ಇಲ್ಲಿ ಪೇಸ್ಟ್ ಆಗುತ್ತಿಲ್ಲ.
ಹಿಂದಿನ ವಾರದ ( ಏಪ್ರಿಲ್10, 2025) 'ಸುಧಾ' ಪತ್ರಿಕೆಯ 'ಭಿನ್ನನೋಟ'ದಲ್ಲಿ ಪ್ರಕಟವಾಗಿರುವ ನನ್ನ ಲಲಿತ ಪ್ರಬಂಧ - 'ಓಟ ಓಟ ಹಿಂದೋಟ'
'ಸುಧಾ' ಪತ್ರಿಕಾ ಬಳಗಕ್ಕೆ ಧನ್ಯವಾದಗಳು🙏
🏃ಓಟ ಓಟ ಹಿಂದೋಟ🏃
ಓಟ ಎಂದರೆ ಮುಮ್ಮುಖ ವೇಗದ ಚಲನೆ ಎನ್ನುವುದು ಸರ್ವವೇದ್ಯ ಆದರೆ ಇದೇನಿದು ಹಿಂದೋಟ? ಹಿಂದಕ್ಕೆ ಓಡಲು ಸಾಧ್ಯವೇ? ಎಂದು ಅಚ್ಚರಿ ಪಡಲೂಬಹುದು. ನಮ್ಮ ದೇಹಕ್ಕೆ ಮುಂದಕ್ಕೆ ಮಾತ್ರ ಓಡಲು ಸಾಧ್ಯ ನಿಜ. (ಗಿನ್ನೆಸ್ ದಾಖಲೆ ಮಾಡಲು ಯಾರಾದರೂ ಹಿಮ್ಮುಖವಾಗಿ ಓಡಿರಲೂ ಬಹುದು!) ಆದರೆ ಮನಸ್ಸು? ಅದು ಮುಂದೆ ಹಿಂದೆ ಮೇಲೆ ಕೆಳಗೆ... ದಶದಿಕ್ಕುಗಳ ಯಾವ ನೇರದಲ್ಲಾದರೂ ಓಡೀತು! ಸಧ್ಯದಲ್ಲಿ ಸದಾ ಹಿಂದಕ್ಕೇ ಒಡಲಿಚ್ಚಿಸುವ ಈ ಮನದ ಬಗ್ಗೆ ನೋಡೋಣ ಎಂದೇನೂ ನಾನು ಹೇಳಲು ಹೊರಟಿಲ್ಲ. ಈಗೀಗ ವರ್ತಮಾನದ ಕಾರ್ಪಣ್ಯಗಳೇ ನಮ್ಮನ್ನು ಕಟ್ಟಿಹಾಕುತ್ತಿರುವಾಗ ಹಿಂದಿನದನ್ನೆಲ್ಲಾ ನೆನೆಸಿಕೊಂಡು ಮೆಲುಕು ಹಾಕುವ ವ್ಯವಧಾನವಾದರೂ ಎಲ್ಲಿದೆ? ಆ ಜವಾಬ್ದಾರಿಯನ್ನು ನಮ್ಮೆಲ್ಲರ ಪರಮ ಪ್ರಿಯಮಿತ್ರನಾದ ಫೇಸ್ಬುಕ್ ವಹಿಸಿಕೊಂಡುಬಿಟ್ಟಿದೆ!
ಪ್ರತಿದಿನ ರಾತ್ರಿ 12ಗಂಟೆಗೆ ನಾನು ಮಾಡುವ ಮೊದಲ ಕೆಲಸವೆಂದರೆ ಫೇಸ್ಬುಕ್ನಲ್ಲಿ ಮೆಮೋರೀಸನ್ನು ಸರ್ಚ್ ಮಾಡುವುದು. ಗತಿಸಿದ ಕಾಲದಲ್ಲಿ ಹಿಂಪಯಣ ಮಾಡಿ ಹಿಂದಿನ ವರ್ಷಗಳಲ್ಲಿ ಇದೇ ದಿನದಲ್ಲಿ ನಾವು ಮಾಡಿದ್ದ ಅಮೋಘ ಸಾಧನೆಯನ್ನು ಎತ್ತಿ(ಮತ್ತೆ) ತೋರಿಸಿ ಭೇಷ್ ಎನಿಸಿಕೊಳ್ಳುವುದರಲ್ಲಿ ಫೇಸ್ಬುಕ್ ಗೆ ಎಲ್ಲಿಲ್ಲದ ಖುಷಿ! ಅದನ್ನು ಮತ್ತೆಮತ್ತೆ ಹಂಚಿಕೊಂಡು ಬರುವ ಲೈಕ್, ಕಾಮೆಂಟ್ಗಳನ್ನು ಎಣಿಸುವುದರಲ್ಲಿ ನಮಗೆ ಖುಷಿ!
ನನ್ನ ಫೇಸ್ಬುಕ್ ಅಂತೂ ʼ1-2...10ವರ್ಷಗಳ ಹಿಂದೆ...ʼ ಮುಂತಾದ ನೆನಪುಗಳ ಮೆರವಣಿಗೆಗಳಿಂದಲೇ ತುಂಬಿಹೋಗಿದೆ. ಇದೇನಿದು ಇವರ ಬದುಕು ಮುನ್ನಡೆಯುತ್ತಲೇ ಇಲ್ಲವೇ? ಯಾವಾಗ ಇವರು ದನ-ಎಮ್ಮೆಗಳಂಥಾ ಮೆಲುಕು ಹಾಕುವ ಪ್ರಾಣಿಗಳ ಗುಂಪಿಗೆ ಸೇರಿದರು? ಎಂದು ಆತ್ಮೀಯರು ಅಲವತ್ತುಕೊಳ್ಳಬಹುದು. ಆದರೂ ಗತ ಮೆಲುಕಿನಲ್ಲಿರುವ ಸುಖ ಗಬಗಬನೆ ತಿಂದು ಮುಗಿಸುವ ವಾಸ್ತವದಲ್ಲಿ ಹೇಗೆ ತಾನೇ ಇರಲು ಸಾಧ್ಯ?
