Wednesday, April 22, 2015

ಕನ್ನಡಿಯೊಳಗಿನ ಗಂಟು .....

ಹಿ೦ದಿನ ಹಾಸ್ಯ ಬರಹ ಇ೦ದಿನ ಓದಿಗೆ:
                                          ಕನ್ನಡಿಯೊಳಗಿನ ಗಂಟು  .....
`
 ಕನಸಿನ ನಂಟು ಕನ್ನಡಿಯೊಳಗಿನ ಗಂಟು’ ಸಮಯಾನುಸಾರ ಅಜ್ಜಿ ಈ ನುಡಿಗಟ್ಟುಗಳನ್ನು ಬಳಸಿದಾಗ ಚಿಕ್ಕವಳಲ್ಲಿ ನಾನು ಬಹಳ ಗೊಂದಲಗೊಳ್ಳುತ್ತಿದ್ದೆ. ಪೂವಾರ್ಧ ನನ್ನನ್ನಷ್ಟು ಚಿಂತೆಗೀಡುಮಾಡುತ್ತಿರಲಿಲ್ಲ. ಹಳ್ಳಿಯಲ್ಲಿ ವಾಸವಾಗಿದ್ದ ನಮ್ಮ ಮನೆಯಲ್ಲಿ ಯಾರಾದರೂ ಅತಿಥಿ ಅಭ್ಯಾಗತರಿಲ್ಲದೆ ಊಟಮಾಡುತ್ತಿದ್ದುದರ ನೆನಪೇ ಇಲ್ಲ. ಬೇಸಿಗೆ ರಜೆ ಬಂತೆಂದರೆ ಮನೆಯ ತುಂಬಾ ಬಂಧು ಬಳಗ! ಮಕ್ಕಳ ಒಂದು ಸೈನ್ಯವೇ ನಿರ್ಮಾಣವಾಗಿ ಹಗಲೆಲ್ಲಾ ಗದ್ದೆಬಯಲುಗಳಲ್ಲಿ ಅಲೆದು, ರಾತ್ರಿಯಾಯಿತೆಂದರೆ ಲ್ಯಾಂಪಿನ ಅಥವಾ ಬುಡ್ಡಿದೀಪದ ಬೆಳಕಿನಲ್ಲಿ ಗುಡ್ಡೆಹಾಕಿಕೊಂಡು ಕುಳಿತು ಅಜ್ಜಿಯೋ, ತಾತನೋ, ಆಳು ಪುಟ್ಟಪ್ಪನೋ ಹೇಳುವ ಕಥೆಗಳನ್ನು ಕೇಳುತ್ತಾ, ಬೆಳದಿಂಗಳಿತ್ತೆಂದರೆ ಅಂಗಳದಲ್ಲಿ ಹಾಸಿದ್ದ ಚಾಪೆಯಮೇಲೆ ಉರುಳಿಕೊಂಡು ಹರಟುತ್ತಾ....... ಕಾಲ ಕಳೆಯುತ್ತಿದ್ದುದರ ಅರಿವೇ ನಮಗಾಗುತ್ತಿರಲಿಲ್ಲ! ವಾಸ್ತವದಲ್ಲೇ ನಂಟೆಂಬ `ಅಂಟು’ ಸಹನಾತೀತವಾಗಿದ್ದುದರಿಂದ ?ಕನಸಿನ ನಂಟು? ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. `ಗಂಟು’ ಎನ್ನುವ ಪದ ಹಣಕ್ಕೇ ಸಂಬಂಧಿಸಿದುದೆಂಬ ಅರಿವಿದ್ದರಿಂದ- ಏಕೆಂದರೆ ನಾನು ಕೇಳುತ್ತಿದ್ದ ಕಥೆಗಳಲ್ಲೆಲ್ಲಾ ಸಾಮಾನ್ಯವಾಗಿ ಹಣದ ಗಂಟು-ಥೈಲಿಯ ಪ್ರಸ್ತಾಪವಿರುತ್ತಿದ್ದರಿಂದ ಮತ್ತು ಈ ಹಣದಿಂದ ನಾನು ಏನೇನೋ ಮಾಡಬೇಕೆಂಬ ಯೋಜನೆ ಇದ್ದುದರಿಂದ ಕನ್ನಡಿಯ ಒಳಗೆ ಹೇಗೆ ಈ ಗಂಟು ಹೋಗಿ ಸೇರಿಕೊಂಡಿತು? ಅದನ್ನು ಹೊರ ತೆಗೆಯುವ ಬಗೆ ಹೇಗೆ? ಎನ್ನುವುದೇ ನನ್ನ ಸಮಸ್ಯೆಯಾಗಿತ್ತು!
ನಾನು ವಿಜ್ಞಾನದ ವಿದ್ಯಾರ್ಥಿಯಾದ ನಂತರ ದರ್ಪಣ-ಪ್ರತಿಫಲನ ಎಂದೆಲ್ಲಾ ಓದುವಾಗ ಕನ್ನಡಿಯೊಳಗಿನ ಗಂಟು ಒಂದು ಪ್ರತಿಬಿಂಬ ಎಂದು ತಿಳಿದುಕೊಂಡೆ. ಪ್ರತಿಬಿಂಬ ಉಂಟಾಗಬೇಕಾದರೆ ಒಂದು ವಸ್ತು ಇರಲೇ ಬೇಕಲ್ಲ! `ಗಂಟು’ ಹೊರಗಿದ್ದಾಗ ಮಾತ್ರ ಕನ್ನಡಿಯ ಒಳಗೂ ಅದು ಕಾಣಲು ಸಾಧ್ಯ ಎಂಬ ತರ್ಕ ಪ್ರಾರಂಭವಾಯಿತು!
`ನಂಟ’ನ್ನು ಸಾಮಾನ್ಯವಾಗಿ ಸ್ವೀಕರಿಸಿ `ಗಂಟು’ ಬಗ್ಗೆ ತಲೆಕೆಡಿಸಿಕೊಳ್ಳುತ್ತಾ ಸಮಯ ವ್ಯರ್ಥಮಾಡುತ್ತಿದ್ದಾಗಲೇ ಅಜ್ಜಿಯ `ಗಂಟೂ ಪೋಯ, ನಂಟೂ ಪೋಯ’ ಎನ್ನುವ ಮತ್ತೊಂದು ಆರ್ಯೋಕ್ತಿ ವಿರೋಧಾಭಾಸವನ್ನುಂಟುಮಾಡಿತು. ಈ ಪರಿಸ್ಥಿತಿ ಆಗಾಗ ನಮ್ಮ ಮನೆಯಲ್ಲಿ ಉಂಟಾಗುತ್ತಿದ್ದ ಘಟನೆಗಳಿಂದ ಮೂರ್ತರೂಪ ಪಡೆದದ್ದು ಎನ್ನುವುದು ನಂತರ ನನಗೆ ಗೋಚರಿಸುತ್ತಾ ಹೋಯಿತು. ಆದರೆ `ಗಂಟು ಪೋಯ’ ಎನ್ನುವುದಷ್ಟೇ ಸತ್ಯವಾಗಿ ಬಹಳ ಉದಾರ ಮನಸ್ಕರಾದ ನಮ್ಮ ತಂದೆಯ ಸಹನಶೀಲತೆಗೆ, ಕ್ಷಮಾಗುಣಕ್ಕೆ ಪ್ರತಿಫಲವೋ ಎಂಬಂತೆ `ನಂಟೂ ಪೋಯ’ವಾಗಲು ಆಸ್ಪದವಾಗುತ್ತಿರಲಿಲ್ಲ. ಆ `ನಂಟು’ ಮುಂದಿನ ಬೇಸಿಗೆ ರಜಕ್ಕೆ ಸಕುಟುಂಬ ಪರಿವಾರ `ಸಮೇತ’(!)ರಾಗಿ ನಮ್ಮ ಮನೆಯಲ್ಲಿ ಠಿಕಾಣಿ ( ತಂದೆಯ ಕ್ಷಮಾಗುಣ ಅವರ `ಕುಟುಂಬ’ಕ್ಕೆ ಸದಾಕಾಲ ಸಿದ್ಧಿಸಿಲ್ಲದಿದ್ದರಿಂದ ಅಥವಾ ಅವರನ್ನು ಪೊರೆಯುವ ಎಂದರೆ ಉದರ ಪೋಷಣೆ ಮಾಡುವ ಗುರುತರವಾದ ಜವಾಬ್ಧಾರಿ ಇದ್ದ ನಮ್ಮ ತಾಯಿಯ ಹೊಣೆಗಾರಿಕೆಯ ಸ್ಪಷ್ಟ ಅಭಿವ್ಯಕ್ತಿಯನ್ನೇ ಬಳಸುತ್ತಿದ್ದೇನೆ!) ಹೂಡುತ್ತಿದ್ದರು. ಎಲ್ಲಾ ಹೊಟ್ಟೆಗಳನ್ನೂ ತುಂಬುವಷ್ಟು ಧವಸ ಧಾನ್ಯಗಳನ್ನು ನಮ್ಮ ಜಮೀನು ಒದಗಿಸುತ್ತಿತ್ತು. ತರಕಾರಿ, ಸೊಪ್ಪು ಸೆದೆಗಳನ್ನು ನಮ್ಮ ಹಿತ್ತಿಲು ಪೂರೈಸುತ್ತಿತ್ತು. ಒಬ್ಬ ಭಕ್ತ `ದೇವರೇ ನಾನು ನಿನ್ನನ್ನು ಹೆಚ್ಚೇನನ್ನೂ ಕೇಳುವುದಿಲ್ಲ. ನನ್ನ, ನನ್ನ ಆಶ್ರಿತರ ಹೊಟ್ಟೆತುಂಬಿಸುವಷ್ಟು, ಅತಿಥಿಗಳನ್ನು ಸತ್ಕರಿಸುವಷ್ಟು ಕೊಟ್ಟರೆ ಸಾಕು.’ ಎಂದು ಕೇಳುವಂತೆ ಸಾತ್ವಿಕರಾಗಿದ್ದ ನನ್ನ ತಂದೆಯ ಪ್ರಾರ್ಥನೆಯೂ ಆಗಿದ್ದಿರಬಹುದು.
ಓದಿ, ಕೆಲಸಕ್ಕೆ ಸೇರಿ ಆರ್ಥಿಕ ಸ್ವಾವಲಂಬಿಯಾಗಿ, ಗಂಡ-ಮಕ್ಕಳು-ಮನೆ ಎಂಬೆಲ್ಲಾ `ಸಕಲ'ಗಳ ನಡುವೆಯೂ ಇದ್ದಷ್ಟರಲ್ಲೇ ಸಾಕೆನ್ನುವಂತಿದ್ದ, ವೇತನಕ್ಕೆಂದೇ ಗೊತ್ತುಪಡಿಸಿದ, ತಿಂಗಳ ಕಡೆಗೆ ಬ್ಯಾಂಕ್‌ನವರು ನಿಗಧಿಪಡಿಸಿದ ಕನಿಷ್ಟ ಮೊತ್ತವನ್ನು ಮಾತ್ರ ಹೊಂದಿರುತ್ತಿರುವ ಎಸ್. ಬಿ. ಖಾತೆಯನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಂಕ್ ಡಿಪಾಸಿಟ್ಸ್ ಹೊಂದಿಲ್ಲದ ನಮ್ಮ ಬೋಳೆ ಸ್ವಭಾವ ತಿಳಿದಿದ್ದ ನನ್ನ ಆತ್ಮೀಯರು ತಾವು ಲಾಭದಾಯಕ ಎಂದು ಕಂಡುಕೊಂಡ `ಹಣದ್ವಿಗುಣ’ಗೊಳಿಸುವ ಒಂದು ಸ್ಕೀಮಿಗೆ ನನ್ನನ್ನು ಪರಿಚಯಿಸಿ ನಾನೂ ಅದರಲ್ಲಿ ಹಣವನ್ನು ತೊಡಗಿಸಲು ಒತ್ತಾಯಿಸಿದರು. ತಾವೇ ಮುಂದೆ ನಿಂತು ಶೂರಿಟಿಯನ್ನೂ ಕೊಟ್ಟು ಬ್ಯಾಂಕ್ ಒಂದರಲ್ಲಿ ಸಾಲವನ್ನು ಮಾಡಿಸಿ ಆ ಸ್ಕೀಮಿಗೆ ಹಣವನ್ನು ಕಟ್ಟಿಸಿ ನನ್ನನ್ನು ಆರ್ಥಿಕೋದ್ಧಾರಗೊಳಿಸಿದ ಕೃತಾರ್ಥ ಭಾವದಲ್ಲಿ ಅವರು ಇರುವಾಗಲೇ ಅವರ ಜೊತೆಗೆ ನನ್ನ... (ಕ್ಷಮಿಸಿ, ಹೊಸದಾಗಿ ಸೇರ್ಪಡೆಯಾದ ನನ್ನ ಕಾಲ್ಗುಣ ಅಲ್ಲ ಕೈಗುಣವಾದ್ದರಿಂದ ನನ್ನ ಜೊತೆಗೆ ಅವರ) `ಗಂಟೂ’ ಮುಳುಗಿ ನಿಜಕ್ಕೂ `ಗಂಟೂ ಪೋಯ’ ಆಗೇ ಹೋಯ್ತು! ಈಗ ಅಪ್ಪಿ ತಪ್ಪಿಯೂ ಯಾರೂ ನನ್ನೆದುರು ಹಣಕಾಸಿನ ಪ್ರಸ್ತಾಪವನ್ನು ಎತ್ತುವುದೇ ತಪ್ಪೆನ್ನುವಂತೆ ವರ್ತಿಸುತ್ತಾ ನನ್ನನ್ನು ವಿತ್ತಾಸ್ಪರ್ಶಳನ್ನಾಗಿಸಿದ್ದಾರೆ!
`ಗಂಟು’ ಎನ್ನುವ ಬಗ್ಗೆ ಮೊದಲಿನಿಂದಲೂ ನನ್ನಲ್ಲಿ ಇದ್ದ ಜಿಜ್ಞಾಸೆಯ ಫಲವೋ, ಬಾಹ್ಯವಾಗಿ ಆರ್ಥಿಕವಾಗಿ `ಗಂಟು’ಮಾಡಲಾಗದ (ಅ!)ಸಾಮರ್ಥ್ಯವೋ ಏನೋ ಕ್ರಮೇಣ ನನ್ನೊಳಗೇ `ಗಂಟು’ಗಳು ಬೆಳೆಯಲಾರಂಭಿಸಿಬಿಟ್ಟವು! ಕತ್ತಿನಸುತ್ತ ಬೆಳೆಯಲಾರಂಭಿಸಿದ ಗಂಟುಗಳನ್ನು ಸಾಮಾನ್ಯ ಔಷಧಿಗಳಿಂದ ಜಗ್ಗಿಸಲಾಗದೇ (ಜಗ್ಗದ, ಕುಗ್ಗದ, ಕರಗದ....)ವಿಶೇಷ ತಜ್ಞರಿಗೆ ತೋರಿಸಿದಾಗ ಕ್ಷ-ಕಿರಣ, ರಕ್ತಪರೀಕ್ಷೆ, ಸ್ಕ್ಯಾನಿಂಗ್,... ಇತ್ಯಾದಿ ಎಲ್ಲರೀತಿಯ ಪ್ರಯೋಗಗಳನ್ನೂ ಮಾಡಿ ಬೆಟ್ಟ ಅಗೆದು ಇಲಿ ಹಿಡಿದಂತೆ `ಲಿಂಫ್ ನೋಡ್ಸ್’ ಎನ್ನುವ ತೀರ್ಮಾನಕ್ಕೆ ಬಂದು ಔಷದೋಪಚಾರ ಪ್ರಾರಂಭವಾಯ್ತು. `ಮಂಗಳಾರತಿ ತೆಗೆದುಕೊಂಡರೆ ಉಷ್ಣ, ತೀರ್ಥ ತೆಗೆದುಕೊಂಡರೆ ಶೀತ’ ಎನ್ನುವ ಪ್ರಕೃತಿಯವಳಾದ್ದರಿಂದ `ಅಲರ್ಜಿ’ ಭೂತದ ಹಾವಳಿಯುಂಟಾಗಿ ಒಂದಕ್ಕೆ ಒಂದು ಫ್ರೀ ಎನ್ನುವಂತೆ ಉಪ ಕಿರಿಕಿರಿಗಳಿಂದ ತಪ್ಪಿಸಿಕೊಳ್ಳಲು ಮತ್ತು ವರ್ಷಾನುಗಟ್ಟಲೆ ತೆಗೆದುಕೊಂಡ ಔಷಧಿಗಳ ಸಕಾರಾತ್ಮಕ ಪರಿಣಾಮಗಳೂ ಕಾಣದಂತಾಗಿ ಆಲೋಪತಿಗೆ ತಾತ್ಕಾಲಿಕ ವಿದಾಯ ಹೇಳಿ ಆಯುರ್ವೇದಿಕ್ ಮೊರೆಹೋದದ್ದಾಯ್ತು. ಲೇಹ್ಯ, ಚೂರ್ಣ, ಕಷಾಯ, ಗುಳಿಗೆ, ತೈಲಾದಿಗಳದೇ ಲೇಪ, ಧೂಪಗಳಿಂದ ಕತ್ತನ್ನು ಉಪಚರಿಸುವ ಸಡಗರದಲ್ಲಿ ಗಂಟೋತ್ಪಾಟನಾ ಕಾರ್ಯದಲ್ಲಿ ತೊಡಗಿದ್ದಾಗ `ಎಲ್ಲಿ ಗಂಟು ಬಿದ್ದಳೋ ಇವಳು’ ಎಂದು ಗೊಣಗಿಕೊಳ್ಳುವಂತೆ (ಬ್ರಹ್ಮಗಂಟು!) ಪತಿಯ ಅವಕೃಪೆಗೊಳಗಾಗುವ ಕುತ್ತುಂಟಾಯಿತು. ಆದರೂ ಛಲಬಿಡದೇ ನಿಯಮಿತವಾಗಿ ವರ್ಷಗಟ್ಟಳೇ ವೈದ್ಯರ ಸಲಹೆಯಂತೆ ಮದ್ದುಗಳನ್ನು ಸೇವಿಸುತ್ತಾ `ಅನುವಂಶೀಯ’ ಗುಣವೇ ಇರಬಹುದಾದ ವೈದ್ಯ ಸ್ನೇಹಕ್ಕೆ ಭಾಜನಳಾದೆ! ನಾವಿದ್ದ ಹಳ್ಳಿಗೆ ಯಾರೇ ವೈದ್ಯರು ಬಂದರೂ ನಮ್ಮ ತಂದೆ ಅವರ ಸ್ನೇಹ ಸಂಪಾದಿಸಿ ಅವರು ಅನೇಕ ವಿಷಯದಲ್ಲಿ ನಮ್ಮ ತಂದೆಯ ಸಲಹೆ ಪಡೆಯುವಷ್ಟು ಸಲಿಗೆಯುಂಟಾಗುತ್ತಿತ್ತು. ಹೊಸ ವೈದ್ಯನಿಗಿಂತ ಹಳೆಯ ರೋಗಿಯೇ ವಾಸಿ ಎನ್ನುವಂತೆ ನನ್ನ ಸ್ಥಾನ ಮಾನವೂ ದಿನೇ ದಿನೇ ಏರಲಾರಂಭಿಸಿದ್ದಕ್ಕೆ ನಾನು ನನ್ನ ?