Tuesday, April 9, 2024

ಸುಧಾ' ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ನನ್ನ 'ಎಲ್ಲದಕೂ ಕಾರಣ ನೀನೇ ಪ್ರಿಯ ದರ್ಪಣ'ಕ್ಕೆ ಪ್ರಥಮ ಬಹುಮಾನ

 



'ಸುಧಾ' ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ನನ್ನ 'ಎಲ್ಲದಕೂ ಕಾರಣ ನೀನೇ ಪ್ರಿಯ ದರ್ಪಣ'ಕ್ಕೆ ಪ್ರಥಮ ಬಹುಮಾನ ಲಭಿಸಿದೆ ಎಂಬ ಸಂತಸವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ😍

ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು❤️🙏


'ಸುಧಾ' ಯುಗಾದಿ ಪ್ರಬಂಧ ಸ್ಪರ್ಧೆ: ಪ್ರಭಾಮಣಿ, ಸತೀಶ್‌, ಅರಳಿಸುರಳಿಗೆ ... 



https://www.facebook.com/share/p/5BGqzAvXVZUF2uKy/?mibextid=oFDknk

Sunday, April 7, 2024

ವಿಜಯ ಕರ್ನಾಟಕ ಯುಗಾದಿ ವಿಶೇಷ ಸಂಚಿಕೆಯಲ್ಲಿ ನನ್ನ ಲಲಿತ ಪ್ರಬಂಧ


ಈ ಸುಂದರ ಸಂಚಿಕೆದಲ್ಲಿ  ನನಗೂ ಲಲಿತ ಪ್ರಬಂಧವನ್ನು ಬರೆಯಲು ಅವಕಾಶ ನೀಡಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು ವಿದ್ಯಾ ಮೇಡಂ ವಿದ್ಯಾರಶ್ಮಿ ಪೆಲತ್ತಡ್ಕ  ❤️🙏 ನನ್ನ ಮಗಳು Sushma Sindhu  ಬಹುಮಾನಿತ ಲೇಖನವೂ ಇರುವುದು ಇನ್ನೂ ಹೆಚ್ಚು ಸಂತಸವಾಗಿದೆ😍

https://www.facebook.com/share/p/KKeCr2fd5sXgw8de/?mibextid=oFDknk

 https://www.facebook.com/share/p/impDXh3DXeQXvMVq/?mibextid=oFDknk



Saturday, April 6, 2024

'ಸುಧಾ' ಪತ್ರಿಕೆಯಲ್ಲಿ ಲಲಿತ ಪ್ರಬಂಧ - 'ಎಡವಟ್ಟೋ… ಎಡವಟ್ಟು!

 





ಹಿಂದಿನ ವಾರದ ( ಏಪ್ರಿಲ್04, 2024) 'ಸುಧಾ' ಪತ್ರಿಕೆಯ 'ಮಂದಹಾಸ'ದಲ್ಲಿ  ಪ್ರಕಟವಾಗಿರುವ ನನ್ನ ಲಲಿತ ಪ್ರಬಂಧ - 'ಎಡವಟ್ಟೋ… ಎಡವಟ್ಟು!'  ನಿಮ್ಮ ಪ್ರೀತಿಯ ಓದಿಗೆ😍


ಎಡವಟ್ಟೋ… ಎಡವಟ್ಟು!

              


              ನಮ್ಮ ಹಳ್ಳಿಯ ಜನ ಅನ್ವರ್ಥನಾಮ ಇಡುವುದರಲ್ಲಿ ಬಹಳ ಪ್ರವೀಣರಿದ್ದರು. ಹೊಸಬರನ್ನು ಕಂಡಾಗ ಅವರ ಹೆಸರೇನು ಎಂದು ಕೇಳುವ ಗೋಜಿಗೂ ಹೋಗದೇ ಅವರಲ್ಲಿಯ ದೈಹಿಕ ಅಥವಾ ವರ್ತನಾ ಪ್ರಧಾನ ಗೋಚರಾಂಶವನ್ನು ಗುರುತಿಸಿ ತಕ್ಷಣವೇ ಒಂದು ಅನ್ವಯನಾಮವನ್ನಿಟ್ಟು ಕರೆದೇಬಿಡುತ್ತಿದ್ದರು. ಈ ರೀತಿಯ ನಡೆಯನ್ನು ನಮ್ಮ ಮನೆಯಲ್ಲಿ ಅನಾಗರಿಕವೆಂದು ಪರಿಗಣಿಸಿದ್ದರಿಂದ ಅದಕ್ಕೆ ಆಸ್ಪದವಿರಲಿಲ್ಲ. ಆದರೂ ನಮ್ಮ ಮನೆಯ ಹಿರಿಯ ಮೇಲ್‌ ಮಕ್ಕಳು ಕದ್ದುಮುಚ್ಚಿ ಇಂಥಾ ಹೆಸರುಗಳನ್ನಿಟ್ಟು ಕೀಟಲೆಮಾಡುತ್ತಿದ್ದುದು ನಡೆದೇ ಇತ್ತು. ಇದಕ್ಕೆಲ್ಲಾ ಬಲಿಪಶುವಾಗುತ್ತಿದ್ದುದು ನಿರುಪದ್ರವಿ ಜೀವಿಯಾದ ನಾನೇ ಆದ್ದರಿಂದ ಅನಿವಾರ್ಯವಾಗಿ ನಾನು ಈ ಕೋಟಲೆಯನ್ನು ಅನುಭವಿಸಲೇಬೇಕಿತ್ತು. ಎಡವಟ್ಟ, ಎಂಗರವಟ್ಟ, ಮೊದ್ದು, ಪೆಂಗ, ಪೆಗ್ಗೆ ಮುಂತಾಗಿ ಸಂದರ್ಭಾನುಸಾರ ಕರೆಯುವುದೆಂದರೆ ಅವರಿಗೆ ಖುಷಿಯೋಖುಷಿ. ಹೀಗೆ ಬಾಲ್ಯದಿಂದಲೇ ಪಾರಂಭವಾದ ನನ್ನ ಎಡವಟ್ಟುತನ ನನ್ನೊಂದಿಗೇ ಬೆಳೆಯುತ್ತಾ ಸುತ್ತಿನವರಿಗೆಲ್ಲಾ ಆಗಾಗ ಮನರಂಜನೆಯನ್ನುಂಟುಮಾಡುತ್ತಿತ್ತು. 

ಚಿಕ್ಕಂದಿನಿಂದಲೇ ಅನಿವಾರ್ಯ ಎಡವಟ್ಟಾಂಕಿತಳಾಗಿದ್ದ ನನಗೆ ಬಹಳ ದಿನಗಳ ನಂತರ ಎಡವಟ್ಟು ಅಂದರೆ ಅರ್ಥವೇನು ಎನ್ನುವ ಸಮಸ್ಯೆ ಕಾಡಲಾರಂಭಿಸಿತು. ಎಡವಟ್ಟು ಪದದ ವ್ಯತ್ಪತ್ತಿಯನ್ನು ಶೋಧಿಸಿದಾಗ ಪ್ರೊಫೆಸರ್ ಜಿ.ವೆಂಕಟಸುಬ್ಬಯ್ಯನವರ ವಿಶ್ಲೇಷಣೆಯಂತೆ 

ʼಎಡʼ ಮತ್ತು ʼಪಡುʼ ಎರಡು ಪದಗಳು ಸೇರಿ ಎಡವಟ್ಟು ಆಗಿದೆ ಎಂದು ತಿಳಿದುಬಂತು.

ಎಡ ಅಂದರೆ ಎಡಗಡೆ, ಎಡಗೈಯಿಂದ ಒಳ್ಳೆಯ ಕೆಲಸ ಮಾಡಬಾರದು ಅಂತ ಅಜ್ಜಿ ಆಗಾಗ ಹೇಳ್ತಿದ್ದರು. ಬೆಳಿಗ್ಗೆ ಏಳುವಾಗಿನಿಂದಲೇ ಎಡಮಗ್ಗುಲಲ್ಲಿ ಏಳಬಾರದು ಎನ್ನುವುದರಿಂದ ಪ್ರಾರಂಭವಾಗಿ ಎಡಗೈಲಿ ಊಟ ಮಾಡಬಾರದು, ಎಡಗೈಲಿ ಬರೆಯಬಾರದು, ದೇವರಿಗೆ ಪ್ರದಕ್ಷಿಣೆಯನ್ನೂ ಎಡಗಡೆಯಿಂದ ಮಾಡಬಾರದು… ಮುಂತಾಗಿ ಎಡ ನಿಷೇಧಗಳ ಲಿಸ್ಟ್‌ ಮುಂದುವರಿಯುತ್ತಿತ್ತು. ಇನ್ನು ʼಪಡುʼ ಅನ್ನೋದು ಪಟ್ಟು ರೂಪ ಪಡೆದು, ಎಡ ಮತ್ತು ಪಟ್ಟು ಸೇರಿ ಸಮಾಸವಾಗುವಾಗ ಎಡವಟ್ಟು ಆಗಿದೆ!. ಅಬ್ಬಬ್ಬಾ ಎಡವಟ್ಟೇ! ಹಾಗಾಗಿ ಎಡವಟ್ಟು ಅಂದರೆ ಎಡಕ್ಕೆ ಬಿದ್ದ, ಕ್ರಮ ತಪ್ಪಿದ, ಸರಿ ಹೋಗದ.. ಇತ್ಯಾದಿ ಅರ್ಥ ಬರುತ್ತದೆ ಎಂದು ತಿಳಿಯಿತು. ಈ ಹಾಳು ಹಿರೀಹುಡುಗರು ಎಡವರಿಯದ ಪಾಪದ ಜೀವಿಯಾದ ನನ್ನ ತಲೆಗೆ ಏಕೆ ಈ ಹುಳವನ್ನು ಬಿಟ್ಟರೋ ಕಾಣೆ. ನಾಲ್ಕಕ್ಷರ ಕಲಿತ ನಂತರ ಎಲ್ಲೆಲ್ಲೂ ನನಗೆ ಎಡವಟ್ಟೇ ಕಾಣಲಾರಂಭಿಸಿತು.

ಮೆಡಿಸಿನ್ ತಿಂದು ಎಡವಟ್ಟಾಗಿ ಮಹಿಳೆಯೊಬ್ಬರ ನಾಲಿಗೆ ಕಪ್ಪು ಬಣ್ಣಕ್ಕೆ ತಿರುಗಿದ್ದು ಮಾತ್ರವಲ್ಲದೇ ನಾಲಿಗೆಯಲ್ಲಿ ಪೂರ್ತಿ ಕೂದಲು ಬೆಳೆಯಿತೆನ್ನುವ ವಾರ್ತೆಯಿಂದ ಯಾವುದೇ ಮೆಡಿಸಿನ್‌ ತೆಗೆದುಕೊಳ್ಳುವುದಕ್ಕೂ ಹಿಂದೆಮುಂದೆ ನೋಡುವಂತಾಯ್ತು. 

