Monday, January 12, 2026

'ತರಂಗ' ಪತ್ರಿಕೆಯಲ್ಲಿ ನನ್ನ ಲಲಿತ ಪ್ರಬಂಧ ʼತಾಂಬೂಲ ಹರ್ಷ... ʼಪರಾಗ್ʼ ಸ್ಪರ್ಶʼ

 

        

 

     





https://www.facebook.com/share/p/1Dgx8hJav6/
         👆ಜನವರಿ15,2026ರ 'ತರಂಗ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲಲಿತ ಪ್ರಬಂಧ ʼತಾಂಬೂಲ ಹರ್ಷ... ʼಪರಾಗ್ʼ ಸ್ಪರ್ಶʼ  ನಿಮ್ಮ ಪ್ರೀತಿಯ ಓದಿಗೆ❤️🙏 

          'ತರಂಗ' ಪತ್ರಿಕಾ ಬಳಗಕ್ಕೆ ಧನ್ಯವಾದಗಳು🙏 
         
      🌿ತಾಂಬೂಲ ಹರ್ಷ…🌿

          ವಾರಕ್ಕೊಂದು ದಿನ ಪಟ್ಟಣದ ಸಂತೆಗೆ ಹೋಗುತ್ತಿದ್ದ ನಮ್ಮ ಮಾವ ಎಲ್ಲಾ ಇತರ ದಿನಸಿ ತರಕಾರಿಗಳೊಡನೆ ಒಂದು ಕಟ್ಟು ವಿಳ್ಳೆದೆಲೆಯನ್ನು ತಪ್ಪದೆ ತರುತ್ತಿದ್ದರು. ʼಕಪ್ಪು ಎಲೆ ರುಚಿ ಸ್ವಲ್ಪ ಖಾರ. ಬಿಳಿ ಎಲೇನೇ ನೋಡಿಕೊಂಡು ತಗೊಂಡು ಬಾʼ ಎಂದು ಪ್ರತಿಬಾರಿಯೂ ಸಂಪ್ರದಾಯದಂತೆ ನಮ್ಮತ್ತೆ ಹೇಳುವುದನ್ನು ಮರೆಯುತ್ತಿರಲಿಲ್ಲ. ಆ ಕಾಲದ ವಿಳ್ಳೆದೆಲೆಯ ಲೆಕ್ಕ ಒಂದು ಕಟ್ಟು ಎಂದರೆ ಐದು ಕವಳಿಗೆಗೆ ನೂರು ಎಲೆಗಳು. ಅಷ್ಟೊಂದು ಎಲೆ ಏನು ಮಾಡಕ್ಕೆ? ಎಂದು ಕೇಳುವಂತೆಯೂ ಇರಲಿಲ್ಲ. ಮನೆಯಲ್ಲಿದ್ದ ನಾಲ್ಕೈದು ಜನ ಸ್ತ್ರೀಯರಿಗೆ ಮಧ್ಯಾಹ್ನದ ಊಟವಾದ ನಂತರ ಹಾಕಿಕೊಳ್ಳಲು, ಮನೆಗೆ ಬಂದ ಮಹಿಳೆಯರಿಗೆ ಕೊಡುವ ಅರಿಸಿನ-ಕುಂಕುಮದೊಡನೆ ತೆಂಗಿನಕಾಯಿ/ಬಾಳೆಹಣ್ಣಿನ ಜೊತೆ ಇಡಲು, ʼಅವ್ವ, ಹಾಳು ತೆವಲು, ಬರಿಬಾಯಿ ಲವಲವಗುಟ್ತದೆ. ಬಾಯಾಸರಕ್ಕೆ ಎರಡೆಲೆ ಕೊಡಿʼ ಎಂದು ಪದೇಪದೇ ಬಂದು ಗೋಗರೆಯುತ್ತಿದ್ದ ಹೆಂಗಸರಿಗೆ ಕೊಡಲು… ಮುಂತಾದ ಲೆಕ್ಕದಲ್ಲಿ ವಾರಾಂತ್ಯಕ್ಕೆ ಶಾಸ್ತ್ರಕ್ಕೆ ಒಂದು ಎಲೆಯೂ ಉಳಿಯುತ್ತಿರಲಿಲ್ಲ. ಹಾಗೆ ನೋಡಿದರೆ ನಮ್ಮ ಮನೆಯಲ್ಲಿ ಗಂಡಸರು ವಿಳ್ಳೆದೆಲೆ ಹಾಕಿಕೊಂಡದ್ದನ್ನು ನೋಡಿದ ನೆನಪೇ ಇಲ್ಲ. ಏನಿದ್ದರೂ ಅಮ್ಮ, ಅತ್ತೆಯರು ದಿನದಲ್ಲಿ ಒಂದು ಹೊತ್ತು ಮಾತ್ರ ತಾಂಬೂಲ ಸೇವನೆ ಮಾಡುತ್ತಿದ್ದರು. ಅವರು ಎಲೆ ಹಾಕಿಕೊಳ್ಳುವಾಗ ಮಕ್ಕಳೆಲ್ಲರೂ ಸುತ್ತ ಕುಳಿತು ʼನಂಗೆ-ನಂಗೆʼ ಎನ್ನುತ್ತಾ ʼಆʼ ಎಂದು ಬಾಯಿತೆರೆಯುತ್ತಾ ಕಾಟಕೊಡುತ್ತಿದ್ದೆವು. ಆದರೆ ʼಮಕ್ಕಳು ಎಲೆ ಹಾಕ್ಕೊಂಡರೆ ನಾಲಿಗೆ ಹೊರಳಲ್ಲ. ವಿದ್ಯೆ ಹತ್ತಲ್ಲ…ʼ ಮುಂತಾದ ಕಾರಣಗಳನ್ನು ಕೊಟ್ಟು ನಮಗೆ ಅಪ್ಪಿತಪ್ಪಿಯೂ ಹಾಕಿಕೊಳ್ಳಲು ಬಿಡುತ್ತಿರಲಿಲ್ಲ. ಅವರು ಕಿತ್ತು ಎಸೆದಿರುವ ವಿಳ್ಳೆದೆಲೆ ತೊಟ್ಟನ್ನು ತಿನ್ನುವುದರಲ್ಲೇ ನಾವು ತೃಪ್ತಿಪಟ್ಟುಕೊಳ್ಳಬೇಕಾಗಿತ್ತು! ಆದರೂ ಯಾವಾಗ ನಾವೂ ದೊಡ್ಡವರಾಗಿ ತಾಂಬೂಲ ಮೆದ್ದು ರಾಗರಂಜಿತರಾಗ್ತೀವೋ ಎನ್ನುವ ಕನಸಂತೂ ಅಪ್ರಯತ್ನವಾಗಿ ನಮ್ಮನ್ನು ಬೆಂಬಿಡದೆ ಕಾಡುತ್ತಿತ್ತು. ಅಕ್ಕಪಕ್ಕದ ಹರೆಯದ ಹೆಣ್ಣುಮಕ್ಕಳು ವಿಳ್ಳೆದೆಲೆ ಮೆದ್ದು ನಾಲಿಗೆಯನ್ನು ಮುಂಚಾಚಿ ತೋರಿಸುತ್ತಾ ಒಬ್ಬರಿಗೊಬ್ಬರು ಯಾರದ್ದು ಹೆಚ್ಚು ಕೆಂಪಾಗಿದೆ ಎಂದು ನೋಡಿಕೊಳ್ಳುತ್ತಿದ್ದರು. ಹೆಚ್ಚು ಕೆಂಪಾಗಿದ್ದರೆ ಗಂಡ ತುಂಬಾ ಪ್ರೀತಿಸುತ್ತಾನೆ ಎನ್ನುವುದು ಪ್ರತೀತಿ! ಕ್ಯಾಲ್ಷಿಯಂ ಅಂಶ ಹೆಚ್ಚಾಗಿದ್ದರೆ ನಾಲಿಗೆ ಕೆಂಪಾಗುತ್ತದೆ ಎನ್ನುವ ವೈಜ್ಞಾನಿಕ ಕಾರಣವನ್ನು ಕೊಡುವುದರಲ್ಲಿ ನಾವು ಹಿಂದೆಬೀಳುತ್ತಿರಲಿಲ್ಲ.

          ನಮ್ಮ ಮನೆಗೆ ಬರುತ್ತಿದ್ದ ನಮ್ಮಜ್ಜಿಯ ಬಾಲ್ಯ ಗೆಳತಿ ಕೆಂಪಮ್ಮ ಸದಾಕಾಲ ಕವಳವನ್ನು ಬಾಯಾಡಿಸುತ್ತಲೇಯಿರುತ್ತಿದ್ದರು. ಇಬ್ಬರೂ ಅಕ್ಕಪಕ್ಕದ ಹಳ್ಳಿಗಳಿಗೇ ಮದುವೆಯಾಗಿ ಬಂದಿದ್ದು ತಮ್ಮ ಆ ಕಾಲದ ಲಂಗದ ದೋಸ್ತನ್ನು ವಾರಕ್ಕೊಮ್ಮೆಯಾದರೂ ಭೇಟಿಯಾಗುವ ಕಾತುರದಲ್ಲಿ ಅಜ್ಜಿ ಚಡಪಡಿಸುತ್ತಿದ್ದರು. ʼಅವಳಿಗೇನು ಚಿಕ್ಕ ಪ್ರಾಯವಾ, ಎರಡು ಮೈಲಿ ನಡಕೊಂಡು ಬರಬೇಕಲ್ಲ…ʼ ಎಂಬ ಸ್ವಗತ ವಾಕ್‌ ಆತಂಕದಲ್ಲಿ ಕನಿಷ್ಠ ಒಂದು ಕವಳಿಗೆಯಾದರೂ ಎಲೆಯನ್ನು ಅವಳಿಗಾಗಿ ಇಟ್ಟುಕೊಂಡು ನಿರೀಕ್ಷಿಸುತ್ತಿದ್ದರು ಅಜ್ಜಿ. ಪ್ರತಿಸಾರಿಯೂ ವಿಶೇಷ ಸಂಭ್ರಮದಲ್ಲೇ ಬರುತ್ತಿದ್ದ ಕೆಂಪಮ್ಮ ಸೊಂಟಕ್ಕೆ ಸಿಕ್ಕಿಸಿಕೊಂಡಿರುತ್ತಿದ್ದ ಎಲೆ-ಅಡಿಕೆ ಚೀಲವನ್ನು ಹೊರತೆಗೆದು ಕುಳಿತು ಬಿಟ್ಟರೆ ಒಂದು ಚಿಕ್ಕ ಪಾನ್‌ ಬೀಡಾ ಅಂಗಡಿಯನ್ನು ತೆರೆದಂತಾಗುತ್ತಿತ್ತು. ಸುಮಾರು ಒಂದು ಅಡಿ ಉದ್ದ ಇರುತ್ತಿದ್ದ ಅದನ್ನು ಅವರು ಎಲಡಿಕೆ ಚಂಚಿ ಅನ್ನುತ್ತಿದ್ದರು. ಆ ಚೀಲದಲ್ಲಿ ಎಲೆ, ಗೋಟಡಿಕೆ, ಸುಣ್ಣ, ಕಾಚು, ಕಡ್ಡಿಪುಡಿ ಹೊಗೆಸೊಪ್ಪು, ಒಂದು ಕುಟ್ಟಾಣಿ, ಸ್ವಲ್ಪ ಚಿಲ್ಲರೆ ಕಾಸು ಮುಂತಾದ ಅಗತ್ಯ ಪರಿಕರಗಳನ್ನು ಇಟ್ಟುಕೊಳ್ಳಲು ನಾಲ್ಕೈದು ಪದರಗಳಿದ್ದು ಈಗಿನ ವ್ಯಾನಿಟಿ ಬ್ಯಾಗ್‌ಗಳಂತೆ ಅತ್ಯುಪಯುಕ್ತ ಸಾಧನವಾಗಿತ್ತು.  ಬೋಡುಬಾಯಿಯ ಕೆಂಪಮ್ಮ ಕುಟ್ಟಾಣಿಯನ್ನು ತೆಗೆದು ಅದರೊಳಗೆ ತಾಂಬೂಲದ ಎಲ್ಲಾ ಇನ್ಗ್ರೇಡಿಯಂಟ್ಸ್‌ನೂ ಹಾಕಿ ಕುಟ್ಟುತ್ತಾ ಮಾತಿಗಾರಂಭಿಸಿದರೆ ಅದರ ಲಯಕ್ಕೆ ತಕ್ಕಂತೆ ಮಾತಿನ ಓಘವೂ ಮುನ್ನಡೆಯುತ್ತಾ ಸಂಭಾಷಣೆಯು ಕಳೆಗಟ್ಟುತ್ತಿತ್ತು. ನಮ್ಮ ದೊಡ್ಡಣ್ಣ ʼಹೂಂ, ಈಗ ಟೇಪ್‌ ರೆಕಾರ್ಡರ್ ಆನ್‌ ಆಯ್ತು. ಇನ್ನು ಒಂದು ಗಂಟೆಯಾದರೂ ಓಡುತ್ತೆ,ʼ ಎನ್ನುತ್ತಿದ್ದ. ತವರುಮನೆಯ ಸಂಭ್ರಮದಿಂದ ಪ್ರಾರಂಭಿಸಿ ಹೊಸತರಲ್ಲಿ ಗಂಡನ ಆರ್ಭಟ, ಮಕ್ಕಳ ಅಕರಾಸ್ತೆ, ಸೊಸೆಯ ಸುಪನಾತಿತನ, ಮೊಮ್ಮಕ್ಕಳ ತುಂಟಾಟ ಎಲ್ಲಾ ಒಂದು ಸುತ್ತುಸುತ್ತಿ ಮುಗಿಯುವುದರಲ್ಲಿ ಕುರುಕಲುತಿಂಡಿ-ಕಾಫಿಯ ಸಮಾರಾಧನೆಯಾಗುತ್ತಿತ್ತು. ಕೆಂಪಜ್ಜಿಯ ಚಂಚಿಯನ್ನು ನೋಡಿದಾಗಲೆಲ್ಲಾ ನಮಗೆ ಪಾಠದಲ್ಲಿ ಓದಿದ ಸಂಚಿ ಹೊನ್ನಮ್ಮನ ನೆನಪಾಗುತ್ತಿತ್ತು.

