Sunday, March 17, 2024

ʼಹಚ್ಚೆ ದಿನ್' ಪುಸ್ತಕ ಪರಿಚಯ 'ಜನ ಮಿತ್ರ' ಪತ್ರಿಕೆಯಲ್ಲಿ🌼

 ಸುಮಾ ರಮೇಶ್ ಅವರ ಲಲಿತ ಪ್ರಬಂಧ ಗಳ ಸಂಕಲನ ʼಹಚ್ಚೆ ದಿನ್'  ಪುಸ್ತಕ ಪರಿಚಯ  'ಜನ ಮಿತ್ರ' ಪತ್ರಿಕೆಯಲ್ಲಿ🌼




         ಅದ್ಭುತವಾಗಿ ಬರೆಯುವ ಪ್ರಬುದ್ಧ ಲೇಖಕಿ ಸುಮಾ ರಮೇಶ್ ರವರ ಲಲಿತ ಪ್ರಬಂಧ ಸಂಕಲನ ʼಹಚ್ಚೆ ದಿನ್ʼ ಮುಗುಳ್ನಗೆಯ ಟಾನಿಕ್‌ ಗಳಂತಹ 32 ಪ್ರಬಂಧಗಳನ್ನೊಳಗೊಂಡ ಮನಸೆಳೆಯುವ ಪುಸ್ತಕ. ಇದರ ಮುಖಪುಟವೇ ಹಚ್ಚಾಸುಂದರಿಯ ಮೋಹಕ ಭಂಗಿಯೊಂದಿಗೆ ಮನಸೂರೆಗೊಳ್ಳುವಂತಿದೆ.

      ನಾಡಿನ ವಿವಿಧ ಸುಪ್ರಸಿದ್ಧ ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದ್ದ ಸುಮಾರವರ ಲೇಖನಗಳನ್ನು ಆಗಾಗ ನಾನು ಫೇಸ್ಬುಕ್‌ ನಲ್ಲಿ ಓದುವಾಗ ಅವರು ಆಯ್ಕೆಮಾಡಿಕೊಳ್ಳುತ್ತಿದ್ದ ವಿಷಯ ಹಾಗೂ ಕೊಡುತ್ತಿದ್ದ ಶೀರ್ಷಿಕೆಗಳು ಬಹಳ ಆಸಕ್ತಿಕರವೆನಿಸುತ್ತಿದ್ದವು. ಈಗ ʼಹಚ್ಚೆ ದಿನ್ʼ ಕೈಸೇರಿದ ನಂತರ ಬಿಡಿಬಿಡಿಯಾಗಿ ಓದಿದ್ದ ಲೇಖನಗಳನ್ನು ಇಡಿಯಾಗಿ ಪುಸ್ತಕ ರೂಪದಲ್ಲಿ ಮತ್ತೊಮ್ಮೆ ಓದುವಾಗ ಒಂದು ವಿಶಿಷ್ಟ ಲಾಲಿತ್ಯಮಯ ಲೋಕವನ್ನೇ  ಪ್ರವೇಶಿಸಿದಂತಾಗಿ  ಅವರೇ ನನ್ನೆದುರು ಕುಳಿತು ತಮ್ಮ ಸತ್ವಯುತ ಮಾಹಿತಿಪೂರ್ಣ ಪ್ರಬಂಧಗಳನ್ನು ಸಂಭಾಷಿಸುವಂತಿದೆ. 

ಸುಮಾ ಅವರ ಈ ಪ್ರಬುದ್ಧ ಪ್ರಬಂಧಗಳ ಹಾಸ್ಯಾಸ್ವಾದನೆಗೆ ಪೂರಕ ಪೀಠಿಕೆಯಂತಿರುವ ಅತ್ಯುತ್ತಮವಾದ ಮೌಲ್ಯಯುತ ಮುನ್ನಡಿಯನ್ನು ರಾಮನಾಥ್ ಸರ್ ಅವರು ಬರೆದಿರುವುದು ಪುಸ್ತಕವನ್ನು ಓದಲೇಬೇಕೆಂದು ಪ್ರೇರೇಪಿಸುವಂತಿದೆ ಹಾಗೂ ಸುಂದರವಾದ ಚಿತ್ರವೊಂದಕ್ಕೆ ಹಾಕಿದ ಸುವರ್ಣದ ಚೌಕಟ್ಟಿನಂತಿದ್ದು ಪುಸ್ತಕದ ಘನತೆಯನ್ನು ಹೆಚ್ಚಿಸುವಂತಿದೆ. 

ಸುಮಾ ಅವರ ಲೇಖನಗಳ ವಿಶೇಷ ಆಕರ್ಷಣೆಯೆಂದರೆ ಅವರು ಇಡುವ ಶೀರ್ಷಿಕೆಗಳು ಹಾಗೂ ಕೊಡುವ ಉಪಮೆಗಳು.

ಶಾಯಿಯೊಂದಿಗಿನ ಶಾಯರಿ,  ʼಹಚ್ಚೆ ದಿನ್ʼ, ʼಡಸ್ಟ್ ಬಿನ್ ' ಎಂಬ ಕಸದ ಒಡಲು...., ʼಚಂಬೋ.... ಇವ ಚಂಬೋ..... !ʼ

ʼಟಿ ಜಂಕ್ಷನ್ ಸೈಟುʼ, , ʼಡಸ್ಟರ್‌ ಎಂಬ eರೇಸರ್ರುʼ, ಹಚ್ಚೇವು ನೊರೆ ನೊರೆಯ ಸೋಪ, …ಮುಂತಾದ ನಾಮಕರಣವೇ ಓದುಗರನ್ನು ತನ್ನತ್ತ  ಸೆಳೆಯುತ್ತದೆ. 

'ಉದರದ ಸ್ಥಿತಿಯು , ಟೀಮ್ ಕೋ ಆರ್ಡಿನೇಶನ್ ಇಲ್ಲದ  ಪ್ರಾಜೆಕ್ಟ್ ನಂತಾಗುವುದು.' 

ʼಹೆತ್ತವರ ಐ ಫೆನ್ಸಿಂಗ್‌ʼ

ʼ ಈ ಸೋಪಿನ ಗೀತೆಗಳು (ಈಸೋಪನ ಕಥೆಗಳಿಗಿಂತಲೂ)ʼ

' ಮೌತ್ ಟು ಮೌತ್ ರೆಸ್ಪಿರೇಶನ್ ಪಡೆದ ವ್ಯಕ್ತಿ ಸುಧಾರಿಸಿಕೊಂಡು ಮೇಲೇಳುವಂತೆ '

ʼ…ಆಡುಂಬೋಲ ಈಗ ಎಲ್ಲರ ತೋಡುಂಬೋಲ…ʼ

ಮುಂತಾದ ಹೋಲಿಕೆಗಳು ಸಂದರ್ಭೋಚಿತವಾಗಿದ್ದು ಅನಿಯಂತ್ರಿತವಾಗಿ ನಗೆಯುಕ್ಕಿಸುತ್ತವೆ.

ವಿಷಯವೊಂದನ್ನು ಆಯ್ಕೆಮಾಡಿಕೊಂಡ ನಂತರ ಅದನ್ನು ವಿವಿಧ ಆಯಾಮಗಳಲ್ಲಿ ಅಭ್ಯಸಿಸಿ, ಮಾಹಿತಿಗಳನ್ನು ಕ್ರೂಢೀಕರಿಸಿ ಹಾಸ್ಯ, ವ್ಯಂಗ್ಯ, ಚಾಟೋಕ್ತಿಗಳೊಡನೆ ಮಿಳಿತಗೊಳಿಸಿ ತಮ್ಮ ವಿಶಿಷ್ಟ ಸುಲಲಿತ ಶೈಲಿಯಲ್ಲಿ ಸಾಂದ್ರವಾಗಿ ಪ್ರಬಂಧೀಕರಿಸುವ ಅನನ್ಯವಾದ ಕಲೆ ಸುಮಾರವರಿಗೆ ಸಿದ್ಧಿಸಿದೆ. 

 

ಮಕ್ಕಳ ಕುತೂಹಲದ ಕೇಂದ್ರ ಬಿಂದುವಾಗಿದ್ದ ಫ್ಯಾನ್ ನಿಂದ ಪ್ರಾರಂಭಿಸಿ ಅದರ ವಿಕಾಸ, ಸರ್ವವ್ಯಾಪಿತ್ವದ ಬಗ್ಗೆ ಲಹರಿಯನ್ನು ಹರಿಸುತ್ತಲೇ .…ʼನಾವೂ ಪ್ರೌಢರಾಗಿದ್ದು ನಮ್ಮ ಫ್ಯಾನ್‌ ಗಳನ್ನು ಬೇರೆಡೆ ಹುಡುಕುವಲ್ಲಿ ವ್ಯಸ್ತರಾಗಿದ್ದೆವುʼ ಎನ್ನುವ ತಿರುವಿನೊಂದಿಗೆ  ಸೆಲೆಬ್ರಿಟಿಗಳ ಫ್ಯಾನ್ ಗಳತ್ತ ಹೊರಳಿ ಪರಿಸಮಾಪ್ತಿಗೊಳಿಸುವುದು ಸುಮಾರವರಿಗೆ ನೀರು ಕುಡಿದಷ್ಟೇ ಸಲೀಸು. 

ಹಾಸ್ಯದ ಪಕ್ವಾನ್ನವನ್ನು ಉಣಬಡಿಸುವ ಈ ಹೊತ್ತಿಗೆಯಲ್ಲಿ ನಗೆಯ ಹೊನಲನ್ನು ಚಿಮ್ಮಿಸುವ ವ್ಯಂಗ್ಯೋಕ್ತಿ, ಪಂಚ್‌ ಗಳ ಜೊತೆಗೇ ವೈಚಾರಿಕತೆಗೆ ತೆರೆದುಕೊಳ್ಳುವಂತೆ ಮಾಡುವ ಚಿಂತನಯೋಗ್ಯ ಉಕ್ತಿಗಳೂ ಇವೆ ಎನ್ನುವುದಕ್ಕೆ ಮಾದರಿ  ʼಇಡೀ ಭೂಮಂಡಲವೇ ಒಂದು ಡಸ್ಟ್ ಬಿನ್ ನಂತೆ ಒಡಲ ತುಂಬಾ ಕಸ ಹೊತ್ತು ನಿಂತು ಸ್ವಚ್ಛ್ ಭಾರತ್ ಅಭಿಯಾನ ಸ್ವಚ್ಛ್  ಭೂಮಂಡಲ್ ಅಭಿಯಾನವಾಗಬೇಕಾದ ತುರ್ತು ತಲೆದೋರಿದೆ.ʼ ಎನ್ನುವುದು.