ಬ್ಯಾಂಕ್ ಸಿಬ್ಬಂದಿ ಎಡವಟ್ಟಿನಿಂದ ಖಾತೆಗೆ 6,000ರೂ ಬದಲು 6ಲಕ್ಷರೂ ಜಮಾ ಆಯ್ತು ಎನ್ನುವ ಸುದ್ಧಿಯನ್ನು ಓದಿದಾಗ ನನಗಾದರೂ ಆ ಅದೃಷ್ಟ ಖುಲಾಯಿಸಿದ್ದರೆ ಎನಿಸುವ ಬದಲು ಸಧ್ಯ ನಾನು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿಲ್ಲವಲ್ಲ ಎಂದು ಸಾರ್ವಜನಿಕ ಎಡವಟ್ಟಾಂಕಿತದಿಂದ ಪಾರಾದ ಬಗ್ಗೆ ಸಮಾಧಾನದ ನಿಟ್ಟುಸಿರಿಟ್ಟೆ.

ತಾನು ಧರಿಸಿದ ದುಪ್ಪಟ್ಟದಲ್ಲಿದ್ದ ಬೆಲೆಯ ಟ್ಯಾಗ್ ತೆಗೆಯುವುದನ್ನು ಮರೆತುಹೋದ ಎಡವಟ್ಟಿನಿಂದ ಪ್ರಸಿದ್ಧ ನಟಿಯೊಬ್ಬರು ಟ್ರೋಲ್‌ ಆದದ್ದನ್ನು ನೋಡಿದಾಗ ನನಗೆ ಒಮ್ಮೆ ಪರಮ ಎಡವಟ್ಟಳಾದ ನಾನು ಉಲ್ಟಾ ಸೀರೆಯುಟ್ಟು ದಿನವಿಡೀ ಡ್ಯೂಟಿ ಮುಗಿಸಿ ಹಿಂತಿರುಗಲು ಬಸ್‌ ಹತ್ತುವಾಗ ಸೆರಗನ್ನು ಹಿಡಿದ ಕೈಗೆ ಸೀರೆಯ ಫಾಲ್‌ ಸಿಕ್ಕಿ ಕಕ್ಕಾಬಿಕ್ಕಿಯಾದದ್ದು ನೆನಪಾಯ್ತು! 

ʼಎಡವಟ್‌ʼ ಎಂಬ ಶಬ್ದ ಕಿವಿಯ ಮೇಲೆ ಬಿದ್ದಾಕ್ಷಣವೇ ನನ್ನ ಶ್ರವಣೇಂದ್ರಿಯಗಳು ಚುರುಕಾಗುತ್ತಿದ್ದುದರಿಂದ ಎಡವಟ್ಟಾಯಿತು ಫೋನ್ ಡೆಡ್ ಆಯ್ತು ಎನ್ನುವ ನ್ಯೂಸನ್ನು ಕಿವಿಗೊಟ್ಟು ಕೇಳಿದೆ. ಒಂದು ಮಾಡಕ್ ಹೋಗಿ ಮತ್ತೊಂದ್ ಮಾಡಿದ್ರಂತೆ ಎಂಬ ಗಾದೆ ಮಾತಿನಂತೆ ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿಯ ಮೇಲೆ ತೆರೆದುಕೊಂಡಿದ್ದ ಮ್ಯಾನ್ ಹೋಲ್ ಮುಚ್ಚಲು ಹೋಗಿ ಬಿಎಸ್ಎನ್ಎಲ್ ವೈರ್ ಕತ್ತರಿಸಿ ಹಾಕಿದ ಎಡವಟ್ಟಿನಿಂದ ಇಡೀ ಗ್ರಾಮದ ಲ್ಯಾಂಡ್ ಫೋನ್ ಡೆಡ್ ಆಗಿ ಗ್ರಾಮಸ್ಥರು ಪರದಾಡುವಂತಾಗಿದೆ ಎಂಬ ಸುದ್ಧಿಯಿಂದ ಮೊಬೈಲ್‌ ಇನ್ನೂ ಸಕಲರ ಕರಸ್ಥಳದಲ್ಲಿ ಇಂಬುಗೊಳ್ಳದಿದ್ದ ಆ ಕಾಲದಲ್ಲಿ ಲ್ಯಾಡ್‌ ಫೋನ್‌ ಎಷ್ಟೊಂದು ಮುಖ್ಯವಾಗಿತ್ತೆನ್ನುವುದು ಸ್ಮೃತಿಪಟಲದಲ್ಲಿ ಮೂಡಿತು. 

ಚಾರಣ ಹೊರಟು, ಜತೆಗಾರರಿಂದ ತಪ್ಪಿಸಿಕೊಂಡು ಭಯ, ಆತಂಕದಲ್ಲೇ ಮೂರ್ನಾಲ್ಕು ದಿನ ಕಾಡುಮೇಡು ಅಲೆದು ಅದೃಷ್ಟವಶಾತ್ ಬದುಕಿ ಬಂದ ಚಾರಣಿಗ ಕೊಟ್ಟ ಕಾರಣ ಕಾಲಿಗೆ ಹತ್ತಿದ ಜಿಗಣೆ ಕಿತ್ತು ಹಾಕಲು ಒಂದು ಕ್ಷಣ ಬಾಗಿದ ಎಡವಟ್ಟು. ಅಷ್ಟರಲ್ಲೇ ದಟ್ಟ ಮಂಜು ಮುಸುಕಿ  ಮುಂದೆ ಏನೂ ಕಾಣದಂತಾಗಿ, ಜೋರಾಗಿ ಕಿರುಚಿಕೊಂಡರೂ ಧಾರಾಕಾರ ಮಳೆಯ ಸದ್ದು, ಪಕ್ಕದಲ್ಲೆ ಹರಿಯುತ್ತಿದ್ದ ನೀರಿನ ಬೋರ್ಗರೆತದಿಂದ ಕೂಗು ಜತೆಗಾರರಿಗೆ ಕೇಳಿಸದಂತಾಗಿ… ಪ್ರಯೋಜನವಾಗಿರಲಿಲ್ಲ ಎನ್ನುವುದು ಚಾರಣಿಗರಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಹೀಗೇ ಎಡವಟ್ಟನ್ನೇ ಅರಸುತ್ತಾ ಎಡವಟ್ಟಾಗಿ ಜೀವನ ಮುನ್ನಡೆಯುತ್ತಿದ್ದಾಗ ನನ್ನ ವೈಯಕ್ತಿಕ ಬದುಕಿನಲ್ಲಿ ಮರಿಎಡವಟ್ಟಾಗಮನದ ಲಕ್ಷಣಗಳು ಕಂಡುಬಂದವು. ಆಗೆಲ್ಲಾ ಖಾಸಗಿ ಆಸ್ಪತ್ರೆಗಳು ಅಷ್ಟೇನೂ ಸುಸಜ್ಜಿತವಾಗಿಲ್ಲದಿರುತ್ತಿದ್ದರಿಂದ ನನಗೆ ಟ್ರೀಟ್‌ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಯ ಡಾಕ್ಟರ್‌ ನನ್ನನ್ನು ಜಿಲ್ಲಾಕೇಂದ್ರದ ಸರ್ಕಾರಿ ಆಸ್ಪತ್ರೆಗೆ ರೆಫರ್‌ ಮಾಡಿದರು. ಸಿಝೇರಿಯನ್‌ ಆಗಿ ಮಗು ಹುಟ್ಟಿದ ನಂತರ ನನ್ನ ಜೊತೆಗಿದ್ದ ನಮ್ಮಮ್ಮ ನರ್ಸ್‌ ಮಗುವನ್ನು ಎಲ್ಲಿ ಕರೆದುಕೊಂಡು ಹೋದರೂ ಜೊತೆಯಲ್ಲಿಯೇ ಹೋಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದರು. ಮಗು ಏನಾದರೂ ಅದಲುಬದಲಾದರೆ ಎನ್ನುವುದೇ ಅವರ ಚಿಂತೆ. ಅಮ್ಮನ ಈ ಓವರ್‌ ಪ್ರೊಟಕ್ಷನ್‌ ಕೇರ್‌ ನೋಡಿ ನನಗೆ ಆಶ್ಚರ್ಯವಾಗುತ್ತಿತ್ತು. ನಂತರದ ದಿನಗಳಲ್ಲಿ ಇತ್ತೀಚೆಗೆ ಪತ್ರಿಕೆಯಲ್ಲಿ ಬಂದ ಸುದ್ಧಿ ʼಪ್ರತಿಷ್ಠಿತ ಆಸ್ಪತ್ರೆಯೊಂದರ ಸಿಬ್ಬಂದಿ ಎಡವಟ್ಟಿನಿಂದ ಮಗುವನ್ನು ಅದಲು-ಬದಲು ಮಾಡಿದ್ದಾರೆ..ʼ ಎನ್ನುವುದನ್ನು ನೋಡಿ ಗಾಬರಿಬೀಳುವಂತಾಯ್ತು. ಅಮ್ಮಾ…

ಅವಸರದಲ್ಲಿ ಎಡವಟ್ಟು ಕೆಲಸ ಮಾಡುವುದನ್ನು ಅಬಾದುಬಿ ಎನ್ನುತ್ತಾರಂತೆ. ಈ ಪದದ ಮೂಲ ಹಿಂದಿಯ ʼಅಪಾಧಾಪಿʼಯಾಗಿದ್ದು, ಅದರ ಅರ್ಥ ಆಪತ್ತಿನ ಸಮಯದಲ್ಲಿ ದಿಕ್ಕು ತೋಚದೆ ಎತ್ತೆತ್ತೆಲೋ ಓಡಾಟ ಮಾಡುವುದೆಂದು ತಿಳಿದುಬಂದಿತು. ನಾನಿಂಥಾ ಅಬಾದುಬಿಗಳನ್ನು ಎಷ್ಟು ಮಾಡಿದ್ದೇನೆನ್ನುವುದಕ್ಕೆ ಲೆಕ್ಕವೇ ಇಲ್ಲ. ಅಮ್ಮ ಒಮ್ಮೆ ʼಬಚ್ಚಲಿಗೆ ನೀರು ಹುಯ್ಯಿʼ ಎಂದು ಕೊಟ್ಟ ನೀರನ್ನು ಸ್ಕೂಲಿಗೆ ಹೋಗುವ ಆತುರದಲ್ಲಿ ನೇರವಾಗಿ ಹೋಗಿ ಉರೀತಿದ್ದ ಒಲೆಗೇ ಹುಯ್ದಿದ್ದೆ. ಮಳೆಗಾಲದಲ್ಲಿ ಹಸಿಸೌದೆಯನ್ನು ಒಂದು ಸಾರಿ ಹಚ್ಚೋದೇ ಕಷ್ಟ. ನನ್ನ ಅಬಾದುಬಿಯಿಂದ ಅಮ್ಮ ಪಾಡುಪಡುವಂತಾಯ್ತು. 