          ತಾಂಬೂಲ ಸೇವನೆ ಮಾಡುವುದರಿಂದ ವಾತ, ಪಿತ್ತ, ಶೀತ, ಕಪ, ಅಜೀರ್ಣ ಎಲ್ಲವನ್ನೂ ತಡೆಗಟ್ಟಬಹುದು. ಆದರೆ ಅತಿಯಾದರೆ ಆರೋಗ್ಯಕ್ಕೆ ಮಾರಕ. ʼಅತಿಃ ಸರ್ವತ್ರ ವರ್ಜಯೇತ್,ʼ ಎಂದು ನಮ್ಮ ತಂದೆ ಹೇಳುತ್ತಿದ್ದರು. ಅವರು ಮೈಸೂರಿಗೆ ಹೋದಾಗಲೆಲ್ಲಾ ದೇವರಾಜ ಮಾರ್ಕೆಟ್‌ ನಿಂದ ಮೈಸೂರೆಲೆ ತರುವುದನ್ನು ಮಾತ್ರ ಮರೆಯುತ್ತಿರಲಿಲ್ಲ. ʼಎಲೆಗಳಲ್ಲಿ ಅಂಬಾಡಿ ಎಲೆ, ಮೈಸೂರು ಎಲೆ, ಆಂದ್ರ ಬನಾರಸ್, ಮದ್ರಾಸ್, ಎಂಬ ವಿಧಗಳಿವೆ. ನಮ್ಮ ಮೈಸೂರಿನ ಚಿಗುರೆಲೆಗೆ ತುಂಬಾ ರುಚಿ,ʼ ಎನ್ನುತ್ತಿದ್ದರು. ಇವರು ಯಾವತ್ತೂ ಎಲಡಿಕೆ ಹಾಕಿದ್ದೇ ನೋಡಿಲ್ಲವಲ್ಲ ಎಂದುಕೊಂಡು ನಾವು ಅಚ್ಚರಿಪಡುತ್ತಿದ್ದೆವು.

          ಒಮ್ಮೆ ಹೀಗೇ ಮಾವನ ಸ್ನೇಹಿತರೊಬ್ಬರು ಬಂದಿದ್ದು ಊಟದ ನಂತರ ತಾಂಬೂಲದ ತಟ್ಟೆಯನ್ನಿಟ್ಟಾಗ ಅಭ್ಯಾಸವಿಲ್ಲದ ಅವರು ಎಲೆಹಾಕಿಕೊಂಡದ್ದು ಎದೆಯಲ್ಲಿ ಹಿಡಿದುಕೊಂಡು ಮೊದಲೇ ಬೆಳ್ಳಗಿದ್ದವರು ಕೆಂಪುಕೆಂಪಾಗಿ ಕಣ್ಣು ಮೇಲಕ್ಕೆ ಸಿಕ್ಕಾಕಿಕೊಂಡಾಗ ʼಎಲಡಿಕೆ ಸೊಕ್ಕಿದೆʼ ಅಂತ ಅವರಿಗೆ ಕೊಬ್ಬರಿ ತಿನ್ನಿಸಿ, ಸಕ್ಕರೆ ಬಾಯಿಗೆ ಹಾಕಿ ಪಾಡುಪಡುವಂತಾಯ್ತು. ನಂತರದ ದಿನಗಳಲ್ಲಿ ಅತಿಥಿಗಳಿಗೆ ತಾಂಬೂಲೋಪಚಾರ ಮಾಡಲು ಹಿಂದೆ-ಮುಂದೆ ನೋಡುವಂತಾಯ್ತು!

        ನನಗೂ ವಿವಾಹ ಸಂದರ್ಭದ ನಾಗೋಲಿ ಶಾಸ್ತ್ರದಲ್ಲಿಯೇ ತಾಂಬೂಲ ಸೇವಿಸಲು ಲೈಸೆನ್ಸ್‌ ದೊರೆತು ಮುಂದಿನ ಹಂತದಲ್ಲಿ ʼತಿಂಡಿ ಊಟಗಳ ನಂತರ ಎಲಡಿಕೆ ಹಾಕಿಕೊಳ್ಳಲೇ ಬೇಕು. ಇಲ್ಲದಿದ್ದರೆ ಮಗುವಿಗೆ ಹಾಲು ಹುಳಿಯಾಗುತ್ತೆʼ ಎಂಬ ಒತ್ತಡವುಂಟಾದಾಗ ಅಂದಿನ ಬಾಲ್ಯದ ಕನಸಿನ ಪಾತ್ರವು ಸಾಕಾರಗೊಂಡಿದ್ದರೂ ʼಹಲ್ಲೆಲ್ಲಾ ಕೆಂಪಾಗುತ್ತೆ, ನಾಲಿಗೆ ಮರಗಟ್ಟಿದ ಹಾಗಾಗಿ ರುಚೀನೇ ಗೊತ್ತಾಗಲ್ಲʼ ಎಂದೆಲ್ಲಾ ಸಬೂಬು ಹೇಳಿ, ಕಾಡಿ-ಬೇಡಿ ಒಂದು ಹೊತ್ತಿಗೆ ಇಳಿಸಿಕೊಂಡಿದ್ದೆ. ಈ ಮಕ್ಕಳೇ ಮುಂದೆ ಅಜ್ಜಿಯ ಬಾಯಲ್ಲಿ ನುರಿಯುತ್ತಿರುವ ಬೀಡಾವನ್ನೂ ಬಿಡದಂತೆ ದಂಬಾಲುಬೀಳುತ್ತಿವೆ ಎಂದು ತಿಳಿದಾಗ ʼಹಿಸ್ಟರಿ ರಿಪೀಟ್ಸ್‌ʼ ಎನ್ನುವುದು ಪುನಃಪುನಹ ಸಾಬೀತಾಗುವಂತಾಯ್ತು! ಅಂದಹಾಗೆ ನಮ್ಮ ಮನೆಯ ಪಕ್ಕದಲ್ಲೇ ಬೀಡಾ ಕಟ್ಟುವವರ ಮನೆಯೂ ಇದ್ದು ಅಲ್ಲಿಗೆ ಓಡಿಹೋಗಿ ಪಾನ್‌ ಬೀಡಾ ತರುವುದೆಂದರೆ ಮುದ್ದುಗಳಿಗೆ ಸಂಭ್ರಮವೋ ಸಂಭ್ರಮ.

          ಸೂಕ್ಷ್ಮತೆ ಹಾಗೂ ಸಂಕೀರ್ಣತೆಯು ಹೆಚ್ಚಾದ ಕಾಲ ಮಹಿಮೆಯಿಂದ ಇನ್ಟಂಟ್‌ ವಸ್ತುಗಳಿಗೆ ಬೇಡಿಕೆ ಇನ್ನಿಲ್ಲದಂತೆ ಏರಲಾರಂಭಿಸಿ ಪಾನ್ ಪರಾಗ್‌ನ ಚಿಕ್ಕ ಪ್ಯಾಕೆಟ್‌ನತ್ತ ತಾಂಬೂಲ ಚಿತ್ತ ದಾಪುಗಾಲಿಟ್ಟಿತು. ʼಪಾನ್ ಪರಾಗ್ ಖಾಯೆ, ಇಜ್ಜತ್ ಬಢ್ ಜಾತೀ ಹೈ!ʼ ನಂತರದ ಪಾನ್ ಪರಾಗ್ ಆಕರ್ಷಣೆಯು ಸಿನಿಮಾ ಡೈಲಾಗ್‌ಗಳು, ಹಾಸ್ಯ ದೃಶ್ಯಗಳು, ಜಾಹೀರಾತುಗಳಲ್ಲೆಲ್ಲಾ ಸ್ಥಾನವನ್ನು ಭದ್ರಪಡಿಸಿಕೊಂಡು ಎಲ್ಲೆಲ್ಲೂ ಖಾಲಿಯಾದ ರೆಡಿ ಟು ಈಟ್‌ ಪಾನ್‌ ಪರಾಗಿನ ಪ್ಯಾಕೆಟ್ಟುಗಳು ʼಸಮಾನರಾರಿಹರೈ ನನಗೆ…ʼ ಎಂದು ಹಾರಾಡಲಾರಂಭಿಸಿ ಪರಿಸರವನ್ನು ಮಲಿನಗೊಳಿಸುವ ಅಜೈವಿಕ ತ್ಯಾಜ್ಯಗಳೊಂದಿಗೆ ಪೈಪೋಟಿನಡೆಸಲಾರಂಭಿಸಿದವು. ಅಲ್ಲಿಂದೀಚೆಗೆ ಅದರ ಯಶಸ್ಸಿನಿಂದ ಪ್ರೇರಿತರಾಗಿ ಹಲವಾರು ತಂಬಾಕು ಯುಕ್ತ ಹೊಸ ಬ್ರಾಂಡ್‌ಗಳು ಅನಾರೋಗ್ಯದ ಗುಮ್ಮಗಳಂತೆ ಮಾರುಕಟ್ಟೆಯನ್ನು ಪ್ರವೇಶಿಸಲುದ್ಯುಕ್ತವಾದವು.