ತಮ್ಮ ಪ್ರಬಂಧಗಳಲ್ಲಿ ಏನನ್ನು ಹೇಳಬೇಕೆಂದರೂ ಇತರ ಯಾರ ಬಗ್ಗೆಯೂ ಹೇಳದೆ ತನ್ನನ್ನೇ ತಾನು ನಗೆಯ ವಸ್ತುವಾಗಿಸಿಕೊಂಡು ಬರೆದಿರುವುದು ಇವರ ಲೇಖನಗಳ ಧನಾತ್ಮಕ ಅಂಶವಾಗಿದೆ. ಇದು ಒಂದು ಆರೋಗ್ಯಕರ ಬೆಳವಣಿಗೆ. ತಾನು ಅನುಭವಿಸಿರಬಹುದಾದ ನೋವು, ಅಪಮಾನ, ಸೋಲುಗಳನ್ನೂ ನಗೆಯ ವಸ್ತುವಾಗಿಸಬಲ್ಲ ಸಾಮರ್ಥ್ಯ ಸುಮಾರವರಿಗಿದೆ. ʼನೆಗಡಿಯ ಬಾನಗಡಿʼ, ʼನವಿಲು ತುಪ್ಪʼ, ʼನಿಲ್ಲಲ್ಲ…ನಿಲ್ಲಲ್ಲ… ಜಲಧಾರೆʼ…ಗಳಲ್ಲಿ ಈ ಅಂಶಗಳನ್ನು ಕಾಣಬಹುದು.

ʼಹಚ್ಚೆ‌ ದಿನ್ʼ, ಅವರೇ ತಿಳಿಸಿರುವಂತೆ ಬೆಚ್ಚನೆಯ ನಗುವಿನೊಂದಿಗೆ ಎಲ್ಲರೂ ಓದಿ ಆಸ್ವಾದಿಸಲು ಆನಂದಿಸಲು ಅತ್ಯಂತ ಯೋಗ್ಯವಾದ ಪುಸ್ತಕವಾಗಿದೆ. ಇಂಥಾ ಪ್ರಬುದ್ಧ ಪ್ರಬಂಧ ಸಂಕಲನವನ್ನು ಸಾಹಿತ್ಯಲೋಕಕ್ಕೆ ನೀಡಿದ ಸುಮಾ ಅವರನ್ನು ಅಭಿನಂದಿಸುತ್ತಾ… 

    ಸುಮಾ ಹೀಗೇ ಬರೆಯುತ್ತಾ ಎಲ್ಲೆಡೆ ತಮ್ಮ ಸಾಹಿತ್ಯ ಸೌರಭವನ್ನು ಪಸರಿಸಲಿ ಹಾಗೂ ಇನ್ನೂ ಹೆಚ್ಚಿನ ಸಾರ್ಥಕತೆಯ ಸಾಧನೆಗಳನ್ನು ಮಾಡುವಂತಾಗಲಿ ಎಂದು ಹಾರೈಸುತ್ತೇನೆ. 

  

~ಪ್ರಭಾಮಣಿನಾಗರಾಜ ದಿನ್‌ʼ  ಪುಸ್ತಕ ಪರಿಚಯ  'ಜನ ಮಿತ್ರ' ಪತ್ರಿಕೆಯಲ್ಲಿ🌼


         ಅದ್ಭುತವಾಗಿ ಬರೆಯುವ ಪ್ರಬುದ್ಧ ಲೇಖಕಿ ಸುಮಾ ರಮೇಶ್ ರವರ ಲಲಿತ ಪ್ರಬಂಧ ಸಂಕಲನ ʼಹಚ್ಚೆ ದಿನ್ʼ ಮುಗುಳ್ನಗೆಯ ಟಾನಿಕ್‌ ಗಳಂತಹ 32 ಪ್ರಬಂಧಗಳನ್ನೊಳಗೊಂಡ ಮನಸೆಳೆಯುವ ಪುಸ್ತಕ. ಇದರ ಮುಖಪುಟವೇ ಹಚ್ಚಾಸುಂದರಿಯ ಮೋಹಕ ಭಂಗಿಯೊಂದಿಗೆ ಮನಸೂರೆಗೊಳ್ಳುವಂತಿದೆ.

      ನಾಡಿನ ವಿವಿಧ ಸುಪ್ರಸಿದ್ಧ ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದ್ದ ಸುಮಾರವರ ಲೇಖನಗಳನ್ನು ಆಗಾಗ ನಾನು ಫೇಸ್ಬುಕ್‌ ನಲ್ಲಿ ಓದುವಾಗ ಅವರು ಆಯ್ಕೆಮಾಡಿಕೊಳ್ಳುತ್ತಿದ್ದ ವಿಷಯ ಹಾಗೂ ಕೊಡುತ್ತಿದ್ದ ಶೀರ್ಷಿಕೆಗಳು ಬಹಳ ಆಸಕ್ತಿಕರವೆನಿಸುತ್ತಿದ್ದವು. ಈಗ ʼಹಚ್ಚೆ ದಿನ್ʼ ಕೈಸೇರಿದ ನಂತರ ಬಿಡಿಬಿಡಿಯಾಗಿ ಓದಿದ್ದ ಲೇಖನಗಳನ್ನು ಇಡಿಯಾಗಿ ಪುಸ್ತಕ ರೂಪದಲ್ಲಿ ಮತ್ತೊಮ್ಮೆ ಓದುವಾಗ ಒಂದು ವಿಶಿಷ್ಟ ಲಾಲಿತ್ಯಮಯ ಲೋಕವನ್ನೇ  ಪ್ರವೇಶಿಸಿದಂತಾಗಿ  ಅವರೇ ನನ್ನೆದುರು ಕುಳಿತು ತಮ್ಮ ಸತ್ವಯುತ ಮಾಹಿತಿಪೂರ್ಣ ಪ್ರಬಂಧಗಳನ್ನು ಸಂಭಾಷಿಸುವಂತಿದೆ. 

ಸುಮಾ ಅವರ ಈ ಪ್ರಬುದ್ಧ ಪ್ರಬಂಧಗಳ ಹಾಸ್ಯಾಸ್ವಾದನೆಗೆ ಪೂರಕ ಪೀಠಿಕೆಯಂತಿರುವ ಅತ್ಯುತ್ತಮವಾದ ಮೌಲ್ಯಯುತ ಮುನ್ನಡಿಯನ್ನು ರಾಮನಾಥ್ ಸರ್ ಅವರು ಬರೆದಿರುವುದು ಪುಸ್ತಕವನ್ನು ಓದಲೇಬೇಕೆಂದು ಪ್ರೇರೇಪಿಸುವಂತಿದೆ ಹಾಗೂ ಸುಂದರವಾದ ಚಿತ್ರವೊಂದಕ್ಕೆ ಹಾಕಿದ ಸುವರ್ಣದ ಚೌಕಟ್ಟಿನಂತಿದ್ದು ಪುಸ್ತಕದ ಘನತೆಯನ್ನು ಹೆಚ್ಚಿಸುವಂತಿದೆ. 

ಸುಮಾ ಅವರ ಲೇಖನಗಳ ವಿಶೇಷ ಆಕರ್ಷಣೆಯೆಂದರೆ ಅವರು ಇಡುವ ಶೀರ್ಷಿಕೆಗಳು ಹಾಗೂ ಕೊಡುವ ಉಪಮೆಗಳು.

ಶಾಯಿಯೊಂದಿಗಿನ ಶಾಯರಿ,  ʼಹಚ್ಚೆ ದಿನ್ʼ, ʼಡಸ್ಟ್ ಬಿನ್ ' ಎಂಬ ಕಸದ ಒಡಲು...., ʼಚಂಬೋ.... ಇವ ಚಂಬೋ..... !ʼ

ʼಟಿ ಜಂಕ್ಷನ್ ಸೈಟುʼ, , ʼಡಸ್ಟರ್‌ ಎಂಬ eರೇಸರ್ರುʼ, ಹಚ್ಚೇವು ನೊರೆ ನೊರೆಯ ಸೋಪ, …ಮುಂತಾದ ನಾಮಕರಣವೇ ಓದುಗರನ್ನು ತನ್ನತ್ತ  ಸೆಳೆಯುತ್ತದೆ. 

'ಉದರದ ಸ್ಥಿತಿಯು , ಟೀಮ್ ಕೋ ಆರ್ಡಿನೇಶನ್ ಇಲ್ಲದ  ಪ್ರಾಜೆಕ್ಟ್ ನಂತಾಗುವುದು.' 

ʼಹೆತ್ತವರ ಐ ಫೆನ್ಸಿಂಗ್‌ʼ

ʼ ಈ ಸೋಪಿನ ಗೀತೆಗಳು (ಈಸೋಪನ ಕಥೆಗಳಿಗಿಂತಲೂ)ʼ

' ಮೌತ್ ಟು ಮೌತ್ ರೆಸ್ಪಿರೇಶನ್ ಪಡೆದ ವ್ಯಕ್ತಿ ಸುಧಾರಿಸಿಕೊಂಡು ಮೇಲೇಳುವಂತೆ '

ʼ…ಆಡುಂಬೋಲ ಈಗ ಎಲ್ಲರ ತೋಡುಂಬೋಲ…ʼ

ಮುಂತಾದ ಹೋಲಿಕೆಗಳು ಸಂದರ್ಭೋಚಿತವಾಗಿದ್ದು ಅನಿಯಂತ್ರಿತವಾಗಿ ನಗೆಯುಕ್ಕಿಸುತ್ತವೆ.

ವಿಷಯವೊಂದನ್ನು ಆಯ್ಕೆಮಾಡಿಕೊಂಡ ನಂತರ ಅದನ್ನು ವಿವಿಧ ಆಯಾಮಗಳಲ್ಲಿ ಅಭ್ಯಸಿಸಿ, ಮಾಹಿತಿಗಳನ್ನು ಕ್ರೂಢೀಕರಿಸಿ ಹಾಸ್ಯ, ವ್ಯಂಗ್ಯ, ಚಾಟೋಕ್ತಿಗಳೊಡನೆ ಮಿಳಿತಗೊಳಿಸಿ ತಮ್ಮ ವಿಶಿಷ್ಟ ಸುಲಲಿತ ಶೈಲಿಯಲ್ಲಿ ಸಾಂದ್ರವಾಗಿ ಪ್ರಬಂಧೀಕರಿಸುವ ಅನನ್ಯವಾದ ಕಲೆ ಸುಮಾರವರಿಗೆ ಸಿದ್ಧಿಸಿದೆ. 