       ಸೀಮೆಎಣ್ಣೆ ದೀಪದ ಕಾಲವಾಗಿದ್ದ ಅಂದು ನಮ್ಮ ಮನೆಯಲ್ಲಿ ಒಂದು ಕಡೆ ಇಡಲು ಸ್ಟ್ಯಾಂಡ್ ದೀಪ, ಹಿಡಿದುಕೊಂಡು ಓಡಾಡಲು ಲಾಟೀನುಗಳಿದ್ವು. ಅವಕ್ಕೆ ಗಾಜಿನ ಚಿಮಣಿ ಹಾಕ್ತಿದ್ರು. ನಾನು ಆ ದೀಪ ಹಿಡಿದುಕೊಂಡಾಗಲೇ ಚಿಮಣಿ ಬಿದ್ದು ಒಡೆದು ಹೋಗ್ತಿತ್ತು. ಗಾಜಿನ ಸೀಸಗಳನ್ನೂ ಹೀಗೇ ಗತಿಕಾಣಿಸುತ್ತಿದ್ದೆ. ಅದಕ್ಕೇ ನನಗೆ ʼಸೀಸ ಒಡೆದ ಬೂಸಣ್ಣಿʼ ಎಂದೇ ಅಡ್ಡಹೆಸರಿಟ್ಟಿದ್ದರು. ಇದು ಹೀಗೇ ಮುಂದುವರೆದು… ಕಾಲೇಜಿನಲ್ಲಿದ್ದಾಗ ಒಬ್ಬ ಕೆಮಿಸ್ತ್ರಿ ಪ್ರೊಫೆಸರ್ ಕಂಡ್ರೆ ವಿನಾಕಾರಣ ನನಗೆ ತುಂಬಾ ಭಯವಾಗ್ತಿತ್ತು.   ಲ್ಯಾಬ್‌ನಲ್ಲಿ ಟೈಟ್ರೇಷನ್‌ ಎಕ್ಸ್‌ಪೆರಿಮೆಂಟ್ ಮಾಡುವಾಗ ಅವರೇನಾದರೂ  ಬಂದರೆ ಕೈಲಿ ಹಿಡಿದಿದ್ದ ಬ್ಯೂರೆಟ್ಅನ್ನು ಹಾಗೇ ಬಿಟ್ಟು ಫೈನ್‌ ಕಟ್ಟುವಂತಾಗುತ್ತಿತ್ತು. ಒಂದು ಸಾರಿಯಂತೂ ಅವರು ಬಂದದ್ದೇ ಆಸಿಡ್‌ಅನ್ನು ಪಿಪೆಟ್‌ ಮಾಡುತ್ತಿದ್ದವಳು ಹಾಗೇ ಸೊರ್ರನೆ ಹೀರಿಕೊಂಡು ಕುಡಿದು ಅದ್ವಾನವಾಗಿಹೋಗಿತ್ತು. ನನ್ನ ಈ ವೀಕ್ನೆಸ್‌ ಗಮನಿಸಿದ್ದ ನನ್ನ ಬ್ಯಾಚ್ಮೇಟ್ಗಳು   ʼಪ್ರೊಫೆಸರ್ ಬಂದ್ರುʼ ಎಂದು ಹೇಳಿ ನಾನು ಬೆಚ್ಚಿಬೀಳುವುದನ್ನು ನೋಡಿ ಮಜಾ ತೆಗೆದುಕೊಳ್ಳುತ್ತಿದ್ದರು. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ! ಮನೆಯಲ್ಲಿ ಚಿಮಣಿಗಳನ್ನು ಚೂರುಮಾಡುತ್ತಿದ್ದಂತೆ ಆಗಾಗ ಟೆಸ್ಟ್‌ಟ್ಯೂಬ್‌, ಬೀಕರ್,‌ ಫ್ಲಾಸ್ಕ್..‌ ಗಳನ್ನು ಒಡೆದು  ಫೈನ್‌ ಕಟ್ಟುವುದು ಸರ್ವೇಸಾಮಾನ್ಯವಾಗಿಹೋಗಿತ್ತು. ಸಧ್ಯ ಅಲ್ಲಿ ಯಾರೂ ನನ್ನನ್ನು ʼಬೂಸಣ್ಣಿʼಎಂದು ಕರೆಯುವವರು ಇರಲಿಲ್ಲ! 

ಈ ಸಾಮಾನ್ಯ ಎಡವಟ್ಟುಗಳ ನಡುವೆ ಕೆಲವು ಮಹಾ ಎಡವಟ್ಟುಗಳೂ ಪದೇಪದೇ ಗಮನ ಸೆಳೆಯುತ್ತಿರುತ್ತವೆ!

ವಿದೇಶೀ ಧ್ವಜ ಇರುವ ರಾಕೆಟ್‌ ಬಳಸಿ ಜಾಹೀರಾತನ್ನು ನೀಡಿ ಪಜೀತಿ ಮಾಡಿಕೊಂಡದ್ದು, ಸುಳ್ಳು ಮಾಹಿತಿಗಳನ್ನೇ ನೀಡಿ ಪ್ರಪಂಚದೆಲ್ಲೆಡೆ ಕೊರೊನಾ ವೈರಸ್ ಹರಡಲು ಕಾರಣವಾಗಿದ್ದು, ಚಲನ ಚಿತ್ರ ಪ್ರದರ್ಶನದ ವೇಳೆ ಥಿಯೇಟರ್ ಒಳಗೆ ಪಟಾಕಿ ಸಿಡಿಸಿದ ಫ್ಯಾನ್ಸ್ ಗಳ ಅಡಾವುಡಿ….. ಕೆಲವು ಮಹಾ ಎಡವಟ್ಟುಗಳ ಝಲಕ್‌ಗಳಷ್ಟೆ! ಹಾಗಾದರೆ ನಾನಷ್ಟೇ ಅಲ್ಲ, ಮಹಾನ್‌ ಎನಿಸಿಕೊಂಡವುಗಳಿಂದಲೂ ಮಹಾ ಎಡವಟ್ಟುಗಳೇ ನಡೆಯುತ್ತದೆನ್ನುವುದೇ ಸಮಾಧಾನದ ಸಂಗತಿ.

  ಮೊದಲೆಲ್ಲಾ ಪದೇಪದೇ ಎಡವಟ್ಟ ಎನಿಸಿಕೊಂಡು, ನಂತರ ಎಲ್ಲೆಲ್ಲಿಯೂ ಎಡವಟ್‌ ಸಮಾಚಾರಗಳನ್ನು ನೋಡಿ-ಕೇಳಿ ಕೆಟ್ಟಿದ್ದ ತಲೆಗೆ  ʼಜಾಕಿʼ ಚಿತ್ರದ ʼಎಡವಟ್‌ʼ ಹಾಡನ್ನು ಅಷ್ಟದಿಕ್ಕುಗಳಿಂದಲೂ ಕೇಳಿಕೇಳಿ, ಕೇಳಿದ್ದೆಲ್ಲವೂ ಎಡವಟ್ಟಾಗಿ ಕಡೆಗೆ ಮುಳ್ಳಿನಿಂದಲೇ ಮುಳ್ಳನ್ನು ತೆಗೆಯುವಂತೆ ಎಡವಟ್ಟೇ ತಲೆಯಿಂದ ಎರೇಸ್‌ ಆಗಲು ಸಹಕಾರಿಯಾಯ್ತು. ಇನ್ನು ಈ ಎಡವಟ್‌ ಸಹವಾಸವೇ ಬೇಡ ಎಂದುಕೊಳ್ಳುವಾಗಲೇ ನಮ್ಮ ತಂದೆ ಸದಾ ನನಗೆ ಹೇಳುತ್ತಿದ್ದ ʼಯಾಕಮ್ಮ ಇಷ್ಟೊಂದು ಆಭಾಸ ಮಾಡ್ತೀಯʼ ಎನ್ನುವ ಮಾತು ಕೊರೆಯಲಾರಂಭಿಸಿ ಆಭಾಸದ ಆನ್ವೇಷಣೆಯಲ್ಲಿ ತೊಡಗಿದೆ. ʼಆಭಾಸʼ ಎಂದರೆ ಅಧ್ವಾನ, ಗೊಂದಲ, ನಗೆಪಾಟಲು, ಪ್ರಮಾದ, ತಪ್ಪು ತಿಳುವಳಿಕೆ, ಎಡವಟ್ಟು.. ಓಹೋ ಮತ್ತೆ ಎಡವಟ್ಟು! ಎಡವಟ್ಟಿನ ಅರ್ಥವ್ಯಾಪ್ತಿಯಲ್ಲಿ ʼಆಭಾಸʼವಿರಲಿಲ್ಲ. ಆಭಾಸದಲ್ಲಿ ಎಡವಟ್ಟೂ ಸೇರಿದೆಯೆಂದರೆ… ನಮ್ಮ ತಂದೆಯೂ ನನ್ನನ್ನು ಸುಸಂಸ್ಕೃತವಾಗಿ ಎಡವಟ್ಟ ಅಂತಲೇ ಕರೆಯುತ್ತಿದ್ದರ? 

ನಮ್ಮ ಕನ್ನಡ ಭಾಷೆಯ ಉಚ್ಛಾರ, ಬರವಣಿಗೆ ಹಾಗೂ ಇತ್ತೀಚಿನ ಗೂಗಲ್‌ ಟ್ರಾನ್ಸ್ಲೇಷನ್‌ನಲ್ಲಿನ ಅಕ್ಷರ/ಪದಗಳ ಪ್ರಯೋಗ, ಸಾರ್ವಜನಿಕ ಕ್ಷೇತ್ರದಲ್ಲಿನ ಘಟನಾವಳಿಗಳು ಎಲ್ಲೆಡೆಯಲ್ಲೂ ನಡೆಯುತ್ತಿರುವ ಈ ಆಭಾಸಕ್ಕೆ ಕೊನೆಮೊದಲೇ ಇಲ್ಲ. ಈಗೀಗ ಎಡವಟ್ಟಿನಿಂದ ಹೇಗೋ ಪಾರಾಗಿದ್ದಾಗಿದೆ. ಸಧ್ಯದಲ್ಲಿ ವಿಶ್ರಮಿಸಿ ನಂತರ ನನ್ನ ಹಾಗೂ ನನ್ನಂಥಾ ಆಭಾಸಿಗಳ ಬಗ್ಗೆ ಹೇಳಹೊರಟರೆ ಆಭಾಸವಾಗುವುದಿಲ್ಲ ತಾನೆ! 