       ಇಂತಿಪ್ಪ ವಿದ್ಯಮಾನಗಳ ನಡುವೆ ನಮ್ಮ ಮನೆಗೆ ಅನೇಕ ವರ್ಷಗಳ ನಂತರ ಬಂದ ತಾಂಬೂಲ ಪ್ರಿಯ ಬಂಧುವೊಬ್ಬರಿಗೆ ಅವರ ಹಿರಿತನಕ್ಕೆ ತಕ್ಕಂತೆ ಷೋಡಶೋಪಚಾರಗಳನ್ನು ಮಾಡಿ ಊಟದ ನಂತರ ತಾಂಬೂಲದ ತಟ್ಟೆಯನ್ನು ಮುಂದಿಟ್ಟು ʼಪರಾಂಭರಿಸಬೇಕುʼ ಎನ್ನುವಂತೆ ವಿನೀತ ಭಾವದಿಂದ ನಿಂತಾಗ ಅವರು ನಗುತ್ತಾ ʼಓ ನಾನಾಗ್ಲೇ ಈ ಎಲಡಿಕೆ ಬಿಟ್ಟು ಬಾಳ ವರ್ಷ ಆಯ್ತು. ಈಗೇನಿದ್ರೂ ಸಕಲವನ್ನೂ ಸಾಂದ್ರೀಕರಿಸಿಕೊಂಡಿರುವ ಈ ಪ್ಯಾಕೆಟ್‌ ಮಾತ್ರʼ ಎಂದು ಪಾನ್ ಪರಾಗ್ಅನ್ನು ಪ್ರದರ್ಶಿಸಿದಾಗ ನಾವೇ ಓಲ್ಡ್‌ ಮಾಡೆಲ್‌ ಗಳಂತಾಗಿ ಕಂಗಾಲಾದೆವು!

       ಪರಾಗ ಸ್ಪರ್ಶದ ಪರಿಣಾಮದಂತಲ್ಲದೇ ನೇತ್ಯರ್ಥಕವಾಗಿ ಮುಂದಿನ ಪೀಳಿಗೆಗಳಿಗೆ ಗೀಳಿನ ರವಾನೆಯಾಗುತ್ತಾ ಸಾಂಪ್ರದಾಯಿಕ ತಾಂಬೂಲ ಪ್ರಿಯರನ್ನೂ ಎಲ್ಲಿ ತಂಬಾಕು ಪ್ರಿಯರಾಗುವತ್ತ ತನ್ನ ಕಬಂಧ ಬಾಹುಗಳನ್ನು ಚಾಚುತ್ತದೋ ಈ ಪರಾಗ ಸ್ಪರ್ಶಿನಿ ಎನ್ನುವ ಗೊಂದಲದಲ್ಲಿ ʼಕಾಲಾಯ ತಸ್ಮೈ ನಮಃʼ ಎಂದುಕೊಂಡು ಸುಮ್ಮನಿರಲಾಗುತ್ತದೆಯೇ..?..?..?
       ✍️ಪ್ರಭಾಮಣಿ ನಾಗರಾಜ, ಹಾಸನ


ಡಿಸೆಂಬರ್2025ರ 'ಮಯೂರ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲಲಿತ ಪ್ರಬಂಧ ' ಜಲ್ದೀದೇ ಜರೂರತ್ತು, ನಿಧಾನಕ್ಕಿಲ್ಲ ಕಿಮ್ಮತ್ತು!'








 

ಡಿಸೆಂಬರ್2025ರ 'ಮಯೂರ' ಪತ್ರಿಕೆಯಲ್ಲಿ ನನ್ನ ಲಲಿತ ಪ್ರಬಂಧ ' ಜಲ್ದೀದೇ ಜರೂರತ್ತು, ನಿಧಾನಕ್ಕಿಲ್ಲ ಕಿಮ್ಮತ್ತು!'

 ಡಿಸೆಂಬರ್2025ರ 'ಮಯೂರ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲಲಿತ ಪ್ರಬಂಧ ' ಜಲ್ದೀದೇ ಜರೂರತ್ತು, ನಿಧಾನಕ್ಕಿಲ್ಲ ಕಿಮ್ಮತ್ತು!' ನಿಮ್ಮ ಪ್ರೀತಿಯ ಓದಿಗೆ❤️🙏  


'ಮಯೂರ" ಪತ್ರಿಕಾ ಬಳಗಕ್ಕೆ ಧನ್ಯವಾದಗಳು🙏


🏃ಜಲ್ದೀದೇ ಜರೂರತ್ತು, ನಿಧಾನಕ್ಕಿಲ್ಲ ಕಿಮ್ಮತ್ತು!🐢


       ಚಿಕ್ಕವಳಿದ್ದಾಗಿನಿಂದಲೂ ʼನಿಧಾನವೇ ಪ್ರಧಾನʼವೆಂಬ ಮಹಾನ್‌ ಉಕ್ತಿಯನ್ನೇ ಬದುಕಿನ ಧ್ಯೇಯ ವಾಕ್ಯವನ್ನಾಗಿಸಿಕೊಂಡು ಬದುಕನ್ನಾರಂಭಿಸಿದ್ದೆನೇನೋ ಎನ್ನುವಂತೆ ʼನಿಧಾನʼವೆನ್ನುವುದು ನನ್ನ ಹುಟ್ಟುಗುಣದಂತೆಯೇ ನನ್ನನ್ನಾವರಿಸಿಬಿಟ್ಟಿತ್ತು. ಸ್ವಭಾವತಃ ನಿಧಾನ ಪ್ರಕೃತಿಯವಳಾಗಿದ್ದ ನಾನು ಯಾರಾದರೂ ಸ್ವಲ್ಪ ಆತುರಪಡಿಸಿದರೂ ಗಡಬಡಾಯಿಸಿ ಏನಾದರೂ ಅದ್ವಾನ ಮಾಡಿಬಿಡುತ್ತಿದ್ದೇನಾದ್ದರಿಂದ ನನಗೆ ಏನಾದರೂ ಕೆಲಸ ಹೇಳುವಾಗಲೂ‌ ಸೂಚನೆಗಳ ಒಂದು ದೊಡ್ಡ ಲಿಸ್ಟ್ ನೇ ಕೊಡುತ್ತಿದ್ದರು. ಆದರೂ ಆ ಲಿಸ್ಟಾತೀತವಾದ ಯಾವುದಾದರೊಂದು ತಪ್ಪನ್ನು ಮಾಡಿ ಹಿರಿಯರ ಅವಕೃಪೆಗೆ ಪಾತ್ರಳಾಗುತ್ತಿದ್ದೆ! ಈ ನನ್ನ ವೈಪರೀತ್ಯ ಸದ್ಗುಣದಿಂದ ಆಗಾಗ ಕೋಪಿಸಿಕೊಳ್ಳುತ್ತಿದ್ದ ನಮ್ಮ ಸೋದರತ್ತೆ ʼಇದೊಳ್ಳೆ ಎಮ್ಮೆ ಮೇಲೆ ಮಳೆ ಹುಯ್ದಹಾಗಿದೆ. ಮುಂದೆ ಹೇಗೋ ಏನೋʼ ಎಂದು ಬಹಳವಾಗಿ ಕಳವಳಗೊಳ್ಳುತ್ತಿದ್ದರು. ಸಧ್ಯದ ಪರಿಸ್ಥಿತಿಯಲ್ಲಿ ಅಕ್ಷರಶಃ ಸತ್ಯವಾಗಿರುವ ಅವರ ಆಗಿನ ಆತಂಕ ಪೂರ್ಣ ಭವಿಷ್ಯ ದರ್ಶನದ ಮುನ್ಸೂಚನೆಯನ್ನು ಅರಿಯಲಾಗದಿದ್ದ ನಾನು ಅದರ ದೃಶ್ಯರೂಪವನ್ನು ಕಲ್ಪಿಸಿಕೊಂಡು ಬಿದ್ದೂಬಿದ್ದೂ ನಗುತ್ತಾ ಅವರನ್ನು ಚಕಿತಗೊಳಿಸುತ್ತಿದ್ದೆ! ನಮ್ಮ ಮನೆಯಲ್ಲಿದ್ದ ಗೋಸಮೂಹ ಮೇಯ್ದುಕೊಂಡು ಸಂಜೆ ಮನೆಗೆ ಹಿಂತಿರುಗುವಾಗ ಸೋನೆಮಳೆ ಪ್ರಾರಂಭವಾಯ್ತೆಂದರೆ ದನಗಳೆಲ್ಲಾ ಬಾಲವನ್ನು ಮೇಲೆತ್ತಿಕೊಂಡು ನಾಗಾಲೋಟದಲ್ಲಿ(!) ಮನೆಯತ್ತ ದೌಡಾಯಿಸುತ್ತಿದ್ದರೆ ಅದೇ ಗುಂಪಿನಲ್ಲಿ ಅಲ್ಪಸಂಖಾತರಾಗಿದ್ದ ಒಂದೆರಡು ಎಮ್ಮೆಗಳು ಮಾತ್ರ ಮೊದಲೇ ನಿಧಾನವಾಗಿದ್ದ ತಮ್ಮ ನಡೆಯನ್ನು ಮತ್ತೂ ನಿಧಾನಗೊಳಿಸಿ ʼವಯ್….‌ʼ ಎನ್ನುತ್ತಾ ಪರಮಾನಂದದಲ್ಲಿ ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತಾ ಭಿಜಯಂಗೈಯುತ್ತಿದ್ದ ನೋಟ ವರ್ಣನಾತೀತ!


     ನನ್ನ ನಿಧಾನ ಗತಿಗೆ ನಮ್ಮ ತಂದೆ ಹೇಳುತ್ತಿದ್ದ ಒಂದು ಕಥೆಯೂ ಇಂಬುಗೊಡುವಂತಿತ್ತು. 

