Friday, December 31, 2010

ಮನದ ಅ೦ಗಳದಿ.............೨೪. ಹೊಸತು-ಹಳತು

ಹೊಸತನ್ನು ಅಪೇಕ್ಷಿಸುವುದು. ಅದಕ್ಕಾಗಿ ಕಾತರಿಸುವುದು, ನಮ್ಮ ಸ್ವಭಾವದ ಒಂದು ಬಹು ಪ್ರಮುಖ ಭಾಗವಾಗಿದೆ. ಇದು ಎಳವೆಯಿಂದಲೂ ನಮಗರಿವಿಲ್ಲದೆಯೇ ನಮ್ಮೊಳಗಿನ ಒಂದು ಅಂಶವಾಗಿದೆ. ಮಗುವಿಗೆ ಕಂಡದ್ದೆಲ್ಲಾ ಹೊಸದೇ! ಅವುಗಳನ್ನು ಕಾಣುವ ಆ ಕಣ್ಣುಗಳು ಕುತೂಹಲದ ಕೊಳಗಳಾಗಿರುತ್ತವೆ. ತಮ್ಮ ಸುತ್ತಮುತ್ತಲಿನ ಪರಿಸರವನ್ನು ತದೇಕವಾಗಿ ವೀಕ್ಷಿಸುತ್ತಾ, ಅದನ್ನು ತಿಳಿದುಕೊಳ್ಳುವ, ತಮ್ಮದಾಗಿಸಿಕೊಳ್ಳುವ ಉತ್ಕಟತೆಯಲ್ಲಿ ಮಗುವಿಗೆ ದಿನದಿನವೂ ನವನವೀನವಾಗಿಯೇ ಗೋಚರಿಸುತ್ತದೇನೋ ಎನ್ನುವಂತೆ ಅದರ ಭಾವವಿರುತ್ತದೆ. ಬೆಳೆದಂತೆ ತನಗೆಲ್ಲಾ ತಿಳಿದಿದೆ ಎನ್ನುವ ಭ್ರಮೆಯಲ್ಲಿ ಅಂತೂ ನಮಗರಿವಿಲ್ಲದೆಯೇ ಜೀವನವನ್ನು ಯಾಂತ್ರಿಕಗೊಳಿಸಿಕೊಂಡುಬಿಡುತ್ತೇವೆ. ಆಗ ನಮ್ಮಲ್ಲಿ ಚೈತನ್ಯದ ಚಾಲನೆಯುಂಟಾಗಲು ನಮ್ಮ ಜೀವನದಲ್ಲಿ ಯಾವುದಾದರೂ ‘ಹೊಸತು’ ಪ್ರವೇಶಿಸಬೇಕಾದದ್ದು ಅನಿವಾರ್ಯವೆನಿಸುತ್ತದೆ. ಅದು ವಸ್ತುವಿನ ರೂಪದಲ್ಲಿರಬಹುದು, ವ್ಯಕ್ತಿಯಾಗಿರಬಹುದು, ಯಾವುದೋ ಒಂದು ಘಟನೆಯಾಗಿರಬಹುದು, ಆಲೋಚನೆಯಾಗಿರಬಹುದು.... ಅಂತೂ ಹೊಸತಿಗಾಗಿ ಕಾತರಿಸಿ, ಕನವರಿಸಿ, ಹಪಹಪಿಸುವುದೇ ಜೀವನದ ಗುರಿಯಾದಂತೆನಿಸುತ್ತದೆ.

ಇದನ್ನು ‘ಹೊಸ ಹಸಿವು’ ಎನ್ನುವ ಮಹಾನ್ ಪ್ರತಿಭಾವಂತ, ಪ್ರಭಾವಶೀಲ ಬರಹಗಾರರಾದ ಡಿ.ವಿ.ಜಿ.ಯವರು,
‘ಬೆದಕಾಟ ಬದುಕೆಲ್ಲ; ಚಣಚಣವು ಹೊಸ ಹಸಿವು|
ಅದಕಾಗಿ ಇದಕಾಗಿ ಮತ್ತೊಂದಕಾಗಿ||
ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನ|
ಕುದಿಯುತಿಹುದಾವಗಂ-ಮಂಕುತಿಮ್ಮ||’ ಎನ್ನುವುದರ ಮೂಲಕ ಜೀವನವೆಲ್ಲಾ ನಾವು ಒಂದಲ್ಲಾ ಒಂದು ಹೊಸತರ ಅಪೇಕ್ಷೆಯಲ್ಲಿ ಕುದಿಯುತ್ತಲೇ ಇರುತ್ತೇವೆ ಎಂದು ತಿಳಿಸುತ್ತಾರೆ.

ಹೊಸತರ ಆಗಮನವಾದ ನಂತರ ಅಂದರೆ ನಮ್ಮದಾಗಿಸಿಕೊಂಡ ನಂತರ ಅದನ್ನು ಜೋಪಾನವಾಗಿ ನಮ್ಮೊಂದಿಗಿರಿಸಿಕೊಂಡು ಕಾಪಾಡಿಕೊಳ್ಳುವುದರಲ್ಲಿ ಅಜಾಗರೂಕರಾಗುತ್ತೇವೆ. ಹೊಸದಾಗಿ ಕೊಂಡ ವಸ್ತುಗಳು ಮೂಲೆ ಸೇರುವುದು, ಹೊಸ ಸ್ನೇಹ, ಸಂಬಂಧಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡು ಶಿಥಿಲವಾಗುವುದು, ಅತ್ಯಂತ ಶ್ರಮದಿಂದ, ಅನೇಕ ದೇಶಪ್ರೇಮಿಗಳ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯ ತನ್ನ ಮೌಲ್ಯವನ್ನು ಕಳೆದುಕೊಳ್ಳುವುದು,....... ಈ ನಮ್ಮ ಮನಃಸ್ಥಿತಿಯಿಂದಲೇ ಇರಬಹುದು. ಹೊಸತು ಎನಿಸಿಕೊಂಡದ್ದು ಹಳತರ ಗುಂಪನ್ನು ಸೇರಿಯೇಬಿಡುತ್ತದೆ! ಹಳೆಯ ರಾಶಿಯಲ್ಲಿ ಒಂದಾಗಿಯೂ ಬಿಡುತ್ತದೆ! ಹಳೆಯದು ಎನ್ನುವುದು ಹೊಸದರಲ್ಲಿಯೇ ಅಡಗಿದೆ ಎನ್ನುವುದನ್ನು ಡಿ.ವಿ.ಜಿ.ಯವರು ಹೀಗೆ ಹೇಳುತ್ತಾರೆ,

`ಹಳೆ ಸೂರ್ಯ ಹಳೆ ಚಂದ್ರ ಹಳೆ ಭೂಮಿ ಹಳೆ ನೀರು|
ಹಳೆ ಹಿಮಾಚಲ ಗಂಗೆ ಹಳೆ ವಂಶಚರಿತೆ||
ಹಳೆಯವಿವು ನೀನಿದರೊಳಾವುದನು ಕಳೆದೀಯೊ?|
ಹಳದು ಹೊಸದೊಳಿರದೆ? -ಮಂಕುತಿಮ್ಮ||’

ಹಳೆಯ ಬೆಟ್ಟದ ಮೇಲೆ ಬಿದ್ದ ಮಳೆ ನೀರು ಹಳೆಯ ನೆಲದ ಮೇಲೆಯೇ ಹರಿದು ಹೊಳೆಯನ್ನು ಸೇರಿದಾಗ ಅದನ್ನು ‘ಹೊಸನೀರು’ ಎನ್ನುತ್ತೇವೆ. ಹಳೆಯದೇ ಹೊಸತಾಗಿ ಬೆಳೆಯುತ್ತದೆ. ಹಾಗೆಯೇ ಹೊಸದೂ ಹಳೆಯದಾಗುತ್ತದೆ ಎನ್ನುವುದನ್ನು ತಮ್ಮ ‘ಮಂಕುತಿಮ್ಮನ ಕಗ್ಗ’ದಲ್ಲಿ ಅನೇಕ ಉದಾಹರಣೆಗಳನ್ನು ನೀಡುತ್ತಾ ಹೇಳಿದ್ದಾರೆ.

ಹಳೆಯದು ಮತ್ತು ಹೊಸದು ಎರಡರ ಸಾಮರಸ್ಯವನ್ನು, ‘ಹೊಸ ಚಿಗುರು, ಹಳೆ ಬೇರು ಕೂಡಿರಲು ಮರ ಸೊಗಸು’ ಎಂಬುದರ ಮೂಲಕ ಸಾರುತ್ತಾರೆ. ಹಾಗೆಯೇ ಹಳೆಯದೇ ಶ್ರೇಷ್ಠವೆಂದು ಹಲುಬುತ್ತಾ ಹೊಸತಿಗೆ ತಮ್ಮನ್ನು ತಾವು ಹೊಂದಿಸಿಕೊಳ್ಳಲಾರದೇ ಅಲ್ಲೇ ಜಡವಾಗಬಾರದೆಂದು ಹೀಗೆ ಹೇಳುತ್ತಾರೆ,

`ಹೊಸತನವೆ ಬಾಳು; ಹಳಸಿಕೆಯೆಲ್ಲ ಸಾವು ಬಿಡು|
ರಸವು ನವನವತೆಯಿಂದನುದಿನವು ಹೊಮ್ಮಿ||
ಹಸನೊಂದು ನುಡಿಯಲ್ಲಿ ದಡೆಯಲ್ಲಿ ನೋಟದಲಿ|
ಪಸರುತಿರೆ ಬಾಳ್ ಚೆಲುವು--ಮಂಕುತಿಮ್ಮ||’

