇಟ್ಟುಕೊಳ್ಳಕ್ಕೆ, ಸ್ನಾನ ಆದ ನಂತರ ತಲೆಬಾಚಿಕೊಳ್ಳುವಾಗ ಬೈತಲೆ ತೆಗೆದುಕೊಳ್ಳಕ್ಕೆ ಮಾತ್ರ ಉಪಯೋಗಿಸುತ್ತಿದ್ದರು. ನಾವಂತೂ ಚಿಕ್ಕಂದಿನಲ್ಲಿ ಕನ್ನಡೀನೇ ನೋಡಿಕೊಳ್ತಿರಲಿಲ್ಲ. ನಮಗೆ ತಲೆಬಾಚಿ, ಹಣೆಗೆ ಸಾದು ಇಡೋ ಕೆಲಸಾನೆಲ್ಲಾ ನಮ್ಮ ಸೋದರತ್ತೇನೇ ಮಾಡ್ತಿದ್ದರಲ್ಲ! ಆದರೂ ಸ್ವಲ್ಪಸ್ವಲ್ಪ ದೊಡ್ಡವರಾದಂತೆ ಬಹಳ ಕುತೂಹಲದಿಂದ ಆಗಾಗ ಕದ್ದುಮುಚ್ಚಿ ಕನ್ನಡೀಲಿ ಹಲ್ಲು ಕಿರಿದು, ಮುಖ ಸೊಟ್ಟಗೆ ಮಾಡಿಕೊಂಡು ನೋಡಿಕೊಳ್ಳುತ್ತಾ ಕಿಸಕಿಸನೆ ನಗುತ್ತಿದ್ದೆವು. ತಲೆ ಬಾಚುವಾಗ ಕನ್ನಡಿ ಇರಲೇಬೇಕು ಎಂದು ಮೊದಲು ಹಠ ಮಾಡಿದ ಕೀರ್ತಿ ನಮ್ಮಕ್ಕನಿಗೇ ಸಲ್ಲುತ್ತದೆ. ಕನ್ನಡಿ ನೋಡಿಕೊಳ್ಳಲು ಪ್ರಾರಂಭಿಸಿದ ನಂತರ ಅವಳು ಹೇಗೆ ಅಲಂಕರಿಸಿದರೂ ಒಪ್ಪದೇ ಬೈತಲೆ ಸೊಟ್ಟಾಗಿದೆ, ಮುಂದಲೇಲೆ ಗುಬ್ಬಳು ಬಂದಿದೆ ಎಂದು ಸತಾಯಿಸಿ ನಮ್ಮತ್ತೆ ಕನ್ನಡೀನ ವಾಚಾಮಗೋಚರ ಬಯ್ಯುವಂತೆ ಮಾಡುತ್ತಿದ್ದಳು.

ಹಳ್ಳಿಯಲ್ಲಿದ್ದ ನಮ್ಮ ಮನೆಯ ಹಿತ್ತಲಿನಲ್ಲಿ ನಾಲ್ಕೈದು ರೀತಿಯ ಮಲ್ಲಿಗೆಯ ಬಳ್ಳಿಗಳಿದ್ದು ಅವುಗಳನ್ನು ಕೊಂಡಮಾವಿನ ಗಿಡಗಳಿಗೆ ಹಬ್ಬಿಸಿದ್ದರು. ಇವುಗಳ ನಡುವೆ ದುಂಡುಮಲ್ಲಿಗೆಯ ಪಕ್ಕ ಒಂದು ದೊಡ್ಡ ನೀರಿನ ತೊಟ್ಟಿ ಇತ್ತು. ಬಾವಿಯಿಂದ ಸೇದಿದ ನೀರನ್ನು ಅದಕ್ಕೆ ತುಂಬಿ ಗೃಹಕೃತ್ಯಗಳಿಗೆ ಬಳಸುತ್ತಿದ್ದರು. ನನಗೆ ಆ ತೊಟ್ಟಿಯ ಕಟ್ಟೆಯ ಮೇಲೆ ಕುಳಿತು ನೀರಿನಲ್ಲಿ ಕಾಣುವ ಪ್ರತಿಬಿಂಬವನ್ನು ನೋಡಿಕೊಳ್ಳುವುದೆಂದರೆ ಎಲ್ಲಿಲ್ಲದ ಸಂಭ್ರಮ! ವಿಶಾಲವಾದ ನೀಲಾಗಸದಲ್ಲಿಯೇ ಹಬ್ಬಿದಂತಿದ್ದ  ಹಸಿರ ಹಂದರದ ನಡುವಿನ ‘ಆ ಮುಖ’ ನನ್ನನ್ನು ಪರವಶಳನ್ನಾಗಿಸಿಬಿಡುತ್ತಿತ್ತು. ನಮ್ಮ ವಿಶ್ವಕವಿ ವಾಣಿಯಾದ ʼತನ್ನ ಕಾವ್ಯಕ್ಕೆ ತಾ ಮಹಾಕವಿ ಮಣಿದಂತೆ!ʼ ‘ಸ್ವಮೋಹ’ ಎನ್ನುವುದು ಇದಕ್ಕೇ ಇರಬಹುದು. ನಂತರದ ದಿನಗಳಲ್ಲಿ ನಾನು ಓದಿದ ಪೋವ್ಲೋ ಕೋಯ್ಲೋ ಅವರ ‘ದಿ ಆಲ್ ಕೆಮಿಸ್ಟ್’ನಲ್ಲಿಯ ನಾರ್ಸಿಸ್ಸಸ್ ಎಂಬ ಒಬ್ಬ ಯುವಕ ತನ್ನ ಸೌಂದರ್ಯವನ್ನು ಆಸ್ವಾದಿಸಲು ಪ್ರತಿದಿನ ಒಂದು ಕೊಳದ ದಂಡೆಯಲ್ಲಿ ಮಂಡಿಯೂರಿ ಕುಳಿತು ನೀರಿನಲ್ಲಿ ತನ್ನ ಪ್ರತಿಬಿಂಬವನ್ನು ತಾನೇ ನೋಡಿಕೊಳ್ಳುತ್ತಿದ್ದ ಕಥೆ ನನಗೆ ನಮ್ಮ ಹಳ್ಳಿಯ ನೀರಿನ ತೊಟ್ಟಿಯನ್ನೇ ನೆನಪಿಸುತ್ತಿತ್ತು. ಪಾಪ, ಒಂದು ದಿನ ಹೀಗೇ ತನ್ಮಯನಾಗಿ ತನ್ನನ್ನೇ ತಾನು ನೋಡಿಕೊಳ್ಳುತ್ತಿರುವಾಗ ಅವನು ಕೊಳದೊಳಗೇ ಮುಳುಗಿಹೋಗುತ್ತಾನೆ. ಅವನು ಮುಳುಗಿದ ಜಾಗದಲ್ಲೇ ಒಂದು ಹೂ ಅರಳುತ್ತದೆ. ಅದನ್ನು ‘ನಾರ್ಸಿಸ್ಸಸ್’ಎಂದೇ ಕರೆಯುತ್ತಾರೆ ಎನ್ನುವುದು ಮೂಲಕಥೆ. ಈ  ಕಥೆಗೆ ಒಂದು ಹೊಸ ತಿರುವನ್ನು ನೀಡಿ ಮುಂದುವರಿಸುತ್ತಾ... ನಾರ್ಸಿಸ್ಸಸ್ ನಿಧನದ ನಂತರ ವನದೇವತೆಗಳೆಲ್ಲಾ ಕೊಳದ ಬಳಿ ಬಂದು ಈ ಮೊದಲು ಸ್ವಚ್ಛವಾಗಿದ್ದ ಕೊಳದ ನೀರು ಉಪ್ಪಾಗಿರುವುದನ್ನು ಗಮನಿಸಿ, ‘ಏಕೆ ಅಳುತ್ತಿರುವೆ?’ ಎಂದು ಕೊಳವನ್ನು ಕೇಳುತ್ತಾರೆ.

‘ನಾನು ನಾರ್ಸಿಸ್ಸಸ್‍ಗಾಗಿ ಅಳುತ್ತಿರುವೆ.’ಎಂದು ಕೊಳ ಉತ್ತರಿಸುತ್ತದೆ.

‘ನಾರ್ಸಿಸ್ಸಸ್‍ಗಾಗಿ ನೀನು ದುಃಖಿಸುವುದರಲ್ಲಿ ಅಚ್ಚರಿಯೇ ಇಲ್ಲ. ಅವನ ಸೌಂದರ್ಯವನ್ನು ಅತ್ಯಂತ ಸಮೀಪದಿಂದ ನೋಡುತ್ತಿದ್ದುದೇ ನೀನು.’ ಎಂದು ವನದೇವತೆಗಳೆಂದಾಗ, ‘ಆದರೆ... ಅವನು ಸುಂದರವಾಗಿದ್ದನೆ?’ ಎಂದು ಕೇಳಿದ ಕೊಳ ‘ನಾನು ಅಳುತ್ತಿರುವುದೇಕೆಂದರೆ ನಾರ್ಸಿಸ್ಸಸ್‍ನ ಕಣ್ಣುಗಳ ಆಳದಲ್ಲಿ ನಾನು ನನ್ನ ಸೌಂದರ್ಯವನ್ನೇ ನೋಡುತ್ತಿದ್ದೆ’ ಎನ್ನುತ್ತೆ. ಇದರ ಅಂತರಾರ್ಥದ ಗಾಂಭೀರ್ಯದ ಬಗ್ಗೆ ಗಹನವಾಗಿ ಚಿಂತಿಸುವಷ್ಟು ಪ್ರೌಢಿಮೆಯನ್ನು ಪಡೆದು ಬಂದಿಲ್ಲವಾದ್ದರಿಂದ ಅವರವರಿಗೆ ಅವರವರದ್ದೇ ಚಿಂತೆ ಎಂದೇ ಸ್ಥೂಲವಾಗಿ ಅಭಿಪ್ರಾಯಿಸಬಹುದೇನೋ.  ʼನಿನ್ನಾ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪʼ ಎನ್ನುವ ಹಾಡು ನನ್ನ ಜಮಾನಾದ ಆಸುಪಾಸಿನವರಿಗೆ  ನೆನಪಾಗುತ್ತದೆ ಅಲ್ಲವೆ?                   

      ಪ್ರಾಚೀನ ಕಾಲದಲ್ಲಿ ಗಾಜನ್ನು ಇನ್ನೂ ಕಂಡುಹಿಡಿಯದೆ ಗಾಜೆಂಬ ಅತ್ಯಚ್ಛರಿ ಅಜ್ಞಾತಸ್ಥಿತಿಯಲ್ಲಿದ್ದಾಗ ವಿವಿಧ ವಿನ್ಯಾಸಗಳ ಹೆಚ್ಚು ಪಾಲಿಶ್ ಮಾಡಿದ ಲೋಹದ ಫಲಕಗಳನ್ನೇ ಕನ್ನಡಿಗಳಾಗಿ ಬಳಸುತ್ತಿದ್ದರಂತೆ. ತಿರುವಾಂಕೂರ್‌ನ ಆರಾಮುಲ ಎಂಬ ಸ್ಥಳದಲ್ಲಿ ಅಂತಹ ಕನ್ನಡಿಗಳನ್ನು ಇನ್ನೂ ತಯಾರಿಸಲಾಗುತ್ತಿದ್ದು ಆ ಭಾಗದ  ಕೆಲವು ದೇವಾಲಯದ ಸೇವೆಯಲ್ಲಿ ಗಾಜಿನ ಕನ್ನಡಿಗಳನ್ನು ಬಳಸಲು ಅನುಮತಿ ಇಲ್ಲದಿರುವುದರಿಂದ ಇಂಥಾ ಸ್ಪೆಕ್ಯುಲಮ್ ಕನ್ನಡಿಗಳನ್ನೇ ಬಳಸುತ್ತಾರಂತೆ.

        ನಾವೆಲ್ಲಾ ಸ್ವಲ್ಪ ದೊಡ್ಡವರಾದಂತೆ ನಮ್ಮೆಲ್ಲರ ತೀವ್ರ ಬೇಡಿಕೆಯಂತೆ ಒಂದು ಚಚ್ಚೌಕವಾದ ಕನ್ನಡಿ ನಮ್ಮ ಹಳ್ಳಿಯ ಮನೆಯ ಗೋಡೆಯನ್ನು ಅಲಂಕರಿಸಿತು. ನಾವು ಆ ಕಡೆ ಈ ಕಡೆ ಓಡಾಡುವಾಗಲೆಲ್ಲಾ ರಾಷ್ಟ್ರೀಯ ಹಬ್ಬಗಳಲ್ಲಿ ಪೆರೇಡ್‌ ಮಾಡುವಾಗ ಮುಖ್ಯ ಅತಿಥಿಗಳಿಗೆ ಸೆಲ್ಯೂಟ್‌ ಮಾಡಿ ಹೋಗುವಂತೆ ಅನವಶ್ಯಕವಾಗಿ ಕನ್ನಡಿಯ ಮುಂದೆ ನಿಂತು ಮೆಟ್ಟಿಂಗಾಲಿಟ್ಟು ನಮ್ಮ ವದನಾರವಿಂದದ ಸೌಂದರ್ಯಾಸ್ವಾದನೆ ಮಾಡಿಕೊಂಡು ಮುಂದುವರಿಯುತ್ತಿದ್ದೆವು. ಕೆಲವೊಮ್ಮೆ ಈ ವಿಷಯದಲ್ಲಿ ತಿಕ್ಕಾಟ ನೂಕಾಟಗಳ ಜಗಳವೂ ಆಗುತ್ತಿತ್ತು. ಇದನ್ನು ಗಮನಿಸುತ್ತಿದ್ದ ನಮ್ಮ ಸೋದರತ್ತೆ ʼಎಲ್ಲಾರೂ ಮುಖಕ್ಕೆ ಒಂದೊಂದು ಕನ್ನಡಿ ಕಟ್ಟಿಕೊಂಡುಬಿಡಿ ಸರಿಹೋಗುತ್ತೆʼ ಎಂದು ವಾಗ್ಬಾಣ ಪ್ರಯೋಗಿಸುತ್ತಿದ್ದರು. ಈ ನಡುವೆ ನಮ್ಮಣ್ಣ ಗೋಡೆಗೆ ನೇತುಹಾಕಿದ್ದ ಕನ್ನಡಿಯನ್ನೇ ಎತ್ತಿಕೊಂಡು ಓಡಿಬಿಡುತ್ತಿದ್ದ. ನಾವೂ ಅವನನ್ನು ಹಿಂಬಾಲಿಸಿ ʼನಂಗೂ ತೋರಿಸೋʼ ಎಂದು ಬಿದ್ದಂಬೀಳ ಓಡುತ್ತಿದ್ದೆವು. ನಮ್ಮ ಹಿಂದೆಯೇ ನಮ್ಮತ್ತೆ ʼಪಾಪಿ ಮುಂಡೇವ, ಮನೇಲಿ ಕನ್ನಡಿ ಒಡೀಬಾರದು, ಅನಿಷ್ಟʼ ಎಂದು ಕೂಗುತ್ತಾ ಓಡಿಬರುತ್ತಿದ್ದರು. ಅವತ್ತಂತೂ ಅಣ್ಣನಿಗೆ ನಮ್ಮ ತಂದೆಯ ಕೈಯಿಂದ ಗೂಸು ಗ್ಯಾರಂಟಿ! ಎಲ್ಲಾ ಏಟು ತಪ್ಪಿಸಿಕೊಂಡು ಓಡಿದರೆ ಆ ಒದೆ ಬೀಳುತ್ತಿದ್ದುದು ಓಡಿನಲ್ಲಿ ಸದಾ ಹಿಂದುಳಿಯುತ್ತಿದ್ದ ನನಗೇ. ಸೂರುಕಟ್ಟಿನಿಂದ ಹೊರಗೆಳೆದಿದ್ದ ನಾಗರಬೆತ್ತಕ್ಕೆ ಹೀಗೆ ಶಾಂತಿ ಮಾಡಿ ಪುನಃ ಸ್ವಸ್ಥಾನಕ್ಕೆ ಸೇರಿಸುತ್ತಿದ್ದರು ನಮ್ಮಣ್ಣ.

