Saturday, July 28, 2012

`ಮೌನ’ದುತ್ತರ

ಎಲ್ಲೋ ಹುಟ್ಟಿ
ತಗ್ಗಿನತ್ತಲೇ ಸಾಗಿ
ತೊರೆಝರಿಗಳನೆಲ್ಲಾ
ತನ್ನುದರದಲಿ ಸೇರಿಸಿ....

ಹಿಗ್ಗುತ್ತಾ
ಹಠಾತ್ತನೆದುರಾಗುವ
ಆಳಗಳೊಳಗೆ
ಧುಮ್ಮಿಕ್ಕಿ
ಅಬ್ಬರಿಸಿ
ಅಲ್ಲಲ್ಲಿ
ಸುಳಿ ನಿರ್ಮಿಸಿ....

ಅಡ್ಡಿಗಳ ಮೀರಲು
ಅಪ್ಪಳಿಸಿದರೂ
ಸಿಗುವ
ಅವಕಾಶಗಳಲೇ
ನುಗ್ಗಿ ನುಸುಳಿ....

ಹರಿವ ನದಿಗೆ
ಎದುರಾಗುವ
ಹೆಬ್ಬ೦ಡೆಗಳ
ಅಚಲತೆಯ ಬಗ್ಗೆ
ಅಪಹಾಸ್ಯ!

[olಸುತ್ತ ಬಳಸಿ ನೇವರಿಸಿ
ತು೦ತುರು ಸಿಡಿಸಿದ
ಭಾವಗಳ ಚಿತ್ತಾರ

ಅ೦ಧ ಗಾಯನ
ಚಮತ್ಕಾರಕೂ
ಅಲ್ಲಾಡದ ಬ೦ಡೆ!

ನದಿ ಸಾಗಿ ಬ೦ದ
ಬೀಗುತ್ತಿರುವ
ವೈಭವಕೆ
ಗ೦ಭೀರ
ಮೌನದುತ್ತರ!

ಹಿ೦ದೆ ಹಾಕಲಾರೆ
ಮು೦ದೆಯೂ ನೂಕಲಾರೆ
ಇದ್ದಲ್ಲೇ ಇರುವ
ನನ್ನೇ ಬಳಸಲು
ಬ೦ದೇ ಬರುವೆ
ಇ೦ದಿನ೦ತೆಯೇ ನಾಳೆ....

ಕಳೆದುಕೊ೦ಡ
ಅಸ್ಥಿತ್ವಕೆ ತಹತಹಿಸಿ
ಮೇಲೇರಿ
ಮುಗಿಲಸೇರಿ.....

Friday, July 27, 2012

ಛಿದ್ರ

ಬೇಡುತದೆ ಹಾಲು                                  
ಸಾಕಷ್ಟು ಉರುವಲು                                
ತನ್ನಲ್ಲೇ ಕುದ್ದು ಇ೦ಗಿ                               
ಗಟ್ಟಿಯಾಗಲು                                       
ಸಾಕು ಒ೦ದೇ ಬಿ೦ದು
ಹುಳಿ                         
ಛಿದ್ರವಾಗಲು!                                        

Saturday, July 21, 2012

ಶೋಧ

ಕತ್ತೆ ಹುಡುಕುತಿದೆ
ಕಸದ ತೊಟ್ಟಿಯಲಿ

ಬೇಡವೆ೦ದು ಎಸೆದ
ತ್ಯಾಜ್ಯಗಳ ನಡುವೆ ತನ್ನ
ಮುಸುಡಿಯ
ಮು೦ದೂಡಿದಷ್ಟೂ
ಅಡ್ಡಡ್ಡಲಾಗುವ
ಅಡ್ಡಿಗಳು

ಉಸಿರುಕಟ್ಟಿಸುವ ಪ್ಲಾ
ಸ್ಟಿಕ್ಕುಗಳ ಸಿಕ್ಕು!
ಜಗ್ಗದ-ಕುಗ್ಗದ
ಕರಗದ
ಶಿಥಿಲೀಯವಲ್ಲದ
ರಸವನ್ನೇ
ವಸರಿಸಲಾಗದ
ವರ್ಣ ವೈಖರಿಗಳು!

ತು೦ಬಲಾಗದಿದು ತನ್ನ
ತುತ್ತಿನ ಚೀಲವ
ಹೊಟ್ಟೆಗೇ ಕತ್ತರಿ
ಹಾಕಿರುವ
ನಾಗರೀಕತೆಯ
ನಾಗಾಲೋಟ
ಎತ್ತ ತಲುಪಬಹುದೀ
ಹುಲು
ಮನುಜನ ಆಟ?

ನನ್ನಮ್ಮನುದರದ
ಪದರ
ಪದರಕ್ಕಿಳಿಯುತ್ತಿರುವ
ಈ (ಅ)ಪಾರದರ್ಶಕಗಳೇ
ಭವಿಷ್ಯದ
ಪಳಯುಳಿಕೆಗಳು!