ಗಂಟು?ಗಳಿಗೆ ವಂದನೆಗಳನ್ನು ಸಲ್ಲಿಸಲೇ ಬೇಕು! ಇದೇ ಧನ್ಯತಾ ಭಾವದಲ್ಲಿ ನಾನಿದ್ದಾಗ ಉಪಚಾರ ಹೆಚ್ಚಾದಾಗ ಕೆಲಸವಿಲ್ಲದ ಅಳಿಯ ಮಾವನ ಮನೆಯಲ್ಲಿಯೇ ಟೆಂಟ್ ಹಾಕುವಂತೆ ಕತ್ತನ್ನು ಸುತ್ತುವರಿದಿದ್ದ ಗಂಟುಗಳು ಕಿರಿದಾದ ಮರಿಗಳೊಡಗೂಡಿ ವಿಹರಿಸಲಾರಂಭಿಸಿದವು! ಹೇಗೋ ಒಬ್ಬ ಪರ್ಮದನೆಂಟ್ ಗಿರಾಕಿ ಸಿಕ್ಕಿತೆಂದು ಹಾಯಾಗೇ ಇದ್ದ ವೈದ್ಯರೂ ಹೌಹಾರಿ ಮತ್ತೊಮ್ಮೆ ಎಲ್ಲಾ ರೀತಿಯ ಪರೀಕ್ಷೆಗಳನ್ನೂ ಮಾಡಿಸಬೇಕೆಂದು ಸಲಹೆ ನೀಡಿದರು. ಹಣವನ್ನು ನೀರಿನಂತೆ_ ಕ್ಷಮಿಸಿ ವಾರಕ್ಕೆ ಒಮ್ಮೆಯೋ, ಎರಡು ಭಾರಿಯೋ ನೀರು ಬರುವುದರಿಂದ ನೀರುಹಿಡಿಯುವುದರಲ್ಲಿ (ಬಿಂದು ಬಿಂದು ಸೇರಿ ಸಿಂಧು!) ಕಣ್ಣೀರೂ ಬಂದಿರುತ್ತದೆ!_ಖರ್ಚುಮಾಡಿದ್ದಾಯಿತೇ ವಿನಾ ಪ್ರಯೋಜನವೇನೂ ಆಗಲಿಲ್ಲ. ಮತ್ತೊಮ್ಮೆ ಮೊದಲಿನ ಎಲ್ಲಾ ಪರೀಕ್ಷೆಗಳೊಡನೆ ಸಿಟಿಸ್ಕ್ಯಾನ್‌ನಂತಹ ನವನವೀನ ಪರೀಕ್ಷೆಗಳಿಗೆ ದೇಹವನ್ನು ಒಡ್ಡಿ ಹೊಸ ಅನುಭವಗಳನ್ನು ಪಡೆದುಕೊಂಡಿದ್ದಾಯ್ತು! ವೈದ್ಯರು ತೋರಿಸುತ್ತಿದ್ದ ಅನುಮಾನ, ಆತಂಕಗಳಿಂದ ಭಯಗೊಂಡ ಕುಟುಂಬವರ್ಗದವರು ಹಾಗೂ ಬಂಧುಬಾಂಧವರು ನನ್ನ ಬಗ್ಗೆ ತೋರಿಸುತ್ತಿದ್ದ ವಿಶೇಷ ಪ್ರೀತಿ, ಪ್ರಾಮುಖ್ಯತೆಗಳಿಂದ ನಾನೊಬ್ಬ ವಿ.ವಿ.ಐ.ಪಿ.ಯಾಗುವ ಅವಕಾಶ ಕೂಡಿ ಬಂದು ನನ್ನ ಈ ಗಂಟುಗಳಿಗೆ ಚಿರಋಣಿಯಾಗಿರುವ ಸಂದರ್ಭವೊದಗಿ ಬಂದಿದೆಯೆನಿಸಿತು! ಈ ಆಂತರಿಕ ಗಂಟುಗಳೊಡನೆಯೇ ರಾಜಿ ಮಾಡಿಕೊಂಡು ಜೀವನ ನಡೆಸಬೇಕೇನೋ ಎಂದುಕೊಳ್ಳುವಷ್ಟರಲ್ಲಿ ಮತ್ತೊಂದು ಸರಣಿ ಆಲೋಪತಿಕ್ ಔಷದೋಪಚಾರ ಪ್ರಾರಂಭವಾಯ್ತು! ಈಗಂತೂ ದಿನನಿತ್ಯದ ಆಹಾರ (ನನ್ನಂತೆಯೇ ಸಪ್ಪೆ!) ಸೇವನೆಯೊಂದಿಗೇ `ಗುಳಿಗಾ ಸ್ವಾಹಾ’ವನ್ನೂ ಅತ್ಯಂತ ಸಹಜವಾಗೇ ಸ್ವೀಕರಿಸಿ `ಗಂಟು’ಸೇವೆಯನ್ನು ಮುಂದುವರಿಸಲಾರಂಭಿಸಿದೆ! ತಮ್ಮದೇ ಅನೇಕ ಗೌರವಾನ್ವಿತ ಅನಾರೋಗ್ಯ ಸಮಸ್ಯೆಗಳ ರಾಜಯೋಗದಲ್ಲಿದ್ದು, ದಿನಕ್ಕೆ ಕಮ್ಮಿಯೆಂದರೂ ೨೦-೨೫ ಮಾತ್ರೆಗಳನ್ನು ಸೇವಿಸುತ್ತಿದ್ದ `ಇವರ’ ಎದುರು ನಾನಂತೂ ‘ಯಃಕಚಿತ್’’ ಆಗೇ ಉಳಿಯಬೇಕಾಯಿತು!
ವಾಹನಗಳ ಬಳಕೆ ಕಡಿಮೆ ಇದ್ದ ಕಾಲದಲ್ಲಿ ಅಗಸರು ಒಗೆಯಬೇಕಾದ ಬಟ್ಟೆಗಳನ್ನು ಗಂಟುಕಟ್ಟಿ ಕತ್ತೆಯ ಮೇಲೆ ಹೇರಿಕೊಂಡು ಹೋಗುತ್ತಿದ್ದರು. ಈಗಲೂ ಕೆಲವು ಕಡೆ ಈ ದೃಶ್ಯವನ್ನು ಕಾಣಬಹುದು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ `ನೀ ನನಗಿದ್ದರೆ ನಾ ನಿನಗೆ’ ಎಂಬ ಪದ್ಯ ಓದಿದ್ದು, ಅದರಲ್ಲಿ ಕೊಟ್ಟಿದ್ದ ಚಿತ್ರ, ‘ಕತ್ತೆ ಬೆನ್ನ ಮೇಲಿನ ಹೊರೆಯ ಭಾರ ತಾಳಲಾರದೇ ಗೋಳಾಡುತ್ತಿರುವುದು, ಕುದುರೆ ತನಗೇನೂ ಸಂಬಂದಿಸಿಲ್ಲವೆನ್ನುವಂತೆ ನಿಂತಿರುವುದು,’ ಇನ್ನೂ ಮನಃಪಟಲದಲ್ಲಿ ನಿಶ್ಚಳವಾಗಿದೆ! ಅಜ್ಞಾತ ವಾಸ ಪ್ರಾರಂಭವಾದಾಗ ಪಾಂಡವರು ತಮ್ಮ ಆಯುಧಗಳನ್ನೆಲ್ಲಾ ಗಂಟುಕಟ್ಟಿ ಬನ್ನಿಮರದ ಮೇಲೆ ಇಟ್ಟಿದ್ದರು ಎನ್ನುವುದನ್ನು ನೆನಪು ಮಾಡುತ್ತಾ ವಿಜಯದಶಮಿಯ ದಿನ ಬನ್ನಿ ಮುಡಿಯುವುದನ್ನು ಸಂಪ್ರದಾಯವಾಗಿಸಿದ್ದಾರೆ.
ನಾನು ಚಿಕ್ಕವಳಿದ್ದಾಗ (ಈಗಲೂ ಚಿಕ್ಕವಳೆಂದೇ ಭಾವಿಸಿದ್ದೇನೆ! ನೋಡಿದವರು ಸಹಿಸಿಕೊಳ್ಳಬೇಕು ಅಷ್ಟೆ! ನಿನ್ನೆ ಇವತ್ತಿಗಿಂತ ಚಿಕ್ಕವಳಿದ್ದೆ-ನಾಳೆಗೆ ಇವತ್ತಿಗಿಂತ ದೊಡ್ಡವಳಾಗಿರುತ್ತೇನೆ. ಆದ್ದರಿಂದ ಕೆಲವು ವರ್ಷಗಳ ಹಿಂದೆ...) `ರಾಮದಾಸರು ಗಂಟು ಬಿಚ್ಚಿದರು’ ಎನ್ನುವ ಒಂದು ಲೇಖನವನ್ನು ಓದಿದ್ದೆ. ಒಮ್ಮೆ ಸಮರ್ಥ ರಾಮದಾಸರು ರೈಲಿನಲ್ಲಿ ಪ್ರಯಾಣಮಾಡುವಾಗ ಚೆಕಿಂಗ್‌ನವರು ಅನುಮಾನದಿಂದ ಗಂಟಿನಲ್ಲಿ ಏನಿದೆಯೋ ಎಂದು ಬಿಚ್ಚಿಸಿದಾಗ ಅದರೊಳಗಿದ್ದ ಆಧ್ಯಾತ್ಮಿಕ ಸಂಪತ್ತನ್ನು ನೋಡಿ ಆಶ್ಚರ್ಯಚಕಿತರಾದರೆಂಬ ನೆನಪು. ರಾಹುಲ ಸಾಂಕೃತ್ಯಾಯನ ಎಂಬ ಮಹಾಜ್ಞಾನಿ ಅನೇಕ ಭಾರಿ ಟಿಬೆಟ್ ಯಾತ್ರೆ ಮಾಡಿ ನಮ್ಮ ಭರತಖಂಡದಿಂದ ಟಿಬೆಟ್‌ಗೆ ಕೊಂಡೊಯ್ದಿದ್ದ ಅಮೂಲ್ಯ ಬೌದ್ಧಗ್ರಂಥಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿ ಗಂಟುಕಟ್ಟಿಕೊಂಡು ತಂದು ನಮ್ಮ ಜ್ಞಾನ ಸಂಪತ್ತನ್ನು ಸಂರಕ್ಷಿಸಿದರು. `ಹೆಗಲಿಗೆ ಗಂಟುಮೂಟೆಗಳನ್ನು ಏರಿಸಿಕೊಂಡು ಜಗದಗಲ ಸುತ್ತಾಡಿದರೆ ಏನು ಫಲ? ಜಗತ್ತನ್ನು ತಲ್ಲೀನತೆಯಿಂದ ವೀಕ್ಷಿಸುವವರಿಗೆ ಮಾತ್ರವೇ ಆ ಜಗತ್ತು ಸೇರಿರುತ್ತದೆ....’ವಿಶ್ವಾದ್ಯಂತ ಅನೇಕ ಭಾರಿ ಸಂಚರಿಸಿ, ಕಳೆದ ಸುಮಾರು ೨೫ವರ್ಷಗಳಿಂದ ಬಿಳಿಗಿರಿರಂಗನ ಬೆಟ್ಟದ ಪ್ರಶಾಂತ ತಾಣದಲ್ಲಿ ಏಕಾಂತವಾಸಿಗಳಾಗಿರುವ ಸ್ವಾಮಿ ನಿರ್ಮಲಾನಂದರ ಬಗ್ಗೆ ಓದುವಾಗ ಗಮನ ಸೆಳೆದ ವಾಕ್ಯಗಳಿವು. ಬಾಳಬಟ್ಟೆಯಲ್ಲಿ ವ್ಯಕ್ತ, ಅವ್ಯಕ್ತ ಗಂಟುಮೂಟೆಗಳನ್ನು ಹೊತ್ತು ಸಾಗುವ ನಾವು ಅವುಗಳೊಂದಿಗೇ ನಮ್ಮನ್ನು ನಾವು ತಾದ್ಯಾತ್ಮಗೊಳಿಸಿಕೊಂಡು ಬಿಟ್ಟಿರುತ್ತೇವೆ. ನಾವು ಬಿಡುತ್ತೇವೆಂದರೂ ನಮ್ಮನ್ನು ಬಿಡದ ಈ ಗಂಟು ಮೂಟೆಗಳು `ತಲೆನೋವು ಬಂದಾಗ ತಲೆ ಇದೆ’ ಎಂದು ಸಾಬೀತಾಗುವಂತೆ ತಮ್ಮ ಇರವಿನಿಂದ ನಮ್ಮ ಬದುಕಿಗೊಂದು ಅರ್ಥ ಎನ್ನುವಂತೆ ನಮ್ಮನ್ನೇ ಆಳಲಾರಂಭಿಸಿಬಿಡುತ್ತವೆ. ಅವುಗಳ ತೂಕ ಸಹನೀಯವೆನಿಸುವಂತೆ ನಮ್ಮನ್ನು ನಾವು ರೂಪಿಸಿಕೊಳ್ಳೋಣ, ನಮ್ಮಲ್ಲಿರುವ ಋಣಾತ್ಮಕ ಅಂಶಗಳನ್ನು, ಬದುಕ ಕಗ್ಗಂಟುಗಳನ್ನು ಮೂಟೆಕಟ್ಟಿ ದೂರಬಿಸುಟು ಧನಾತ್ಮಕಗಳನ್ನು ನಮ್ಮದಾಗಿಸಿಕೊಂಡು ಮೂಟೆಯ ಭಾರವನ್ನು ಹಗುರಗೊಳಿಸಿಕೊಳ್ಳೋಣ. ನಗುತ, ನಗಿಸುತ ಬದುಕುವ ಕಲೆಯನ್ನು ಕಲಿಯೋಣ...ಎಂದುಕೊಳ್ಳುತ್ತಾ ಗಂಟು ಮೋರೆಯೊಂದಿಗೆ ನನ್ನನ್ನೇ ನಾನು ಸಂತೈಸಿಕೊಳ್ಳುವಂತಾಗಿಬಿಟ್ಟಿದೆ `ಗಂಟು’ಗಳು ಉಂಟು ಮಾಡಿರುವ ನನ್ನ ಈ ಪರಿಸ್ಥಿತಿ!
ಹಿಂದೊಮ್ಮೆ ಅಜ್ಜಿಯು ಹೇಳುತ್ತಿದ್ದ `ಕನ್ನಡಿಯೊಳಗಿನ ಗಂಟು’ ನನ್ನ ಎಳೆಮನದಲ್ಲಿ `ಆ ಗಂಟನ್ನು ಹೊರತೆಗೆಯುವುದು ಹೇಗೆ?’ ಎನ್ನುವ ಪ್ರಶ್ನೆಯನ್ನು ಉಂಟುಮಾಡಿತ್ತು. ಈಗಿನ ಎಲ್ಲಾ ಗೋಜಲುಗಳು `ಈ ಗಂಟನ್ನು ಪುನಃ ಕನ್ನಡಿಯ ಒಳಗೇ ಸೇರಿಸುವುದು ಹೇಗೆ?’ ಎಂದು ನನ್ನನ್ನೇ ಪ್ರಶ್ನಿಸುತ್ತಿವೆ! ಬಿಡಿಸಲಾಗದ, ಬಯಲಾಗದ, ಕರಗದ, ಕುಗ್ಗದ...ಯಾವುದೇ ಗಂಟುಗಳಿದ್ದರೂ ಅವು ಕನ್ನಡಿಯೊಳಗೇ ಪ್ರವೇಶಿಸಿ `ಕನ್ನಡಿಯೊಳಗಿನ ಗಂಟು’ಆಗೇ ಉಳಿದುಬಿಡಲಿ. ಅದರ ಸಹವಾಸವೇ ಬೇಡ. ಎಂದರೆ `ಪಲಾಯನವಾದ’ವೆನ್ನುತ್ತೀರಾ?
( ಇದು ಅಕ್ಟೋಬರ್ ೦೨, ೨೦೧೧ರ ‘ಕರ್ಮವೀರ’ ಸಾಪ್ತಾಹಿಕದಲ್ಲಿ ಪ್ರಕಟವಾಗಿದೆ.)