        ನನಗಂತೂ ನನ್ನದೇ ಆದ ಸ್ವಂತಮನೆಗೆ ಹೋದಾಗ ಮನೆಯ ಎಲ್ಲಾ ಕಡೆಗೂ ಒಂದೊಂದು ಕನ್ನಡಿ ಹಾಕಿಕೊಂಡುಬಿಡಬೇಕು ಎಂಬ ಮಹದಾಸೆಯಿತ್ತು. ʼಮೈಸೂರಿನ ಅರಮನೆಯಲ್ಲಿ ದೊಡ್ಡದೊಡ್ಡ ಕನ್ನಡಿಗಳನ್ನು ಹಾಕಿದಾರಂತೆ. ಕನ್ನಡಿ ಯಾವುದು, ಬಾಗಿಲು ಯಾವುದು ಎಂದು ಗೊತ್ತಾಗದೇ ಬಾಗಿಲು ಅಂತ ಹೋಗಿ ಕನ್ನಡೀಗೆ ಡಿಕ್ಕಿ ಹೊಡೆದುಕೊಳ್ತಾರಂತೆ,ʼ ಎಂದು ಎಲ್ಲರೂ ಮಾತನಾಡಿಕೊಳ್ಳುವಾಗ ಯಾವಾಗ ಹೋಗಿ ಮೈಸೂರಿನ ಅರಮನೆ  ನೋಡ್ತೀನೋ ಎನ್ನುವ ತಹತಹ ಉಂಟಾಗುತ್ತಿತ್ತು.  

ʼಕನ್ನಡಿಯೊಳಗಿನ ಗಂಟು’ ಎಂಬ ನುಡಿಗಟ್ಟನ್ನು ಅಜ್ಜಿ  ಸಮಯಾನುಸಾರ ಬಳಸಿದಾಗ ಚಿಕ್ಕವಳಾಗಿದ್ದ ನಾನು ಬಹಳ ಗೊಂದಲಗೊಳ್ಳುತ್ತಿದ್ದೆ. ಇದು ನನ್ನ ಎಳೆಮನದಲ್ಲಿ `ಆ ದುಡ್ಡಿನ ಗಂಟನ್ನು ಹೊರತೆಗೆಯುವುದು ಹೇಗೆ?’ ಎನ್ನುವ ಪ್ರಶ್ನೆಯನ್ನು ಉಂಟುಮಾಡಿತ್ತು. ನಂತರದ ದಿನಗಳಲ್ಲಿ ವೈವಿಧ್ಯಮಯ ಬದುಕಿನ ಗಂಟುಗಳು ಉಂಟುಮಾಡಿದ ಎಲ್ಲಾ ಗೋಜಲುಗಳಿಂದ `ಈ ಗಂಟನ್ನು ಪುನಃ ಕನ್ನಡಿಯೊಳಗೇ ಸೇರಿಸುವುದು ಹೇಗೆ?’ ಎಂದು ನನ್ನನ್ನೇ ಪ್ರಶ್ನಿಸಿಕೊಳ್ಳುವಂತಾಯಿತು! ಬಿಡಿಸಲಾಗದ, ಬಯಲಾಗದ, ಕರಗದ, ಕುಗ್ಗದ...ಯಾವುದೇ ಗಂಟುಗಳಿದ್ದರೂ ಅವು ಕನ್ನಡಿಯೊಳಗೇ ಪ್ರವೇಶಿಸಿ `ಕನ್ನಡಿಯೊಳಗಿನ ಗಂಟು’ಆಗೇ ಉಳಿದುಬಿಡಲಿ ಎಂದುಕೊಳ್ಳುವಂತಾಯಿತು.  

ಒಮ್ಮೆ ಪಟ್ಟಣದ ಜಾತ್ರೆಗೆ ಹೋಗಿದ್ದಾಗ ಇನ್ನೂ ಪ್ರವೇಶದ್ವಾರದಲ್ಲಿಯೇ ʼತಕ್ಷಣವೇ ಬನ್ನಿ ನೋಡಿ, ಎಲ್ಲರೂ ಬಿದ್ದುಬಿದ್ದು ನಗುವಂತೆ ಮಾಡುವ`ನಗಿಸುವ ಕನ್ನಡಿ’ಯಲ್ಲಿ ನಿಮ್ಮ ಹೊಸ ರೂಪ,ʼ ಎಂದು ಹೇಳುವಾಗಲೇ ಎಲ್ಲರೂ ಜೋರಾಗಿ ನಗುವ ಅಡ್ವರ್‌ಟೈಸ್ಮೆಂಟ್ ಕೇಳಿ ನಾವು ಅದನ್ನೇ ಮೊದಲು ನೋಡಬೇಕು ಎಂದು ಹಠ ಹಿಡಿದಾಗ ʼಬೇರೇದೆಲ್ಲಾ ನೋಡ್ಕೊಂಡು ಬರೋಣ ನಡೀರಿʼ ಎಂದು ನಮ್ಮನ್ನು ಅಕ್ಷರಶಃ ದಬ್ಬಿಕೊಂಡೇ ಹೊರಟಿದ್ದರು ಹಿರಿಯರು. ಅಯ್ಯೋ ಅದಕ್ಕೆ ಟಿಕೆಟ್‌ ಇರುತ್ತೆ. ದುಡ್ಡು ಯಾರು ಕೊಡೋರು ಅನ್ನೋದು ಅವರ ಚಿಂತೆ. ಎಲ್ಲಾ ಕಡೆ ನೋಡ್ಕೊಂಡು ಬಂದ ನಂತರ ಮರೆತಿರ್ತಾರೆ ಎನ್ನುವುದು ಅವರ ಎಣಿಕೆ. ಹಿಂತಿರುಗುವಾಗ ಬೇರೆ ದಾರಿಯಲ್ಲಿ ನಮ್ಮನ್ನು ಕರೆದುಕೊಂಡು ಬಂದರೂ ಆ `ನಗಿಸುವ ಕನ್ನಡಿ’ ನನ್ನ ತಲೆಯೊಳಗೇ ಥೈಥೈ ಕುಣಿಯುತ್ತಿದ್ದು ಹೊರಗೆ ಬರುವಾಗಲೂ  ನಾನು ನೋಡಲೇಬೇಕು ಎಂದು ಅಳುತ್ತಾ ಹಠಹಿಡಿದು ಕುಳಿತಾಗ ನಂಗೆ ಎರಡೇಟು ಬಾರಿಸಿ ಎಲ್ಲರನ್ನೂ ಕರೆದುಕೊಂಡುಹೋಗಿದ್ದರು. ಒಳಹೋದನಂತರ ಅಲ್ಲಿ ಜೋಡಿಸಿಟ್ಟಿದ್ದ ದೊಡ್ಡದೊಡ್ಡ ಉಬ್ಬು-ತಗ್ಗಿನ ಕನ್ನಡಿಗಳಲ್ಲಿ ನಮ್ಮನ್ನು ನೋಡಿಕೊಂಡು ಉರುಳಾಡಿಕೊಂಡು ನಗುವಾಗ ಏಟಿನ ಚುರುಚುರು ಮರೆತೇಹೋಯ್ತು. ಎತ್ತರಕ್ಕೆ ಇಟ್ಟಿದ್ದ ಎರಡು ಕನ್ನಡಿಗಳ ಮಧ್ಯೆ ಹೋದಾಗಲಂತೂ ಸಾಲುಸಾಲಾಗಿದ್ದ ಎಷ್ಟೊಂದು ಜನ ನಮ್ಮನ್ನೇ ನೋಡಿ ಬೆರಗಾಗಿಹೋದೆವು. ಒಲ್ಲದ ಮನಸ್ಸಿನಿಂದ ಈಚೆ ಬರುವಾಗ ಒಬ್ಬೊಬ್ಬರೂ ಹೇಗೆ ಕಾಣ್ತಿದ್ದೆವು ಎಂದು ನೆನೆಸಿಕೊಳ್ಳುತ್ತಿದ್ದ ಮಕ್ಕಳಾದ ನಮ್ಮ ಸಡಗರದ ನಗುವಿನ ನಡುವೆ ದೊಡ್ಡೋರು ʼದುಡ್ಡು ದಂಡʼ ಎಂದು ಮಾತನಾಡಿಕೊಳ್ಳುತ್ತಿದ್ದರು. 

ನಮ್ಮಕ್ಕನ ಮನೆಯ ಮುಂದೆ ಮಾವಿನಮರಗಳಿದ್ದವು. ವಸಂತಾಗಮನವಾಗಿ ಅವು ಕಾಯಿಬಿಡುವ ಕಾಲ ಬಂದಾಕ್ಷಣವೇ ಮಂಗಗಳ ಹಿಂಡಿನ ಆಗಮನವೂ ಆಗುತ್ತಿತ್ತು. ಅವುಗಳದ್ದಂತೂ ಬಹಳ ಹಾವಳಿಯಾಗಿತ್ತು. ಮಂಗವೊಂದು ಒಳಗೆ ಬಂದು ಟೇಬಲ್‌ ಮೇಲಿಟ್ಟಿದ್ದ ಕನ್ನಡಿಯನ್ನು ತೆಗೆದುಕೊಂಡು ಹೋಗಿ ಮರದ ರೆಂಬೆಯ ಮೇಲೆ ಕುಳಿತು ಹಲ್ಲುಕಿರಿಯುತ್ತಾ ತನ್ನನ್ನುತಾನು ನೋಡಿಕೊಂಡದ್ದೂ ನೋಡಿಕೊಂಡಿದ್ದೆ! ಆ ಖುಷಿಯನ್ನು ತಾವೂ ಅನುಭವಿಸಬೇಕೆನ್ನುವಂತೆ ಕನ್ನಡಿಗಾಗಿ ಎಲ್ಲಾ ಮಂಗಗಳೂ ನಡೆಸಿದ ಫೈಟಿಂಗ್‌ ಅಂತೂ ಮರೆಯಕ್ಕೇ ಸಾಧ್ಯವಿಲ್ಲ! ನಮ್ಮ ಮನೆಗೆ ಹೊಸ ಡ್ರೆಸ್ಸಿಂಗ್‌ ಟೇಬಲ್‌ ತಂದಾಗ ಜಿಮ್ಮಿ ಅದರ ಕನ್ನಡಿಯ ಮುಂದೆ ನಿಂತು ಬೊಗಳಿದ್ದೂ ಬೊಗಳಿದ್ದೆ. ಪ್ರತಿಸಾರಿಯೂ ನವನವೀನವಾಗಿ ಹಾಗೇ ಬೊಗಳುತ್ತಿತ್ತು. ಚಿಪ್ಪಿ ಹಾಗಲ್ಲ. ಅದರ ಮುಂದೆ ಕನ್ನಡಿ ಹಿಡಿದರೆ ಸಾಕು, ಕನ್ನಡಿಯ ಹಿಂಭಾಗಕ್ಕೆ ಹೋಗಿ ಅದರ ರೈವಲ್‌ ಬೆಕ್ಕನ್ನು ಹಿಡಿಯುವ ಪ್ರಯತ್ನ ಮಾಡುತ್ತಿತ್ತು! ನಮಗೆ ಅದೇ ಆಟ. 

ಪ್ರತಿದಿನ ಬೆಳಿಗ್ಗೆ ನಾವು ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಹೆಚ್ಚಾಗಿ ನೋಡುವುದೇ ಕನ್ನಡಿಯನ್ನು. ಇದು ನಮಗೆ ಎಷ್ಟು ಅಚ್ಚುಮೆಚ್ಚು ಎಂದರೆ ನಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೂ ನಾವು ಸೆಲ್ಫಿ ಕ್ಯಾಮೆರಾವನ್ನು ತೆರೆದು ಅದನ್ನು ಕನ್ನಡಿಯಾಗಿ ಬಳಸ್ತೀವಿ. ಕೆಲವು ಮೊಬೈಲ್‌ ಗಳಲ್ಲಿ ಪ್ರತ್ಯೇಕವಾಗಿ ಕನ್ನಡಿಯೂ ಇರುತ್ತದೆ. ಸಮಯ ಸಿಕ್ಕಾಗಲೆಲ್ಲಾ ವಿವಿಧ ಆಂಗಲ್ ಗಳಲ್ಲಿ ನಮ್ಮನ್ನು ನಾವೇ ನೋಡಿಕೊಳ್ಳುತ್ತಾ ಸೆಲ್ಫಿ ತೆಗೆದುಕೊಳ್ಳುವುದೆಂದರೆ ಸಂಭ್ರಮವೋ ಸಂಭ್ರಮ! ಹೇಗಿದ್ದರೂ ಹೇಗಾದರೂ ನಮ್ಮ ಮುಖವೇ ತಾನೇ. 

ಕನ್ನಡಿ ಎಂದರೆ ಮುಖ ನೋಡಿಕೊಳ್ಳಲು ಮಾತ್ರ ಎಂದುಕೊಳ್ಳುವಂತಿಲ್ಲ. ವಾಸ್ತುಶಾಸ್ತ್ರದಲ್ಲಿ ಕನ್ನಡಿಗೆ ಬಹಳಷ್ಟು ಮಹತ್ವವನ್ನು ನೀಡುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಕನ್ನಡಿಯು ನಕಾರಾತ್ಮಕ ಶಕ್ತಿಯನ್ನು ಹೀರಿಕೊಂಡು, ಸಕಾರಾತ್ಮಕ ಶಕ್ತಿಯನ್ನು ಬಿಡುಗಡೆಗೊಳಿಸಿ, ಸಂಪತ್ತನ್ನು ಆಕರ್ಷಿಸುತ್ತದೆ ಎಂಬ ನಂಬಿಕೆಯಿದೆ. ಸಾಮಾನ್ಯವಾಗಿ ವ್ಯಾಪಾರಸ್ಥರು ನಗದು ಪೆಟ್ಟಿಗೆಯ ಪಕ್ಕದಲ್ಲಿ ಇಟ್ಟಿರುವ ಕನ್ನಡಿ ಸಂಪತ್ತನ್ನು ಹೆಚ್ಚಿಸುವುದಲ್ಲದೇ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಂತೆ. ಒಡೆದ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದಂತೆ. ನಮ್ಮ ಸುಂದರ ಮೋರೆಯ ಮೇಲೆ ಸೀಳುಸೀಳು ಗೆರೆಗಳು ಬಂದರೆ ಯಾರಿಗೆ ತಾನೇ ಇಷ್ಟವಾಗುತ್ತದೆ ಹೇಳಿ. ಕನ್ನಡಿ ಯಾವ ಆಕಾರದಲ್ಲಿರಬೇಕು, ಅದನ್ನು ಮನೆಯ ಯಾವದಿಕ್ಕಿನಲ್ಲಿ ಹಾಕಬೇಕು,… ಇನ್ನೂ ಹೆಚ್ಚಿನ ಮಾಹಿತಿಗಾಗಿ ವಾಸ್ತುಶಾಸ್ತ್ರಜ್ಞರನ್ನು ಸಂಪರ್ಕಿಸಬಹುದು. ಅಹಾ ಕನ್ನಡಿಯ ಮಹಿಮೆಯೇ!

ದರ್ಪಣ ಎನ್ನುವ ಪದಕ್ಕೆ ಬಹಳವಾದ ಪ್ರಾಮುಖ್ಯತೆಯಿದೆ. ಅದರ ವ್ಯಾಪ್ತಿಯೂ ಅನೂಹ್ಯ. ಅಭಿನಯ ದರ್ಪಣ,ರ್ ಇತಿಹಾಸ ದರ್ಪಣ, ಪ್ರಪಂಚ ದರ್ಪಣ,  ವನಸಿರಿ ದರ್ಪಣ,  ನೃತ್ಯ ದರ್ಪಣ… ಸರ್ವಂ ದರ್ಪಣಮಯಂ ಜಗತ್. ʼಸಾಹಿತ್ಯ ದರ್ಪಣʼ ಅಥವಾ 'ರಚನೆಯ ಕನ್ನಡಿ' ಹದಿನಾಲ್ಕನೆಯ ಶತಮಾನದ ಆರಂಭದಲ್ಲಿ ವಿಶ್ವನಾಥರ ಕಾವ್ಯದ ಕುರಿತಾದ ಪ್ರಸಿದ್ಧ ಸಂಸ್ಕೃತ ಕೃತಿಯಾಗಿದೆ. ಕನ್ನಡದಲ್ಲಿಯೇ ರಚನೆಗೊಂಡಿರುವ ಸ್ವತಂತ್ರ ಕನ್ನಡ ವ್ಯಾಕರಣ ಗ್ರಂಥಗಳಲ್ಲಿ ಕೇಶಿರಾಜನ ಶಬ್ದಮಣಿದರ್ಪಣವು ಮೊಟ್ಟ ಮೊದಲನೆಯದು. ದರ್ಪಣದ ಬಗ್ಗೆ ಹೇಳುವಾಗ ನಮ್ಮ ಸುಪ್ರಸಿದ್ಧ ಬೇಲೂರಿನ ಚನ್ನಕೇಶವ ದೇವಾಲಯದಲ್ಲಿರುವ ದರ್ಪಣ ಸುಂದರಿಯನ್ನು ಸ್ಮರಿಸದಿರುವುದು ಸಾಧ್ಯವೆ? ನಿತ್ಯ ನಲಿಯುವ ಈ ಶಿಲಾಬಾಲಿಕೆಯರ ಬಗ್ಗೆ ದಾರ್ಶನಿಕ ಕವಿ ಡಿ.ವಿ.ಜಿ.ಯವರು ಅಂತಃಪುರಗೀತೆ ಎಂಬ ಕವನ ಸಂಕಲನವನ್ನೇ ರಚಿಸಿದ್ದಾರೆ. ʼಮುಗುದೆಯಾದೆಯಾ ಕನ್ನೆ ಮುಕುರದ ಚನ್ನೆ…ʼ ಆಂಗ್ಲಭಾಷೆಯಲ್ಲಿನ ಮಿರರ್ ನಮ್ಮ ಈ ʼಮುಕುರʼಕ್ಕೆ ಎಷ್ಟೊಂದು ಸಮೀಪದಲ್ಲಿದೆ ಅಲ್ಲವೆ? ಅಥವಾ ಮುಕುರದಿಂದಲೇ ಮಿರರ್‌ ಬಂದಿರಬಹುದೆ ಎನಿಸದಿರುವುದಿಲ್ಲ.  