ನಾವು ಚಿಕ್ಕವರಿದ್ದಾಗ ಸೈಕಲ್ ಚಕ್ರದ ಹೊರಫ್ರೇಮನ್ನು ಓಡಿಸುತ್ತಾ ಅದರ ಹಿಂದೆ ಓಡುವುದೇ ಒಂದು ಆಟವಾಗಿತ್ತು. ಊರ ಮಕ್ಕಳೆಲ್ಲಾ ಸಮಯದ ಪರಿವೆಯಿಲ್ಲದೇ ಯಾವಾಗೆಂದರೆ ಆಗ, ರಜೆ ಇದ್ದರಂತೂ ಮದ್ಯಾಹ್ನದ ರಣರಣ ಬಿಸಿಲಿನಲ್ಲಿಯೂ ಚಕ್ರ ಓಡಿಸುತ್ತಿದ್ದರು. ನನ್ನ ಜೊತೆ ಮಕ್ಕಳಲ್ಲಿ ಒಬ್ಬನಾದ ಭೀಮನೂ ಚಕ್ರ ಓಡಿಸುತ್ತಾ ನಮ್ಮ ಮನೆ ಹತ್ರ ಬಂದಾಗ ಸದಾ ಜಗಲಿ ಮೇಲೆ ಕೂತಿರ್ತಿದ್ದ ಅಜ್ಜಿ, 'ಹೇಗೆ ಓದ್ತಿದೀಯೋ ಭೀಮಾ?' ಎಂದು ಲೋಕಾಭಿರಾಮವಾಗಿ ಕೇಳಿದರೆ, 'ನಿಮ್ಮೊಮ್ಮಗಳು ಮುಂದುಮುಂದಕ್ಕೆ ಹೋಗ್ತಿದಾರೆ ಅಜ್ಜಿ, ನಾನು ಹಿಂದುಹಿಂದಕ್ಕೆ ಹೋಗ್ತಿದೀನಿ,' ಅಂತಿದ್ದ! ಒಂದೇ ಕ್ಲಾಸಲ್ಲಿ ಫೇಲಾಗಿ ಕೂರೋದು ಅಂದ್ರೆ ಅವನ ಅರ್ಥದಲ್ಲಿ ಹಿಂದಕ್ಕೆ ಹೋಗೋದು ಅಂತ! ಹಾಗೆ ಹೇಳ್ತಿದ್ದೋನು ತನ್ನ ಅತ್ಯಂತ ಪ್ರಿಯ ಸಂಸಾರವನ್ನು ನಡುನೀರಿನಲ್ಲೇ ಕೈಬಿಟ್ಟು ಎಲ್ಲರಿಗಿಂತಲೂ ಮುಂದೆಯೇ ಹೋಗಿಬಿಟ್ಟ!
ಹಿಂದೋಟ ಎನ್ನುವುದು ಒಂದು ರೀತಿ ಹಿಂಬಡ್ತಿ ಎನ್ನುವಂತೆಯೇ ಸೌಂಡ್ ಆಗುತ್ತೆ. ಲಂಚ ಪಡೆದು ಸಿಕ್ಕಿಹಾಕಿಕೊಂಡ ಅಧಿಕಾರಿಗೆ ಹಿಂಬಡ್ತಿ ಶಿಕ್ಷೆ ನೀಡಿದ್ದನ್ನು ಪತ್ರಿಕೆಗಳಲ್ಲಿ ಆಗೀಗ ನೋಡುತ್ತಿರುತ್ತೇವೆ. ಬಡ್ತಿ ಎಂದರೆ ಪದೋನ್ನತಿ, ಮೇಲೇರಿಕೆ ಎನ್ನುವ ಅರ್ಥವಿದೆ. ಹಿಂಬಡ್ತಿ ಎಂದಾಗ ತಮ್ಮ ಸ್ಥಾನದಿಂದ ಕೆಳಗಿಳಿದರು ಎನ್ನುವುದು ಅಂಡರ್ಸ್ಟುಡ್!
ಹಿಂದೋಡುವ ಮನಸ್ಸು ಎಷ್ಟೊಂದು ಪ್ರಬಲವಾಗಿದೆಯೆಂದರೆ ಯಾರೇ ಆದರೂ ತಮ್ಮ ಬಾಲ್ಯ ಎಷ್ಟೊಂದು ಸುಂದರವಾಗಿತ್ತು ಎಂದೇ ಹಲುಬುತ್ತಾರೆ. ಕೈಗೆಟುಕದ ದ್ರಾಕ್ಷಿ ಹುಳಿ ಎನ್ನುವುದು ಸಾಮಾನ್ಯ ಉಕ್ತಿ. ಆದರೆ ಮರಳಿ ಪಡೆಯಲಾಗದ ಬಾಲ್ಯ ಮಧುರಾತಿ ಮಧುರ! ಹರಿವ ನದಿಗೆ ಅಣೆಕಟ್ಟನ್ನು ಅಡ್ಡಗಟ್ಟಿದಾಗ ಹಿನ್ನೀರು ಒತ್ತಡದಿಂದ ಹಿಮ್ಮುಖವಾಗಿ ನುಗ್ಗುವಂತೆ ಬದುಕು ಮುಂದಿನ ದಾರಿ ಕಾಣದೇ ತಟಸ್ಥವಾದಾಗ ಹಿಂದೋಡುವ ಮನಸ್ಸು ಹಿಂಡುಹಿಂಡು ನೆನಪುಗಳನ್ನು ಬಾಚಿಕೊಂಡು ತನ್ನದಾಗಿಸಿಕೊಳ್ಳುವ ತವಕದಲ್ಲಿ ತಬ್ಬಿ ಅವಚಿಕೊಳ್ಳುತ್ತಿರುತ್ತದೆ. ಆದರೆ ಹಿಂದೆಹಿಂದೆ ಸರಿದಂತೆ ಎಲ್ಲವೂ ಮಾಸಲುಮಾಸಲು! ನನ್ನಂಥಾ ಹಿರಿಜೀವಗಳು ಮಧ್ಯವಯ, ಯೌವನ, ಬಾಲ್ಯ ಮುಂತಾಗಿ ನೆನಪುಗಳನ್ನು ಆಯ್ದು ಹೆಕ್ಕಿಕೊಳ್ಳುತ್ತಾ ಹಿಂದೆಹಿಂದೆ ಸಾಗಬಹುದು. ಅಮ್ಮ ಅಜ್ಜಿ ಆಗಾಗ ಹೇಳಿಹೇಳಿ ಗಟ್ಟಿಗೊಳಿಸಿದ ಶೈಶವವನ್ನೂ ಕಣ್ಮುಂದೆ ಮೂರ್ತಿಕರಿಸಿಕೊಳ್ಳಲೂ ಬಹುದು. ಆದರೆ ಅದರ ಹಿಂದಿನ ಮಾತೃಗರ್ಭದೊಳಗಿನದು? ಅದಕ್ಕೂ ಹಿಂದೆ? ಇವೆಲ್ಲಾ ನಮ್ಮ ಮನೋಮಿತಿಗೂ ನಿಲುಕದ ನಿಗೂಢ ಸಂದರ್ಭಗಳು!