Wednesday, April 8, 2015

ಮತ್ತೊ೦ದು ಹಿ೦ದಿನ ಬರಹ : ಲಸನ್ ಮಂದಹಾಸ.....

                                            ಲಸನ್ ಮಂದಹಾಸ.....
       
                                 `............ಮಂದಹಾಸ ಪ್ರಭಾ ವಕ್ರ ತುಂಡ
                                  ಚಲತ್ ಚಂಚಲ...............................’
          ನಿದ್ದೆಯ ಮಂಪರಿನಲ್ಲೇ ದಿನದ ಪ್ರಾರಂಭಕ್ಕಾಗಿ ಮನಸ್ಸನ್ನು ಅಣಿಗೊಳಿಸಿಕೊಳ್ಳುವ ವೇಳೆಯಲ್ಲಿ ಆಕಾಶವಾಣಿಯಿಂದ ತೇಲಿಬರುತ್ತಿದ್ದ ಈ ಸಾಲುಗಳು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿದ್ದವು. ಬೆಳಗಾದದ್ದನ್ನು ಸಾರುತ್ತಿದ್ದುದೇ ಅಮ್ಮ ಪ್ರತಿದಿನ ತಪ್ಪದಂತೆ ಹಾಕುತ್ತಿದ್ದ ಆಕಾಶವಾಣಿಯ ಗೀತಾರಾಧನಾ ಕಾರ್ಯಕ್ರಮ. ಅಮ್ಮ ವೇಳೆ ತಿಳಿಯಲು ಗಡಿಯಾರ ನೋಡುತ್ತಿದ್ದುದೇ ಅಪರೂಪ.  `ಆಗಲೇ ಚಿಂತನ ಬರ್‍ತಿದೆ ಇನ್ನೂ ಎಲ್ಲರಿಗೂ ಕಾಫಿ ಆಗಿಲ್ಲ’, `ವಾರ್ತೆ ಬರೋ ಹೊತ್ತಿಗಾದರೂ ಹಾಲು ಕರೆದಿರಬೇಕು’,, ಎಂದು ಸ್ವಗತ ಸಂಭಾಷಣೆಗಳಲ್ಲಿ ಕಾರ್ಯಪ್ರವೃತ್ತರಾಗುತ್ತಿದ್ದರು. ಈ ಶಾರದಾ ಭುಜಂಗ ಸ್ತೋತ್ರದಲ್ಲಿ `ಪಿ.ಬಿ’(ಅಮ್ಮ ತನ್ನ ಮೆಚ್ಚಿನ ಗಾಯಕರನ್ನು `ಪಿ.ಬಿ’., `ಎಸ್.ಪಿ’, ಎಂದೇ ಹ್ರಸ್ವವಾಗಿ ಕರೆಯುತ್ತಿದ್ದುದು ನಮಗೂ ರೂಢಿಯಾಗಿತ್ತು.) `ಪ್ರಭಾಎಂದು ಉಚ್ಛರಿಸುತ್ತಿದ್ದ ಘನ ಘಂಭೀರ ಧನಿಗೆ ನಾನು ಬಹಳವಾಗಿ ಮನಸೋತಿದ್ದೆ! ಇದೇ ಗುಂಗಿನಲ್ಲಿ ಬೆಳೆದ ನಾನು ಮುಂದೆ ಇಂತಹದೇ ಕರೆಯನ್ನು ನನ್ನ ಪತಿಯಿಂದ ನಿರೀಕ್ಷಿಸಿದ್ದು ನನಗೆ ಕಿರಿಕಿರಿಯೇ ಆಗುವಂತಾಯ್ತು. ಅವರಿಗೆ ಈ ರೀತಿ ಸಂಭೋದನಾ ಚತುರತೆಯೇ ಸಿದ್ಧಿಸಿರಲಿಲ್ಲ. ಅವರ `ಮೆಗಾಕುಟುಂಬದಲ್ಲಿ ಎಲ್ಲರೂ ಈ ಎಲ್ಲಾ ಚಾತುರ್ಯವನ್ನೂ ತಮ್ಮ ಹಿರಿಯಣ್ಣನಿಗೇ ಮೀಸಲಿಟ್ಟಂತಿದ್ದರು. ಮೊದಲ ಸಾರಿ ಅವರ ಮನೆಗೆ ಹೋದಾಗ ಪೂಜೆಗೆ ಕುಳಿತಿದ್ದ `ಹಿರಿಯಣ್ಣನಿಮಿಷಕ್ಕೊಮ್ಮೆ `ಲಲಿತಾ..., ಲಲಿತಾ...ಎಂದು ಕೂಗುವುದನ್ನು ಕೇಳಿ ನಮ್ಮ ಸಂಬಂಧಿಯೊಬ್ಬರು `ಇದೇನು ಲಲಿತಾ ಸಹಸ್ರನಾಮ ಮಾಡುತ್ತಿದ್ದಾರೆಯೇ?’ ಎಂದು ಕೇಳಿದ್ದರು!
           ಮೊದಲ ಭಾರಿಗೆ ಇವರೊಡನೆ ಹೊಟೆಲ್‌ಗೆ ಹೋದದ್ದನ್ನು ಮರೆಯುವಂತೆಯೇ ಇಲ್ಲ. ಕುಳಿತ ತಕ್ಷಣವೇ ಇವರು `ಮಾಣಿಪ್ರವರ ಒಪ್ಪಿಸುವುದನ್ನೂ ಕಾಯದೇ ಅಥವಾ ಮುಖ್ಯವಾಗಿ ನನ್ನನ್ನೂ ಕೇಳದೇ ಮಸಾಲೆ ದೋಸೆಗೆ ಆರ್ಡರ್ ಮಾಡಿದಾಗ ಇವರು ಪರ(ಪರಸ್ತ್ರೀ)ಇಂಗಿತ ಪ್ರಜ್ಞರಂತೆಯೇ ಕಂಡಿದ್ದರು. ತಟ್ಟೆಗಳಲ್ಲಿ ಹಾಯಾಗಿ ಪವಡಿಸಿದ ದೋಸೆಯುಕ್ತ ಪ್ಲೇಟ್‌ಗಳು ಟೇಬಲ್ ಮೇಲೆ ಹಾಜರಾದ ತಕ್ಷಣವೇ ಗರಿಗರಿ ದೋಸೆಯ ಅಂತರಂಗವನ್ನು ಬಗೆದ (ಹಿರಣ್ಯಕಷ್ಯಪನ ಉದರವನ್ನು ಸೀಳಿದ ಸಾಕ್ಷಾತ್  ನರಸಿಂಹಾವತಾರವೇ ಮೂರ್ತಿವೆತ್ತಂತೆ!) ಇವರು ಹೇಳದೇ ಕೇಳದೇ ಎದ್ದು ಹೊರನಡೆದೇ ಬಿಟ್ಟರು. ಇನ್ನೇನು ಬರಬಹುದು ಎಂದು ಮುರಿದ ದೋಸೆಯ ತುಂಡನ್ನು ಕೈಯಲ್ಲಿ ಹಿಡಿದಿದ್ದ ನಾನು `ಕೈಯೊಳಗೇತಕೆ ಬಾಯೊಳಗಿದ್ದರೆ ಆಗದೆ ಮರಿಕಪಿಯೊಂದಾಗ `ಎಂದ ಮನದ ಮಾತನ್ನು ಪುಷ್ಠೀಕರಿಸಿ ಮೆಲ್ಲ ಮೆಲ್ಲನೆ ಮೆಲ್ಲುತ್ತಾ ಹಿಂತಿರುಗಿ ನೋಡಿದಾಗ ಕೌಂಟರ್‌ನಲ್ಲಿ ಹಣ ನೀಡಿ ಹೊರನಡೆಯುತ್ತಿದ್ದ ಇವರನ್ನು ಕಂಡು ರಸಭಂಗವಾದಂತೆ ತಿನ್ನುವುದನ್ನು ಅಷ್ಟಕ್ಕೇ ಬಿಟ್ಟು ಒಲ್ಲದ ಮನಸ್ಸಿನಿಂದಲೇ ಹೊರ ಬಂದಿದ್ದೆ. ನಂತರವೇ ತಿಳಿದದ್ದು ಆ ದೋಸೆಗೆ ಬಳಿದಿದ್ದ ಕೆಂಪು ಚಟ್ನಿಗೆ ಬೆಳ್ಳುಳ್ಳಿ ಹಾಕಿದ್ದರು ಎಂದು.
            ಈರುಳ್ಳಿಗೇ ವಾರದಲ್ಲಿ ಮೂರುದಿನ ನಿಷಿದ್ಧವಿದ್ದ ನಮ್ಮ ಮನೆಯಲ್ಲಿ ಅಡುಗೆಯ ಮನೆಯ ಸಾಮ್ರಾಜ್ಞಿ ಅಮ್ಮ ಬೆಳ್ಳುಳ್ಳಿಯನ್ನು ಬಳಸುತ್ತಲೇ ಇರಲಿಲ್ಲ. ಆದರೂ ಆ ವಿಶಿಷ್ಟ ಘಾಟು ವಾಸನಾಯುಕ್ತ ತೀವ್ರ ರುಚಿಯ ಬಗ್ಗೆ ನಮಗೆ ಏನೋ ವಿಚಿತ್ರ ಮೋಹ. ಅಟ್ಟಲು ಗದ್ದೆ ಸಮಯದಲ್ಲಿ ಆಳುಮಕ್ಕಳಿಗೆ ಮಾಡುತ್ತಿದ್ದ `ಮೆಣಸು ಬೆಳ್ಳುಳ್ಳಿ’ ಕಾರವನ್ನು ನಾವೂ ಕಣ್ಣು ಮೂಗಲ್ಲೆಲ್ಲಾ ನೀರು ಸುರಿಸಿಕೊಂಡು `ಹಾ...ಹಾ...’ ಎನ್ನುತ್ತಾ ತಿನ್ನುತ್ತಿದ್ದೆವು! ಇವರಿಗೆ ಬೆಳ್ಳುಳ್ಳಿಯ ಬಗ್ಗೆ ಇರುವ ಈ ಬಗೆಯ ಆದರವನ್ನು ನೋಡಿ ನನಗಂತೂ ತೀವ್ರ ನಿರಾಸೆಯೇ ಆಯ್ತು. ನನ್ನ ಆಸೆಯ ಈ ಘಾಟನ್ನು ಆಘ್ರಾಣಿಸಿದವರಂತೆ `ಈಗ ಸಾಮಾನ್ಯವಾಗಿ ಎಲ್ಲಾ ಹೊಟೆಲ್‌ಗಳಲ್ಲೂ ಬೆಳ್ಳುಳ್ಳಿಯನ್ನ ಉಪಯೋಗಿಸ್ತಾರೆ...’ಎಂದುಕೊಂಡು ಅನಿವಾರ್ಯವೆನಿಸಿದರೂ ಹೊಟೆಲ್‌ಗೆ ಹೋಗುವುದನ್ನೇ ನಿಲ್ಲಿಸಿ ಉಳಿತಾಯ ಯೋಜನೆ ಪ್ರಾರಂಭಿಸಿಬಿಟ್ಟರು. ನಮ್ಮ ಮನೆಗಂತೂ ಯಾವ ಕಾರಣಕ್ಕೂ ಬೆಳ್ಳುಳ್ಳಿಗೆ ಪ್ರವೇಶವೇ ಇಲ್ಲ ಎನ್ನುವುದಂತೂ ಖಚಿತವಾಗಿಹೋಯ್ತು. `ಬಾಣಂತಿ’ಊಟವಾಗಿ ಬರುತ್ತಿದ್ದ ಬೆಳ್ಳುಳ್ಳಿಗೂ ಬಹಿಷ್ಕಾರವಾಯ್ತು. ಹೀಗೆ ಒಂದು ದಿವ್ಯೌಷಧ, ರಾಮಬಾಣವೆನಿಸಿದ ಬೆಳ್ಳುಳ್ಳಿಯ ನಿಷಿದ್ಧ ಪ್ರದೇಶವಾಗಿ ನಮ್ಮ ಮನೆ ರೂಪುಗೊಂಡಿತು.
             ಇವರು ಇಷ್ಟೆಲ್ಲಾ ವರ್ಜಿಸಿದ್ದರೂ ಒಮ್ಮೆಯಂತೂ ಈ ದಿವ್ಯೌಷಧಿಯೇ ಇವರ ಕೆಳಗಿಳಿದ ರಕ್ತದೊತ್ತಡವನ್ನು ಮೇಲೇರಿಸುವುದರಲ್ಲಿ ಸಹಕಾರಿಯಾಗಿದ್ದನ್ನು ನೆನಪಿಸಿಕೊಳ್ಳಲೇ ಬೇಕು. ಇವರಿಗೆ ಒಮ್ಮೆ ಅನಾರೋಗ್ಯವಾಗಿ ತೀವ್ರನಿಗಾಘಟಕದಲ್ಲಿ ಇಟ್ಟಿದ್ದಾಗ ಇದ್ದಕ್ಕಿದ್ದಂತೆಯೇ ರಕ್ತದೊತ್ತಡ ಇಳಿಯಲಾರಂಭಿಸಿತು. ಡಾಕ್ಟರ್‌ಗಳೆಲ್ಲಾ ತರಾತುರಿಯಲ್ಲಿ ಚಿಕಿತ್ಸೆ ನೀಡಿ ಸಹಜಸ್ಥಿತಿಗೆ ತರುವ ಸನ್ನಾಹದಲ್ಲಿದ್ದರು. ಅಷ್ಟರಲ್ಲಿ ಪೇಷೆಂಟ್ ಊಟ ಬಂದಿದ್ದರಿಂದ ಕ್ರಮೇಣ ಸರಿಹೋಗುವುದಾಗಿ ತಿಳಿಸಿ ಊಟ ಕೊಡಲು ಹೇಳಿದರು. ತಿಳಿಸಾರು ಅನ್ನ ಕಲೆಸಿ ಸ್ಪೂನ್‌ನಲ್ಲಿ ಇನ್ನೇನು ಬಾಯಿಗಿಡಬೇಕು ಆ ಕ್ಷಣವೇ ಬಿ.ಪಿ. ನಾರ್‍ಮಲ್ ಬಿಟ್ಟು ಮೇಲೇರಲಾರಂಭಿಸಿತು! ಇವರಂತೂ ಬಾಯಿ ಬಿಡದೇ ಎಳೇ ಮಗುವಿನಂತೆ ಹಠ ಹಿಡಿದು ಊಟ ಬೇಡವೆಂದು ಸನ್ನೆ ಮಾಡಲಾರಂಭಿಸಿದರು. ಮೊದಲೇ ಗಾಭರಿಗೊಂಡಿದ್ದ ನಾನು ಆಗ ಗಮನಿಸಿದೆ ಸಾರಿಗೆ ಬೆಳ್ಳುಳ್ಳಿ ಹಾಕಿದ್ದಾರೆಂಬುದನ್ನು! ಆದರೂ ..., ಹೃದಯಕ್ಕೆ ಒಳ್ಳೆಯದು ಎಂದು ಯಾವ ಡಯಟೀಷಿಯನ್ ಏನೇ ಹೇಳಿದರೂ ಇವರ ವ್ರತಭಂಗ ಮಾಡಲಾಗಲಿಲ್ಲ!
              ಕುಟುಂಬದವರೆಲ್ಲಾ ಒಮ್ಮೆ ಶಿರಡಿಯಾತ್ರೆ ಕೈಗೊಂಡರು. ಈ ಮೊದಲೇ ಎಂದರೆ ಮದುವೆಯಾದ ಹೊಸತರಲ್ಲೇ ದಕ್ಷಿಣ ಕರ್ನಾಟಕದ ಪ್ರಮುಖ ಯಾತ್ರಾಸ್ಥಳಗಳಿಗೆಲ್ಲಾ ಇವರ ಹರಕೆಗಳನ್ನು ತೀರಿಸಲು(!) ಹೋಗಿದ್ದ ಹಾಗೂ ಹೋಗುತ್ತಿದ್ದ ನನಗೆ ಯಾತ್ರಗಳೇನೂ ಹೊಸತಾಗಿರಲಿಲ್ಲ! ಆಗಲೇ ನಿಂತರೂ ಕುಳಿತರೂ ಭಗವನ್ನಾಮ ಸ್ಮರಣೆಯನ್ನು ಜಪಿಸಲಾರಂಭಿಸಿದ್ದ (ಸಧ್ಯ ನನ್ನ ಹೆಸರನ್ನು ಕರೆಯದೇ ಇದ್ದುದು ಒಳ್ಳೆಯದೇ ಆಯ್ತು. ಇಲ್ಲದಿದ್ದರೆ `ಸ್ಥಾನಪಲ್ಲಟ’ವಾದ ನೋವನ್ನು ಅನುಭವಿಸುವಂತಾಗುತ್ತಿತ್ತು!)ಇವರೂ ಇಷ್ಟ ದೈವದರ್ಶನದ ಆನಂದ ಸ್ಥಿತಿಯಲ್ಲಿ ಪ್ರಸಾದ ಸೇವನೆಗೆ ಕುಳಿತಾಗ ಊಟದ ಎಲ್ಲಾ ಐಟಂಗಳಲ್ಲಿಯೂ ಬೆಳ್ಳುಳ್ಳಿಯೇ ರಾರಾಜಿಸುತ್ತಿದ್ದುದನ್ನು ನೋಡಿ (ಆಘ್ರಾಣಿಸಿ) ಎದ್ದು ಹೊರ ನಡೆದೇ ಬಿಟ್ಟರು. ಅದುವರೆಗೂ `ಬೆಳ್ಳುಳಿ’ ಎಂದರೇನೆಂದೇ ಅರಿಯದ ಮಕ್ಕಳೂ ಆ ವಿಶೇಷ ಕಟುವಾಸನೆಗೆ ಬೆದರಿ ಅಪ್ಪನ ಹಿಂದೇ ಓಟ ಕಿತ್ತರು (ಬಸವನ ಹಿಂದೆ ಬಾಲದಂತೆ!) ನಾನೂ ಸಿಕ್ಕ ಒಂದು ವಿಶೇಷಾವಕಾಶ ವಂಚಿತಳಾಗಿ ಅವರನ್ನು ಹಿಂಬಾಲಿಸಿದೆ. ಹಸಿದ ಹೊಟ್ಟೆಯನ್ನು ತುಂಬಲು ಪ್ರತಿ ಹೊಟೆಲ್ ಮುಂದೂ ನಿಂತು `ಅಮ್ಮಾ..., ತಾಯೀ...,’ ಎನ್ನುವಂತೆ , `ಅಡುಗೆಗೆ ಬೆಳ್ಳುಳ್ಳಿ ಹಾಕಿದೀರಾ...?’ಎಂದು ಹರುಕು ಮುರುಕು ಹಿಂದಿಯಲ್ಲಿ ವಿಚಾರಿಸುತ್ತಾ ಅಲೆದಲೆದು ಕಡೆಗೆ `ಆಂದ್ರ ಸ್ಪೆಷಲ್’ ಎಂಬ ಹೊಟೆಲ್‌ನಲ್ಲಿ ಒಂದಕ್ಕೆರಡರಷ್ಟು ಬೆಲೆತೆತ್ತು ಅಲ್ಲಿದ್ದಷ್ಟು ದಿನವೂ ಊಟ ಮಾಡಿದ್ದಾಯ್ತು!
                ನಾವು ಸೈಟನ್ನು ತೆಗೆದುಕೊಂಡು ಬಹಳದಿನ ( ಏಕೆ ವರ್ಷಗಳೇ)ಆ ಕಡೆಗೆ ತಲೆ ಹಾಕದೇ ಕಟ್ಟಿದ ಮನೆಯನ್ನೇ ಕೊಳ್ಳುವ ಯೋಜನೆಯಲ್ಲಿ ಸಾಕಷ್ಟು ಅಲೆದಲೆದು ಯಾವುದೂ ಸರಿಬರದಿದ್ದಾಗ (ನಮ್ಮ ಆರ್ಥಿಕ ಮಿತಿಗೆ ಹೊಂದದಿದ್ದಾಗ!) ಸ್ವತ: ಕಟ್ಟುವ ತೀರ್ಮಾನಕ್ಕೆ ಬಂದು ಸೈಟನ್ನು ನೋಡಲು ಹೋದೆವು. ದೂರದಿಂದಲೇ ನಮ್ಮ ಸೈಟಿನಲ್ಲಿ ಧವಳಾಚ್ಛಾದಿತ ರಾಶಿಯನ್ನು ನೋಡಿ ಏನಿರಬಹುದೆಂಬ ಕುತೂಹಲದಲ್ಲಿ ಹತ್ತಿರ ಸಾರುವ ಮೊದಲೇ ನಮ್ಮ ಬಳಿಗೇ ತನ್ನ ಇರವನ್ನು ವಾಸನಾ ರೂಪದಲ್ಲಿ ಸಾರಿಬಿಟ್ಟಿತು! ಆಗಲೇ ಗೊತ್ತಾಗಿದ್ದು ಅಲ್ಲಿ ಸುತ್ತೆಲ್ಲಾ ತಲೆ ಎತ್ತಿರುವ ಗೃಹಗಳ ನಿವಾಸಿಗಳು ಬೆಳ್ಳುಳ್ಳಿ ವ್ಯಾಪಾರ ಮಾಡುವವರು ಎಂದು. ಕ್ಲೀನ್ ಮಾಡಬೇಕಾದ ಬೆಳ್ಳುಳ್ಳಿಯನ್ನು ರಾಶಿರಾಶಿಯಾಗಿ ಖಾಲಿ ಸೈಟ್‌ಗಳಲ್ಲಿ ಸುರಿದಿರುತ್ತಿದ್ದರು. ಈಗಾಗಲೇ ಮನೆ ಹುಡುಕಿ ಹುಡುಕಿ ದಣಿದಿದ್ದ ಇವರು ಈ `ಲಸನ್’ ವಾಸನಾಸ್ತ್ರದಿಂದ ಹಿಮ್ಮೆಟ್ಟದೇ ಮನೆ ಕಟ್ಟಲು ನಿರ್ಧರಿಸೇಬಿಟ್ಟರು. ಗೃಹ ಪ್ರವೇಶವಾದನಂತರ ಸುತ್ತಿನ ವಾಸನಾ ಜಗತ್ತಿನ ಬಲದಿಂದ `ಬೆಳ್ಳು’ಗೆ ಮನೆಯ ಗುಪ್ತ ಸ್ಥಳವೊಂದರಲ್ಲಿ ವಾಸ ಪರವಾನಗಿ ನೀಡಿದೆ. ಇವರು ಪರ ಊರುಗಳಿಗೆ ಪ್ರಯಾಣ ಬೆಳೆಸಿದಾಗ ಅಡುಗೆಯ ವಿಶೇಷ `ಬೆಳ್ಳು’ವಿನಿಂದೊಡಗೂಡಿರುವುದು ಮಕ್ಕಳಿಗೆ ಸರ್ವೇ ಸಾಮಾನ್ಯವಾಯಿತು. ಅಂತೂ ಈ ಮೂಲಕ ಮಕ್ಕಳನ್ನು ಒಂದು ವಿಶಿಷ್ಟ ಆರೋಗ್ಯಕರ ರುಚಿಗೆ ಪರಿಚಯಿಸಿದ ಹಾಗೂ ಯಾವುದೇ ಶಾಕಾಹಾರೀ ಹೊಟೆಲ್‌ಗಳಲ್ಲಿಯೂ ಊಟಮಾಡಬಹುದಾದ ಸಾಮರ್ಥ್ಯವನ್ನು ದಯಪಾಲಿಸಿದ ಭಾಗ್ಯ ನನ್ನದಾಯಿತು!
                   ಬೆಳ್ಳುಳ್ಳಿ ಮತ್ತು ಇವರ ನಡುವಿನ ವಿಕರ್ಷಣಾ ಸಂಬಂಧ ಎಷ್ಟೊಂದು ಗಾಢವಾಗಿದೆಯೆಂದರೆ (ಆಕರ್ಷಣೆಗಿಂತ ವಿಕರ್ಷಣೆಯೇ ಅತ್ಯಂತ ಪ್ರಭಲವಾದ ಶಕ್ತಿ ಎಂದು ನಂಬಲು ನನಗೆ ಇದಕ್ಕಿಂತಾ ಪುರಾವೆ ಬೇಕು ಎನಿಸುವುದಿಲ್ಲ!) ಇವರ ಬಗ್ಗೆ ಹೇಳದೇ ಬೆಳ್ಳುಳ್ಳಿಯ ಬಗ್ಗೆ ಹೇಳಲು ಸಾಧ್ಯವಾಗುತ್ತಲೇ ಇಲ್ಲ. ಆದರೂ ಒಮ್ಮೆ ಬೆಳ್ಳುಳ್ಳಿಯ ಅರ್ಥ ಲೋಕವನ್ನು ಪ್ರವೇಶಿಸಿದಾಗ ಎಂದರೆ ನಿಘಂಟುಗಳನ್ನು ತೆರೆದಾಗ ನನಗೆ ತೀವ್ರ ಆಘಾತವೇ ಕಾದಿತ್ತು! ಎಲ್ಲಾ ಮನುಜ ನಿರ್ಮಿತ ವರ್ಗಗಳಲ್ಲೂ ಭೇದ ಭಾವವಿರುವಂತೆ ಸಹೋದರ ರೂಪಿಗಳಾದ ಈರುಳ್ಳಿ ಬೆಳ್ಳುಳ್ಳಿಗಳಲ್ಲಿಯೂ ತಾರತಮ್ಯ ಎದ್ದು ಕಾಣುವಂತಿತ್ತು. `ಈರುಳ್ಳಿ’ ಎಂದರೆ ಉಳ್ಳೇಗೆಡ್ಡೆ, ನೀರುಳ್ಳೆ ಎಂದಿದ್ದರೆ `ಬೆಳ್ಳುಳ್ಳಿ’ ಎನ್ನುವ ಪದವೇ ಕಾಣಲಿಲ್ಲ! ಇರಲಿ ಎಂದು ಆಂಗ್ಲ ಪದ GARLIC ( ಗಾರ್ಲಿಕ್) ಅನ್ನು ನೋಡಿದೆ. `A plant with bulbous strong smelling root—ಬೆಳ್ಳುಳ್ಳಿಎಂದಿತ್ತು. ಅಯ್ಯೋ ನಮ್ಮ ಬೆಳ್ಳುಳ್ಳಿಯ ಸ್ಥತಿಯೇ ಎಂದುಕೊಂಡು ಛಲ ಬಿಡದಂತೆ ಹಿಂದಿಯಲ್ಲಿ `ಲಸನ್ಎನ್ನುತ್ತಾರೆ ಎಂದು ತಿಳಿದು ಆ ಪದವನ್ನೇನಾದರೂ ಕೊಟ್ಟಿದ್ದಾರೆಯೋ ನೋಡೋಣ ನಮ್ಮ ಸರ್ವಭಾಷಾ ಸಮನ್ವಯ ಭಾವಾಪ್ರಿಯ ಪಂಡಿತರು ಎನ್ನುವ ಕುತೂಹಲದಿಂದ ಹಾಳೆಗಳನ್ನು ಮಗುಚಿದೆ. ಓಹೋ ಸಿಕ್ಕೇ ಬಿಟ್ಟಿತು! ಲಸನ್ ಅಲ್ಲ `ಲಶುನಎಂದರೆ ಬೆಳ್ಳುಳ್ಳಿ ಎಂದು! ನಮ್ಮ ಹಿಂದೂ ಸಂಪ್ರದಾಯದ ಮದುವೆಯಲ್ಲಿ ಭೂಮದ ಊಟದಲ್ಲಿ ವರನು ವಧುವಿನ ( ವಧು ಬಲಭಾಗದಲ್ಲಿ ಕೂರುವ ಅನಾನುಕೂಲದಿಂದಲೋ ಏನೋ!) ಕತ್ತನ್ನು ಬಳಸಿ ಬಾಯಿಗೆ ತುತ್ತನ್ನು ಇಟ್ಟಂತೆ! ಬಿಳಿಯ ಬಣ್ಣದಿಂದಲೇ ಈ ಹೆಸರು ಬಂದಿದೆ ಎಂದು ತರ್ಕಿಸಿ `ಬೆಳ್’ (ಬೆಳ್ಳುಳ್ಳಮ್ಮ ಬೆಳ್ಳುಳ್ಳಿ ಬೆಳ್ಳಿ ಬೆಳಕಿನ ಬೆಳ್ಳುಳ್ಳಿ..!) ಎನ್ನುವ ಪದದ ಅರ್ಥ ಶೋಧನೆಗೆ ಹೊರಟೆ. `ಬೆಳ್ಎಂದರೆ ಬಿಳುಪಾದ , ದಡ್ಡತನ(!)ದಿಂದ ಕೂಡಿದ ಎನ್ನುವುದರ ಜೊತೆಗೇ `ಉಳ್ಳಿಸೇರಿಸಿದಾಗ ಅಡುಗೆಗೆ ಉಪಯೋಗಿಸುವ ಕಟು ವಾಸನೆ ಮತ್ತು ರುಚಿಯುಳ್ಳ ಒಂದು ಜಾತಿಯ ಗೆಡ್ಡೆ ಎಂದಿತ್ತು. ಅದರ ರುಚಿ, ವಾಸನೆಯೇ ಮುಖ್ಯವಾಯಿತೇ ಹೊರತು ಅದರ ವೈದ್ಯಕೀಯ ಪ್ರಾಮುಖ್ಯತೆಯ ಬಗ್ಗೆ ಸೂಚಿಸಿಲ್ಲವಲ್ಲಾ ಎನ್ನುವ ತವಕದಲ್ಲೇ `ಉಳ್ಳಿಅರ್ಥಾನ್ವೇಷಿಯಾದೆ. ನೀರುಳ್ಳಿ, ಉರುಳುಗೆಡ್ಡೆ ಎಂದು ಒಂದು ಕಡೆ ಇದ್ದರೆ ಈರುಳ್ಳಿ, ಬೆಳ್ಳುಳ್ಳಿ ಎಂದು ಮತ್ತೊಂದು ಕಡೆ ಸಿಕ್ಕಿತು. `ಉಳ್ಳಿಎಂದರೆ ಹುರುಳಿಕಾಳು ಎಂದು ಮಾತ್ರ ತಿಳಿದಿದ್ದೆ. `ಉಳ್ಳಿ ತಿಂದಮ್ಮನಿಗೆ ಉಳುಕಿತು. ಬೆಳ್ಳುಳ್ಳಿ ತಿಂದಮ್ಮನಿಗೆ ನಾರ್‍ತು.’  ಎನ್ನುವುದು ನಮ್ಮ ಕಡೆಯ ಸಾಮಾನ್ಯ ಮಾತಾಗಿತ್ತು.     
                  ನನ್ನ ದೃಷ್ಟಿಯಲ್ಲಿ ಇವರ ಮತ್ತು ಬೆಳ್ಳುಳ್ಳಿಯ ನಡುವೆ ಹೇಗೆ ಅವಿನಾಭಾವ ಸಂಬಂಧ ಏರ್ಪಟ್ಟಿದೆಯೋ ಅದೇ ರೀತಿ ಆಂತರಿಕವಾಗಿ ಬೆಳ್ಳುಳ್ಳಿ ನನ್ನೊಳಗಿನ ವಿಕಟಕವಿಯನ್ನು ಬಡಿದೆಬ್ಬಿಸಿ ಮೊಗದ ಮೇಲಿನ ನಗೆಯಾಗಿ ಮಾರ್ಪಟ್ಟು ನನ್ನಲ್ಲಿ ಲಸನ್ ಮಂದಹಾಸವಾಗಿ (`ಲಸನ್ ಮಂದಹಾಸ ಪ್ರಭಾ ವಕ್ರ ತುಂಡ...!)ಮೂಡಿ ಮೆರೆಯುತ್ತಿದೆ! ಈಗ ಅಕ್ಕಪಕ್ಕದಲ್ಲಿ ಮನೆಗಳಾಗಿ ಅವರ ಮನೆಗಳಲ್ಲಿ ಅಟ್ಟುವ ಅಡುಗೆಯ ಪರಿಮಳ ನಮ್ಮ ಮನೆಯನ್ನೂ ತುಂಬುವುದರಿಂದ ಆ ಲಶುನ ವಾಸನಾ ತೆರೆಯ ಮರೆಯಲ್ಲಿಯೇ ನಮ್ಮ ಮನೆಯಲ್ಲಿಯೂ ಬೆಳ್ಳುಳ್ಳಿಯನ್ನು ಅಡುಗೆಯ ಒಂದು ಭಾಗವನ್ನಾಗಿಸುವ ಪ್ರಯತ್ನವನ್ನು ಮುಂದುವರಿಸೇ ಇದ್ದೇನೆ. ಈ ಸೂಕ್ಷ್ಮವನ್ನು ಮನಗಂಡ ಇವರು ಹುರಿಯುವ, ಅರೆಯುವ,...ಒಗ್ಗರಣೆಹಾಕುವಂತಹ ಪ್ರಮುಖ ಕಾರ್ಯಭಾರಗಳನ್ನು ತಮ್ಮದಾಗಿಸಿಕೊಂಡು ನನಗೆ ಅಡುಗೆಮನೆಗೆ ಪ್ರವೇಶ ನಿಶಿದ್ಧ ಮಾಡುವ ಸನ್ನಾಹದಲ್ಲಿದ್ದಾರೆ! ಆದರೂ..... ಫಲಕಾರಿಯಾಗುವ ಆಶಾಭಾವನೆಯಲ್ಲಿ ಕೋಲಿನ ತುದಿಗೆ ಕಟ್ಟಿದ ಹುಲ್ಲಿನ ಆಸೆಗೆ ಮುನ್ನುಗ್ಗುತ್ತಿರುವ ಕುದುರೆಯಂತೆ ಬದುಕ ಬಂಡಿಯನ್ನು ಓಡಿಸುತ್ತಿದ್ದೇನೆ!       