ʼಇಂದ್ರನು ವೃತಾಸುರನನ್ನು ಮೋಸದಿಂದ ಕೊಂದ ನಂತರ ಯಾರಿಗೂ ತಿಳಿಯದಂತೆ ಅಜ್ಞಾತವಾಗಿ ತಪಸ್ಸನ್ನು ಮಾಡಲು ಮಾನಸ ಸರೋವರದ ಕಮಲವೊಂದರಲ್ಲಿ ಸೂಕ್ಷ್ಮರೂಪದಲ್ಲಿ ಅಡಗಿಕೊಳ್ಳುತ್ತಾನೆ. ಇಂದ್ರನಿಲ್ಲದೆ ಸ್ವರ್ಗದಲ್ಲಿ ಅರಾಜಕತೆಯುಂಟಾದಾಗ ದೇವತೆಗಳೆಲ್ಲರೂ ಸೇರಿ ಇಂದ್ರ ಪದವಿಗೆ ಅರ್ಹನಾದ ವ್ಯಕ್ತಿ ನಹುಷ ಮಹಾರಾಜನೆಂದು ನಿರ್ಧರಿಸುತ್ತಾರೆ. ಇಂದ್ರ ಪದವಿಗೆ ಏರಿದ ನಂತರ ತನ್ನಲ್ಲುಂಟಾದ ಅಪಾರ ಶಕ್ತಿ ಮತ್ತು ಅಪರಿಮಿತ ಅಧಿಕಾರದಿಂದ ನಹುಷನಿಗೆ ಅಹಂಕಾರವುಂಟಾಗಿ ಇಂದ್ರ ಪತ್ನಿ ಶಚೀದೇವಿಯನ್ನು ಕಾಣಲು ಬಯಸುತ್ತಾನೆ. ಅವಳು ಹೇಗಾದರೂ ಈ ಸಂಕಷ್ಟದಿಂದ ಪಾರಾಗಲು ಸಪ್ತರ್ಷಿಗಳಿಂದ ಹೊರಲ್ಪಟ್ಟ ಪಲ್ಲಕ್ಕಿಯಲ್ಲಿ ತನ್ನನ್ನು ಕಾಣಲು ಬರಬೇಕೆಂದು ಶರತ್ತನ್ನು ಹಾಕುತ್ತಾಳೆ. ಹಾಗೆಯೇ ಹೋಗುವಾಗ ಸಪ್ತಋಷಿಗಳಲ್ಲಿ ಒಬ್ಬರಾದ ಕುಬ್ಜರಾಗಿದ್ದ ಅಗಸ್ತ್ಯ ಋಷಿಯ ಮಂದಗತಿಯಿಂದ ಬೇಸರಪಟ್ಟ ನಹುಷನು ʼಸರ್ಪಿಸರ್ಫಿ(ಬೇಗಬೇಗ)ʼ ಎಂದು ಅವರನ್ನು ಕಾಲಿನಿಂದ  ತಿವಿದು ಆತುರಪಡಿಸುತ್ತಾನೆ. ಇದರಿಂದ ಕುಪಿತರಾದ ಅಗಸ್ತ್ಯರು ʼಸರ್ಪೋದ್ಭವʼ ಎಂದು ಶಪಿಸುತ್ತಾರೆ. ನಂತರ ನಹುಷನು ಹೆಬ್ಬಾವಾಗಿ ಭೂಲೋಕವನ್ನು ಸೇರುತ್ತಾನೆʼ ಎಂದು ಅಣ್ಣ ಕಥೆ ಮುಗಿಸುವಷ್ಟರಲ್ಲಿಯೇ ʼಅದಕ್ಕೇ ಹೇಳೊದು ಆತುರಗಾರನಿಗೆ ಬುದ್ಧಿ ಮಟ್ಟ ಅಂತʼ ಎಂದು ಅಜ್ಜಿ ಕಥೆಯ ಸಾರಾಂಶ ನೀಡಿ ಪರಿಸಮಾಪ್ತಿಗೊಳಿಸುತ್ತಿದ್ದರು.


     ನಮ್ಮತ್ತೆಯ ಭವಿಷ್ಯವಾಣಿಯು ನಾನು ಶಾಲೆಗೆ ಸೇರಿದಾಗಿನಿಂದಲೇ ನಾಂದಿಗೆ ಚಾಲ್ತಿಯಿಟ್ಟಿತು. ಆ ಕಾಲದಲ್ಲಿ ಪ್ರಾಥಮಿಕ ಶಾಲೆಯೂ ನಮ್ಮೂರಿನಲ್ಲಿ ಇಲ್ಲದಿದ್ದರಿಂದ ಎರಡೂವರೆ ಮೈಲಿ ದೂರವಿದ್ದ ಪಕ್ಕದೂರಿನ ಸ್ಕೂಲಿಗೆ ನಾನು, ಅಕ್ಕ ಮತ್ತು ತಮ್ಮ ಮೂವರನ್ನೂ ಒಟ್ಟಾಗಿಯೇ ಸೇರಿಸಿ ಕಳಿಸಲಾರಂಭಿಸಿದರು. ದಿನವೂ ನಮ್ಮಕ್ಕ ನಮ್ಮಿಬ್ಬರನ್ನೂ ʼಪ್ರೇಯರ್‌ ಗೆ ಲೇಟಾಗುತ್ತೆʼ ಅಂತ ಕೈಹಿಡಿದು ದರದರನೆ ಎಳೆದುಕೊಂಡು ಹೋದರೂ ಆಗಲೇ ಪ್ರೇಯರ್‌ ಮುಗಿದೇ ಬಿಟ್ಟಿರುತ್ತಿದ್ದರಿಂದ ಲೇಟ್‌ ಲಥೀಫ್‌ಗಳಾದ ನಮ್ಮನ್ನೆಲ್ಲಾ ಒಂದು ಸಾಲಲ್ಲಿ ನಿಲ್ಲಿಸಿ ಬೆತ್ತದ ಸೇವೆ ಮಾಡಿಯೇ ಒಳಗೆ ಕಳಿಸುತ್ತಿದ್ದರು. ಮಾಸ್ಟರಿಗೆ ಚಿಕ್ಕವೆರಡನ್ನೂ ಕರೆದುಕೊಂಡು ಬರಬೇಕಾದ ಅಕ್ಕನ ಜವಾಬ್ದಾರಿಯ ಅರಿವಿದ್ದರಿಂದ ಅವಳಿಗೆ ಹಾಗೂ ಮುದ್ದಾಗಿದ್ದ ತಮ್ಮನಿಗೆ ಮಾಫಿ ಸಿಗುತ್ತಿತ್ತು. ಆದರೆ ನನ್ನ ಮುಖ ನೋಡಿದಾಕ್ಷಣವೇ ಅವರಿಗೇನೆನಿಸುತ್ತಿತ್ತೋ ಏನೋ ʼಬೇಗಬೇಗ ಬರಕ್ಕೇನು ದಾಡಿʼ ಎಂದು ಒಂದು ಬಾರಿಸಿಯೇ ಮುಂದೆ ಕಳಿಸುತ್ತಿದ್ದರು. ನನ್ನ ಕನಸಿನ ಶಾಲೆಯಲ್ಲಿ ದಿನವೂ ನನಗೆ ಸಿಗುತ್ತಿದ್ದ ಇಂಥಾ ಸ್ವಾಗತದಿಂದ ಬೇಸತ್ತ ನಾನು, ʼಸ್ಕೂಲಿಗೆ ಹೋಗೋದೇ ಇಲ್ಲʼ ಎಂದು ಅಳುತ್ತಾ ಕೂತಾಗ ನಮ್ಮತ್ತೆಯೇ ರೌದ್ರಾವತಾರದಲ್ಲಿ ಸ್ಕೂಲಿಗೆ ಬಂದು ʼಯಾವೋನವನು ಮೇಷ್ಟ ನನ್ನ ಕಂದನ್ನ ಹೊಡೆದೋನು?ʼ ಎಂದು ಅಬ್ಬರಿಸಿದಾಗ, ನಮ್ಮತ್ತೆಯ ವೀರಾವೇಶದ ಪರಿಚಯವಿದ್ದ ಮೇಷ್ಟ್ರು ಇನ್ನೆಲ್ಲಿ ತನ್ನ ಕೆಲಸಕ್ಕೇ ಸಂಚಕಾರ ಬರುತ್ತೋ ಎಂದು ಹೆದರಿ ʼಕ್ಷಮಿಸಿ ತಾಯಿ, ಇನ್ಯಾವತ್ತೂ ನಿಮ್ಮ ಮಗೂನ ಹೊಡೆಯಲ್ಲʼ ಎಂದು ಅನಾಮತ್ತಾಗಿ ನಮ್ಮತ್ತೆಯ ಕಾಲಿಗೇ ಬಿದ್ದಿದ್ದರಿಂದ ನಾನು ಆ ಕುತ್ತಿನಿಂದ ಪಾರಾಗುವಂತಾಯ್ತು ಹಾಗೂ ಅಕ್ಷರಸ್ಥರ ಸಾಲಿಗೂ ಸೇರುವಂತಾಯ್ತು! 


          ನಮ್ಮ ಸ್ಕೂಲ್ ನ ಸುತ್ತಾ ಕಡಲೇಕಾಯಿ ಬೆಳೆಯೋ ಹೊಲಗಳೇ ಹೆಚ್ಚಾಗಿದ್ದುದರಿಂದ ಆಗಾಗ ಹೆಣ್ಣು ಮಕ್ಕಳಿಗೆ ಕಡಲೇಕಾಯಿ ಸುಲಿಯೋ ಸ್ಪರ್ಧೆ ಮಾಡ್ತಿದ್ದರು. ನನ್ನ ಜೊತೆಯಲ್ಲಿದ್ದವರು ಎರಡೆರಡು ಕೈಲೂ ಸರಸರನೆ ಸುಲಿದು ಬೇಗ ಮುಗಿಸಿ ಬಹುಮಾನಕ್ಕಾಗಿ ಸೆಣೆಸುತ್ತಿದ್ದರು. ನಾನು ಒಂದೊಂದು ಕಾಯನ್ನೂ ನೆಲಕ್ಕೆ ಕುಟ್ಟಿ ಕುಯ್ಯೋಮರ್ರೊ ಎಂದು ಬಿಡಿಸುವುದು ನೋಡಿ ಅವರೆಲ್ಲಾ ಗೇಲಿಮಾಡಿಕೊಂಡು ನಗುತ್ತಿದ್ದರು. ಆದರೆ ಸೋತವರ ಬಳಿ ಉಳಿಯುತ್ತಿದ್ದ ಕಡಲೇಕಾಯನ್ನು ಅವರಿಗೇ ತಿನ್ನಲು ಬಿಡುತ್ತಿದ್ದರಿಂದ ನನ್ನ ಬಳಿ ಕಡಲೇಕಾಯಿಗಾಗಿ ಅವರೆಲ್ಲಾ ಕೈಯೊಡ್ಡುವುದು ತಪ್ಪುತ್ತಿರಲಿಲ್ಲ!