ಕಾಗದದ ರುಚಿ
ಇನ್ನು
ಕನಸಿನ ಮಾತೇ,
ಛೀ
ಹುಡುಕಿ ಹುಡುಕಿ
ಹೊಟ್ಟೆ
ತು೦ಬಿಸಿಕೊಳ್ಳಲಾಗದೇ
ಸೋತೆ!




Saturday, July 14, 2012

ಅರಿಕೆ


ಸಿಗಲಿಲ್ಲ ನೀರು ಗೊಬ್ಬರ
ಸಮರ್ಪಕವಾಗಿ,
ಧನ್ಯವಾದಗಳು ಪ್ರಕೃತಿ
ಹರಡಿದ್ದೇನೆ ಬೇರಜಾಲ
ಬದುಕಬಲ್ಲೆ
`ಬರ'ದಲ್ಲಿಯೂ!

Tuesday, July 10, 2012

ಮನದ ಅಂಗಳದಿ.........೧೦೦. ಒಳ್ಳೆಯತನ ಅರಳುವುದೇ ‘ಧ್ಯಾನ’

      (ಸ್ಥಳೀಯ ಪತ್ರಿಕೆ `ಹಾಸನವಾಣಿ'ಯಲ್ಲಿ  ಪ್ರಕಟವಾಗುತ್ತಿದ್ದ `ಮನದ ಅ೦ಗಳದಿ...........' ಅ೦ಕಣ ಬರಹಗಳ  ಸರಣಿಯ ೧೦೦ನೆಯ ಹಾಗೂ ಕಡೆಯ ಬರಹವಿದು. ಬರೆಯಲು ೧೦೦ವಾರಗಳು  ತಮ್ಮ ಪತ್ರಿಕೆಯಲ್ಲಿ ಅನುವು  ಮಾಡಿದ ಪತ್ರಿಕಾ ಸ೦ಪಾದಕರಿಗೆ ನನ್ನ ಧನ್ಯವಾದಗಳು.)
    ನಾವು ಯಾವುದೇ ಕ್ರಿಯೆಯನ್ನು ಮಾಡಿದರೂ ಅದರಿಂದ ನಮಗೆ ಲಭಿಸಬಹುದಾದ ಲಾಭದ ಬಗ್ಗೆ ನಿರೀಕ್ಷಿಸುವುದು ನಮ್ಮ ಸಹಜ ಗುಣ. ಅದು ಹಣದ ರೂಪದಲ್ಲಿರಬಹುದು, ಪ್ರಶಂಸೆ-ಪುರಸ್ಕಾರವಿರಬಹುದು, ಆರೋಗ್ಯವನ್ನು ಉತ್ತಮೀಕರಿಸುವುದೂ ಆಗಿರಬಹುದು. ಜೀವನದ ಪ್ರಾರಂಭಿಕ ಹಂತದಲ್ಲಿ ವಿದ್ಯೆ ಕಲಿಯುವುದರ ಮೂಲಕ ಅಗತ್ಯ ಸರ್ಟಿಫಿಕೇಟ್ ಗಳನ್ನು ಪಡೆದುಕೊಂಡು, ಉದ್ಯೋಗಕ್ಕೆ ಸೇರಿ, ಹಣ ಗಳಿಸಿ, ಸಂಸಾರಸ್ಥರಾಗಿ.......... ಒಂದು ಹಂತದಲ್ಲಿ ಯಾವುದೋ ಭಯಕ್ಕೆ ತಲ್ಲಣಿಸಿಯೋ, ಮನಸ್ಸಿನಲ್ಲಿ ಉಂಟಾಗುವ ತಾಕಲಾಟಕ್ಕೆ ಅಂಜಿಯೋ, ಒಂದು ಆಧಾರದ ಮೊರೆಹೋಗುತ್ತೇವೆ. ಅಂಥವುಗಳಲ್ಲಿ ಧ್ಯಾನವೂ ಒಂದಾಗಿದೆ. ಧ್ಯಾನವನ್ನು ಕಲಿಸುವ ಕೇಂದ್ರಗಳೂ ಇವೆ.
     ನಾನು ಇತ್ತೀಚೆಗೆ ವೀಕ್ಷಿಸಿದ `Spiritual Reality’ ಎನ್ನುವ ಒಂದು ವಿಡಿಯೋದಲ್ಲಿ ಧ್ಯಾನವನ್ನು ಮಾಡುವ ಕ್ರಮ, ಅದರಿಂದ ಉಂಟಾಗಬಹುದಾದ ಉಪಯೋಗಗಳು ಎಲ್ಲವನ್ನೂ ಬಹಳ ಆಕರ್ಷಕವಾಗಿ ತಿಳಿಸಿದ್ದರು. ಧ್ಯಾನ ಮಾಡುವ ಸಮಯದಲ್ಲಿ ಉಂಟಾಗುವ ನಿರ್ಮಲ ಸ್ಥಿತಿ?