Monday, April 6, 2015

ಮತ್ತೆ ಮರಳಿದೆ ಮಲ್ಲಿಗೆಯ ಕಾಲ:

ಮತ್ತೆ ಮರಳಿದೆ ಮಲ್ಲಿಗೆಯ ಕಾಲ. ಮಲ್ಲಿಗೆಯ ಬಳ್ಳಿಗಳು ತಮ್ಮ ಶಕ್ತ್ಯಾನುಸಾರ ಹೂತಳೆದಿವೆ. ನಾವೇನು ಕಮ್ಮಿ ಎನ್ನುವ೦ತೆ `ತು೦ಬೆ'ಗಳೂ ಹೂ ತು೦ಬಿ ನಿ೦ತಿವೆ








:) 

Saturday, April 4, 2015

ನಗೆಯ `ಬಗೆ’ದಂತೆ

ಎ೦ದೋ ಬರೆದ ಹಾಸ್ಯ ಪ್ರಬಂಧಗಳು ಇಂದಿನ (ಏಪ್ರಿಲ್!) ಓದಿಗೆ:

ನಗೆಯ `ಬಗೆ’ದಂತೆ


ನಾಮಕರಣ, ಚೌಲ, ಉಪನಯನ, ಮದುವೆ... ಈ ರೀತಿಯ ಯಾವುದೇ ಸಮಾರಂಭವಾದರೂ ಅವಲಕ್ಕಿ ಪುರಿಉಂಡೆ ಮಾಡುವುದು ಅವಿಭಕ್ತ ಕುಟುಂಬವಾದ ನಮ್ಮ ಮನೆಯ ಪದ್ಧತಿಯಾಗಿತ್ತು. ಉಂಡೆ ಕಟ್ಟುತ್ತಿದ್ದಂತೆಯೇ ಅವುಗಳನ್ನು ವಂದರಿಗೆ ಹಾಕಿ ವೃತ್ತಾಕಾರವಾಗಿ ತಿರುಗಿಸುತ್ತಾ ಗಟ್ಟಿಗೊಳಿಸುವ ಕಾರ್ಯ ಮಕ್ಕಳ ಪಾಲಿನದಾಗಿರುತ್ತಿತ್ತು. ನಾನು, ನನ್ನಕ್ಕನ ನಡುವೆ ಇದಕ್ಕಾಗಿಯೇ ಸ್ಪರ್ಧೆ ಏರ್ಪಟ್ಟರೂ ಸ್ವಾಭಾವಿಕವಾಗಿಯೇ ಗೆಲುವು ಅಕ್ಕನ ಪಾಲೇ ಆಗುತ್ತಿತ್ತು. ಆದರೂ ನಾನೂ ಅವಳೊಡನೆ ಸಹಕರಿಸುತ್ತಾ, ಇಬ್ಬರೂ ಕುಲುಕುಲು ನಗುತ್ತಾ ವಂದರಿ ತಿರುಗಿಸುವ ಸಂಭ್ರಮದಲ್ಲಿ ಕೆಲವು ಉಂಡೆಗಳು `ನಕ್ಕು’ಬಿಡುತ್ತಿದ್ದವು! ಅಂದರೆ ಕಳಲಿಕೊಂಡು ತಮ್ಮ ಗೋಲಾಕೃತಿಗೆ ತಿಲಾಂಜಲಿಯಿಡುತ್ತಿದ್ದವು. ನಮ್ಮ ಈ ಸಡಗರವನ್ನು ಗಮನಿಸುತ್ತಿದ್ದ ನಮ್ಮಜ್ಜಿ `ಹುಡುಗುಮುಂಡೇವು ಇವು ಹೀಗೆ ನಗ್ತಾ ಇದ್ರೆ ಉಂಡೆ ನಗದೇ ಇರುತ್ಯೆ, ಗಾಂಭೀರ್ಯ ಯಾವಾಗ ಕಲಿತು ಕೊಳ್ಳುತ್ವೋ ಇವು?’ ಎಂದು ನಮ್ಮನ್ನು ಗಂಭೀರಗೊಳಿಸುವ ಪ್ರಯತ್ನ ಮಾಡುತ್ತಿದ್ದರು. ಆದರೂ ಯಾವುದೇ ಸಂದರ್ಭ ಸಿಕ್ಕರೂ ನಮ್ಮದೇ ಕಲ್ಪನಾಲೋಕದಲ್ಲಿ ವಿಹರಿಸುತ್ತಾ ನಗುವುದೇ ನಮ್ಮ ಸ್ವಭಾವವಾಗಿತ್ತು...ದಿನದಲ್ಲಿ ಅದೆಷ್ಟು ಭಾರಿ ನಗುತ್ತಾ ಇದ್ದೆವೋ...
ನಾಲ್ಕಾರು ಜನಗಳ ಮಧ್ಯೆ ಮೌನದ ಚಿಪ್ಪಿನೊಳಸೇರುತ್ತಿದ್ದ ನಾನು ಒಬ್ಬರೇ ಆತ್ಮೀಯರೊಡನಿದ್ದಾಗ ಮಾತ್ರ ಚೆನ್ನಾಗಿ ಹರಟುತ್ತಾ ಮನ:ಪೂರ್ವಕವಾಗಿ ನಕ್ಕುಬಿಡಬಲ್ಲವಳಾಗಿದ್ದೆ. ಅಪರಿಚಿತ ವಾತಾವರಣದಲ್ಲಿ ನನ್ನ ಜೀವನವನ್ನು ಮುಂದುವರಿಸಬೇಕಾದ ಸ್ಥಿತಿ ಬಂದಾಗ ಸ್ವಲ್ಪ ಗೊಂದಲವೇ ಆಯ್ತು. ನನ್ನವರಂತೂ ಮುಕ್ತವಾಗಿ ನಗಲೇ ಬಾರದವರಾಗಿದ್ದು ನಗುವವರನ್ನೂ ಸಹಿಸದವರೆಂಬುದು ಒಮ್ಮೆ ಸಾಬೀತಾಗಿಹೋಯ್ತು. ಪ್ರಾರಂಭದಲ್ಲಿ ಯಾವುದೋ ಕಾರಣಕ್ಕೆ ನನಗೊಮ್ಮೆ ತಡೆಯಲಾಗದ ನಗು ಬಂದಾಗ ಅದೇ ಸಂದರ್ಭದ ಏಕೈಕ ಪ್ರತ್ಯಕ್ಷದರ್ಶಿಯಾದ ಅವರು ನಗಲಾಗದೇ ಮೊಳಕೈಯಿಂದ ನನ್ನನ್ನು ತಿವಿದಾಗ ಇವರಲ್ಲಿ `ಹಾಸ್ಯರಸ’ಕ್ಕಿಂತ `ಕೋಪರಸ’ವೇ ಹೆಚ್ಚಾಗಿದೆ ಎಂದು ತಿಳಿದು `ನೋವುರಸ’ಕ್ಕೆ ಎಡೆ ಕೊಡದಂತೆ ಜಾಗರೂಕಳಾಗಲಾರಂಭಿಸಿದೆ! (ಅಂದರೆ ಅವರಿಗೆ ನಗುವೇ ಬರುವುದಿಲ್ಲ ಎಂದರ್ಥವಲ್ಲ. ಕ್ಯಾಮೆರಾ ಮುಂದೆ ನಿಂತಾಗ ಎಂಥಾ ಸುಂದರ ನಗೆಯನ್ನು ಮೂಡಿಸಿಬಿಡುತ್ತಾರೆಂದರೆ...ಅದಕ್ಕೆ ಸಾಕ್ಷಿಯಾಗಿ ನಾವು ಮದುವೆಯಾದ ನಂತರ ಸಾಮಾನ್ಯವಾಗಿ ಎಲ್ಲಾ ದಂಪತಿಗಳಂತೆ ತೆಗೆಸಿದ ಒಂದು ಫೋಟೊ ಗೋಡೆಯ ಮೇಲೆ ಕಾಲು ಶತಕವನ್ನು ಸಮೀಪಿಸುವ ತವಕದಲ್ಲಿ ಚಿರಸ್ಥಾಯಿಯಾಗಿದೆ! ನನ್ನದಂತೂ `ಗಂಟುಮೋರೆ’ ಎಂದು ಅದನ್ನು ನೋಡಿದವರೆಲ್ಲಾ ತೀರ್ಮಾನಕ್ಕೆ ಬಂದಿದ್ದಾರೆ.) ಆದರೂ ಅಲ್ಲಿ ದೊರೆಯುವ ವಿಶೇಷಾವಕಾಶಗಳನ್ನು ಬಿಡದಂತೆ ಸದುಪಯೋಗಗೊಳಿಸಿಕೊಳ್ಳುತ್ತಿದ್ದೆ. ನನ್ನೊಡನೆ ಸಲಿಗೆಯಿಂದಿದ್ದ, ಸದಾ ತುಂಬಿದಂತಿದ್ದ ನಮ್ಮ ಮನೆಯಲ್ಲೇ ಆಟವಾಡಿಕೊಂಡಿರುತ್ತಿದ್ದ, ಪಕ್ಕದ ಮನೆಯ ಪುಟ್ಟ ಹುಡುಗಿ ಒಂದು ದಿನ ನಾನು ಉದ್ಯೋಗ ಮುಗಿಸಿ ಬರುವುದನ್ನೇ ಕಾದಿದ್ದಂತೆ, `ಆಂಟಿ, ನೀವು ನಾಲ್ಕು ಮನೆಗೆ ಕೇಳೋ ಹಾಗೆ ನಗ್ತೀರಾ?’ ಎಂಬ ಪ್ರಶ್ನೆಯನ್ನು ಎಸೆದುಬಿಟ್ಟಿತು! ಇದರ ಹಿನ್ನೆಲೆ ಏನಿರಬಹುದೆಂದು ತರ್ಕಿಸಿದ ನಾನು, `ನೀನು ಎಷ್ಟು ಮನೆಗೆ ಕೇಳುವಂತೆ ನಗ್ತೀಯ?’, `ನಿಮ್ಮಮ್ಮ ಎಷ್ಟು ಮನೆಗೆ ಕೇಳೋ ಹಾಗೆ ನಗ್ತಾರೆ?’... ಎಂದು ಕೇಳುತ್ತಾ ಸನ್ನಿವೇಶವನ್ನು ಹಗುರಗೊಳಿಸುವ ಪ್ರಯತ್ನ ನಡೆಸಿದ್ದೆ! (ಕಾತುರ ಕಿವಿಗಳಿಗೆ ನಿರಾಶೆಯನ್ನುಂಟುಮಾಡುತ್ತಾ...) ನಂತರ ಹಿರಿನಗೆಯನ್ನು ಕಿರಿದುಗೊಳಿಸಿ ಕಿರುನಗೆಯಾಗಿಸಿ ಮೊಗದ ಮೇಲೆ ಸ್ಥಾಯಿಗೊಳಿಸುವ ಪ್ರಯತ್ನ ನಡೆಸಲಾರಂಭಿಸಿದೆ.
ಪರಿಚಿತರು ಎದುರಾದಾಗ ಪರಸ್ಪರ ನಗೆಯ ವಿನಿಮಯ ಸ್ವಾಭಾವಿಕ. `ನಾನು ನಗಿಸಿದರೂ ಅವರು ನಗಲಿಲ್ಲ,’ ಎಂದು ಇಲ್ಲೊಬ್ಬರು ಹೇಳುತ್ತಿದ್ದರು. `ನಗಿಸೋದು’ ಎನ್ನುವುದರ ಪ್ರಯೋಗ ಬಹಳ ವಿಚಿತ್ರವೆನಿಸುತ್ತದೆ. ಚಕ್ಕನಗುಳಿ ಕೊಟ್ಟು ನಗಿಸುವುದೇನೋ ಎನ್ನುವಂತೆ `ಸೌಂಡ್’ ಆಗುತ್ತದೆ. ಆದರೆ ನ್ಯೂಟನ್ನನ ಮೂರನೇ ನಿಯಮವನ್ನು ಅನ್ವಯಿಸಿ ವೈಜ್ಞಾನಿಕವಾಗಿ ವಿಶ್ಲೇಷಿಸುವುದಾದರೆ ನಮ್ಮ ನಗೆ-`ಕ್ರಿಯೆ’ಯಾದರೆ ಅವರ ನಗೆ-`ಪ್ರತಿಕ್ರಿಯೆ’ಯಾಗುತ್ತದೆ. ಪ್ರತಿಕ್ರಿಯೆಯನ್ನು ನಿರೀಕ್ಷಿಸಿ ನಾವು ನಗುವುದರಿಂದ ಅದು `ನಗಿಸುವುದೇ’ ಆಗಿರುತ್ತದೆ! ಹೀಗೆ ಪರಧರ್ಮಪಾಲಕರಾಗಿ (ನಗಿಸುವುದು ಪರಧರ್ಮ-ಡಿ.ವಿ.ಜಿ.) ನಗಿಸಲು ಹೊರಟವರೆದುರೂ ನಗದ ಮಾನವ(!)ಜೀವಿಗಳಿಗೆ ಏನೆಂದು ಕರೆಯುವುದು? ಮೊದಮೊದಲು ನಗೆಗೆ ನಗೆಯೇ ಪ್ರತ್ಯುತ್ತರ ಎನ್ನುವಂತೆ ನಗುನಗುತ್ತಾ ವೃತ್ತಿ ಜೀವನ ಪ್ರಾರಂಭಿಸುವವರೂ `ನಗೆ’ಯನ್ನು `ಬಿಗು’ವಿನಿಂದ ಸ್ಥಾನಪಲ್ಲಟಗೊಳಿಸಿ `ಬಿಗಿಮೊಗ’ದವರಾಗಿ ದಿನಗಳನ್ನು ನೂಕಲಾರಂಭಿಸಿಬಿಡುತ್ತಾರ.
ಬಿಗಿದ ಮೊಗದಲಿ
ನಗೆಯ ಅಂತ್ಯ ಸಂಸ್ಕಾರ
ಅಂದವನೇ ಕಬಳಿಸುವ
ಅಧಿಕಾರ!