      ಮುಂದಿನ ಓದಿಗೆ ಐದುಮೈಲಿ ದೂರವಿದ್ದ ಪಟ್ಟಣದ ಹೈಸ್ಕೂಲಿಗೆ ಸೇರಿಸಿದರು. ನಮ್ಮೂರಿನಿಂದ ಅಲ್ಲಿಗಿದ್ದುದು ಒಂದೇ ಬಸ್ಸು. ಅದು ರಾತ್ರಿ ಒಂಬತ್ತಕ್ಕೋ-ಹತ್ತಕ್ಕೋ ಬಂದು ನಮ್ಮೂರಿನಲ್ಲಿ ಹಾಲ್ಟಾದರೆ ಬೆಳಿಗ್ಗೆ ಆರಕ್ಕೋ-ಏಳಕ್ಕೋ ಹೊರಟುಬಿಡುತ್ತಿತ್ತು. ಅದೇ ಬಸ್‌ನಲ್ಲಿ ಅದಾಗಲೇ ನನಗಿಂತ ಮೂರು ಕ್ಲಾಸ್‌ ಮುಂದಿದ್ದ ನಮ್ಮಕ್ಕ ಮೂರುವರ್ಷ ಓಡಾಡಿಕೊಂಡು ಓದಿ ಭೇಷ್‌ ಎನಿಸಿಕೊಂಡಿದ್ದಳು. ನಾನು ಹಾಸಿಗೆ ಬಿಟ್ಟು ಏಳುವ ಮೊದಲೇ ಬಸ್‌ ನಮ್ಮೂರ ಗಡಿದಾಟಿಬಿಟ್ಟಿರುತ್ತಿದ್ದುದರಿಂದ ʼಅವಳ ಹಾಗೆ ಇದು ಚುರುಕಿಲ್ಲ,ʼ ಎನ್ನುವ ಹಣೆಪಟ್ಟಿ ಕಟ್ಟಿಕೊಳ್ಳುವಂತಾಯ್ತು. ಹತ್ತನೇ ಕ್ಲಾಸಿಗೆ ಅನಿವಾರ್ಯ ಕಾರಣದಿಂದ ನಗರದ ಶಾಲೆಗೆ ಸ್ಥಳಾಂತರವಾಯ್ತು. ಅಲ್ಲಿಯ ಗಣಿತದ ಸರ್‌ ಲೆಕ್ಕ ಕೊಟ್ಟು ಮಾಡಲು ಹೇಳಿದಾಗ ನಮ್ಮ ಸೆಕ್ಷನ್‌ನಲ್ಲೇ ಜಾಣೆ ಎನಿಸಿಕೊಂಡಿದ್ದ ಹುಡುಗಿ ಬೇಗಬೇಗ ಲೆಕ್ಕಮಾಡಿ ತೋರಿಸಿ ಪದೇಪದೆ ತಪ್ಪು ಎನಿಸಿಕೊಳ್ಳುತ್ತಿದ್ದಳು. ಅಲ್ಲಿಗೆ ಹೊಸಬಳಾಗಿದ್ದ ನಾನು ನನ್ನದೇ ಮಂದ್ರಸ್ಥಾಯಿಯಲ್ಲಿ ಸಮಸ್ಯೆಯನ್ನು ಬಿಡಿಸಿದಾಗ ಮಾಸ್ಟರು ʼಅವಳ ಹಾಗೆ ಆಲೋಚನೆ ಮಾಡಿ ಲೆಕ್ಕ ಮಾಡು, ಆತುರ ಪಡಬೇಡʼ ಎಂದು ಮೊದಲ ಭಾರಿಗೆ ನನ್ನ ಮಂದಮತಿಯನ್ನು ಪ್ರಶಂಸಿಸುವುದರೊಟ್ಟಿಗೇ ತಮ್ಮ ಮೆಚ್ಚಿನ ವಿದ್ಯಾರ್ಥಿನಿಗೆ ಬುದ್ದಿವಾದ ಹೇಳಿ ನನ್ನನ್ನು ಅವಳ ಕೆಂಗಣ್ಣಿಗೆ ಗುರಿಯಾಗಿಸಿದ್ದರು. ಅವರಿಗೆ ಬಹಳ ಪ್ರಿಯವಾಗಿದ್ದ ʼಬೆಳೆಯಲು ನಿಧಾನವಾಗಿರುವ ಮರಗಳು ಅತ್ಯುತ್ತಮ ಫಲವನ್ನು ನೀಡುತ್ತವೆ,ʼ ಎನ್ನುವ ಫ್ರೆಂಚ್‌ ಲೇಖಕ ಮೋಲಿಯರ್‌ನ ಉಕ್ತಿಯನ್ನು ಹೇಳುವಾಗಲೆಲ್ಲಾ ಅದಾಗಲೇ ನನ್ನ ಪರವಾಗಿ ಪಾರ್ಟಿ ಕಟ್ಟಿದ್ದ ಹುಡುಗೀರು ಯೂನಿಫಾರಂನ ಕಾಲರ್‌ ಅಪ್ ಮಾಡಿಕೊಳ್ಳುವುದು ಗೋಪ್ಯವಾಗಿ ನಡೆದು ಅವಳ ಆಕ್ರೋಶಕ್ಕೆ ಆಜ್ಯವಾಗುತ್ತಿತ್ತು! ಆದರೆ ಅಂತರ್ಶಾಲಾ ಚಾರ್ಚಾಸ್ಪರ್ಧೆಗಳಿಗೆ ನಮ್ಮಿಬ್ಬರನ್ನೇ ಆಯ್ಕೆ ಮಾಡಿ ಕಳಿಸುವಾಗ ʼಪರʼವಾದಿಯಾಗುತ್ತಿದ್ದ ನನ್ನ ನಿಧಾನಗತಿಗೂ ʼವಿರೋಧಿʼಯಾಗುತ್ತಿದ್ದ ಅವಳ ತೀವ್ರಗತಿಗೂ ಬಹುಮಾನಗಳು ಲಭಿಸಿ ಒಟ್ಟಾರೆ ಪರಿಣಾಮವಾದ  ರೋಲಿಂಗ್‌ ಶೀಲ್ಡನ್ನು ಮೆರವಣಿಗೆ ಮಾಡಿಕೊಂಡು ನಮ್ಮ ಶಾಲೆಗೆ ತರುತ್ತಿದ್ದ ವರ್ಣಿಸಲಸದಳವಾದ ವೈಭವವು ನಮ್ಮನ್ನು ಸ್ನೇಹದಿಂದ ಬೆಸೆಯಿತು.   


        ಮೊದಲೆಲ್ಲಾ ನನ್ನನ್ನು ʼಆಮೆʼ ಎಂದು ಆಡಿಕೊಳ್ಳುತ್ತಿದ್ದ ನನ್ನ ತಮ್ಮ ಡಿಗ್ರಿಯಲ್ಲಿ ಪ್ರಾಣಿಶಾಸ್ತ್ರವನ್ನು ಓದಲಾರಂಭಿಸಿದ ನಂತರ 'ಸ್ಲಾತ್' ಎಂದು ಮರುನಾಮಕರಣ ಮಾಡಿ ಗೊಂದಲಗೊಳಿಸಿದ. ಮೊದಲಾದರೆ 'ಆಮೆ-ಮೊಲದ ರೇಸಲ್ಲಿ ಗೆಲ್ಲೋದು ಆಮೆನೇಯ. Slow and steady win the race' ಎಂದು ನನ್ನನ್ನು ನಾನು ಸಮರ್ಥಿಸಿಕೊಳ್ಳುತ್ತಿದ್ದೆ. ಆದರೆ ಇದ್ಯಾವುದಪ್ಪ ಸ್ಲಾತ್ ಎಂದು ತಲೆಕೆಡಿಸಿಕೊಳ್ಳುವಾಗ ಅದೊಂದು ಲೇಝಿ ಪ್ರಾಣಿಯೆಂದು ತಿಳಿದು ʼಛೆ, ಛೆ ಆಮೆಯಾಗಿದ್ರೇ ಒಳ್ಳೇದಿತ್ತುʼ ಎನಿಸುವಂತಾಯ್ತು. ಮರದ ರೆಂಬೆಯ ಮೇಲೆ ತೂಕಡಿಸುತ್ತಾ ಬಿದ್ದಿರುವ ಸ್ಲಾತ್‌ನ ಚಿತ್ರವನ್ನು ಟಿ-ಶರ್ಟ್‌ಗಳ ಮೇಲೆ ನೋಡುವಾಗಲೆಲ್ಲಾ ಏನಾದ್ರು ಆಮೇನೇ ಸರಿ ಎಂದು ಈಗಲೂ ಅನ್ನಿಸುವುದಿದೆ. ಬಹುಶಃ ಅದಕ್ಕೆ ಪುಷ್ಟಿಕೊಡುವ ಈ ನನ್ನ ʼಆಮೆʼ ಹನಿಗವನವೂ ಕಾರಣವಾಗಿರಬಹುದು:

ತನುವನಾವರಿಸಿದ ಚಿಪ್ಪ ಒಡವೆ ಸಿಂಗಾರ

ತಲೆ ಒಳಗೆಳೆದು ಮುದುರಿಕೊಳ್ಳುವ ಧೀರ

ನಿನ್ನಂತೆ ನನಗೂ ಇದ್ದಿದ್ದರೆ ದೇಹಕೆ ಚಿಪ್ಪ ಗೋಡೆ

ಬಂಡೆಯಾಗಿ ಬಿದ್ದಿರುತ್ತಿದ್ದೆ ಯಾವುದಾದರೂ ಸಮುದ್ರದ ದಂಡೆ!


           ಹಾಗೂ ಹೀಗೂ ನಿಧಾನಗತಿಯಲ್ಲೇ ಜೀವನ ಸಾಗಿಸುತ್ತಿದ್ದ ನನಗೆ ಬದುಕು ಮುನ್ನಡೆದಂತೆ ಅದರ ತೀವ್ರಗತಿಯೊಂದಿಗೆ ಹೆಜ್ಜೆ ಕೂಡಿಸುವುದು ಅಷ್ಟೇನೂ ಸುಲಭ ಸಾಧ್ಯವಾಗಲಿಲ್ಲ. ನಮ್ಮ ಕುಟುಂಬದಲ್ಲಿಯೇ ನಿಧಾನಕ್ಕೆ ಪ್ರಸಿದ್ಧಿಯಾಗಿದ್ದ ನನ್ನ ಈ ಹುಟ್ಟುಗುಣವನ್ನು ವಿವಾಹ ಸಂದರ್ಭದಲ್ಲಿ 'ಹುಡುಗಿ ನಿಧಾನಸ್ಥೆ' ಎಂದು ಧನಾತ್ಮಕವಾಗೇ ಪ್ರಾರಂಭಿಸಿ ಪತಿಯ ಬಂಧು ವರ್ಗದಲ್ಲೂ  ಪಸರಿಸುವಂತೆ ಮಾಡಿಬಿಟ್ಟರು. ಇದರಿಂದ ಪ್ರೇರಿತರಾದ ನನ್ನವರು ಕುಟುಂಬದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲೂ ನನ್ನತ್ತ ತಿರುಗಿಯೂ ನೋಡದಂತಾದದ್ದು ಮಾತ್ರವಲ್ಲದೇ ಮಾತಿಗೆ ಮೊದಲೇ ಆತುರಪಡಿಸಲು ಮೊದಲಿಟ್ಟು ಸಂಸಾರ ರಥದ ಮೇಲೆ ತಮ್ಮ ಮೂಲ ಗುಣವಾದ ಜಲ್ದೀ ಝಂಡಾವನ್ನು ಸ್ಥಾಪಿಸಿಯೇಬಿಟ್ಟರು. ಸುತ್ತಿನದೂ ನಮ್ಮ ಹಳ್ಳಿಯ ಸ್ನಿಗ್ಧ-ಶಾಂತ (ಒಮ್ಮೊಮ್ಮೆ ರಣ-ರೌಧ್ರ) ವಾತಾವರಣದಂತಲ್ಲದೇ ನನ್ನ ಪರಿಸ್ಥಿತಿ: 


ಗರಗರ ತಿರುಗು ಚಕ್ರದ 

ಅಂಚಿಗೆ ಒಗೆಯಲ್ಪಟ್ಟ ಕಾಯ

ವಿರಮಿಸಲು ಬೆಂಬಿಡದ ಭಯ

ಸ್ವಲ್ಪ ತಂಗುವೆನೆಂದರೂ 

ತಪ್ಪದ ಅಪಾಯ!......