                      

  ~ಪ್ರಭಾಮಣಿ ನಾಗರಾಜ

Sunday, March 17, 2024

ʼಹಚ್ಚೆ ದಿನ್' ಪುಸ್ತಕ ಪರಿಚಯ 'ಜನ ಮಿತ್ರ' ಪತ್ರಿಕೆಯಲ್ಲಿ🌼

 ಸುಮಾ ರಮೇಶ್ ಅವರ ಲಲಿತ ಪ್ರಬಂಧ ಗಳ ಸಂಕಲನ ʼಹಚ್ಚೆ ದಿನ್'  ಪುಸ್ತಕ ಪರಿಚಯ  'ಜನ ಮಿತ್ರ' ಪತ್ರಿಕೆಯಲ್ಲಿ🌼




         ಅದ್ಭುತವಾಗಿ ಬರೆಯುವ ಪ್ರಬುದ್ಧ ಲೇಖಕಿ ಸುಮಾ ರಮೇಶ್ ರವರ ಲಲಿತ ಪ್ರಬಂಧ ಸಂಕಲನ ʼಹಚ್ಚೆ ದಿನ್ʼ ಮುಗುಳ್ನಗೆಯ ಟಾನಿಕ್‌ ಗಳಂತಹ 32 ಪ್ರಬಂಧಗಳನ್ನೊಳಗೊಂಡ ಮನಸೆಳೆಯುವ ಪುಸ್ತಕ. ಇದರ ಮುಖಪುಟವೇ ಹಚ್ಚಾಸುಂದರಿಯ ಮೋಹಕ ಭಂಗಿಯೊಂದಿಗೆ ಮನಸೂರೆಗೊಳ್ಳುವಂತಿದೆ.

      ನಾಡಿನ ವಿವಿಧ ಸುಪ್ರಸಿದ್ಧ ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದ್ದ ಸುಮಾರವರ ಲೇಖನಗಳನ್ನು ಆಗಾಗ ನಾನು ಫೇಸ್ಬುಕ್‌ ನಲ್ಲಿ ಓದುವಾಗ ಅವರು ಆಯ್ಕೆಮಾಡಿಕೊಳ್ಳುತ್ತಿದ್ದ ವಿಷಯ ಹಾಗೂ ಕೊಡುತ್ತಿದ್ದ ಶೀರ್ಷಿಕೆಗಳು ಬಹಳ ಆಸಕ್ತಿಕರವೆನಿಸುತ್ತಿದ್ದವು. ಈಗ ʼಹಚ್ಚೆ ದಿನ್ʼ ಕೈಸೇರಿದ ನಂತರ ಬಿಡಿಬಿಡಿಯಾಗಿ ಓದಿದ್ದ ಲೇಖನಗಳನ್ನು ಇಡಿಯಾಗಿ ಪುಸ್ತಕ ರೂಪದಲ್ಲಿ ಮತ್ತೊಮ್ಮೆ ಓದುವಾಗ ಒಂದು ವಿಶಿಷ್ಟ ಲಾಲಿತ್ಯಮಯ ಲೋಕವನ್ನೇ  ಪ್ರವೇಶಿಸಿದಂತಾಗಿ  ಅವರೇ ನನ್ನೆದುರು ಕುಳಿತು ತಮ್ಮ ಸತ್ವಯುತ ಮಾಹಿತಿಪೂರ್ಣ ಪ್ರಬಂಧಗಳನ್ನು ಸಂಭಾಷಿಸುವಂತಿದೆ. 

ಸುಮಾ ಅವರ ಈ ಪ್ರಬುದ್ಧ ಪ್ರಬಂಧಗಳ ಹಾಸ್ಯಾಸ್ವಾದನೆಗೆ ಪೂರಕ ಪೀಠಿಕೆಯಂತಿರುವ ಅತ್ಯುತ್ತಮವಾದ ಮೌಲ್ಯಯುತ ಮುನ್ನಡಿಯನ್ನು ರಾಮನಾಥ್ ಸರ್ ಅವರು ಬರೆದಿರುವುದು ಪುಸ್ತಕವನ್ನು ಓದಲೇಬೇಕೆಂದು ಪ್ರೇರೇಪಿಸುವಂತಿದೆ ಹಾಗೂ ಸುಂದರವಾದ ಚಿತ್ರವೊಂದಕ್ಕೆ ಹಾಕಿದ ಸುವರ್ಣದ ಚೌಕಟ್ಟಿನಂತಿದ್ದು ಪುಸ್ತಕದ ಘನತೆಯನ್ನು ಹೆಚ್ಚಿಸುವಂತಿದೆ. 

ಸುಮಾ ಅವರ ಲೇಖನಗಳ ವಿಶೇಷ ಆಕರ್ಷಣೆಯೆಂದರೆ ಅವರು ಇಡುವ ಶೀರ್ಷಿಕೆಗಳು ಹಾಗೂ ಕೊಡುವ ಉಪಮೆಗಳು.

ಶಾಯಿಯೊಂದಿಗಿನ ಶಾಯರಿ,  ʼಹಚ್ಚೆ ದಿನ್ʼ, ʼಡಸ್ಟ್ ಬಿನ್ ' ಎಂಬ ಕಸದ ಒಡಲು...., ʼಚಂಬೋ.... ಇವ ಚಂಬೋ..... !ʼ

ʼಟಿ ಜಂಕ್ಷನ್ ಸೈಟುʼ, , ʼಡಸ್ಟರ್‌ ಎಂಬ eರೇಸರ್ರುʼ, ಹಚ್ಚೇವು ನೊರೆ ನೊರೆಯ ಸೋಪ, …ಮುಂತಾದ ನಾಮಕರಣವೇ ಓದುಗರನ್ನು ತನ್ನತ್ತ  ಸೆಳೆಯುತ್ತದೆ. 

'ಉದರದ ಸ್ಥಿತಿಯು , ಟೀಮ್ ಕೋ ಆರ್ಡಿನೇಶನ್ ಇಲ್ಲದ  ಪ್ರಾಜೆಕ್ಟ್ ನಂತಾಗುವುದು.' 

ʼಹೆತ್ತವರ ಐ ಫೆನ್ಸಿಂಗ್‌ʼ

ʼ ಈ ಸೋಪಿನ ಗೀತೆಗಳು (ಈಸೋಪನ ಕಥೆಗಳಿಗಿಂತಲೂ)ʼ

' ಮೌತ್ ಟು ಮೌತ್ ರೆಸ್ಪಿರೇಶನ್ ಪಡೆದ ವ್ಯಕ್ತಿ ಸುಧಾರಿಸಿಕೊಂಡು ಮೇಲೇಳುವಂತೆ '

ʼ…ಆಡುಂಬೋಲ ಈಗ ಎಲ್ಲರ ತೋಡುಂಬೋಲ…ʼ

ಮುಂತಾದ ಹೋಲಿಕೆಗಳು ಸಂದರ್ಭೋಚಿತವಾಗಿದ್ದು ಅನಿಯಂತ್ರಿತವಾಗಿ ನಗೆಯುಕ್ಕಿಸುತ್ತವೆ.

ವಿಷಯವೊಂದನ್ನು ಆಯ್ಕೆಮಾಡಿಕೊಂಡ ನಂತರ ಅದನ್ನು ವಿವಿಧ ಆಯಾಮಗಳಲ್ಲಿ ಅಭ್ಯಸಿಸಿ, ಮಾಹಿತಿಗಳನ್ನು ಕ್ರೂಢೀಕರಿಸಿ ಹಾಸ್ಯ, ವ್ಯಂಗ್ಯ, ಚಾಟೋಕ್ತಿಗಳೊಡನೆ ಮಿಳಿತಗೊಳಿಸಿ ತಮ್ಮ ವಿಶಿಷ್ಟ ಸುಲಲಿತ ಶೈಲಿಯಲ್ಲಿ ಸಾಂದ್ರವಾಗಿ ಪ್ರಬಂಧೀಕರಿಸುವ ಅನನ್ಯವಾದ ಕಲೆ ಸುಮಾರವರಿಗೆ ಸಿದ್ಧಿಸಿದೆ. 

 

ಮಕ್ಕಳ ಕುತೂಹಲದ ಕೇಂದ್ರ ಬಿಂದುವಾಗಿದ್ದ ಫ್ಯಾನ್ ನಿಂದ ಪ್ರಾರಂಭಿಸಿ ಅದರ ವಿಕಾಸ, ಸರ್ವವ್ಯಾಪಿತ್ವದ ಬಗ್ಗೆ ಲಹರಿಯನ್ನು ಹರಿಸುತ್ತಲೇ .…ʼನಾವೂ ಪ್ರೌಢರಾಗಿದ್ದು ನಮ್ಮ ಫ್ಯಾನ್‌ ಗಳನ್ನು ಬೇರೆಡೆ ಹುಡುಕುವಲ್ಲಿ ವ್ಯಸ್ತರಾಗಿದ್ದೆವುʼ ಎನ್ನುವ ತಿರುವಿನೊಂದಿಗೆ  ಸೆಲೆಬ್ರಿಟಿಗಳ ಫ್ಯಾನ್ ಗಳತ್ತ ಹೊರಳಿ ಪರಿಸಮಾಪ್ತಿಗೊಳಿಸುವುದು ಸುಮಾರವರಿಗೆ ನೀರು ಕುಡಿದಷ್ಟೇ ಸಲೀಸು. 

ಹಾಸ್ಯದ ಪಕ್ವಾನ್ನವನ್ನು ಉಣಬಡಿಸುವ ಈ ಹೊತ್ತಿಗೆಯಲ್ಲಿ ನಗೆಯ ಹೊನಲನ್ನು ಚಿಮ್ಮಿಸುವ ವ್ಯಂಗ್ಯೋಕ್ತಿ, ಪಂಚ್‌ ಗಳ ಜೊತೆಗೇ ವೈಚಾರಿಕತೆಗೆ ತೆರೆದುಕೊಳ್ಳುವಂತೆ ಮಾಡುವ ಚಿಂತನಯೋಗ್ಯ ಉಕ್ತಿಗಳೂ ಇವೆ ಎನ್ನುವುದಕ್ಕೆ ಮಾದರಿ  ʼಇಡೀ ಭೂಮಂಡಲವೇ ಒಂದು ಡಸ್ಟ್ ಬಿನ್ ನಂತೆ ಒಡಲ ತುಂಬಾ ಕಸ ಹೊತ್ತು ನಿಂತು ಸ್ವಚ್ಛ್ ಭಾರತ್ ಅಭಿಯಾನ ಸ್ವಚ್ಛ್  ಭೂಮಂಡಲ್ ಅಭಿಯಾನವಾಗಬೇಕಾದ ತುರ್ತು ತಲೆದೋರಿದೆ.ʼ ಎನ್ನುವುದು.