 

ಮಕ್ಕಳ ಕುತೂಹಲದ ಕೇಂದ್ರ ಬಿಂದುವಾಗಿದ್ದ ಫ್ಯಾನ್ ನಿಂದ ಪ್ರಾರಂಭಿಸಿ ಅದರ ವಿಕಾಸ, ಸರ್ವವ್ಯಾಪಿತ್ವದ ಬಗ್ಗೆ ಲಹರಿಯನ್ನು ಹರಿಸುತ್ತಲೇ .…ʼನಾವೂ ಪ್ರೌಢರಾಗಿದ್ದು ನಮ್ಮ ಫ್ಯಾನ್‌ ಗಳನ್ನು ಬೇರೆಡೆ ಹುಡುಕುವಲ್ಲಿ ವ್ಯಸ್ತರಾಗಿದ್ದೆವುʼ ಎನ್ನುವ ತಿರುವಿನೊಂದಿಗೆ  ಸೆಲೆಬ್ರಿಟಿಗಳ ಫ್ಯಾನ್ ಗಳತ್ತ ಹೊರಳಿ ಪರಿಸಮಾಪ್ತಿಗೊಳಿಸುವುದು ಸುಮಾರವರಿಗೆ ನೀರು ಕುಡಿದಷ್ಟೇ ಸಲೀಸು. 

ಹಾಸ್ಯದ ಪಕ್ವಾನ್ನವನ್ನು ಉಣಬಡಿಸುವ ಈ ಹೊತ್ತಿಗೆಯಲ್ಲಿ ನಗೆಯ ಹೊನಲನ್ನು ಚಿಮ್ಮಿಸುವ ವ್ಯಂಗ್ಯೋಕ್ತಿ, ಪಂಚ್‌ ಗಳ ಜೊತೆಗೇ ವೈಚಾರಿಕತೆಗೆ ತೆರೆದುಕೊಳ್ಳುವಂತೆ ಮಾಡುವ ಚಿಂತನಯೋಗ್ಯ ಉಕ್ತಿಗಳೂ ಇವೆ ಎನ್ನುವುದಕ್ಕೆ ಮಾದರಿ  ʼಇಡೀ ಭೂಮಂಡಲವೇ ಒಂದು ಡಸ್ಟ್ ಬಿನ್ ನಂತೆ ಒಡಲ ತುಂಬಾ ಕಸ ಹೊತ್ತು ನಿಂತು ಸ್ವಚ್ಛ್ ಭಾರತ್ ಅಭಿಯಾನ ಸ್ವಚ್ಛ್  ಭೂಮಂಡಲ್ ಅಭಿಯಾನವಾಗಬೇಕಾದ ತುರ್ತು ತಲೆದೋರಿದೆ.ʼ ಎನ್ನುವುದು.

ತಮ್ಮ ಪ್ರಬಂಧಗಳಲ್ಲಿ ಏನನ್ನು ಹೇಳಬೇಕೆಂದರೂ ಇತರ ಯಾರ ಬಗ್ಗೆಯೂ ಹೇಳದೆ ತನ್ನನ್ನೇ ತಾನು ನಗೆಯ ವಸ್ತುವಾಗಿಸಿಕೊಂಡು ಬರೆದಿರುವುದು ಇವರ ಲೇಖನಗಳ ಧನಾತ್ಮಕ ಅಂಶವಾಗಿದೆ. ಇದು ಒಂದು ಆರೋಗ್ಯಕರ ಬೆಳವಣಿಗೆ. ತಾನು ಅನುಭವಿಸಿರಬಹುದಾದ ನೋವು, ಅಪಮಾನ, ಸೋಲುಗಳನ್ನೂ ನಗೆಯ ವಸ್ತುವಾಗಿಸಬಲ್ಲ ಸಾಮರ್ಥ್ಯ ಸುಮಾರವರಿಗಿದೆ. ʼನೆಗಡಿಯ ಬಾನಗಡಿʼ, ʼನವಿಲು ತುಪ್ಪʼ, ʼನಿಲ್ಲಲ್ಲ…ನಿಲ್ಲಲ್ಲ… ಜಲಧಾರೆʼ…ಗಳಲ್ಲಿ ಈ ಅಂಶಗಳನ್ನು ಕಾಣಬಹುದು.

ʼಹಚ್ಚೆ‌ ದಿನ್ʼ, ಅವರೇ ತಿಳಿಸಿರುವಂತೆ ಬೆಚ್ಚನೆಯ ನಗುವಿನೊಂದಿಗೆ ಎಲ್ಲರೂ ಓದಿ ಆಸ್ವಾದಿಸಲು ಆನಂದಿಸಲು ಅತ್ಯಂತ ಯೋಗ್ಯವಾದ ಪುಸ್ತಕವಾಗಿದೆ. ಇಂಥಾ ಪ್ರಬುದ್ಧ ಪ್ರಬಂಧ ಸಂಕಲನವನ್ನು ಸಾಹಿತ್ಯಲೋಕಕ್ಕೆ ನೀಡಿದ ಸುಮಾ ಅವರನ್ನು ಅಭಿನಂದಿಸುತ್ತಾ… 

    ಸುಮಾ ಹೀಗೇ ಬರೆಯುತ್ತಾ ಎಲ್ಲೆಡೆ ತಮ್ಮ ಸಾಹಿತ್ಯ ಸೌರಭವನ್ನು ಪಸರಿಸಲಿ ಹಾಗೂ ಇನ್ನೂ ಹೆಚ್ಚಿನ ಸಾರ್ಥಕತೆಯ ಸಾಧನೆಗಳನ್ನು ಮಾಡುವಂತಾಗಲಿ ಎಂದು ಹಾರೈಸುತ್ತೇನೆ. 

  

~ಪ್ರಭಾಮಣಿನಾಗರಾಜ

Tuesday, February 6, 2024

ಲಲಿತ ಪ್ರಬಂಧ - 'ಸೀನಿನ sceneಗಳು'

  🌺ಎಲ್ಲರಿಗೂ ಬೆಳಗಿನ ವಂದನೆಗಳು🙏🌹

       ಈ ವಾರದ ( ಫೆಬ್ರವರಿ8,2024) 'ಸುಧಾ' ಪತ್ರಿಕೆಯ 'ಮಂದಹಾಸ'ದಲ್ಲಿ  ಪ್ರಕಟವಾಗಿರುವ ನನ್ನ ಲಲಿತ ಪ್ರಬಂಧ - 'ಸೀನಿನ sceneಗಳು'


ನಿಮ್ಮ ಪ್ರೀತಿಯ ಓದಿಗೆ😍


                  ಸೀನಿನ sceneಗಳು 

ಸೀನುವುದು ಅಪರೂಪವೇನಲ್ಲ. ಯಾವುದಾದ್ರೂ ಧೂಳಿನ ಪ್ರದೇಶಕ್ಕೆ ಹೋದಾಗ ಅಥವಾ ಶೀತಕಾಲದಲ್ಲಿ, ಮಳೆಗಾಲದಲ್ಲಿ... ಕೆಲವೊಮ್ಮೆ ಕಾರಣವೇ ಇಲ್ಲದಂತೆ  ಸೀನುಗಳು ಒಂದಾದ ಮೇಲೆ ಒಂದರಂತೆ  ಬರುತ್ತಲೇ ಇರುತ್ತವೆ.  ಸುತ್ತಿನ ವಾತಾವರಣವನ್ನು ಮತ್ತಷ್ಟು ಹದಗೆಡಿಸಿ ಹಾಳುಮಾಡಿ ನಮ್ಮದೆಂದು ಉಳಿಸಿಕೊಂಡಿರುವ ಅಲ್ಪಸ್ವಲ್ಪ ಮರ್ಯಾದೆಯನ್ನೂ ನುಂಗಿ ನೀರು ಕುಡಿದುಬಿಡುತ್ತದೆ.

ಈ ಸೀನಿಗೆ ಕೆಮ್ಮಿಗಿರುವಷ್ಟು ಕನಿಷ್ಠ ಗೌರವವೂ ಇಲ್ಲ. ಕೆಮ್ಮುತ್ತ ಇರುವವರಿಗೆ ಕೆಲವು ಅಲೋಪತಿ, ಆಯುರ್ವೇದಿಕ್, ಯುನಾನಿ... ಔಷದೊಪಚರಗಳನ್ನಾದರೂ ಸಲಹೆ ನೀಡುತ್ತಾರೆ. ಕಡೇಪಕ್ಷ  ಮನೆಮದ್ದುಗಳನ್ನಾದರೂ ಸಜಸ್ಟ್ ಮಾಡಿ ಸಹಸ್ಪಂದಿಸುತ್ತಾರೆ. ಆದರೆ ಯಾವುದೇ ನಿರ್ದಿಷ್ಟ ಔಷದೋಪಚಾರವನ್ನೂ ಬಯಸದ ಈ ಪರಮ ಪಾಪಿಯಾದ ಸೀನನ್ನು 'ಆ...ಕ್ಷಿ'ಸಲು ಪ್ರಾರಂಭಿಸಿದಾಕ್ಷಣವೇ ಸುತ್ತಿನವರು ತಾವೇ ಅತ್ತಿತ್ತ ಸರಿದು ಹೋಗ್ತಾರೆ ಅಥವಾ ಮುಖ ಸಿಂಡರಿಸುತ್ತಾ ನಿರ್ದಾಕ್ಷಿಣ್ಯವಾಗಿ ನಮ್ಮನ್ನೇ ಅಲ್ಲಿಂದ ಉಚ್ಛಾಟಿಸುತ್ತಾರೆ. ಕೆಮ್ಮನ್ನಾದರೂ ಮುಂಜಾಗರೂಕತೆಯಿಂದ ಮುಖಕ್ಕೆ ವಸ್ತ್ರವನ್ನು ಮುಚ್ಚಿಕೊಂಡು  ನಾಗರಿಕವಾಗಿ ಕೆಮ್ಮಬಹುದು ಆದರೆ ಅನಿರೀಕ್ಷಿತವಾಗಿ ಧಾಳಿಯಿಡುವ ಈ ಸೀನು ಇದ್ದಕ್ಕಿದ್ದಂತೆಯೇ ಅಬ್ಬರಿಸಿ ವಾತಾವರಣವನ್ನೇ ತಲ್ಲಣಿಸಿ ಸುತ್ತೆಲ್ಲಾ   ಲಾಲಾಹನಿಗಳನ್ನು ಸ್ಪ್ರಿಂಕಲ್ ಮಾಡಿ ಕಲುಷಿತಗೊಳಿಸಿ ಬಿಡುತ್ತದೆ.  

