Friday, April 23, 2010

ಛಾಪು

ನೆರೆತ ಕೂದಲಿಗೇಕೆ
ಅಚ್ಚ ಬಿಳುಪಿನ ಹೊಳಪು?
ಇರಬಹುದೇ
ಹರಯವ ಮೆಟ್ಟಿದ
ದಿಗ್ವಿಜಯದ ಛಾಪು!

ಸಾಂತ್ವನ

ಉದುರಿಸಲಾಗದ
ಎಲೆಗಳ
ಬಿಗಿಹಿಡಿದು
ರೋಧಿಸುತಿದ್ದ
ಮರವ
ಗಾಳಿ ಕೇಳಿತು,
'ಚಿಗುರುವ ಕನಸಿಲ್ಲವೇ
ನಿನಗೆ?'

Friday, April 16, 2010

ಗರಿಕೆ

ಚಿಗುರಿ ಮೇಲೇರ ಹೊರಟಲ್ಲೆಲ್ಲಾ
ಬಂದೆರಗುವ ಕಲ್ಲು
ಮತ್ತೆ ಮೇಲೇರಿ ಭುವಿಯನೇ
ಬಿಡುವುದೇನೋ ಎಂಬ ಗುಲ್ಲು
ಅತ್ತಿತ್ತ ಟಿಸಿಲೊಡೆಯ ಹೊರಟರೂ
ಜರುಗುವ ತುಳಿತ
ಉಸಿರೊ೦ದನುಳಿಸಿ ಬೇರೆಲ್ಲ ಶಕ್ತಿಯ
ಕಸಿಯುವ ಶಪಥ
ತನ್ನ ಪರಿಧಿಯಿ೦ದ ಹೊರಬರಲಾರದೆ
ಒಳಗೂ ತೃಪ್ತಿ ಕಾಣದೆ
ಅಲ್ಲೇ ಸುತ್ತೆಲ್ಲಾ ಆಳ ಆಳಕೆ
ಬೇರಿಳಿಸಿ ಭದ್ರಗೊಳಿಸುತ್ತಾ
ಒ೦ದಾದರೂ ಅವಕಾಶ ಸಿಕ್ಕರೆ
ಆಕಾಶಕ್ಕೇರುವೆನೆ೦ದು ಪರಿತಪಿಸುತ್ತಾ
ಭೂತದಲೇ ಲೀನವಾಗುತ್ತಾ
ಭವಿಷ್ಯತ್ತನು ಕನಸುತ್ತಾ
ಕಳವಳಗೊಳ್ಳುವ
ತನ್ನ ತಾನೇ ಕನಿಕರಿಸುವ
ಆತ್ಮಾನುಕ೦ಪಿ!

('ಗರಿಕೆ'ಗೆ ಗುಡಿಬ೦ಡೆ ಪೂರ್ಣಿಮಾ ಬಹುಮಾನ ಲಭಿಸಿದೆ ಮತ್ತು ಇದೇಕವನವು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯವರು ಹೊರತರುವ ಕವಿತೆ -೨೦೦೦ ಸ೦ಕಲನದಲ್ಲಿ ಸೇರ್ಪಡೆಯಾಗಿದೆ.)

Friday, April 2, 2010

ಬಿಗಿದುಕೊಂಡಿದ್ದೇವೆ ನಮ್ಮನ್ನೇ.....


ತಾಸುಗಳಲ್ಲೀ ನಿಮಿಷಗಳು
ಸೆಕೆಂಡ್ಸ
ಉರುಳುತಿವೆ
ಗಂಟೆಗಳೇ
ಹಗಲು ರಾತ್ರಿಗಳ
ನಿರಂತರ
ಚಕ್ರಗತಿಯಲಿ

ಚಲಿಸುತಿರುವುದು
ಗಡಿಯಾರದ
ಮುಳ್ಳುಗಳೋ
ಗಡಿಬಿಡಿಯ
ಮರುಳೋ?

'ಟಿಕ್ ಟಿಕ್ ಗೆಳೆಯನೆ
ಟಿಕ್ ಟಿಕ್ ಟಿಕ್...'ಗೆ
ಹೆಜ್ಜೆಹಾಕಿ
ಕುಣಿಯುತ್ತಿದ್ದ
ಕಾಲುಗಳಿಗೀಗ
ಪುರುಸೊತ್ತಿಲ್ಲ
ನಿಲ್ಲಲು!

ಕಾಲುಗಳೇ ಗಡಿಯಾರದ
ಮುಳ್ಳುಗಳಾಗಿ ಸಾಗಿದೆ
ಕಾಲನ ಓಟ
ಜೈವಿಕ ಗಡಿಯಾರಕ್ಕೂ
ಪ್ರಾಣ ಸಂಕಟ!

ಇರುಳನೆ ಬೆಳಗಾಗಿಸಿ
ದುಡಿವ
ಕೈಗಳಿಗೀಗ
ಅಜ್ಞಾತ ತಲೆಯ
ನಿರ್ದೇಶನ

ಹೌದು
ಕಟ್ಟಿಕೊಂಡಿಲ್ಲ ನಾವು
ಗಡಿಯಾರವ
ಬಿಗಿದುಕೊಂಡಿದ್ದೇವೆ
ನಮ್ಮನ್ನೇ
ಗಡಿಯಾರಕ್ಕೆ!

(image- web)