ಸದಾ ಹಿಂದೋಡಲೇ ಹವಣಿಸುತ್ತಿರುವ ಮನವನ್ನು ತಡೆಹಿಡಿಯದೆ ಒಮ್ಮೆ ನೆನಪೆಂಬ ತಾಂಬೂಲವನ್ನು ಜಗಿಯಲಾರಂಭಿಸಿದೆವೆಂದರೆ…
'ಜಗಿಜಗಿದು
ಸ್ವಾದರಹಿತವಾಗಿದ್ದರೂ
ಈ ತಾಂಬೂಲವ
ಉಗಿಯಲಾಗದ
ವಿಚಿತ್ರ ಮೋಹ'ಎನ್ನುವಂತೆ ಮೋಹಪಾಶಕ್ಕೆ ಬಂಧಿಯಾಗಿ ಆ ನೆನಪಿನ ಸುಳಿಯೊಳಗೇ ಸಿಲುಕಿಬಿಡುತ್ತೇವೆ!
ಹಾಗೆ ನೋಡಿದರೆ ಮನೆಯಲ್ಲಿರುವ ಅಜ್ಜಿಯರಿಂದಲೇ ಹಿಂದಿನ ಪೀಳಿಗೆಗಳ ರೋಚಕ ಕಥೆಗಳು ವಂಶಪಾರಂಪರ್ಯವಾಗಿ ಹರಿದು ಸಾಗುವುದು ಎನಿಸುತ್ತದೆ. ಈಗೀಗ ಟಿವಿ, ಮೊಬೈಲ್ ...ಗಳ ಸಾಂಗತ್ಯದಲ್ಲಿ ಹೇಳಲೂ ಕೇಳಲೂ ಸಮಯವೇ ಇಲ್ಲದಂತಾಗಿಬಿಟ್ಟಿದೆ. ನಾವು ಚಿಕ್ಕವರಿದ್ದಾಗ ನಮ್ಮ ಮುತ್ತಜ್ಜಿ ಸದಾ ಕಾಲ ತಮ್ಮ ಹಿಂದಿನ ತಲೆಮಾರಿನವರ ಬಗ್ಗೆ ಹೇಳುತ್ತಲೇ ಇರುತ್ತಿದ್ದರು. ಅವರ ಮುತ್ತಜ್ಜಿಗೆ ಮೂಗು ಚುಚ್ಚಿದ್ದು (ಆಗ ಏಳೆಂಟು ವರ್ಷಕ್ಕೆಲ್ಲಾ ಮದುವೆ ಮಾಡ್ತಿದ್ದರಲ್ಲ. ಅದಕ್ಕೂ ಮೊದಲೇ ಮೂಗು ಬಲಿತರೆ ಚುಚ್ಚಕ್ಕಾಗಲ್ಲ ಅಂತ ಹೆದರಿ ಓಡಿ ಹೋಗ್ತಿದ್ದ ಮಗೂನ ಬೆಲ್ಲದ ಆಸೆ ತೋರಿಸಿ ಎತ್ತಿಕೊಂಡು ಬಂದು ಮೂಗು ಚುಚ್ಚಿಸಿದ್ದಂತೆ!), ಕೋಪ ಬಂದಾಗಲೆಲ್ಲಾ ಅವರ ಮುತ್ತಾತ ತೆಂಗಿನ ಮರ ಹತ್ತಿ ಕೂರ್ತಿದ್ದದ್ದು, ಅವರ ತಾತನ ಬಾಲಲೀಲೆಗಳು, ಮಹಾನ್ ಸಿದ್ಧಾಂತಿಗಳಾಗಿದ್ದ ಅವರ ಮರಿತಾತನ ಮಾತೇ ಊರಿನಲ್ಲಿ ನಡೀತಿದ್ದದ್ದು... ಕೊನೆಮೊದಲೇ ಇಲ್ಲ. ಯಾರು ಕೇಳಲಿ ಬಿಡಲಿ ʼಮಾತಾಡುವುದೆ ಅನಿವಾರ್ಯ ಕರ್ಮ ನನಗೆʼ ಎನ್ನುವಂತೆ ಅವರ ವಾಕ್ಪ್ರವಾಹ ಅಡೆತಡೆ ಇಲ್ಲದಂತೆ ಹರಿಯುತ್ತಿತ್ತು. ನಮಗೋ ಸದಾ ತಲೆ ನಡುಗಿಸುತ್ತಿದ್ದ ನೂರರ ಸಮೀಪದ ಮುತ್ತಜ್ಜಿ ತಮ್ಮ ತಾತನ ಬಾಲಲೀಲೆಗಳನ್ನು ಹೇಳುವಾಗ ನಗುವನ್ನೇ ತಡೆಯಲಾಗುತ್ತಿರಲಿಲ್ಲ.