ಕನ್ನಡಿಯ ಖಯಾಲಿಯ ಕುರಿತು ಹೇಳುವುದಾದರೆ ಹಂಗೇರಿಯ ಮದ್ಯದ ದೊರೆಯ ಹೆಂಡತಿಯೊಬ್ಬಳಿಗೆ ತರಹೇವಾರಿ ಕನ್ನಡಿಗಳಲ್ಲಿ ತನ್ನ ಸೌಂದರ್ಯವನ್ನು ನೋಡಿಕೊಂಡು ಆನಂದಿಸಬೇಕು ಎಂಬ ವಿಕ್ಷಿಪ್ತ ಆಸೆ ಇದ್ದುದರಿಂದ ಜಗತ್ತಿನ ನಾನಾ ಕಡೆಗಳಿಂದ ಆಕೆ ಸುಮಾರು 2750 ದುಬಾರಿ ಬೆಲೆಯ ಕನ್ನಡಿಗಳನ್ನು ತರಿಸಿಟ್ಟುಕೊಂಡಿದ್ದಳಂತೆ! 

ನಮ್ಮನ್ನು ನಾವು ನೋಡಿಕೊಳ್ಳಲು ಅಂದಗೊಳಿಸಿಕೊಳ್ಳಲು ಸಂಪೂರ್ಣವಾಗಿ ಅವಲಂಭಿಸಿರುವ ಈ ಪರಮಾಪ್ತ ಕನ್ನಡಿ ವಸ್ತುವೇ ಅದರೂ ಆತ್ಮೀಯ ಗೆಳೆಯನ ಸ್ಥಾನವನ್ನೇ ಕೊಟ್ಟಿರುತ್ತೇವೆ. ಕಿಶೋರಾವಸ್ಥೆಯಲ್ಲಿ ಕುತೂಹಲದಿಂದ ವೀಕ್ಷಿಸುವ ಈ ಸಾಧನವನ್ನು ಹದಿವಯಕ್ಕೆ ಕಾಲಿಟ್ಟ ಕ್ಷಣದಿಂದಲೇ ಹದಮೀರಿ ಆರಾಧಿಸಲಾರಂಭಿಸುತ್ತೇವೆ. ನಮ್ಮನ್ನೇ ನಾವು ತಿದ್ದಿತೀಡಿ ಅಂದಗೊಳಿಸುವ ಪ್ರಕ್ರಿಯೆಯಲ್ಲಿ ಪದೇಪದೇ ಕನ್ನಡಿಯ ಎದುರು ನಿಲ್ಲುವುದು ವಯೋಸಹಜ ಗುಣವೆನಿಸಿಬಿಟ್ಟಿದೆ. ಮುಂದೆ ಸಾಗಿದಂತೆ ನಮ್ಮನ್ನು ನಾವು ಬದುಕಿನ ಯಾಂತ್ರಿಕತೆಗೆ ಒಡ್ಡಿಕೊಳ್ಳುತ್ತಾ, ಒಗ್ಗಿಕೊಳ್ಳುತ್ತಾ ಕನ್ನಡಿಯಲ್ಲಿ ನೋಡಿಕೊಳ್ಳುವುದನ್ನೂ ಒಂದು ಯಾಂತ್ರಿಕ ಕ್ರಿಯೆಯನ್ನಾಗೇ ಮಾಡಿಕೊಂಡುಬಿಡುತ್ತೇವೆ. ಯಾಂತ್ರಿಕತೆಯಲ್ಲೂ ತನ್ನತ್ತ ಸೆಳೆವ ಮಾಂತ್ರಿಕತೆಯನ್ನು ಹೊಂದಿರುವುದು ಕನ್ನಡಿಯೊಂದೇಯೇನೋ! ಕನ್ನಡಿಯೇ ಇಲ್ಲದ ಬದುಕಿನ ಕಲ್ಪನೆಯೇ ಅಸಾಧ್ಯವೇನೋ ಎನ್ನುವಷ್ಟರ ಮಟ್ಟಿಗೆ ಈ ಕನ್ನಡಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. 

ಕನ್ನಡಿ ಇನ್ನೂ ಜನಸಾಮಾನ್ಯರ ಕೈಗೆಟಕುವಂತಾಗುವ ಮೊದಲಿನ ಅಜ್ಜಿ ಹೇಳುತ್ತಿದ್ದ ಈ ಕಥೆ ನನಗೆ ತುಂಬಾ ಇಷ್ಟವಾಗಿತ್ತು. ಒಬ್ಬಾತನಿಗೆ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಒಂದು ಕನ್ನಡಿ ಸಿಗುತ್ತೆ. ಅದನ್ನು ನೋಡಿದವನಿಗೆ 'ಓಹೋ ನಮ್ಮಪ್ಪನ ಪೋಟ' ಅಂತ ಬಹಳ ಖುಷಿಯಾಗಿ ಮನೆಗೆ ತಂದಿಟ್ಟುಕೊಂಡು ಆಗಾಗ ನೋಡುತ್ತಾ ಸಂತೋಷಪಡ್ತಿರ್ತಾನೆ. ಇದನ್ನು ಗಮನಿಸಿದ ಅವನ ಹೆಂಡತಿ ಏನದು ಅಂತ ನೋಡಿದವಳು ಕೆಂಡಾಮಂಡಲವಾಗಿ 'ಯಾರಿವಳು ನನ್ನ ಸವತಿ' ಅಂತ ಗಂಡನ್ನ ತರಾಟೆಗೆ ತಗೊಳ್ತಾಳೆ. ಆತ ನಮ್ಮಪ್ಪ ಅಂತ ಎಷ್ಟು ಹೇಳಿದ್ರೂ ಒಪ್ಪಲ್ಲ. ಅಚಾನಕ್ಕಾಗಿ ಇಬ್ಬರೂ ಒಟ್ಟಾಗಿ ನೋಡಿದಾಗ ಅದು ತಾವಿಬ್ಬರೇ ಎಂದು ಗೊತ್ತಾಗಿ ದಿನವೂ ನೋಡಿಕೊಳ್ಳುತ್ತಾ ಖುಷಿಯಾಗಿರ್ತಾರೆ!

        ಕನ್ನಡಿಯ ಬಗ್ಗೆ ಕಥೆಗಳಿಗೇನೂ ಕಮ್ಮಿಯಿಲ್ಲ. ಆ ಕಾಲ ಈ ಕಾಲ ಸರ್ವಕಾಲದಲ್ಲೂ ಮನುಕುಲದಲ್ಲಿ ಹೊಸಹೊಸ ಪೀಳಿಗೆಗಳು ಹೊರಬಂದು ಕನ್ನಡಿಯಲ್ಲಿ ತಮ್ಮನ್ನು ತಾವೇ ಕಂಡು ಹಿರಿಹಿರಿ ಹಿಗ್ಗುವಂತೆ ಕಥೆ, ಕವನ, ಲೇಖನಗಳು ಪುಂಖಾನುಪುಂಖವಾಗಿ ಸೃಷ್ಟಿಯಾಗುತ್ತಲೇ ಇವೆ. 

ನಮ್ಮ ತಾತ ಹೇಳುತ್ತಿದ್ದ ಮ್ಯಾಜಿಕ್‌ ಕನ್ನಡಿಯ ಕಥೆ ಬಹಳ ಆಸಕ್ತಿದಾಯಕವಾಗಿತ್ತು. ಆ ಕನ್ನಡೀನ ಯಾರ ಮುಖಕ್ಕೆ ಹಿಡೀತಾರೋ ಅವರ ಗುಣಗಳೆಲ್ಲಾ ಕನ್ನಡಿ ಮೇಲೆ ಬರ್ತಿತ್ತು. ಕನ್ನಡಿ ಸಿಕ್ಕಿದ ಹುಡುಗ ಅದನ್ನ ತನ್ನ ಅಪ್ಪ, ಅಮ್ಮ, ಅಕ್ಕ, ತಮ್ಮ, ಫ್ರೆಂಡ್ಸ್‌, ಮೇಷ್ಟ್ರು, … ಎಲ್ಲಾರ ಮುಖಕ್ಕೂ ಹಿಡೀತಾನೆ. ಅವರ ಬುದ್ದಿಯೆಲ್ಲಾ ತಿಳಿದು ಅವನ ತಲೆ ಚಿಟ್ಟುಹಿಡಿದುಹೋಗುತ್ತೆ. ಆಗ ಆ ಕನ್ನಡಿ ಕೊಟ್ಟ ಮ್ಯಾಜಿಕ್‌ ಮಾಮ ಬಂದು ʼಅದನ್ನು ದಿನಾ ಬೆಳಿಗ್ಗೆ ನಿನ್ನ ಮುಖ ನೋಡಿಕೊಂಡು ನಿನ್ನ ನೀನು ತಿದ್ದಿಕೊಳ್ಳಕ್ಕೆ ಕೊಟ್ಟಿದ್ದುʼ ಅಂತ ಹೇಳ್ತಾನೆ. ಆಗಂತೂ ಈ ಕಥೆಯ ತಲೆಬುಡ ಅರ್ಥವಾಗಿರಲಿಲ್ಲ. ಈಗ ಅಂಥಾ ಕನ್ನಡಿ ಒಂದು ನನ್ನ ಬಳಿ ಇದ್ದಿದ್ದರೆ ಎನಿಸದೇ ಇರುವುದಿಲ್ಲ. 

ತನ್ನದೇ ಸ್ವಂತ ಪ್ರಕಾಶವಿಲ್ಲದಿದ್ದರೂ ಆಗಸದ ಚಂದ್ರನಂತೆ ಪ್ರಸಿದ್ಧಿಯ ಪರಾಕಾಷ್ಟೆಗೆ ಏರಿರುವುದು ಈ ನಮ್ಮ ದರ್ಪಣವೇ ಇರಬಹುದು.  ಈ ಕನ್ನಡಿಯನ್ನು ನೋಡಿದರೆ ನನಗೆ ಕೆಲವೊಮ್ಮೆ ಕೃತಿ ಚೌರ್ಯ ಮಾಡುವವರ ನೆನಪಾಗುತ್ತದೆ.

ಬೆಳಗುವ ಪುಟ್ಟ ಹಣತೆಗೆ

ಪರಮಾನಂದದ ಸಂತೃಪ್ತಿ

ಸುತ್ತಲಿನ ಮಂದ ಪ್ರಕಾಶ

ತನ್ನೊಳಗಿನ

ಬೆಳಕ ಸೃಜನತೆಯೆಂದು,

ಪಕ್ಕದಲ್ಲಿಟ್ಟ ದರ್ಪಣಕ್ಕೋ

ಫಲಿತ ಎರವಲು ಕಿರಣಗಳ

ಪ್ರತಿಫಲಿಸಿ ಪ್ರಖರಿಸಿ

ಪ್ರಖ್ಯಾತಗೊಳ್ಳುವ ಅತೃಪ್ತ ಗೀಳು!


ಏನೇ ಆದರೂ ತನ್ನ ಪ್ರತಿಫಲನ ಸಾಮರ್ಥ್ಯದಿಂದಲೇ ಈ ನಮ್ಮ ದರ್ಪಣ ಬಾಹ್ಯಾಕಾಶಕ್ಕೂ ಏರಿ ತನ್ನ ಪ್ರಾಮುಖ್ಯತೆಯನ್ನು ಸಾರುತ್ತಿದೆ. ನಮ್ಮ ಭೂಮಿಯಿಂದ 560ಕಿ.ಮೀ. ಎತ್ತರದಲ್ಲಿ ಸ್ಥಾಪಿಸಿರುವ ಹಬಲ್‌ ದೂರದಶಕದಲ್ಲಿ ದೊಡ್ಡದಾದ ಕನ್ನಡಿಯಿದ್ದು ಹಬಲ್‌ನ ಕಾರ್ಯನಿರ್ವಹಣೆಗೆ ಸಹಕರಿಸುತ್ತಿದೆ. ಚಂದ್ರನ ಮೇಲೆಯೂ ಈ ನಮ್ಮ ಪ್ರತಿಫಲಕ ರೂಪದ ಕನ್ನಡಿಗಳನ್ನು ಇಟ್ಟು ದರ್ಪಣದ ಕೀರ್ತಿಯನ್ನು ಅಜರಾಮರಗೊಳಿಸಿದ್ದಾರೆ. ವೈಜ್ಞಾನಿಕವಾಗಿ ಇನ್ನೂ ಅನೇಕಾನೇಕ ಸಂದರ್ಭಗಳಲ್ಲಿ ಬಳಕೆಯಾಗುತ್ತಿರುವ ಈ ದರ್ಪಣ ತನ್ನ ಗುಣವಾದ ಪ್ರತಿಫಲನದ ಪ್ರಯೋಜನಗಳನ್ನು ಪರಾಕಾಷ್ಟೆಗೇರಿಸಿದೆ!  

      ಇತ್ತೀಚೆಗೆ ನಮ್ಮ ಬಗ್ಗೆ ನಮಗಿರುವ ಮನಸ್ಸಿನ ಚಿತ್ರಣಕ್ಕೂ ವಾಸ್ತವದ ಚಿತ್ರಕ್ಕೂ ತಾಳೆಯೇ ಇರುವುದಿಲ್ಲ. ಕೆಲವೊಮ್ಮೆ ಆನಂದದ ಅತ್ಯುತ್ಸಾಹದಲ್ಲಿ ನಲಿಯುತ್ತಾ ಕನ್ನಡಿಯೆದುರು ನಿಂತಾಗ ಕಂಡುಬರುವ ಕಟುಸತ್ಯವನ್ನು ಅರಗಿಸಿಕೊಳ್ಳಲು ಅಸಾಧ್ಯವೆನಿಸುವಂತಿರುತ್ತದೆ. ನಮ್ಮೊಳಗಿನ ಸತ್ವವನ್ನು(!) ಮರೆಮಾಚಿ ದುರ್ಬಲ ದೇಹವನ್ನಷ್ಟೇ ತೋರಿಸುವ ಕನ್ನಡಿಯ ಬಗ್ಗೆ ಕೋಪ ಬರದಿರಲು ಹೇಗೆ ಸಾಧ್ಯ.

ಆದರೂ ನನಗೆ ಕನ್ನಡಿ ಅಂದೂ, ಇಂದೂ, ಎಂದೆಂದಿಗೂ ಪರಮಪ್ರಿಯವೇ. ‘ಪ್ರತಿಬಿಂಬ’ ಎಂಬ ನನ್ನ ಹನಿಗವನವೊಂದು ಈ ರೀತಿ ಇದೆ:

ಕನ್ನಡಿಯೊಂದಿರಬೇಕು ಆಗಾಗ

ನನ್ನ ನಾ ನೋಡಿಕೊಳ್ಳಲು

ಸುಂದರಿ ಎಂಬ ಹಮ್ಮಿನಿಂದ

ವದನಾರವಿಂದದ ಅಂದ

ನೋಡಲು ಅಲ್ಲ

ಬಂದಿರಬಹುದಾದ ಹೊಸಕಲೆಗಳ

ಗುರುತಿಸಿ ನಿವಾರಿಸಲು!