                      ಎನ್ನುವಂತಾಗಿ ಪತಿ-ಪ್ರಭುತ್ವದ ರಾಕೆಟ್ ತೇರಿನ ಚಕ್ರಕ್ಕೆ ಸಿಲುಕಿ ಏರುಪೇರಾಗತೊಡಗಿತು. ಉದ್ಯೋಗಸ್ಥಳಾಗಿದ್ದ ನಾನು ಜಿಂದಗಿಯ ಓಟದೊಂದಿಗೆ ಒಂದಾಗಿ ಹೆಜ್ಜೆಗೂಡಿಸುವುದು ಅನಿವಾರ್ಯವಾಯಿತು. ಸ್ವಲ್ಪ ಸೀರಿಯಸ್‌ ಆಯ್ತೇನೋ! ಕ್ಷಮಿಸಿ, ಜಲ್ದಿಯ ಪ್ರಭಾವ! ಎದ್ದಾಕ್ಷಣವೇ ದಡಬಡ ಕೆಲಸ ಮಾಡಿಕೊಂಡು, ಮಕ್ಕಳನ್ನು ಸ್ಕೂಲಿಗೆ ಸಿದ್ಧಮಾಡಿ, ನಿಂತುಕೊಂಡೇ ನಾಲ್ಕು ತುತ್ತು ನಾಶ್ತಾ ಸೇವಿಸಿ ನೆಮ್ಮದಿಯನ್ನು ನಷ್ಟಗೊಳಿಸಿಕೊಂಡು ಒಂದೇ ಉಸುರಿಗೆ ಓಡಿ ಬಸ್‌ ಹಿಡಿದು…. ಟೆನ್ಷನ್ ಟೆನ್ಷನ್ ಎಲ್ಲೆಲ್ಲೂ ಟೆನ್ಷನ್…


           ಓಡುತ್ತಿರುವವಳು ನಾನೊಬ್ಬಳೇ ಅಲ್ಲ. ಒಂದನ್ನೊಂದು ಹಿಮ್ಮೆಟ್ಟಿ ಸಾಗುವ ವಾಹನಗಳು, ತಮ್ಮ ಗಮ್ಯವನ್ನು ತಲುಪಲು ತರಾತುರಿಯಲ್ಲಿ ಸಾಗುತ್ತಿರುವ ಜನ ಪ್ರವಾಹ, ಎಲ್ಲೆಲ್ಲೂ ವೇಗೋತ್ಕರ್ಷಕ ಮಿಂಚಿನ ಓಟ… ʼಓಡಿ ಹೋಗಿ ಗೋಡೆ ಮುಟ್ಟಿದ ಹಾಗೆ' ಎನ್ನುತ್ತಿದ್ದ ಅಜ್ಜಿಯ ಉಕ್ತಿಯಂತೆ!


        ಭೂಮಿ ಹಾಗೂ ಗ್ರಹಗಳು ಸೂರ್ಯನನ್ನು ಸುತ್ತುವ ಹಾಗೂ ನಮ್ಮ ಸೌರವ್ಯೂಹದಂತೆಯೇ ಇತರ ಖಗೋಳ ವ್ಯವಸ್ಥೆಗಳಲ್ಲೆಲ್ಲಾ ಸುವ್ಯವಸ್ಥೆಯಲ್ಲಿರಲು ವೇಗ ಅನಿವಾರ್ಯ. ಪರಮಾಣುವಿನೊಳಗಿನ ಎಲೆಕ್ಟ್ರಾನ್ಗಳದ್ದೂ ಎಂದೂ ನಿಲ್ಲದ ಓಟವೇ. ಸುತ್ತಮುತ್ತಲಿನ ಮೈಕ್ರೋ-ಮ್ಯಾಕ್ರೋ ನಿರ್ಜಿವ ಜಗತ್ತೂ ಜಲ್ದಿಯ ಜರೂರತ್ತಿನಲ್ಲೇ ಇದೆ. ಆದರೆ ನಮ್ಮಂಥಾ ಕ್ಷುದ್ರಜೀವಿಗಳು ಅವಿಶ್ರಾಂತ ಆತುರದಲ್ಲಿದ್ದರೆ ಜೀವ ಯಂತ್ರದ ಪಾಡೇನು ಎಂಬ ಆಲೋಚನೆಯೂ ಬರುವುದಿದೆ.


        ಮೊದಲೆಲ್ಲಾ ಮನೆಗೆ ಅತಿಥಿಗಳು ಬಂದರೆ ಹಾಗೂ ಸಮಾರಂಭಗಳಲ್ಲಿ ʼಸಾವಧಾನವಾಗಿ ಊಟವಾಗಲಿʼ ಎಂದು ಪ್ರತಿಯೊಬ್ಬರಿಗೂ ಹೇಳುವುದೇ ಒಂದು ಸತ್ಸಂಪ್ರದಾಯವಾಗಿತ್ತು. ಈಗ ಮದುವೆ, ಗೃಹಪ್ರವೇಶಗಳಂಥಾ ಕಾರ್ಯಕ್ರಮಗಳಿಗೆ ಹೋದಾಗ ಗಿಜಿಗುಡುವ ಆ ಜನಜಂಗುಳಿಯಲ್ಲಿ ತಮಗೊಂದು ಊಟದೆಲೆಯನ್ನು ರಿಸರ್ವ್‌ ಮಾಡಿಕೊಳ್ಳುವುದೇ ಹರಸಾಹಸವಾಗಿ ಇನ್ನೂ ಊಟಮಾಡುತ್ತಿರುವವರ ಹಿಂದೆ ನಿಂತು ಎಷ್ಟು ಹೊತ್ತಿಗೆ ಮುಗಿಸ್ತಾರಪ್ಪಾ (ಜಲ್ದಿಜಲ್ದಿ!) ಎಂದು ಕಾಯುವವರ ನಡುವೆ ನಿಧಾನದ ಮಾತಿರಲಿ ಎದ್ದರೆ ಸಾಕು ಎನ್ನುವ ವಾತಾವರಣವುಂಟಾಗಿರುತ್ತದೆ. ಇನ್ನು ಹೊಟೆಲ್‌ಗಳಲ್ಲಿ ಅದೂ ವೀಕೆಂಡ್‌ಗಳಲ್ಲಂತೂ ಕೇಳುವಂತೆಯೇ ಇಲ್ಲ. ನಿಂತು, ನಡೆಯುತ್ತಾ, ಓಡುತ್ತಾ ತಿನ್ನುವ ವೈವಿಧ್ಯ ಮಾದರಿಗಳನ್ನೂ ಕಾಣಬಹುದು. 


       ಇಂಥಾ ವೈಪರೀತ್ಯಗಳ ನಡುವೆ ಇತ್ತೀಚೆಗೆ ವೈರಲ್ಲಾಗಿದ್ದ ಒಂದು ʼಲೆಮನ್ ರೇಸ್ʼ ವಿಡಿಯೋ ನನ್ನನ್ನು ಬಹಳವಾಗಿ ಆಕರ್ಷಿಸಿತು. ಬಾಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಆಡುವ ಆಟದಲ್ಲಿ ಪಾಲ್ಗೊಂಡಿದ್ದ ಪುಟಾಣಿಗಳು ಬೇಗ ಗುರಿ ಮುಟ್ಟುವ ಉದ್ದೇಶದಿಂದ ಓಡೋಡಿ ಹೋಗುವಾಗ ಎಲ್ಲರ ಬಾಯಲ್ಲಿರುವ ಚಮಚದಲ್ಲಿನ ನಿಂಬೆಹಣ್ಣು ಬಿದ್ದು ಹೋಗುತ್ತದೆ. ಇವರ ನಡುವಿನ ಪುಟ್ಟ ಬಾಲಕನೊಬ್ಬ ಎಲ್ಲರೂ ಓಡಿ ಹೋದರೂ ತಲೆಕೆಡಿಸಿಕೊಳ್ಳದೆ ನಿಧಾನವಾಗಿ ಸಾಗುವುದರಿಂದ ಅವನ ನಿಂಬೆಹಣ್ಣು ಬೀಳದೆ ಗುರಿಯನ್ನು ತಲುಪಿ ಜಯ ಸಾಧಿಸಿದ ವಿಡಿಯೋವನ್ನು 10 ಮಿಲಿಯನ್ ಮಂದಿ ವೀಕ್ಷಿಸಿ ʼನಿಧಾನವೇ ಪ್ರಧಾನʼ ಎನ್ನುವ ಹಿರಿಯರ ಮಾತು ಎಷ್ಟು ನಿಜ ಎಂದು ಹೇಳಿದ್ದಾರೆ. ʼಜೀವನದಲ್ಲಿ ನಿಧಾನವಾಗಿ ಹೋದರೆ ಜಯ ಸಾಧಿಸುತ್ತೀರ, ಜಯವನ್ನು ಬೇಗನೆ ಸಾಧಿಸಬೇಕು ಎನ್ನುವ ಉದ್ದೇಶದಿಂದ ಓಡಬೇಡಿʼ ಎನ್ನುವ ಮಾತೂ ಹರಿದಾಡಿ ʼಆಹಾ ನಾನೆಲ್ಲಿದ್ದೇನೆʼ ಎಂದು ಗಾಬರಿಪಡುವಂತಾಯ್ತು. ಓಡದಿದ್ದರೆ ಬಸ್‌ ಸಿಗುವುದಿಲ್ಲವಲ್ಲ ಎನಿಸಿದರೂ ಈಗಿನ ವಿಶ್ರಾಂತ ಬದುಕಿನಲ್ಲಂತೂ ಆ ಚಿಂತೆಯಿಲ್ಲವಲ್ಲ ಎಂಬ ನಿರಾಳದಲ್ಲಿ ಜಲ್ದಿಯ ಜರೂರತ್ತಿಗೆ ʼಗುಡ್‌ ಬೈʼ ಹೇಳಿ ಸಾವಧಾನವಾಗಿ ಬದುಕ ಮುನ್ನಡೆಸುತ್ತಾ ನನ್ನ ಸಹಜ ಪ್ರವೃತ್ತಿಯಾದ ಧ್ಯಾನಸ್ಥ ನಿಧಾನಕ್ಕೆ ಶರಣಾಗುತ್ತಿದ್ದೇನೆ. 

                                     

     ✍️ಪ್ರಭಾಮಣಿ ನಾಗರಾಜ,

              ಹಾಸನ

Friday, November 21, 2025

ಲಲಿತ ಪ್ರಬಂಧ 'ಜಲ್ದೀದೇ ಜರೂರತ್ತು, ನಿಧಾನಕ್ಕಿಲ್ಲ ಕಿಮ್ಮತ್ತು!'