ಅಧಿಕಾರದ ಪ್ರಮುಖ ಗುಣವೇ `ಬಿಗಿದ ಮೊಗ’ ಎಂಬ ಪೂರ್ವಾಗ್ರಹ ಪೀಡಿತ ಭಾವನೆಯಲ್ಲಿದ್ದೆ. ಕ್ರಮೇಣ ಅಧಿಕಾರದ(ಒಂದು ಭಾಗ ನಾನೂ ಆದ ನಂತರ) ಅವಳಿರೂಪಿಯಾದ ಅಹಂಕಾರವೇ ಇದರ ಮೂಲ ಎನ್ನುವ ಅಭಿಪ್ರಾಯಕ್ಕೆ ಬಂದಿದ್ದೇನೆ!
`ಮುಗುಳುನಗೆ’ ಮೊಗವನಲಂಕರಿಸಲು ಎದುರಾಗುವವರು ನಮ್ಮ ನಗೆಗೆ ಪ್ರತಿನಗೆ ಬೀರುವುದು ಅತ್ಯವಶ್ಯಕ ಎನ್ನುವ ಸಿದ್ಧಾಂತದಲ್ಲಿ ಪರಿಚಿತರು ಎದುರಾದಾಗ ಹಾರ್ದಿಕವಾಗಿ ನಗೆಬೀರಿ ಎಷ್ಟೋ ಭಾರಿ ಮುಖಭಂಗಿತಳಾಗಿ ಅವರನ್ನು `ನಗಿಸಲಾರದ’ ನನ್ನ ಅಸಹಾಯಕ ಸ್ಥಿತಿಗಾಗಿ ಮರುಗಿದ್ದೇನೆ. ಇದೇ ಪುನರಾವರ್ತನೆಯಾಗಲಾರಂಭಿಸಿದಾಗ ನನ್ನ ಮೊಗದ ಮೇಲೆ ನಗೆಯನ್ನು ಚಿರಸ್ಥಾಯಿಯಾಗಿಸಲು ಬೇರೆಯವರನ್ನು ಏಕೆ ಆಶ್ರಯಿಸಬೇಕು` ನಮ್ಮನ್ನೇ ನೋಡಿ ನಾವೇಕೆ ಮುಗುಳ್ನಗಬಾರದು ಎನಿಸಿದಾಗ ಕನ್ನಡಿಯ ಮುಂದೆ ನಿಂತು `ಬಿಂಬೇಸ್ಮಿನ್ ಸನ್ನಿಧಿಂ ಕುರು’ಎನ್ನುವಂತೆ `ಪ್ರತಿಬಿಂಬನಗೆ’ಯ ಪ್ರಯತ್ನ ನಡೆಸಲು ಮೊದಲಿಟ್ಟೆ! ಇದಕ್ಕೆ ಪುಷ್ಟಿ ನೀಡುವಂತೆ `ನಗಬೇಕು ಎನಿಸದಿದ್ದರೂ ಕನ್ನಡಿಯನ್ನು ನೋಡಿಕೊಂಡು ಒಂದೆರಡು ನಿಮಿಷವಾದರೂ ನಗುವುದು ಒಳ್ಳೆಯದು,’ಎಂದು ನನ್ನ ಪುಸ್ತಕ ಜ್ಞಾನವೂ ಬೆನ್ನು ತಟ್ಟಿತು. ಇದರಿಂದ ಮನೆಯಲ್ಲಿ ಎಲ್ಲಿ ಹೋದರೂ ಕನ್ನಡಿಗೆ ಎದುರಾಗುವಂತೆ ಅಡುಗೆಮನೆ, ಬಚ್ಚಲುಮನೆ, ರೂಂಗಳು, ವರಾಂಡಾ, ಹಾಲ್...(ಶೌಚಾಲಯವೊಂದನ್ನು ಹೊರತುಪಡಿಸಿ!) ಎಲ್ಲಾ ಕಡೆಯೂ ಆಯಾ ಸ್ಥಳಗಳ ಯೋಗ್ಯತೆಗನುಗುಣವಾಗಿ ಕನ್ನಡಿಗಳು ಆಕ್ರಮಿಸಿಕೊಂಡವು. ಆದರೂ ಇದ್ದ ಪ್ರಮುಖ ತೊಂದರೆಯೆಂದರೆ ಹೊರಗೆ ಹೋಗಬೇಕಾದ ಸಂದರ್ಭಗಳಲ್ಲಿ ಸದಾ ನಗುತ್ತಿರಬೇಕೆಂದರೆ ಕೈಲೊಂದು ಕನ್ನಡಿಯನ್ನು ಹಿಡಿದಿರಲೇ ಬೇಕು. ಎಂದರೆ `ದರ್ಪಣ ಸುಂದರಿ’ ನಾನಾಗಬೇಕು! ಇದರಿಂದ ನನ್ನ ನೋಡಿ ಬೇರೆಯವರು ನಗುವಂತಾಗುವ ಪರಿಸ್ಥತಿ ಎದುರಾಗಬಹುದೆಂದು ಹೆದರಿ...ಛೆ ಛೆ ಸ್ವತ: ತಾವೇ `ನಗಲಾಗದ’ವರ ಬಗ್ಗೆ ಯೋಚಿಸುವುದೂ ಬೇಡ, ಸದಾ ಕನ್ನಡಿಯ ಮುಂದೆ ಹೋಗುವುದೂ ಸರಿಯಲ್ಲ, ಕನ್ನಡಿ ಹಿಡಿದೇ ಇರಲೂ ಸಾಧ್ಯವಿಲ್ಲ. ನನ್ನ ಅಂತರಂಗದ ಕನ್ನಡಿಯಲ್ಲಿಯೇ ನನ್ನ ಪ್ರತಿಬಿಂಬವನ್ನು ಕಾಣುತ್ತಾ ಹಸನ್ಮುಖಿಯಾಗಿರುವಂತಿದ್ದರೆ! ಅಂದರೆ ನಮ್ಮ ಒಳಗಿನೊಡನೆ ಸಂಪರ್ಕವಿರಿಸಿಕೊಂಡು ನಾವೇ ನಗುವುದು ತಾನೆ? ತಮಗೆ ತಾವೇ ನಗುವವರು `ಪ್ರೇಮಿಗಳು’ ಇಲ್ಲವೇ `ಹುಚ್ಚರು’(ಕ್ಷಮಿಸಿ, ಈ ಪದ ಬಹಳ ಅನಾಗರಿಕವಾಗಿ ಕಂಡುಬಂದರೂ ರೂಢಿಗತ...). ಪ್ರೇಮಿಗಳು ತಮ್ಮದೇ ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ, ಸವಿ ಕ್ಷಣಗಳನ್ನು ಮೆಲುಕುಹಾಕುತ್ತಾ, ನಗೆಯಮೋಡಿಗೆ ಸಿಲುಕಿದ್ದರೆ, ಅವರ ಭ್ರಾತೃವರ್ಗದವರು ತಮ್ಮೊಡನೆ ತಾವೇ ಸಲ್ಲಾಪಿಸುತ್ತಾ ಹಿರಿ,ಕಿರು, ಬಿರುನಗೆಗಳನ್ನಲ್ಲಾ ಬೀರುತ್ತಿರುತ್ತಾರೆ. ಮೊದಲ ವರ್ಗಕ್ಕೆ ಸೇರಲು ಸಾಮಾಜಿಕ ಒಪ್ಪಿಗೆ ದೊರೆಯದೇ ಇರುವುದರಿಂದ ಎರಡನೇ ವರ್ಗಕ್ಕೆ ಸೇರಿಸುವುದೇ ನಿಶ್ಚಿತವೆನಿಸಿ ಆ ಯೋಜನೆಯನ್ನೇ ಕೈಬಿಟ್ಟೆ!
ನಾವು ಚಿಕ್ಕವರಾಗಿದ್ದಾಗ ಓದಿದ ಒಂದು ಕಥೆ ಇನ್ನೂ ನನ್ನ ನೆನಪಿನಲ್ಲಿದೆ. ಒಂದೂರಿನಲ್ಲಿ ಒಬ್ಬ ರಾಜ ಮತ್ತು ರಾಣಿಯರಿರ್‍ತಾರೆ. ಅವರಿಗೆ ಮಕ್ಕಳೇ ಇರುವುದಿಲ್ಲ. ಬಹಳ ವರ್ಷಗಳ ನಂತರ ಒಂದು ಹೆಣ್ಣು ಮಗು ಹುಟ್ಟುತ್ತೆ. ಪೂರ್ಣ ಚಂದ್ರಮನಂತೆ ಬೆಳೆಯಲಾರಂಭಿಸಿದ(!) ಅದು- ಆ ರಾಜಕುಮಾರಿ, ಒಮ್ಮೆಯೂ ನಕ್ಕಿದ್ದೇ ಇಲ್ಲ! ಅವಳ ತಂದೆ, ತಾಯಿ ಅಂದರೆ ರಾಜ-ರಾಣಿಯರಿಗೆ ಈ ಬಗ್ಗೆ ಬಹಳ ಚಿಂತೆಯಾಗಿ ಕಡೆಗೆ ಯಾರು ಅವಳನ್ನು ನಗಿಸುತ್ತಾರೋ ಅವರಿಗೇ ಅವಳನ್ನು ಮದುವೆ ಮಾಡಿ ಕೊಡುವುದಾಗಿ ಸಾರಿಸುತ್ತಾರೆ. ಅನೇಕ ರಾಜಕುಮಾರರು ಬಂದು ಏನೆಲ್ಲಾ ಸಾಹಸ ಮಾಡಿದರೂ ರಾಜಕುಮಾರಿ ನಗುವುದೇ ಇಲ್ಲ! ರಾಜ-ರಾಣಿಯರು ಬಹಳ ನಿರಾಶರಾಗಿ ಕೈ ಚೆಲ್ಲಿ ಕುಳಿತಿದ್ದಾಗ ಒಂದು ದಿನ ರಾ.ಕು. ಬಿದ್ದುಬಿದ್ದು ನಗುತ್ತಿರುತ್ತಾಳೆ. ಏಕೆಂದು ಎಲ್ಲರೂ ಓಡಿಹೋಗಿ ನೋಡಿದಾಗ ಒಬ್ಬ ಹುಡುಗ ಕತ್ತೆ ಹೊತ್ತುಕೊಂಡು ಹೋಗುತ್ತಿರುತ್ತಾನೆ! ಅವನೇ ನಮ್ಮ `ಪೆದ್ದಗುಂಡ’! ಕತ್ತೆ ಹೊರುವ ಮೊದಲು ಅವನು ಮಾಡಿದ ಪೆದ್ದ ಕೆಲಸಗಳ ಒಂದು ಸರಣಿಯೇ ಇದೆ. ಇಲ್ಲಿ ಎಂದೂ ನಗದ ರಾಜಕುಮಾರಿ ನಕ್ಕಿದ್ದು ಮುಖ್ಯವಾಗಿರುವುದರಿಂದ ನಗುವಂತಾದಾಗ ಅವನೇನು ಮಾಡ್ತಿದ್ದ ಎನ್ನುವುದಷ್ಟನ್ನೇ ತಿಳಿಸಿದ್ದೇನೆ. ಇನ್ನು ಅವನೊಡನೆ ರಾಜಕುಮಾರಿಯ ಮದುವೆಯಾಯ್ತು. ಅವನೇ ಮುಂದೆ ರಾಜನಾದ ಎನ್ನುವುದೆಲ್ಲಾ ಅಪ್ರಸ್ತುತ.
ಹಿಂದೆ ರಾಜರ ಜೊತೆ ವಿದೂಷಕರು ಇದ್ದು ಅವರನ್ನು ಸಂತೋಷವಾಗಿಡಲು ಪ್ರಯತ್ನಿಸುತ್ತಿದ್ದರು. ಅಕ್ಬರ್-ಬೀರ್‌ಬಲ್, ಕೃಷ್ಣದೇವರಾಯ-ತೆನಾಲಿರಾಮಕೃಷ್ಣರ ಕಥೆಗಳಲ್ಲಿ ವಿದ್ವತ್ ಪೂರ್ಣವಾದ ಹಾಸ್ಯ ತುಂಬಿತುಳುಕಿದೆ. ಹಳೆಯ ಚಲನಚಿತ್ರಗಳಲ್ಲೂ ನಾಯಕನ ಆಪ್ತಮಿತ್ರನಾಗಿ ಒಂದು ಹಾಸ್ಯಪಾತ್ರವಿರುತ್ತಿತ್ತು. ಅದಂತೂ ತನ್ನ ಪೆದ್ದುತನದಿಂದ ನಗೆಯುಕ್ಕಿಸುತ್ತಿತ್ತು. ಈಗ ನಮ್ಮಲ್ಲೇ ನಾವು ಈ ಎರಡೂ ಪಾತ್ರಗಳನ್ನು ಮೇಳೈಸಿಕೊಂಡರೆ ಹೇಗೆ?
ಹಾಸ್ಯಗೋಷ್ಟಿಗಳಿಗೆ ನನ್ನನ್ನು ಆಹ್ವಾನಿಸಿ ನಗಿಸುವ ಜವಾಬ್ಧಾರಿ ನೀಡಿದಾಗ ನಾನಂತೂ ಅದು ಮುಗಿಯುವವರೆಗೂ `ತಾಕತ್ತಿದ್ದರೆ ನಗಿಸಿ ನೋಡೋಣ’ ಎನ್ನುವಂತೆ ಬಿಗಿಮೊಗದಲಿ ಕುಳಿತುಕೊಳ್ಳುವ ಪ್ರೇಕ್ಷಕರನ್ನು `ಹೇಗೆ ನಗಿಸುವುದು?’ಎನ್ನುವ ಗೊಂದಲದಲ್ಲಿ ಸ್ವತ: ನಗುವುದನ್ನೇ ಮರೆತುಬಿಟ್ಟಿದ್ದೇನೆ. ನಮ್ಮಲ್ಲಿ `ಪೆದ್ದಗುಂಡ’ನ್ನ ಯಾ ವಿದೂಷಕನನ್ನು ಆವಾಹನೆ ಮಾಡಿಕೊಂಡರೆ ಮಾತ್ರ ನಗಿಸುವ ಕಾರ್ಯ ಸುಸೂತ್ರವಾಗಬಹುದೇನೋ! ಅಥವಾ ನಮ್ಮಲ್ಲಿ ಸುಪ್ತವಾಗಿ ಅಡಗಿರುವ `ಪೆದ್ದು’ ವಿದೂಷಕತನವನ್ನು ಗುರುತಿಸಿಯೇ ಈ ಆಹ್ವಾನವೋ... ಸಧ್ಯದಲ್ಲಂತೂ ಈ ಗೊಂದಲವಿಲ್ಲ!
ನಾವು ಕಾಲೇಜಿನಲ್ಲಿದ್ದಾಗ ಬಹಳ ಹಾಸ್ಯಪ್ರಸಂಗಗಳನ್ನು ಹೇಳುತ್ತಿದ್ದ ಉಪನ್ಯಾಸಕರೊಬ್ಬರು,`ಈಗ ಜೋಕ್ ಹೇಳ್ತೀನಿ’ ಎಂದ ತಕ್ಷಣ ಎಲ್ಲರೂ ಬಿದ್ದು ಬಿದ್ದು ನಕ್ಕುಬಿಡುತ್ತಿದ್ದರು. ಅವರು ಜೋಕ್ ಹೇಳಿದ ನಂತರ ಪಿನ್‌ಡ್ರಾಪ್ ಸೈಲೆನ್ಸ್! ಆ ಜೋಕ್‌ಅನ್ನು ಮತ್ತೆ ಯಾವುದಾದರೂ ಸಂದರ್ಭದಲ್ಲಿ ಉಪಯೋಗಿಸಿಕೊಂಡು ನಗುತ್ತಿದ್ದ ಅವರ (ನಾನು `ನೆಗ್ಲಿಜಿಬಲ್' ಆಗಿದ್ದರಿಂದ ಲೆಕ್ಕಕ್ಕಿಲ್ಲದ ನನ್ನನ್ನು ಬಿಟ್ಟು!) ಸಂಯಮ ಅಭಿನಂದನೀಯ!
ಮಕ್ಕಳಿಗೆ ಕಾರಣವೇ ಇಲ್ಲದೇ ಸಣ್ಣ ಪುಟ್ಟದ್ದಕ್ಕೆಲ್ಲಾ ಕಿಲಕಿಲನೆ ನಗುತ್ತಲೇ ಇರುತ್ತವೆ. ಮಕ್ಕಳ ಮೊಗದಲ್ಲಿ ಮೂಡುವ ನಿಷ್ಕಳಂಕವಾದ ಆ ನಗೆಯನ್ನು ನೋಡುವುದೇ ಒಂದು ಸುಂದರವಾದ ಅನುಭವ. ಅದು ಅವುಗಳ ಅಂತರಂಗದಿಂದ ಹೊರಹೊಮ್ಮುವ ಆನಂದದ ಊಟೆಯೇ ಆಗಿರುತ್ತದೆ. ಬೆಳೆದಂತೆ ಎಲ್ಲವೂ ತೋರಿಕೆಯಾಗಲಾರಂಭಿಸುತ್ತದೆ.
ನಾಲ್ಕುವರ್ಷದ ಮಗು ಒಂದು ದಿನಕ್ಕೆ ಸುಮಾರು ಮುನ್ನೂರು ಭಾರಿ ನಗುತ್ತದೆಯಂತೆ. ಆದರೆ ಸಾಮಾನ್ಯ ವಯಸ್ಕರು ಹದಿನೈದು ಭಾರಿ ನಕ್ಕರೆ ಹೆಚ್ಚು ಎಂದು ಸ್ವತ: ನಗಲಾರದ (ಅವರೂ ವಯಸ್ಕರೇ ಎಂದು ನಂಬಿ!) ಸಂಶೋಧಕರಿಂದ ತಿಳಿದು ಬಂದಿದೆ. `ನಾವು ಸಂತೋಷವಾಗಿರುವುದರಿಂದ ನಗುವುದಲ್ಲ. ನಗುವುದರಿಂದ ಸಂತೋಷವಾಗಿರುತ್ತೇವೆ.’ಎಂದು ವಿಲಿಯಂ ಜೇಮ್ಸ್ ಹೇಳಿದ್ದಾರೆ. `ನಗೆಕ್ಲಬ್’ಗಳು ಎಲ್ಲರನ್ನೂ ಸೇರಿಸಿ ನಗಿಸುವ ವ್ಯಾಯಾಮ ಮಾಡುವುದು ಒಂದು ರೀತಿ ಒಳ್ಳೆಯದೇ ಎನಿಸುತ್ತದೆ. ಅಲ್ಲಿ ಬಲವಂತದಿಂದ ನಗು ಪ್ರಾರಂಭವಾದರೂ ನಗುತ್ತಾ ಸಾಗಿದಂತೆ `ನಗೆ’ಯೇ ಸ್ವಭಾವವಾಗಲೂ ಬಹುದು! ಜೋರಾಗಿ ನಗಲು ಜೋಡಿಯ ಅಗತ್ಯವಿರುತ್ತದೆ. ಗುಂಪಿನಲ್ಲಿ ನಗುವುದೆಂದರೆ ನಗೆಯೇ ಸಾಂಕ್ರಾಮಿಕವಾಗಿ ಅಲೆಅಲೆಯಾಗಿ ನಗಲಾರೆನೆಂಬುವವರನ್ನೂ ಬಿಡಲಾರೆನೆಂದು ನಗಿಸುವಷ್ಟು ಪ್ರಚೋದಕವಾಗಿಬಿಡುತ್ತದೆ. (ನಗೆಯ ಕೇಳುತ ನಗುವುದತಿಶಯದ ಧರ್ಮ-ಡಿ.ವಿ.ಜಿ.) ನಾನು ಇತ್ತೀಚೆಗೆ ಓದಿದ ಒಂದು ಪುಸ್ತಕದಲ್ಲಿ `ಹಿಮಾಲಯದಲ್ಲಿರುವ ಶಿವಾನಾ ಸಂತರು ಉಷ:ಕಾಲದಲ್ಲಿ ಹರಿಯುವ `ಸಂತಸದರಸ’ವನ್ನು ಆಸ್ವಾದಿಸಲು ಮುಂಜಾವವೇ ಎದ್ದು ಕೆಲವು ನಿಮಿಷಗಳು ಯಾವುದೇ ಪ್ರಚೋದನೆಯಿಲ್ಲದಿದ್ದರೂ ನಗುತ್ತಾರೆ’, ಎಂದಿತ್ತು. `ವಿರಸ’ವೇ ಅಧಿಕವಾಗಿರುವ ನಮ್ಮ ಉಷ್ಣಪ್ರದೇಶಗಳಲ್ಲಿ `ಸಂತಸರಸ’ ಆವಿಯಾಗೇ ಹೋಗಿಬಿಟ್ಟಿರಬಹುದು!
`ನಗುವುದು ಮಾನವನಿಗೆ ಮಾತ್ರ ಸಿದ್ಧಿಸಿರುವ ವರದಾನ’ ಎಂದು ಮೊದಲಿನಿಂದಲೂ ನಂಬಿದ್ದರು. ಆದರೂ ಅನಾದಿಕಾಲದಿಂದಲೂ ನಮ್ಮ ಉಪಮಾಪ್ರಿಯರಂತೂ `ನರಿನಗೆ ಅವನದ್ದು’, `ಮಂಗನ ಹಾಗೆ ಹಲ್ಲು ಕಿರಿಯಬೇಡ’, (ಈಗ ಎಲ್ಲೆಡೆಯೂ ಸುಂದರವಾದ ದಂತಪಂಕ್ತಿ ಪ್ರದರ್ಶಿಸುವ ತೋರಿಕೆಯ ನಗೆಮೊಗಗಳ ಹಿಂದಿನ ದಂತವೈದ್ಯರ ಶ್ರಮ ವರ್ಣನಾತೀತ!) ಎನ್ನುವುದರ ಮೂಲಕ ಕೆಲವು ಪ್ರಾಣಿಗಳಲ್ಲೂ ನಗೆಯನ್ನು ಗುರುತಿಸಿದ್ದಾರೆ. ಚಿಂಪಾಂಜಿ ನಗುವುದನ್ನು ವಿಜ್ಞಾನಿಗಳೇ ಒಪ್ಪಿಕೊಂಡಿದ್ದಾರೆ. ಯಾರು ಏನೇ ಹೇಳಲಿ ನಮ್ಮ `ಜಿಮ್ಮಿ’ಯಂತೂ ಆಗಾಗ ನಗುತ್ತಲೇ ಇರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಸಂಪೂರ್ಣ ಶಕ್ತಿಯೊಡನೆ ಬಾವನ್ನು ಅಲ್ಲಾಡಿಸುತ್ತಾ ನಗುನಗುತ್ತಾ ಕುಣಿಯುವ ನಡಿಗೆಯೊಡನೆ ಕಿರುನಗೆ ಚೆಲ್ಲುತ್ತಾ ಬೆಳಗಿನ ವಸೂಲಿಗೆ ಒಳನುಗ್ಗಿಬಿಡುತ್ತದೆ. ರಾತ್ರಿ ಇವರು ಕೆಲಸ ಮುಗಿಸಿ ಮನೆಗೆ ಬರುವ ಸೂಚನೆ ದೊರೆಯುವುದು `ಜಿಮ್ಮಿ’ ಜೋರಾಗಿ ಕೂಗುತ್ತಾ ನೆಗೆದಾಡುತ್ತಾ...ಹಿರಿನಗೆ ನಕ್ಕಾಗಲೇ! ಕೈಲಿ ಬಿಸ್ಕತ್ತು ಹಿಡಿದರಂತೂ ನೆಗೆಯುತ್ತಾ, ಬಾಲವಲ್ಲಾಡಿಸುತ್ತಾ ಕುಣಿಯುವಾಗ ಅದರ ಮುಖ ಮುಗುಳುನಗೆಯಿಂದ ಅರಳಿರುತ್ತದೆ! ಅದರಿಂದಲೇ ಇರಬಹುದು ಈಗಾಗಲೇ ದಶಾಯುವಾಗಿದ್ದರೂ ಚಿರಯುವತಿಯಾಗಿರುವುದು.
ನಗುವುದರಿಂದ ಅಬಾಲವೃದ್ಧರೂ ಕನಸುವ `ಯೌವನ’ವನ್ನು ಕಾಪಾಡಿಕೊಳ್ಳಬಹುದಂತೆ.