ನಾವು ನೋಡಿಕೊಳ್ಳುವ ಕನ್ನಡಿ ನಿಮ್ನ ಅಥವಾ ಪೀನ ಆಗಿರಬಾರದು, ಇತರರ ಹೊಗಳಿಕೆ ಅಥವಾ ತೆಗಳಿಕೆಯಂತೆ. ಸಮತಲ ದರ್ಪಣವೇ ನಿಜ ಮಾನದಂಡ.

ಕನ್ನಡಿಯ ಬಗ್ಗೆ ಬಹಳ ಅರ್ಥಪೂರ್ಣವಾದ ಝೆನ್‌ ಸೂಕ್ತಿಯೊಂದು ಈ ರೀತಿ ಇದೆ:

ಏನನ್ನೂ ಸ್ವೀಕರಿಸುವುದಿಲ್ಲ

ಏನನ್ನೂ ತಿರಸ್ಕರಿಸುವುದಿಲ್ಲ

ಏನಿದ್ದರೂ ಗ್ರಹಿಸುತ್ತದೆ

ಯಾವುದನ್ನೂ ಸಂಗ್ರಹಿಸುವುದಿಲ್ಲ.


ಝನ್‌ ಸಾಧಕನ ಬಳಿಯಿದ್ದ ಜಾದೂ ಕನ್ನಡಿಯಂತೆ ಯಾವುದಾದರೂ ಸಮಸ್ಯೆ ಎದುರಾದಾಗ ಕನ್ನಡಿಯನ್ನೇ ದಿಟ್ಟಿಸಿ ಸಮಸ್ಯೆಯ ಮೂಲ ಮತ್ತು ಪರಿಹಾರ ಎರಡನ್ನೂ ತಿಳಿದುಕೊಳ್ಳುವಂತಿದ್ದರೆ….ಎಷ್ಟು ಚೆನ್ನಾಗಿರುತ್ತಿತ್ತು ನಮ್ಮೀ ಬದುಕು. ಎಲ್ಲವೂ ʼರೆʼ ರಾಜ್ಯ!                                    

ದರ್ಪಣದೊಳಗೇ ʼದರ್ಪʼ ಅಡಗಿರುವುದರಿಂದ ಅದು ನಮ್ಮ ಬಾಹ್ಯ ರೂಪ, ಮೈ ಬಣ್ಣ, ಮುಖ ಸೌಂದರ್ಯದ ಜೊತೆಗೇ ಅಹಂಕಾರವನ್ನೂ  ಬಿಂಬಿಸುತ್ತಿರುತ್ತದೇನೋ! ಇದೆಲ್ಲಾ ಬಾಹ್ಯ ಕನ್ನಡಿಯ ವಿಷಯವಾಯ್ತು. ವಾಸ್ತವದಲ್ಲಿ ನಮಗೆ ಬೇಕಾಗಿರುವುದು ನಮ್ಮ ನಿಜವಾದ ವ್ಯಕ್ತಿತ್ವ  ದರ್ಶನ ಮಾಡಿಸುವ ಮನದೊಳಗಿನ ಕನ್ನಡಿ. ಅಂತರಂಗದ ಕನ್ನಡಿಯಲ್ಲಿ ನಮ್ಮನ್ನು ನಾವು ನೋಡಲು ಸಾಧ್ಯವಾದರೆ ಅದ್ಭುತವೇ ಸೃಷ್ಟಿಯಾಗಿ ನಮ್ಮ ನೈಜ ಪ್ರತಿಭೆಯ ಅನಾವರಣವಾಗಲೂಬಹುದು. 

ಸಂಸ್ಕೃತದಲ್ಲಿ ಒಂದು ಸುಭಾಷಿತವು ಹೀಗಿದೆ-

ಯಸ್ಯಾ ನಾಸ್ತಿ ಸ್ವಯಂ ಪ್ರಜ್ಞಾ ಶಾಸ್ತ್ರಂ ತಸ್ಯ ಕರೋತಿ ಕಿಂ|

ಲೋಚನಾಭ್ಯಾಂ ವಿಹೀನಸ್ಯ ದರ್ಪಣಂ ಕಿಂ ಕರಿಷ್ಯತಿ||

(ಯಾರಿಗೆ ಸ್ವಪ್ರಜ್ಞೆ ಇರುವುದಿಲ್ಲವೋ ಅವರಿಗೆ ಶಾಸ್ತ್ರಗಳಿಂದ ಏನು ಪ್ರಯೋಜನ?

ಕಣ್ಣುಗಳೇ ಇಲ್ಲದವರಿಗೆ ಕನ್ನಡಿಯಿಂದ ಏನು ಪ್ರಯೋಜನ?)


ಇದರಿಂದ ಅಂಧರ ಮನಸ್ಸಿಗೆ ಎಷ್ಟೊಂದು ನೋವಾಗುತ್ತದೆ ಎಂಬ ಅಭಿಪ್ರಾಯ ಮೊದಲ ಓದಿನಲ್ಲಿ ಬಂದಿತ್ತು. ಒಮ್ಮೆ ಈ ಬಗ್ಗೆ ನನ್ನ ಆಪ್ತರೊಂದಿಗೆ ಚರ್ಚಿಸಿದಾಗ ತಿಳಿದದ್ದು, ‘ಕಣ್ಣು ಬಾಹ್ಯದ್ದೇ ಆಗಬೇಕಿಲ್ಲ. ಆಂತರ್ಯದ ಕಣ್ಣುಗಳನ್ನು ತೆರೆಯಲಾಗದವರು ಏನನ್ನೂ ನೋಡಲಾರರು. ನಮ್ಮನ್ನು ನಾವು ಹೇಗಿದ್ದೇವೆಂದು ತೋರಿಸುವ ಕನ್ನಡಿ ನಮ್ಮೊಳಗೇ ಇದೆ. ನಮ್ಮ ಅಂತರಂಗವೇ ಒಂದು ದರ್ಪಣ. ಅದನ್ನು ಕಾಣುವಂತಹ ಮನಃಸ್ಥಿತಿಯನ್ನು ಪಡೆದುಕೊಳ್ಳಲು ಕಾರ್ಯಪ್ರವೃತ್ತರಾಗಬೇಕು, ಅಷ್ಟೆ.’      

ಅಂತರಂಗದ ಕನ್ನಡಿಯನ್ನು ನಮ್ಮದಾಗಿಸಿಕೊಳ್ಳುವಂತೆ ಅಂತಃಚಕ್ಷುಗಳಿಗೆ ಅರಿವ ನೀಡೆನ್ನುವುದು ಅಂತರಾತ್ಮನಲ್ಲಿ ನಮ್ಮ ಕಳಕಳಿಯ ಪ್ರಾರ್ಥನೆಯಾಗಲಿ.

            ~ಪ್ರಭಾಮಣಿ ನಾಗರಾಜ





Tuesday, April 9, 2024

ಸುಧಾ' ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ನನ್ನ 'ಎಲ್ಲದಕೂ ಕಾರಣ ನೀನೇ ಪ್ರಿಯ ದರ್ಪಣ'ಕ್ಕೆ ಪ್ರಥಮ ಬಹುಮಾನ

 



'ಸುಧಾ' ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ನನ್ನ 'ಎಲ್ಲದಕೂ ಕಾರಣ ನೀನೇ ಪ್ರಿಯ ದರ್ಪಣ'ಕ್ಕೆ ಪ್ರಥಮ ಬಹುಮಾನ ಲಭಿಸಿದೆ ಎಂಬ ಸಂತಸವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ😍

ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು❤️🙏


'ಸುಧಾ' ಯುಗಾದಿ ಪ್ರಬಂಧ ಸ್ಪರ್ಧೆ: ಪ್ರಭಾಮಣಿ, ಸತೀಶ್‌, ಅರಳಿಸುರಳಿಗೆ ... 



https://www.facebook.com/share/p/5BGqzAvXVZUF2uKy/?mibextid=oFDknk

Sunday, April 7, 2024

ವಿಜಯ ಕರ್ನಾಟಕ ಯುಗಾದಿ ವಿಶೇಷ ಸಂಚಿಕೆಯಲ್ಲಿ ನನ್ನ ಲಲಿತ ಪ್ರಬಂಧ


ಈ ಸುಂದರ ಸಂಚಿಕೆದಲ್ಲಿ  ನನಗೂ ಲಲಿತ ಪ್ರಬಂಧವನ್ನು ಬರೆಯಲು ಅವಕಾಶ ನೀಡಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು ವಿದ್ಯಾ ಮೇಡಂ ವಿದ್ಯಾರಶ್ಮಿ ಪೆಲತ್ತಡ್ಕ  ❤️🙏 ನನ್ನ ಮಗಳು Sushma Sindhu  ಬಹುಮಾನಿತ ಲೇಖನವೂ ಇರುವುದು ಇನ್ನೂ ಹೆಚ್ಚು ಸಂತಸವಾಗಿದೆ😍

https://www.facebook.com/share/p/KKeCr2fd5sXgw8de/?mibextid=oFDknk

 https://www.facebook.com/share/p/impDXh3DXeQXvMVq/?mibextid=oFDknk



Saturday, April 6, 2024

'ಸುಧಾ' ಪತ್ರಿಕೆಯಲ್ಲಿ ಲಲಿತ ಪ್ರಬಂಧ - 'ಎಡವಟ್ಟೋ… ಎಡವಟ್ಟು!

 





ಹಿಂದಿನ ವಾರದ ( ಏಪ್ರಿಲ್04, 2024) 'ಸುಧಾ' ಪತ್ರಿಕೆಯ 'ಮಂದಹಾಸ'ದಲ್ಲಿ  ಪ್ರಕಟವಾಗಿರುವ ನನ್ನ ಲಲಿತ ಪ್ರಬಂಧ - 'ಎಡವಟ್ಟೋ… ಎಡವಟ್ಟು!'  ನಿಮ್ಮ ಪ್ರೀತಿಯ ಓದಿಗೆ😍


ಎಡವಟ್ಟೋ… ಎಡವಟ್ಟು!

              


              ನಮ್ಮ ಹಳ್ಳಿಯ ಜನ ಅನ್ವರ್ಥನಾಮ ಇಡುವುದರಲ್ಲಿ ಬಹಳ ಪ್ರವೀಣರಿದ್ದರು. ಹೊಸಬರನ್ನು ಕಂಡಾಗ ಅವರ ಹೆಸರೇನು ಎಂದು ಕೇಳುವ ಗೋಜಿಗೂ ಹೋಗದೇ ಅವರಲ್ಲಿಯ ದೈಹಿಕ ಅಥವಾ ವರ್ತನಾ ಪ್ರಧಾನ ಗೋಚರಾಂಶವನ್ನು ಗುರುತಿಸಿ ತಕ್ಷಣವೇ ಒಂದು ಅನ್ವಯನಾಮವನ್ನಿಟ್ಟು ಕರೆದೇಬಿಡುತ್ತಿದ್ದರು. ಈ ರೀತಿಯ ನಡೆಯನ್ನು ನಮ್ಮ ಮನೆಯಲ್ಲಿ ಅನಾಗರಿಕವೆಂದು ಪರಿಗಣಿಸಿದ್ದರಿಂದ ಅದಕ್ಕೆ ಆಸ್ಪದವಿರಲಿಲ್ಲ. ಆದರೂ ನಮ್ಮ ಮನೆಯ ಹಿರಿಯ ಮೇಲ್‌ ಮಕ್ಕಳು ಕದ್ದುಮುಚ್ಚಿ ಇಂಥಾ ಹೆಸರುಗಳನ್ನಿಟ್ಟು ಕೀಟಲೆಮಾಡುತ್ತಿದ್ದುದು ನಡೆದೇ ಇತ್ತು. ಇದಕ್ಕೆಲ್ಲಾ ಬಲಿಪಶುವಾಗುತ್ತಿದ್ದುದು ನಿರುಪದ್ರವಿ ಜೀವಿಯಾದ ನಾನೇ ಆದ್ದರಿಂದ ಅನಿವಾರ್ಯವಾಗಿ ನಾನು ಈ ಕೋಟಲೆಯನ್ನು ಅನುಭವಿಸಲೇಬೇಕಿತ್ತು. ಎಡವಟ್ಟ, ಎಂಗರವಟ್ಟ, ಮೊದ್ದು, ಪೆಂಗ, ಪೆಗ್ಗೆ ಮುಂತಾಗಿ ಸಂದರ್ಭಾನುಸಾರ ಕರೆಯುವುದೆಂದರೆ ಅವರಿಗೆ ಖುಷಿಯೋಖುಷಿ. ಹೀಗೆ ಬಾಲ್ಯದಿಂದಲೇ ಪಾರಂಭವಾದ ನನ್ನ ಎಡವಟ್ಟುತನ ನನ್ನೊಂದಿಗೇ ಬೆಳೆಯುತ್ತಾ ಸುತ್ತಿನವರಿಗೆಲ್ಲಾ ಆಗಾಗ ಮನರಂಜನೆಯನ್ನುಂಟುಮಾಡುತ್ತಿತ್ತು. 

ಚಿಕ್ಕಂದಿನಿಂದಲೇ ಅನಿವಾರ್ಯ ಎಡವಟ್ಟಾಂಕಿತಳಾಗಿದ್ದ ನನಗೆ ಬಹಳ ದಿನಗಳ ನಂತರ ಎಡವಟ್ಟು ಅಂದರೆ ಅರ್ಥವೇನು ಎನ್ನುವ ಸಮಸ್ಯೆ ಕಾಡಲಾರಂಭಿಸಿತು. ಎಡವಟ್ಟು ಪದದ ವ್ಯತ್ಪತ್ತಿಯನ್ನು ಶೋಧಿಸಿದಾಗ ಪ್ರೊಫೆಸರ್ ಜಿ.ವೆಂಕಟಸುಬ್ಬಯ್ಯನವರ ವಿಶ್ಲೇಷಣೆಯಂತೆ 

ʼಎಡʼ ಮತ್ತು ʼಪಡುʼ ಎರಡು ಪದಗಳು ಸೇರಿ ಎಡವಟ್ಟು ಆಗಿದೆ ಎಂದು ತಿಳಿದುಬಂತು.

ಎಡ ಅಂದರೆ ಎಡಗಡೆ, ಎಡಗೈಯಿಂದ ಒಳ್ಳೆಯ ಕೆಲಸ ಮಾಡಬಾರದು ಅಂತ ಅಜ್ಜಿ ಆಗಾಗ ಹೇಳ್ತಿದ್ದರು. ಬೆಳಿಗ್ಗೆ ಏಳುವಾಗಿನಿಂದಲೇ ಎಡಮಗ್ಗುಲಲ್ಲಿ ಏಳಬಾರದು ಎನ್ನುವುದರಿಂದ ಪ್ರಾರಂಭವಾಗಿ ಎಡಗೈಲಿ ಊಟ ಮಾಡಬಾರದು, ಎಡಗೈಲಿ ಬರೆಯಬಾರದು, ದೇವರಿಗೆ ಪ್ರದಕ್ಷಿಣೆಯನ್ನೂ ಎಡಗಡೆಯಿಂದ ಮಾಡಬಾರದು… ಮುಂತಾಗಿ ಎಡ ನಿಷೇಧಗಳ ಲಿಸ್ಟ್‌ ಮುಂದುವರಿಯುತ್ತಿತ್ತು. ಇನ್ನು ʼಪಡುʼ ಅನ್ನೋದು ಪಟ್ಟು ರೂಪ ಪಡೆದು, ಎಡ ಮತ್ತು ಪಟ್ಟು ಸೇರಿ ಸಮಾಸವಾಗುವಾಗ ಎಡವಟ್ಟು ಆಗಿದೆ!. ಅಬ್ಬಬ್ಬಾ ಎಡವಟ್ಟೇ! ಹಾಗಾಗಿ ಎಡವಟ್ಟು ಅಂದರೆ ಎಡಕ್ಕೆ ಬಿದ್ದ, ಕ್ರಮ ತಪ್ಪಿದ, ಸರಿ ಹೋಗದ.. ಇತ್ಯಾದಿ ಅರ್ಥ ಬರುತ್ತದೆ ಎಂದು ತಿಳಿಯಿತು. ಈ ಹಾಳು ಹಿರೀಹುಡುಗರು ಎಡವರಿಯದ ಪಾಪದ ಜೀವಿಯಾದ ನನ್ನ ತಲೆಗೆ ಏಕೆ ಈ ಹುಳವನ್ನು ಬಿಟ್ಟರೋ ಕಾಣೆ. ನಾಲ್ಕಕ್ಷರ ಕಲಿತ ನಂತರ ಎಲ್ಲೆಲ್ಲೂ ನನಗೆ ಎಡವಟ್ಟೇ ಕಾಣಲಾರಂಭಿಸಿತು.