        ಈ ಸೀನಿನ ವಿವಿಧ  ನಾದ ಮಾದರಿಗಳಂತೂ ಕೇಳಲು ವಿಚಿತ್ರವಾಗಿರುತ್ತವೆ. ನಮ್ಮ ಸೋದರ ಮಾವ  ತಾರಕ ಸ್ಥಾಯಿಯಲ್ಲಿ ಸೀನಿದರೆ ಮನೆಯ ಹಂಚುಗಳೆಲ್ಲಾ ಹಾರಿಹೋಗುವಂತೆ  ಮನೆಯೇ ಅದುರುತ್ತಿತ್ತು. ಆಗೇನಾದರೂ ನಮ್ಮ ಕಪ್ಪಿ-ಕೆಂಪಿ ಬೆಕ್ಕಿನ ಮರಿಗಳು ಹತ್ತಿರದ ಟೇಬಲ್ ಮೇಲೆ ಆಟವಾಡುತ್ತಿದ್ದರೆ ಹಠಾತ್ ಶಬ್ಧಸ್ಪೋಟಕ್ಕೆ ಅಂಜಿ  ಕೆಳಗೆ ಬಿದ್ದು ಉರುಳಾಡಿ ಎದ್ದು ಓಡಿಹೋಗುತ್ತಿದ್ದವು. 

ಒಮ್ಮೆ ಮೊದಲಬಾರಿಗೆ  ಮನೆಗೆ ಬಂದಿದ್ದ  ನಮ್ಮ ಹೊಸಪರಿಚಯಸ್ಥರ ಮಗು ಮಾವನ ಸೀನಿನ ಶಾಕ್ ನಿಂದ ಬೆಚ್ಚಿಬಿದ್ದು ಅಳಲು ಪ್ರಾರಂಭಿಸಿದ್ದು ಯಾರು ಹೇಗೇ ಸಮಾಧಾನಿಸಿದರೂ ಅಳು ನಿಲ್ಲಿಸಲೇ ಇಲ್ಲ. ಏನು ಮಾಡುವುದೆಂದು ತೋಚದೇ ಎಲ್ಲರೂ ಕಂಗೆಟ್ಟಿದ್ದಾಗ, ಅದೆಲ್ಲಿತ್ತೋ ಆ ಸೀನು, ಮಾವ ಇದ್ದಕ್ಕಿದ್ದಂತೆಯೇ ಬೋಬ್ಬಿರಿಯುವಂತೆ ಮತ್ತೊಮ್ಮೆ ಸೀನಿಬಿಟ್ಟರು! ಮನೆಮಂದಿಯೆಲ್ಲಾ ಗಡಬಡಿಸಿಹೋದ ಈ ಆರ್ಭಟಕ್ಕೆ ಮಗು ಸ್ತಬ್ಧವಾಯಿತು. ಮಗುವಿಗೇನಾಗುತ್ತೋ ಎಂದು ಎಲ್ಲಾ ನೋಡುತ್ತಿದ್ದಂತೆಯೇ ಏನೋ ಚೋದ್ಯವನ್ನು ಕಂಡಂತೆ ಮಗು ಕಿಲಕಿಲನೆ ನಗಲಾರಂಭಿಸಿಬಿಟ್ಟಿತು. ಈ ಅಯೋಮಯ ಸ್ಥಿತಿಯಿಂದ ಗಾಬರಿಗೊಂಡ ಅವರು ದಡಬಡಾಯಿಸಿ ಎದ್ದು ಮಗುವನ್ನು ಎತ್ತಿಕೊಂಡು ಹೊರಟೇಬಿಟ್ಟರು!

ನಮ್ಮ ಚಿಕ್ಕತ್ತೆಗೆ  ಸೀನು ಬಂದರೆ ನಿಲ್ಲುತ್ತಲೇ ಇರಲಿಲ್ಲ.  ಅವರ ಮಕ್ಕಳಂತೂ ತಾಯಿ ಸೀನಲು  ಪ್ರಾರಂಭಿಸಿದಾಕ್ಷಣವೇ ಸುತ್ತಲೂ ಘೇರಾಯಿಸಿ ಒಂದು, ಎರಡು, ಮೂರು, ನಾಲ್ಕು,... ಎಂದು ಒಕ್ಕೊರಲಿನಲ್ಲಿ ಎಣಿಸಿದ್ದೂ ಎಣಿಸಿದ್ದೆ!  ಕನಿಷ್ಠ 20 ಸೀನನ್ನಾದರೂ ಅವರು ಒಮ್ಮೆಗೇ ಸೀನುತ್ತಿದ್ದರು!  ಈ  ಮಕ್ಕಳು ಎಣಿಸೋ ಲೆಕ್ಕ ಕಲಿತಿದ್ದು ಅವರಮ್ಮ ಸೀನೋದ್ರಿಂದಲೇ ಎಂದು ಎಲ್ಲರೂ  ತಮಾಷೆ ಮಾಡುತ್ತಿದ್ದರು.  ನಮ್ಮ  ತಾತ ಸೀನಿನ ಶಕುನವನ್ನು ಬಹಳವಾಗಿ ನಂಬುತ್ತಿದ್ದರು. ಯಾವುದಾದರೂ ಕೆಲಸಕ್ಕೆ ಹೊರಟಾಗ ನಮ್ಮ ಮನೆಯ ಕರು ಸೀನಿದರೆ ಆ ಕೆಲಸ ಆಗೇತೀರುತ್ತದೆ ಎನ್ನುವುದು ಅವರ ಅಚಲ ನಂಬಿಕೆ. ಒಮ್ಮೆ ಹೀಗೇ ಯಾವುದೋ ಪ್ರಮುಖ ಕಾರ್ಯಕ್ಕೆ ಅವರು ಹೊರಟು ನಿಂತಾಗ ನಾನು ತಟ್ಟನೆ 'ಆ....ಕ್ಷಿ' ಎಂದುಬಿಟ್ಟೆ. 'ಅಯ್ಯೋ ಒಂಟಿ ಸೀನು' ಎಂದುಕೊಂಡು ಅವರು ಕುಳಿತೇಬಿಟ್ಟರು. ಅಕ್ಕ ನನಗೆ 'ಇನ್ನೊಂದು ಸಾರಿ ಸೀನಿಬಿಡೆ, ತಾತ ಬಯ್ತಾರೆ.' ಎಂದು ಒತ್ತಾಯಿಸಲಾರಂಭಿಸಿದಳು. ಹುಸಿಕೆಮ್ಮನ್ನಾದರೂ ಕೆಮ್ಮಬಹುದು. ಆದರೆ ಹುಸಿ ಸೀನು ಸಾಧ್ಯವೆ? ಕರು ಸೀನಿದರೆ ಖುಷಿಪಡೋ ತಾತ ನಾನು ಸೀನಿದರೆ ಏಕೆ ಅಪಶಕುನ ಅಂತಾರೆ ಎನ್ನುವುದೇ ಸಮಸ್ಯೆಯಾಗಿತ್ತು. ಮನೆಯಲ್ಲಿ ಏನಾದರೂ ಗಹನವಾದ ಮಾತುಕತೆ ನಡೆಯುತ್ತಿದ್ದಾಗ ಅಮ್ಮ ಅಪ್ಪಿತಪ್ಪಿಯೂ ನನ್ನನ್ನು ಹತ್ತಿರದಲ್ಲಿ ಕೂರಲು ಬಿಡುತ್ತಿರಲಿಲ್ಲ! ಈ ಕಳಂಕದಿಂದ ಪಾರಾಗಲು ನಾನು ಎಷ್ಟೊಬಾರಿ ಬರುವ ಸೀನನ್ನು ತಡೆಯಲು ಪ್ರಯತ್ನಿಸಿ ಅದು ಒಳಗೂ ಉಳಿಯದೆ ಹೊರಗೂ ಬರದೇ ತ್ರಿಶಂಕು ಸ್ಥಿತಿಯಾಗಿ 'ಹ್ಹ ಹ್ಹ ಹ್ಹ...'ಎನ್ನುತ್ತಾ ಪಡುತ್ತಿದ್ದ ಸಂಕಟ ಅಜ್ಜಿ ಹೇಳುವಂತೆ ನಮ್ಮ ಶತೃವಿಗೂ ಬೇಡ!

      ನಾವು ಚಿಕ್ಕವರಿದ್ದಾಗ ಸೀನಿದರೆ ಮೊದಲನೆಯದಕ್ಕೆ ಶತಾಯಸ್, ಎರಡನೆಯದಕ್ಕೆ ಧೀರ್ಘಾಯಸ್ ಎನ್ನುತ್ತಿದ್ದರು. ಇಂಗ್ಲೀಷ್  ಮಾತನಾಡುವ ರಾಷ್ಟ್ರಗಳಲ್ಲಿ , ಸಾಮಾನ್ಯವಾಗಿ ಯಾರಾದರು ಸೀನಿದಾಗ ಅವರಿಗೆ 'ಬ್ಲೆಸ್ ಯು' ಎನ್ನುತ್ತಾರಂತೆ. ನಮ್ಮಂತೆಯೇ ವಿದೇಶಗಳಲ್ಲಿಯೂ ಸೀನಿನ ಬಗ್ಗೆ ವಿವಿಧ ನಂಬಿಕೆಗಳಿವೆ. ಪ್ರಾಚೀನ ಗ್ರೀಸ್ ನಲ್ಲಿ, ಸೀನುಗಳನ್ನು, ದೇವತೆಗಳ ಭವಿಷ್ಯ ಸೂಚಕ ಸಂಕೇತಗಳು ಎಂದು ನಂಬುತ್ತಿದ್ದರಂತೆ. ಪೂರ್ವ ಏಷ್ಯಾದ ಕೆಲವೊಂದು ಭಾಗಗಳಲ್ಲಿ ಯಾವುದೇ ಕಾರಣವಿಲ್ಲದೆ ಸೀನು ಬಂದರೆ, ಸಾಮಾನ್ಯವಾಗಿ ಆ ಕ್ಷಣದಲ್ಲಿ ಯಾರೋ ಸೀನಿದವರ ಬಗ್ಗೆ ಮಾತನಾಡ್ತಿದಾರೆ ಅಂದುಕೊಳ್ತಾರೆ. ಒಂಟಿಸೀನು ಬಂದರೆ  ಸೀನುವವನ ಬಗ್ಗೆ ಒಳ್ಳೆಯದು ಹೇಳಿದ್ದಾರೆಂದು, ಒಟ್ಟಿಗೆ ಜೋಡಿಸೀನು ಬಂದರೆ  ಕೆಟ್ಟ ಮಾತನಾಡಿದ್ದಾರೆಂದೂ, ಸಾಲಾಗಿ ಮೂರು ಸೀನುಬಂದರೆ ಯಾರಾದರು ಅವರನ್ನು ಪ್ರೀತಿಸುತ್ತಿದ್ದಾರೆಂದು ತಿಳಿಯುತ್ತಾರೆ. ಎಲ್ಲಿಂದೆಲ್ಲಿಗೆ ಹೋದರೂ ಒಂದಲ್ಲಾ ಒಂದು ಕೊನೆ ಮೊದಲಿಲ್ಲದ ನಂಬಿಕೆಗಳು! ಹೀಗೆ ನಮ್ಮ ಈ ಸೀನು ಪ್ರಪಂಚದಾದ್ಯಂತ  ಮೌಢ್ಯವ್ಯಾಪಿಯಾಗಿದೆ.   