ಬದುಕಿನ ಈ ಪ್ರವಾಹದಲ್ಲಿ ನಮ್ಮನ್ನು ನಾವು ಆಯಾ ಪರಿಸ್ಥಿತಿಗೆ ತಕ್ಕಂತೆ ಸರಿಪಡಿಸಿಕೊಳ್ಳುತ್ತಾ, ಓರೆಕೋರೆಗಳನ್ನು ತಿದ್ದಿಕೊಳ್ಳುತ್ತಾ ಜೊತೆಗೇ ನಮ್ಮತನವನ್ನೂ ಉಳಿಸಿಕೊಂಡು ಮುಂದೆ ಸಾಗುವುದೇ ನಿಜವಾದ ಜೀವನ. ಇಂದಿನ ಈ ತಾಂತ್ರಿಕ ಯುಗದಲ್ಲಿ ನಮಗೆ ಅತ್ಯವಶ್ಯಕವಾದ ಜ್ಞಾನವನ್ನು ಗಳಿಸಿಕೊಂಡು ಹೊಸತರೊಟ್ಟಿಗೇ ಮುನ್ನಡೆಯಬೇಕು ಇಲ್ಲದಿದ್ದರೆ ದಂಡೆಗೆ ಸಿಕ್ಕಿಕೊಂಡ ಕೊರಡಾಗಿಬಿಡುತ್ತೇವೆ. ಯಾವುದೋ ಹಳೆಯ ಕಾಲವೇ ಶ್ರೇಷ್ಟವೆಂದು ಹಲುಬುತ್ತಾ ಅಲ್ಲೇ ಸ್ಥಗಿತವಾಗಿಬಿಡುತ್ತೇವೆ. ಇವತ್ತಿನ ನಮ್ಮ ಜೀವನ ನಿನ್ನೆಯ ಫಲಶೃತಿಯಾಗಿರುತ್ತದೆ. ‘ನಾವು ನಿನ್ನೆಯವರಾಗಿ ಬಾಳುತ್ತೇವೆ.’ ಎಂಬ ಒಂದು ಉಕ್ತಿ ಇದೆ. ನಾಳಿನ ನಮ್ಮ ಜೀವನವನ್ನು ಹಸನುಗೊಳಿಸಿಕೊಳ್ಳಲು ಇಂದಿನಿಂದಲೇ ಉತ್ತಮ ಪ್ರಯತ್ನದೊಂದಿಗೆ ರೂಪಿಸಿಕೊಳ್ಳಬೇಕಾಗುತ್ತದೆ. ಈಗ ನಾವು ಮಾಡುವ ಅತ್ಯುತ್ತಮವೆಂದುಕೊಳ್ಳುವ ಆಲೋಚನೆಗಳೂ ನಮ್ಮ ಹಿಂದಿನವರು ಆಲೋಚಿಸಿ, ಕೆಲವೊಮ್ಮೆ ದಾಖಲಿಸಿದವೇ ಆಗಿರುತ್ತವೆ ಎನ್ನುವುದೂ ನಂಬಲೇಬೇಕಾದ ಸತ್ಯವಾಗಿದೆ! ಈ ಲೇಖನವನ್ನು ಬರೆಯಲು ಪ್ರಾರಂಭಿಸಿ ಒಂದು ಪ್ಯಾರಾವನ್ನು (ನನ್ನದೇ ಸ್ವಂತವಾದ ಹೊಸ ಆಲೋಚನೆ ಎಂದುಕೊಂಡು!) ಬರೆದು ನಂತರ `ಹೊಸ ಚಿಗುರು, ಹಳೆ ಬೇರು........’ನೆನಪಾಗಿ ‘ಡಿ.ವಿ.ಜಿ. ಕೃತಿಶ್ರೇಣಿ’ಯಲ್ಲಿ `ಮಂಕುತಿಮ್ಮನ ಕಗ್ಗ’ವನ್ನು ತೆರೆದು ನೋಡಿದಾಗ ‘ಹೊಸತು-ಹಳತು’ಗೆ ಸಂಬಂಧಿಸಿದ ಅನೇಕ ಪದ್ಯಗಳಿದ್ದುದು ಕಂಡುಬಂದಿತು! ಈಗ ‘ಹೊಸತು’ ಯಾವುದು? ‘ಹಳತು’ ಯಾವುದು?
೨೦೧೦ನೇ ಇಸವಿಯು ಮುಕ್ತಾಯವಾಗಿ ೨೦೧೧ನೇ ಇಸವಿಯು ಪ್ರಾರಂಭವಾಗಿರುವ ಈ ಸಂದರ್ಭದಲ್ಲಿ ಹಳೆಯವರ್ಷ, ಹೊಸವರ್ಷ ಎನ್ನುವ ತಾರತಮ್ಯವೇಕೆ? ೨೦೧೦ರಲ್ಲಿ ನಾವು ಯಾವ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆಯೋ ಅದರ ಪ್ರತಿಲನವೇ ೨೦೧೧ ಆಗಿರುತ್ತದೆ. ಇಲ್ಲದೇ ಬರಿಗೈಯಲ್ಲಿ ಅಬ್ಬರ, ಆಡಂಬರಗಳೊಡನೆ ಸ್ವಾಗತಿಸಿದರೆ ನಮಗರಿವಿಲ್ಲದಂತೆಯೇ ದಿನಗಳುರುಳಿ ವರುಷವು ಜಾರಿಹೋಗುತ್ತದೆ.

‘ನವ ನವ ಪ್ರಶ್ನೆಗಳು, ನವ ನವ ಪರೀಕ್ಷೆಗಳು
ದಿವಸಾಬ್ಧ ಯುಗಚಕ್ರ ತಿರುತಿರುಗಿದಂತೆ
ಪ್ರವಹಿಪ್ಪುವದರಂತೆ ಪೌರುಷ ಹಿತಪ್ರಜ್ಞೆ
ಅವಿರತದ ಚೈತನ್ಯ -ಮಂಕುತಿಮ್ಮ.’ ಎಂದು ಡಿ.ವಿ.ಜಿ.ಯವರು ಹೇಳಿದಂತೆ ಕಾಲಗತಿಯಲ್ಲಿ ಹೊಸ ಹೊಸ ಪ್ರಶ್ನೆಗಳು, ಹೊಸ ಹೊಸ ಪರೀಕ್ಷೆಗಳನ್ನು ಎದುರಿಸಲು ನಮ್ಮನ್ನು ಸಮರ್ಥರಾಗಿಸಿಕೊಂಡು ನಮ್ಮಲ್ಲಿಯ ‘ಚೈತನ್ಯ'ವನ್ನು ನಿರಂತರವಾಗಿ ಕಾಯ್ದುಕೊಳ್ಳೋಣ.

ಎಲ್ಲರಿಗೂ ೨೦೧೧ರ ಶುಭಾಶಯಗಳು.