ಮೆಡಿಸಿನ್ ತಿಂದು ಎಡವಟ್ಟಾಗಿ ಮಹಿಳೆಯೊಬ್ಬರ ನಾಲಿಗೆ ಕಪ್ಪು ಬಣ್ಣಕ್ಕೆ ತಿರುಗಿದ್ದು ಮಾತ್ರವಲ್ಲದೇ ನಾಲಿಗೆಯಲ್ಲಿ ಪೂರ್ತಿ ಕೂದಲು ಬೆಳೆಯಿತೆನ್ನುವ ವಾರ್ತೆಯಿಂದ ಯಾವುದೇ ಮೆಡಿಸಿನ್‌ ತೆಗೆದುಕೊಳ್ಳುವುದಕ್ಕೂ ಹಿಂದೆಮುಂದೆ ನೋಡುವಂತಾಯ್ತು. 

ಬ್ಯಾಂಕ್ ಸಿಬ್ಬಂದಿ ಎಡವಟ್ಟಿನಿಂದ ಖಾತೆಗೆ 6,000ರೂ ಬದಲು 6ಲಕ್ಷರೂ ಜಮಾ ಆಯ್ತು ಎನ್ನುವ ಸುದ್ಧಿಯನ್ನು ಓದಿದಾಗ ನನಗಾದರೂ ಆ ಅದೃಷ್ಟ ಖುಲಾಯಿಸಿದ್ದರೆ ಎನಿಸುವ ಬದಲು ಸಧ್ಯ ನಾನು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿಲ್ಲವಲ್ಲ ಎಂದು ಸಾರ್ವಜನಿಕ ಎಡವಟ್ಟಾಂಕಿತದಿಂದ ಪಾರಾದ ಬಗ್ಗೆ ಸಮಾಧಾನದ ನಿಟ್ಟುಸಿರಿಟ್ಟೆ.

ತಾನು ಧರಿಸಿದ ದುಪ್ಪಟ್ಟದಲ್ಲಿದ್ದ ಬೆಲೆಯ ಟ್ಯಾಗ್ ತೆಗೆಯುವುದನ್ನು ಮರೆತುಹೋದ ಎಡವಟ್ಟಿನಿಂದ ಪ್ರಸಿದ್ಧ ನಟಿಯೊಬ್ಬರು ಟ್ರೋಲ್‌ ಆದದ್ದನ್ನು ನೋಡಿದಾಗ ನನಗೆ ಒಮ್ಮೆ ಪರಮ ಎಡವಟ್ಟಳಾದ ನಾನು ಉಲ್ಟಾ ಸೀರೆಯುಟ್ಟು ದಿನವಿಡೀ ಡ್ಯೂಟಿ ಮುಗಿಸಿ ಹಿಂತಿರುಗಲು ಬಸ್‌ ಹತ್ತುವಾಗ ಸೆರಗನ್ನು ಹಿಡಿದ ಕೈಗೆ ಸೀರೆಯ ಫಾಲ್‌ ಸಿಕ್ಕಿ ಕಕ್ಕಾಬಿಕ್ಕಿಯಾದದ್ದು ನೆನಪಾಯ್ತು! 

ʼಎಡವಟ್‌ʼ ಎಂಬ ಶಬ್ದ ಕಿವಿಯ ಮೇಲೆ ಬಿದ್ದಾಕ್ಷಣವೇ ನನ್ನ ಶ್ರವಣೇಂದ್ರಿಯಗಳು ಚುರುಕಾಗುತ್ತಿದ್ದುದರಿಂದ ಎಡವಟ್ಟಾಯಿತು ಫೋನ್ ಡೆಡ್ ಆಯ್ತು ಎನ್ನುವ ನ್ಯೂಸನ್ನು ಕಿವಿಗೊಟ್ಟು ಕೇಳಿದೆ. ಒಂದು ಮಾಡಕ್ ಹೋಗಿ ಮತ್ತೊಂದ್ ಮಾಡಿದ್ರಂತೆ ಎಂಬ ಗಾದೆ ಮಾತಿನಂತೆ ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿಯ ಮೇಲೆ ತೆರೆದುಕೊಂಡಿದ್ದ ಮ್ಯಾನ್ ಹೋಲ್ ಮುಚ್ಚಲು ಹೋಗಿ ಬಿಎಸ್ಎನ್ಎಲ್ ವೈರ್ ಕತ್ತರಿಸಿ ಹಾಕಿದ ಎಡವಟ್ಟಿನಿಂದ ಇಡೀ ಗ್ರಾಮದ ಲ್ಯಾಂಡ್ ಫೋನ್ ಡೆಡ್ ಆಗಿ ಗ್ರಾಮಸ್ಥರು ಪರದಾಡುವಂತಾಗಿದೆ ಎಂಬ ಸುದ್ಧಿಯಿಂದ ಮೊಬೈಲ್‌ ಇನ್ನೂ ಸಕಲರ ಕರಸ್ಥಳದಲ್ಲಿ ಇಂಬುಗೊಳ್ಳದಿದ್ದ ಆ ಕಾಲದಲ್ಲಿ ಲ್ಯಾಡ್‌ ಫೋನ್‌ ಎಷ್ಟೊಂದು ಮುಖ್ಯವಾಗಿತ್ತೆನ್ನುವುದು ಸ್ಮೃತಿಪಟಲದಲ್ಲಿ ಮೂಡಿತು. 

ಚಾರಣ ಹೊರಟು, ಜತೆಗಾರರಿಂದ ತಪ್ಪಿಸಿಕೊಂಡು ಭಯ, ಆತಂಕದಲ್ಲೇ ಮೂರ್ನಾಲ್ಕು ದಿನ ಕಾಡುಮೇಡು ಅಲೆದು ಅದೃಷ್ಟವಶಾತ್ ಬದುಕಿ ಬಂದ ಚಾರಣಿಗ ಕೊಟ್ಟ ಕಾರಣ ಕಾಲಿಗೆ ಹತ್ತಿದ ಜಿಗಣೆ ಕಿತ್ತು ಹಾಕಲು ಒಂದು ಕ್ಷಣ ಬಾಗಿದ ಎಡವಟ್ಟು. ಅಷ್ಟರಲ್ಲೇ ದಟ್ಟ ಮಂಜು ಮುಸುಕಿ  ಮುಂದೆ ಏನೂ ಕಾಣದಂತಾಗಿ, ಜೋರಾಗಿ ಕಿರುಚಿಕೊಂಡರೂ ಧಾರಾಕಾರ ಮಳೆಯ ಸದ್ದು, ಪಕ್ಕದಲ್ಲೆ ಹರಿಯುತ್ತಿದ್ದ ನೀರಿನ ಬೋರ್ಗರೆತದಿಂದ ಕೂಗು ಜತೆಗಾರರಿಗೆ ಕೇಳಿಸದಂತಾಗಿ… ಪ್ರಯೋಜನವಾಗಿರಲಿಲ್ಲ ಎನ್ನುವುದು ಚಾರಣಿಗರಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಹೀಗೇ ಎಡವಟ್ಟನ್ನೇ ಅರಸುತ್ತಾ ಎಡವಟ್ಟಾಗಿ ಜೀವನ ಮುನ್ನಡೆಯುತ್ತಿದ್ದಾಗ ನನ್ನ ವೈಯಕ್ತಿಕ ಬದುಕಿನಲ್ಲಿ ಮರಿಎಡವಟ್ಟಾಗಮನದ ಲಕ್ಷಣಗಳು ಕಂಡುಬಂದವು. ಆಗೆಲ್ಲಾ ಖಾಸಗಿ ಆಸ್ಪತ್ರೆಗಳು ಅಷ್ಟೇನೂ ಸುಸಜ್ಜಿತವಾಗಿಲ್ಲದಿರುತ್ತಿದ್ದರಿಂದ ನನಗೆ ಟ್ರೀಟ್‌ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಯ ಡಾಕ್ಟರ್‌ ನನ್ನನ್ನು ಜಿಲ್ಲಾಕೇಂದ್ರದ ಸರ್ಕಾರಿ ಆಸ್ಪತ್ರೆಗೆ ರೆಫರ್‌ ಮಾಡಿದರು. ಸಿಝೇರಿಯನ್‌ ಆಗಿ ಮಗು ಹುಟ್ಟಿದ ನಂತರ ನನ್ನ ಜೊತೆಗಿದ್ದ ನಮ್ಮಮ್ಮ ನರ್ಸ್‌ ಮಗುವನ್ನು ಎಲ್ಲಿ ಕರೆದುಕೊಂಡು ಹೋದರೂ ಜೊತೆಯಲ್ಲಿಯೇ ಹೋಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದರು. ಮಗು ಏನಾದರೂ ಅದಲುಬದಲಾದರೆ ಎನ್ನುವುದೇ ಅವರ ಚಿಂತೆ. ಅಮ್ಮನ ಈ ಓವರ್‌ ಪ್ರೊಟಕ್ಷನ್‌ ಕೇರ್‌ ನೋಡಿ ನನಗೆ ಆಶ್ಚರ್ಯವಾಗುತ್ತಿತ್ತು. ನಂತರದ ದಿನಗಳಲ್ಲಿ ಇತ್ತೀಚೆಗೆ ಪತ್ರಿಕೆಯಲ್ಲಿ ಬಂದ ಸುದ್ಧಿ ʼಪ್ರತಿಷ್ಠಿತ ಆಸ್ಪತ್ರೆಯೊಂದರ ಸಿಬ್ಬಂದಿ ಎಡವಟ್ಟಿನಿಂದ ಮಗುವನ್ನು ಅದಲು-ಬದಲು ಮಾಡಿದ್ದಾರೆ..ʼ ಎನ್ನುವುದನ್ನು ನೋಡಿ ಗಾಬರಿಬೀಳುವಂತಾಯ್ತು. ಅಮ್ಮಾ…

ಅವಸರದಲ್ಲಿ ಎಡವಟ್ಟು ಕೆಲಸ ಮಾಡುವುದನ್ನು ಅಬಾದುಬಿ ಎನ್ನುತ್ತಾರಂತೆ. ಈ ಪದದ ಮೂಲ ಹಿಂದಿಯ ʼಅಪಾಧಾಪಿʼಯಾಗಿದ್ದು, ಅದರ ಅರ್ಥ ಆಪತ್ತಿನ ಸಮಯದಲ್ಲಿ ದಿಕ್ಕು ತೋಚದೆ ಎತ್ತೆತ್ತೆಲೋ ಓಡಾಟ ಮಾಡುವುದೆಂದು ತಿಳಿದುಬಂದಿತು. ನಾನಿಂಥಾ ಅಬಾದುಬಿಗಳನ್ನು ಎಷ್ಟು ಮಾಡಿದ್ದೇನೆನ್ನುವುದಕ್ಕೆ ಲೆಕ್ಕವೇ ಇಲ್ಲ. ಅಮ್ಮ ಒಮ್ಮೆ ʼಬಚ್ಚಲಿಗೆ ನೀರು ಹುಯ್ಯಿʼ ಎಂದು ಕೊಟ್ಟ ನೀರನ್ನು ಸ್ಕೂಲಿಗೆ ಹೋಗುವ ಆತುರದಲ್ಲಿ ನೇರವಾಗಿ ಹೋಗಿ ಉರೀತಿದ್ದ ಒಲೆಗೇ ಹುಯ್ದಿದ್ದೆ. ಮಳೆಗಾಲದಲ್ಲಿ ಹಸಿಸೌದೆಯನ್ನು ಒಂದು ಸಾರಿ ಹಚ್ಚೋದೇ ಕಷ್ಟ. ನನ್ನ ಅಬಾದುಬಿಯಿಂದ ಅಮ್ಮ ಪಾಡುಪಡುವಂತಾಯ್ತು. 

       ಸೀಮೆಎಣ್ಣೆ ದೀಪದ ಕಾಲವಾಗಿದ್ದ ಅಂದು ನಮ್ಮ ಮನೆಯಲ್ಲಿ ಒಂದು ಕಡೆ ಇಡಲು ಸ್ಟ್ಯಾಂಡ್ ದೀಪ, ಹಿಡಿದುಕೊಂಡು ಓಡಾಡಲು ಲಾಟೀನುಗಳಿದ್ವು. ಅವಕ್ಕೆ ಗಾಜಿನ ಚಿಮಣಿ ಹಾಕ್ತಿದ್ರು. ನಾನು ಆ ದೀಪ ಹಿಡಿದುಕೊಂಡಾಗಲೇ ಚಿಮಣಿ ಬಿದ್ದು ಒಡೆದು ಹೋಗ್ತಿತ್ತು. ಗಾಜಿನ ಸೀಸಗಳನ್ನೂ ಹೀಗೇ ಗತಿಕಾಣಿಸುತ್ತಿದ್ದೆ. ಅದಕ್ಕೇ ನನಗೆ ʼಸೀಸ ಒಡೆದ ಬೂಸಣ್ಣಿʼ ಎಂದೇ ಅಡ್ಡಹೆಸರಿಟ್ಟಿದ್ದರು. ಇದು ಹೀಗೇ ಮುಂದುವರೆದು… ಕಾಲೇಜಿನಲ್ಲಿದ್ದಾಗ ಒಬ್ಬ ಕೆಮಿಸ್ತ್ರಿ ಪ್ರೊಫೆಸರ್ ಕಂಡ್ರೆ ವಿನಾಕಾರಣ ನನಗೆ ತುಂಬಾ ಭಯವಾಗ್ತಿತ್ತು.   ಲ್ಯಾಬ್‌ನಲ್ಲಿ ಟೈಟ್ರೇಷನ್‌ ಎಕ್ಸ್‌ಪೆರಿಮೆಂಟ್ ಮಾಡುವಾಗ ಅವರೇನಾದರೂ  ಬಂದರೆ ಕೈಲಿ ಹಿಡಿದಿದ್ದ ಬ್ಯೂರೆಟ್ಅನ್ನು ಹಾಗೇ ಬಿಟ್ಟು ಫೈನ್‌ ಕಟ್ಟುವಂತಾಗುತ್ತಿತ್ತು. ಒಂದು ಸಾರಿಯಂತೂ ಅವರು ಬಂದದ್ದೇ ಆಸಿಡ್‌ಅನ್ನು ಪಿಪೆಟ್‌ ಮಾಡುತ್ತಿದ್ದವಳು ಹಾಗೇ ಸೊರ್ರನೆ ಹೀರಿಕೊಂಡು ಕುಡಿದು ಅದ್ವಾನವಾಗಿಹೋಗಿತ್ತು. ನನ್ನ ಈ ವೀಕ್ನೆಸ್‌ ಗಮನಿಸಿದ್ದ ನನ್ನ ಬ್ಯಾಚ್ಮೇಟ್ಗಳು   ʼಪ್ರೊಫೆಸರ್ ಬಂದ್ರುʼ ಎಂದು ಹೇಳಿ ನಾನು ಬೆಚ್ಚಿಬೀಳುವುದನ್ನು ನೋಡಿ ಮಜಾ ತೆಗೆದುಕೊಳ್ಳುತ್ತಿದ್ದರು. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ! ಮನೆಯಲ್ಲಿ ಚಿಮಣಿಗಳನ್ನು ಚೂರುಮಾಡುತ್ತಿದ್ದಂತೆ ಆಗಾಗ ಟೆಸ್ಟ್‌ಟ್ಯೂಬ್‌, ಬೀಕರ್,‌ ಫ್ಲಾಸ್ಕ್..‌ ಗಳನ್ನು ಒಡೆದು  ಫೈನ್‌ ಕಟ್ಟುವುದು ಸರ್ವೇಸಾಮಾನ್ಯವಾಗಿಹೋಗಿತ್ತು. ಸಧ್ಯ ಅಲ್ಲಿ ಯಾರೂ ನನ್ನನ್ನು ʼಬೂಸಣ್ಣಿʼಎಂದು ಕರೆಯುವವರು ಇರಲಿಲ್ಲ! 

ಈ ಸಾಮಾನ್ಯ ಎಡವಟ್ಟುಗಳ ನಡುವೆ ಕೆಲವು ಮಹಾ ಎಡವಟ್ಟುಗಳೂ ಪದೇಪದೇ ಗಮನ ಸೆಳೆಯುತ್ತಿರುತ್ತವೆ!