ತಮ್ಮ ಪ್ರಬಂಧಗಳಲ್ಲಿ ಏನನ್ನು ಹೇಳಬೇಕೆಂದರೂ ಇತರ ಯಾರ ಬಗ್ಗೆಯೂ ಹೇಳದೆ ತನ್ನನ್ನೇ ತಾನು ನಗೆಯ ವಸ್ತುವಾಗಿಸಿಕೊಂಡು ಬರೆದಿರುವುದು ಇವರ ಲೇಖನಗಳ ಧನಾತ್ಮಕ ಅಂಶವಾಗಿದೆ. ಇದು ಒಂದು ಆರೋಗ್ಯಕರ ಬೆಳವಣಿಗೆ. ತಾನು ಅನುಭವಿಸಿರಬಹುದಾದ ನೋವು, ಅಪಮಾನ, ಸೋಲುಗಳನ್ನೂ ನಗೆಯ ವಸ್ತುವಾಗಿಸಬಲ್ಲ ಸಾಮರ್ಥ್ಯ ಸುಮಾರವರಿಗಿದೆ. ʼನೆಗಡಿಯ ಬಾನಗಡಿʼ, ʼನವಿಲು ತುಪ್ಪʼ, ʼನಿಲ್ಲಲ್ಲ…ನಿಲ್ಲಲ್ಲ… ಜಲಧಾರೆʼ…ಗಳಲ್ಲಿ ಈ ಅಂಶಗಳನ್ನು ಕಾಣಬಹುದು.

ʼಹಚ್ಚೆ‌ ದಿನ್ʼ, ಅವರೇ ತಿಳಿಸಿರುವಂತೆ ಬೆಚ್ಚನೆಯ ನಗುವಿನೊಂದಿಗೆ ಎಲ್ಲರೂ ಓದಿ ಆಸ್ವಾದಿಸಲು ಆನಂದಿಸಲು ಅತ್ಯಂತ ಯೋಗ್ಯವಾದ ಪುಸ್ತಕವಾಗಿದೆ. ಇಂಥಾ ಪ್ರಬುದ್ಧ ಪ್ರಬಂಧ ಸಂಕಲನವನ್ನು ಸಾಹಿತ್ಯಲೋಕಕ್ಕೆ ನೀಡಿದ ಸುಮಾ ಅವರನ್ನು ಅಭಿನಂದಿಸುತ್ತಾ… 

    ಸುಮಾ ಹೀಗೇ ಬರೆಯುತ್ತಾ ಎಲ್ಲೆಡೆ ತಮ್ಮ ಸಾಹಿತ್ಯ ಸೌರಭವನ್ನು ಪಸರಿಸಲಿ ಹಾಗೂ ಇನ್ನೂ ಹೆಚ್ಚಿನ ಸಾರ್ಥಕತೆಯ ಸಾಧನೆಗಳನ್ನು ಮಾಡುವಂತಾಗಲಿ ಎಂದು ಹಾರೈಸುತ್ತೇನೆ. 

  

~ಪ್ರಭಾಮಣಿನಾಗರಾಜ ದಿನ್‌ʼ  ಪುಸ್ತಕ ಪರಿಚಯ  'ಜನ ಮಿತ್ರ' ಪತ್ರಿಕೆಯಲ್ಲಿ🌼


         ಅದ್ಭುತವಾಗಿ ಬರೆಯುವ ಪ್ರಬುದ್ಧ ಲೇಖಕಿ ಸುಮಾ ರಮೇಶ್ ರವರ ಲಲಿತ ಪ್ರಬಂಧ ಸಂಕಲನ ʼಹಚ್ಚೆ ದಿನ್ʼ ಮುಗುಳ್ನಗೆಯ ಟಾನಿಕ್‌ ಗಳಂತಹ 32 ಪ್ರಬಂಧಗಳನ್ನೊಳಗೊಂಡ ಮನಸೆಳೆಯುವ ಪುಸ್ತಕ. ಇದರ ಮುಖಪುಟವೇ ಹಚ್ಚಾಸುಂದರಿಯ ಮೋಹಕ ಭಂಗಿಯೊಂದಿಗೆ ಮನಸೂರೆಗೊಳ್ಳುವಂತಿದೆ.

      ನಾಡಿನ ವಿವಿಧ ಸುಪ್ರಸಿದ್ಧ ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದ್ದ ಸುಮಾರವರ ಲೇಖನಗಳನ್ನು ಆಗಾಗ ನಾನು ಫೇಸ್ಬುಕ್‌ ನಲ್ಲಿ ಓದುವಾಗ ಅವರು ಆಯ್ಕೆಮಾಡಿಕೊಳ್ಳುತ್ತಿದ್ದ ವಿಷಯ ಹಾಗೂ ಕೊಡುತ್ತಿದ್ದ ಶೀರ್ಷಿಕೆಗಳು ಬಹಳ ಆಸಕ್ತಿಕರವೆನಿಸುತ್ತಿದ್ದವು. ಈಗ ʼಹಚ್ಚೆ ದಿನ್ʼ ಕೈಸೇರಿದ ನಂತರ ಬಿಡಿಬಿಡಿಯಾಗಿ ಓದಿದ್ದ ಲೇಖನಗಳನ್ನು ಇಡಿಯಾಗಿ ಪುಸ್ತಕ ರೂಪದಲ್ಲಿ ಮತ್ತೊಮ್ಮೆ ಓದುವಾಗ ಒಂದು ವಿಶಿಷ್ಟ ಲಾಲಿತ್ಯಮಯ ಲೋಕವನ್ನೇ  ಪ್ರವೇಶಿಸಿದಂತಾಗಿ  ಅವರೇ ನನ್ನೆದುರು ಕುಳಿತು ತಮ್ಮ ಸತ್ವಯುತ ಮಾಹಿತಿಪೂರ್ಣ ಪ್ರಬಂಧಗಳನ್ನು ಸಂಭಾಷಿಸುವಂತಿದೆ. 

ಸುಮಾ ಅವರ ಈ ಪ್ರಬುದ್ಧ ಪ್ರಬಂಧಗಳ ಹಾಸ್ಯಾಸ್ವಾದನೆಗೆ ಪೂರಕ ಪೀಠಿಕೆಯಂತಿರುವ ಅತ್ಯುತ್ತಮವಾದ ಮೌಲ್ಯಯುತ ಮುನ್ನಡಿಯನ್ನು ರಾಮನಾಥ್ ಸರ್ ಅವರು ಬರೆದಿರುವುದು ಪುಸ್ತಕವನ್ನು ಓದಲೇಬೇಕೆಂದು ಪ್ರೇರೇಪಿಸುವಂತಿದೆ ಹಾಗೂ ಸುಂದರವಾದ ಚಿತ್ರವೊಂದಕ್ಕೆ ಹಾಕಿದ ಸುವರ್ಣದ ಚೌಕಟ್ಟಿನಂತಿದ್ದು ಪುಸ್ತಕದ ಘನತೆಯನ್ನು ಹೆಚ್ಚಿಸುವಂತಿದೆ. 

ಸುಮಾ ಅವರ ಲೇಖನಗಳ ವಿಶೇಷ ಆಕರ್ಷಣೆಯೆಂದರೆ ಅವರು ಇಡುವ ಶೀರ್ಷಿಕೆಗಳು ಹಾಗೂ ಕೊಡುವ ಉಪಮೆಗಳು.

ಶಾಯಿಯೊಂದಿಗಿನ ಶಾಯರಿ,  ʼಹಚ್ಚೆ ದಿನ್ʼ, ʼಡಸ್ಟ್ ಬಿನ್ ' ಎಂಬ ಕಸದ ಒಡಲು...., ʼಚಂಬೋ.... ಇವ ಚಂಬೋ..... !ʼ

ʼಟಿ ಜಂಕ್ಷನ್ ಸೈಟುʼ, , ʼಡಸ್ಟರ್‌ ಎಂಬ eರೇಸರ್ರುʼ, ಹಚ್ಚೇವು ನೊರೆ ನೊರೆಯ ಸೋಪ, …ಮುಂತಾದ ನಾಮಕರಣವೇ ಓದುಗರನ್ನು ತನ್ನತ್ತ  ಸೆಳೆಯುತ್ತದೆ. 

'ಉದರದ ಸ್ಥಿತಿಯು , ಟೀಮ್ ಕೋ ಆರ್ಡಿನೇಶನ್ ಇಲ್ಲದ  ಪ್ರಾಜೆಕ್ಟ್ ನಂತಾಗುವುದು.' 

ʼಹೆತ್ತವರ ಐ ಫೆನ್ಸಿಂಗ್‌ʼ

ʼ ಈ ಸೋಪಿನ ಗೀತೆಗಳು (ಈಸೋಪನ ಕಥೆಗಳಿಗಿಂತಲೂ)ʼ

' ಮೌತ್ ಟು ಮೌತ್ ರೆಸ್ಪಿರೇಶನ್ ಪಡೆದ ವ್ಯಕ್ತಿ ಸುಧಾರಿಸಿಕೊಂಡು ಮೇಲೇಳುವಂತೆ '

ʼ…ಆಡುಂಬೋಲ ಈಗ ಎಲ್ಲರ ತೋಡುಂಬೋಲ…ʼ

ಮುಂತಾದ ಹೋಲಿಕೆಗಳು ಸಂದರ್ಭೋಚಿತವಾಗಿದ್ದು ಅನಿಯಂತ್ರಿತವಾಗಿ ನಗೆಯುಕ್ಕಿಸುತ್ತವೆ.

ವಿಷಯವೊಂದನ್ನು ಆಯ್ಕೆಮಾಡಿಕೊಂಡ ನಂತರ ಅದನ್ನು ವಿವಿಧ ಆಯಾಮಗಳಲ್ಲಿ ಅಭ್ಯಸಿಸಿ, ಮಾಹಿತಿಗಳನ್ನು ಕ್ರೂಢೀಕರಿಸಿ ಹಾಸ್ಯ, ವ್ಯಂಗ್ಯ, ಚಾಟೋಕ್ತಿಗಳೊಡನೆ ಮಿಳಿತಗೊಳಿಸಿ ತಮ್ಮ ವಿಶಿಷ್ಟ ಸುಲಲಿತ ಶೈಲಿಯಲ್ಲಿ ಸಾಂದ್ರವಾಗಿ ಪ್ರಬಂಧೀಕರಿಸುವ ಅನನ್ಯವಾದ ಕಲೆ ಸುಮಾರವರಿಗೆ ಸಿದ್ಧಿಸಿದೆ. 