Friday, December 24, 2010

ಮನದ ಅ೦ಗಳದಿ.............೨೩. ದಿವ್ಯ ಚೇತನ

ಬಹಳ ಹಿಂದಿನಿಂದಲೂ ಒಂದು ನಂಬಿಕೆಯಿದೆ. ಭೂಮಿಯ ಮೇಲೆ ಅನ್ಯಾಯ, ಅಧರ್ಮಗಳು ಹೆಚ್ಚಾದಾಗ ದಿವ್ಯಶಕ್ತಿಯು ಜನ್ಮವೆತ್ತಿ ಧರ್ಮದ ಪುನಃಸ್ಥಾಪನಾ ಕಾರ್ಯವು ನಡೆಯುತ್ತದೆ, ಎಂದು. ಅದನ್ನೇ ಭಗವದ್ಗೀತೆಯಲ್ಲಿ ‘ಧರ್ಮ ಸಂಸ್ಥಾಪನಾಯಾರ್ಥಂ ಸಂಭವಾಮಿ ಯುಗೇ ಯುಗೇ’ ಎಂದು ಶ್ರೀ ಕೃಷ್ಣನು ಹೇಳಿದ್ದಾನೆ. ಈ ಭೂಮಿಯ ಮೇಲೆ ನಮ್ಮೆಲ್ಲರ ನಡುವೆಯೇ ನಮ್ಮೆಲ್ಲರಂತೆಯೇ ಜನಿಸಿ ತಮ್ಮ ಅದ್ವಿತೀಯ ಜ್ಞಾನ ಪ್ರಭೆಯಿಂದ, ಅನನ್ಯ ಪ್ರೀತಿಯಿಂದ ತಮ್ಮ ಅಂತರಾಳದ ದಿವ್ಯ ಸಂದೇಶವನ್ನು ಸಾರಿ ನಿರ್ಗಮಿಸಿದ ಚೇತನಗಳ ಬಗ್ಗೆಯೂ ತಿಳಿದುಕೊಳ್ಳುತ್ತಿದ್ದೇವೆ. ಭೂಮಂಡಲದ ಬೇರೆಬೇರೆ ಪ್ರದೇಶಗಳಲ್ಲಿ ಹುಟ್ಟಿ, ಬೆಳೆದು, ತಮ್ಮ ಅಂತಃಪ್ರಜ್ಞೆಗೆ ಗೋಚರಿಸಿದುದನ್ನು ಅವರು ಸಾರಿದ್ದರೂ ಮೂಲತಃ ಆ ಎಲ್ಲಾ ಚಿಂತನೆಗಳ ಸಾರವೂ ಒಂದೇ ಆಗಿರುವುದನ್ನು ಮನಗಾಣುತ್ತೇವೆ. ಏಕೆಂದರೆ ಅವೆಲ್ಲದರ ಮೂಲವೂ ಒಂದೇ ಆಗಿದೆ. ಪ್ರಕೃತಿಯು ಜೈವಿಕ, ಅಜೈವಿಕಗಳ ನಡುವೆ ಸಮತೋಲನವನ್ನು ಕಾಪಾಡಲು ಪ್ರಯತ್ನಿಸುತ್ತಿರುವಂತೆಯೇ ಮೌಲ್ಯಗಳು ಅಪಮೌಲ್ಯವಾಗದಂತೆಯೂ ಒಂದು ಪ್ರಯತ್ನ ನಡೆಯುತ್ತಿದೆಯೇನೋ ಎನಿಸುತ್ತದೆ. ಆದರೆ ಮನುಕುಲ ದಿವ್ಯ ಚೇತನಗಳು ನೀಡಿರುವ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಶಾಂತಿಯಿಂದ ಬಾಳದೇ ಒಂದೊಂದು ಪ್ರತ್ಯೇಕ ಗುಂಪಾಗಿ ತಮ್ಮನ್ನೇ ತಾವು ಶ್ರೇಷ್ಠರೆಂದು ಪರಿಗಣಿಸಿಕೊಂಡು, ಇತರ ಗುಂಪುಗಳನ್ನು ತುಚ್ಛೀಕರಿಸುತ್ತಾ, ಅಥವಾ ತಮ್ಮ ಗುಂಪಿನತ್ತ ಸೆಳೆದುಕೊಳ್ಳುವ ಪ್ರಯತ್ನ ನಡೆಸುತ್ತಾ ಅಶಾಂತಿಗೆ ಕಾರಣರಾಗುತ್ತಿದ್ದಾರೆ. ಮೌಢ್ಯದಿಂದ ಮೂಢನಂಬಿಕೆಗಳನ್ನೇ ಪೋಷಿಸಿಕೊಂಡು ಅವನತಿಗೆ ಪ್ರೇರಕರಾಗುತ್ತಿದ್ದಾರೆ. ಏನೇ ಆದರೂ ತಮ್ಮ ವಿಶಿಷ್ಟ ಆಲೋಚನಾ ಶಕ್ತಿಯಿಂದ, ಅಂತಃಸತ್ವದಿಂದ ಜಗತ್ತನ್ನು ಬೆಳಗುವ ಚೇತನಗಳು ಅಲ್ಲೊಂದು, ಇಲ್ಲೊಂದು ಉದಯಿಸುತ್ತಲೇ ಇವೆ! ಅಂಥಾ ಒಂದು ಚಿರ ಸ್ಮರಣೀಯ ಚೇತನ ಯೇಸುಕ್ರಿಸ್ತ.
ಒಬ್ಬ ವ್ಯಕ್ತಿಯ ಅಂತರಾಳವನ್ನು ಅರ್ಥಮಾಡಿಕೊಳ್ಳಬೇಕಾದರೆ ಆತನ ಮನದಾಳಕ್ಕಿಳಿಯುವ ಸಾಮರ್ಥ್ಯವನ್ನು ಹೊಂದಿರುವವರೇ ಆಗಬೇಕು. ಆಧ್ಯಾತ್ಮಿಕ ಕವಿ ಖಲೀಲ್ ಗಿಬ್ರಾನ್ ಅವರ ಅಪರೂಪವೆನಿಸುವ ಪುಸ್ತಕ Jesus, The Son Of Man (His Words and His deeds as told and recorded by those who knew Him) ದಲ್ಲಿ ಈ ಕೆಲಸವನ್ನು ಸಮರ್ಥವಾಗಿ ಕೈಗೊಂಡಿದ್ದಾರೆ. ‘ಖಲೀಲ್ ಗಿಬ್ರಾನ್’ ಪುಸ್ತಕದ ಲೇಖಕ ಪ್ರಭುಶಂಕರರು ಹೀಗೆ ಹೇಳುತ್ತಾರೆ, ‘ಇದು ಕಲ್ಪನೆಯ ಸೃಷ್ಟಿ. ಅವನನ್ನು ಕಂಡವರು, ಬಲ್ಲವರು ಹೇಗೆ ಹೇಳಿರಬಹುದು ಎಂಬುದನ್ನು ಅಂದಿನ ಆವರಣವನ್ನು ರಚಿಸಿಕೊಂಡು ಮತ್ತೆ ಸೃಷ್ಟಿ ಮಾಡಿದ್ದು ಮತ್ತೆ ಯೇಸು ನಮ್ಮ ನಡುವೆ ಬಾಳುತ್ತಿರುವಂತಹ ಅನುಭವವನ್ನು ತಂದಿದೆ ಗಿಬ್ರಾನನ ಕಲಾಮಯ ಲೇಖನಿ. ಅವನ ವರ್ಣ ಶಿಲ್ಪ, ಕಾವ್ಯ ಶಕ್ತಿ ಎರಡೂ ಒಂದು ಕಡೆ ಅಭೂತಪೂರ್ವವಾಗಿ ಮಿಳಿತವಾಗಿದ್ದರೆ ಅದು ಇಲ್ಲಿ. ಎಪ್ಪತ್ತು ಪಾತ್ರಗಳುಮಾತನಾಡುತ್ತವೆ. ಎಲ್ಲಾ ಈ ಲೆಬನಾನಿನ ವ್ಯಕ್ತಿಯ ಮೂಲಕ. ಎಪ್ಪತ್ತು ಪಾತ್ರಗಳಿಗೆ ಪ್ರತ್ಯೇಕ ವ್ಯಕ್ತಿತ್ವ ಉಂಟು. ಎಪ್ಪತ್ತು ಜತೆ ಕಣ್ಣುಗಳ ಮೂಲಕ ಕ್ರಿಸ್ತನನ್ನು ಕಂಡ ಭಾಗ್ಯ ಈತನದು.’
ಮೊದಲನೆಯ ನಿರೂಪಣೆ ಯೇಸುವಿನ ಶಿಷ್ಯರಲ್ಲಿ ಒಬ್ಬನಾದ ಜೇಮ್ಸನದು. ‘ಯೇಸು ಜೆರೂಸೆಲಮ್ಮಿನಲ್ಲಿ ಜನ ಸಮೂಹಕ್ಕೆ ಸ್ವರ್ಗದ ರಾಜ್ಯವನ್ನು ಕುರಿತು ಮಾತನಾಡಿದ. ಆತ ಕಾರಕೂನರನ್ನೂ ಕರ್ಮಜಡರನ್ನೂ ತೆಗಳಿದ. ಆಗ ಆ ಗುಂಪಿನಲ್ಲಿ ಕೆಲವರು ಅವರನ್ನೂ ವಹಿಸಿಕೊಂಡು ಯೇಸುವಿನ ಮೇಲೆ, ನಮ್ಮ ಮೇಲೆ ಕೂಡ ಕೈ ಮಾಡಬಂದರು. ಅಲ್ಲಿಂದ ಹೊರಟ ಯೇಸು ನಮ್ಮನ್ನು ಕುರಿತು ಹೀಗೆ ಹೇಳಿದ, ‘ನನ್ನ ಕಾಲ ಇನ್ನೂ ಬಂದಿಲ್ಲ. ನಾನು ನಿಮಗೆ ಹೇಳಬೇಕಾದ್ದು ಬಹಳ ಇದೆ. ನಾನು ಜಗತ್ತನ್ನು ಬಿಡುವ ಮೊದಲು ಮಾಡಬೇಕಾದ ಕೆಲಸವೂ ಬಹಳ ಇದೆ.’
ಎರಡನೆಯ ನಿರೂಪಣೆ ಅನ್ನ, ಮೇರಿಯ ತಾಯಿ, ಎಂದರೆ ಯೇಸುವಿನ ಅಜ್ಜಿಯದು. ಮೊಮ್ಮಗನ ಜನನ, ಮಗಳ ಭಾವನೆಗಳು, ಕ್ರಿಸ್ತನ ಸಾವನ್ನು ತಿಳಿಯದೆ, ಅವನನ್ನು ಕಾಣದೆ ಅವಳು ಪಡುವ ಪರಿತಾಪ ಇವುಗಳನ್ನು ಗಿಬ್ರಾನ್ ಹೃದಯಂಗಮವಾಗಿ ಚಿತ್ರಿಸಿದ್ದಾನೆ. ಅಜ್ಜಿ ಹೇಳುತ್ತಾಳೆ, ‘.....ಮಗು ದೇಹ, ಚೇತನಗಳಲ್ಲಿ ಬೆಳೆಯಿತು. ಅದಕ್ಕೂ ಇತರ ಮಕ್ಕಳಿಗೂ ವ್ಯತ್ಯಾಸವಿತ್ತು.ಅದು ತನ್ನಷ್ಟಕ್ಕೆ ತಾನು ಇರುತ್ತಿತ್ತು.ಅದನ್ನು ಹತೋಟಿಯಲ್ಲಿಡುವುದೇ ಕಷ್ಟವಾಗಿತ್ತು. ಅವನನ್ನು ಹೊಡೆಯುವುದು ನನಗೆ ಸಾಧ್ಯವೇ ಇರಲಿಲ್ಲ. ಆದರೆ ನಜರೆತ್ ನಲ್ಲಿ ಎಲ್ಲರೂ ಅವನನ್ನು ಪ್ರೀತಿಸುತ್ತಿದ್ದರು. ಅದು ಏಕೆ ಎಂದು ನನ್ನ ಹೃದಯಕ್ಕೆ ತಿಳಿದಿತ್ತು. ಅನೇಕ ಸಲ ಅವನು ಆಹಾರವನ್ನು ತೆಗೆದುಕೊಂಡು ಹೋಗಿ ದಾರಿಯಲ್ಲಿ ಹೋಗುವವರಿಗೆ ಕೊಟ್ಟುಬಿಡುತ್ತಿದ್ದ.ಅವನಿಗೆ ತಿನ್ನಲು ಎಂದು ಕೊಟ್ಟ ಸಿಹಿಯನ್ನು ತಾನು ರುಚಿ ನೋಡದೆ ಉಳಿದ ಮಕ್ಕಳಿಗೆ ಹಂಚುತ್ತಿದ್ದ. ನಮ್ಮ ತೋಟದ ಮರಗಳನ್ನು ಹತ್ತಿ ಹಣ್ಣುಗಳನ್ನು ಕೀಳುತ್ತಿದ್ದ, ಆದರೆ ಅದು ಅವನಿಗಲ್ಲ! ಮಲಗಲೆಂದುನಾನು ಹಾಸಿಗೆಗೆ ಒಯ್ದಾಗ ಅವನು ಹೇಳುತ್ತಿದ್ದ: ನಮ್ಮ ಅಮ್ಮನಿಗೂ ಬೇರೆಯವರಿಗೂ ಹೇಳು, ನನ್ನ ದೇಹ ಮಾತ್ರ ನಿದ್ರಿಸುತ್ತದೆ. ನನ್ನ ಮನಸ್ಸೆಲ್ಲಾ ಅವರ ಜೊತೆ ಇರುತ್ತದೆ, ಅವರ ಮನಸ್ಸು ನನ್ನ ಬೆಳಗ್ಗೆಗೆ ಬರುವವರೆಗೂ.....’
ಅತ್ಯಂತ ಹೃದಯಂಗಮವಾದ ನಿರೂಪಣೆ ಮೇರಿ ಮಗ್ದಲೀನಳದು. ‘ನಾನಾಗ ನನ್ನ ಆತ್ಮದಿಂದ ವಿಚ್ಛೇದನ ಪಡೆದಿದ್ದ ಹೆಂಗಸಾಗಿದ್ದೆ......ಆದರೆ ಆತನ ಉಷಸ್ಸಿನ ಕಣ್ಣುಗಳು ನನ್ನ ಕಣ್ಣುಗಳ ಒಳಗನ್ನು ನೋಡಿದಾಗ ನನ್ನ ರಾತ್ರಿಯ ನಕ್ಷತ್ರಗಳು ಮಾಸಿಹೋದವು. ನನ್ನೊಳಗಿನ ವಿಷಸರ್ಪ ನಾಶವಾಯಿತು. ನಾನು ಮಿರಿಯಮ್, ಬರೀ ಮಿರಿಯಮ್ ಆದೆ....’
ಮತ್ತೊಬ್ಬಳು ಜೇವಾನಾ, ಅವಳು ತನ್ನ ಪ್ರಿಯನ ಜೊತೆಯಲ್ಲಿದ್ದಾಗ ಹಿಡಿದು ಯೇಸು ಉಪದೇಶ ಕೊಡುತ್ತಿದ್ದ ಕಡೆಗೆ ಕರೆದುಕೊಂಡು ಹೋಗುತ್ತಾರೆ. ‘ಅವರ ಉದ್ದೇಶ ಯೇಸುವಿನ ಮುಂದೆ ನನ್ನನ್ನು ನಿಲ್ಲಿಸಿ ಅವರನ್ನು ಪರೀಕ್ಷಿಸಿ ಬೋನಿಗೆ ಬೀಳಿಸುವುದು. ಆದರೆ ಯೇಸುಸ್ವಾಮಿ ನನ್ನನ್ನು ವಿಚಾರಣೆ ಮಾಡಲಿಲ್ಲ. ನನ್ನನ್ನು ನಾಚಿಕೆಗೆ ಗುರಿಮಾಡಿದ್ದವರನ್ನೇ ನಾಚಿಕೆಗೆ ಗುರಿಮಾಡಿದರು. ಅವರನ್ನೇ ದೂಷಿಸಿದರು....ಬಳಿಕ ಬದುಕಿನ ಎಲ್ಲ ರುಚಿಹೀನ ಫಲಗಳೂ ನನ್ನ ಬಾಯಿಗೆ ಮಧುರವಾದವು, ವಾಸನೆಯಿಲ್ಲದ ಹೂಗಳೆಲ್ಲಾ ನನ್ನ ಮೂಗಿಗೆ ಕಂಪನ್ನು ಸೂಸಿದವು. ಕಳಂಕವಿಲ್ಲದ ನೆನಪುಗಳ ಹೆಣ್ಣು ನಾನಾದೆ. ಸ್ವತಂತ್ರಳಾದೆ, ಇತರರೆದುರು ತಲೆತಗ್ಗಿಸಬೇಕಾದ ಸ್ಥಿತಿಯಿಂದ ಬಿಡುಗಡೆ ಪಡೆದೆ.’........
ಇನ್ನು ಆತ ದೂಷಿಸಿದವರ ದೃಷ್ಟಿಯಿಂದಲೂ ಗಿಬ್ರಾನ್ ಯೇಸುವನ್ನು ನೋಡಿದ್ದಾನೆ. ದೂಷಕರ ಪಂಕ್ತಿಯಲ್ಲಿ ಸೃಷ್ಟಿಯಾಗಿರುವ ‘ಗಲಿಲಿಯಾದ ವಿಧವೆ’ ಎಂಬುದು ಒಂದು ಕರುಣೆಯ ಕಾವ್ಯ. ಯೇಸುವಿನ ವ್ಯಕ್ತಿತ್ವದಿಂದ ಆಕರ್ಷಿತನಾದ ಆಕೆಯ ಮಗ ಯೇಸುವಿನೊಡನೆ ಹೊರಟುಹೋದ. ಇದರಿಂದ ಅಳಿಸಲಾಗದ ದ್ವೇಷವನ್ನು ಹೊಂದಿದ ಆಕೆ ಹೀಗೆ ಹೇಳುತ್ತಾಳೆ, ‘......ನಜರೆತ್ತಿನ ಯೇಸು ದುಷ್ಟ. ಏಕೆಂದರೆ ಯಾವ ಸಜ್ಜನ ತಾನೆ ತಾಯಿ ಮಕ್ಕಳನ್ನು ಅಗಲಿಸುತ್ತಾನೆ?........’
ಗಿಬ್ರಾನನ ಕಣ್ಣಿನಲ್ಲಿ ಕ್ರಿಸ್ತ ದಿವ್ಯ ಜ್ಞಾನ ಪಡೆದ ಮಾನವ, ಎಲ್ಲೆಯಿಲ್ಲದ, ಅಳೆಯಲಾರದ ಶಕ್ತಿಯನ್ನು ಪಡೆದವನು, ಪರಮ ಕವಿ! ಕೊನೆಯಲ್ಲಿ ಒಂದು ದೀರ್ಘ ಕವನವನ್ನು ಬರೆದು ಅದರಲ್ಲಿ ಯೇಸು ನಮ್ಮ ನಡುವೆ ಇನ್ನೂ ಇದ್ದಾನೆ, ಅವನ ಬದುಕಿಗೆ ಸಂಬಂಧಪಟ್ಟವರು, ಅವನನ್ನು ಬದುಕಿನಲ್ಲಿ ಕಂಡವರು ನಮ್ಮ ನಡುವೆ ಇನ್ನೂ ಇದ್ದಾರೆ ಎಂದು ತೋರಿಸಿದ್ದಾನೆ!
ಪ್ರೀತಿ, ಕರುಣೆ, ಕ್ಷಮಾಗುಣವನ್ನು ತನ್ನ ಉಸಿರಾಗಿಸಿಕೊಂಡಿದ್ದು ಜಗತ್ತಿನ ಕಲ್ಯಾಣಕ್ಕಾಗಿ ತನ್ನನ್ನೇ ಅರ್ಪಿಸಿಕೊಂಡ ಯೇಸುವಿನ ಜನ್ಮದಿನದ ಈ ಸಂದರ್ಭದಲ್ಲಿ ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.