ಕೇವಲ ಈ ರೀತಿಯ ಕಪೋಲ ಕಲ್ಪಿತವೇನೋ ಎನಿಸುವಂಥಾ ಆಕರ್ಷಕ ಕಥಾನಕಗಳಷ್ಟೇ ಅಲ್ಲ. ಅವರ ಅಮೂಲ್ಯ ಅನುಭವಗಳು, ಮನೆಮದ್ದುಗಳು ಎಷ್ಟೊವೇಳೆ ಉಪಯುಕ್ತವೂ ಆಗಿರುತ್ತಿದ್ದವು. ಈಗೆಲ್ಲಾ ನ್ಯೂಕ್ಲಿಯರ್ ಫ್ಯಾಮಿಲಿಗಳೇ ಹೆಚ್ಚಾಗಿ ಮಕ್ಕಳಿಗೆ ಅಜ್ಜಿ-ಅಜ್ಜನ ಸಾಂಗತ್ಯವೇ ಇಲ್ಲದಂತಾಗಿದೆ. ಅದರಲ್ಲೂ ಅತ್ತಿತ್ತ ಕತ್ತನೂ ಹೊರಳಿಸಲಾಗದಂತೆ ಕಾರ್ಯತತ್ಪರರಾದ ಯುವಜನತೆಗೆ ನೆಟ್ಟ ದೃಷ್ಟಿಗೆ ದಕ್ಕುವಷ್ಟೇ ಇಹಬಂಧೀ ತಾಂತ್ರಿಕತೆಯಾಗಿ ನೆನಪುಗಳೂ ಯಾಂತ್ರಿಕವಾಗುತ್ತಿವೆ. ನಮ್ಮ ನೆನಪುಗಳ ವ್ಯಾಪ್ತಿ ಎಷ್ಟೆಷ್ಟೋ ಗತಜನ್ಮದ ಸ್ಮೃತಿಗಳ ಹಂದರವಾದರೂ ಅರಿವಿಲ್ಲದೇ ಇಷ್ಟೇ ಬದುಕೆಂಬಂತೆ ಇಲ್ಲಿಗೇ ಅಂಟಿ ಹೊರಳುವ ಹುಳುವಾಗಿರುವ ನಮಗೆ ಪೂರ್ವ ಸ್ಮರಣೆಯದೇ ಅಭಾವವಾಗಿದೆ.
ಹಿಂದೆ ಹಿಂದೆ ಸಾಗುತ್ತಾ ಓಡಲಾರಂಭಿಸಿದ ಈ ಓಟ ಎತ್ತೆತ್ತಲೋ ಎಲ್ಲೆಲ್ಲೋ ನಮ್ಮನ್ನು ಕೊಂಡೊಯ್ಯಲಾರಂಭಿಸಿದೆ. 'ಎಷ್ಟಾದರೂ ಓಡಲಿ, ಕಾಸು ಖರ್ಚಿಲ್ಲದ ಓಟ,' ಎಂದು ಸುಮ್ಮನಿದ್ದುಬಿಡಲಾಗುವುದೇ? ಮುಂದಿನ ಮಹೋನ್ನತದತ್ತ ಅದನ್ನು ಕೇಂದ್ರೀಕರಿಸಿದರೆ ಹೇಗೋ ʼಇಹಕ್ಕೆ ಸುಖ, ಪರಕ್ಕೆ ಗತಿʼ ಅಂದುಕೊಳ್ಳೊಣವೇ?
~ಪ್ರಭಾಮಣಿ ನಾಗರಾಜ
2024ರ ಅಂತಿಮ ಭಾಗದಲ್ಲಿ ಫೇಸ್ಬುಕ್ ಮಿತ್ರರೊಬ್ಬರು ನನ್ನನ್ನು 'ಮಂದಾರ' ಸಾಹಿತ್ಯ ಬಳಗಕ್ಕೆ ಆಹ್ವಾನಿಸಿದರು. ಪ್ರತಿದಿನವೂ ಒಂದೊಂದು ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಾ ಅತ್ಯಂತ ಕ್ರಿಯಾಶೀಲವಾಗಿದ್ದ 'ಮಂದಾರ'ಕ್ಕೆ ಸೇರಿದ ನಾನು ನನಗೆ ಅಸಕ್ತಿಕರವೆನಿಸಿದ್ದರ ಬಗ್ಗೆ ಬರೆದು ಪಡೆದ ಕೆಲವು ಪ್ರಶಸ್ತಿ ಪತ್ರಗಳಿವು😍
ಮಂದಾರದ ಸಹ ಸದಸ್ಯರ ಪರಸ್ಪರ ಪ್ರೋತ್ಸಾಹ, ಪ್ರೀತಿ ವರ್ಣನಾತೀತ👌❤️
ನನ್ನ ವೈಯಕ್ತಿಕ ಕಾರಣದಿಂದ ಹಾಗೂ ನಿರಂತರ ಸ್ಪರ್ಧೆಗೊಳಪಡಲು ಅಸಾಧ್ಯವೆನಿಸುವ ಮನಃಸ್ಥಿತಿಯಿಂದ ಒಂದು ತಿಂಗಳಿಗೇ ತಟಸ್ಥಳಾಗಬೇಕಾಯ್ತು🌼
ಹೃತ್ಪೂರ್ವಕ ಧನ್ಯವಾದಗಳು ನಲ್ಮೆಯ ಮಂದಾರ 💕🙏
https://www.facebook.com/share/p/1ATrCV13Sb/
ದಿನಾಂಕ : 21_07_2024
ಪುಸ್ತಕ ಪರಿಚಯ :
ಒಂದೆಲೆ ಮೇಲಿನ ಕಾಡು - ಸ. ವೆಂ. ಪೂರ್ಣಿಮಾ