ಸೀನಿನ ವೇಗ 35ರಿಂದ40 mphನ ಸಮೀಪದಲ್ಲಿರುತ್ತದೆ ಎಂದು ವೈಜ್ಞಾನಿಕವಾಗಿ ಅಂದಾಜು ಮಾಡಿದಾರೆ. ಈ ವೇಗದಲ್ಲಿ ಸೀನು 15 ರಿಂದ 20 ಅಡಿಗಳವರೆಗೆ ಸಣ್ಣ ಹನಿಗಳನ್ನು ಸುತ್ತೆಲ್ಲಾ ಎರಚುತ್ತದಂತೆ. ಅದಕ್ಕೇ ರೋಗಗಳನ್ನು ಹರಡುವುದರಲ್ಲಿ ಸೀನಿಗೇ ಅಗ್ರಸ್ಥಾನ. ಕೆಲವೊಮ್ಮೆ ಸೀನಿನ ವೇಗ 100mph ಕೂಡ ಆಗಿರುತ್ತಂತೆ. ಬಹುಶಃ ನಮ್ಮ ಸೋದರಮಾವನ ವೇಗ ಇದೇ ಆಗಿತ್ತೇನೋ! 

                               ~ ಪ್ರಭಾಮಣಿ ನಾಗರಾಜ 


Saturday, February 3, 2024

ನಳಿನಿ ಟಿ. ಭೀಮಪ್ಪ ಅವರಿಂದ ನನ್ನ ಲಲಿತ ಪ್ರಬಂಧ 'ಸ್ವೀಟ್ 60' ಗೆ ವಿಮರ್ಶೆ👌❤️

 

                     ಮುಂಚೂಣಿಯಲ್ಲಿರುವ ಸುಪ್ರಸಿದ್ಧ ಲೇಖಕಿಯಾದ ನಳಿನಿ ಟಿ. ಭೀಮಪ್ಪ ಅವರಿಂದ  ನನ್ನ ಲಲಿತ ಪ್ರಬಂಧ 'ಸ್ವೀಟ್ 60' ಗೆ ಪ್ರೀತಿಯ ವಿಮರ್ಶೆ👌❤️

        ಲಲಿತಪ್ರಬಂಧಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಲೇಖಕಿ ಎಂದರೆ ಪ್ರಭಾಮಣಿಯವರು ಎನ್ನಬಹುದು.  ಇಷ್ಟು ದಿವಸ ಇವರ ಪರಿಚಯ ಇರಲಿಲ್ಲ.  ಎಲ್ಲೋ ಅಲ್ಲೊಂದು ಇಲ್ಲೊಂದು ಲೇಖನ ಓದಿ ಇವರ ಭಾಷಾಪ್ರೌಢಿಮೆಗೆ ಅಚ್ಚರಿಪಟ್ಟಿದ್ದೆ.  ಇತ್ತೀಚೆಗೆ ಮುಖಪುಸ್ತಕದಿಂದ ಅವರು ಸಂಪರ್ಕಕ್ಕೆ ಬಂದಾಗ, ಅಲ್ಲಿ ಅವರು ಹಾಕುತ್ತಿದ್ದ ಬರಹಗಳನ್ನು ಓದಿ ಆನಂದಿಸಿ, ಅವರ ಪುಸ್ತಕ ಕಳಿಸಲೇಬೇಕು ಎಂದು ದುಬಾಲು ಬಿದ್ದು ತರಿಸಿಕೊಂಡೆ.  ಅದರಲ್ಲಿನ ‘ಲೇಖಕರ ಮಾತು’ ಓದುವಾಗಲೇ ಪ್ರಭಾಮಣಿಯವರ ಹಾಸ್ಯದ ಝಲಕುಗಳು ಅಪ್ಪಳಿಸುತ್ತ ನಗಿಸಿದ್ದವು.  ಈ ಪುಸ್ತಕಕ್ಕೆ ‘ಸ್ವೀಟ್ ೬೦’ ಎನ್ನುವ ಹೆಸರು ಆಯ್ಕೆ ಮಾಡಿರುವುದಕ್ಕೆ ಕೊಟ್ಟಿರುವ ಕಾರಣವನ್ನು ಓದಿ ಬಿದ್ದೂ ಬಿದ್ದೂ ನಕ್ಕಿದ್ದೇನೆ.  ಇದು ಮುಖಸ್ತುತಿಯಂತೂ ಅಲ್ಲವೇ ಅಲ್ಲ.

‘ಸ್ವೀಟ್ ೬೦’ ಲೇಖಕಿ ಪ್ರಭಾಮಣಿಯವರ ಲಲಿತಪ್ರಬಂಧಗಳ ಸಂಕಲನ.  ಈ ಸಂಕಲನವನ್ನು ಕೈಗೆತ್ತಿಕೊಂಡಾಗ ಸರಸರನೆ ಓದಿ ಮುಗಿಸಿಬಿಡಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದೆ.  ಆದರೆ ಇವು ಸುಮ್ಮನೆ ಕಣ್ಣಾಡಿಸಿ ಇಡುವಂತಹ ಪ್ರಬಂಧಗಳಲ್ಲ ಎನ್ನುವುದು ಬಹುಬೇಗನೆ ಅರಿವಿಗೆ ಬಂತು.  ಬರಹಗಳಲ್ಲಿನ ಪ್ರತಿಯೊಂದು ಪದ, ಸಾಲುಗಳನ್ನೂ ಇಂಚಿAಚಾಗಿ ಸವಿಯುತ್ತ ಹೋದಂತೆಲ್ಲ, ತುಟಿಯಂಚಿನಲ್ಲಿ ನಮಗರಿವಿಲ್ಲದೆ ಹಾಸ್ಯದ ಬುಗ್ಗೆಯನ್ನೇ ಹರಿಸುವ ತಾಕತ್ತಿನವು ಎಂದು ಹೇಳಬಹುದು.  ನಿಜವಾಗಿಯೂ ಓದುಗರಿಗೆ ಇದು ರಸದೌತಣ ಎನ್ನಬಹುದು. 
ಗಂಭೀರ ಬರವಣಿಗೆಯಲ್ಲಿ ಹಾಸ್ಯವನ್ನು ಓದುಗರಿಗೆ ಮನಮುಟ್ಟುವಂತೆ ಉಣಬಡಿಸಿದ್ದಾರೆ.  ಪ್ರತಿಯೊಂದು ಲೇಖನವನ್ನು ಓದುವಾಗಲೂ ಅದೆಷ್ಟು ಪ್ರಬುದ್ಧ, ಪಕ್ವ ಬರವಣಿಗೆ ಲೇಖಕಿಯದು ಎಂದು ಸ್ಪಷ್ಟವಾಗಿ ಅರಿವಿಗೆ ಬಂದುಬಿಡುತ್ತದೆ.  ಅದರಲ್ಲೂ ಅವರ ಬರವಣಿಗೆ ಎಂದರೆ ಹಳಿಗಳ ಮೇಲೆ ತಡವರಿಸದೆ ಓಡುವ ರೈಲಿನಂತೆ. ಸರಳ ವಿಷಯಗಳು, ಸರಾಗವಾದ ಓಘ.  ಬರೆಯುತ್ತಿರುವ ವಿಷಯ ಬಿಟ್ಟು ಒಂದಿAಚೂ ಆಚೀಚೆ ಕದಲುವುದಿಲ್ಲ.  ಆರಂಭ, ವಿಷಯ ವಿಸ್ತರಣೆ, ಅಂತ್ಯ ಎಲ್ಲವೂ ಅಚ್ಚುಕಟ್ಟು.  ಬಹುಶಃ ಇತ್ತೀಚಿನ ಬರಹಗಾರರಲ್ಲಿ, ಅದರಲ್ಲೂ  ಲಲಿತಪ್ರಬಂಧಗಳ ಪ್ರಾಕಾರದ ಪೈಕಿ, ಪ್ರಭಾಮಣಿಯವರದು ಒಂದು ಕೈಮೇಲೆಯೇ ಎಂದು ಹೇಳಬಹುದು.  ಅಷ್ಟು ತೂಕವಿದೆ ಅವರ ಬರಹಗಳಲ್ಲಿ.  ಪ್ರತಿಯೊಂದು ಬರಹವೂ ಸರಳವಾದ ವಿಷಯಗಳನ್ನು ಒಳಗೊಂಡಿದ್ದರೂ,  ವಿಭಿನ್ನ, ವಿಶಿಷ್ಟ  ವಾಗಿ ಗಮನ ಸೆಳೆಯುತ್ತದೆ.

ಲಲಿತಪ್ರಬಂಧಗಳನ್ನು, ಹಾಸ್ಯವನ್ನು ಬರೆಯುವವರಿಗೆ ಮಾರ್ಗದರ್ಶನವಾಗಬಲ್ಲದು.  ನಾನಂತೂ ಪದೇ ಪದೇ ಓದಿ ಅವರ ಬರವಣಿಗೆಯ ಕೌಶಲ್ಯಕ್ಕೆ ಅಚ್ಚರಿಗೊಂಡಿದ್ದೇನೆ, ಅಭಿಮಾನಿಯಾಗಿದ್ದೇನೆ.  ಅವರ ಅಷ್ಟೂ ಲಲಿತಪ್ರಬಂಧಗಳ ಪುಸ್ತಕಗಳನ್ನು ಓದುವ ಆಸೆ ಇದೆ.  ಮೇಡಂ ಮತ್ತಷ್ಟು ಪುಸ್ತಕಗಳು ನಿಮ್ಮ ಲೇಖನಿಯಿಂದ ಹೊರಬರಲಿ ಎಂದು ಹಾರೈಸುತ್ತೇನೆ.
ನಳಿನಿ ಟಿ. ಭೀಮಪ್ಪ
ಧಾರವಾಡ

Thursday, January 11, 2024

ನಮ್ಮ ಕಿರುತೋಟದ ಮತ್ತಷ್ಟು ಸುಮಸಿರಿ🌼🏵️🌺

 🌹🌼ನಮ್ಮ ಕಿರುತೋಟದ ಮತ್ತಷ್ಟು ಸುಮಸಿರಿ🌾🏵️🥀🌺


https://m.facebook.com/story.php?story_fbid=pfbid0o1j9PrnAPD7Ketr8xNUZSp9KBorEbwfPcGg2y6YqKXepcLYTDoDpNuwgM2kN8Ucal&id=100003356357708&mibextid=Nif5oz

ನಮ್ಮ ಮನೆಯ ಹೂಗಳು🌼🥀🏵️🌾💐

 

🌹F B ನೆನಪಿಸಿದ್ದು❤️🌺

https://m.facebook.com/story.php?story_fbid=pfbid02CK6KMCbCMEi4a6onwSZEajymMfE38jrkZWFDjjZGd1yEzAdvA9iUGmmQWbB31tn7l&id=100003356357708&mibextid=Nif5oz

Monday, January 8, 2024

'ಮೆಚ್ಚುಗೆಯೆಂಬ ಮಾಯಾವಿ!'