Friday, December 17, 2010

ಮನದ ಅ೦ಗಳದಿ........22 ಸೌಂದರ್ಯ-ಕುರೂಪ

ಸಾಮಾನ್ಯವಾಗಿ ಯಾರನ್ನಾದರೂ ಪರಿಚಿತರನ್ನು ಅಪರೂಪಕ್ಕೊಮ್ಮೆ ನೋಡಿದಾಗ ಮೊದಲು ನಾವು ಗಮನಿಸುವುದು ಅವರು ದಪ್ಪವಾಗಿದ್ದಾರೊ-ತೆಳ್ಳಗಾಗಿದ್ದಾರೊ ಅಥವಾ ಕಪ್ಪಗಾಗಿದ್ದಾರೊ-ಬೆಳ್ಳಗಾಗಿದ್ದಾರೊ ಎಂದು. ಸಲಿಗೆ ಇದ್ದರೆ ನೇರವಾಗಿ ಹೇಳಿಯೂ ಬಿಡುತ್ತೇವೆ. ವ್ಯಕ್ತಿಯ ಬಾಹ್ಯ ರೂಪಕ್ಕೆ ನಾವು ಕೊಡುವ ಪ್ರಾಮುಖ್ಯತೆಯೇ ಇದಕ್ಕೆ ಕಾರಣವಾಗಿರಲೂ ಬಹುದು. ಒಬ್ಬರನ್ನು ‘ಸುಂದರ’ ಎಂದು ಪರಿಗಣಿಸಬೇಕಾದರೆ ಅವರ ಎತ್ತರ, ಗಾತ್ರ, ಬಣ್ಣ ಇವುಗಳನ್ನೇ ಪ್ರಮುಖವಾಗಿ ಪರಿಗಣಿಸುತ್ತೇವೆ. ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಮದುವೆ ಮಾಡುವಾಗ ವಧೂ-ವರರನ್ನು ಜೋಡಿಸುವಾಗ ಅವರ ಬಾಹ್ಯ ಗೋಚರತೆಗೇ ಹೆಚ್ಚಿನ ಒತ್ತು ನೀಡುತ್ತಿದ್ದರು ಎನ್ನುವುದಕ್ಕೆ ವರಸಾಮ್ಯ ಎನ್ನುವ ಪದವೇ ಸಾಕ್ಷಿಯಾಗಿದೆ. ಇತ್ತೀಚೆಗೆ ಹೆಚ್ಚಾಗಿ ನಡೆಸುತ್ತಿರುವ ಸೌಂದರ್ಯ ಸ್ಪರ್ಧೆಗಳಲ್ಲಿ ದೇಹದ ಅಳತೆಯೇ ಪ್ರಮುಖ ಮಾನದಂಡವಾಗಿದೆ. ಈ ಅಳತೆಗಳು ಆರೋಗ್ಯ ಸೂಚಕವಾಗಿಯೂ ಇರಬಹುದು ಎಂದೂ ಎಷ್ಟೋ ಭಾರಿ ಅಂದುಕೊಂಡಿದ್ದೇನೆ. ಆದರೆ ವ್ಯಕ್ತಿಯನ್ನು ವಸ್ತುವಿನ ಮಟ್ಟಕ್ಕೆ ಇಳಿಸುವಷ್ಟು ಅತಿರೇಕವನ್ನು ಕಾಣುತ್ತಿರುವುದು ವಿಷಾದನೀಯ. ಆರೋಗ್ಯವಂತ ವ್ಯಕ್ತಿ ಹೇಗಿದ್ದರೂ ಸುಂದರನೇ. ಆದರೆ ಆರೋಗ್ಯ ಹಾಗೂ ಸೌಂದರ್ಯ ದೇಹಕ್ಕಷ್ಟೇ ಸೀಮಿತವಲ. ಒಬ್ಬ ವ್ಯಕ್ತಿಯಲ್ಲಿ ನಿಜವಾದ ಸೌಂದರ್ಯ ಹೊರಹೊಮ್ಮಬೇಕಾದರೆ ಅಂತರಂಗದ ಸೌಂದರ್ಯವನ್ನೂ ಹೊಂದಿರುವುದು ಬಹಳ ಅಗತ್ಯವಾಗುತ್ತದೆ. ‘ಸುಂದರನಾದ ಮೂರ್ಖನು ಕಣ್ಣಿಗೆ ಆನಂದವನ್ನೂ ಮನಸ್ಸಿಗೆ ನೋವನ್ನೂ ಉಂಟುಮಾಡುತ್ತಾನೆ’ ಎನ್ನುವ ಒಂದು ಉಕ್ತಿ ಇದೆ!
ಆತ್ಮೀಯ ಅನುಬಂಧ ಇರುವೆಡೆ ನಾವು ಸೌಂದರ್ಯವನ್ನು ಕಾಣುತ್ತೇವೆ. ‘ಮಜನೂ ದೃಷ್ಟಿ' ಎನ್ನುವ ಹನಿಗವನ ಈ ರೀತಿ ಇದೆ,

‘ಸೌಂದರ್ಯ ಅಡಗಿರುವುದು
ನೋಡುವ ಕಣ್ಣುಗಳಲ್ಲಲ್ಲ
ಆಸ್ವಾದಿಸುವ ಮನಗಳಲ್ಲಿ,
ಎಲ್ಲರ ಕಣ್ಣಿನಲ್ಲಿ
ಸಾಮಾನ್ಯ ಲೈಲಾ
ಮಜನೂ ದೃಷ್ಟಿಯಲ್ಲಿ
ಮನೋಜ್ಞ ಚೆಲುವೆ!’

ನಮ್ಮ ಹಾಗೂ ಇತರ ಎಲ್ಲಾ ಪುರಾಣ, ಪುಣ್ಯಕಥೆಗಳಲ್ಲಿಯೂ ದೇವತೆಗಳೆಂದರೆ ಪರಮ ಸೌಂದರ್ಯದ ಖನಿಗಳಂತೆಯೂ, ರಾಕ್ಷಸರು ಹಾಗೂ ಭೂತ-ಪ್ರೇತಗಳನ್ನು ವಿಕಾರರೂಪದ ಕುರೂಪಿಗಳಂತೆಯೂ ಚಿತ್ರಿಸಿರುವುದನ್ನು ಕಾಣುತ್ತೇವೆ. ಏಕೆ ಹೀಗೆ ಎಂದು ಮೊದಲು ಬಹಳವಾಗಿ ಚಿಂತಿಸುತ್ತಿದ್ದೆ. ಈಗ ತಿಳಿದಂತೆ ದೇವತೆ ಎಂಬ ಕಲ್ಪನೆಯೇ ಆಂತರಿಕ ಹಾಗೂ ಬಾಹ್ಯವಾಗಿ ಧನಾತ್ಮಕತೆಯಿಂದ ಕೂಡಿದೆ. ಎಲ್ಲಾ ದೇವತೆಗಳೂ ಒಳ್ಳೆಯವರೇ! ಅವರು ಕೆಟ್ಟ ಆಲೋಚನೆ ಅಥವಾ ಕಾರ್ಯವನ್ನು ಮಾಡಿದಾಗ ಶಾಪ ಉಂಟಾಗಿ ಕುರೂಪಿಗಳಾಗುತ್ತಾರೆ! ಸಂಪೂರ್ಣವಾಗಿ ಋಣಾತ್ಮಕ ಅಂಶಗಳಿಂದಲೇ ಆಗಿರುವುದೆಲ್ಲಾ ಕುರೂಪ ಎಂದು ಕಲ್ಪನೆ ಮಾಡಿರಬಹುದೆನಿಸುತ್ತದೆ. ಆದರೆ ವಾಸ್ತವವಾಗಿ ಯಾವುದೂ ಶೇಕಡಾ ನೂರರಷ್ಟು ಒಳ್ಳೆಯದು ಅಥವಾ ಕೆಟ್ಟದಾಗಿರುವುದು ಕಂಡುಬರುವುದಿಲ್ಲ,
ಪ್ರಭುಶಂಕರ ಅವರು ತಮ್ಮ `ಖಲೀಲ್ ಗಿಬ್ರಾನ್’’ ಕೃತಿಯಲ್ಲಿ ಹೀಗೆ ಹೇಳುತ್ತಾರೆ, ಲೋಕದಲ್ಲಿ ನಾವು ಯಾವುದನ್ನು ಸೌಂದರ್ಯ ಎನ್ನುತ್ತೇವೆಯೋ-ಎಂದು ಭ್ರಮಿಸುತ್ತೇವೆಯೋ ಎಂಬುದು ಸರಿಹೊಂದಬಹುದು-ಅದು ಸೌಂದರ್ಯ ಆಗಿರಬಹುದು, ಆಗಿಲ್ಲದೆಯೂ ಇರಬಹುದು. ಹಾಗೆಯೇ ಅಸೌಂದರ್ಯದ ವಿಷಯವೂ ಆಗಿದೆ. ಅಲ್ಲೂ ಭ್ರಮೆ ಸಾಧ್ಯ. ಬಹುಷಃ ಸುಂದರವಲ್ಲದ್ದನ್ನು ಜನ ಹೊಗಳಿ, ಸುಂದರವಾದದ್ದನ್ನು ಅಸುಂದರ ಎಂದು ಕರೆದದ್ದು ಅವನ ಮನಸ್ಸನ್ನು ಕಲಕಿತ್ತೋ ಏನೋ. ಉಡುಪುಗಳು (Garments) ಎಂಬ ಒಂದು ದೃಷ್ಟಾಂತದಲ್ಲಿ ಅದನ್ನು ಸೂಚಿಸಿದ್ದಾನೆ.
‘ಒಂದು ದಿನ ಸೌಂದರ್ಯ ಮತ್ತು ಕುರೂಪ ಒಂದು ಸಮುದ್ರ ತೀರದಲ್ಲಿ ಭೇಟಿಯಾದರು. ಒಬ್ಬರಿಗೊಬ್ಬರು ಹೇಳಿಕೊಂಡರು, ‘ನಾವು ಸಮುದ್ರ ಸ್ನಾನ ಮಾಡೋಣ.’
ಅವರಿಬ್ಬರೂ ಬಟ್ಟೆ ಬಿಚ್ಚಿ ಸ್ನಾನಕ್ಕೆ ಹೋದರು. ಸ್ವಲ್ಪ ಹೊತ್ತಾದ ಮೇಲೆ ಕುರೂಪ ದಂಡೆಗೆ ಬಂದು ಸೌಂದರ್ಯದ ಬಟ್ಟೆಗಳನ್ನು ಹಾಕಿಕೊಂಡು ನಡೆದುಬಿಟ್ಟಿತು. ಸೌಂದರ್ಯ ದಂಡೆಗೆ ಬಂದು ನೋಡಿದರೆ ತನ್ನ ಬಟ್ಟೆ ಇಲ್ಲ. ಬತ್ತಲೆ ಇರಲು ನಾಚಿಕೆಯಾಗಿ ಕುರೂಪದ ಉಡುಪನ್ನು ಹಾಕಿಕೊಂಡು ತನ್ನ ದಾರಿ ಹಿಡಿಯಿತು.
ಇಂದಿಗೂ ಜನ ಸೌಂದರ್ಯ ಕುರೂಪಗಳನ್ನು ತಪ್ಪಾಗಿಯೇ ತಿಳಿಯುತ್ತಾರೆ. ಆದರೆ ಕೆಲವರಿದ್ದಾರೆ, ಸೌಂದರ್ಯದ ಮುಖವನ್ನು ನೋಡಿದವರು. ಉಡುಪು ಕುರೂಪದ್ದೇ ಆದರೂ ಅವರು ಸೌಂದರ್ಯವನ್ನು ಬಲ್ಲರು. ಮತ್ತೆ ಕೆಲವರು, ಕುರೂಪವನ್ನು ಬಲ್ಲವರೂ ಇದ್ದಾರೆ. ಅವರಿಗೆ ಸೌಂದರ್ಯದ ಉಡುಪು ಕುರೂಪವನ್ನು ಮುಚ್ಚಿಡಲಾರದು.’