ಕನಸುತದೆ ಬಾಲ್ಯ
ಯೌವನವ ಪಡೆಯಲು,
ಶ್ರಮಿಸುತದೆ ವೃದ್ಧಾಪ್ಯ
ಯೌವನವ ಹಿಡಿದಿಡಲು!

ಅಂಥಾ ಯೌವನವನ್ನು ನಗೆಯಿಂದಲೇ ಪಡೆಯಲೂಬಹುದು, ಹಿಡಿದಿಡಲೂಬಹುದು ಅಂದಮೇಲೆ ನಗುನಗುತ್ತಾ ಇರಬಹುದಲ್ಲವೆ?

Thursday, April 2, 2015

`ಜೇಬಾಯಣ'

(`ಎಪ್ರಿಲ್ ' ಪ್ರಯುಕ್ತ ನನ್ನ ಲಲಿತ ಪ್ರಬಂಧ `ಜೇಬಾಯಣ' ತಮ್ಮ ಓದಿಗೆ :)
`ಕಲ್ಯಾಣ ಸೇವೆ ಜೇಬಿನ ಬುಡದಲಿ
ಪುಟ್ಟಾಣಿಯ ಪುರಿ ಮೇಲೊಂದಿಷ್ಟು
ಗೋಲಿ ಬಳಪ ಮತ್ತೊಂದಿಷ್ಟು
ಬಂದ, ಬಂದ, ಸಣ್ತಮ್ಮಣ್ಣ'
ಈ ಪದ್ಯವನ್ನು (ಆಗ `ಕವನ’ ಎಂದರೆ ಏನೆಂದೇ ನನಗೆ ತಿಳಿದಿರಲಿಲ್ಲ!) ಓದುವಾಗಲೆಲ್ಲಾ ನನಗೆ ಬಹಳ ದು:ಖವಾಗುತಿತ್ತು. ಏಕೆಂದರೆ ನನ್ನ ಕತ್ತಿನಿಂದ ಕಾಲಿನವರೆಗೂ ಇದ್ದ ಉದ್ದ ಲಂಗ, ರವಿಕೆಗಳಲ್ಲಿ ಒಂದಾದರೂ ಜೇಬಿರಲಿಲ್ಲ. ಅದೇ ಮಂಡಿಯ ಮೇಲಿದ್ದ ನನ್ನ ತಮ್ಮನ ನಿಕ್ಕರ್ನಲ್ಲಿ ಮೂರು, ನಾಲ್ಕು ಜೇಬುಗಳಿರುತ್ತಿದ್ದವು. ಅವು ಯಾವಾಗಲೂ ಹಬ್ಬಗಳಿಗನುಗುಣವಾಗಿ ವಿಶೇಷ ಖಾದ್ಯಗಳಿಂದ ತುಂಬಿ ತುಳುಕುತ್ತಾ ಅವನ ಜಿಹ್ವೆಯನ್ನು ಸದಾ ಕ್ರಿಯಾಶೀಲವಾಗಿರಿಸಿ, ತತ್ ಪರಿಣಾಮವಾಗಿ ಅವನನ್ನು ಅಪರಿಮಿತ ಶಕ್ತಿಶಾಲಿಯನ್ನಾಗಿಸಿದ್ದವು (ಪಕ್ಷಿಗಳಂತೆ!). ಗೌರಿಹಬ್ಬದಲ್ಲಿ ಅವನ ಜೇಬುಗಳು ಚಕ್ಕ್ಕುಲಿ, ಕೋಡುಬಳೆ, ಮುಚ್ಚೋರೆ, ತೇಂಕೊಳಲು.....ಗಳಿಂದ ತುಂಬಿದ್ದು, ರಾತ್ರಿ ಯಾವಾಗಲಾದರೂ ಎಚ್ಚರವಾದಾಗಲೂ ಅವನ ಕಡೆಯಿಂದ `ಕಟಂ, ಕುಟುಂ’ ಶಬ್ದ ಕೇಳಿಬರುವಂತೆ ಮಾಡುತ್ತಿದ್ದವು. ಈಗಿನಂತೆ ಡಿಟರ್ಜಂಟ್ಗಳಿಲ್ಲದ ಆ ಕಾಲದಲ್ಲಿ ಅಮ್ಮ ಎಣ್ಣೆಯಿಂದ ಮೊಣಕಾದ ಅವನ ನಿಕ್ಕರ್ ಜೇಬುಗಳನ್ನು ಶುಚಿಗೊಳಿಸಲಾಗದೇ ಹೆಣಗಾಡುತ್ತಿದ್ದರು! ಸಂಕ್ರಾಂತಿ ಬಂತೆಂದರೆ ಅವನ ಜೇಬುಗಳಲ್ಲಿ ಎಳ್ಳು (ಪಂಚಕಜ್ಜಾಯ!) ತುಂಬಿರುತ್ತಿತ್ತು. ಕಳೆದ ಸಂಕ್ರಾಂತಿಯಲ್ಲಿ ಅವನು ತಿಂದ ಎಳ್ಳಿನ ಪ್ರಭಾವದಿಂದ ಕಣ್ಣೆಲ್ಲಾ ಹಳದಿಯಾಗಿ ಜಾಂಡೀಸ್ ಬಂದಿರಬಹುದೆಂದು ಚಿಕಿತ್ಸೆ ಮಾಡಿಸಿದರೂ ಫಲಕಾರಿಯಾಗದೇ ಅಜ್ಜಿ `ಹಲವು ದೇವರಿಗೆ ಹರಕೆ’ ಹೊತ್ತದ್ದೂ ಆಗಿ ಅವನಿಗೆ `ಮುಡಿ’ಯನ್ನೂ ಬಿಟ್ಟಿದ್ದರು! ಅವನು ಒದಗಿಸುತ್ತಿದ್ದ `ಗೊಬ್ಬರ’ದಿಂದಲೋ ಏನೋ ಅವನ ಕೂದಲು ಹುಟ್ಟಿದಾಗಿನಿಂದಲೂ ಕತ್ತರಿ ಸೋಂಕದೇ ಬೆಳೆದಿದ್ದ ನಮ್ಮ ಕೂದಲಿಗಿಂತಲೂ ಉದ್ದವಾಗಿ ಬೆಳೆದಿತ್ತು! ಎರಡು ಜಡೆ ಹೆಣೆದು ಮೇಲೆ ಕಟ್ಟುತ್ತಿದ್ದ ಈ ಬದನೇಕಾಯಿ ಜಡೆಗಳೇ ಅವನು ಶಾಲೆಯಲ್ಲಿ ನಡೆಸುತ್ತಿದ್ದ ಎಲ್ಲಾ `ಫೈಟಿಂಗ್’ಗಳಿಗೂ ಮೂಲವಾಗುತ್ತಿದ್ದವು! `ಜೇಬು’ಗಳಿಂದ ಉಂಟಾದ ವಿಶೇಷ ಶಕ್ತಿ ಸಂಚಯನದಿಂದ ಅವನ ಎದುರಾಳಿಗಳು ಹಣ್ಣುಗಾಯಿ ನೀರುಗಾಯಾಗಿ ಅವನು ವಾರಗಟ್ಟಲೇ ಶಾಲೆಗೆ ಚಕ್ಕರ್ ಹೊಡೆಯುವಂತಾಗುತ್ತಿತ್ತು. ಹೀಗೆ ಚಿಕ್ಕವನಾಗಿದ್ದಾಗ ಜೇಬಿನ ಸಂಪೂರ್ಣ ಪ್ರಯೋಜನ ಪಡೆದ ನನ್ನ ತಮ್ಮ ಈಗಲೂ ಜೇಬನ್ನು ತುಂಬಿಸುವತ್ತಲೇ ವಿಶೇಷ ಗಮನ ಹರಿಸಿ ನನಗೆ ಆರ್ಥಿಕವಾಗಿ ಆಧಾರಸ್ಥಂಭವಾಗೇ ಇದ್ದಾನೆ!
`ಜೇಬು’ ಎನ್ನುವುದೇ `ಆರ್ಥಿಕತೆ’ಯ (`ಹಣ’ದ) ಸಂಕೇತವಾಗಿದೆ. ‘ಜೇಬು ಖಾಲಿಯಾಗಿದೆ’ ಅಂತ ಹೇಳೋದನ್ನ ನಾವು ಕೇಳ್ತಾನೇ ಇರ್ತೀವಲ್ಲ! ಸಾಮಾನ್ಯವಾಗಿ ನಮ್ಮ ಭಾರತೀಯ ಸಾಂಪ್ರದಾಯಿಕ ಉಡುಗೆಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಜೇಬಿನ ಅಸ್ಥಿತ್ವವೇ ಕಂಡುಬರುವುದಿಲ್ಲ. ಪುರುಷರು ಧರಿಸುತ್ತಿದ್ದ ಪಂಚೆ, ಶಲ್ಯಗಳಲ್ಲಾಗಲೀ, ಸ್ತ್ರೀಯರು ಧರಿಸುತ್ತಿದ್ದ, ಈಗಲೂ ಸಂಪ್ರದಾಯವನ್ನು ಉಳಿಸುವ ಹೊಣೆ ಹೊತ್ತು ಧರಿಸುತ್ತಲೇ ಇರುವ (ನನ್ನಂಥವರು!) ಸೀರೆಯಲ್ಲಾಗಲೀ ಜೇಬಿನ ಸುಳಿವೇ ಇಲ್ಲ. ಆ ಕಾಲಕ್ಕೆ ಹಣದ ಬಗ್ಗೆ ಅವರಿಗಿದ್ದ ನಿರ್ಲಿಪ್ತತೆಯನ್ನೋ ಅಥವಾ (ಅಪ್ರಾಮುಖ್ಯತೆಯನ್ನೋ) ಆ ಉಡುಗೆಗಳೇ ತೋರಿಸುತ್ತವೆ. ಕ್ರಮೇಣ ಕಾಲ ಬದಲಾದಂತೆ ಬರುತ್ತಿದ್ದ ಆರು ಕಾಸನ್ನೋ ,ಮೂರುಕಾಸನ್ನೋ ತಮ್ಮ ಸೊಂಟಕ್ಕೆ (ಪಂಚೆ ಕಟ್ಟಿಕೊಳ್ಳುತ್ತಿದ್ದ ಜಾಗ!) ಗಂಡಸರು ಸಿಕ್ಕಿಸಿಕೊಂಡರೆ, ಹೆಂಗಸರು ತಮ್ಮ ಬಾಳೆಕಾಯಿಗೆ (ಸೀರೆಯ ನೆರಿಗೆ ಸುರುಳಿಸುತ್ತಿ ಸಿಕ್ಕಿಸುತ್ತಿದ್ದ ರಚನೆ!) ಸಿಕ್ಕಿಸಿಕೊಳ್ಳುತ್ತಿದ್ದರು! ವಿದೇಶೀಯರು ನ ಮ್` ದೇಶವನ್ನು ತಮ್ಮ ಜೇಬು ತುಂಬಿಸಿಕೊಳ್ಳಲು ಆಕ್ರಮಿಸಿದಂತೆ, ಅವರ ಉಡುಗೆಗಳಲ್ಲಿ ಧಾರಾಳವಾಗಿದ್ದ ಜೇಬುಗಳೂ ಆಗಮಿಸಿದವು! ಆ ಜೇಬುಗಳ ಪ್ರಾಮುಖ್ಯತೆಯನ್ನು ಕ್ರಮೇಣ ಮನಗಂಡ ನಮ್ಮ ಭಾರತಮಾತೆಯ `ಗಂಡು’ ಸಂತಾನ ಆ ಉಡುಗೆಗಳನ್ನೇ ತಮ್ಮದಾಗಿಸಿಕೊಂಡರು. ಮಹಿಳೆಯರು ತಮ್ಮನ್ನೇ ಆರ್ಥಿಕವಾಗಿ ಅವಲಂಬಿಸಬೇಕೆಂಬ ಹಂಬಲದಿಂದಲೋ ಏನೋ ಅವರಿಗೆ ಸಂಪ್ರದಾಯದ ಸಂಕಲೆ ಬಿಗಿದು ಹದಿನಾರು ಮೊಳದ ಸೀರೆಯ ಸೆರೆಯಲ್ಲೇ ಉಳಿಸಿಬಿಟ್ಟರು. ಅಮ್ಮನ ಕಾಲಕ್ಕೆ ಅದು ಹನ್ನೆರಡು ಮೊಳವಾಗಿ, ಈಗ ಐದೂವರೆ ಮೀಟರ್ ಆಗಿ ನನ್ನಂಥವರ ಮೇಲೆ ರಾರಾಜಿಸುತ್ತಾ ಆರ್ಥಿಕ ಪರಾವಲಂಬನೆಯ ಸಂಕೇತವಾಗಿ ಉಳಿದುಬಿಟ್ಟಿದೆ! ನಮ್ಮ ಹಳ್ಳಿಯ ಕಡೆ ಮಹಿಳೆಯರು ‘ಎಲಡಿಕೆಚೀಲ’ (ಎಲೆ-ಅಡಿಕೆ ಚೀಲ) ಎನ್ನುವ ಒಂದು ೨-೩ಅಂಕಣಗಳಿರುವ ಪುಟ್ಟ ಚೀಲವೊಂದನ್ನು ತಮ್ಮ ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಿದ್ದರು. ಇದೂ ಒಂದುರೀತಿ ಜೇಬಿನ ಪರ್ಯಾಯ ವ್ಯವಸ್ಥೆಯೇ ಆಗಿತ್ತು! ಜೇಬಿನ ಸೌಕರ್ಯವಿಲ್ಲದ ನನ್ನಂಥಾ ಮಹಿಳೆಯರ ಪಾಡಂತೂ ಹೇಳತೀರದು. ಅದಕ್ಕಂದೇ ಇರಬಹುದು, `ವ್ಯಾನಿಟಿ ಬ್ಯಾಗ್’ ( ಯಾರೋ ಕುಹಕಿಗಳೇ ಈ ಹೆಸರು ಇಟ್ಟಿರಬಹುದು. `ವ್ಯಾನಿಟಿ’ ಎಂದರೆ `ಜಂಬ’ ಅಂತ. ಒಂದು ಕಾಲಕ್ಕೆ ಇದು `ಜಂಬದ ಚೀಲ’ ಆಗಿದ್ದಿರಲೂ ಬಹುದು. ಆದರೆ ಈಗಂತೂ ಇದು ನಿಜಕ್ಕೂ `ನೆಸೆಸ್ಸಿಟಿ’ ಎಂದರೆ `ಅಗತ್ಯ’ ಚೀಲವೇ ಆಗಿದೆ) ಎಂಬ `ಬಾಹ್ಯ ಜೇಬು’ ಆರ್ಥಿಕ ಸ್ವಾವಲಂಬಿಯಾದ ಉದ್ಯೋಗಸ್ಥ ಮಹಿಳೆಯ ಹೆಗಲೇರಿದ್ದು! ಇಂಥಾ ಬಾಹ್ಯ ಜೇಬನ್ನು ಹೊರಲು ಬೇಸರಿಸಿ ಕೆಲವರು ಹಣದ ಪುಟ್ಟ ಪರ್ಸ್ನ್ನು ರವಿಕೆಯೊಳಗೆ ಇಟ್ಟುಕೊಂಡು ಪಜೀತಿಪಟ್ಟುಕೊಳ್ಳುತ್ತಿರುತ್ತಾರೆ. ಇಂಥಹಾ ಪ್ರಯೋಗವೊಂದನ್ನು ನಾನೂ ಮಾಡಲುಹೋಗಿ ಇದ್ದ ಹಣವನ್ನೆಲ್ಲಾ ಕಳೆದುಕೊಂಡು ಕಡೆಗೆ ನಾನೂ `ಜೇಬೊಡತಿ`ಯಾಗಲೇಬೇಕೆಂಬ ಹಠದಲ್ಲಿ ನನ್ನ ಒಳಲಂಗ, ರವಿಕೆಗಳಿಗೆಲ್ಲಾ ಜೇಬನ್ನು ಹೊಲಿದುಕೊಳ್ಳುವ ಸ್ವಕರ್ಮ ಸಾಹಸದಲ್ಲಿಯೂ ತೊಡಗಿದೆ. (ಪ್ರವಾಸ ಹೋಗುವ ಕೆಲವರು ಈ ಕ್ರಮವನ್ನು ಕೈಗೊಂಡ ಉದಾಹರಣೆಗಳ ಆಧಾರದಮೇಲೆ!) ಆದರೆ ಅದರಲ್ಲಿ ಉಂಟಾದ ಅನೇಕ ಗೊಂದಲಗಳಿಂದ ಅನುಕೂಲಕ್ಕಿಂತಾ ಮುಜುಗರವೇ ಹೆಚ್ಚಾಯಿತು. ನಂತರ ಮನೆಯಲ್ಲಿ(!) ಜೇಬಿರುವ ನೈಟಿ ಹಾಕುವುದರಲ್ಲೇ ತೃಪ್ತಿ ಪಡಬೇಕಾಯ್ತು! (ನೆಗಡಿಯ ನೆಂಟಿರುವುದರಿಂದ!) ಇತ್ತೀಚೆಗೆ ಅನೇಕ ಹೆಣ್ಣುಮಕ್ಕಳು ಪ್ಯಾಂಟನ್ನು ಧರಿಸಿಕೊಂಡು ಜೇಬಿನ ಸದುಪಯೋಗ(!) ಪಡೆಯುವುದನ್ನು ನೋಡಿ ನನಗಂತೂ ಬಹಳ ಸಂತಸವಾಗಿದೆ.
ಜೇಬಿಗೆ `ಕಿಸೆ’, `ಬೊಕ್ಕಣ,’ ಎಂದೂ ನಿಘಂಟಿನಲ್ಲಿ ಕೊಟ್ಟಿದ್ದಾರೆ. `ಕಿಸೆ’ ಏನೋ ನಮಗೆ ಪರಿಚಿತವಾದ ಪದವೇ. ಬಸ್ಸ್ಟಾಂಡ್ಗಳಲ್ಲಿ `ಕಿಸೆಗಳ್ಳರಿದ್ದಾರೆ ಎಚ್ಚರಿಕೆ’, ಎನ್ನುವ ಫಲಕಗಳನ್ನು ಓದ್ತಾನೇ ಇರ್ತೀವಲ್ಲ! ಆದರೆ `ಬೊಕ್ಕಣ’ ಎನ್ನುವುದನ್ನು ನಾನು ಇದುವರೆಗೂ ಕೇಳೇ ಇರಲಿಲ್ಲ. ಇದು ನನ್ನ ಭಾಷಾ ಅಲ್ಪ ಜ್ಞಾನದ ಸಂಕೇತವೂ ಇರಬಹುದು! ಹಿಂದಿಯಲ್ಲಿ `ಖೀಸಾ’ ಎಂದಿದೆ. `ಕಿಸೆ’ ಯಿಂದ `ಖೀಸಾ’ ಆಯ್ತೋ, `ಖೀಸಾ’ದಿಂದ `ಕಿಸೆ’ ಆಯ್ತೋ ಎನ್ನುವ ಬೀಜವೃಕ್ಷ ನ್ಯಾಯವನ್ನು ಭಾಷಾ ತಜ್ಞರೇ ಪರಿಹರಿಸಬೇಕು! ಆಂಗ್ಲಭಾಷೆಯ POCKET ಪಡೆದುಕೊಂಡಂಥಾ ವಿಸ್ತಾರವನ್ನು ಬಹುಷ: ಬೇರೆ ಯಾವ ಜೇಬುಗಳೂ ಪಡೆಯಲಿಲ್ಲವೇನೋ! ಈ ಆಧುನಿಕ, ವಿವಿಧ ವಿನ್ಯಾಸದ ಜೇಬಿನ ಮೂಲವೇ ಆಂಗ್ಲವಾದ್ದರಿಂದಲೇ ಏನೋ ಇದಕ್ಕೆ ಇಷ್ಟೊಂದು ಪ್ರಸಿದ್ದಿ! ‘Pickpocket’ ಎನ್ನುವುದಂತೂ ಬಳಕೆಯಲ್ಲೂ, ನಡೆಯುವುದರಲ್ಲೂ ಸರ್ವೇ ಸಾಮಾನ್ಯವಾಗಿಹೋಗಿದೆ. ನಮ್ಮ ಬಹುತೇಕ ಚಲನ ಚಿತ್ರಗಳಲ್ಲಿನ ನಾಯಕ, ನಾಯಿಕೆಯರದ್ದು ಇದೇ ಉದ್ಯೋಗ! ಈ ಹಿಂದೆ ನಮ್ಮ ಹಾಸ್ಯ ಸಾಹಿತಿಗಳು ತಮ್ಮ ಪತ್ನಿಯರನ್ನೇ ಹಾಸ್ಯದ PÉÃAದ್ರಬಿಂದುವಾಗಿಸಿಕೊಂಡು ತಮ್ಮ ಜೇಬಿನಲ್ಲಿರುವ ಪುಡಿಗಾಸನ್ನು ತಾವಿಲ್ಲದ ವೇಳೆಯಲ್ಲಿ ಹಾರಿಸಿಬಿಡುವ pick‘pocket’ (ಜೇಬುಗಳ್ಳಿ!) ಅಂತೆ ಚಿತ್ರಿಸಿಬಿಡುತ್ತಿದ್ದರು. (ಎಷ್ಟೋ ವೇಳೆ ಅವರ ಗುಪ್ತ ಕಾರ್ಯಗಳ ಬಹಿರಂಗವೂ ಆಗಿಬಿಡುವ ಸಂಭವವೂ ಇತ್ತು!) ಅವರೇನಾದರೂ ‘pocket money’ ಕೊಡುವ ಪರಿಪಾಠ ಇಟ್ಟುಕೊಂಡಿದ್ದರೆ ಹೀಗಾಗದೇ ಅವರ ಮರ್ಯಾದೆಯಾದರೂ ಉಳಿಯುತ್ತಿತ್ತೋ ಏನೋ! POCKETನ್ನು ನಾಮಪದದ ರೂಪದಲ್ಲಿ ತೆಗೆದುಕೊಂಡರೆ ಉಡುಪು, ಸೀಟು, ಚೀಲ ಇವುಗಳೊಳಗೆ ಹೊಲಿದಿರುವ ಒಂದು ಸಣ್ಣ ಚೀಲ ಎಂದಾಗುತ್ತದೆ. ಇದಕ್ಕೆ ಸಣ್ಣ ಪ್ರದೇಶ, ಸಣ್ಣ ಮೊತ್ತ ಎಂಬೆಲ್ಲಾ ಅರ್ಥಗಳೂ ಇವೆ. ವಿಶೇಷಣವಾದಾಗ pocketbook, pocketful, pocketknife, pocketmoney, pocket dictionary..... (ಈ ಪಾಕೆಟ್ ಪುಸ್ತಕಗಳು ಬಂದದ್ದು ಪರೀಕ್ಷೆಗಳಲ್ಲಿ ಕಾಪಿಹೊಡೆಯುವವರಿಗೆ ವರದಾನವಾಯ್ತು! ಈಗ ಬಿಡಿ ಎಲ್ಲಾ ಟಿಕ್, ಟಿಕ್!). ಕ್ರಿಯಾಪದವಾದಾಗ ‘pocket the money’ ಎಂದರೆ ಹಣ ಸಂಪಾದಿಸು, ‘pocketed the knife’ ಎಂದರೆ ಚಾಕುವನ್ನು ಜೇಬಿಗೆ ಸೇರಿಸುವುದು ಎಂದಾಗುತ್ತದೆ. `ಜೇಬಿಗೆ ಸೇರಿಸು’ ಎಂದರೇ ತನ್ನದಾಗಿ ಮಾಡಿಕೊಳ್ಳೊದು, ಅಡಗಿಸಿಡು, ಮುಚ್ಚಿಡು ಎಂದೆಲ್ಲಾ ಅರ್ಥೈಸಬಹುದು. ನೋಡಿ ಆಂಗ್ಲರಿಂದಲೇ ಬಂದ ಈ `ಪಾಕೆಟ್’ ತನ್ನದೇ ಮೂಲ ಭಾಷೆಯಲ್ಲಿ ಎಷ್ಟೆಲ್ಲಾ ಅxð ವೈವಿಧ್ಯವನ್ನು ಹೊಂದಿದೆ ಅಂತ!