ಯಲ್ಲಿ ವಿಶ್ವದ ಮೂಲ ಶಕ್ತಿಯಾದ ಕಾಸ್ಮಿಕ್ ಎನರ್ಜಿಯು ನಮ್ಮ ದೇಹವನ್ನು ಪ್ರವೇಶಿಸುತ್ತದೆ ಹಾಗೂ ದೇಹವನ್ನು ಶಕ್ತಿಶಾಲಿಯಾಗಿಸುತ್ತದೆ ಎನ್ನುವ ಅ0ಶವೂ ಅದರಲ್ಲಿತ್ತು. ಅದರ ಸತ್ಯಾಸತ್ಯತೆಗಳು ಏನೇ ಇರಲಿ ಮೊದಲಿನಿಂದಲೂ ಈ ಬಗ್ಗೆ ಬಹಳ ಆಸಕ್ತಿಯನ್ನು ಹೊಂದಿದ್ದ ನಾನು ಪ್ರಭಾವಿತಳಾಗಿದ್ದೆ. ನಮ್ಮ ಹಳ್ಳಿಯಲ್ಲಿ ನಾವು ಚಿಕ್ಕವರಿದ್ದಾಗ ರಜೆಯ ಅವಧಿಯಲ್ಲಿ ಗದ್ದೆಯನ್ನು ಕಾಯಲು ಹೋಗಬೇಕಾಗುತ್ತಿತ್ತು. ಆಗ ಯಾವುದಾದರೊಂದು ಪುಸ್ತಕವನ್ನು ತೆಗೆದುಕೊಂಡು ಹೋಗುವುದು ಅಭ್ಯಾಸವಾಗಿತ್ತು. ಹಾಗೆಯೇ ಒಂದು ಸಾರಿ ನಾನು ರಾಜಯೋಗಎನ್ನುವ ಪುಸ್ತಕವನ್ನು ಓದುವಾಗ ಅದರಲ್ಲಿ ಧ್ಯಾನವನ್ನು ಮಾಡುವ ಕ್ರಮವನ್ನು ತಿಳಿಸಿದ್ದರು. ನಮ್ಮ ಕಬ್ಬಿನಗದ್ದೆಯ ಮಧ್ಯ ಭಾಗದ ಕರಲಿನಲ್ಲಿ( ಕಬ್ಬು ಅಥವಾ ಯಾವುದೇ ಬೆಳೆ ಬೆಳೆಯದೇ ಇರುವ ಚೌಳು ಭೂಮಿ) ನಾನು ಧ್ಯಾನ ಮಾಡುತ್ತಾ (ಹಾಗೆ ಭಾವಿಸಿಕೊಂಡು ಕಣ್ಣು ಮುಚ್ಚಿಕೊಂಡು) ಕುಳಿತುಬಿಟ್ಟಿದ್ದೆ! ನಂತರ ಬಂದ ನನ್ನ ಅಕ್ಕ ನನ್ನನ್ನು ಎಲ್ಲಾ ಕಡೆ ಹುಡುಕಿ, ಅಲ್ಲಿದ್ದುದನ್ನು ಕಂಡಳು. ಆ ಪುಸ್ತಕವು ಇನ್ನೆಂದೂ ನನಗೆ ಸಿಗದಂತೆ ಜಾಗರೂಕತೆ ವಹಿಸಿದಳು!  
   ಜಿಡ್ಡು ಕೃಷ್ಣಮೂರ್ತಿಯವರು ಧ್ಯಾನದ ಬಗ್ಗೆ ವೈವಿಧ್ಯಮಯ ರೀತಿಯಲ್ಲಿ ತಿಳಿಸಿರುವ ಅತ್ಯಮೂಲ್ಯ ಸಂಗತಿಗಳ ಸಂಕ್ಷಿಪ್ತ ರೂಪವನ್ನು ನಿಮ್ಮ ಮುಂದಿಡುತ್ತಿದ್ದೇನೆ:
   ಧ್ಯಾನವೆಂಬ ಮಾತನ್ನು ಕೇಳಿ ಮರುಳಾಗಬೇಡಿ. ಎಲ್ಲ ಆಲೋಚನೆಗಳ ಬಗ್ಗೆ ಎಚ್ಚರವನ್ನು ಹೊಂದಿರುವುದು, ಯಾವ ಮೂಲದಿಂದ ಆಲೋಚನೆ ಮೂಡುತ್ತದೆ, ಅದರ ಉದ್ದೇಶವೇನು ಎಂದು ಅರಿಯುವುದು, ಅದು ಧ್ಯಾನ. ಒಂದು ಆಲೋಚನೆಯ ತಿರುಳನ್ನು ಪೂರ್ಣವಾಗಿ ಅರಿಯುವುದೇ ಮನಸ್ಸಿನ ಇಡೀ ಪ್ರಕ್ರಿಯೆಯನ್ನು ತೆರೆದಿಡುತ್ತದೆ. 
    ಧ್ಯಾನವೆಂದರೆ ನನ್ನ ಬಗ್ಗೆ ನಾನು ನಿರಂತರವಾಗಿ ಎಚ್ಚರವಾಗಿರುವುದು ಮಾತ್ರವಲ್ಲ, ‘ನಾನುಎಂಬ ಭಾವನೆಯನ್ನೇ ಬಿಟ್ಟುಬಿಡುವುದು ಕೂಡ ಹೌದು. ಸರಿಯಾದ ಆಲೋಚನೆಯ ಮುಖಾಂತರ ಧ್ಯಾನ ಸಾಧ್ಯವಾಗುತ್ತದೆ. ಅದರಿಂದ ವಿವೇಕದ ಶಾಂತಿ ದೊರೆಯುತ್ತದೆ. ಆ ಶಾಂತಿಯಲ್ಲಿ ಅತ್ಯುನ್ನತವಾದುದರ ಸಾಕ್ಷಾತ್ಕಾರವಾಗುತ್ತದೆ.