ನಾವು ನಮ್ಮ ಬಾಹ್ಯ ಸೌಂದರ್ಯಕ್ಕಷ್ಟೇ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ಆಂತರಿಕವಾಗಿ ಕುಸಿಯುತ್ತಿದ್ದೇವೇನೋ ಎನಿಸುತ್ತಿದೆ. ನಮ್ಮ ಅಂತರಂಗವನ್ನು ಸದೃಢಗೊಳಿಸಿಕೊಂಡು ನಮ್ಮಲ್ಲಿ ನೆಲೆಸಿರಬಹುದಾದ ಕುರೂಪವನ್ನು ಹೊರದೂಡುವ ಪ್ರಯತ್ನವನ್ನು ಕೈಗೊಳ್ಳಬೇಕಾಗಿದೆ.

Tuesday, December 14, 2010

ಜೇಬಾಯಣ

ಕಲ್ಯಾಣ ಸೇವೆ ಜೇಬಿನ ಬುಡದಲಿ
ಪುಟ್ಟಾಣಿಯ ಪುರಿ ಮೇಲೊಂದಿಷ್ಟು
ಗೋಲಿ ಬಳಪ ಮತ್ತೊಂದಿಷ್ಟು
ಬಂದ, ಬಂದ, ಸಣ್ತಮ್ಮಣ್ಣ
ಈ ಪದ್ಯವನ್ನು (ಆಗ `ಕವನ’ ಎಂದರೆ ಏನೆಂದೇ ನನಗೆ ತಿಳಿದಿರಲಿಲ್ಲ!) ಓದುವಾಗಲೆಲ್ಲಾ ನನಗೆ ಬಹಳ ದು:ಖವಾಗುತಿತ್ತು. ಏಕೆಂದರೆ ನನ್ನ ಕತ್ತಿನಿಂದ ಕಾಲಿನವರೆಗೂ ಇದ್ದ ಉದ್ದ ಲಂಗ, ರವಿಕೆಗಳಲ್ಲಿ ಒಂದಾದರೂ ಜೇಬಿರಲಿಲ್ಲ. ಅದೇ ಮಂಡಿಯ ಮೇಲಿದ್ದ ನನ್ನ ತಮ್ಮನ ನಿಕ್ಕರ್ನಲ್ಲಿ ಮೂರು, ನಾಲ್ಕು ಜೇಬುಗಳಿರುತ್ತಿದ್ದವು. ಅವು ಯಾವಾಗಲೂ ಹಬ್ಬಗಳಿಗನುಗುಣವಾಗಿ ವಿಶೇಷ ಖಾದ್ಯಗಳಿಂದ ತುಂಬಿ ತುಳುಕುತ್ತಾ ಅವನ ಜಿಹ್ವೆಯನ್ನು ಸದಾ ಕ್ರಿಯಾಶೀಲವಾಗಿರಿಸಿ, ತತ್ ಪರಿಣಾಮವಾಗಿ ಅವನನ್ನು ಅಪರಿಮಿತ ಶಕ್ತಿಶಾಲಿಯನ್ನಾಗಿಸಿದ್ದವು (ಪಕ್ಷಿಗಳಂತೆ!). ಗೌರಿಹಬ್ಬದಲ್ಲಿ ಅವನ ಜೇಬುಗಳು ಚಕ್ಕ್ಕುಲಿ, ಕೋಡುಬಳೆ, ಮುಚ್ಚೋರೆ, ತೇಂಕೊಳಲು.....ಗಳಿಂದ ತುಂಬಿದ್ದು, ರಾತ್ರಿ ಯಾವಾಗಲಾದರೂ ಎಚ್ಚರವಾದಾಗಲೂ ಅವನ ಕಡೆಯಿಂದ `ಕಟಂ, ಕುಟುಂ’ ಶಬ್ದ ಕೇಳಿಬರುವಂತೆ ಮಾಡುತ್ತಿದ್ದವು. ಈಗಿನಂತೆ ಡಿಟರ್ಜಂಟ್ಗಳಿಲ್ಲದ ಆ ಕಾಲದಲ್ಲಿ ಅಮ್ಮ ಎಣ್ಣೆಯಿಂದ ಮೊಣಕಾದ ಅವನ ನಿಕ್ಕರ್ ಜೇಬುಗಳನ್ನು ಶುಚಿಗೊಳಿಸಲಾಗದೇ ಹೆಣಗಾಡುತ್ತಿದ್ದರು! ಸಂಕ್ರಾಂತಿ ಬಂತೆಂದರೆ ಅವನ ಜೇಬುಗಳಲ್ಲಿ ಎಳ್ಳು (ಪಂಚಕಜ್ಜಾಯ!) ತುಂಬಿರುತ್ತಿತ್ತು. ಕಳೆದ ಸಂಕ್ರಾಂತಿಯಲ್ಲಿ ಅವನು ತಿಂದ ಎಳ್ಳಿನ ಪ್ರಭಾವದಿಂದ ಕಣ್ಣೆಲ್ಲಾ ಹಳದಿಯಾಗಿ ಜಾಂಡೀಸ್ ಬಂದಿರಬಹುದೆಂದು ಚಿಕಿತ್ಸೆ ಮಾಡಿಸಿದರೂ ಫಲಕಾರಿಯಾಗದೇ ಅಜ್ಜಿ `ಹಲವು ದೇವರಿಗೆ ಹರಕೆ’ ಹೊತ್ತದ್ದೂ ಆಗಿ ಅವನಿಗೆ `ಮುಡಿ’ಯನ್ನೂ ಬಿಟ್ಟಿದ್ದರು! ಅವನು ಒದಗಿಸುತ್ತಿದ್ದ `ಗೊಬ್ಬರ’ದಿಂದಲೋ ಏನೋ ಅವನ ಕೂದಲು ಹುಟ್ಟಿದಾಗಿನಿಂದಲೂ ಕತ್ತರಿ ಸೋಂಕದೇ ಬೆಳೆದಿದ್ದ ನಮ್ಮ ಕೂದಲಿಗಿಂತಲೂ ಉದ್ದವಾಗಿ ಬೆಳೆದಿತ್ತು! ಎರಡು ಜಡೆ ಹೆಣೆದು ಮೇಲೆ ಕಟ್ಟುತ್ತಿದ್ದ ಈ ಬದನೇಕಾಯಿ ಜಡೆಗಳೇ ಅವನು ಶಾಲೆಯಲ್ಲಿ ನಡೆಸುತ್ತಿದ್ದ ಎಲ್ಲಾ `ಫೈಟಿಂಗ್’ಗಳಿಗೂ ಮೂಲವಾಗುತ್ತಿದ್ದವು! `ಜೇಬು’ಗಳಿಂದ ಉಂಟಾದ ವಿಶೇಷ ಶಕ್ತಿ ಸಂಚಯನದಿಂದ ಅವನ ಎದುರಾಳಿಗಳು ಹಣ್ಣುಗಾಯಿ ನೀರುಗಾಯಾಗಿ ಅವನು ವಾರಗಟ್ಟಲೇ ಶಾಲೆಗೆ ಚಕ್ಕರ್ ಹೊಡೆಯುವಂತಾಗುತ್ತಿತ್ತು. ಹೀಗೆ ಚಿಕ್ಕವನಾಗಿದ್ದಾಗ ಜೇಬಿನ ಸಂಪೂರ್ಣ ಪ್ರಯೋಜನ ಪಡೆದ ನನ್ನ ತಮ್ಮ ಈಗಲೂ ಜೇಬನ್ನು ತುಂಬಿಸುವತ್ತಲೇ ವಿಶೇಷ ಗಮನ ಹರಿಸಿ ನನಗೆ ಆರ್ಥಿಕವಾಗಿ ಆಧಾರಸ್ಥಂಭವಾಗೇ ಇದ್ದಾನೆ!
`ಜೇಬು’ ಎನ್ನುವುದೇ `ಆರ್ಥಿಕತೆ’ಯ (`ಹಣ’ದ) ಸಂಕೇತವಾಗಿದೆ. ‘ಜೇಬು ಖಾಲಿಯಾಗಿದೆ’ ಅಂತ ಹೇಳೋದನ್ನ ನಾವು ಕೇಳ್ತಾನೇ ಇರ್ತೀವಲ್ಲ! ಸಾಮಾನ್ಯವಾಗಿ ನಮ್ಮ ಭಾರತೀಯ ಸಾಂಪ್ರದಾಯಿಕ ಉಡುಗೆಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಜೇಬಿನ ಅಸ್ಥಿತ್ವವೇ ಕಂಡುಬರುವುದಿಲ್ಲ. ಪುರುಷರು ಧರಿಸುತ್ತಿದ್ದ ಪಂಚೆ, ಶಲ್ಯಗಳಲ್ಲಾಗಲೀ, ಸ್ತ್ರೀಯರು ಧರಿಸುತ್ತಿದ್ದ, ಈಗಲೂ ಸಂಪ್ರದಾಯವನ್ನು ಉಳಿಸುವ ಹೊಣೆ ಹೊತ್ತು ಧರಿಸುತ್ತಲೇ ಇರುವ (ನನ್ನಂಥವರು!) ಸೀರೆಯಲ್ಲಾಗಲೀ ಜೇಬಿನ ಸುಳಿವೇ ಇಲ್ಲ. ಆ ಕಾಲಕ್ಕೆ ಹಣದ ಬಗ್ಗೆ ಅವರಿಗಿದ್ದ ನಿರ್ಲಿಪ್ತತೆಯನ್ನೋ ಅಥವಾ (ಅಪ್ರಾಮುಖ್ಯತೆಯನ್ನೋ) ಆ ಉಡುಗೆಗಳೇ ತೋರಿಸುತ್ತವೆ. ಕ್ರಮೇಣ ಕಾಲ ಬದಲಾದಂತೆ ಬರುತ್ತಿದ್ದ ಆರು ಕಾಸನ್ನೋ ,ಮೂರುಕಾಸನ್ನೋ ತಮ್ಮ ಸೊಂಟಕ್ಕೆ (ಪಂಚೆ ಕಟ್ಟಿಕೊಳ್ಳುತ್ತಿದ್ದ ಜಾಗ!) ಗಂಡಸರು ಸಿಕ್ಕಿಸಿಕೊಂಡರೆ, ಹೆಂಗಸರು ತಮ್ಮ ಬಾಳೆಕಾಯಿಗೆ (ಸೀರೆಯ ನೆರಿಗೆ ಸುರುಳಿಸುತ್ತಿ ಸಿಕ್ಕಿಸುತ್ತಿದ್ದ ರಚನೆ!) ಸಿಕ್ಕಿಸಿಕೊಳ್ಳುತ್ತಿದ್ದರು! ವಿದೇಶೀಯರು ನ ಮ್` ದೇಶವನ್ನು ತಮ್ಮ ಜೇಬು ತುಂಬಿಸಿಕೊಳ್ಳಲು ಆಕ್ರಮಿಸಿದಂತೆ, ಅವರ ಉಡುಗೆಗಳಲ್ಲಿ ಧಾರಾಳವಾಗಿದ್ದ ಜೇಬುಗಳೂ ಆಗಮಿಸಿದವು! ಆ ಜೇಬುಗಳ ಪ್ರಾಮುಖ್ಯತೆಯನ್ನು ಕ್ರಮೇಣ ಮನಗಂಡ ನಮ್ಮ ಭಾರತಮಾತೆಯ `ಗಂಡು’ ಸಂತಾನ ಆ ಉಡುಗೆಗಳನ್ನೇ ತಮ್ಮದಾಗಿಸಿಕೊಂಡರು. ಮಹಿಳೆಯರು ತಮ್ಮನ್ನೇ ಆರ್ಥಿಕವಾಗಿ ಅವಲಂಬಿಸಬೇಕೆಂಬ ಹಂಬಲದಿಂದಲೋ ಏನೋ ಅವರಿಗೆ ಸಂಪ್ರದಾಯದ ಸಂಕಲೆ ಬಿಗಿದು ಹದಿನಾರು ಮೊಳದ ಸೀರೆಯ ಸೆರೆಯಲ್ಲೇ ಉಳಿಸಿಬಿಟ್ಟರು. ಅಮ್ಮನ ಕಾಲಕ್ಕೆ ಅದು ಹನ್ನೆರಡು ಮೊಳವಾಗಿ, ಈಗ ಐದೂವರೆ ಮೀಟರ್ ಆಗಿ ನನ್ನಂಥವರ ಮೇಲೆ ರಾರಾಜಿಸುತ್ತಾ ಆರ್ಥಿಕ ಪರಾವಲಂಬನೆಯ ಸಂಕೇತವಾಗಿ ಉಳಿದುಬಿಟ್ಟಿದೆ! ನಮ್ಮ ಹಳ್ಳಿಯ ಕಡೆ ಮಹಿಳೆಯರು ‘ಎಲಡಿಕೆಚೀಲ’ (ಎಲೆ-ಅಡಿಕೆ ಚೀಲ) ಎನ್ನುವ ಒಂದು ೨-೩ಅಂಕಣಗಳಿರುವ ಪುಟ್ಟ ಚೀಲವೊಂದನ್ನು ತಮ್ಮ ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಿದ್ದರು. ಇದೂ ಒಂದುರೀತಿ ಜೇಬಿನ ಪರ್ಯಾಯ ವ್ಯವಸ್ಥೆಯೇ ಆಗಿತ್ತು! ಜೇಬಿನ ಸೌಕರ್ಯವಿಲ್ಲದ ನನ್ನಂಥಾ ಮಹಿಳೆಯರ ಪಾಡಂತೂ ಹೇಳತೀರದು. ಅದಕ್ಕಂದೇ ಇರಬಹುದು, `ವ್ಯಾನಿಟಿ ಬ್ಯಾಗ್’ ( ಯಾರೋ ಕುಹಕಿಗಳೇ ಈ ಹೆಸರು ಇಟ್ಟಿರಬಹುದು. `ವ್ಯಾನಿಟಿ’ ಎಂದರೆ `ಜಂಬ’ ಅಂತ. ಒಂದು ಕಾಲಕ್ಕೆ ಇದು `ಜಂಬದ ಚೀಲ’ ಆಗಿದ್ದಿರಲೂ ಬಹುದು. ಆದರೆ ಈಗಂತೂ ಇದು ನಿಜಕ್ಕೂ `ನೆಸೆಸ್ಸಿಟಿ’ ಎಂದರೆ `ಅಗತ್ಯ’ ಚೀಲವೇ ಆಗಿದೆ) ಎಂಬ `ಬಾಹ್ಯ ಜೇಬು’ ಆರ್ಥಿಕ ಸ್ವಾವಲಂಬಿಯಾದ ಉದ್ಯೋಗಸ್ಥ ಮಹಿಳೆಯ ಹೆಗಲೇರಿದ್ದು! ಇಂಥಾ ಬಾಹ್ಯ ಜೇಬನ್ನು ಹೊರಲು ಬೇಸರಿಸಿ ಕೆಲವರು ಹಣದ ಪುಟ್ಟ ಪರ್ಸ್ನ್ನು ರವಿಕೆಯೊಳಗೆ ಇಟ್ಟುಕೊಂಡು ಪಜೀತಿಪಟ್ಟುಕೊಳ್ಳುತ್ತಿರುತ್ತಾರೆ. ಇಂಥಹಾ ಪ್ರಯೋಗವೊಂದನ್ನು ನಾನೂ ಮಾಡಲುಹೋಗಿ ಇದ್ದ ಹಣವನ್ನೆಲ್ಲಾ ಕಳೆದುಕೊಂಡು ಕಡೆಗೆ ನಾನೂ `ಜೇಬೊಡತಿ`ಯಾಗಲೇಬೇಕೆಂಬ ಹಠದಲ್ಲಿ ನನ್ನ ಒಳಲಂಗ, ರವಿಕೆಗಳಿಗೆಲ್ಲಾ ಜೇಬನ್ನು ಹೊಲಿದುಕೊಳ್ಳುವ ಸ್ವಕರ್ಮ ಸಾಹಸದಲ್ಲಿಯೂ ತೊಡಗಿದೆ. (ಪ್ರವಾಸ ಹೋಗುವ ಕೆಲವರು ಈ ಕ್ರಮವನ್ನು ಕೈಗೊಂಡ ಉದಾಹರಣೆಗಳ ಆಧಾರದಮೇಲೆ!) ಆದರೆ ಅದರಲ್ಲಿ ಉಂಟಾದ ಅನೇಕ ಗೊಂದಲಗಳಿಂದ ಅನುಕೂಲಕ್ಕಿಂತಾ ಮುಜುಗರವೇ ಹೆಚ್ಚಾಯಿತು. ನಂತರ ಮನೆಯಲ್ಲಿ(!) ಜೇಬಿರುವ ನೈಟಿ ಹಾಕುವುದರಲ್ಲೇ ತೃಪ್ತಿ ಪಡಬೇಕಾಯ್ತು! (ನೆಗಡಿಯ ನೆಂಟಿರುವುದರಿಂದ!) ಇತ್ತೀಚೆಗೆ ಅನೇಕ ಹೆಣ್ಣುಮಕ್ಕಳು ಪ್ಯಾಂಟನ್ನು ಧರಿಸಿಕೊಂಡು ಜೇಬಿನ ಸದುಪಯೋಗ(!) ಪಡೆಯುವುದನ್ನು ನೋಡಿ ನನಗಂತೂ ಬಹಳ ಸಂತಸವಾಗಿದೆ.