ನಾನು ವಿವಾಹಾನಂತರ ಸಕಲೇಶಪುರದ ಜ್ಯೂನಿಯರ್ ಕಾಲೇಜಿನ(ಈಗಿನ ಪದವಿ ಪೂರ್ವ ಕಾಲೇಜು) ಪ್ರೌಢ ಶಾಲಾ ವಿಭಾಗಕ್ಕೆ ವರ್ಗವಾಗಿ ಹೋದಾಗ ಪೂರ್ಣಿಮಾ ಅಲ್ಲಿಯೇ ಓದುತ್ತಿದ್ದಳು. ಆದರೆ ನನಗೆ ಪ್ರಾರಂಭದಲ್ಲಿ ಟೈಮ್ ಟೇಬಲ್ ಪ್ರಕಾರ ಎಲ್ಲಾ ಇಂಗ್ಲಿಷ್ ಮೀಡಿಯಂಗಳಿಗೂ ಗಣಿತ ಮತ್ತು ವಿಜ್ಞಾನದ ತರಗತಿಗಳನ್ನು ತೆಗೆದುಕೊಳ್ಳುವಂತೆ ಇರುತ್ತಿದ್ದುದರಿಂದ ವರ್ಕ್ ಲೋಡ್ ಆಗಿ ಒಂದೆರಡು section ಕನ್ನಡ ಮಾಧ್ಯಮಕ್ಕೆ ಇದ್ದರೂ ಪೂರ್ಣಿಮಾ ನನ್ನ ನೇರ ವಿದ್ಯಾರ್ಥಿಯಾಗಿರಲಿಲ್ಲ. ಆದರೂ ಹಾಡುವುದು ಮತ್ತು ಡ್ಯಾನ್ಸ್ ಮಾಡುವುದರಲ್ಲಿಯೂ ಚುರುಕಾಗಿದ್ದ ಹುಡುಗಿಯಾದ್ದರಿಂದ ನನ್ನ ಗಮನವನ್ನು ಸೆಳೆದಿದ್ದಳು. ಸಮಾರಂಭವೊಂದರಲ್ಲಿ ಅವಳು ಮಾಡಿದ ನೃತ್ಯ ಇನ್ನೂ ಅಚ್ಚಳಿಯದಂತೆ ಮನಸ್ಸಿನಲ್ಲಿದೆ. ನಂತರದ ವರ್ಷಗಳಲ್ಲಿ ತಾನು ಓದಿದ ಶಾಲೆಗೇ ಅವಳು ಪಾರ್ಟ್ ಟೈಮ್ ಶಿಕ್ಷಕಿಯಾಗಿ ಬಂದು ನಾವು ಸಹೋದ್ಯೋಗಿಗಳಾಗಿದ್ದಾಗ ತನ್ನ ಸರಳ ಭಾವಪೂರ್ಣ ನಡವಳಿಕೆಯಿಂದ ಆಪ್ತಳಾಗಿದ್ದಳು. ನಾನು ವಿಷಯ ಪರಿವೀಕ್ಷಕಳಾಗಿದ್ದಾಗ ಆಗಾಗ ಪೂರ್ಣಿಮಾ ಕೆಲಸಮಾಡುತ್ತಿದ್ದ ಶಾಲೆಯ ತಪಾಸಣೆ ಹಾಗೂ ಭೇಟಿಗೆ ಹೋಗುತ್ತಿದ್ದು ಅವಳ ಅಚ್ಚುಕಟ್ಟಾದ ಕಾರ್ಯ ವೈಖರಿಯನ್ನೂ ನೋಡಿದ್ದೇನೆ. ಇವಿಷ್ಟು ಪೂರ್ಣಿಮಾ ಮತ್ತು ನನ್ನ ಪರಿಚಯದ ಹಿನ್ನೆಲೆ.
'ನಾನು ತುಂಬಾ ಲೇಟಾಗಿ ಪುಸ್ತಕ ಮಾಡ್ತಿದೀನಿ ಟೀಚರ್' ಎಂದು ಇತ್ತೀಚೆಗೆ ಪೂರ್ಣಿಮಾ ಒಂದು ಸಾರಿ ಫೋನ್ ನಲ್ಲಿ ಹೇಳಿದಾಗ "'it is better late than never' ಎಂದಿದ್ದೆ. ಆದರೆ 'ಒಂದೆಲೆ ಮೇಲಿನ ಕಾಡು' ಎಂಬ ಈ ವಿಶಿಷ್ಟ ನಾಮಧೇಯದ ಪುಸ್ತಕ ಪ್ರಕಟವಾಗಿ ಅದಕ್ಕೆ ದೊರೆತ ಮನ್ನಣೆ, ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಇದು ಪೂರ್ಣಿಮಾಳ ಆಂತರ್ಯಕ್ಕೆ ತೃಪ್ತಿ ತಂದಿರಬಹುದಾದ best time ಎನಿಸದೇ ಇರಲಿಲ್ಲ. ಮೊದಲ ಪುಸ್ತಕದಿಂದಲೇ ಈವರೆಗೂ ಬರಬೇಕಾಗಿದ್ದ ಎಲ್ಲಾ ಗೌರವಗಳನ್ನೂ ಒಟ್ಟಾಗೇ ಬಡ್ಡಿಸಮೇತ ಪಡೆಯಲಾಗಿದೆ ಎಂದರೆ ಅತಿಶಯೋಕ್ತಿಯೇನಲ್ಲವೆನಿಸುತ್ತದೆ. ಈಗ ಪೂರ್ಣಿಮಾ ಎಂದಿನ ಅತ್ಯಾಪ್ತತೆಯಿಂದ ಕೊಟ್ಟ ಈ ಪುಸ್ತಕವನ್ನು ಓದುವಾಗ ಇಷ್ಟೊಂದು ಸರಳವಾಗಿ, ಸಹಜವಾಗಿ ನಮ್ಮ ಭಾವಬುತ್ತಿಯನ್ನು ತೆರೆದಿಡಬಹುದಲ್ಲಾ ಎಂಬ ಅಚ್ಚರಿಯಾಗುತ್ತಿದೆ. ತನಗಾದ ಅನುಭವಗಳನ್ನು, ಅನಿಸಿಕೆಗಳನ್ನು, ಹತ್ತಿರದಿಂದ ಕಂಡ ತನ್ನ ಆಪ್ತರ ಬದುಕಿನ ಏರಿಳಿತಗಳನ್ನು ನೇರಾನೇರವಾಗಿ ಎದುರಿಗೇ ಕುಳಿತು ಮಾತನಾಡುವಷ್ಟು ಸರಾಗವಾಗಿ ಹಂಚಿಕೊಳ್ಳುತ್ತಾ ಸಾಗುವುದು ಆಪ್ತವೆನಿಸುತ್ತದೆ.
ಇಲ್ಲಿಯ ಲೇಖನಗಳ ರಸಾಸ್ವಾದನೆಗೆ ಪ್ರವೇಶಿಕೆಯಂತಿರುವ ಪ್ರಬುದ್ಧವಾದ ಮೌಲ್ಯಯುತ ಮುನ್ನಡಿಯನ್ನು ಕೇಶವ ಮಳಗಿಯವರು ಬರೆದಿರುವುದು ಪುಸ್ತಕದ ಘನತೆಯನ್ನು ಹೆಚ್ಚಿಸುವಂತಿದೆ ಹಾಗೂ ಪುಸ್ತಕವನ್ನು ಓದಲೇಬೇಕೆಂದು ಪ್ರೇರೇಪಿಸುವಂತಿದೆ.