   ನಾನು ಆಡುವ ಎಲ್ಲ ಮಾತುಗಳ ಬಗ್ಗೆ, ನಾನು ಮಾಡುವ ಎಲ್ಲ ಕೆಲಸಗಳ ಬಗ್ಗೆ, ನನ್ನ ಎಲ್ಲ ಸಂಬಂಧಗಳ ಬಗ್ಗೆ , ಎಚ್ಚರವನ್ನಿಟ್ಟುಕೊಂಡಿದ್ದು, ಕ್ಷಣದಿಂದ ಕ್ಷಣಕ್ಕೆ ಎಲ್ಲವನ್ನೂ ಅವು ಇರುವಂತೆಯೇ ಅರಿಯುತ್ತಿರುವಾಗ ಸತ್ಯ ಕಾಣುತ್ತದೆಯೋ, ನಿಜವಾಗಿ ಇದೇ ಧ್ಯಾನದ ದಾರಿ. ಅಲ್ಲವೇ? ಮನಸ್ಸು ನಿಶ್ಚಲವಾಗಿದ್ದಾಗ ಮಾತ್ರ ಗ್ರಹಿಕೆ ಇರುತ್ತದೆ. ಮನಸ್ಸು ತನ್ನನ್ನು ತಾನು ಅರಿಯದೇ ಇರುವಾಗ, ತನ್ನ ಬಗ್ಗೆ ತಾನು ಮೂಢವಾಗಿರುವಾಗ ನಿಶ್ಚಲತೆ ಇರಲು ಸಾಧ್ಯವಿಲ್ಲ. ಆ ಮೂಢತೆಯನ್ನು ಯಾವುದೇ ಬಗೆಯ ಶಿಸ್ತಿನಿಂದಲಾಗಲೀ, ಪ್ರಾಚೀನ ಅಥವಾ ಆಧುನಿಕ ಅಥಾರಿಟಿಯನ್ನು ಅನುಸರಿಸುವುದರಿಂದಲಾಗಲೀ, ದೂರಮಾಡಲು ಸಾಧ್ಯವಿಲ್ಲ. ಆ ಮೂಢತೆಯನ್ನು ಯಾವುದೇ ಬಗೆಯ ಶಿಸ್ತಿನಿಂದಾಗಲೀ, ಪ್ರಾಚೀನ ಅಥವಾ ಆಧುನಿಕ ಅಥಾರಿಟಿಯನ್ನು ಅನುಸರಿಸುವುದರಿಂದಾಗಲೀ, ದೂರಮಾಡಲು ಸಾಧ್ಯವಿಲ್ಲ. ನಂಬಿಕೆಯು ಕೇವಲ ಪ್ರತಿರೋಧ ಮತ್ತು ಪ್ರತ್ಯೇಕತೆಯನ್ನು ಮಾತ್ರ ಸೃಷ್ಟಿಸುತ್ತದೆ. ಪ್ರತ್ಯೇಕತೆಯಿರುವಾಗ ಶಾಂತಿ ಇರುವುದಿಲ್ಲ. ನನ್ನೊಳಗಿನ ಪ್ರಕ್ರಿಯೆಯನ್ನು ಅರಿತಾಗ ಮಾತ್ರ ಶಾಂತಿ ದೊರೆಯುತ್ತದೆ. ಪರಸ್ಪರ ಸಂಘರ್ಷದಲ್ಲಿ ತೊಡಗಿರುವ, ‘ನನ್ನದುಮತ್ತು ನಾನುಎಂಬುದನ್ನು ಸೃಷ್ಟಿಸಿರುವ ಎಲ್ಲಾ ಘಟಕಗಳನ್ನೂ ಅರಿಯುವುದರಿಂದ ಮಾತ್ರ ಶಾಂತಿ ಲಭಿಸುತ್ತದೆ. ಇದು ಬಹಳ ಕಷ್ಟದ ಕೆಲಸವಾದ್ದರಿಂದ ನಾವು ಧ್ಯಾನವೆಂದು ಕರೆಯಲಾಗುವ ಅನೇಕ ಬಗೆಯ ಉಪಾಯಗಳನ್ನು ಕಲಿಯಲು ತೊಡಗುತ್ತೇವೆ. ಮನಸ್ಸು ಹೂಡುವ ಉಪಾಯಗಳು ಧ್ಯಾನವಲ್ಲ. ಧ್ಯಾನವೆನ್ನುವುದು ಆತ್ಮ-ಜ್ಞಾನದ ಆರಂಭ. ಧ್ಯಾನವಿಲ್ಲದೆ ಆತ್ಮ-ಜ್ಞಾನವಿಲ್ಲ.