ಜೇಬಿಗೆ `ಕಿಸೆ’, `ಬೊಕ್ಕಣ,’ ಎಂದೂ ನಿಘಂಟಿನಲ್ಲಿ ಕೊಟ್ಟಿದ್ದಾರೆ. `ಕಿಸೆ’ ಏನೋ ನಮಗೆ ಪರಿಚಿತವಾದ ಪದವೇ. ಬಸ್ಸ್ಟಾಂಡ್ಗಳಲ್ಲಿ `ಕಿಸೆಗಳ್ಳರಿದ್ದಾರೆ ಎಚ್ಚರಿಕೆ’, ಎನ್ನುವ ಫಲಕಗಳನ್ನು ಓದ್ತಾನೇ ಇರ್ತೀವಲ್ಲ! ಆದರೆ `ಬೊಕ್ಕಣ’ ಎನ್ನುವುದನ್ನು ನಾನು ಇದುವರೆಗೂ ಕೇಳೇ ಇರಲಿಲ್ಲ. ಇದು ನನ್ನ ಭಾಷಾ ಅಲ್ಪ ಜ್ಞಾನದ ಸಂಕೇತವೂ ಇರಬಹುದು! ಹಿಂದಿಯಲ್ಲಿ `ಖೀಸಾ’ ಎಂದಿದೆ. `ಕಿಸೆ’ ಯಿಂದ `ಖೀಸಾ’ ಆಯ್ತೋ, `ಖೀಸಾ’ದಿಂದ `ಕಿಸೆ’ ಆಯ್ತೋ ಎನ್ನುವ ಬೀಜವೃಕ್ಷ ನ್ಯಾಯವನ್ನು ಭಾಷಾ ತಜ್ಞರೇ ಪರಿಹರಿಸಬೇಕು! ಆಂಗ್ಲಭಾಷೆಯ POCKET ಪಡೆದುಕೊಂಡಂಥಾ ವಿಸ್ತಾರವನ್ನು ಬಹುಷ: ಬೇರೆ ಯಾವ ಜೇಬುಗಳೂ ಪಡೆಯಲಿಲ್ಲವೇನೋ! ಈ ಆಧುನಿಕ, ವಿವಿಧ ವಿನ್ಯಾಸದ ಜೇಬಿನ ಮೂಲವೇ ಆಂಗ್ಲವಾದ್ದರಿಂದಲೇ ಏನೋ ಇದಕ್ಕೆ ಇಷ್ಟೊಂದು ಪ್ರಸಿದ್ದಿ! ‘Pickpocket’ ಎನ್ನುವುದಂತೂ ಬಳಕೆಯಲ್ಲೂ, ನಡೆಯುವುದರಲ್ಲೂ ಸರ್ವೇ ಸಾಮಾನ್ಯವಾಗಿಹೋಗಿದೆ. ನಮ್ಮ ಬಹುತೇಕ ಚಲನ ಚಿತ್ರಗಳಲ್ಲಿನ ನಾಯಕ, ನಾಯಿಕೆಯರದ್ದು ಇದೇ ಉದ್ಯೋಗ! ಈ ಹಿಂದೆ ನಮ್ಮ ಹಾಸ್ಯ ಸಾಹಿತಿಗಳು ತಮ್ಮ ಪತ್ನಿಯರನ್ನೇ ಹಾಸ್ಯದ PÉÃAದ್ರಬಿಂದುವಾಗಿಸಿಕೊಂಡು ತಮ್ಮ ಜೇಬಿನಲ್ಲಿರುವ ಪುಡಿಗಾಸನ್ನು ತಾವಿಲ್ಲದ ವೇಳೆಯಲ್ಲಿ ಹಾರಿಸಿಬಿಡುವ pick‘pocket’ (ಜೇಬುಗಳ್ಳಿ!) ಅಂತೆ ಚಿತ್ರಿಸಿಬಿಡುತ್ತಿದ್ದರು. (ಎಷ್ಟೋ ವೇಳೆ ಅವರ ಗುಪ್ತ ಕಾರ್ಯಗಳ ಬಹಿರಂಗವೂ ಆಗಿಬಿಡುವ ಸಂಭವವೂ ಇತ್ತು!) ಅವರೇನಾದರೂ ‘pocket money’ ಕೊಡುವ ಪರಿಪಾಠ ಇಟ್ಟುಕೊಂಡಿದ್ದರೆ ಹೀಗಾಗದೇ ಅವರ ಮರ್ಯಾದೆಯಾದರೂ ಉಳಿಯುತ್ತಿತ್ತೋ ಏನೋ! POCKETನ್ನು ನಾಮಪದದ ರೂಪದಲ್ಲಿ ತೆಗೆದುಕೊಂಡರೆ ಉಡುಪು, ಸೀಟು, ಚೀಲ ಇವುಗಳೊಳಗೆ ಹೊಲಿದಿರುವ ಒಂದು ಸಣ್ಣ ಚೀಲ ಎಂದಾಗುತ್ತದೆ. ಇದಕ್ಕೆ ಸಣ್ಣ ಪ್ರದೇಶ, ಸಣ್ಣ ಮೊತ್ತ ಎಂಬೆಲ್ಲಾ ಅರ್ಥಗಳೂ ಇವೆ. ವಿಶೇಷಣವಾದಾಗ pocketbook, pocketful, pocketknife, pocketmoney, pocket dictionary..... (ಈ ಪಾಕೆಟ್ ಪುಸ್ತಕಗಳು ಬಂದದ್ದು ಪರೀಕ್ಷೆಗಳಲ್ಲಿ ಕಾಪಿಹೊಡೆಯುವವರಿಗೆ ವರದಾನವಾಯ್ತು! ಈಗ ಬಿಡಿ ಎಲ್ಲಾ ಟಿಕ್, ಟಿಕ್!). ಕ್ರಿಯಾಪದವಾದಾಗ ‘pocket the money’ ಎಂದರೆ ಹಣ ಸಂಪಾದಿಸು, ‘pocketed the knife’ ಎಂದರೆ ಚಾಕುವನ್ನು ಜೇಬಿಗೆ ಸೇರಿಸುವುದು ಎಂದಾಗುತ್ತದೆ. `ಜೇಬಿಗೆ ಸೇರಿಸು’ ಎಂದರೇ ತನ್ನದಾಗಿ ಮಾಡಿಕೊಳ್ಳೊದು, ಅಡಗಿಸಿಡು, ಮುಚ್ಚಿಡು ಎಂದೆಲ್ಲಾ ಅರ್ಥೈಸಬಹುದು. ನೋಡಿ ಆಂಗ್ಲರಿಂದಲೇ ಬಂದ ಈ `ಪಾಕೆಟ್’ ತನ್ನದೇ ಮೂಲ ಭಾಷೆಯಲ್ಲಿ ಎಷ್ಟೆಲ್ಲಾ ಅxð ವೈವಿಧ್ಯವನ್ನು ಹೊಂದಿದೆ ಅಂತ!
ತನ್ನದಾಗಿ ಮಾಡಿಕೊಳ್ಳೋದು ಎನ್ನುವಾಗ ನನಗೆ ನೆನಪಾಗೋದು....... `ಕವಿಗಳನ್ನೆಲ್ಲಾ ಸಾಲಾಗಿ ನಿಲ್ಲಿಸಿದಾಗ ಒಬ್ಬರ ಕೈ ಮತ್ತೊಬ್ಬರ ಜೇಬಿನಲ್ಲಿರುತ್ತದೆ’ ಎನ್ನುವ ಉಕ್ತಿ. ಇಲ್ಲಿ `ಜೇಬು’ ಅಂತ ಇರೋದರಿಂದ ಸಾಲಾಗಿ ನಿಲ್ಲಿಸಿರೋದು ಪುರುಷ ಪುಂಗವರನ್ನೇ ಅನ್ನೋದು ಸರ್ವವಿಧಿತ. ಜೇಬಿನಲ್ಲಿ ಕೈ ಇರಬೇಕಾದರೆ ಅದು ಜುಬ್ಬಾದ ಜೇಬೇ ಆಗಿರಬೇಕು. ಅವರೆಲ್ಲಾ ಜುಬ್ಬಾ, ಪೈಜಾಮಾನೇ (ಅಥವಾ ಪಂಚೆಯೂ ಆಗಿರಬಹುದು) ಹಾಕಿಕೊಂಡು, ಕುರುಚಲು ಗಡ್ಡ ಬಿಟ್ಟು.....ಸಾಲಾಗಿ ನಿಂತು ಒಬ್ಬರ ಜುಬ್ಬಾ ಜೇಬಿನೊಳಗೆ ಮತ್ತೊಬ್ಬರು ಕೈ ಹಾಕಿಕೊಂಡಿರುವ ದೃಶ್ಯ ವರ್ಣನಾತೀತ. ಇದನ್ನ `ಕೃತಿಚೌರ್ಯ’ ಅಂತ ಸಾರಾಸಗಟಾಗಿ ಹೇಳಲಾಗದಿದ್ದರೂ ಹಲವು ಹೂಗಳಿಂದ ಮಕರಂದ ಹೀರಿ `ಮಧು’ವನ್ನು ತಯಾರಿಸುವ `ಮಧುಕರ ವೃತ್ತಿ’ ಎಂದು ಹೇಳಲೇನೂ ಅಡ್ಡಿ ಇರಲಾರದು. ಈ ಅಪವಾದದಿಂದ ಪಾರಾದ ಹೆಂಗೆಳೆಯರಂತೂ ಸಾಂಪ್ರದಾಯಿಕ ಉಡಿಗೆಗಳಿಗೆ ಸಾಷ್ಟಾಂಗ ನಮಿಸಲೇ ಬೇಕು. (`ಸಾಷ್ಟಾಂಗ ನಮಸ್ಕಾರ’ ಪುರುಷ ವರ್ಗಕ್ಕೇ ಮೀಸಲಾಗಿದ್ದರೂ ಸ್ವಲ್ಪ ಕಾಲ ಎರವಲು ಪಡೆದು!)
ಸಾಮಾನ್ಯವಾಗಿ ಜೇಬನ್ನು ನೋಡಿ ಒಬ್ಬರ ಕಾರ್ಯಕ್ಷೇತ್ರ, ಹವ್ಯಾಸ, ಸ್ವಭಾವಗಳನ್ನು ಗುರುತಿಸಬಹುದು. ಶಿಕ್ಷಕರು ಜೇಬಿನಲ್ಲಿ ನೀಲಿ ಮತ್ತು ಕೆಂಪು ಇಂಕಿನ ಪೆನ್ಗಳನ್ನು ಇಟ್ಟುಕೊಂಡಿರುತ್ತಾರೆ. ಪತ್ರಾಂಕಿತ ಅಧಿಕಾರಿಗಳಾದರೆ ಹಸಿರು ಇಂಕಿನ ಪೆನ್ ರಾರಾಜಿಸ್ತಾ ಇರುತ್ತದೆ. ಸಿಗರೇಟ್, ಪಾನ್, ನೆಶ್ಯ,...ಇವುಗಳನ್ನು ಹವ್ಯಾಸ ಎನ್ನುವುದೋ, ದುರಭ್ಯಾಸೆನ್ನುವುದೋ...,ಅಂತೂ ಜೇಬಿನಲ್ಲಿ ಮನೆ ಮಾಡಿರುತ್ತವೆ. ಸದಾ ನೆಗಡಿಯಿಂದ ಬಳಲುವವರ (ಜನ್ಮ ನೆಗಡಿ) ಜೇಬುಗಳಂತೂ ವೈರಸ್ಗಳ ಆಗರವೇ ಆಗಿರುತ್ತದೆ. ಕನ್ನಡಕಧಾರಿಗಳಾದರೆ ಕನ್ನಡಕ,... ಈಗಂತೂ ಮೊಬೈಲ್ ಅಗ್ರಸ್ಥಾನ ಪಡೆದುಬಿಟ್ಟಿದೆ. ಯಾವ ಸಂಶೋಧನೆ ಏನೇ ರಿಪೋರ್ಟ್ ಕೊಟ್ಟರೂ ಮೊಬೈಲ್ಗಳಂತೂ ತಮ್ಮ ಸ್ಥಾನವನ್ನು ಜೇಬಿನಲ್ಲೇ ಭದ್ರಪಡಿಸಿಕೊಂಡುಬಿಟ್ಟಿವೆ. ಕೆಲವು ಪ್ರದರ್ಶನಾಕಾಂಕ್ಷಿಗಳು ತಮ್ಮ ಪಾರದರ್ಶಕ ಜೇಬುಗಳಲ್ಲಿ ಐನೂರು, ಸಾವಿರದ ನೋಟುಗಳನ್ನು ಇಟ್ಟುಕೊಂಡು ತಮ್ಮ ಆರ್ಥಿಕ ಸಾಮರ್ಥ್ಯವನ್ನು ವೈಭವೀಕರಿಸುತ್ತಿರುತ್ತಾರೆ. ರಾಜಕಾರಿಣಿಗಳು ತಮ್ಮ ಪಕ್ಷವನ್ನು ಬಲವರ್ಧನೆ ಮಾಡಿಕೊಳ್ಳುವುದು ಅವರ ಜೇಬಿನ `ವಜನ್’ಗೆ ಅನುಗುಣವಾಗಿರುತ್ತದೆ. ಚುನಾವಣಾಕಾಲದಲ್ಲಿ ಜೇಬಿಗೇ ಮಹತ್ವ! `ಅವನು ನನ್ನ ಜೇಬಿನಲ್ಲೇ ಇದಾನೆ’ ಎನ್ನುವ ಮಾತನ್ನೂ ಆಡುವುದನ್ನು ಕೇಳಬಹುದು. ರಾಜಕಾರಿಣಿಗಳಿಗೆ ಅನೇಕ ಅಗೋಚರ ಜೇಬುಗಳು ಇರುತ್ತವೆ ಅಂತ ತಿಳಿದವರು ಹೇಳ್ತಾರೆ. ನಮ್ಮ ಮು. ಮಂ.ಗಳ ಎಂಟು ಜೇಬುಗಳ ಬಗ್ಗೆ ಹೇಳುತ್ತಾ ಅವರು ಧರಿಸುವ ಉಡುಪಿನಲ್ಲಿರುವ ಜೇಬುಗಳು ಅವರ ಅಂತರಂಗದ ಆಸೆಯ ಪ್ರತೀಕವೇ ಆಗಿವೆ ಅಂತಾರೆ.