ಬಯಲುಸೀಮೆಯ ಬಿರು ಬಿಸಲಿನಲ್ಲಿ ಬೆಂದು ತಂಪಾದ ಮಲೆನಾಡಿಗೆ ಬಂದಾಗ ಇಲ್ಲಿಯ ಜಿಟಿಜಿಟಿ ಮಳೆ, ಎಲ್ಲಿಂದ ನೋಡಿದರೂ ಮೈತುಂಬಿದಂತಿದ್ದ ಹಸಿರ ಸೊಬಗು ನನ್ನನ್ನು ಬಹಳವಾಗಿ ಆಕರ್ಷಿಸಿತ್ತು. ಈಗ ಪೂರ್ಣಿಮಾ ಮತ್ತೊಮ್ಮೆ ತನ್ನ ಬರಹಗಳ ಮೂಲಕ ನನ್ನನ್ನು ನನ್ನ ಪ್ರಿಯ ಸಕಲೇಶಪುರವನ್ನು ಒಂದು ಸುತ್ತುಹಾಕಿಸಿದಂತಿದೆ. ಇಲ್ಲಿಯ ವರ್ಷಧಾರೆ, ನಮ್ಮೂರಿನಲ್ಲಿಯೂ ಹರಿಯುತ್ತಿರುವ ಇಲ್ಲಿ ಊರಿನ ಮಧ್ಯವೇ ಹಾದುಹೋಗಿರುವ ನನ್ನ ಪ್ರಿಯ ಹೇಮಾವತಿ ನದಿ, ಹಬ್ಬ-ಜಾತ್ರೆ-ಸಮಾರಂಭಗಳ ಸಂಭ್ರಮ ಎಲ್ಲವೂ ಚಂದವೇ!
ಸಕಲೇಶಪುರದ ಮಳೆಯನ್ನು ವರ್ಣಿಸುತ್ತಾ 'ಶುಭ್ರವಾಗಿ ಮಿಂದ ಹಸಿ ಬಾಣಂತಿಯಂತೆ ಹಸಿರಸಿರಿ' ಎನ್ನುವುದು ಬಹಳ ಮನಸ್ಸಿನಾಳಕ್ಕಿಳಿಯುತ್ತದೆ.
ಜನಪದ ಗೀತ ಗಾಯಕಿಯಾದ ಲೇಖಕಿಯ ಬರಹಗಳ ಮಧ್ಯೆ ಮಿಂಚುವ ಜನಪದ ಗೀತೆಯ ಸಾಲುಗಳು 'ಕರಿಮಣಿಯ ಸರದಲ್ಲಿ ಕೆಂಪು ಹವಳವ ಕೋದಂತೆ' ಎಂಬ ಉಪಮೆಯಂತೆ ಆಕರ್ಷಕ
' ಜಗದ ಜೋಗುಳಕೆ ಅಮ್ಮನ ದನಿಯ ಬಿಟ್ಟು ಬೇರೆ ಮಂತ್ರ ಉಂಟೆ' ಪ್ರಬಂಧದಲ್ಲಿ ಲೇಖಕಿಯ ತಾಯಿಯು 'ಗೊಂಬೆ ಗೊಂಬೆ' ಎನ್ನುವ ರೋಮ್ಯಾಂಟಿಕ್ ಸಿನಿಮಾ ಗೀತೆಯನ್ನು ಜೋಗುಳದ ಹಾಡಾಗಿಸಿದ ಪ್ರಸಂಗವು ನಗುವಿನೊಟ್ಟಿಗೇ ಅವರ ವಾದ ಸರಣಿಯಂತೆ 'ಏಕಾಗಬಾರದು?' ಎಂಬ ಸಹಮತಿಯನ್ನು ನಮ್ಮ ಮನಗಳಲ್ಲಿಯೂ ಉಂಟುಮಾಡುತ್ತದೆ.
'ನನ್ನ ಪ್ರೀತಿಯ ರಜಿಯಾ', 'ಮನೆಗೊಂದು ಹಿರಿ ತಲೆ ಇರಬೇಕು' ಲೇಖನಗಳು ಕಥನ ಶೈಲಿಯಲ್ಲಿದ್ದು ವಿಷಾದವನ್ನು ಮೂಡಿಸುವಂತಿವೆ. ರಜಿಯಾ ಮತ್ತು ರಂಗನಾಯಕಿ ಲೇಖನಗಳಲ್ಲಿ ಬಹಳಷ್ಟು ಸಾಮ್ಯತೆ ಇದ್ದು ಎರಡರಲ್ಲಿಯೂ ಏಕಾಂಗಿಯಾಗಿ ಹೋರಾಡುವ ಹೆಣ್ಣಿನ ನೋವಿನ ಜೀವನದ ಚಿತ್ರಣವಿದೆ.
'ಹಸೆ ಹಾಕೋರ ಮನೆಯಲ್ಲಿ' ಲೇಖನದಲ್ಲಿ ಸೋಬಾನೆ ಪದದ ವೈಶಿಷ್ಟ್ಯವನ್ನು ಬಹಳ ಚೆನ್ನಾಗಿ ಲೇಖಿಸಿದ್ದು 'ಸೋ ಎನ್ನಿರೆ ಸೋಬಾನೆ ಎನ್ನಿರೇ...'ಸಾಲು ಮನಸ್ಸಿನಲ್ಲಿ ರಿಂಗಣಿಸುತ್ತದೆ.
'ಸಾಲು ಸಾಲು ಕಥೆಗಳ ಮೆರವಣಿಗೆ... ಈ ಕಥೆಗಳೆಲ್ಲ ನನ್ನೊಳಗೆ ಬೆಳೆದವೋ ಅಥವಾ ನಾನೇ ಕಥೆಯೊಳಗೆ ಬೆಳೆದೇನೋ ಆದರೆ ಕಥೆಯೊಳಗಿನ ಪಾತ್ರಗಳು ನಾನಾಗುತ್ತಿದ್ದೆ...' ಚಿಕ್ಕವಯಸಿನಲ್ಲಿ ಕೇಳುವ ಕಥೆಗಳು ಹೇಗೆ ಬದುಕನ್ನು ರೂಪಿಸುತ್ತದೆ ಪ್ರಭಾವಿಸುತ್ತದೆ ಎನ್ನುವುದನ್ನು 'ಕೃಷ್ಣ ಎಂದರೆ...' ಲೇಖನದಲ್ಲಿ ಮನಮುಟ್ಟುವಂತೆ ವಿವರಿಸಿದ್ದಾರೆ ಜೊತೆಗೆ ತನ್ನ ಸ್ವಂತ ಜೀವನದಲ್ಲಿ ತಾನು ನೃತ್ಯ, ಅಭಿನಯ ಮುಂತಾದವುಗಳಲ್ಲಿ ನಡೆಸಿದ ಸಾಧನೆಗಳನ್ನು ನೇರಾನೇರವಾಗಿ ಹೇಳುವುದು ಹುಬ್ಬೇರಿಸುವಂತಿದೆ.