   ಮನಸ್ಸು ತನ್ನೊಳಗೆ ಜೋಡಿಸಿಟ್ಟುಕೊಂಡಿರುವ ಎಲ್ಲವನ್ನೂ ತೆಗೆದುಹಾಕಿ ಖಾಲಿ ಮಾಡಿಕೊಳ್ಳುವುದೇ ಧ್ಯಾನ. ನೀವು ಹಾಗೆ ಮಾಡಲಾರಿರಿ. ಆದರೂ ಪರವಾಗಿಲ್ಲ. ಹಾಗೆ ಮನಸ್ಸನ್ನು ಖಾಲಿಮಾಡಿಕೊಂಡರೆ ಏನಾಗುತ್ತದೆಂದು ಕೇಳಿ. ಹಾಗೆ ಮನಸ್ಸು ಖಾಲಿಯಾದಾಗ ಮನಸ್ಸಿನೊಳಗೆ ಅಪರಿಮಿತ, ಅತಿ ವಿಶೇಷವಾದ ಅವಕಾಶವಿರುವುದು ತಿಳಿಯುತ್ತದೆ. ಆ ಅಪರಿಮಿತ ಅವಕಾಶವೇ ಸ್ವಾತಂತ್ರ್ಯ. ಇಂಥಾ ಸ್ವಾತಂತ್ರ್ಯ, ಇಂಥಾ ಬಿಡುಗಡೆ ಕೊನೆಗೆ ಎಂದೋ ಒಂದು ದಿನ, ಒಂದು ಕ್ಷಣ ಸಿಗುತ್ತದೆ ಎಂದಲ್ಲ, ಮೊದಲಿಗೇ, ಈಗಲೇ ಇಂಥಾ ಸ್ವಾತಂತ್ರ್ಯ, ಬಿಡುಗಡೆ ಬೇಕೆಂದು ನೀವು ಡಿಮ್ಯಾಂಡ್ ಮಾಡಬೇಕು. ನಿಮ್ಮ ಕೆಲಸದಲ್ಲಿ, ನಿಮ್ಮ ಸಂಬಂಧಗಳಲ್ಲಿ, ನೀವು ಮಾಡುವ ಎಲ್ಲಾ ಕ್ರಿಯೆಗಳಲ್ಲಿ ಈ ಸ್ವಾತಂತ್ರ್ಯವನ್ನು ಹುಡುಕಿಕೊಳ್ಳಬೇಕು. ಆಗ ಧ್ಯಾನವೆಂದರೆ ಸೃಷ್ಟಿಎಂದು ನಿಮಗೆ ತಿಳಿಯುತ್ತದೆ........... ಸೃಷ್ಟಿಸ್ಥಿತಿಯಲ್ಲಿರುವ ಮನಸ್ಸಿಗೆ ಯಾವ ಕಾರಣಗಳೂ ಬೇಕಾಗಿಲ್ಲ, ಯಾವ ಕಾರಣಗಳೂ ಇಲ್ಲ. ಆ ಸ್ಥಿತಿಯಲ್ಲಿರುವ ಮನಸ್ಸು ಕ್ಷಣಕ್ಷಣವೂ ಸಾಯುತ್ತಾ, ಬದುಕುತ್ತಾ, ಪ್ರೀತಿಸುತ್ತಾ, ಇರುತ್ತಾ, ಇರುತ್ತದೆ. ಇಡೀ ಇದೆಲ್ಲವೂ ಧ್ಯಾನ.
    ಧ್ಯಾನವು ಅರಳಿ ಒಳ್ಳೆಯತನದ ಹೂವಾಗಿ ಅರಳುತ್ತದೆ. ಹೃದಯದ ಔದಾರ್ಯದಲ್ಲಿ ಧ್ಯಾನ ಆರಂಭಗೊಳ್ಳುತ್ತದೆ............ ಔದಾರ್ಯವಿಲ್ಲದೇ ಧ್ಯಾನವಿಲ್ಲ. ಅಹಂಕಾರ ಮುಕ್ತರಾಗಿರುವುದು, ಯಶಸ್ಸಿನ ಏಣಿಯನ್ನು ಏರದಿರುವುದು, ಕೀರ್ತಿ ಎಂದರೇನೆಂದು ಎಂದೂ ತಿಳಿಯದಿರುವುದು, ಸಾಧಿಸಿದ್ದಕ್ಕೆಲ್ಲಾ ಆಯಾ ಕ್ಷಣವೇ ಸಂದುಬಿಡುವುದು, ದಿನದಿನವೂ, ಪ್ರತಿಕ್ಷಣವೂ ಸಾಯುವುದು, ಇದು ಒಳ್ಳೆಯತನ. ಇಂಥಾ ಸಮೃದ್ಧ ನೆಲದಲ್ಲಿ ಮಾತ್ರ ಒಳ್ಳೆಯತನ ಬೆಳೆದೀತು, ಅರಳೀತು. ಈ ಒಳ್ಳೆಯತನ ಅರಳುವುದೇ ಧ್ಯಾನ.
     ನಮ್ಮ ದಿನನಿತ್ಯದ ಬದುಕಿಗೆ ಚೆಲುವು, ಸೌಂದರ್ಯ ಹೇಗೆ ಅನಿವಾರ್ಯವೋ ಹಾಗೆಯೇ ಧ್ಯಾನವೂ ಅನಿವಾರ್ಯ. ಧ್ಯಾನವು ಬದುಕಿನ ತಿರುಳು........... ಬದುಕಿನ ಇಡೀ ಪ್ರಕ್ರಿಯೆಯ ಬಗ್ಗೆ ಎಚ್ಚರವಾಗಿರುವುದು, ಗಮನವಿಟ್ಟು ನೋಡುವುದು, ನಿರ್ಭಾವದಿಂದ ಅದನ್ನು ಪ್ರವೇಶಿಸುವುದು, ಅದರಿಂದ ಬಿಡುಗಡೆ ಪಡೆಯುವುದು, ಇದು ಧ್ಯಾನ.        