ಅಪ್ಪನ ಜೇಬಿನ ದುಡ್ಡುಗಳೆಲ್ಲಾ
ಚಟಪಟಗುಟ್ಟುತ ಸಿಡಿಯುವುವು... ಎನ್ನುವುದನ್ನು ಓದುವಾಗ ಜೇಬಿನ ದುಡ್ಡು ಹೇಗೆ ಚಟಪಟ ಗುಟ್ತಾ ಸಿಡಿಯುತ್ತೆ? ಅಂತಾ ಬಹಳ ಯೋಚನೆ ಮಾಡ್ತಾ ಇದ್ದೆ. ನಂತರ ದೀಪಾವಳಿಯಲ್ಲಿ ತಿಳೀತು ಅವು ಚಟಪಟ ಗುಟ್ಟುವ ಪರಿ! (ಎಂಥಾ ಪೆದ್ದು ಅಲ್ವಾ?) ಈಗ ಚಟಪಟ ಏನು `ಢಂ ಢಮಾರ್’ ಆಗಿದೆ. ಈ ನಡುವೆ ಭಯೋತ್ಪಾದಕರೂ ಎಲ್ಲಿ ತಮ್ಮ ಕಾಣಿಕೆ ಸೇರಿಸ್ತಾರೋ ಎನ್ನುವುದೇ ಆತಂಕದ ವಿಷಯ! ದೀಪಾವಳಿಯೇ ಆಗಬೇಕೆಂದಿಲ್ಲ, ಯಾವ ಕಾರಣಕ್ಕಾದರೂ ಚಟಪಟಗುಟ್ಟಬಹುದು. ನನ್ನ ಬಾಹ್ಯ ಜೇಬಾದ ವ್ಯಾನಿಟಿ (ಅಲ್ಲಲ್ಲ `ನೆಸೆಸ್ಸಿಟಿ’ ಅಂತಾ ಈಗಾಗಲೇ ಹೇಳಿಯಾಗಿದೆ. ಆದರೂ ಆಡುವಾಗಿನ ಭಾಷೆಯಲ್ಲಿ...) ಬ್ಯಾಗಿನ ಒಳ ಜೇಬುಗಳಂತೂ ತುಂಬಿಸಿದಷ್ಟೂ ಖಾಲಿಯಾಗತ್ತಲೇ ಇರುತ್ತವೆ!
ಪಟಾಸು ಪೆಟ್ಲು ಒಳ ಜೇಬಲ್ಲಿ
ಕಾಸಿನ ಸಾಲು ಕಳ್ಳ ಜೇಬಲ್ಲಿ...
ಎಂ. ಎಸ್. ಸುಂಕಾಪುರ ಇವರು ತಮ್ಮ `ಮಾವ ಕೊಡಿಸಿದ ಕೋಟಿ’ನಲ್ಲಿ ಇರುವ ಕಿಸೆಗಳನ್ನು ಮಹಾಮನೆಗೆ ಇರುವ ನೂರುಬಾಗಿಲು, ಸಾವಿರ ಕಿಟಕಿಗಳಿಗೆ ಹೋಲಿಸಿದ್ದಾರೆ. ಎಡಬಲದಲ್ಲಿರುವ, ಬಹೋಪಯೋಗಿಯಾದ, ದೊಡ್ಡ ಕಿಸೆಗಳು, (ಅವುಗಳೊಳಗೆ ಒಂದೇ ಸಮನೆ ಸಾಮಾನು ತುಂಬುವುದನ್ನು ನೋಡಿ, `ಏನ್ರಿ ನಿಮ್ಮ ಕಿಸೆ ಹೋಲ್ಡಾಲ್ನಂತಿವೆ,’ ಎಂದೂ ಕೇಳಿದ್ದುಂಟಂತೆ!), ಎದೆಯಮೇಲಿರುವ ಎಳೆಯ ಕಂದನಂಥಾ ಹೊರಕಿಸೆ, ಚಂದ್ರನಂತೆ ವೃದ್ಧಿ, ಕ್ಷಯಗಳ ನಿರಂತರ ಚಕ್ರಗತಿಯಲ್ಲಿರುವ ಖಜಾನೆಯಾದ ಒಳ ಎಡಕಿಸೆ, ಮಹತ್ವದ ಸಾಮಾನುಗಳನ್ನು ತನ್ನೊಳಗೆ ಹುದುಗಿಸಿಕೊಂಡ ಮಹಾಮೌನಿ ಒಳ ಬಲಕಿಸೆ, ಚತುರ ಸಿಂಪಿಗನ ಚಾಣಾಕ್ಷಬುದ್ಧಿಯ ಪ್ರತೀಕವಾದ ಒಳ ಕಳ್ಳಕಿಸೆ...ಇದಕ್ಕಿಂತಾ ವಿವರ ಬೇಕೇ ಕಿಸೆಯ ವೈವಿಧ್ಯತೆಗಳನ್ನು ತಿಳಿಯಲು.
ಮಹಾನ್ ಪುಸ್ತಕ ಪ್ರೇಮಿಯಾದ ನಮ್ಮ ತಂದೆಯವರು ಧರಿಸುತ್ತಿದ್ದ ವಿಶೇಷವಾದ ಅಂಗಿಯಲ್ಲಿ ತೋಳಿನ ಕೆಳಗೆ ಇರುತ್ತಿದ್ದ ಒಳ ಜೇಬಿನಲ್ಲಿ ಯಾವಾಗಲೂ ಎರಡು-ಮೂರು ಸಣ್ಣ ಪುಸ್ತಕಗಳಿರುತ್ತಿದ್ದವು! ಜೊತೆಗೆ ಕನ್ನಡಕದ ಪೆಟ್ಟಿಗೆ, ಅಮೃತಾಂಜನ, ಕರವಸ್ತ್ರ, ನೆಶ್ಯದಡಬ್ಬಿ, ಮೆಣಸು ಸಕ್ಕರೆ ಡಬ್ಬಿ, ಒಂದೇ, ಎರಡೇ ... ತುಂಬಿ ತುಳುಕುತ್ತಿದ್ದವು. (ಅವರಿಗೆ ವಂಶಪಾರಂಪರ್ಯವಾಗಿ ಬಂದ ಚಿನ್ನದ ನಿಬ್ಬಿನ ಪೆನ್ನು ಆಗಾಗ ಉಕ್ಕೇರಿದ ಸಂತಸದಲ್ಲಿ ಇಂಕನ್ನು ಹೊರಚೆಲ್ಲುತ್ತಾ ಎದೆಯಭಾಗದ ಒಳಜೇಬಿನಲ್ಲಿ ಅಡಗಿರುತ್ತಿತ್ತು.) ಜೇಬಾದರೂ ಕೈಚೀಲದಷ್ಟೇ ತೂಕವನ್ನು ಹೊತ್ತು,ಹೊತ್ತು ಇನ್ನು ತಾಳಲಾರೆನೆಂದು ಅಂಗಿಯಿಂದ ವಿಚ್ಛೇದನ ಬಯಸುವ ಸ್ಥತಿಗೆ ತಲುಪಿದ ಜೇಬನ್ನು ಅಮ್ಮ ಸಂಧಾನಗೊಳಿಸಿ ಸೇರಿಸುವ ಭರದಲ್ಲಿ ಸ್ವಗತ ಸಹಸ್ರ ನಾಮಾರ್ಚನೆಯನ್ನೇ ಮಾಡುತ್ತಿದ್ದರು. ಯಾವಾಗಲೂ ಬೇಸಿಗೆ ರಜೆ ಬರುವಾಗ ಏನಾದರೊಂದು ಕುಶಲಕಲೆಯ ಕಾರ್ಯಕ್ರಮದಲ್ಲಿ ತೊಡಗುತಿದ್ದ ನಾನು, ಒಂದು ರಜೆಯಲ್ಲಿ ನಾಲ್ಕು ಗುಲಾಬಿ ಹೂಗಳಿದ್ದ ಒಂದು ಕಸೂತಿ ಚೀಲವನ್ನು ಹಾಕಿಕೊಟ್ಟಿದ್ದನ್ನು ಅವರು ಸಂಪೂರ್ಣ ಸದುಪಯೋಗಪಡಿಸಿಕೊಂಡು ಬಹಳ ಜೋಪಾನವಾಗಿ ಇಟ್ಟುಕೊಂಡಿದ್ದರು. ಆ ಪ್ರಭಾವದಿಂದಲೋ, ವಂಶವಾಹಿನಿಯ ಮಹಿಮೆಯೋ, ಸದಾ ಮುಂದಾಲೋಚನೆಯಲ್ಲೇ ಇರುವ ನಾನು ನನ್ನ ಬಾಹ್ಯ ಕಿಸೆಯ (ಅಗತ್ಯಚೀಲ!) ಜೊತೆಗೇ ಅಧಿಕಾರ (ಅಧಿ-ಖಾರ) ಭಾರದಿಂದ ಒಂದು ಫೈಲುಗಳ ಜೋಳಿಗೆಯನ್ನೂ ಹೊರಲಾರಂಭಿಸಿ ಅಪಹಾಸ್ಯಕ್ಕೆ ಪಾತ್ರಳಾಗಿದ್ದೇನೆ!
ನನ್ನವರು `ಹಣವೇ ಇಲ್ಲ’ ಎನ್ನುವ ಘೋಷವಾಕ್ಯದೊಂದಿಗೇ ಇರುವ ಜೇಬುಗಳನ್ನೆಲ್ಲಾ ಹೊರತೆಗೆದು ತೋರಿಸಿದರೂ (ತಿಂಗಳು ಪೂರ್ತಿ ಧಾರಾಳವಾಗಿ ನನ್ನ ಹಣವನ್ನೇ ಖರ್ಚುಮಾಡಿಸುತ್ತಾ...) ಮತ್ತೆಲ್ಲೋ ಹಣ ಅಡಗಿಸಿಟ್ಟಿದ್ದಾರೆ ಎಂಬ ಅನುಮಾನ ಬಂದು ಪರಿಶೀಲಿಸಿದಾಗ ಬೆಲ್ಟ್ನ ಒಳಭಾಗದಲ್ಲೊಂದು ಜೇಬು ನೋಡಿ ಪರಮಾಶ್ಚರ್ಯ ಹೊಂದಿದ್ದೆ! ಹಾಗೆಲ್ಲಾ ಜೇಬು `ಚೆಕ್’ ಮಾಡುವ ಜಾಯಮಾನ ನನ್ನದಲ್ಲ ಬಿಡಿ. ದ್ರವಗಳ ಗುಣಕ್ಕೆ ಸಾಮ್ಯತೆ ಹೊಂದಿರುವ `ಹಣ’ದ ಚಲನೆಯೂ ಎತ್ತರದಿಂದ ತಗ್ಗಿನ ಕಡೆಗೇ ಅಲ್ಲವೇ? ಈಗ ನನ್ನ ಮಗನ ಪ್ಯಾಂಟಿನ ಜೇಬುಗಳನ್ನು ಲೆಕ್ಕ ಹಾಕಲೇ ಆಗುವುದಿಲ್ಲ! ಜೇಬು ತನ್ನ ಸ್ಥಾನದ ಘನತೆಯನ್ನೇ ಕಳೆದುಕೊಂಡು ಮಂಡಿ, ಮೊಣಕಾಲುಗಳ ಮೇಲೆಲ್ಲಾ ಬಂದಿದೆ. ಇಷ್ಟೇ ಸಾಲದು ಅಂತ ಒಂದೊಂದಕ್ಕೂ ಎರಡು-ಮೂರು ಉದ್ದುದ್ದಾ ಬಾಲಗಳು!