 

ಮಕ್ಕಳ ಕುತೂಹಲದ ಕೇಂದ್ರ ಬಿಂದುವಾಗಿದ್ದ ಫ್ಯಾನ್ ನಿಂದ ಪ್ರಾರಂಭಿಸಿ ಅದರ ವಿಕಾಸ, ಸರ್ವವ್ಯಾಪಿತ್ವದ ಬಗ್ಗೆ ಲಹರಿಯನ್ನು ಹರಿಸುತ್ತಲೇ .…ʼನಾವೂ ಪ್ರೌಢರಾಗಿದ್ದು ನಮ್ಮ ಫ್ಯಾನ್‌ ಗಳನ್ನು ಬೇರೆಡೆ ಹುಡುಕುವಲ್ಲಿ ವ್ಯಸ್ತರಾಗಿದ್ದೆವುʼ ಎನ್ನುವ ತಿರುವಿನೊಂದಿಗೆ  ಸೆಲೆಬ್ರಿಟಿಗಳ ಫ್ಯಾನ್ ಗಳತ್ತ ಹೊರಳಿ ಪರಿಸಮಾಪ್ತಿಗೊಳಿಸುವುದು ಸುಮಾರವರಿಗೆ ನೀರು ಕುಡಿದಷ್ಟೇ ಸಲೀಸು. 

ಹಾಸ್ಯದ ಪಕ್ವಾನ್ನವನ್ನು ಉಣಬಡಿಸುವ ಈ ಹೊತ್ತಿಗೆಯಲ್ಲಿ ನಗೆಯ ಹೊನಲನ್ನು ಚಿಮ್ಮಿಸುವ ವ್ಯಂಗ್ಯೋಕ್ತಿ, ಪಂಚ್‌ ಗಳ ಜೊತೆಗೇ ವೈಚಾರಿಕತೆಗೆ ತೆರೆದುಕೊಳ್ಳುವಂತೆ ಮಾಡುವ ಚಿಂತನಯೋಗ್ಯ ಉಕ್ತಿಗಳೂ ಇವೆ ಎನ್ನುವುದಕ್ಕೆ ಮಾದರಿ  ʼಇಡೀ ಭೂಮಂಡಲವೇ ಒಂದು ಡಸ್ಟ್ ಬಿನ್ ನಂತೆ ಒಡಲ ತುಂಬಾ ಕಸ ಹೊತ್ತು ನಿಂತು ಸ್ವಚ್ಛ್ ಭಾರತ್ ಅಭಿಯಾನ ಸ್ವಚ್ಛ್  ಭೂಮಂಡಲ್ ಅಭಿಯಾನವಾಗಬೇಕಾದ ತುರ್ತು ತಲೆದೋರಿದೆ.ʼ ಎನ್ನುವುದು.

ತಮ್ಮ ಪ್ರಬಂಧಗಳಲ್ಲಿ ಏನನ್ನು ಹೇಳಬೇಕೆಂದರೂ ಇತರ ಯಾರ ಬಗ್ಗೆಯೂ ಹೇಳದೆ ತನ್ನನ್ನೇ ತಾನು ನಗೆಯ ವಸ್ತುವಾಗಿಸಿಕೊಂಡು ಬರೆದಿರುವುದು ಇವರ ಲೇಖನಗಳ ಧನಾತ್ಮಕ ಅಂಶವಾಗಿದೆ. ಇದು ಒಂದು ಆರೋಗ್ಯಕರ ಬೆಳವಣಿಗೆ. ತಾನು ಅನುಭವಿಸಿರಬಹುದಾದ ನೋವು, ಅಪಮಾನ, ಸೋಲುಗಳನ್ನೂ ನಗೆಯ ವಸ್ತುವಾಗಿಸಬಲ್ಲ ಸಾಮರ್ಥ್ಯ ಸುಮಾರವರಿಗಿದೆ. ʼನೆಗಡಿಯ ಬಾನಗಡಿʼ, ʼನವಿಲು ತುಪ್ಪʼ, ʼನಿಲ್ಲಲ್ಲ…ನಿಲ್ಲಲ್ಲ… ಜಲಧಾರೆʼ…ಗಳಲ್ಲಿ ಈ ಅಂಶಗಳನ್ನು ಕಾಣಬಹುದು.

ʼಹಚ್ಚೆ‌ ದಿನ್ʼ, ಅವರೇ ತಿಳಿಸಿರುವಂತೆ ಬೆಚ್ಚನೆಯ ನಗುವಿನೊಂದಿಗೆ ಎಲ್ಲರೂ ಓದಿ ಆಸ್ವಾದಿಸಲು ಆನಂದಿಸಲು ಅತ್ಯಂತ ಯೋಗ್ಯವಾದ ಪುಸ್ತಕವಾಗಿದೆ. ಇಂಥಾ ಪ್ರಬುದ್ಧ ಪ್ರಬಂಧ ಸಂಕಲನವನ್ನು ಸಾಹಿತ್ಯಲೋಕಕ್ಕೆ ನೀಡಿದ ಸುಮಾ ಅವರನ್ನು ಅಭಿನಂದಿಸುತ್ತಾ… 

    ಸುಮಾ ಹೀಗೇ ಬರೆಯುತ್ತಾ ಎಲ್ಲೆಡೆ ತಮ್ಮ ಸಾಹಿತ್ಯ ಸೌರಭವನ್ನು ಪಸರಿಸಲಿ ಹಾಗೂ ಇನ್ನೂ ಹೆಚ್ಚಿನ ಸಾರ್ಥಕತೆಯ ಸಾಧನೆಗಳನ್ನು ಮಾಡುವಂತಾಗಲಿ ಎಂದು ಹಾರೈಸುತ್ತೇನೆ. 

  

~ಪ್ರಭಾಮಣಿನಾಗರಾಜ

Tuesday, February 6, 2024

ಲಲಿತ ಪ್ರಬಂಧ - 'ಸೀನಿನ sceneಗಳು'

  🌺ಎಲ್ಲರಿಗೂ ಬೆಳಗಿನ ವಂದನೆಗಳು🙏🌹

       ಈ ವಾರದ ( ಫೆಬ್ರವರಿ8,2024) 'ಸುಧಾ' ಪತ್ರಿಕೆಯ 'ಮಂದಹಾಸ'ದಲ್ಲಿ  ಪ್ರಕಟವಾಗಿರುವ ನನ್ನ ಲಲಿತ ಪ್ರಬಂಧ - 'ಸೀನಿನ sceneಗಳು'


ನಿಮ್ಮ ಪ್ರೀತಿಯ ಓದಿಗೆ😍


                  ಸೀನಿನ sceneಗಳು 

ಸೀನುವುದು ಅಪರೂಪವೇನಲ್ಲ. ಯಾವುದಾದ್ರೂ ಧೂಳಿನ ಪ್ರದೇಶಕ್ಕೆ ಹೋದಾಗ ಅಥವಾ ಶೀತಕಾಲದಲ್ಲಿ, ಮಳೆಗಾಲದಲ್ಲಿ... ಕೆಲವೊಮ್ಮೆ ಕಾರಣವೇ ಇಲ್ಲದಂತೆ  ಸೀನುಗಳು ಒಂದಾದ ಮೇಲೆ ಒಂದರಂತೆ  ಬರುತ್ತಲೇ ಇರುತ್ತವೆ.  ಸುತ್ತಿನ ವಾತಾವರಣವನ್ನು ಮತ್ತಷ್ಟು ಹದಗೆಡಿಸಿ ಹಾಳುಮಾಡಿ ನಮ್ಮದೆಂದು ಉಳಿಸಿಕೊಂಡಿರುವ ಅಲ್ಪಸ್ವಲ್ಪ ಮರ್ಯಾದೆಯನ್ನೂ ನುಂಗಿ ನೀರು ಕುಡಿದುಬಿಡುತ್ತದೆ.

ಈ ಸೀನಿಗೆ ಕೆಮ್ಮಿಗಿರುವಷ್ಟು ಕನಿಷ್ಠ ಗೌರವವೂ ಇಲ್ಲ. ಕೆಮ್ಮುತ್ತ ಇರುವವರಿಗೆ ಕೆಲವು ಅಲೋಪತಿ, ಆಯುರ್ವೇದಿಕ್, ಯುನಾನಿ... ಔಷದೊಪಚರಗಳನ್ನಾದರೂ ಸಲಹೆ ನೀಡುತ್ತಾರೆ. ಕಡೇಪಕ್ಷ  ಮನೆಮದ್ದುಗಳನ್ನಾದರೂ ಸಜಸ್ಟ್ ಮಾಡಿ ಸಹಸ್ಪಂದಿಸುತ್ತಾರೆ. ಆದರೆ ಯಾವುದೇ ನಿರ್ದಿಷ್ಟ ಔಷದೋಪಚಾರವನ್ನೂ ಬಯಸದ ಈ ಪರಮ ಪಾಪಿಯಾದ ಸೀನನ್ನು 'ಆ...ಕ್ಷಿ'ಸಲು ಪ್ರಾರಂಭಿಸಿದಾಕ್ಷಣವೇ ಸುತ್ತಿನವರು ತಾವೇ ಅತ್ತಿತ್ತ ಸರಿದು ಹೋಗ್ತಾರೆ ಅಥವಾ ಮುಖ ಸಿಂಡರಿಸುತ್ತಾ ನಿರ್ದಾಕ್ಷಿಣ್ಯವಾಗಿ ನಮ್ಮನ್ನೇ ಅಲ್ಲಿಂದ ಉಚ್ಛಾಟಿಸುತ್ತಾರೆ. ಕೆಮ್ಮನ್ನಾದರೂ ಮುಂಜಾಗರೂಕತೆಯಿಂದ ಮುಖಕ್ಕೆ ವಸ್ತ್ರವನ್ನು ಮುಚ್ಚಿಕೊಂಡು  ನಾಗರಿಕವಾಗಿ ಕೆಮ್ಮಬಹುದು ಆದರೆ ಅನಿರೀಕ್ಷಿತವಾಗಿ ಧಾಳಿಯಿಡುವ ಈ ಸೀನು ಇದ್ದಕ್ಕಿದ್ದಂತೆಯೇ ಅಬ್ಬರಿಸಿ ವಾತಾವರಣವನ್ನೇ ತಲ್ಲಣಿಸಿ ಸುತ್ತೆಲ್ಲಾ   ಲಾಲಾಹನಿಗಳನ್ನು ಸ್ಪ್ರಿಂಕಲ್ ಮಾಡಿ ಕಲುಷಿತಗೊಳಿಸಿ ಬಿಡುತ್ತದೆ.  