ಎಲ್ಲರಿಗೂ ವಂದನೆಗಳು🙏

 ನನ್ನ ಈ  ಹಾಸ್ಯ ಬರಹ ಜನವರಿ2024ರ 'ಅಪರಂಜಿ'ಯಲ್ಲಿ ಪ್ರಕಟವಾಗಿದೆ.  

ನಿಮ್ಮ ಪ್ರೀತಿಯ ಓದಿಗೆ❤️🌼

'ಮೆಚ್ಚುಗೆಯೆಂಬ ಮಾಯಾವಿ!'


        ಎದ್ದ ತಕ್ಷಣವೇ ಬಂದ ಆ ಮೊದಲ ಕಾಲ್‍ನಿಂದಲೇ ಎಂದಿನಂತೆ ಪತ್ರಿಕೆಯಲ್ಲಿ ನನ್ನದೊಂದು ಲೇಖನ ಬಂದಿದೆ ಎಂದು ತಿಳಿದದ್ದು. ಇತ್ತೀಚೆಗೆ ದಿನವಿಡೀ ಒಂದೂ ಕರೆಯೂ ಇಲ್ಲದೇ ಮನೆಯ ಯಾವುದೋ ಮೂಲೆಯಲ್ಲಿ ಮುದುರಿ ಮಲಗಿರುವ ನನ್ನ ಮೊಬೈಲ್‍ಗೆ ಹೀಗೆಯೇ ಒಮ್ಮೊಮ್ಮೆ ಜೀವ ಬಂದು ನನ್ನನ್ನು ಚುರುಕುಗೊಳಿಸಿಬಿಡುತ್ತದೆ. ದಿನದಲ್ಲಿ ಒಂದೋ ಎರಡೋ ಸಾರಿ ನಾನೇ ಪಾಪ ಎಂದು ಕನಿಕರಿಸಿ ಮಲಗಿದ ಮಗುವಿನ ಮುದ್ದು ಮೈಯನ್ನು ಮೃದುವಾಗಿ ನೇವರಿಸುವಂತೆ ಪ್ರೀತಿಯಿಂದ ಸವರಿ ಅದನ್ನು ವಿಚಾರಿಸಲು ಪ್ರಯತ್ನಿಸಿದರೂ ಅದು ಬಹುತೇಕ ರಚ್ಚೆಹಿಡಿದ ಕಂದ, `ನಾನು ಹೋಮ್ ವರ್ಕ್‍ನೂ ಮಾಡಲ್ಲ, ಸ್ಕೂಲಿಗೂ ಹೋಗಲ್ಲ, ಟ್ಯೂಷನ್‍ಗೂ ಹೋಗಲ್ಲ.....’ ಎನ್ನುವಂತೆ, Unfortunately watsap has stopped,  ...... face book has stopped, ...... chrome has stopped….ಎಂದು ಒಂದಾದ ನಂತರ  ಒಂದರಂತೆ ತನಗೆ ತಾನೇ ಘೋಷಿಸಲಾರಂಭಿಸಿ ನನ್ನನ್ನು ಬಾಹ್ಯ ಜಗತ್ತಿನ ಸಕಲ ಸಂಪರ್ಕಗಳಿಂದಲೂ ವಂಚಿತಳನ್ನಾಗಿಸಿಬಿಡುತ್ತದೆ! ಒಮ್ಮೊಮ್ಮೆ Unfortunately contacts has stopped ಎಂದೂ ಇತಿಶ್ರೀ ಹಾಡಿ ನಾನೆಷ್ಟು Unfortunate ಎನ್ನುವುದನ್ನು ದೃಢಪಡಿಸಿ ಪುನಃ ಬೆಚ್ಚಗೆ ಹೊದ್ದು ಮಲಗಿಯೂ ಬಿಟ್ಟರೆ ಅಲ್ಲಿಗೆ ಮುಗಿಯಿತು. ಆದರೆ ಈ ರೀತಿಯ ಮೆಚ್ಚುಗೆಯ ಕರೆಗಳು ಬರಲಾರಂಭಿಸಿದಾಗ ಮಾತ್ರ ಸಡಗರದಿಂದ ಜಡತ್ವವನ್ನೊದ್ದು ಮೈಕೊಡವಿ ಮೇಲೆದ್ದು ಅತ್ಯಂತ ವಿಧೇಯ ವಿದ್ಯಾರ್ಥಿಯಂತೆ ಪ್ರತಿ ಕರೆಯನ್ನೂ ಪ್ರೀತಿಯಿಂದ ಅರುಹಲಾರಂಭಿಸುತ್ತದೆ! ಬೆಳಗಿನಿಂದ ಒಂದರೊಳಗೊಂದರಂತೆ ಓವರ್ ಲ್ಯಾಪ್ ಆಗಿ ಬರಲಾರಂಭಿಸಿದ ಕರೆಗಳಿಂದ ನಗುವುದೋ ಅಳುವುದೋ ನೀವೇ ಹೇಳಿ ಎನ್ನುವಂತಿರುವಾಗಲೇ ಹಿಂದಿನ ದಿನ ಸಂಜೆ ತಾನೇ ನಡೆದ ನಮ್ಮ ತಿಂಗಳ ಸಾಹಿತ್ಯ ಕಾರ್ಯಕ್ರಮದಲ್ಲಿ ಲೇಖನದೊಂದಿಗೆ ಪ್ರಕಟಿಸುವ ಮೊಬೈಲ್ ಸಂಖ್ಯೆಯಿಂದ ಏನೆಲ್ಲಾ ಪಜೀತಿಯಾಗುತ್ತದೆ ಎನ್ನುವ ಬಗ್ಗೆ ನಡೆದ ಚರ್ಚೆಯಲ್ಲಿ ನಾನೂ ನನ್ನ ಹಿರಿತನದ ಅನಿವಾರ್ಯ ಬೆನಿಫಿಟ್ ಪಡೆದು ಎಲ್ಲರಿಗೂ ನನಗಾದ ಈ ಮುಂಚಿನ ಕಿರಿಕಿರಿ ಅನುಭವಗಳನ್ನು ಹೇಳಿ, ಅದಕ್ಕೆ ಪರಿಹಾರೋಪಾಯವನ್ನೂ ಬಹಳ ಆಢ್ಯತೆಯಿಂದಲೇ ಸೂಚಿಸಿದ್ದೆ. ಆಗ ನನ್ನ ಸಾಹಿತ್ಯಲೋಕದ ಸಹಭಾಗಿನಿಯರು ಕ್ಲಿಕ್ಕಿಸಿ ಕಳುಹಿಸಿದ  ಫೋಟೋಗಳನ್ನೆಲ್ಲಾ ಫೇಸ್ ಬುಕ್, ವಾಟ್ಸ್ಯಾಪ್‍ಗಳಲ್ಲೆಲ್ಲಾ ಹಾಕುವ ಸಡಗರದಲ್ಲಿರುವಾಗಲೇ ಮತ್ತೊಮ್ಮೆ ಇದೇ ವ್ಯೂಹದೊಳಗೆ ಸೆಳೆದುಕೊಂಡಂತಾಯಿತಲ್ಲಾ ಎಂದುಕೊಳ್ಳುವಾಗಲೇ ಗತನೆನಪುಗಳು ಸರಸರನೆ ನನ್ನ ಮನಃಪಟಲದ ಮೇಲೆ ಸರಿಯಲಾರಂಭಿಸಿದವು.....

    ನಮ್ಮ ಅನುಭವಗಳ ಕಣಜ ತುಂಬಿದಷ್ಟೂ ತುಳುಕದ, ಮೊಗೆದಷ್ಟೂ ಬರಿದಾಗದ ವಿಶಿಷ್ಟ ಅಕ್ಷಯ ಪಾತ್ರೆ ಎನ್ನುವುದಕ್ಕೆ ಮತ್ತೊಂದು ಪುರಾವೆ ಸಿಕ್ಕಂತಾಯಿತೇನೋ ಎನ್ನುವಂತಿತ್ತು ಆ ಘಟನೆಗಳ ಸರಮಾಲೆ. ಒಂದು ಅನುಭವವು ಮತ್ತೊಂದು ಅನುಭವಕ್ಕೆ ಕೈಮರವಾಗುತ್ತದೆ ಎನ್ನುವಂತೆ.....ಎಂದು ಘನಘೋರ ರೀತಿಯಿಂದಲೇ ತೆರೆದುಕೊಳ್ಳಲಾರಂಭಿಸುವ ನನ್ನ ನೆನಪುಗಳ ಕಥನ ಹೀಗಿದೆ:

      ಕೆಲವು ದಿನಗಳ ಹಿಂದೆ ಪತ್ರಿಕೆಯೊಂದರಲ್ಲಿ ಬಂದ ಪುಟ್ಟ ಅನುಭವ ಲೇಖನವೊಂದನ್ನು ಓದಿದವರೊಬ್ಬರು ಲೇಖನದೊಡನೆ ಪ್ರಕಟಿಸಿದ್ದ ನನ್ನ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನನಗೆ ಕರೆ ಮಾಡಿದರು. ಆ ಪುಟ್ಟ ಲೇಖನದಲ್ಲಿ ಒಬ್ಬರು ಅಜ್ಜಿಯ ಕರುಣಾಜನಕ ಅಸಹಾಯಕ ಸ್ಥಿತಿಯ ಬಗ್ಗೆ ಬರೆದಿದ್ದೆ. ಅದು ತಮ್ಮ ಮನಸ್ಸಿಗೆ ಎಷ್ಟೊಂದು ನೋವುಂಟು ಮಾಡಿತೆಂದರೆ ತಮಗೆ ನನ್ನೊಡನೆ ಮಾತನಾಡದೇ ಇರಲು ಸಾಧ್ಯವಾಗಲೇ ಇಲ್ಲವೆಂದು ಮಾತಿಗಾರಂಭಿಸಿದ ಆಕೆ ಸಹಜವಾಗಿಯೇ ನಮ್ಮ ಮನೆಯ ವಿವರವನ್ನೂ ಪಡೆದುಕೊಂಡರು. ನನ್ನನ್ನು ಫೋನಿನಲ್ಲಷ್ಟೇ ಮಾತನಾಡಿಸಿದ್ದರಿಂದ ತನಗೆ ಸಮಾಧಾನವಾಗುತ್ತಿಲ್ಲವೆಂದೂ ಎದುರಿಗೇ ಕುಳಿತು ಮಾತನಾಡಬೇಕೆಂದೂ `ಕಾಕರಾಜ ನೀನು 