'ಪರ್ಸಿನಲ್ಲಿ ದುಡ್ಡು ಕಾಣೆಯಾದ ಆ ದಿನ' ಲೇಖನದಲ್ಲಿ ವಿದ್ಯಾರ್ಥಿನಿಯು ಕಳೆದುಕೊಂಡ ದುಡ್ಡನ್ನು ಒಂದು ಕಥೆಯನ್ನು ಹೇಳುವ ಮೂಲಕ ಪುನಃ ಹಣವನ್ನು ತೆಗೆದುಕೊಂಡವರು ಆಕೆಯ ಬ್ಯಾಗಿನಲ್ಲಿ ಇಡುವಂತೆ ಪ್ರೇರೇಪಿಸಿರುವುದು ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆಯ ಅರಿವನ್ನು ಉಂಟು ಮಾಡುವ ಶ್ಲಾಘನೀಯ ಅಂಶವಾಗಿದೆ. ಇದರಂತೆಯೇ 'ನಡೆಯುವರು ಎಡವದೆ' ಎನ್ನುವ ಲೇಖನದಲ್ಲಿಯೂ ಕಥೆಯ ಮೂಲಕ ಜೀವನ ಪಾಠವನ್ನು ಕಲಿಸುವ ಪ್ರಯತ್ನವಿದೆ.
ಜನಪದ ದಿಗ್ಗಜರು ಕಟ್ಟಿಕೊಟ್ಟ ತವರು ಲೇಖನದಲ್ಲಿ ತವರು ಎಂದರೆ ತಾಯಿ ಮಾತ್ರ ಅಲ್ಲ ತಂದೆಯೂ ಕೂಡ ಎಂದು ಹೇಳುತ್ತಾ ತಂದೆಯ ಬಗೆಗಿನ ತಮ್ಮ ಅಪರಿಮಿತ ಪ್ರೀತಿಯನ್ನು ತೆರೆದಿಡುತ್ತಾರೆ.
'ಮೇಡಂ, ನೀವು ಸಿಸ್ಟರ್ ಅಂತ ಹೇಳಿದ್ರಲ್ಲ ಅದಕ್ಕಾಗಿ' ಎನ್ನುವ ಲೇಖನದಲ್ಲಿ ಜೀವನದ ಬಗ್ಗೆಗಿನ ಸಕಾರಾತ್ಮಕತೆಯನ್ನು ಬಿಂಬಿಸುವ ಘಟನೆ ಇದೆ. ಸಾಮಾನ್ಯವಾಗಿ ಎಲ್ಲ ಕಡೆಯೂ ಮೋಸ ವಂಚನೆಗಳ ಬಗ್ಗೆ ಕೇಳುವ ಈ ದುರಿತ ಕಾಲದಲ್ಲಿ 'ವಿನ್ಸೆಂಟ್ ಅಣ್ಣನಾಗಿ ಸಿಕ್ಕಿದ್ದು..' ಬದುಕಿಗೆ ಭರವಸೆಯನ್ನು ತುಂಬುವ ಲೇಖನ.
ಎಲ್ಲ ತಾಯಂದಿರಿಗೂ ತಮ್ಮ ಮಕ್ಕಳು ಶ್ರೇಷ್ಠವೇ ಹಾಗೂ ಮಕ್ಕಳು ಓದಲು ಅಥವಾ ಉದ್ಯೋಗಕ್ಕಾಗಿಯೋ ತಮ್ಮಿಂದ ದೂರ ಹೋದಾಗ ಆ ಅಗಲಿಕೆ ನೋವು ಕೂಡ ಕಷ್ಟವೇ. ಈ ಭಾವವನ್ನು, ಪತಿ-ಪತ್ನಿಯ ಸ್ವಭಾವ ವೈರುಧ್ಯದ ನಡುವೆ ಮಕ್ಕಳು ಸೇತುವೆಯಾಗಿರುತ್ತಾರೆ ಎಂಬ ಅಂಶವನ್ನು ಹಾಗೂ ತಮ್ಮ ಮಗನ ಬಗೆಗೆ ತಮ್ಮೊಳಗೆ ತುಂಬಿ ತುಳುಕುತ್ತಿರುವ ವಾತ್ಸಲ್ಯವನ್ನು 'ಪ್ರೀತಿ ಮತ್ತು ಶಿಸ್ತಿನ ನಡುವಿನ ಒಂದು ಕೊಂಡಿ' ಪ್ರಬಂಧದಲ್ಲಿ ಲೇಖಕಿಯು ಬಹಳ ಹೃದ್ಯಂಗಮವಾಗಿ ಲೇಖಿಸಿದ್ದಾರೆ.
ಪ್ರಕೃತಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದ ತಮ್ಮ ತಾಯಿಯು ಆ ಕಾಲಕ್ಕೆ ಹೆಣ್ಣುಮಕ್ಕಳ ಗಾರ್ಮೆಂಟ್ಸ್ ಆಗಿದ್ದ ಏಲಕ್ಕಿ ಮಂಡಿಯಲ್ಲಿ ದುಡಿದು ಮಕ್ಕಳನ್ನು ಸಾಕಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರ ಮನಕಲಕುವ ಕಥೆಗಳು ಎಲ್ಲವನ್ನೂ ಹೃದಯಂಗಮವಾಗಿ ಚಿತ್ರಿಸಿದ್ದಾರೆ.