Sunday, July 1, 2012

ಮನದ ಅಂಗಳದಿ.........೯೯. ಪುನರ್ಜನ್ಮ


     ಯಾವುದನ್ನಾದರೂ ನಾವು ಬಹಳವಾಗಿ ಪ್ರೀತಿಸಿದರೆ ಅದನ್ನು ಸದಾ ನಮ್ಮದಾಗಿಸಿಕೊಳ್ಳುವ ಹಂಬಲ ನಮ್ಮಲ್ಲಿ ಉಂಟಾಗುತ್ತದೆ. ಜೀವನವನ್ನೂ ಅಷ್ಟೆ. ಈ ಜೀವನದ ಬಗ್ಗೆ ಒಂದು ಘಟ್ಟದಲ್ಲಿ ನಮಗೆ ಎಷ್ಟೊಂದು ತಾದ್ಯಾತ್ಮ ಉಂಟಾಗುತ್ತದೆ ಎಂದರೆ ನಮಗೆ ದೊರೆತಿರುವ ಈ ಜೀವನ ಹೀಗೇ ಮುಂದುವರೆಯುತ್ತಲಿರಬೇಕು. ಇದಕ್ಕೆ ಅಂತ್ಯವೇ ಬಾರದಿರಲಿ ಎಂದುಕೊಳ್ಳುತ್ತೇವೆ. ಅಂತ್ಯವಿದ್ದೇ ಇದೆ ಎನ್ನುವುದನ್ನು ಒಪ್ಪದ ಮನಸ್ಸು ಈ ಪಯಣ ಸಾಗುತ್ತಿರುವಾಗಲೇ ಮತ್ತೊಂದು ಜನ್ಮದ ಕಲ್ಪನೆಯಲ್ಲೂ ತೊಡಗಿಬಿಡುತ್ತದೆ. ಕವಿಗಳ ಮಾತೂ ಇದಕ್ಕೆ ಇಂಬುಗೊಡುತ್ತದೆ. ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೋಳ್, ಬನವಾಸಿ ದೇಶದೋಳ್ ಎನ್ನುವ ಆದಿಕವಿ ಪಂಪನ ಉಕ್ತಿಯನ್ನು ಪ್ರಾಥಮಿಕಶಾಲೆಯಲ್ಲಿ ಕಲಿಯುವಾಗ (ಬಾಯಿ ಪಾಠ ಮಾಡುವಾಗ ಎಂದರೆ ಹೆಚ್ಚು ಸೂಕ್ತವಾಗಬಹುದು!) ಬಹಳ ಸಂತಸಪಟ್ಟಿದ್ದೂ ಇದೆ.
       ಆದಿ ಶಂಕರರು ತಮ್ಮ ಉತ್ಕೃಷ್ಟ ಸಾಹಿತ್ಯ ಭಜಗೋವಿಂದಂನಲ್ಲಿ ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ ಎಂದು ಹೇಳಿದ್ದಾರೆ ಇಷ್ಟನ್ನೇ ತಿಳಿದುಕೊಂಡಾಗ ಓಹೋ, ಪುನರ್ಜನ್ಮ ಎನ್ನುವುದು ಖಚಿತ ಎನ್ನುವ ಅಭಿಪ್ರಾಯಕ್ಕೇ ಬರುತ್ತೇವೆ. ಮುಂದುವರೆದಂತೆ ಅವರು ದಾಟಲಸಾಧ್ಯವಾದ ಈ ಬದುಕೆಂಬ ಸಾಗರವನ್ನು ದಾಟಲು ಸಹಕರಿಸು ಓ ಪ್ರಭುವೇ ಎಂಬ ಕೋರಿಕೆಯನ್ನು ದಿವ್ಯ ಶಕ್ತಿಯ ಮುಂದಿಡುತ್ತಾರೆ. ಇದನ್ನು ಸ್ಥೂಲವಾಗಿ ಅರ್ಥೈಸದೇ ಆಂತರ್ಯವನ್ನು ಅರಿತರೆ, ಜನನ-ಮರಣ ಎಲ್ಲವೂ ಈ ನಮ್ಮ ಮನೋಭೂಮಿಕೆಯಲ್ಲೇ ಅಡಗಿದೆ. ಈ ಸ್ತರದಿಂದ ಮೇಲೇರುವಂತೆ ಕರುಣಿಸು ಎನ್ನುವ ಬೇಡಿಕೆಯನ್ನೂ ಮನಗಾಣುತ್ತೇವೆ.