ವಿದೇಶೀ ಧ್ವಜ ಇರುವ ರಾಕೆಟ್‌ ಬಳಸಿ ಜಾಹೀರಾತನ್ನು ನೀಡಿ ಪಜೀತಿ ಮಾಡಿಕೊಂಡದ್ದು, ಸುಳ್ಳು ಮಾಹಿತಿಗಳನ್ನೇ ನೀಡಿ ಪ್ರಪಂಚದೆಲ್ಲೆಡೆ ಕೊರೊನಾ ವೈರಸ್ ಹರಡಲು ಕಾರಣವಾಗಿದ್ದು, ಚಲನ ಚಿತ್ರ ಪ್ರದರ್ಶನದ ವೇಳೆ ಥಿಯೇಟರ್ ಒಳಗೆ ಪಟಾಕಿ ಸಿಡಿಸಿದ ಫ್ಯಾನ್ಸ್ ಗಳ ಅಡಾವುಡಿ….. ಕೆಲವು ಮಹಾ ಎಡವಟ್ಟುಗಳ ಝಲಕ್‌ಗಳಷ್ಟೆ! ಹಾಗಾದರೆ ನಾನಷ್ಟೇ ಅಲ್ಲ, ಮಹಾನ್‌ ಎನಿಸಿಕೊಂಡವುಗಳಿಂದಲೂ ಮಹಾ ಎಡವಟ್ಟುಗಳೇ ನಡೆಯುತ್ತದೆನ್ನುವುದೇ ಸಮಾಧಾನದ ಸಂಗತಿ.

  ಮೊದಲೆಲ್ಲಾ ಪದೇಪದೇ ಎಡವಟ್ಟ ಎನಿಸಿಕೊಂಡು, ನಂತರ ಎಲ್ಲೆಲ್ಲಿಯೂ ಎಡವಟ್‌ ಸಮಾಚಾರಗಳನ್ನು ನೋಡಿ-ಕೇಳಿ ಕೆಟ್ಟಿದ್ದ ತಲೆಗೆ  ʼಜಾಕಿʼ ಚಿತ್ರದ ʼಎಡವಟ್‌ʼ ಹಾಡನ್ನು ಅಷ್ಟದಿಕ್ಕುಗಳಿಂದಲೂ ಕೇಳಿಕೇಳಿ, ಕೇಳಿದ್ದೆಲ್ಲವೂ ಎಡವಟ್ಟಾಗಿ ಕಡೆಗೆ ಮುಳ್ಳಿನಿಂದಲೇ ಮುಳ್ಳನ್ನು ತೆಗೆಯುವಂತೆ ಎಡವಟ್ಟೇ ತಲೆಯಿಂದ ಎರೇಸ್‌ ಆಗಲು ಸಹಕಾರಿಯಾಯ್ತು. ಇನ್ನು ಈ ಎಡವಟ್‌ ಸಹವಾಸವೇ ಬೇಡ ಎಂದುಕೊಳ್ಳುವಾಗಲೇ ನಮ್ಮ ತಂದೆ ಸದಾ ನನಗೆ ಹೇಳುತ್ತಿದ್ದ ʼಯಾಕಮ್ಮ ಇಷ್ಟೊಂದು ಆಭಾಸ ಮಾಡ್ತೀಯʼ ಎನ್ನುವ ಮಾತು ಕೊರೆಯಲಾರಂಭಿಸಿ ಆಭಾಸದ ಆನ್ವೇಷಣೆಯಲ್ಲಿ ತೊಡಗಿದೆ. ʼಆಭಾಸʼ ಎಂದರೆ ಅಧ್ವಾನ, ಗೊಂದಲ, ನಗೆಪಾಟಲು, ಪ್ರಮಾದ, ತಪ್ಪು ತಿಳುವಳಿಕೆ, ಎಡವಟ್ಟು.. ಓಹೋ ಮತ್ತೆ ಎಡವಟ್ಟು! ಎಡವಟ್ಟಿನ ಅರ್ಥವ್ಯಾಪ್ತಿಯಲ್ಲಿ ʼಆಭಾಸʼವಿರಲಿಲ್ಲ. ಆಭಾಸದಲ್ಲಿ ಎಡವಟ್ಟೂ ಸೇರಿದೆಯೆಂದರೆ… ನಮ್ಮ ತಂದೆಯೂ ನನ್ನನ್ನು ಸುಸಂಸ್ಕೃತವಾಗಿ ಎಡವಟ್ಟ ಅಂತಲೇ ಕರೆಯುತ್ತಿದ್ದರ? 

ನಮ್ಮ ಕನ್ನಡ ಭಾಷೆಯ ಉಚ್ಛಾರ, ಬರವಣಿಗೆ ಹಾಗೂ ಇತ್ತೀಚಿನ ಗೂಗಲ್‌ ಟ್ರಾನ್ಸ್ಲೇಷನ್‌ನಲ್ಲಿನ ಅಕ್ಷರ/ಪದಗಳ ಪ್ರಯೋಗ, ಸಾರ್ವಜನಿಕ ಕ್ಷೇತ್ರದಲ್ಲಿನ ಘಟನಾವಳಿಗಳು ಎಲ್ಲೆಡೆಯಲ್ಲೂ ನಡೆಯುತ್ತಿರುವ ಈ ಆಭಾಸಕ್ಕೆ ಕೊನೆಮೊದಲೇ ಇಲ್ಲ. ಈಗೀಗ ಎಡವಟ್ಟಿನಿಂದ ಹೇಗೋ ಪಾರಾಗಿದ್ದಾಗಿದೆ. ಸಧ್ಯದಲ್ಲಿ ವಿಶ್ರಮಿಸಿ ನಂತರ ನನ್ನ ಹಾಗೂ ನನ್ನಂಥಾ ಆಭಾಸಿಗಳ ಬಗ್ಗೆ ಹೇಳಹೊರಟರೆ ಆಭಾಸವಾಗುವುದಿಲ್ಲ ತಾನೆ! 

                      

  ~ಪ್ರಭಾಮಣಿ ನಾಗರಾಜ

Sunday, March 17, 2024

ʼಹಚ್ಚೆ ದಿನ್' ಪುಸ್ತಕ ಪರಿಚಯ 'ಜನ ಮಿತ್ರ' ಪತ್ರಿಕೆಯಲ್ಲಿ🌼

 ಸುಮಾ ರಮೇಶ್ ಅವರ ಲಲಿತ ಪ್ರಬಂಧ ಗಳ ಸಂಕಲನ ʼಹಚ್ಚೆ ದಿನ್'  ಪುಸ್ತಕ ಪರಿಚಯ  'ಜನ ಮಿತ್ರ' ಪತ್ರಿಕೆಯಲ್ಲಿ🌼




         ಅದ್ಭುತವಾಗಿ ಬರೆಯುವ ಪ್ರಬುದ್ಧ ಲೇಖಕಿ ಸುಮಾ ರಮೇಶ್ ರವರ ಲಲಿತ ಪ್ರಬಂಧ ಸಂಕಲನ ʼಹಚ್ಚೆ ದಿನ್ʼ ಮುಗುಳ್ನಗೆಯ ಟಾನಿಕ್‌ ಗಳಂತಹ 32 ಪ್ರಬಂಧಗಳನ್ನೊಳಗೊಂಡ ಮನಸೆಳೆಯುವ ಪುಸ್ತಕ. ಇದರ ಮುಖಪುಟವೇ ಹಚ್ಚಾಸುಂದರಿಯ ಮೋಹಕ ಭಂಗಿಯೊಂದಿಗೆ ಮನಸೂರೆಗೊಳ್ಳುವಂತಿದೆ.

      ನಾಡಿನ ವಿವಿಧ ಸುಪ್ರಸಿದ್ಧ ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದ್ದ ಸುಮಾರವರ ಲೇಖನಗಳನ್ನು ಆಗಾಗ ನಾನು ಫೇಸ್ಬುಕ್‌ ನಲ್ಲಿ ಓದುವಾಗ ಅವರು ಆಯ್ಕೆಮಾಡಿಕೊಳ್ಳುತ್ತಿದ್ದ ವಿಷಯ ಹಾಗೂ ಕೊಡುತ್ತಿದ್ದ ಶೀರ್ಷಿಕೆಗಳು ಬಹಳ ಆಸಕ್ತಿಕರವೆನಿಸುತ್ತಿದ್ದವು. ಈಗ ʼಹಚ್ಚೆ ದಿನ್ʼ ಕೈಸೇರಿದ ನಂತರ ಬಿಡಿಬಿಡಿಯಾಗಿ ಓದಿದ್ದ ಲೇಖನಗಳನ್ನು ಇಡಿಯಾಗಿ ಪುಸ್ತಕ ರೂಪದಲ್ಲಿ ಮತ್ತೊಮ್ಮೆ ಓದುವಾಗ ಒಂದು ವಿಶಿಷ್ಟ ಲಾಲಿತ್ಯಮಯ ಲೋಕವನ್ನೇ  ಪ್ರವೇಶಿಸಿದಂತಾಗಿ  ಅವರೇ ನನ್ನೆದುರು ಕುಳಿತು ತಮ್ಮ ಸತ್ವಯುತ ಮಾಹಿತಿಪೂರ್ಣ ಪ್ರಬಂಧಗಳನ್ನು ಸಂಭಾಷಿಸುವಂತಿದೆ. 

ಸುಮಾ ಅವರ ಈ ಪ್ರಬುದ್ಧ ಪ್ರಬಂಧಗಳ ಹಾಸ್ಯಾಸ್ವಾದನೆಗೆ ಪೂರಕ ಪೀಠಿಕೆಯಂತಿರುವ ಅತ್ಯುತ್ತಮವಾದ ಮೌಲ್ಯಯುತ ಮುನ್ನಡಿಯನ್ನು ರಾಮನಾಥ್ ಸರ್ ಅವರು ಬರೆದಿರುವುದು ಪುಸ್ತಕವನ್ನು ಓದಲೇಬೇಕೆಂದು ಪ್ರೇರೇಪಿಸುವಂತಿದೆ ಹಾಗೂ ಸುಂದರವಾದ ಚಿತ್ರವೊಂದಕ್ಕೆ ಹಾಕಿದ ಸುವರ್ಣದ ಚೌಕಟ್ಟಿನಂತಿದ್ದು ಪುಸ್ತಕದ ಘನತೆಯನ್ನು ಹೆಚ್ಚಿಸುವಂತಿದೆ. 

ಸುಮಾ ಅವರ ಲೇಖನಗಳ ವಿಶೇಷ ಆಕರ್ಷಣೆಯೆಂದರೆ ಅವರು ಇಡುವ ಶೀರ್ಷಿಕೆಗಳು ಹಾಗೂ ಕೊಡುವ ಉಪಮೆಗಳು.

ಶಾಯಿಯೊಂದಿಗಿನ ಶಾಯರಿ,  ʼಹಚ್ಚೆ ದಿನ್ʼ, ʼಡಸ್ಟ್ ಬಿನ್ ' ಎಂಬ ಕಸದ ಒಡಲು...., ʼಚಂಬೋ.... ಇವ ಚಂಬೋ..... !ʼ

ʼಟಿ ಜಂಕ್ಷನ್ ಸೈಟುʼ, , ʼಡಸ್ಟರ್‌ ಎಂಬ eರೇಸರ್ರುʼ, ಹಚ್ಚೇವು ನೊರೆ ನೊರೆಯ ಸೋಪ, …ಮುಂತಾದ ನಾಮಕರಣವೇ ಓದುಗರನ್ನು ತನ್ನತ್ತ  ಸೆಳೆಯುತ್ತದೆ. 

'ಉದರದ ಸ್ಥಿತಿಯು , ಟೀಮ್ ಕೋ ಆರ್ಡಿನೇಶನ್ ಇಲ್ಲದ  ಪ್ರಾಜೆಕ್ಟ್ ನಂತಾಗುವುದು.' 

ʼಹೆತ್ತವರ ಐ ಫೆನ್ಸಿಂಗ್‌ʼ

ʼ ಈ ಸೋಪಿನ ಗೀತೆಗಳು (ಈಸೋಪನ ಕಥೆಗಳಿಗಿಂತಲೂ)ʼ

' ಮೌತ್ ಟು ಮೌತ್ ರೆಸ್ಪಿರೇಶನ್ ಪಡೆದ ವ್ಯಕ್ತಿ ಸುಧಾರಿಸಿಕೊಂಡು ಮೇಲೇಳುವಂತೆ '

ʼ…ಆಡುಂಬೋಲ ಈಗ ಎಲ್ಲರ ತೋಡುಂಬೋಲ…ʼ

ಮುಂತಾದ ಹೋಲಿಕೆಗಳು ಸಂದರ್ಭೋಚಿತವಾಗಿದ್ದು ಅನಿಯಂತ್ರಿತವಾಗಿ ನಗೆಯುಕ್ಕಿಸುತ್ತವೆ.

ವಿಷಯವೊಂದನ್ನು ಆಯ್ಕೆಮಾಡಿಕೊಂಡ ನಂತರ ಅದನ್ನು ವಿವಿಧ ಆಯಾಮಗಳಲ್ಲಿ ಅಭ್ಯಸಿಸಿ, ಮಾಹಿತಿಗಳನ್ನು ಕ್ರೂಢೀಕರಿಸಿ ಹಾಸ್ಯ, ವ್ಯಂಗ್ಯ, ಚಾಟೋಕ್ತಿಗಳೊಡನೆ ಮಿಳಿತಗೊಳಿಸಿ ತಮ್ಮ ವಿಶಿಷ್ಟ ಸುಲಲಿತ ಶೈಲಿಯಲ್ಲಿ ಸಾಂದ್ರವಾಗಿ ಪ್ರಬಂಧೀಕರಿಸುವ ಅನನ್ಯವಾದ ಕಲೆ ಸುಮಾರವರಿಗೆ ಸಿದ್ಧಿಸಿದೆ. 

 

ಮಕ್ಕಳ ಕುತೂಹಲದ ಕೇಂದ್ರ ಬಿಂದುವಾಗಿದ್ದ ಫ್ಯಾನ್ ನಿಂದ ಪ್ರಾರಂಭಿಸಿ ಅದರ ವಿಕಾಸ, ಸರ್ವವ್ಯಾಪಿತ್ವದ ಬಗ್ಗೆ ಲಹರಿಯನ್ನು ಹರಿಸುತ್ತಲೇ .…ʼನಾವೂ ಪ್ರೌಢರಾಗಿದ್ದು ನಮ್ಮ ಫ್ಯಾನ್‌ ಗಳನ್ನು ಬೇರೆಡೆ ಹುಡುಕುವಲ್ಲಿ ವ್ಯಸ್ತರಾಗಿದ್ದೆವುʼ ಎನ್ನುವ ತಿರುವಿನೊಂದಿಗೆ  ಸೆಲೆಬ್ರಿಟಿಗಳ ಫ್ಯಾನ್ ಗಳತ್ತ ಹೊರಳಿ ಪರಿಸಮಾಪ್ತಿಗೊಳಿಸುವುದು ಸುಮಾರವರಿಗೆ ನೀರು ಕುಡಿದಷ್ಟೇ ಸಲೀಸು. 

ಹಾಸ್ಯದ ಪಕ್ವಾನ್ನವನ್ನು ಉಣಬಡಿಸುವ ಈ ಹೊತ್ತಿಗೆಯಲ್ಲಿ ನಗೆಯ ಹೊನಲನ್ನು ಚಿಮ್ಮಿಸುವ ವ್ಯಂಗ್ಯೋಕ್ತಿ, ಪಂಚ್‌ ಗಳ ಜೊತೆಗೇ ವೈಚಾರಿಕತೆಗೆ ತೆರೆದುಕೊಳ್ಳುವಂತೆ ಮಾಡುವ ಚಿಂತನಯೋಗ್ಯ ಉಕ್ತಿಗಳೂ ಇವೆ ಎನ್ನುವುದಕ್ಕೆ ಮಾದರಿ  ʼಇಡೀ ಭೂಮಂಡಲವೇ ಒಂದು ಡಸ್ಟ್ ಬಿನ್ ನಂತೆ ಒಡಲ ತುಂಬಾ ಕಸ ಹೊತ್ತು ನಿಂತು ಸ್ವಚ್ಛ್ ಭಾರತ್ ಅಭಿಯಾನ ಸ್ವಚ್ಛ್  ಭೂಮಂಡಲ್ ಅಭಿಯಾನವಾಗಬೇಕಾದ ತುರ್ತು ತಲೆದೋರಿದೆ.ʼ ಎನ್ನುವುದು.