ನಮ್ಮ ವನಕೆ ಬಹಳ ದಿನಕೆ ಬಂದೆ ನಿನ್ನ ಕಂಡು ನನ್ನ ಮನಕೆ ಹರುಷವಾಯಿತು...’ ಎಂದು ಕಪಟಿ ನರಿಯು ಕಾಗೆಯನ್ನು ಉಬ್ಬಿಸಿದಂತೆ ಪರಿಪರಿಯಾಗಿ ಹೊಗಳಲಾರಂಭಿಸಿದರು.  ಅಮಾವಾಸ್ಯೆಗೋ ಹುಣ್ಣಿಮೆಗೋ ಒಮ್ಮೆ ಪ್ರಕಟವಾಗುವ ನನ್ನ ಬರಹಕ್ಕೆ ಇಂಥಾ ಪ್ರಶಂಸೆಯೇ ಎನಿಸಿತು! ಆ ಲೇಖನದ ಶೀರ್ಷಿಕೆಯೇ(ಏಕೆ ಹೀಗೆ?) ತಮ್ಮನ್ನು ಚಿಂತನೆಗೆ ಹಚ್ಚಿತು ಎಂದೂ ಹೇಳಿದರು! ಅದರ ಬಗ್ಗೆ ಎಳೆಎಳೆಯಾಗಿ ವಿಶ್ಲೇಷಿಸಿ ವೃದ್ಧರ ಸಮಸ್ಯೆಗಳಿಗೆ ಏನಾದರೂ ಪರಿಹಾರವನ್ನು ಮಾಡಲೇಬೇಕು, ಆ ಬಗ್ಗೆ ನಿಮ್ಮೊಂದಿಗೆ ಮಾತನಾಡಲು ನಿಮ್ಮ ಮನೆಗೇ ಬರುತ್ತೇನೆ ಎಂದೂ ಆತ್ಮೀಯತೆಯ ಮಳೆಗರೆದರು. ಅವರ ಈ ಮಟ್ಟದ ಆಗ್ರಹ ನನಗೆ ಕಸಿವಿಸಿಯುಂಟುಮಾಡಿದರೂ ಬರಹಗಳು ಪ್ರಕಟವಾದಾಗ ಓದುಗರಿಂದ, ಹಿಂದಿನ ದಿನಗಳಲ್ಲಿಯಾದರೆ ಪತ್ರಗಳು, ನಂತರ ಫೋನು, ಇತ್ತೀಚೆಗೆ ಈಮೇಲ್, ಬ್ಲಾಗ್, ಫೇಸ್‍ಬುಕ್, ವಾಟ್ಸ್ಯಾಪ್.....ಗಳಲ್ಲಿನ ಪ್ರತಿಕ್ರಿಯೆಗಳು ಇವೆಲ್ಲಾ ಸಾಮಾನ್ಯವಾಗಿ ಬರುತ್ತಿದ್ದುದರಿಂದ ಸಹಜವಾಗಿಯೇ ಸ್ವೀಕರಿಸಿದೆ. ವೃದ್ಧರ ಬಗೆಗಿನ ಆಕೆಯ ಕಾಳಜಿ ಮೆಚ್ಚುವಂತಹದಾಗಿತ್ತು. ಇದಾದ 2-3ದಿನಗಳಲ್ಲಿಯೇ ಇನ್ನೂ ಬೆಳ್ಳಂಬೆಳಿಗ್ಗೆಯೇ ನಮ್ಮತ್ತೆ ಹೇಳುವಂತೆ ಕೋಳಿ ಕೊಕ್ ಅನ್ನೋಹೊತ್ತಿಗೇ ಆಕೆ ಫೋನಾಯಿಸಿ ಯಾವುದೋ ಕಾರ್ಯನಿಮಿತ್ತ ನಮ್ಮ ಏರಿಯಾಕ್ಕೇ ಬಂದಿರುವುದಾಗಿ ತಿಳಿಸಿ `ನಿಮ್ಮ ಮನೆಯ ಸಮೀಪದಲ್ಲೇ ಇದ್ದೇನೆ. ಹೇಗೆ ಬರುವುದು ಹೇಳಿ,’ ಎಂದು  ಅಚ್ಚರಿಯನ್ನುಂಟುಮಾಡಿದರು. ಕೆಲವೇ ಕ್ಷಣಗಳಲ್ಲಿ ಅವರು ತಮ್ಮ ಗೆಳತಿಯೊಂದಿಗೆ ಬಂದವರೇ ಸೋಫಾದ ಮೇಲೆ ಆಸೀನರಾಗಿ ನನಗೆ ಸಖೇದಾಶ್ಚರ್ಯವನ್ನುಂಟುಮಾಡುವಂತೆ ವರ್ತಿಸಲಾರಂಭಿಸಿದರು. ನನ್ನ ಆತಿಥೇಯ ಪ್ರಜ್ಞೆ ಎಚ್ಚೆತ್ತು ಎಂದಿನ `ಬಾಬಿಬಾ’ ಆತಿಥ್ಯಕ್ಕೆ ಮುಂದಾಗಿ ಬಾಳೆಹಣ್ಣು ಮತ್ತು ಬಿಸ್ಕತ್ತನ್ನು ಕೊಟ್ಟು ಬಾದಾಮಿಹಾಲು ತಯಾರಿಸಲು ಹೊರಟೆ. ಆಕೆ, `ನಮಗೆ ಕುಡಿಯಲು ಏನೂ ಬೇಡ. ಬಿಸಿನೀರು ಕೊಡಿ ಸಾಕು’ ಎಂದು ಸ್ವಲ್ಪ ಆಗ್ರಹಿಸುವಂತೆಯೇ ಹೇಳಿದರು. ಬಿಸಿನೀರಿಗೆ ತಾವೇ ತಂದಿದ್ದ ಗ್ರೀನ್ ಟೀ (ಸ್ಯಾಷೆಯಿಂದ) ಹಾಕಿಕೊಂಡು ಕುಡಿದು ಪೊರೆಕಳಚಿದ ಹಾವಿನಂತೆ ಸರಸರನೆ ತಮ್ಮ ಕೈ ಚೀಲದಿಂದ ನನ್ನ ಲೇಖನವು ಪ್ರಕಟವಾಗಿದ್ದ ಪತ್ರಿಕೆಯ ತುಣುಕನ್ನು ತೆಗೆದು ಅದರ ಕುರಿತು ಭಾವೋದ್ವೇಗದಿಂದ ಮಾತನಾಡಲಾರಂಭಿಸಿದರು, `ಈ ಕಷ್ಟಗಳು ಏಕೆ ಬರುತ್ತವೆ? ಕೆಲವರಿಗೇ ಏಕೆ ನೋವು ಉಂಟಾಗುತ್ತದೆ? ಸಾವು ಎಂದರೇನು?......... ಎಲ್ಲವಕ್ಕೂ ಉತ್ತರ ಇಲ್ಲಿದೆ,’ ಎಂದು ತಮ್ಮ ಟ್ಯಾಬನ್ನು ತೆಗೆದು ಒಂದು ವಿಡಿಯೋ ಪ್ಲೇ ಮಾಡಿದರು. `ಎಲ್ಲವಕ್ಕೂ ಕಾರಣ ಮತ್ತು ಪರಿಹಾರ ಈ ...... ರಲ್ಲಿದೆ,’ ಎಂದು ಆ ...ಸಂಸ್ಥೆಯ ಬಗ್ಗೆ ಹೇಳಲಾರಂಭಿಸಿದರು! ಬ್ರಿಟಿಷರು ಭಾರತದೊಳಗೆ ಉಪಾಯವಾಗಿ ನುಸುಳಿದರು ಎಂದು ಶಾಲೆಯಲ್ಲಿ ಓದಿದ್ದರ ನೆನಪಾಯಿತು. ಇದು  ಪ್ರಚಾರಪ್ರಿಯತೆಯಲ್ಲದೇ ಬೇರೇನೂ ಅಲ್ಲ ಎನ್ನುವುದು ನನ್ನ ಮಡ್ಡ ತಲೆಗೂ ಹೊಳೆಯಿತು. ಹಣ, ಜೀವನಾಗತ್ಯ ವಸ್ತುಗಳು ಮುಂತಾದವುಗಳ ಆಮಿಶವೊಡ್ಡಿ ತಮ್ಮತ್ತ ಸೆಳೆದುಕೊಳ್ಳುವುದರ ಬಗ್ಗೆ ಕೇಳಿದ್ದೆ. ಆದರೆ ಹೀಗೆ ನನ್ನಂಥಾ ಬಡಪಾಯಿ ಲೇಖಕರ ಬರಹಗಳನ್ನು ಪ್ರಶಂಸಿಸಿ, ಹೊಗಳಿಕೆಯ ಹೊನ್ನಶೂಲಕ್ಕೇರಿಸಿ ತಮ್ಮ ಕಾರ್ಯ ಸಾಧನೆ ಮಾಡಿಕೊಳ್ಳುವ ಹೊಸ ಜಾಲಕ್ಕೆ ನನ್ನಂಥವರನ್ನು ಮಿಕವಾಗಿಸುತ್ತಿದ್ದಾರಲ್ಲಾ! ನಾನು ನನ್ನ ಖಚಿತ ಅಭಿಪ್ರಾಯವನ್ನು ತಿಳಿಸಿ, `ಒಂದು ಸೆಲ್ಫಿ ಪ್ಲೀಸ್,’ ಎಂದು ಫೋಟೋ ತೆಗೆಯಲು ಸಿದ್ಧಳಾದಾಗ ಮೆಲ್ಲನೆ ಜಾಗ ಖಾಲಿಮಾಡಿದರು. ಇದಾದ ಕೆಲವೇ ದಿನಗಳ ನಂತರ ಒಂದು ಅನ್‍ನೋನ್ ನಂಬರ್‍ನಿಂದ ಕಾಲ್ ಬಂತು. ಪುನಃ ಆಕೆಯೇ, `ನಮ್ಮದೊಂದು ವೆಬ್ ಸೈಟ್ ಇದೆ,.......’ ಎಂದು ಮತ್ತೆ ತಮ್ಮ ಹಳೆಯ ಶೈಲಿಯಲ್ಲಿಯೇ, `........ಕೆಲವರಿಗೇ ಏಕೆ ನೋವು ಉಂಟಾಗುತ್ತದೆ? ಸಾವು ಎಂದರೇನು?.........’ಮುಂತಾಗಿ ತಮ್ಮ ಓಲ್ಡ್ ಪ್ಲೇಟನ್ನೇ ರೀಪ್ಲೇ ಮಾಡಿದರು! ನಮ್ಮ ಮನೆಗೆ ನೀವು ಈಗಾಗಲೇ ಬಂದಿದ್ದಿರಿ ಎಂದರೆ ಆಕೆಗೆ ನೆನಪೇ ಇಲ್ಲ! ಮತ್ತೊಮ್ಮೆ ಈ ಮೊದಲಿನಂತೆಯೇ ನನ್ನ ವಿವರವನ್ನು ನನ್ನಿಂದಲೇ ಪಡೆಯುವ ಯತ್ನ ನಡೆಸಿದರು!  