 🌸ನನ್ನ  ಲಲಿತ ಪ್ರಬಂಧ 'ಜಲ್ದೀದೇ ಜರೂರತ್ತು, ನಿಧಾನಕ್ಕಿಲ್ಲ ಕಿಮ್ಮತ್ತು!' ಡಿಸೆಂಬರ್2025ರ  'ಮಯೂರ' ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ🌼

'ಮಯೂರ' ಪತ್ರಿಕಾ ಬಳಗಕ್ಕೆ ಧನ್ಯವಾದಗಳು❤️🙏



Tuesday, August 12, 2025

ಉದಯವಾಣಿ'ಯ 'ಸಾಪ್ತಾಹಿಕ ಸಂಪದ'ದಲ್ಲಿ 'ನಾನೂ ನನ್ನ ತೂಕವೂ...'


 ಉದಯವಾಣಿ'ಯ 'ಸಾಪ್ತಾಹಿಕ ಸಂಪದ'ದಲ್ಲಿ 'ನಾನೂ ನನ್ನ ತೂಕವೂ...'

 ಆಗಸ್ಟ್10, 2025ರಂದು ಪ್ರಕಟವಾಗಿದೆ. ಓದಿ ಪ್ರತಿಕ್ರಿಯಿಸಿ🌼


🧘️ನಾನೂ ನನ್ನ ತೂಕವೂ... 

 

  ʼಭೂಮಿ ತೂಕದ ವ್ಯಕ್ತಿ' ಎಂಬ ಗೌರವಕ್ಕೆ ಪಾತ್ರರಾಗಿದ್ದ ಘನದೇಹಿಯಾದ ನನ್ನ ತಾಯಿಯ ಒಡಲಿನಿಂದ ಮಡಿಲಿಗೆ ಬಂದು ಸಮೃದ್ಧ ಪಾಲನೆ-ಪೋಷಣೆಗಳಿಂದ ಸೊಂಪಾಗಿ ಬೆಳೆಯುತ್ತಿದ್ದ ನನಗೆ ಸುತ್ತಲಿನ ವಾತಾವರಣವೂ ಇಂಬುಗೊಡುವಂತಿತ್ತು.  ಮನೆಯಲ್ಲಿದ್ದ ಗೋಸಮೂಹದಲ್ಲಿ ಕರಾವು ನಿರಂತರವಾಗಿದ್ದುದರಿಂದ ಪೂರ್ಣಚಂದ್ರನಂತೆ ವೃದ್ಧಿಸುತ್ತಿದ್ದ ನನ್ನ ದೇಹಸಿರಿಗೆ ಅನುಕೂಲಕರವೇ ಆಗಿದ್ದು ಮೋಸವೆಸಗದಂತೆ ಗುಂಡುಗುಂಡಾಗಿ ಗುಜ್ಜಾನೆ ಮರಿಯಂತೆ ಅಥವಾ ಪ್ರಸ್ತುತ ಕುಂಗ್-ಫು-ಪಾಂಡನಂತೆ ಬೆಳೆದಿದ್ದ ನನ್ನನ್ನು ದೊಡ್ಡ ಮಕ್ಕಳೆಲ್ಲಾ ʼಪುಳಮೂಟೆʼ ಎಂದು ಎತ್ತಿಕೊಂಡು ಹೋಗಿ ಒಣಹುಲ್ಲುಗುಡ್ಡೆಯ ಎದುರು ಹಾಸಿದ ಹುಲ್ಲಿನ ಮೇಲೆ ಎಸೆಯುತ್ತಿದ್ದರು!   

     

      ಮೊದಮೊದಲು ನಾನೇನೂ ಇದನ್ನು ಸಮಸ್ಯೆಯೆಂದು ಪರಿಗಣಿಸಿರಲೇ ಇಲ್ಲ. ನನ್ನನ್ನು ಬೆಂಬೆತ್ತಿದ್ದ ಈ ಭೂತದ ಪರಿಚಯವಾಗಲು ನಾನು ಶಾಲೆಗೇ ಹೋಗಬೇಕಾಯ್ತು.  ಶಾಲೆಯಿಂದ  ಮೆಡಿಕಲ್‌ ಚೆಕಪ್‌ ಮಾಡಿಸುವಾಗ ನನ್ನ ತೂಕ ಬರೋಬ್ಬರಿ 100ಪೌಂಡ್ ಇದ್ದು ನನ್ನ ಸಹಪಾಠಿಗಳ ದೃಷ್ಟಿಯಲ್ಲಿ ನಾನೇನೋ ಮರಿಯಾನೆಯೇನೋ ಎನ್ನುವಂತಾಗಿ ಆಗಿನಿಂದ ಒಂದು ಅಪರಿಹಾರ್ಯ ಕೊರಗು ನನ್ನ ತಲೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. 

              

          ತ್ವರಿತಗತಿಯಲ್ಲಿ ಓಡಲಾರಂಭಿಸಿದ ಕಾಲ ನನ್ನನ್ನು ತಾಯಿಯಾಗುವ ಹಂತಕ್ಕಾಗಲೇ ತಂದುನಿಲ್ಲಿಸಿತು. ಈ ನಡುವೆ ನನ್ನ ಅನೇಕಾನೇಕ ಪ್ರಯೋಗಗಳಿಂದ ಅಡ್ಡಲೆಯಂತೆ ಏರಿ-ಇಳಿದು ಕಡೆಗೆ ದೊರೆತ ಈ ಅಮೂಲ್ಯ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅಡ್ಡಾದಿಡ್ಡಿಯಾಗಿ ವಿತ್‌ ಲೈಸೆನ್ಸ್‌ ಬೆಳೆಯಲಾರಂಭಿಸಿದ್ದೆ. ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಅನಿವಾರ್ಯ ಕಾರಣಗಳಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ದಿನಾಂಕಕ್ಕೆ ತಿಂಗಳು ಮೊದಲೇ ದಾಖಲಾಗಿದ್ದಾಗ ಬಸುರಿಯ ಬಯಕೆಯೆಂದು ಬಂಧುಗಳು ತಂದುಕೊಡುತ್ತಿದ್ದ ಬಗೆಬಗೆಯ ಭಕ್ಷ್ಯಗಳನ್ನು ಸ್ವಾಹಾಮಾಡುತ್ತಾ ಕಾಲದೂಡುತ್ತಿದ್ದ ನಾನು ಪ್ರತಿದಿನವೂ ಆಸ್ಪತ್ರೆಯ ಎಲ್ಲಾ ಕಾರಿಡಾರ್‌ಗಳಲ್ಲೂ ವಾಕ್‌ ಅಂಡ್ ಟಾಕ್ ಮಾಡುತ್ತಾ ಕೇಳಿದವರಿಗೆಲ್ಲಾ ಪ್ರವರ ಒಪ್ಪಿಸುತ್ತಾ ಕಟ್ಟಡದ ಮೂಲೆಮೂಲೆಗೂ ಚಿರಪರಿಚಿತಳಾಗಿಬಿಟ್ಟೆ. ಸ್ಕ್ಯಾನಿಂಗ್‌ ಸೌಲಭ್ಯವಿಲ್ಲದಿದ್ದ ಆ ಕಾಲದಲ್ಲಿ ನನ್ನನ್ನು ನೋಡಿದವರೆಲ್ಲಾ ನನ್ನ ಮಹೋನ್ನತ ಉದರವನ್ನು ತಮ್ಮ ಕಣ್ಣುಗಳಿಂದಲೇ ಅಳೆದು‌ ಸ್ಕ್ಯಾನ್ ಮಾಡಿ ಅವಳಿ-ಜವಳಿ ಎಂಬ ತೀರ್ಮಾನಕ್ಕೆ ಬಂದಿದ್ದರು. ನಾನಂತೂ ನನ್ನ ಕೂಸಿನ ತಾಣವಾಗಿದ್ದ ಪರಮಪ್ರಿಯ ಉದರವನ್ನು ಪೋಷಿಸುವುದರಲ್ಲಿಯೇ ನಿರತಳಾಗಿದ್ದೆ. ಒನ್ ಫೈನ್‌ ಡೇ ಸಿಝೇರಿಯನ್‌ಆಗಿ ನನ್ನ ಕಂದ ಆಯಾಸಪಡದೇ ತೊಟ್ಟಿಲಿನಿಂದ ಮೇಲೆತ್ತಿಕೊಂಡಂತೆ ಧರೆಗಿಳಿದೇಬಿಟ್ಟಿತು. ಆಸ್ಪತ್ರೆಯ ಸಿಬ್ಬಂದಿ ತಪ್ಪಾದ ತಮ್ಮ ಲೆಕ್ಕಾಚಾರದ ನಿರಾಸೆಯಿಂದ ʼಈಯಮ್ಮ ಹೊಟ್ಟೇನೇ ಬೆಳೆಸಿಕೊಂಡಿತ್ತು ಅಂತ ಕಾಣ್ತದೆ. ನಾವು ಅವಳಿನಾದ್ರೂ ಹುಟ್ತವೆ ಅಂದ್ಕೊಂಡ್ರೆ ಇಲಿಮರಿ ಹಂಗಿರೋ ಒಂದೇ ಹುಟ್ಟದೆʼ ಎಂದು ಮೂದಲಿಸಿದರು! ಇದಕ್ಕಿಂತಲೂ ಆದ ದೊಡ್ಡ ಅವಮಾನವೆಂದರೆ ನಮ್ಮ ಜೂನಿಯರ್‌ ಕಾಲೇಜಿನ ಪ್ರಿನ್ಸಿಪಾಲರು ʼನೋಡಿ, ಮೇಡಂ ಈಗ್ಲೂ ಹೇಗಿದಾರೆ! ಬೋರ್ಡ್‌ ಮುಂದೆ ನಿಂತ್ರೆ ಮಕ್ಕಳು ಥರಗುಟ್ಟಿಕೊಂಡು ನಡುಗಬೇಕುʼ ಎಂದು ಮೆಚ್ಚುಗೆಯ ದೃಷ್ಟಿ ಬೀರಿದಾಗ ನಾನೇನಾದರೂ ಲಂಕಿಣಿಯಂತೆ ಕಾಣುತ್ತಿದ್ದೀನಾ ಎಂದುಕೊಳ್ಳುವಂತಾಯ್ತು!