ತನ್ನದಾಗಿ ಮಾಡಿಕೊಳ್ಳೋದು ಎನ್ನುವಾಗ ನನಗೆ ನೆನಪಾಗೋದು....... `ಕವಿಗಳನ್ನೆಲ್ಲಾ ಸಾಲಾಗಿ ನಿಲ್ಲಿಸಿದಾಗ ಒಬ್ಬರ ಕೈ ಮತ್ತೊಬ್ಬರ ಜೇಬಿನಲ್ಲಿರುತ್ತದೆ’ ಎನ್ನುವ ಉಕ್ತಿ. ಇಲ್ಲಿ `ಜೇಬು’ ಅಂತ ಇರೋದರಿಂದ ಸಾಲಾಗಿ ನಿಲ್ಲಿಸಿರೋದು ಪುರುಷ ಪುಂಗವರನ್ನೇ ಅನ್ನೋದು ಸರ್ವವಿಧಿತ. ಜೇಬಿನಲ್ಲಿ ಕೈ ಇರಬೇಕಾದರೆ ಅದು ಜುಬ್ಬಾದ ಜೇಬೇ ಆಗಿರಬೇಕು. ಅವರೆಲ್ಲಾ ಜುಬ್ಬಾ, ಪೈಜಾಮಾನೇ (ಅಥವಾ ಪಂಚೆಯೂ ಆಗಿರಬಹುದು) ಹಾಕಿಕೊಂಡು, ಕುರುಚಲು ಗಡ್ಡ ಬಿಟ್ಟು.....ಸಾಲಾಗಿ ನಿಂತು ಒಬ್ಬರ ಜುಬ್ಬಾ ಜೇಬಿನೊಳಗೆ ಮತ್ತೊಬ್ಬರು ಕೈ ಹಾಕಿಕೊಂಡಿರುವ ದೃಶ್ಯ ವರ್ಣನಾತೀತ. ಇದನ್ನ `ಕೃತಿಚೌರ್ಯ’ ಅಂತ ಸಾರಾಸಗಟಾಗಿ ಹೇಳಲಾಗದಿದ್ದರೂ ಹಲವು ಹೂಗಳಿಂದ ಮಕರಂದ ಹೀರಿ `ಮಧು’ವನ್ನು ತಯಾರಿಸುವ `ಮಧುಕರ ವೃತ್ತಿ’ ಎಂದು ಹೇಳಲೇನೂ ಅಡ್ಡಿ ಇರಲಾರದು. ಈ ಅಪವಾದದಿಂದ ಪಾರಾದ ಹೆಂಗೆಳೆಯರಂತೂ ಸಾಂಪ್ರದಾಯಿಕ ಉಡಿಗೆಗಳಿಗೆ ಸಾಷ್ಟಾಂಗ ನಮಿಸಲೇ ಬೇಕು. (`ಸಾಷ್ಟಾಂಗ ನಮಸ್ಕಾರ’ ಪುರುಷ ವರ್ಗಕ್ಕೇ ಮೀಸಲಾಗಿದ್ದರೂ ಸ್ವಲ್ಪ ಕಾಲ ಎರವಲು ಪಡೆದು!)
ಸಾಮಾನ್ಯವಾಗಿ ಜೇಬನ್ನು ನೋಡಿ ಒಬ್ಬರ ಕಾರ್ಯಕ್ಷೇತ್ರ, ಹವ್ಯಾಸ, ಸ್ವಭಾವಗಳನ್ನು ಗುರುತಿಸಬಹುದು. ಶಿಕ್ಷಕರು ಜೇಬಿನಲ್ಲಿ ನೀಲಿ ಮತ್ತು ಕೆಂಪು ಇಂಕಿನ ಪೆನ್ಗಳನ್ನು ಇಟ್ಟುಕೊಂಡಿರುತ್ತಾರೆ. ಪತ್ರಾಂಕಿತ ಅಧಿಕಾರಿಗಳಾದರೆ ಹಸಿರು ಇಂಕಿನ ಪೆನ್ ರಾರಾಜಿಸ್ತಾ ಇರುತ್ತದೆ. ಸಿಗರೇಟ್, ಪಾನ್, ನೆಶ್ಯ,...ಇವುಗಳನ್ನು ಹವ್ಯಾಸ ಎನ್ನುವುದೋ, ದುರಭ್ಯಾಸೆನ್ನುವುದೋ...,ಅಂತೂ ಜೇಬಿನಲ್ಲಿ ಮನೆ ಮಾಡಿರುತ್ತವೆ. ಸದಾ ನೆಗಡಿಯಿಂದ ಬಳಲುವವರ (ಜನ್ಮ ನೆಗಡಿ) ಜೇಬುಗಳಂತೂ ವೈರಸ್ಗಳ ಆಗರವೇ ಆಗಿರುತ್ತದೆ. ಕನ್ನಡಕಧಾರಿಗಳಾದರೆ ಕನ್ನಡಕ,... ಈಗಂತೂ ಮೊಬೈಲ್ ಅಗ್ರಸ್ಥಾನ ಪಡೆದುಬಿಟ್ಟಿದೆ. ಯಾವ ಸಂಶೋಧನೆ ಏನೇ ರಿಪೋರ್ಟ್ ಕೊಟ್ಟರೂ ಮೊಬೈಲ್ಗಳಂತೂ ತಮ್ಮ ಸ್ಥಾನವನ್ನು ಜೇಬಿನಲ್ಲೇ ಭದ್ರಪಡಿಸಿಕೊಂಡುಬಿಟ್ಟಿವೆ. ಕೆಲವು ಪ್ರದರ್ಶನಾಕಾಂಕ್ಷಿಗಳು ತಮ್ಮ ಪಾರದರ್ಶಕ ಜೇಬುಗಳಲ್ಲಿ ಐನೂರು, ಸಾವಿರದ ನೋಟುಗಳನ್ನು ಇಟ್ಟುಕೊಂಡು ತಮ್ಮ ಆರ್ಥಿಕ ಸಾಮರ್ಥ್ಯವನ್ನು ವೈಭವೀಕರಿಸುತ್ತಿರುತ್ತಾರೆ. ರಾಜಕಾರಿಣಿಗಳು ತಮ್ಮ ಪಕ್ಷವನ್ನು ಬಲವರ್ಧನೆ ಮಾಡಿಕೊಳ್ಳುವುದು ಅವರ ಜೇಬಿನ `ವಜನ್’ಗೆ ಅನುಗುಣವಾಗಿರುತ್ತದೆ. ಚುನಾವಣಾಕಾಲದಲ್ಲಿ ಜೇಬಿಗೇ ಮಹತ್ವ! `ಅವನು ನನ್ನ ಜೇಬಿನಲ್ಲೇ ಇದಾನೆ’ ಎನ್ನುವ ಮಾತನ್ನೂ ಆಡುವುದನ್ನು ಕೇಳಬಹುದು. ರಾಜಕಾರಿಣಿಗಳಿಗೆ ಅನೇಕ ಅಗೋಚರ ಜೇಬುಗಳು ಇರುತ್ತವೆ ಅಂತ ತಿಳಿದವರು ಹೇಳ್ತಾರೆ. ನಮ್ಮ ಮು. ಮಂ.ಗಳ ಎಂಟು ಜೇಬುಗಳ ಬಗ್ಗೆ ಹೇಳುತ್ತಾ ಅವರು ಧರಿಸುವ ಉಡುಪಿನಲ್ಲಿರುವ ಜೇಬುಗಳು ಅವರ ಅಂತರಂಗದ ಆಸೆಯ ಪ್ರತೀಕವೇ ಆಗಿವೆ ಅಂತಾರೆ.
ಅಪ್ಪನ ಜೇಬಿನ ದುಡ್ಡುಗಳೆಲ್ಲಾ
ಚಟಪಟಗುಟ್ಟುತ ಸಿಡಿಯುವುವು... ಎನ್ನುವುದನ್ನು ಓದುವಾಗ ಜೇಬಿನ ದುಡ್ಡು ಹೇಗೆ ಚಟಪಟ ಗುಟ್ತಾ ಸಿಡಿಯುತ್ತೆ? ಅಂತಾ ಬಹಳ ಯೋಚನೆ ಮಾಡ್ತಾ ಇದ್ದೆ. ನಂತರ ದೀಪಾವಳಿಯಲ್ಲಿ ತಿಳೀತು ಅವು ಚಟಪಟ ಗುಟ್ಟುವ ಪರಿ! (ಎಂಥಾ ಪೆದ್ದು ಅಲ್ವಾ?) ಈಗ ಚಟಪಟ ಏನು `ಢಂ ಢಮಾರ್’ ಆಗಿದೆ. ಈ ನಡುವೆ ಭಯೋತ್ಪಾದಕರೂ ಎಲ್ಲಿ ತಮ್ಮ ಕಾಣಿಕೆ ಸೇರಿಸ್ತಾರೋ ಎನ್ನುವುದೇ ಆತಂಕದ ವಿಷಯ! ದೀಪಾವಳಿಯೇ ಆಗಬೇಕೆಂದಿಲ್ಲ, ಯಾವ ಕಾರಣಕ್ಕಾದರೂ ಚಟಪಟಗುಟ್ಟಬಹುದು. ನನ್ನ ಬಾಹ್ಯ ಜೇಬಾದ ವ್ಯಾನಿಟಿ (ಅಲ್ಲಲ್ಲ `ನೆಸೆಸ್ಸಿಟಿ’ ಅಂತಾ ಈಗಾಗಲೇ ಹೇಳಿಯಾಗಿದೆ. ಆದರೂ ಆಡುವಾಗಿನ ಭಾಷೆಯಲ್ಲಿ...) ಬ್ಯಾಗಿನ ಒಳ ಜೇಬುಗಳಂತೂ ತುಂಬಿಸಿದಷ್ಟೂ ಖಾಲಿಯಾಗತ್ತಲೇ ಇರುತ್ತವೆ!
ಪಟಾಸು ಪೆಟ್ಲು ಒಳ ಜೇಬಲ್ಲಿ
ಕಾಸಿನ ಸಾಲು ಕಳ್ಳ ಜೇಬಲ್ಲಿ...
ಎಂ. ಎಸ್. ಸುಂಕಾಪುರ ಇವರು ತಮ್ಮ `ಮಾವ ಕೊಡಿಸಿದ ಕೋಟಿ’ನಲ್ಲಿ ಇರುವ ಕಿಸೆಗಳನ್ನು ಮಹಾಮನೆಗೆ ಇರುವ ನೂರುಬಾಗಿಲು, ಸಾವಿರ ಕಿಟಕಿಗಳಿಗೆ ಹೋಲಿಸಿದ್ದಾರೆ. ಎಡಬಲದಲ್ಲಿರುವ, ಬಹೋಪಯೋಗಿಯಾದ, ದೊಡ್ಡ ಕಿಸೆಗಳು, (ಅವುಗಳೊಳಗೆ ಒಂದೇ ಸಮನೆ ಸಾಮಾನು ತುಂಬುವುದನ್ನು ನೋಡಿ, `ಏನ್ರಿ ನಿಮ್ಮ ಕಿಸೆ ಹೋಲ್ಡಾಲ್ನಂತಿವೆ,’ ಎಂದೂ ಕೇಳಿದ್ದುಂಟಂತೆ!), ಎದೆಯಮೇಲಿರುವ ಎಳೆಯ ಕಂದನಂಥಾ ಹೊರಕಿಸೆ, ಚಂದ್ರನಂತೆ ವೃದ್ಧಿ, ಕ್ಷಯಗಳ ನಿರಂತರ ಚಕ್ರಗತಿಯಲ್ಲಿರುವ ಖಜಾನೆಯಾದ ಒಳ ಎಡಕಿಸೆ, ಮಹತ್ವದ ಸಾಮಾನುಗಳನ್ನು ತನ್ನೊಳಗೆ ಹುದುಗಿಸಿಕೊಂಡ ಮಹಾಮೌನಿ ಒಳ ಬಲಕಿಸೆ, ಚತುರ ಸಿಂಪಿಗನ ಚಾಣಾಕ್ಷಬುದ್ಧಿಯ ಪ್ರತೀಕವಾದ ಒಳ ಕಳ್ಳಕಿಸೆ...ಇದಕ್ಕಿಂತಾ ವಿವರ ಬೇಕೇ ಕಿಸೆಯ ವೈವಿಧ್ಯತೆಗಳನ್ನು ತಿಳಿಯಲು.
ಮಹಾನ್ ಪುಸ್ತಕ ಪ್ರೇಮಿಯಾದ ನಮ್ಮ ತಂದೆಯವರು ಧರಿಸುತ್ತಿದ್ದ ವಿಶೇಷವಾದ ಅಂಗಿಯಲ್ಲಿ ತೋಳಿನ ಕೆಳಗೆ ಇರುತ್ತಿದ್ದ ಒಳ ಜೇಬಿನಲ್ಲಿ ಯಾವಾಗಲೂ ಎರಡು-ಮೂರು ಸಣ್ಣ ಪುಸ್ತಕಗಳಿರುತ್ತಿದ್ದವು! ಜೊತೆಗೆ ಕನ್ನಡಕದ ಪೆಟ್ಟಿಗೆ, ಅಮೃತಾಂಜನ, ಕರವಸ್ತ್ರ, ನೆಶ್ಯದಡಬ್ಬಿ, ಮೆಣಸು ಸಕ್ಕರೆ ಡಬ್ಬಿ, ಒಂದೇ, ಎರಡೇ ... ತುಂಬಿ ತುಳುಕುತ್ತಿದ್ದವು. (ಅವರಿಗೆ ವಂಶಪಾರಂಪರ್ಯವಾಗಿ ಬಂದ ಚಿನ್ನದ ನಿಬ್ಬಿನ ಪೆನ್ನು ಆಗಾಗ ಉಕ್ಕೇರಿದ ಸಂತಸದಲ್ಲಿ ಇಂಕನ್ನು ಹೊರಚೆಲ್ಲುತ್ತಾ ಎದೆಯಭಾಗದ ಒಳಜೇಬಿನಲ್ಲಿ ಅಡಗಿರುತ್ತಿತ್ತು.) ಜೇಬಾದರೂ ಕೈಚೀಲದಷ್ಟೇ ತೂಕವನ್ನು ಹೊತ್ತು,ಹೊತ್ತು ಇನ್ನು ತಾಳಲಾರೆನೆಂದು ಅಂಗಿಯಿಂದ ವಿಚ್ಛೇದನ ಬಯಸುವ ಸ್ಥತಿಗೆ ತಲುಪಿದ ಜೇಬನ್ನು ಅಮ್ಮ ಸಂಧಾನಗೊಳಿಸಿ ಸೇರಿಸುವ ಭರದಲ್ಲಿ ಸ್ವಗತ ಸಹಸ್ರ ನಾಮಾರ್ಚನೆಯನ್ನೇ ಮಾಡುತ್ತಿದ್ದರು. ಯಾವಾಗಲೂ ಬೇಸಿಗೆ ರಜೆ ಬರುವಾಗ ಏನಾದರೊಂದು ಕುಶಲಕಲೆಯ ಕಾರ್ಯಕ್ರಮದಲ್ಲಿ ತೊಡಗುತಿದ್ದ ನಾನು, ಒಂದು ರಜೆಯಲ್ಲಿ ನಾಲ್ಕು ಗುಲಾಬಿ ಹೂಗಳಿದ್ದ ಒಂದು ಕಸೂತಿ ಚೀಲವನ್ನು ಹಾಕಿಕೊಟ್ಟಿದ್ದನ್ನು ಅವರು ಸಂಪೂರ್ಣ ಸದುಪಯೋಗಪಡಿಸಿಕೊಂಡು ಬಹಳ ಜೋಪಾನವಾಗಿ ಇಟ್ಟುಕೊಂಡಿದ್ದರು. ಆ ಪ್ರಭಾವದಿಂದಲೋ, ವಂಶವಾಹಿನಿಯ ಮಹಿಮೆಯೋ, ಸದಾ ಮುಂದಾಲೋಚನೆಯಲ್ಲೇ ಇರುವ ನಾನು ನನ್ನ ಬಾಹ್ಯ ಕಿಸೆಯ (ಅಗತ್ಯಚೀಲ!) ಜೊತೆಗೇ ಅಧಿಕಾರ (ಅಧಿ-ಖಾರ) ಭಾರದಿಂದ ಒಂದು ಫೈಲುಗಳ ಜೋಳಿಗೆಯನ್ನೂ ಹೊರಲಾರಂಭಿಸಿ ಅಪಹಾಸ್ಯಕ್ಕೆ ಪಾತ್ರಳಾಗಿದ್ದೇನೆ!
ನನ್ನವರು `ಹಣವೇ ಇಲ್ಲ’ ಎನ್ನುವ ಘೋಷವಾಕ್ಯದೊಂದಿಗೇ ಇರುವ ಜೇಬುಗಳನ್ನೆಲ್ಲಾ ಹೊರತೆಗೆದು ತೋರಿಸಿದರೂ (ತಿಂಗಳು ಪೂರ್ತಿ ಧಾರಾಳವಾಗಿ ನನ್ನ ಹಣವನ್ನೇ ಖರ್ಚುಮಾಡಿಸುತ್ತಾ...) ಮತ್ತೆಲ್ಲೋ ಹಣ ಅಡಗಿಸಿಟ್ಟಿದ್ದಾರೆ ಎಂಬ ಅನುಮಾನ ಬಂದು ಪರಿಶೀಲಿಸಿದಾಗ ಬೆಲ್ಟ್ನ ಒಳಭಾಗದಲ್ಲೊಂದು ಜೇಬು ನೋಡಿ ಪರಮಾಶ್ಚರ್ಯ ಹೊಂದಿದ್ದೆ! ಹಾಗೆಲ್ಲಾ ಜೇಬು `ಚೆಕ್’ ಮಾಡುವ ಜಾಯಮಾನ ನನ್ನದಲ್ಲ ಬಿಡಿ. ದ್ರವಗಳ ಗುಣಕ್ಕೆ ಸಾಮ್ಯತೆ ಹೊಂದಿರುವ `ಹಣ’ದ ಚಲನೆಯೂ ಎತ್ತರದಿಂದ ತಗ್ಗಿನ ಕಡೆಗೇ ಅಲ್ಲವೇ? ಈಗ ನನ್ನ ಮಗನ ಪ್ಯಾಂಟಿನ ಜೇಬುಗಳನ್ನು ಲೆಕ್ಕ ಹಾಕಲೇ ಆಗುವುದಿಲ್ಲ! ಜೇಬು ತನ್ನ ಸ್ಥಾನದ ಘನತೆಯನ್ನೇ ಕಳೆದುಕೊಂಡು ಮಂಡಿ, ಮೊಣಕಾಲುಗಳ ಮೇಲೆಲ್ಲಾ ಬಂದಿದೆ. ಇಷ್ಟೇ ಸಾಲದು ಅಂತ ಒಂದೊಂದಕ್ಕೂ ಎರಡು-ಮೂರು ಉದ್ದುದ್ದಾ ಬಾಲಗಳು!
ಇತ್ತೀಚೆಗಂತೂ ಕಳ್ಳಕಿಸೆಯ ಮಹತ್ವ ಬಹಳ ಹೆಚ್ಚಾಗಿದೆ. ಸಣ್ಣತಮ್ಮಣ್ಣನ ಕಳ್ಳಜೇಬಲ್ಲಿ ಕಾಸಿನ ಸಾಲು ಇದ್ದರೆ ಈಗಿನವರ ಕಳ್ಳಜೇಬಲ್ಲಂತೂ ನೋಟುಗಳ ಕಂತೆಯೇ ಅಡಗಿರುತ್ತದ್ದೆ! ಕಳ್ಳ ನೋಟಾಗದಿದ್ದರೆ ಭಾರತಾಂಬೆಯ ಪುಣ್ಯ! ಮೇಜಿನ ಕೆಳಗೆ ಬಂದು ಕ.ಜೇ.ನ್ನು ತುಂಬುತ್ತಿದ್ದುದೂ ಲೋಕಾಯುಕ್ತರ ಭಯದಿಂದ ತತ್ತರಿಸಲಾರಂಭಿಸಿದೆ. ಆದರೂ ತನ್ನದೇ ಮಾರ್ಗವನ್ನು ಕಂಡುಕೊಂಡು ಅವ್ಯಾಹತವಾಗಿ ಸಾಗುತ್ತಲೇ ಇದೆ. ಬಹುಷ: ಈ ಲಂಚಕೋರತನವನ್ನು ತಡೆಯುವ ಏಕೈಕ ಮಾರ್ಗವೆಂದರೆ `ಎಲ್ಲರೂ ಜೇಬೇ ಇಲ್ಲದ ಉಡುಪನ್ನೇ ತೊಡಬೇಕು’ ಎನ್ನುವ ಕಾನೂನನ್ನು ಜಾರಿಗೆ ತರುವುದು ಎನ್ನಬಹುದು. ಇದು ಮತ್ತೆ ಮೂಲ ಸಂಸ್ಕತಿಯತ್ತ ಪಯಣವಾಗಲೂ ಬಹುದು. ಆದರೂ ಚಿತ್ತವ ಸಂಯಮದಲ್ಲಿರಿಸದೇ ಮತ್ತೇನು ಮಾಡಿದರೂ ಫಲ ಕಾಣದೇನೋ.
`ಹಣ’ವೇ ನಿರ್ಧಾರಕ ಅಂಶವಾಗಿರುವ ಈ ಕಾಲದಲ್ಲಿ ಜೇಬಿಗಿರುವ ಮಹತ್ವ ಬೇರಾವುದಕ್ಕೂ ಇಲ್ಲ. `ವಿತ್ತೋ ರಕ್ಷತಿ ರಕ್ಷಿತ:’ (`ಧರ್ಮ’ವಲ್ಲ!) ಎನ್ನುವುದೇ ಎಲ್ಲರ ಧ್ಯೇಯ ವಾಕ್ಯವಾಗಿದೆ.
ಸಾಲಾಗಿ ನಿಲ್ಲಿಸಿರುವ ಕವಿಗಳ ಸಾಲಿನಲ್ಲಿ ಈಗ ನನ್ನನ್ನೂ ಕಂಡು ಗಾಭರಿಯಿಂದೊಡಗೂಡಿದ ಸಂತಸವಾಗ್ತಾ ಇದೆ. ನಾನೂ ಒಬ್ಬ ಕವಿಯಾದೆನೇನೋ ಎಂಬ ಸಂತಸ ಪಡುವುದರಲ್ಲಿದ್ದೆ. ಆದರೆ ನನ್ನ `ಕೈ’ ಎಲ್ಲಿ? `ಹಲವು ಹೂಗಳ ಬಂಡುಂಬ ಮಧುಕರನೆ ಎಲ್ಲಿ ಅವಿತೆ?’ ಈಗಾಗಲೇ ಎಷ್ಟೋ ಮಹಾನ್ ಜೇಬುಗಳನರಸಿ..!..!..! (ಜೇಬಿಗೂ ಜೇಬೇ ಮೂಲ!)
ಈ ನನ್ನ `ಜೇಬ’ನ್ನು ತುಂಬಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲಾ `ಹಿರಿಯ’ ಜೇಬುಗಳಿಗೂ ಅನೇಕಾನೇಕ ವಂದನೆಗಳನ್ನು ಸಲ್ಲಿಸುತ್ತಾ, `ಕೆಲವಂ ಬಲ್ಲವರಿಂದ ಕಲಿತು...’ ಎಂದು ವಿನಯಪೂರ್ವಕವಾಗಿ ಹೇಳುತ್ತಾ... `ಇತಿ ಸಂಪೂರ್ಣಂ’ ಎನ್ನಲಾಗದ `ಜೇಬಾಯಣಂ’.
                                                                        *****************************

