Saturday, September 25, 2010

ಅತಿಕ್ರಮಣ

ಸುತ್ತಿ ಸುಳಿದು
ಮತ್ತೆ ಮತ್ತೆ
ಮುಖದತ್ತಲೇ
ರಾಚುವ೦ತೆ ಬರುವ
ಈ ಜೀರು೦ಡೆಗೆ
ಭ೦ಡ ಧೈರ್ಯ!

ವೃತ್ತ, ಧೀರ್ಘ ವೃತ್ತ
ಸುರುಳಿ...
ಅನಿಯತ ಪಥಗಳ
ಆಕ್ರಮಣ!

ಆಕಸ್ಮಿಕ, ಅನಿರೀಕ್ಷಿತ
ಎನಿಸಿದ್ದೇಕೋ
ಅಪರಿಹಾರ್ಯವಾದಾಗ
ಆತ್ಮರಕ್ಷಣೆಗೆ ಸನ್ನದ್ಧ ,

ಬಿಚ್ಚಿದ ಛತ್ರಿಯ
ವಿರೂಪಗೊಳಿಸುವ
ಬೀಸುಗಾಳಿ
ಕೊಡೆ ಮಡಚಿ
ಬಡಿಯಲುಪಕ್ರಮಿಸಿದಾಗ
ಒಡನೆಯೇ ಮಾಯ!

ಎಲ್ಲಿ ಪ್ರತಿಸ್ಪರ್ಧಿ?
ಗಾಳಿಯೊಡನೆ ಗುದ್ದಾಟವೆ?
ಈ 'ಝುಯ್ ಝುಯ್' ನಾದದ
ಆಕರವೆಲ್ಲಿ?
ಮಸ್ತಕವೇ ಅದರ
ಅಡಗುದಾಣವಾಯ್ತೆ?

ತಪ್ಪಿಸಿಕೊಳ್ಳಲಾಗದ
ಒತ್ತಡದ ತೀವ್ರ ಶಬ್ಧಕೆ
ಅಬ್ಬರಕೆ
ಬಿಡುಗಡೆಯ ಕಾತುರವೆ?

ಆಗಸ್ಟ್ ೨೦೦4ರ 'ತುಷಾರ' ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಕವನ

Saturday, September 18, 2010

ಮಗುವಿಗೆ......

ಕಂದಾ
ಬಿಗಿವ ಎದೆ
ಕ್ಷೀರ ಶರಧಿ
ಒತ್ತೊತ್ತಿ ಬರುವ ನೋವ
ಹತ್ತಿಕ್ಕುತ್ತಾ
ದುಡಿವ ಯ೦ತ್ರ

ನಿಮ್ಮಪ್ಪ ಕೇಳಲಿಲ್ಲ ಒಟ್ಟಿಗೆ
ವರದಕ್ಷಿಣೆ
ಕ೦ತು ಕ೦ತಿನಲೇ
ಸ್ವೀಕರಿಸುವಷ್ಟು
ಸಹನಶೀಲರು!
ಸ೦ಪಾದನೆಯೊ
ತಲೆಗಾದರೆ ಕಾಲಿಗಿಲ್ಲ
ಆರ್ಥಿಕ ಸ್ವಾವಲ೦ಬನೆ
ನಮಗೂ ಬೇಕಲ್ಲ

ಕಂದಾ
ಅಲ್ಲೀಗ ನಿನ್ನ
ನವಿರು ತುಟಿಯೊಳಗೆ
ನಿಪ್ಪಲ್ ತೂರಿಸುತ್ತಿರಬಹುದಲ್ಲವೆ
ಆಯಾ?
ನಲುಗಬೇಡ
ಒಗ್ಗಿಸಿಕೊ ಅನಿವಾರ್ಯತೆಗೆ
ನನಗೂ ದಿನವೆಲ್ಲಾ
ನಿನ್ನೊಡನಾಡಿ
ತುತ್ತಿಟ್ಟು ಮುತ್ತಿಟ್ಟು
ಲಾಲಿ ಜೋಗುಳ ಹಾಡುತ್ತಾ...
ಸ೦ಭ್ರಮಿಸುವ ಆಸೆಯಿಲ್ಲವೇ?

ಬದುಕ ಯಾ0ತ್ರಿಕತೆ
ಇನ್ನೂ.....
ಬರಡಾಗಿಸಿಲ್ಲ ಭಾವನೆಗಳ
ವಾರಕ್ಕೊ೦ದು ದಿನ
ನಿನಗೆ೦ದೇ ಮೀಸಲು
ಇದೋ ಓಡೋಡಿಬರುವೆ
ನಿನ್ನ ಕಣ್ಣೀರೊರೆಸಲು
ಅಪ್ಪಿ ಮುದ್ದಾಡಿ ಹಾಲುಣಿಸಲು

ಕಂದಾ
ಬಿಕ್ಕಳಿಸಬೇಡ
ನೆತ್ತಿಹತ್ತೀತು ಜೋಕೆ
ನಿಧಾನವಾಗೇ ಹಾಲು ಹೀರು
ಆಹಾ! ನಿನ್ನ ಮೃದು
ಅಧರ ಸ್ಪರ್ಶದ(ನೆನಪ)ಲಿ
ಬಿಗಿತ ಕಮ್ಮಿಯಾದ೦ತಿದೆ
ರವಿಕೆ ಒದ್ದೆಯಾಗುತಿದೆ!

ಫೆಬ್ರವರಿ ೦೬,೨೦೦೫ರ 'ಕರ್ಮವೀರ' ವಾರ ಪತ್ರಿಕೆಯಲ್ಲಿ ಪ್ರಕಟವಾದ ಕವನ.