ಬಹುತೇಕ ಬರಹಗಳಲ್ಲಿ ಲೇಖಕಿಯ ಬಾಲ್ಯದ ಸಂಭ್ರಮ ಹಾಗೂ ಇತ್ತೀಚೆಗೆ ಬದಲಾದ ಪರಿಸ್ಥಿತಿಗಳಿಂದ ಉಂಟಾಗುತ್ತಿರುವ ನಿರಾಶಾ ಭಾವವನ್ನು ಕಾಣಬಹುದು.
ಈ ಸಂಕಲನದಲ್ಲಿ ಒಟ್ಟು 39 ಬರಹಗಳಿದ್ದು ಒಂದೊಂದೂ ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟವಾಗಿದ್ದು ಸರಳತೆಯಲ್ಲೇ ಮನಸೆಳೆಯುವಂತಿವೆ. ಅಪಾರವಾದ ಅನುಭವಗಳ ಅಗರವೇ ಆಗಿರುವ ಪೂರ್ಣಿಮಾ ವೈಯಕ್ತಿಕತೆಯಿಂದ ವೈಶಾಲ್ಯತೆಯತ್ತ ಚಲಿಸಿ ಇನ್ನೂ ಉತ್ತಮವಾದ ಕೃತಿಗಳನ್ನು ನೀಡಲಿ ಹಾಗೂ ಮತ್ತಷ್ಟು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಎಲ್ಲರೂ ಓದಿ ಖುಷಿಪಡಬಹುದಾದ ಚಂದದ ಪುಸ್ತಕವನ್ನು ನೀಡಿರುವ ಪೂರ್ಣಿಮಾಗೆ ಹಾಗೂ ಅಚ್ಚುಕಟ್ಟಾಗಿ ಕೃತಿಯನ್ನು ಹೊರತಂದಿರುವ ಹಾಡ್ಲಹಳ್ಳಿ ಪಬ್ಲಿಕೇಷನ್ಸ್ ನ ಚಲಂಗೆ ಹೃತ್ಪೂರ್ವಕ ಅಭಿನಂದನೆಗಳು.
~ಪ್ರಭಾಮಣಿ ನಾಗರಾಜ
ಜೂನ್,2024ರ ಉತ್ಥಾನ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕವನ `ಮುಕ್ತಾ' ನಿಮ್ಮ ಓದಿಗೆ❤️ ಅಭಿಪ್ರಾಯ ತಿಳಿಸಿ🙏
ಧನ್ಯವಾದಗಳು ಉತ್ಥಾನ❤️🙏
ಮುಕ್ತ?
ಅಬ್ಬಾ
ಒಮ್ಮೆ ಆ ದಿನಗಳ
ಪರ್ಯವಲೋಕಿಸಿದಾಗ...
ಬೀಳದಂತೆ
ಬೆನ್ನಮೇಲಿನ ಹೊರೆ
ಅತ್ತಿತ್ತ ಅಲುಗದಂತೆ
ಜಾರದಂತೆ
ಜರುಗದಂತೆ
ಸಮತೋಲಿಸುತ್ತಾ...
ಮುಗ್ಗರಿಸುವ
ಕೊರಕಲೋ
ಗುದ್ದಿ ಬೀಳಿಸುವ
ಗುಡ್ಡವೋ
ಗ್ರಹಿಸಲಾಗದ
ಗಾಡಾಂಧಕಾರದ
ಅವಕಾಶದಲಿ
ತಬ್ಬರಿಸಿ
ಮುಂದಡಿಯಿಡುತ್ತಾ...
ಅತ್ತಿತ್ತ
ಹೆಜ್ಜೆಯೂರುತ್ತಿರುವವವರ
ಅಧ: ಪತನದ ಆಕ್ರಂದನ
ಏರಿ ಮೆರೆವವರ
ವಿಜಯದ ಕೇಕೆಗಳಿಗೆ
ಕಿವಿಯಾಗಿ
ಹಂಗಿಸಿ ಹಿಂದಿಕ್ಕುವವರ
ಸೈರಿಸುತ್ತಾ...
ಕಗ್ಗತ್ತಲಿನ ಭವಿಷ್ಯದೊಳಗೂ
ಆಗಾಗ ಮಿಂಚುವ
ಬೆಳಕನಾಶ್ರಯಿಸಿ
ಕಾತರಿಸುತ್ತಾ
ಕಂಗಾಲಾಗುತ್ತಿದ್ದ ಪರಿ....
ಈಗ
ಹೊರಜಗತ್ತಿಗೆ
ಹೊರೆಯೆನಿಸುವುದೂ
ಹತ್ತಿಯಷ್ಟೇ ಹಗುರ
ಏಳುಬೀಳುಗಳ
ಹಂಗಿಲ್ಲದ ಹೂಭಾವ
ಅಂಧಕಾರದಲೂ
ಶರಣಾಗತಿಯಿಂದಷ್ಟೇ
ಅನಂತದರ್ಶನವೆಂಬ
ಸಮರ್ಪಣಾ ಭಾವ
ಸಚ್ಚಿದಾನಂದದಲಿ
ಮೀಯುತ್ತಿದೆ ಜೀವ.
~ಪ್ರಭಾಮಣಿ ನಾಗರಾಜ
https://www.facebook.com/share/p/FyrhCaHCiMsDZPF9/?mibextid=oFDknk
👆ಅರ್ಥಪೂರ್ಣ ಚುಟುಕುಗಳನ್ನು ಬರೆಯುತ್ತಿದ್ದ ಸರಳ ಸಜ್ಜನರಾದ ಜರಗನಹಳ್ಳಿ ಶಿವಶಂಕರ್ ಅವರು 2009ರಲ್ಲಿ ಪ್ರಕಟವಾದ ನನ್ನ ಎರಡನೇ ಹನಿಗವನ ಸಂಕಲನ 'ಗುಟ್ಟು' ಗೆ ಬರೆದಿದ್ದ ಮುನ್ನುಡಿ 🙏
ನನ್ನ ಲಲಿತ ಪ್ರಬಂಧ 'ಗ್ಯಾರಂಟಿ ಕೊಸರು ಕವಿಗೋಷ್ಠಿಯಲ್ಲಿ ಹೆಸರು
'ಮಯೂರ" ಪತ್ರಿಕಾ ಬಳಗಕ್ಕೆ ಧನ್ಯವಾದಗಳು❤️🙏