       ಈಗ ಮತ್ತೊಮ್ಮೆ ಫೋನು, ಮೆಸೇಜು, ವಾಟ್ಸ್ಯಾಪು.....ಗಳೆಂಬ ಬಾಹ್ಯ ಪ್ರಪಂಚದ ಗೊಡವೆಯೇ ಬೇಡವೆಂದು ಮುಷ್ಕರಹೂಡಿ ನಿರ್ಲಿಪ್ತತಾ ಭಾವದಲ್ಲಿದ್ದ ನನ್ನ ಮೊಬೈಲೂ ಗರಿಗೆದರಿ ಕಿವಿನಿಮಿರಿಸಿ ಜಾಗರೂಕವಾಗಿಬಿಟ್ಟಿದೆ!

       ಪ್ರತಿಕ್ರಿಯೆಯ ಮೂಲಕ ತಮ್ಮ ಮೆಚ್ಚುಗೆಯನ್ನು ತಿಳಿಸಿ ಪ್ರೋತ್ಸಾಹಿಸುವ ಸಹೃದಯರಿಗೆ ನನ್ನ ಅನಂತ ನಮನಗಳು. ಆದರೆ... ಲೇಖನದ ಹೊಗಳಿಕೆಯಿಂದಲೇ ಪ್ರಾರಂಭವಾಗುವ ಕೆಲವರ ಪ್ರತಿಕ್ರಿಯೆ ಎತ್ತೆತ್ತಲೋ ದಾರಿತಪ್ಪಿ ಹೊರಡುವುದೇ ಗೊಂದಲ. ಕೆಲವಂತೂ ಸೈಟ್ ಮಾರಾಟಕ್ಕಿದೆ ಸಂಪರ್ಕಿಸಿ, ಭವಿಷ್ಯ ಕೇಳಲು, ಜಾತಕ ಬರೆಸಲು ನನಗೇ ಕಾಲ್ ಮಾಡಿ, ಹಪ್ಪಳ-ಸಂಡಿಗೆ-ಉಪ್ಪಿನಕಾಯಿಗೆ ಈ ನಂಬರ್‍ಗೆ ರಿಂಗ್ ಕೊಡಿ ಮುಂತಾದ ಜಾಹಿರಾತುಗಳ ಮಹಾಪೂರ,.... ಒಮ್ಮೊಮ್ಮೆ ಕೆಲವರು ಅತ್ಯುತ್ಸಾಹದಲ್ಲಿ ನನ್ನ ವೈಯಕ್ತಿಕ ವಿವರಗಳನ್ನೇ ಪಡೆಯಲು ಮುಂದಾಗುವುದಿದೆ. `ನಾನೀಗ ರಿಟೈರ್ಡ್....’ ಎಂದು ಪ್ರವರಾರಂಭ ಮಾಡುವಾಗಲೇ ಅತ್ತಿಂದ ಕೇಳಿಬರುವ ಕಾಲ್ ಕಟ್ ಆದ ಸದ್ದು ಮಾತನಾಡುತ್ತಿರುವವರ ಮನಃಸ್ಥಿತಿಗೆ ಹಿಡಿದ ಕನ್ನಡಿಯಾಗಿರುತ್ತದೆ. ಬಹುತೇಕ ಸಂದರ್ಭಗಳಲ್ಲಿ ನಿವೃತ್ತಳು ನಾನು ಎನ್ನುವುದೇ ನನಗೆ ಶ್ರೀರಕ್ಷೆ! ಆದರೂ... ಇತ್ತೀಚೆಗೆ ಬಂದ ಒಂದು ಮೆಸೇಜ್, `ನನಗೀಗ 33ವರ್ಷ, ನನಗೆ ಅಣ್ಣ, ಅಕ್ಕ, ತಮ್ಮ ಎಲ್ಲಾ ಇದಾರೆ. ಆದರೆ ತಂಗಿ ಇಲ್ಲ. ನೀವು ನನ್ನ ತಂಗಿ ಆಗಿ ಪ್ಲೀಸ್!’ ಎನ್ನುವುದು ನನಗೆ ಅಚ್ಚರಿಯನ್ನೇ ಉಂಟುಮಾಡಿತು. ಇವರು ಈ ಮೊದಲೇ ನನ್ನೊಂದಿಗೆ ಮಾತನಾಡಿ ನನ್ನ ದ್ವನಿಯಿಂದ mislead ಆದವರು ಇರಬಹುದೇನೋ ಎಂದುಕೊಂಡು ಎಂದಿನಂತೆ ನಾನು ಪ್ರತಿಕ್ರಿಯಿಸದೇ ಇದ್ದಾಗ ಅತ್ತಿಂದ ಪರಿಪರಿಯಾಗಿ ಪಿರಿಪಿರಿಯಾಗಲಾರಂಭಿಸಿತು. ಆತನಿಗೆ, `ನೀವು ನನ್ನ ಅರ್ಧವಯಸ್ಸಿನವರಪ್ಪಾ...,’ ಎಂದು ಪ್ರತಿಕ್ರಿಯಿಸಬಹುದಾದ ಘನತೆಯನ್ನು ದಯಪಾಲಿಸಿದ, ಆಹಾ ನನ್ನ ನಿವೃತ್ಯಾನಂದದ ಸೊಬಗೇ! ಏನಾದರಾಗಲಿ ತನ್ನನ್ನು ತಾನು ಬಚ್ಚಿಟ್ಟುಕೊಂಡು ತನ್ನ ಸುಮಧುರ ಗಾನದಿಂದಲೇ ಪ್ರಖ್ಯಾತವಾಗುವ ಕೋಗಿಲೆಯಂತಿದ್ದರೆ ಎಷ್ಟು ಚೆನ್ನ ಎಂದುಕೊಂಡರೂ ನಮ್ಮ ಸ್ಥಳೀಯ ಪ್ರತಿಭೆ ಕಾಕರಾಜನಂತಾಗಿರುವ ನನ್ನ ಪಾಡಿಗೆ ನಾನೇ ಸ್ವಾನುಕಂಪಿಸುವ ಸ್ಥಿತಿಯುಂಟಾಗಿದೆ ಎಂದು confession ಮಾಡಿಕೊಳ್ಳುವುದು ಅನಿವಾರ್ಯವಾಗಿದೆ!

                                                                                      

                                     ~ಪ್ರಭಾಮಣಿನಾಗರಾಜ 









 

Friday, January 5, 2024

ಕವನ : ವಿಸ್ಮಯ

 ಎಲ್ಲರಿಗೂ ವಂದನೆಗಳು🙏

ನನ್ನ ಈ ಕವನ ತಮ್ಮ ಪ್ರೀತಿಯ ಓದಿಗೆ❤️🌼
ವಿಸ್ಮಯ       

ತನ್ನ ಪರ ಪೀಳಿಗೆಯ
ಉಳಿವಿಗಾಗಿ
ಕನಸುವ ಪುಟ್ಟ ಹಕ್ಕಿಗೂ
ತನ್ನದೇ ಗೂಡೊಂದ
ಕಟ್ಟುವ ಸಂಭ್ರಮ

ಅತ್ತಿತ್ತ ಅಲೆಯುತ್ತಾ
ಹೆಕ್ಕಿ ಒಂದೊಂದೇ
ಹುಲ್ಲಗರಿ ಕಸಕಡ್ಡಿ...
ಬೆಳಗಿನಿಂದ ಬೈಗವರೆಗೂ
ಒಗ್ಗೂಡಿಸುವ ಶ್ರಮ

ತೂಗು ಎಲೆಗಳ
ನಡುವೆಯೋ
ಮರದ ಪೊಟರೆಯಲೋ
ಸೂಕ್ತಸ್ಥಳವಾರಿಸಿ
ಕುಕ್ಕೆಹೆಣೆದು
ಮೊಟ್ಟೆಗಳು ಅಲುಗದಂತೆ
ಮರಿ ನಲುಗದಂತೆ
ಸಿದ್ಧಪಡಿಸುವ
ಮೃದುಹಾಸು

ಇಟ್ಟಮೊಟ್ಟೆಗೆ
ಕಾವೂಡುವ ಸಡಗರದಿ
ತನ್ನೆಲ್ಲ ಅತ್ಯಗತ್ಯವನೂ
ಕಡೆಗಣಿಸಿ
ಗೂಡುಬಂಧಿಯಾಗಿ
ಧೇನಿಸುವ
ಮಾತೃ ತಪಸ್ವಿ...

ಈ ಯಾವ
ಕರ್ಮಾನಂದವೂ
ಏಕಿಲ್ಲ
ಕರ್ಣಾನಂದಕರಿ
ಮುದ್ದು ಕೋಗಿಲೆಗೆ?

ಸಿದ್ಧ ಗೂಡಲಿ
ಮೊಟ್ಟೆ ಇಟ್ಟು
ಎದ್ದೊಡುವ
ಕಳ್ಳ ಕಾಯಕವೇ?

ಪ್ರಕೃತಿಯೊಡಲಲೂ
ಪರಪುಟ್ಟನಂಥಾ
ಪರವಂಚನೆಯ
ಜಾಲದ ಒಳಸುಳಿವ
ಬಲ್ಲಾತ - ನಿರ್ಮಿತ
ನೀನಲ್ಲವೇ ವಿಭುವೇ?
               ~ಪ್ರಭಾಮಣಿ ನಾಗರಾಜ
(ಇದು ' ಕಥಾಗುಚ್ಛ'ದ ನಿನ್ನೆಯ 'ಕಾವ್ಯಾoಗಣ'ದಲ್ಲಿ ಪ್ರಕಟವಾಗಿದೆ.)