    ಪುನರ್ಜನ್ಮವೆಂಬುದು ಅಹಂಕಾರದ ಮಾತು ಎಂದು  ಜಿಡ್ಡು ಕೃಷ್ಣಮೂರ್ತಿಯವರು ಹೇಳುತ್ತಾರೆ:
    ನೀವು ಮತ್ತೆ ಜನ್ಮತಾಳುತ್ತೀರಿ, ಬದುಕುತ್ತೀರಿ ಎಂಬ ವಿಶ್ವಾಸವನ್ನು ನಾನು ನಿಮಗೆ ನೀಡಬೇಕೆಂದು ಬಯಸುತ್ತೀರಿ. ಆದರೆ ಇಂಥಾ ಪುನರ್ಜನ್ಮದಲ್ಲಿ ವಿವೇಕವೂ ಇಲ್ಲ, ಆನಂದವೂ ಇಲ್ಲ. ಪುನರ್ಜನ್ಮದ ಮೂಲಕ ಅಮರತ್ವವನ್ನು ಬಯಸುವುದು ಮೂಲತಃ  ಅಹಂಕಾರದ ಮಾತು. ಅದು ಅಹಂಕಾರಮೂಲದ ಮಾತು ಆದುದರಿಂದಲೇ ಸತ್ಯವಲ್ಲ. ಪುನರ್ಜನ್ಮತಾಳಿ ಬದುಕು ಮುಂದುವರೆಸುವ ಬಯಕೆಯು ಬದುಕು ಮತ್ತು ವಿವೇಕಗಳಿಗೆ ಪ್ರತಿಯಾಗಿ ನೀವು ರೂಢಿಸಿಕೊಂಡಿರುವ ರಕ್ಷಣಾತ್ಮಕ ಆಸೆಯ ಇನ್ನೊಂದು ರೂಪವಷ್ಟೆ. ಇಂಥಾ ಹಂಬಲ ಭ್ರಮೆಗಳನ್ನಷ್ಟೇ ಮೂಡಿಸಬಲ್ಲದು. ಪುನರ್ಜನ್ಮ ಇದೆಯೋ ಇಲ್ಲವೋ ಎಂಬ ಪ್ರಶ್ನೆಗಿಂತ ವರ್ತಮಾನದಲ್ಲಿ ಪರಿಪೂರ್ಣತೆಯನ್ನು ಸಾಧಿಸುವುದು ಮುಖ್ಯ. ಬದುಕಿಗೆ ಪ್ರತಿಯಾಗಿ ನಿಮ್ಮ ಮನಸ್ಸು ಮತ್ತು ಹೃದಯಗಳು ರಕ್ಷಣೆಯ ಕೋಟೆ ಕಟ್ಟಿಕೊಂಡಿರುವವರೆಗೆ ಪರಿಪೂರ್ಣತೆ ಸಾಧ್ಯವಾಗುವುದಿಲ್ಲ. ಸ್ವರಕ್ಷಣೆಗಾಗಿ ಮನಸ್ಸು ಅತ್ಯಂತ ಸೂಕ್ಮವಾದ ತಂತ್ರಗಳನ್ನು ಹೂಡುತ್ತದೆ. ಸ್ವರಕ್ಷಣೆಯ ಭ್ರಮೆಯನ್ನು ಮನಸ್ಸು ತನ್ನಷ್ಟಕ್ಕೆ ತಾನೇ ಅರಿಯಬೇಕು. ಅಂದರೆ ನೀವು ಹೊಚ್ಚಹೊಸದಾಗಿ ಆಲೋಚಿಸುತ್ತಾ ಕ್ರಿಯೆಯಲ್ಲಿ ತೊಡಗಬೇಕು. ಪರಿಸರವು ನಿಮ್ಮ ಮೇಲೆ ಹೊರಿಸಿರುವ ಸುಳ್ಳು ಮೌಲ್ಯಗಳಿಂದ ಬಿಡುಗಡೆ ಪಡೆಯಬೇಕು..........
        ಪುನರ್ಜನ್ಮದ ಬಗ್ಗೆ ಜಿಡ್ಡು ಕೃಷ್ಣಮೂರ್ತಿಯವರು ಹೀಗೆ ಅಭಿಪ್ರಾಯ ಪಡುತ್ತಾರೆ:
        ಪುನರ್ಜನ್ಮ ಎಂದರೇನು ಎಂಬ ಸತ್ಯವನ್ನು ನೋಡೋಣ. ನೀವು ಪುನರ್ಜನ್ಮದ ಬಗ್ಗೆ ಏನು ನಂಬಿದ್ದೀರಿ, ಏನು ಓದಿದ್ದೀರಿ, ನಿಮ್ಮ ಗುರುಗಳೋ ಅಧ್ಯಾಪಕರೋ ಏನು ಹೇಳಿದ್ದಾರೆ ಎಂಬುದನ್ನಲ್ಲ, ಸತ್ಯವನ್ನು ಕಾಣಬೇಕು. ಸತ್ಯ ಮಾತ್ರ ನಿಮಗೆ ಬಿಡುಗಡೆಯನ್ನು ತಂದೀತೇ ಹೊರತು ನಿಮ್ಮ ಅಭಿಪ್ರಾಯಗಳಾಗಲೀ, ತೀರ್ಮಾನಗಳಾಗಲೀ ಬಿಡುಗಡೆಯನ್ನು ತರಲಾರವು. ನಾನು ಮರುಜನ್ಮವೆತ್ತುತ್ತೇನೆ ಎಂದು ನೀವು ಹೇಳುವಿರಾದರೆ ಆ ನಾನು ಎಂದರೇನು? ಅದು ಆಧ್ಯಾತ್ಮಿಕ ಘಟಕವೋ? ಅಥವಾ ಸಾತತ್ಯವುಳ್ಳದ್ದೋ? ನೆನಪು, ಅನುಭವ, ಜ್ಞಾನಗಳಿಂದ ಬೇರೆಯಾಗಿರುವಂಥದ್ದೋ?............... ಆಧ್ಯಾತ್ಮಿಕ ಘಟಕವೆಂದಾಗ ಮನಸ್ಸಿನ ವಲಯಕ್ಕೆ ಸೇರಿಲ್ಲದ್ದನ್ನು ಕುರಿತು ಹೇಳುತ್ತಿದ್ದೇವೆ ಎನ್ನುವುದು ಸ್ಪಷ್ಟವಾಗಿಯೇ ಇದೆ........... ಅದು ಆಧ್ಯಾತ್ಮಿಕ ಘಟಕವೇ ಆಗಿದ್ದರೆ ಕಾಲಾತೀತವಾಗಿರಬೇಕು. ಆದ್ದರಿಂದಲೇ ಅದಕ್ಕೆ ಸಾತತ್ಯವಾಗಲೀ ಮರುಹುಟ್ಟು ಆಗಲೀ ಇರಲು ಸಾಧ್ಯವಿಲ್ಲ. ಸಾತತ್ಯವಿರುವುದು ತನ್ನನ್ನು ತಾನು ಹೊಸತುಗೊಳಿಸಿಕೊಳ್ಳುವುದಾದರೂ ಹೇಗೆ? ನೆನಪಿನ ಮುಖಾಂತರ, ಆಸೆಯ ಮುಖಾಂತರ ಆಲೋಚನೆ ಮುಂದುವರೆಯುತ್ತಿರುವವರೆಗೆ ಹೊಸತಾಗುವುದು ಸಾಧ್ಯವಿಲ್ಲ. ಆದ್ದರಿಂದಲೇ ಯಾವುದು ಮುಂದುವರೆಯುತ್ತದೆಯೋ, ಸತತವಾಗಿ ಇರುತ್ತದೋ ಅದು ಸತ್ಯವನ್ನು ಅರಿಯಲು ಸಾಧ್ಯವಿಲ್ಲ.
         ಮತ್ತೆ ಹುಟ್ಟಿಬರುತ್ತೇವೆ ಎಂಬುದಕ್ಕೆ ನಾವೆಷ್ಟು ಒಗ್ಗಿಕೊಂಡುಬಿಟ್ಟಿದ್ದೇವೆ ಎಂದರೆ ಜೆಕೆಯವರ ಮಾತುಗಳನ್ನು ಜೀರ್ಣಿಸಿಕೊಳ್ಳುವುದೇ ಕಷ್ಟವೆನಿಸಿಬಿಡುತ್ತದೆ. ನಮ್ಮ ಕಲ್ಪನೆಗಳಿಗೆ ಪುಷ್ಟಿನೀಡುವ ಸುತ್ತಿನವರ ಮಾತುಗಳು, ಪತ್ರಿಕಾ ವರದಿಗಳು, ಟಿ.ವಿ. ಕಾರ್ಯಕ್ರಮಗಳು, ನಮ್ಮಲ್ಲಿಯ ಆಲೋಚನಾ ಶಕ್ತಿಯನ್ನೇ ಕುಗ್ಗಿಸಿಬಿಡುತ್ತದೆ. ಪುನರ್ಜನ್ಮ ಇದೆಯೋ ಇಲ್ಲವೋ ಎಂಬ ಪ್ರಶ್ನೆಗಿಂತ ವರ್ತಮಾನದಲ್ಲಿ ಪರಿಪೂರ್ಣತೆಯನ್ನು ಸಾಧಿಸುವುದು ಮುಖ್ಯ. ಎನ್ನುವ ಜೆಕೆಯವರ ಉಕ್ತಿ ನಮಗೆ ಮಾರ್ಗದರ್ಶಕವಾಗಲಿ.