Wednesday, April 1, 2015

ಹಾಸ್ಯ `ಹನಿ'ಗಳು!

ಎಪ್ರಿಲ್ 1 ಕ್ಕಾಗಿ ಕೆಲವು ಹಾಸ್ಯ `ಹನಿ'ಗಳು! `ಹನಿ'ಗಳು ನಿಮ್ಮೆದುರಿವೆ.`ಹಾಸ್ಯ'ಕ್ಕಾಗಿ ಶೋಧಿಸಿ ಪ್ರತಿಕ್ರಿಯಿಸಿ!
ಲಕ್ಷ್ಮಣ ರೇಖೆ
ಅಂದು ಆ ರೇಖೆ ದಾಟಿ
ಪಜೀತಿ ಪಟ್ಟಳು
ತರಳೆ
ಇಂದು
ಈ ರೇಖೆ ದಾಟಿಯೂ
ಜೀವ ಉಳಿಸಿಕೊಳ್ಳುತಿವೆ
ಜಿರಲೆ!
*
ಛಾಪು
ನೆರೆತ ಕೂದಲಿಗೇಕೆ
ಅಚ್ಚ ಬಿಳುಪಿನ ಹೊಳಪು?
ಇರಬಹುದೇ
ಹರಯವ ಮೆಟ್ಟಿದ
ದಿಗ್ವಿಜಯದ ಛಾಪು!
*
ಸ್ಪರ್ಧೆ
ಅವಳು ಗಂಡನಲ್ಲಿ
ಬೇಡಿಕೆ ಇಟ್ಟಳು
ಅಮೇರಿಕನ್ ಡೈಮಂಡ್ ಓಲೆಗೆ
ಆತ ಹಣಕೂಡಿಸಿ
ಓಲೆ ಮಾಡಿಸುವ ವೇಳೆಗೆ
ಅವಳ ಕಿವಿಯ ಮೇಲಿನ
ಕೂದಲೆಲ್ಲಾ ತುತ್ತಾಗಿತ್ತು
ಬಿಳಿ ನೆರೆಯ ಧಾಳಿಗೆ
ಓಲೆ ಹಾಕಿಕೊಂಡಾಗ.....
ಹರಳಿನ ಹೊಳಪು
ಕೇಶದ ಬಿಳುಪು
ಇಳಿದಿದ್ದವು ಸ್ಪರ್ಧೆಗೆ!