        ಈ ಸೀನಿನ ವಿವಿಧ  ನಾದ ಮಾದರಿಗಳಂತೂ ಕೇಳಲು ವಿಚಿತ್ರವಾಗಿರುತ್ತವೆ. ನಮ್ಮ ಸೋದರ ಮಾವ  ತಾರಕ ಸ್ಥಾಯಿಯಲ್ಲಿ ಸೀನಿದರೆ ಮನೆಯ ಹಂಚುಗಳೆಲ್ಲಾ ಹಾರಿಹೋಗುವಂತೆ  ಮನೆಯೇ ಅದುರುತ್ತಿತ್ತು. ಆಗೇನಾದರೂ ನಮ್ಮ ಕಪ್ಪಿ-ಕೆಂಪಿ ಬೆಕ್ಕಿನ ಮರಿಗಳು ಹತ್ತಿರದ ಟೇಬಲ್ ಮೇಲೆ ಆಟವಾಡುತ್ತಿದ್ದರೆ ಹಠಾತ್ ಶಬ್ಧಸ್ಪೋಟಕ್ಕೆ ಅಂಜಿ  ಕೆಳಗೆ ಬಿದ್ದು ಉರುಳಾಡಿ ಎದ್ದು ಓಡಿಹೋಗುತ್ತಿದ್ದವು. 

ಒಮ್ಮೆ ಮೊದಲಬಾರಿಗೆ  ಮನೆಗೆ ಬಂದಿದ್ದ  ನಮ್ಮ ಹೊಸಪರಿಚಯಸ್ಥರ ಮಗು ಮಾವನ ಸೀನಿನ ಶಾಕ್ ನಿಂದ ಬೆಚ್ಚಿಬಿದ್ದು ಅಳಲು ಪ್ರಾರಂಭಿಸಿದ್ದು ಯಾರು ಹೇಗೇ ಸಮಾಧಾನಿಸಿದರೂ ಅಳು ನಿಲ್ಲಿಸಲೇ ಇಲ್ಲ. ಏನು ಮಾಡುವುದೆಂದು ತೋಚದೇ ಎಲ್ಲರೂ ಕಂಗೆಟ್ಟಿದ್ದಾಗ, ಅದೆಲ್ಲಿತ್ತೋ ಆ ಸೀನು, ಮಾವ ಇದ್ದಕ್ಕಿದ್ದಂತೆಯೇ ಬೋಬ್ಬಿರಿಯುವಂತೆ ಮತ್ತೊಮ್ಮೆ ಸೀನಿಬಿಟ್ಟರು! ಮನೆಮಂದಿಯೆಲ್ಲಾ ಗಡಬಡಿಸಿಹೋದ ಈ ಆರ್ಭಟಕ್ಕೆ ಮಗು ಸ್ತಬ್ಧವಾಯಿತು. ಮಗುವಿಗೇನಾಗುತ್ತೋ ಎಂದು ಎಲ್ಲಾ ನೋಡುತ್ತಿದ್ದಂತೆಯೇ ಏನೋ ಚೋದ್ಯವನ್ನು ಕಂಡಂತೆ ಮಗು ಕಿಲಕಿಲನೆ ನಗಲಾರಂಭಿಸಿಬಿಟ್ಟಿತು. ಈ ಅಯೋಮಯ ಸ್ಥಿತಿಯಿಂದ ಗಾಬರಿಗೊಂಡ ಅವರು ದಡಬಡಾಯಿಸಿ ಎದ್ದು ಮಗುವನ್ನು ಎತ್ತಿಕೊಂಡು ಹೊರಟೇಬಿಟ್ಟರು!

ನಮ್ಮ ಚಿಕ್ಕತ್ತೆಗೆ  ಸೀನು ಬಂದರೆ ನಿಲ್ಲುತ್ತಲೇ ಇರಲಿಲ್ಲ.  ಅವರ ಮಕ್ಕಳಂತೂ ತಾಯಿ ಸೀನಲು  ಪ್ರಾರಂಭಿಸಿದಾಕ್ಷಣವೇ ಸುತ್ತಲೂ ಘೇರಾಯಿಸಿ ಒಂದು, ಎರಡು, ಮೂರು, ನಾಲ್ಕು,... ಎಂದು ಒಕ್ಕೊರಲಿನಲ್ಲಿ ಎಣಿಸಿದ್ದೂ ಎಣಿಸಿದ್ದೆ!  ಕನಿಷ್ಠ 20 ಸೀನನ್ನಾದರೂ ಅವರು ಒಮ್ಮೆಗೇ ಸೀನುತ್ತಿದ್ದರು!  ಈ  ಮಕ್ಕಳು ಎಣಿಸೋ ಲೆಕ್ಕ ಕಲಿತಿದ್ದು ಅವರಮ್ಮ ಸೀನೋದ್ರಿಂದಲೇ ಎಂದು ಎಲ್ಲರೂ  ತಮಾಷೆ ಮಾಡುತ್ತಿದ್ದರು.  ನಮ್ಮ  ತಾತ ಸೀನಿನ ಶಕುನವನ್ನು ಬಹಳವಾಗಿ ನಂಬುತ್ತಿದ್ದರು. ಯಾವುದಾದರೂ ಕೆಲಸಕ್ಕೆ ಹೊರಟಾಗ ನಮ್ಮ ಮನೆಯ ಕರು ಸೀನಿದರೆ ಆ ಕೆಲಸ ಆಗೇತೀರುತ್ತದೆ ಎನ್ನುವುದು ಅವರ ಅಚಲ ನಂಬಿಕೆ. ಒಮ್ಮೆ ಹೀಗೇ ಯಾವುದೋ ಪ್ರಮುಖ ಕಾರ್ಯಕ್ಕೆ ಅವರು ಹೊರಟು ನಿಂತಾಗ ನಾನು ತಟ್ಟನೆ 'ಆ....ಕ್ಷಿ' ಎಂದುಬಿಟ್ಟೆ. 'ಅಯ್ಯೋ ಒಂಟಿ ಸೀನು' ಎಂದುಕೊಂಡು ಅವರು ಕುಳಿತೇಬಿಟ್ಟರು. ಅಕ್ಕ ನನಗೆ 'ಇನ್ನೊಂದು ಸಾರಿ ಸೀನಿಬಿಡೆ, ತಾತ ಬಯ್ತಾರೆ.' ಎಂದು ಒತ್ತಾಯಿಸಲಾರಂಭಿಸಿದಳು. ಹುಸಿಕೆಮ್ಮನ್ನಾದರೂ ಕೆಮ್ಮಬಹುದು. ಆದರೆ ಹುಸಿ ಸೀನು ಸಾಧ್ಯವೆ? ಕರು ಸೀನಿದರೆ ಖುಷಿಪಡೋ ತಾತ ನಾನು ಸೀನಿದರೆ ಏಕೆ ಅಪಶಕುನ ಅಂತಾರೆ ಎನ್ನುವುದೇ ಸಮಸ್ಯೆಯಾಗಿತ್ತು. ಮನೆಯಲ್ಲಿ ಏನಾದರೂ ಗಹನವಾದ ಮಾತುಕತೆ ನಡೆಯುತ್ತಿದ್ದಾಗ ಅಮ್ಮ ಅಪ್ಪಿತಪ್ಪಿಯೂ ನನ್ನನ್ನು ಹತ್ತಿರದಲ್ಲಿ ಕೂರಲು ಬಿಡುತ್ತಿರಲಿಲ್ಲ! ಈ ಕಳಂಕದಿಂದ ಪಾರಾಗಲು ನಾನು ಎಷ್ಟೊಬಾರಿ ಬರುವ ಸೀನನ್ನು ತಡೆಯಲು ಪ್ರಯತ್ನಿಸಿ ಅದು ಒಳಗೂ ಉಳಿಯದೆ ಹೊರಗೂ ಬರದೇ ತ್ರಿಶಂಕು ಸ್ಥಿತಿಯಾಗಿ 'ಹ್ಹ ಹ್ಹ ಹ್ಹ...'ಎನ್ನುತ್ತಾ ಪಡುತ್ತಿದ್ದ ಸಂಕಟ ಅಜ್ಜಿ ಹೇಳುವಂತೆ ನಮ್ಮ ಶತೃವಿಗೂ ಬೇಡ!

      ನಾವು ಚಿಕ್ಕವರಿದ್ದಾಗ ಸೀನಿದರೆ ಮೊದಲನೆಯದಕ್ಕೆ ಶತಾಯಸ್, ಎರಡನೆಯದಕ್ಕೆ ಧೀರ್ಘಾಯಸ್ ಎನ್ನುತ್ತಿದ್ದರು. ಇಂಗ್ಲೀಷ್  ಮಾತನಾಡುವ ರಾಷ್ಟ್ರಗಳಲ್ಲಿ , ಸಾಮಾನ್ಯವಾಗಿ ಯಾರಾದರು ಸೀನಿದಾಗ ಅವರಿಗೆ 'ಬ್ಲೆಸ್ ಯು' ಎನ್ನುತ್ತಾರಂತೆ. ನಮ್ಮಂತೆಯೇ ವಿದೇಶಗಳಲ್ಲಿಯೂ ಸೀನಿನ ಬಗ್ಗೆ ವಿವಿಧ ನಂಬಿಕೆಗಳಿವೆ. ಪ್ರಾಚೀನ ಗ್ರೀಸ್ ನಲ್ಲಿ, ಸೀನುಗಳನ್ನು, ದೇವತೆಗಳ ಭವಿಷ್ಯ ಸೂಚಕ ಸಂಕೇತಗಳು ಎಂದು ನಂಬುತ್ತಿದ್ದರಂತೆ. ಪೂರ್ವ ಏಷ್ಯಾದ ಕೆಲವೊಂದು ಭಾಗಗಳಲ್ಲಿ ಯಾವುದೇ ಕಾರಣವಿಲ್ಲದೆ ಸೀನು ಬಂದರೆ, ಸಾಮಾನ್ಯವಾಗಿ ಆ ಕ್ಷಣದಲ್ಲಿ ಯಾರೋ ಸೀನಿದವರ ಬಗ್ಗೆ ಮಾತನಾಡ್ತಿದಾರೆ ಅಂದುಕೊಳ್ತಾರೆ. ಒಂಟಿಸೀನು ಬಂದರೆ  ಸೀನುವವನ ಬಗ್ಗೆ ಒಳ್ಳೆಯದು ಹೇಳಿದ್ದಾರೆಂದು, ಒಟ್ಟಿಗೆ ಜೋಡಿಸೀನು ಬಂದರೆ  ಕೆಟ್ಟ ಮಾತನಾಡಿದ್ದಾರೆಂದೂ, ಸಾಲಾಗಿ ಮೂರು ಸೀನುಬಂದರೆ ಯಾರಾದರು ಅವರನ್ನು ಪ್ರೀತಿಸುತ್ತಿದ್ದಾರೆಂದು ತಿಳಿಯುತ್ತಾರೆ. ಎಲ್ಲಿಂದೆಲ್ಲಿಗೆ ಹೋದರೂ ಒಂದಲ್ಲಾ ಒಂದು ಕೊನೆ ಮೊದಲಿಲ್ಲದ ನಂಬಿಕೆಗಳು! ಹೀಗೆ ನಮ್ಮ ಈ ಸೀನು ಪ್ರಪಂಚದಾದ್ಯಂತ  ಮೌಢ್ಯವ್ಯಾಪಿಯಾಗಿದೆ.   