ತಮ್ಮ ಪ್ರಬಂಧಗಳಲ್ಲಿ ಏನನ್ನು ಹೇಳಬೇಕೆಂದರೂ ಇತರ ಯಾರ ಬಗ್ಗೆಯೂ ಹೇಳದೆ ತನ್ನನ್ನೇ ತಾನು ನಗೆಯ ವಸ್ತುವಾಗಿಸಿಕೊಂಡು ಬರೆದಿರುವುದು ಇವರ ಲೇಖನಗಳ ಧನಾತ್ಮಕ ಅಂಶವಾಗಿದೆ. ಇದು ಒಂದು ಆರೋಗ್ಯಕರ ಬೆಳವಣಿಗೆ. ತಾನು ಅನುಭವಿಸಿರಬಹುದಾದ ನೋವು, ಅಪಮಾನ, ಸೋಲುಗಳನ್ನೂ ನಗೆಯ ವಸ್ತುವಾಗಿಸಬಲ್ಲ ಸಾಮರ್ಥ್ಯ ಸುಮಾರವರಿಗಿದೆ. ʼನೆಗಡಿಯ ಬಾನಗಡಿʼ, ʼನವಿಲು ತುಪ್ಪʼ, ʼನಿಲ್ಲಲ್ಲ…ನಿಲ್ಲಲ್ಲ… ಜಲಧಾರೆʼ…ಗಳಲ್ಲಿ ಈ ಅಂಶಗಳನ್ನು ಕಾಣಬಹುದು.

ʼಹಚ್ಚೆ‌ ದಿನ್ʼ, ಅವರೇ ತಿಳಿಸಿರುವಂತೆ ಬೆಚ್ಚನೆಯ ನಗುವಿನೊಂದಿಗೆ ಎಲ್ಲರೂ ಓದಿ ಆಸ್ವಾದಿಸಲು ಆನಂದಿಸಲು ಅತ್ಯಂತ ಯೋಗ್ಯವಾದ ಪುಸ್ತಕವಾಗಿದೆ. ಇಂಥಾ ಪ್ರಬುದ್ಧ ಪ್ರಬಂಧ ಸಂಕಲನವನ್ನು ಸಾಹಿತ್ಯಲೋಕಕ್ಕೆ ನೀಡಿದ ಸುಮಾ ಅವರನ್ನು ಅಭಿನಂದಿಸುತ್ತಾ… 

    ಸುಮಾ ಹೀಗೇ ಬರೆಯುತ್ತಾ ಎಲ್ಲೆಡೆ ತಮ್ಮ ಸಾಹಿತ್ಯ ಸೌರಭವನ್ನು ಪಸರಿಸಲಿ ಹಾಗೂ ಇನ್ನೂ ಹೆಚ್ಚಿನ ಸಾರ್ಥಕತೆಯ ಸಾಧನೆಗಳನ್ನು ಮಾಡುವಂತಾಗಲಿ ಎಂದು ಹಾರೈಸುತ್ತೇನೆ. 

  

~ಪ್ರಭಾಮಣಿನಾಗರಾಜ ದಿನ್‌ʼ  ಪುಸ್ತಕ ಪರಿಚಯ  'ಜನ ಮಿತ್ರ' ಪತ್ರಿಕೆಯಲ್ಲಿ🌼


         ಅದ್ಭುತವಾಗಿ ಬರೆಯುವ ಪ್ರಬುದ್ಧ ಲೇಖಕಿ ಸುಮಾ ರಮೇಶ್ ರವರ ಲಲಿತ ಪ್ರಬಂಧ ಸಂಕಲನ ʼಹಚ್ಚೆ ದಿನ್ʼ ಮುಗುಳ್ನಗೆಯ ಟಾನಿಕ್‌ ಗಳಂತಹ 32 ಪ್ರಬಂಧಗಳನ್ನೊಳಗೊಂಡ ಮನಸೆಳೆಯುವ ಪುಸ್ತಕ. ಇದರ ಮುಖಪುಟವೇ ಹಚ್ಚಾಸುಂದರಿಯ ಮೋಹಕ ಭಂಗಿಯೊಂದಿಗೆ ಮನಸೂರೆಗೊಳ್ಳುವಂತಿದೆ.

      ನಾಡಿನ ವಿವಿಧ ಸುಪ್ರಸಿದ್ಧ ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದ್ದ ಸುಮಾರವರ ಲೇಖನಗಳನ್ನು ಆಗಾಗ ನಾನು ಫೇಸ್ಬುಕ್‌ ನಲ್ಲಿ ಓದುವಾಗ ಅವರು ಆಯ್ಕೆಮಾಡಿಕೊಳ್ಳುತ್ತಿದ್ದ ವಿಷಯ ಹಾಗೂ ಕೊಡುತ್ತಿದ್ದ ಶೀರ್ಷಿಕೆಗಳು ಬಹಳ ಆಸಕ್ತಿಕರವೆನಿಸುತ್ತಿದ್ದವು. ಈಗ ʼಹಚ್ಚೆ ದಿನ್ʼ ಕೈಸೇರಿದ ನಂತರ ಬಿಡಿಬಿಡಿಯಾಗಿ ಓದಿದ್ದ ಲೇಖನಗಳನ್ನು ಇಡಿಯಾಗಿ ಪುಸ್ತಕ ರೂಪದಲ್ಲಿ ಮತ್ತೊಮ್ಮೆ ಓದುವಾಗ ಒಂದು ವಿಶಿಷ್ಟ ಲಾಲಿತ್ಯಮಯ ಲೋಕವನ್ನೇ  ಪ್ರವೇಶಿಸಿದಂತಾಗಿ  ಅವರೇ ನನ್ನೆದುರು ಕುಳಿತು ತಮ್ಮ ಸತ್ವಯುತ ಮಾಹಿತಿಪೂರ್ಣ ಪ್ರಬಂಧಗಳನ್ನು ಸಂಭಾಷಿಸುವಂತಿದೆ. 

ಸುಮಾ ಅವರ ಈ ಪ್ರಬುದ್ಧ ಪ್ರಬಂಧಗಳ ಹಾಸ್ಯಾಸ್ವಾದನೆಗೆ ಪೂರಕ ಪೀಠಿಕೆಯಂತಿರುವ ಅತ್ಯುತ್ತಮವಾದ ಮೌಲ್ಯಯುತ ಮುನ್ನಡಿಯನ್ನು ರಾಮನಾಥ್ ಸರ್ ಅವರು ಬರೆದಿರುವುದು ಪುಸ್ತಕವನ್ನು ಓದಲೇಬೇಕೆಂದು ಪ್ರೇರೇಪಿಸುವಂತಿದೆ ಹಾಗೂ ಸುಂದರವಾದ ಚಿತ್ರವೊಂದಕ್ಕೆ ಹಾಕಿದ ಸುವರ್ಣದ ಚೌಕಟ್ಟಿನಂತಿದ್ದು ಪುಸ್ತಕದ ಘನತೆಯನ್ನು ಹೆಚ್ಚಿಸುವಂತಿದೆ. 

ಸುಮಾ ಅವರ ಲೇಖನಗಳ ವಿಶೇಷ ಆಕರ್ಷಣೆಯೆಂದರೆ ಅವರು ಇಡುವ ಶೀರ್ಷಿಕೆಗಳು ಹಾಗೂ ಕೊಡುವ ಉಪಮೆಗಳು.

ಶಾಯಿಯೊಂದಿಗಿನ ಶಾಯರಿ,  ʼಹಚ್ಚೆ ದಿನ್ʼ, ʼಡಸ್ಟ್ ಬಿನ್ ' ಎಂಬ ಕಸದ ಒಡಲು...., ʼಚಂಬೋ.... ಇವ ಚಂಬೋ..... !ʼ

ʼಟಿ ಜಂಕ್ಷನ್ ಸೈಟುʼ, , ʼಡಸ್ಟರ್‌ ಎಂಬ eರೇಸರ್ರುʼ, ಹಚ್ಚೇವು ನೊರೆ ನೊರೆಯ ಸೋಪ, …ಮುಂತಾದ ನಾಮಕರಣವೇ ಓದುಗರನ್ನು ತನ್ನತ್ತ  ಸೆಳೆಯುತ್ತದೆ. 

'ಉದರದ ಸ್ಥಿತಿಯು , ಟೀಮ್ ಕೋ ಆರ್ಡಿನೇಶನ್ ಇಲ್ಲದ  ಪ್ರಾಜೆಕ್ಟ್ ನಂತಾಗುವುದು.' 

ʼಹೆತ್ತವರ ಐ ಫೆನ್ಸಿಂಗ್‌ʼ

ʼ ಈ ಸೋಪಿನ ಗೀತೆಗಳು (ಈಸೋಪನ ಕಥೆಗಳಿಗಿಂತಲೂ)ʼ

' ಮೌತ್ ಟು ಮೌತ್ ರೆಸ್ಪಿರೇಶನ್ ಪಡೆದ ವ್ಯಕ್ತಿ ಸುಧಾರಿಸಿಕೊಂಡು ಮೇಲೇಳುವಂತೆ '

ʼ…ಆಡುಂಬೋಲ ಈಗ ಎಲ್ಲರ ತೋಡುಂಬೋಲ…ʼ

ಮುಂತಾದ ಹೋಲಿಕೆಗಳು ಸಂದರ್ಭೋಚಿತವಾಗಿದ್ದು ಅನಿಯಂತ್ರಿತವಾಗಿ ನಗೆಯುಕ್ಕಿಸುತ್ತವೆ.

ವಿಷಯವೊಂದನ್ನು ಆಯ್ಕೆಮಾಡಿಕೊಂಡ ನಂತರ ಅದನ್ನು ವಿವಿಧ ಆಯಾಮಗಳಲ್ಲಿ ಅಭ್ಯಸಿಸಿ, ಮಾಹಿತಿಗಳನ್ನು ಕ್ರೂಢೀಕರಿಸಿ ಹಾಸ್ಯ, ವ್ಯಂಗ್ಯ, ಚಾಟೋಕ್ತಿಗಳೊಡನೆ ಮಿಳಿತಗೊಳಿಸಿ ತಮ್ಮ ವಿಶಿಷ್ಟ ಸುಲಲಿತ ಶೈಲಿಯಲ್ಲಿ ಸಾಂದ್ರವಾಗಿ ಪ್ರಬಂಧೀಕರಿಸುವ ಅನನ್ಯವಾದ ಕಲೆ ಸುಮಾರವರಿಗೆ ಸಿದ್ಧಿಸಿದೆ. 

 

ಮಕ್ಕಳ ಕುತೂಹಲದ ಕೇಂದ್ರ ಬಿಂದುವಾಗಿದ್ದ ಫ್ಯಾನ್ ನಿಂದ ಪ್ರಾರಂಭಿಸಿ ಅದರ ವಿಕಾಸ, ಸರ್ವವ್ಯಾಪಿತ್ವದ ಬಗ್ಗೆ ಲಹರಿಯನ್ನು ಹರಿಸುತ್ತಲೇ .…ʼನಾವೂ ಪ್ರೌಢರಾಗಿದ್ದು ನಮ್ಮ ಫ್ಯಾನ್‌ ಗಳನ್ನು ಬೇರೆಡೆ ಹುಡುಕುವಲ್ಲಿ ವ್ಯಸ್ತರಾಗಿದ್ದೆವುʼ ಎನ್ನುವ ತಿರುವಿನೊಂದಿಗೆ  ಸೆಲೆಬ್ರಿಟಿಗಳ ಫ್ಯಾನ್ ಗಳತ್ತ ಹೊರಳಿ ಪರಿಸಮಾಪ್ತಿಗೊಳಿಸುವುದು ಸುಮಾರವರಿಗೆ ನೀರು ಕುಡಿದಷ್ಟೇ ಸಲೀಸು. 

ಹಾಸ್ಯದ ಪಕ್ವಾನ್ನವನ್ನು ಉಣಬಡಿಸುವ ಈ ಹೊತ್ತಿಗೆಯಲ್ಲಿ ನಗೆಯ ಹೊನಲನ್ನು ಚಿಮ್ಮಿಸುವ ವ್ಯಂಗ್ಯೋಕ್ತಿ, ಪಂಚ್‌ ಗಳ ಜೊತೆಗೇ ವೈಚಾರಿಕತೆಗೆ ತೆರೆದುಕೊಳ್ಳುವಂತೆ ಮಾಡುವ ಚಿಂತನಯೋಗ್ಯ ಉಕ್ತಿಗಳೂ ಇವೆ ಎನ್ನುವುದಕ್ಕೆ ಮಾದರಿ  ʼಇಡೀ ಭೂಮಂಡಲವೇ ಒಂದು ಡಸ್ಟ್ ಬಿನ್ ನಂತೆ ಒಡಲ ತುಂಬಾ ಕಸ ಹೊತ್ತು ನಿಂತು ಸ್ವಚ್ಛ್ ಭಾರತ್ ಅಭಿಯಾನ ಸ್ವಚ್ಛ್  ಭೂಮಂಡಲ್ ಅಭಿಯಾನವಾಗಬೇಕಾದ ತುರ್ತು ತಲೆದೋರಿದೆ.ʼ ಎನ್ನುವುದು.

ತಮ್ಮ ಪ್ರಬಂಧಗಳಲ್ಲಿ ಏನನ್ನು ಹೇಳಬೇಕೆಂದರೂ ಇತರ ಯಾರ ಬಗ್ಗೆಯೂ ಹೇಳದೆ ತನ್ನನ್ನೇ ತಾನು ನಗೆಯ ವಸ್ತುವಾಗಿಸಿಕೊಂಡು ಬರೆದಿರುವುದು ಇವರ ಲೇಖನಗಳ ಧನಾತ್ಮಕ ಅಂಶವಾಗಿದೆ. ಇದು ಒಂದು ಆರೋಗ್ಯಕರ ಬೆಳವಣಿಗೆ. ತಾನು ಅನುಭವಿಸಿರಬಹುದಾದ ನೋವು, ಅಪಮಾನ, ಸೋಲುಗಳನ್ನೂ ನಗೆಯ ವಸ್ತುವಾಗಿಸಬಲ್ಲ ಸಾಮರ್ಥ್ಯ ಸುಮಾರವರಿಗಿದೆ. ʼನೆಗಡಿಯ ಬಾನಗಡಿʼ, ʼನವಿಲು ತುಪ್ಪʼ, ʼನಿಲ್ಲಲ್ಲ…ನಿಲ್ಲಲ್ಲ… ಜಲಧಾರೆʼ…ಗಳಲ್ಲಿ ಈ ಅಂಶಗಳನ್ನು ಕಾಣಬಹುದು.

ʼಹಚ್ಚೆ‌ ದಿನ್ʼ, ಅವರೇ ತಿಳಿಸಿರುವಂತೆ ಬೆಚ್ಚನೆಯ ನಗುವಿನೊಂದಿಗೆ ಎಲ್ಲರೂ ಓದಿ ಆಸ್ವಾದಿಸಲು ಆನಂದಿಸಲು ಅತ್ಯಂತ ಯೋಗ್ಯವಾದ ಪುಸ್ತಕವಾಗಿದೆ. ಇಂಥಾ ಪ್ರಬುದ್ಧ ಪ್ರಬಂಧ ಸಂಕಲನವನ್ನು ಸಾಹಿತ್ಯಲೋಕಕ್ಕೆ ನೀಡಿದ ಸುಮಾ ಅವರನ್ನು ಅಭಿನಂದಿಸುತ್ತಾ… 

    ಸುಮಾ ಹೀಗೇ ಬರೆಯುತ್ತಾ ಎಲ್ಲೆಡೆ ತಮ್ಮ ಸಾಹಿತ್ಯ ಸೌರಭವನ್ನು ಪಸರಿಸಲಿ ಹಾಗೂ ಇನ್ನೂ ಹೆಚ್ಚಿನ ಸಾರ್ಥಕತೆಯ ಸಾಧನೆಗಳನ್ನು ಮಾಡುವಂತಾಗಲಿ ಎಂದು ಹಾರೈಸುತ್ತೇನೆ. 