             

        ಪರಿಸ್ಥಿತಿಗಳು ಹೀಗೇ ಪ್ರತಿಕೂಲವಾಗಿದ್ದ ಹಿನ್ನೆಲೆಯಲ್ಲಿ ಒಮ್ಮೆ ಡಾಕ್ಟರನ್ನು ಕಾಣಲು ಹೋಗಿದ್ದಾಗ ಆಕೆ ಬಹಳ ಆತ್ಮೀಯತೆಯಿಂದಲೇ ʼನೋಡಮ್ಮ, ನೀನು ಈಗಿನಿಂದಲೇ ಹೀಗಿದ್ದರೆ ಇದೇ ಮೈಯನ್ನು ಲೈಫ್‌ ಲಾಂಗ್‌ ಹೊತ್ತುಕೊಂಡಿರಬೇಕಾಗುತ್ತೆ,ʼ ಎಂಬ ಸೌಮ್ಯಾಸ್ತ್ರವನ್ನು ನನ್ನತ್ತ ಒಗೆದು ಮತ್ತೆ ಬರೋವಾಗ 10ಕೆಜಿಯಾದರೂ ಕಮ್ಮಿಯಾಗಿರಬೇಕೆಂಬ ಟಾಸ್ಕನ್ನೂ ನೀಡಿದರು. ಅದೇ ಸಂದರ್ಭದಲ್ಲಿ ನಮ್ಮತ್ತೆಯವರನ್ನು ನೋಡಲು ಹಳ್ಳಿಗೆ ಹೋಗಿದ್ದಾಗ ತಮ್ಮ ಹಿರಿಯ ಮಗುವಿನ ಚೌಲಕ್ಕೆ ಕರೆಯಲು ಬಂದಿದ್ದ ದಂಪತಿಗಳು ಹೋದ ನಂತರ ʼಎರಡನೇ ಮಗುವಾದರೂ ಎಷ್ಟು ತೆಳ್ಳಗೆ ಚೆಕ್ಕಾಗಿದಾಳೆ ʼ ಎಂದು ನನ್ನ ಚೆಕ್‌ ನೀಡಲಾಗದ ತೂಕೋತ್ಕರ್ಷಕ್ಕೆ ಸವಾಲೆಸೆದರು. ಅತ್ಯಂತ ಸೌಮ್ಯ ಸ್ವಭಾವದವರಾದ ಅವರ ಆಂತರಿಕ ತುಮುಲವನ್ನು ಅರ್ಥಮಾಡಿಕೊಳ್ಳುವ ಮೊದಲೇ ನನ್ನಲ್ಲೆಲ್ಲಿ ಅಂತಃಕುಸಿತವುಂಟಾಗುವುದೋ ಎಂದು ಹೆದರಿ ಶೀಘ್ರವೇ ಕಾರ್ಯಪ್ರವೃತ್ತಳಾದೆ. ಹಗಲು ಹಾಸಿಗೆಯಿಂದ ಎದ್ದಾಕ್ಷಣದಿಂದಲೇ ಮುಗಿಯದ ಕೆಲಸಗಳ ಪರಂಪರೆಯಿಂದ ಬಂಧಿತಳಾಗುತ್ತಿದ್ದರಿಂದ ಮಲಗಿದಂತೆಯೇ ಮಾಡುವ ವಿವಿಧ ವ್ಯಾಯಾಮಗಳನ್ನು ಲಭ್ಯ ಮೂಲಗಳಿಂದ ಪಡೆದು ಅಭ್ಯಾಸಕ್ಕೆ ಮೊದಲಿಟ್ಟೆ. ಜೊತೆಗೇ ಸೊಪ್ಪುಸೆದೆಗಳಿಂದಲೇ ಹೊಟ್ಟೆತುಂಬಿಸಿಕೊಳ್ಳುವ ಡಯಟ್ನೊಂದಿಗೆ ಸಪೂರ ಸುಂದರಿಯಾಗುವ ಕನಸುಕಾಣುತ್ತಾ ಮಧ್ಯೆಮಧ್ಯೆ ಹೊಸದಾಗಿ ಬಸ್‌ಸ್ಟ್ಯಾಂಡ್‌ನಲ್ಲಿಟ್ಟ ತೂಕದ ಮೆಶೀನಿಗೆ ಒಂದು ರೂಪಾಯಿ ಕಾಯಿನ್ ದಕ್ಷಿಣೆ ಹಾಕಿ ತೂಕ ನೋಡಿಕೊಳ್ಳುತ್ತಾ ಮುನ್ನಡೆಯುತ್ತಿದ್ದಾಗ ಪುನಃ ಡಾಕ್ಟರನ್ನು ಕಾಣಲು ಹೋಗಬೇಕಾಯ್ತು. ನನ್ನನ್ನು ನೋಡಿದಾಕ್ಷಣವೇ ಗಾಬರಿಯಾದ ಡಾಕ್ಟ್ರಮ್ಮ, ʼಅದ್ಹೇಗೆ ಇಷ್ಟು ಸಣ್ಣಗಾದ್ರಿ?ʼ ಎಂದು ವಿಚಾರಿಸಿ ಅಲ್ಲೇ ಇದ್ದ ಇನ್ಸ್ಪೆಕ್ಷನ್‌ ಟೇಬಲ್‌ ಮೇಲೇ ಡೆಮಾನ್ಸ್‌ಟ್ರೇಟ್‌ ಮಾಡಿ ತೋರಿಸಲು ಹೇಳಿದರು. ನಾನಂತೂ ಡಾಕ್ಟರಿಂದಲೇ ಸರ್ಟಿಫಿಕೇಟ್‌ ಸಿಕ್ಕ ಗೆಲುವಿನ ಅತ್ಯುತ್ಸಾಹದಲ್ಲಿ ಅವರಿಗೆ ಎಲ್ಲವನ್ನೂ ಪ್ರಾಕ್ಟಿಕಲ್ಲಾಗೇ ವಿವರಿಸಿದೆ. ನಮ್ಮತ್ತೆಯೂ ʼನೀನು ಸಣ್ಣಗಾಗಿದ್ದು ಇನ್ನು ಸಾಕಮ್ಮ, ನೋಡಕ್ಕಾಗಲ್ಲʼ ಎಂದು ಆಶೀರ್ವದಿಸಿದರು. ಮತ್ತೊಮ್ಮೆ ಡಾಕ್ಟರನ್ನು ಕಾಣಲು ಹೋದಾಗ ʼನೀವು ಅದ್ಹೇಗೆ ತೂಕ ಇಳಿಸಿಕೊಂಡುಬಿಟ್ಟಿರೊ, ನನಗಂತೂ ಮನೆಗೆ ಬರೋ ಗೆಸ್ಟ್‌ಸ್‌/ವಿಸಿಟರ್ಸ್‌ ನಡುವೆ ಏನುಮಾಡಕ್ಕೂ ಆಗ್ತಿಲ್ಲʼ ಎಂದು ಪೇಚಾಡಿಕೊಂಡರು. ಅಲ್ಲಿಗೆ  ಸಣ್ಣಗಾಗುವುದೂ ಸಾಧ್ಯ ಎನ್ನುವ ಒಂದು ಅಧ್ಯಾಯ ಮುಗಿಯಿತು. 

            

       ಮುಂದಿನ ಜೀವನದ ಏರುಪೇರುಗಳಲ್ಲಿ ನನ್ನ ತೂಕದ ಪಾಡು ಗಾಳಿಪಟವನ್ನು ಹಾರಿಸುವಂತೆ ನಾನು ಆಗಾಗ ಜಗ್ಗಿ ಎಳೆದು ಕೆಳಗಿಳಿಸುವುದು, ಸ್ವಲ್ಪ ಸಡಿಲಾದಾಕ್ಷಣವೇ ಅದು ಮೇಲೇರುವುದು ನಡೆದೇ ಇತ್ತು. ಹೇಗಾದರೂ ನೆಟ್‌ ರಿಸಲ್ಟ್‌ ಮಾತ್ರ ಸ್ವಲ್ಪ ಏರುವಿಕೆಯೇ ಆಗಿರುತ್ತಿತ್ತು. ಈಗಂತೂ ಸಂಪೂರ್ಣ ವಿಶ್ರಾಂತಸ್ಥಿತಿಯನ್ನು ತಲುಪಿದ ನಂತರ ಕೈಗೆ ಭೂಷಣವಾದ ಮೊಬೈಲ್‌ ಹಿಡಿದು ಕುಳಿತಲ್ಲೇ ತೂಕಡಿಸುತ್ತಲೇ ತೂಕ ಅಂಕೆಮೀರುತ್ತಿದೆ. ಬದುಕಿನ ಈ ಸಂಧ್ಯಾಕಾಲದಲ್ಲಿ ಮನವನ್ನು ಕಂಟ್ರೋಲ್‌ನಲ್ಲಿಟ್ಟುಕೊಳ್ಳಬೇಕೆನ್ನುವುದು ಲೋಕಾರೂಢಿ. ಆದರೆ ನನಗೆ ನನ್ನ ಈ ತನುವನ್ನು ಕಂಟ್ರೋಲ್‌ ಮಾಡಿಕೊಳ್ಳುವುದೇ ದುಃಸ್ಸರವಾಗಿ ʼತಾಳಲಾರೆ ನಿನ್ನ ತೂಕʼ ಎಂದು ಈಗಾಗಲೇ ಮನೆಯ 5-6 ವೇಯಿಂಗ್‌ ಮೆಶಿನ್‌ಗಳು ಮುಷ್ಕರ ಹೂಡಿ ಹೊಸವುಗಳ ಆಗಮನಕ್ಕೆಡೆಮಾಡಿಕೊಟ್ಟಿವೆ. ಮಕ್ಕಳು ʼನೀನೇನು ಅಕ್ಕಿಮೂಟೆಯೇನಮ್ಮ, ಯಾವಾಗ್ಲೂ ತೂಕ ನೋಡಿಕೊಳ್ತಿರ್ತೀಯಲ್ಲʼ ಎನ್ನುತ್ತಾರೆ. ಆದರೂ ಮರಳಿ ಯತ್ನವ ಮಾಡು…

             

          ಈ ಎಲ್ಲಾ ಸಾಧ್ಯಾಸಾಧ್ಯತೆಗಳ ನಡುವೆ ನನ್ನನ್ನು ಸಾಕಷ್ಟು ಘನತರ ವ್ಯಕ್ತಿಯಾಗಿಸಿಯೂ ನನ್ನಿಂದಲೇ ಅವಹೇಳನಕ್ಕೊಳಗಾಗಿರುವ ಈ ನನ್ನ ತೂಕವನ್ನು ಇಳಿಸಿಕೊಳ್ಳುವ ಸತತ ಪ್ರಯತ್ನದ ಅವಿರತ ಶ್ರಮದಲ್ಲಿ ತೂಕವು ಕಡಿಮೆಯಾದಾಗ ಹಿಗ್ಗುತ್ತಾ ಹೆಚ್ಚಾದಾಗ ಕುಗ್ಗುತ್ತಾ ವಿಲೋಮಾನುಭೂತಿಯಲ್ಲಿ ಬದುಕನ್ನು ಮುನ್ನಡೆಸುತ್ತಿದ್ದೇನೆ!


✍️ಪ್ರಭಾಮಣಿನಾಗರಾಜ, ಹಾಸನ

Monday, July 7, 2025

'ವಿಶ್ವವಾಣಿ'ಯ 'ವಿರಾಮ'ದಲ್ಲಿ 'ಸೂಟ್ಕೇಸಿನ ಅಟಾಟೋಪ'💼

 

'ವಿಶ್ವವಾಣಿ'ಯ 'ವಿರಾಮ'ದಲ್ಲಿ 'ಸೂಟ್ಕೇಸಿನ ಅಟಾಟೋಪ'💼
ನಿನ್ನೆ (ಜುಲೈ6)  ಪ್ರಕಟವಾಗಿದೆ. ಓದಿ ಪ್ರತಿಕ್ರಿಯಿಸಿ🌼

https://www.facebook.com/share/p/1Zu7pz7iyb/



Tuesday, June 17, 2025

ವಿಜಯೇಂದ್ರ ಪಾಟೀಲರ 'ಆತ್ಮಸಾಕ್ಷಿಯ ಹಾವಳಿಗಳು' ಕುರಿತು :

 



17/6/2015ರ ನನ್ನ ಫೇಸ್ಬುಕ್ ನಲ್ಲಿದೆ.


ಇಲ್ಲಿ ಪೇಸ್ಟ್ ಆಗುತ್ತಿಲ್ಲ.