ಸೀನಿನ ವೇಗ 35ರಿಂದ40 mphನ ಸಮೀಪದಲ್ಲಿರುತ್ತದೆ ಎಂದು ವೈಜ್ಞಾನಿಕವಾಗಿ ಅಂದಾಜು ಮಾಡಿದಾರೆ. ಈ ವೇಗದಲ್ಲಿ ಸೀನು 15 ರಿಂದ 20 ಅಡಿಗಳವರೆಗೆ ಸಣ್ಣ ಹನಿಗಳನ್ನು ಸುತ್ತೆಲ್ಲಾ ಎರಚುತ್ತದಂತೆ. ಅದಕ್ಕೇ ರೋಗಗಳನ್ನು ಹರಡುವುದರಲ್ಲಿ ಸೀನಿಗೇ ಅಗ್ರಸ್ಥಾನ. ಕೆಲವೊಮ್ಮೆ ಸೀನಿನ ವೇಗ 100mph ಕೂಡ ಆಗಿರುತ್ತಂತೆ. ಬಹುಶಃ ನಮ್ಮ ಸೋದರಮಾವನ ವೇಗ ಇದೇ ಆಗಿತ್ತೇನೋ! 

                               ~ ಪ್ರಭಾಮಣಿ ನಾಗರಾಜ 


Saturday, February 3, 2024

ನಳಿನಿ ಟಿ. ಭೀಮಪ್ಪ ಅವರಿಂದ ನನ್ನ ಲಲಿತ ಪ್ರಬಂಧ 'ಸ್ವೀಟ್ 60' ಗೆ ವಿಮರ್ಶೆ👌❤️

 

                     ಮುಂಚೂಣಿಯಲ್ಲಿರುವ ಸುಪ್ರಸಿದ್ಧ ಲೇಖಕಿಯಾದ ನಳಿನಿ ಟಿ. ಭೀಮಪ್ಪ ಅವರಿಂದ  ನನ್ನ ಲಲಿತ ಪ್ರಬಂಧ 'ಸ್ವೀಟ್ 60' ಗೆ ಪ್ರೀತಿಯ ವಿಮರ್ಶೆ👌❤️

        ಲಲಿತಪ್ರಬಂಧಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಲೇಖಕಿ ಎಂದರೆ ಪ್ರಭಾಮಣಿಯವರು ಎನ್ನಬಹುದು.  ಇಷ್ಟು ದಿವಸ ಇವರ ಪರಿಚಯ ಇರಲಿಲ್ಲ.  ಎಲ್ಲೋ ಅಲ್ಲೊಂದು ಇಲ್ಲೊಂದು ಲೇಖನ ಓದಿ ಇವರ ಭಾಷಾಪ್ರೌಢಿಮೆಗೆ ಅಚ್ಚರಿಪಟ್ಟಿದ್ದೆ.  ಇತ್ತೀಚೆಗೆ ಮುಖಪುಸ್ತಕದಿಂದ ಅವರು ಸಂಪರ್ಕಕ್ಕೆ ಬಂದಾಗ, ಅಲ್ಲಿ ಅವರು ಹಾಕುತ್ತಿದ್ದ ಬರಹಗಳನ್ನು ಓದಿ ಆನಂದಿಸಿ, ಅವರ ಪುಸ್ತಕ ಕಳಿಸಲೇಬೇಕು ಎಂದು ದುಬಾಲು ಬಿದ್ದು ತರಿಸಿಕೊಂಡೆ.  ಅದರಲ್ಲಿನ ‘ಲೇಖಕರ ಮಾತು’ ಓದುವಾಗಲೇ ಪ್ರಭಾಮಣಿಯವರ ಹಾಸ್ಯದ ಝಲಕುಗಳು ಅಪ್ಪಳಿಸುತ್ತ ನಗಿಸಿದ್ದವು.  ಈ ಪುಸ್ತಕಕ್ಕೆ ‘ಸ್ವೀಟ್ ೬೦’ ಎನ್ನುವ ಹೆಸರು ಆಯ್ಕೆ ಮಾಡಿರುವುದಕ್ಕೆ ಕೊಟ್ಟಿರುವ ಕಾರಣವನ್ನು ಓದಿ ಬಿದ್ದೂ ಬಿದ್ದೂ ನಕ್ಕಿದ್ದೇನೆ.  ಇದು ಮುಖಸ್ತುತಿಯಂತೂ ಅಲ್ಲವೇ ಅಲ್ಲ.

‘ಸ್ವೀಟ್ ೬೦’ ಲೇಖಕಿ ಪ್ರಭಾಮಣಿಯವರ ಲಲಿತಪ್ರಬಂಧಗಳ ಸಂಕಲನ.  ಈ ಸಂಕಲನವನ್ನು ಕೈಗೆತ್ತಿಕೊಂಡಾಗ ಸರಸರನೆ ಓದಿ ಮುಗಿಸಿಬಿಡಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದೆ.  ಆದರೆ ಇವು ಸುಮ್ಮನೆ ಕಣ್ಣಾಡಿಸಿ ಇಡುವಂತಹ ಪ್ರಬಂಧಗಳಲ್ಲ ಎನ್ನುವುದು ಬಹುಬೇಗನೆ ಅರಿವಿಗೆ ಬಂತು.  ಬರಹಗಳಲ್ಲಿನ ಪ್ರತಿಯೊಂದು ಪದ, ಸಾಲುಗಳನ್ನೂ ಇಂಚಿAಚಾಗಿ ಸವಿಯುತ್ತ ಹೋದಂತೆಲ್ಲ, ತುಟಿಯಂಚಿನಲ್ಲಿ ನಮಗರಿವಿಲ್ಲದೆ ಹಾಸ್ಯದ ಬುಗ್ಗೆಯನ್ನೇ ಹರಿಸುವ ತಾಕತ್ತಿನವು ಎಂದು ಹೇಳಬಹುದು.  ನಿಜವಾಗಿಯೂ ಓದುಗರಿಗೆ ಇದು ರಸದೌತಣ ಎನ್ನಬಹುದು. 
ಗಂಭೀರ ಬರವಣಿಗೆಯಲ್ಲಿ ಹಾಸ್ಯವನ್ನು ಓದುಗರಿಗೆ ಮನಮುಟ್ಟುವಂತೆ ಉಣಬಡಿಸಿದ್ದಾರೆ.  ಪ್ರತಿಯೊಂದು ಲೇಖನವನ್ನು ಓದುವಾಗಲೂ ಅದೆಷ್ಟು ಪ್ರಬುದ್ಧ, ಪಕ್ವ ಬರವಣಿಗೆ ಲೇಖಕಿಯದು ಎಂದು ಸ್ಪಷ್ಟವಾಗಿ ಅರಿವಿಗೆ ಬಂದುಬಿಡುತ್ತದೆ.  ಅದರಲ್ಲೂ ಅವರ ಬರವಣಿಗೆ ಎಂದರೆ ಹಳಿಗಳ ಮೇಲೆ ತಡವರಿಸದೆ ಓಡುವ ರೈಲಿನಂತೆ. ಸರಳ ವಿಷಯಗಳು, ಸರಾಗವಾದ ಓಘ.  ಬರೆಯುತ್ತಿರುವ ವಿಷಯ ಬಿಟ್ಟು ಒಂದಿAಚೂ ಆಚೀಚೆ ಕದಲುವುದಿಲ್ಲ.  ಆರಂಭ, ವಿಷಯ ವಿಸ್ತರಣೆ, ಅಂತ್ಯ ಎಲ್ಲವೂ ಅಚ್ಚುಕಟ್ಟು.  ಬಹುಶಃ ಇತ್ತೀಚಿನ ಬರಹಗಾರರಲ್ಲಿ, ಅದರಲ್ಲೂ  ಲಲಿತಪ್ರಬಂಧಗಳ ಪ್ರಾಕಾರದ ಪೈಕಿ, ಪ್ರಭಾಮಣಿಯವರದು ಒಂದು ಕೈಮೇಲೆಯೇ ಎಂದು ಹೇಳಬಹುದು.  ಅಷ್ಟು ತೂಕವಿದೆ ಅವರ ಬರಹಗಳಲ್ಲಿ.  ಪ್ರತಿಯೊಂದು ಬರಹವೂ ಸರಳವಾದ ವಿಷಯಗಳನ್ನು ಒಳಗೊಂಡಿದ್ದರೂ,  ವಿಭಿನ್ನ, ವಿಶಿಷ್ಟ  ವಾಗಿ ಗಮನ ಸೆಳೆಯುತ್ತದೆ.

ಲಲಿತಪ್ರಬಂಧಗಳನ್ನು, ಹಾಸ್ಯವನ್ನು ಬರೆಯುವವರಿಗೆ ಮಾರ್ಗದರ್ಶನವಾಗಬಲ್ಲದು.  ನಾನಂತೂ ಪದೇ ಪದೇ ಓದಿ ಅವರ ಬರವಣಿಗೆಯ ಕೌಶಲ್ಯಕ್ಕೆ ಅಚ್ಚರಿಗೊಂಡಿದ್ದೇನೆ, ಅಭಿಮಾನಿಯಾಗಿದ್ದೇನೆ.  ಅವರ ಅಷ್ಟೂ ಲಲಿತಪ್ರಬಂಧಗಳ ಪುಸ್ತಕಗಳನ್ನು ಓದುವ ಆಸೆ ಇದೆ.  ಮೇಡಂ ಮತ್ತಷ್ಟು ಪುಸ್ತಕಗಳು ನಿಮ್ಮ ಲೇಖನಿಯಿಂದ ಹೊರಬರಲಿ ಎಂದು ಹಾರೈಸುತ್ತೇನೆ.
ನಳಿನಿ ಟಿ. ಭೀಮಪ್ಪ
ಧಾರವಾಡ

Thursday, January 11, 2024

ನಮ್ಮ ಕಿರುತೋಟದ ಮತ್ತಷ್ಟು ಸುಮಸಿರಿ🌼🏵️🌺

 🌹🌼ನಮ್ಮ ಕಿರುತೋಟದ ಮತ್ತಷ್ಟು ಸುಮಸಿರಿ🌾🏵️🥀🌺


https://m.facebook.com/story.php?story_fbid=pfbid0o1j9PrnAPD7Ketr8xNUZSp9KBorEbwfPcGg2y6YqKXepcLYTDoDpNuwgM2kN8Ucal&id=100003356357708&mibextid=Nif5oz