  

~ಪ್ರಭಾಮಣಿನಾಗರಾಜ

Tuesday, February 6, 2024

ಲಲಿತ ಪ್ರಬಂಧ - 'ಸೀನಿನ sceneಗಳು'

  🌺ಎಲ್ಲರಿಗೂ ಬೆಳಗಿನ ವಂದನೆಗಳು🙏🌹

       ಈ ವಾರದ ( ಫೆಬ್ರವರಿ8,2024) 'ಸುಧಾ' ಪತ್ರಿಕೆಯ 'ಮಂದಹಾಸ'ದಲ್ಲಿ  ಪ್ರಕಟವಾಗಿರುವ ನನ್ನ ಲಲಿತ ಪ್ರಬಂಧ - 'ಸೀನಿನ sceneಗಳು'


ನಿಮ್ಮ ಪ್ರೀತಿಯ ಓದಿಗೆ😍


                  ಸೀನಿನ sceneಗಳು 

ಸೀನುವುದು ಅಪರೂಪವೇನಲ್ಲ. ಯಾವುದಾದ್ರೂ ಧೂಳಿನ ಪ್ರದೇಶಕ್ಕೆ ಹೋದಾಗ ಅಥವಾ ಶೀತಕಾಲದಲ್ಲಿ, ಮಳೆಗಾಲದಲ್ಲಿ... ಕೆಲವೊಮ್ಮೆ ಕಾರಣವೇ ಇಲ್ಲದಂತೆ  ಸೀನುಗಳು ಒಂದಾದ ಮೇಲೆ ಒಂದರಂತೆ  ಬರುತ್ತಲೇ ಇರುತ್ತವೆ.  ಸುತ್ತಿನ ವಾತಾವರಣವನ್ನು ಮತ್ತಷ್ಟು ಹದಗೆಡಿಸಿ ಹಾಳುಮಾಡಿ ನಮ್ಮದೆಂದು ಉಳಿಸಿಕೊಂಡಿರುವ ಅಲ್ಪಸ್ವಲ್ಪ ಮರ್ಯಾದೆಯನ್ನೂ ನುಂಗಿ ನೀರು ಕುಡಿದುಬಿಡುತ್ತದೆ.

ಈ ಸೀನಿಗೆ ಕೆಮ್ಮಿಗಿರುವಷ್ಟು ಕನಿಷ್ಠ ಗೌರವವೂ ಇಲ್ಲ. ಕೆಮ್ಮುತ್ತ ಇರುವವರಿಗೆ ಕೆಲವು ಅಲೋಪತಿ, ಆಯುರ್ವೇದಿಕ್, ಯುನಾನಿ... ಔಷದೊಪಚರಗಳನ್ನಾದರೂ ಸಲಹೆ ನೀಡುತ್ತಾರೆ. ಕಡೇಪಕ್ಷ  ಮನೆಮದ್ದುಗಳನ್ನಾದರೂ ಸಜಸ್ಟ್ ಮಾಡಿ ಸಹಸ್ಪಂದಿಸುತ್ತಾರೆ. ಆದರೆ ಯಾವುದೇ ನಿರ್ದಿಷ್ಟ ಔಷದೋಪಚಾರವನ್ನೂ ಬಯಸದ ಈ ಪರಮ ಪಾಪಿಯಾದ ಸೀನನ್ನು 'ಆ...ಕ್ಷಿ'ಸಲು ಪ್ರಾರಂಭಿಸಿದಾಕ್ಷಣವೇ ಸುತ್ತಿನವರು ತಾವೇ ಅತ್ತಿತ್ತ ಸರಿದು ಹೋಗ್ತಾರೆ ಅಥವಾ ಮುಖ ಸಿಂಡರಿಸುತ್ತಾ ನಿರ್ದಾಕ್ಷಿಣ್ಯವಾಗಿ ನಮ್ಮನ್ನೇ ಅಲ್ಲಿಂದ ಉಚ್ಛಾಟಿಸುತ್ತಾರೆ. ಕೆಮ್ಮನ್ನಾದರೂ ಮುಂಜಾಗರೂಕತೆಯಿಂದ ಮುಖಕ್ಕೆ ವಸ್ತ್ರವನ್ನು ಮುಚ್ಚಿಕೊಂಡು  ನಾಗರಿಕವಾಗಿ ಕೆಮ್ಮಬಹುದು ಆದರೆ ಅನಿರೀಕ್ಷಿತವಾಗಿ ಧಾಳಿಯಿಡುವ ಈ ಸೀನು ಇದ್ದಕ್ಕಿದ್ದಂತೆಯೇ ಅಬ್ಬರಿಸಿ ವಾತಾವರಣವನ್ನೇ ತಲ್ಲಣಿಸಿ ಸುತ್ತೆಲ್ಲಾ   ಲಾಲಾಹನಿಗಳನ್ನು ಸ್ಪ್ರಿಂಕಲ್ ಮಾಡಿ ಕಲುಷಿತಗೊಳಿಸಿ ಬಿಡುತ್ತದೆ.  

        ಈ ಸೀನಿನ ವಿವಿಧ  ನಾದ ಮಾದರಿಗಳಂತೂ ಕೇಳಲು ವಿಚಿತ್ರವಾಗಿರುತ್ತವೆ. ನಮ್ಮ ಸೋದರ ಮಾವ  ತಾರಕ ಸ್ಥಾಯಿಯಲ್ಲಿ ಸೀನಿದರೆ ಮನೆಯ ಹಂಚುಗಳೆಲ್ಲಾ ಹಾರಿಹೋಗುವಂತೆ  ಮನೆಯೇ ಅದುರುತ್ತಿತ್ತು. ಆಗೇನಾದರೂ ನಮ್ಮ ಕಪ್ಪಿ-ಕೆಂಪಿ ಬೆಕ್ಕಿನ ಮರಿಗಳು ಹತ್ತಿರದ ಟೇಬಲ್ ಮೇಲೆ ಆಟವಾಡುತ್ತಿದ್ದರೆ ಹಠಾತ್ ಶಬ್ಧಸ್ಪೋಟಕ್ಕೆ ಅಂಜಿ  ಕೆಳಗೆ ಬಿದ್ದು ಉರುಳಾಡಿ ಎದ್ದು ಓಡಿಹೋಗುತ್ತಿದ್ದವು. 

ಒಮ್ಮೆ ಮೊದಲಬಾರಿಗೆ  ಮನೆಗೆ ಬಂದಿದ್ದ  ನಮ್ಮ ಹೊಸಪರಿಚಯಸ್ಥರ ಮಗು ಮಾವನ ಸೀನಿನ ಶಾಕ್ ನಿಂದ ಬೆಚ್ಚಿಬಿದ್ದು ಅಳಲು ಪ್ರಾರಂಭಿಸಿದ್ದು ಯಾರು ಹೇಗೇ ಸಮಾಧಾನಿಸಿದರೂ ಅಳು ನಿಲ್ಲಿಸಲೇ ಇಲ್ಲ. ಏನು ಮಾಡುವುದೆಂದು ತೋಚದೇ ಎಲ್ಲರೂ ಕಂಗೆಟ್ಟಿದ್ದಾಗ, ಅದೆಲ್ಲಿತ್ತೋ ಆ ಸೀನು, ಮಾವ ಇದ್ದಕ್ಕಿದ್ದಂತೆಯೇ ಬೋಬ್ಬಿರಿಯುವಂತೆ ಮತ್ತೊಮ್ಮೆ ಸೀನಿಬಿಟ್ಟರು! ಮನೆಮಂದಿಯೆಲ್ಲಾ ಗಡಬಡಿಸಿಹೋದ ಈ ಆರ್ಭಟಕ್ಕೆ ಮಗು ಸ್ತಬ್ಧವಾಯಿತು. ಮಗುವಿಗೇನಾಗುತ್ತೋ ಎಂದು ಎಲ್ಲಾ ನೋಡುತ್ತಿದ್ದಂತೆಯೇ ಏನೋ ಚೋದ್ಯವನ್ನು ಕಂಡಂತೆ ಮಗು ಕಿಲಕಿಲನೆ ನಗಲಾರಂಭಿಸಿಬಿಟ್ಟಿತು. ಈ ಅಯೋಮಯ ಸ್ಥಿತಿಯಿಂದ ಗಾಬರಿಗೊಂಡ ಅವರು ದಡಬಡಾಯಿಸಿ ಎದ್ದು ಮಗುವನ್ನು ಎತ್ತಿಕೊಂಡು ಹೊರಟೇಬಿಟ್ಟರು!

ನಮ್ಮ ಚಿಕ್ಕತ್ತೆಗೆ  ಸೀನು ಬಂದರೆ ನಿಲ್ಲುತ್ತಲೇ ಇರಲಿಲ್ಲ.  ಅವರ ಮಕ್ಕಳಂತೂ ತಾಯಿ ಸೀನಲು  ಪ್ರಾರಂಭಿಸಿದಾಕ್ಷಣವೇ ಸುತ್ತಲೂ ಘೇರಾಯಿಸಿ ಒಂದು, ಎರಡು, ಮೂರು, ನಾಲ್ಕು,... ಎಂದು ಒಕ್ಕೊರಲಿನಲ್ಲಿ ಎಣಿಸಿದ್ದೂ ಎಣಿಸಿದ್ದೆ!  ಕನಿಷ್ಠ 20 ಸೀನನ್ನಾದರೂ ಅವರು ಒಮ್ಮೆಗೇ ಸೀನುತ್ತಿದ್ದರು!  ಈ  ಮಕ್ಕಳು ಎಣಿಸೋ ಲೆಕ್ಕ ಕಲಿತಿದ್ದು ಅವರಮ್ಮ ಸೀನೋದ್ರಿಂದಲೇ ಎಂದು ಎಲ್ಲರೂ  ತಮಾಷೆ ಮಾಡುತ್ತಿದ್ದರು.  ನಮ್ಮ  ತಾತ ಸೀನಿನ ಶಕುನವನ್ನು ಬಹಳವಾಗಿ ನಂಬುತ್ತಿದ್ದರು. ಯಾವುದಾದರೂ ಕೆಲಸಕ್ಕೆ ಹೊರಟಾಗ ನಮ್ಮ ಮನೆಯ ಕರು ಸೀನಿದರೆ ಆ ಕೆಲಸ ಆಗೇತೀರುತ್ತದೆ ಎನ್ನುವುದು ಅವರ ಅಚಲ ನಂಬಿಕೆ. ಒಮ್ಮೆ ಹೀಗೇ ಯಾವುದೋ ಪ್ರಮುಖ ಕಾರ್ಯಕ್ಕೆ ಅವರು ಹೊರಟು ನಿಂತಾಗ ನಾನು ತಟ್ಟನೆ 'ಆ....ಕ್ಷಿ' ಎಂದುಬಿಟ್ಟೆ. 'ಅಯ್ಯೋ ಒಂಟಿ ಸೀನು' ಎಂದುಕೊಂಡು ಅವರು ಕುಳಿತೇಬಿಟ್ಟರು. ಅಕ್ಕ ನನಗೆ 'ಇನ್ನೊಂದು ಸಾರಿ ಸೀನಿಬಿಡೆ, ತಾತ ಬಯ್ತಾರೆ.' ಎಂದು ಒತ್ತಾಯಿಸಲಾರಂಭಿಸಿದಳು. ಹುಸಿಕೆಮ್ಮನ್ನಾದರೂ ಕೆಮ್ಮಬಹುದು. ಆದರೆ ಹುಸಿ ಸೀನು ಸಾಧ್ಯವೆ? ಕರು ಸೀನಿದರೆ ಖುಷಿಪಡೋ ತಾತ ನಾನು ಸೀನಿದರೆ ಏಕೆ ಅಪಶಕುನ ಅಂತಾರೆ ಎನ್ನುವುದೇ ಸಮಸ್ಯೆಯಾಗಿತ್ತು. ಮನೆಯಲ್ಲಿ ಏನಾದರೂ ಗಹನವಾದ ಮಾತುಕತೆ ನಡೆಯುತ್ತಿದ್ದಾಗ ಅಮ್ಮ ಅಪ್ಪಿತಪ್ಪಿಯೂ ನನ್ನನ್ನು ಹತ್ತಿರದಲ್ಲಿ ಕೂರಲು ಬಿಡುತ್ತಿರಲಿಲ್ಲ! ಈ ಕಳಂಕದಿಂದ ಪಾರಾಗಲು ನಾನು ಎಷ್ಟೊಬಾರಿ ಬರುವ ಸೀನನ್ನು ತಡೆಯಲು ಪ್ರಯತ್ನಿಸಿ ಅದು ಒಳಗೂ ಉಳಿಯದೆ ಹೊರಗೂ ಬರದೇ ತ್ರಿಶಂಕು ಸ್ಥಿತಿಯಾಗಿ 'ಹ್ಹ ಹ್ಹ ಹ್ಹ...'ಎನ್ನುತ್ತಾ ಪಡುತ್ತಿದ್ದ ಸಂಕಟ ಅಜ್ಜಿ ಹೇಳುವಂತೆ ನಮ್ಮ ಶತೃವಿಗೂ ಬೇಡ!

      ನಾವು ಚಿಕ್ಕವರಿದ್ದಾಗ ಸೀನಿದರೆ ಮೊದಲನೆಯದಕ್ಕೆ ಶತಾಯಸ್, ಎರಡನೆಯದಕ್ಕೆ ಧೀರ್ಘಾಯಸ್ ಎನ್ನುತ್ತಿದ್ದರು. ಇಂಗ್ಲೀಷ್  ಮಾತನಾಡುವ ರಾಷ್ಟ್ರಗಳಲ್ಲಿ , ಸಾಮಾನ್ಯವಾಗಿ ಯಾರಾದರು ಸೀನಿದಾಗ ಅವರಿಗೆ 'ಬ್ಲೆಸ್ ಯು' ಎನ್ನುತ್ತಾರಂತೆ. ನಮ್ಮಂತೆಯೇ ವಿದೇಶಗಳಲ್ಲಿಯೂ ಸೀನಿನ ಬಗ್ಗೆ ವಿವಿಧ ನಂಬಿಕೆಗಳಿವೆ. ಪ್ರಾಚೀನ ಗ್ರೀಸ್ ನಲ್ಲಿ, ಸೀನುಗಳನ್ನು, ದೇವತೆಗಳ ಭವಿಷ್ಯ ಸೂಚಕ ಸಂಕೇತಗಳು ಎಂದು ನಂಬುತ್ತಿದ್ದರಂತೆ. ಪೂರ್ವ ಏಷ್ಯಾದ ಕೆಲವೊಂದು ಭಾಗಗಳಲ್ಲಿ ಯಾವುದೇ ಕಾರಣವಿಲ್ಲದೆ ಸೀನು ಬಂದರೆ, ಸಾಮಾನ್ಯವಾಗಿ ಆ ಕ್ಷಣದಲ್ಲಿ ಯಾರೋ ಸೀನಿದವರ ಬಗ್ಗೆ ಮಾತನಾಡ್ತಿದಾರೆ ಅಂದುಕೊಳ್ತಾರೆ. ಒಂಟಿಸೀನು ಬಂದರೆ  ಸೀನುವವನ ಬಗ್ಗೆ ಒಳ್ಳೆಯದು ಹೇಳಿದ್ದಾರೆಂದು, ಒಟ್ಟಿಗೆ ಜೋಡಿಸೀನು ಬಂದರೆ  ಕೆಟ್ಟ ಮಾತನಾಡಿದ್ದಾರೆಂದೂ, ಸಾಲಾಗಿ ಮೂರು ಸೀನುಬಂದರೆ ಯಾರಾದರು ಅವರನ್ನು ಪ್ರೀತಿಸುತ್ತಿದ್ದಾರೆಂದು ತಿಳಿಯುತ್ತಾರೆ. ಎಲ್ಲಿಂದೆಲ್ಲಿಗೆ ಹೋದರೂ ಒಂದಲ್ಲಾ ಒಂದು ಕೊನೆ ಮೊದಲಿಲ್ಲದ ನಂಬಿಕೆಗಳು! ಹೀಗೆ ನಮ್ಮ ಈ ಸೀನು ಪ್ರಪಂಚದಾದ್ಯಂತ  ಮೌಢ್ಯವ್ಯಾಪಿಯಾಗಿದೆ.   

ಸೀನಿನ ವೇಗ 35ರಿಂದ40 mphನ ಸಮೀಪದಲ್ಲಿರುತ್ತದೆ ಎಂದು ವೈಜ್ಞಾನಿಕವಾಗಿ ಅಂದಾಜು ಮಾಡಿದಾರೆ. ಈ ವೇಗದಲ್ಲಿ ಸೀನು 15 ರಿಂದ 20 ಅಡಿಗಳವರೆಗೆ ಸಣ್ಣ ಹನಿಗಳನ್ನು ಸುತ್ತೆಲ್ಲಾ ಎರಚುತ್ತದಂತೆ. ಅದಕ್ಕೇ ರೋಗಗಳನ್ನು ಹರಡುವುದರಲ್ಲಿ ಸೀನಿಗೇ ಅಗ್ರಸ್ಥಾನ. ಕೆಲವೊಮ್ಮೆ ಸೀನಿನ ವೇಗ 100mph ಕೂಡ ಆಗಿರುತ್ತಂತೆ. ಬಹುಶಃ ನಮ್ಮ ಸೋದರಮಾವನ ವೇಗ ಇದೇ ಆಗಿತ್ತೇನೋ! 

                               ~ ಪ್ರಭಾಮಣಿ ನಾಗರಾಜ