ಇತ್ತೀಚೆಗಂತೂ ಕಳ್ಳಕಿಸೆಯ ಮಹತ್ವ ಬಹಳ ಹೆಚ್ಚಾಗಿದೆ. ಸಣ್ಣತಮ್ಮಣ್ಣನ ಕಳ್ಳಜೇಬಲ್ಲಿ ಕಾಸಿನ ಸಾಲು ಇದ್ದರೆ ಈಗಿನವರ ಕಳ್ಳಜೇಬಲ್ಲಂತೂ ನೋಟುಗಳ ಕಂತೆಯೇ ಅಡಗಿರುತ್ತದ್ದೆ! ಕಳ್ಳ ನೋಟಾಗದಿದ್ದರೆ ಭಾರತಾಂಬೆಯ ಪುಣ್ಯ! ಮೇಜಿನ ಕೆಳಗೆ ಬಂದು ಕ.ಜೇ.ನ್ನು ತುಂಬುತ್ತಿದ್ದುದೂ ಲೋಕಾಯುಕ್ತರ ಭಯದಿಂದ ತತ್ತರಿಸಲಾರಂಭಿಸಿದೆ. ಆದರೂ ತನ್ನದೇ ಮಾರ್ಗವನ್ನು ಕಂಡುಕೊಂಡು ಅವ್ಯಾಹತವಾಗಿ ಸಾಗುತ್ತಲೇ ಇದೆ. ಬಹುಷ: ಈ ಲಂಚಕೋರತನವನ್ನು ತಡೆಯುವ ಏಕೈಕ ಮಾರ್ಗವೆಂದರೆ `ಎಲ್ಲರೂ ಜೇಬೇ ಇಲ್ಲದ ಉಡುಪನ್ನೇ ತೊಡಬೇಕು’ ಎನ್ನುವ ಕಾನೂನನ್ನು ಜಾರಿಗೆ ತರುವುದು ಎನ್ನಬಹುದು. ಇದು ಮತ್ತೆ ಮೂಲ ಸಂಸ್ಕತಿಯತ್ತ ಪಯಣವಾಗಲೂ ಬಹುದು. ಆದರೂ ಚಿತ್ತವ ಸಂಯಮದಲ್ಲಿರಿಸದೇ ಮತ್ತೇನು ಮಾಡಿದರೂ ಫಲ ಕಾಣದೇನೋ.
`ಹಣ’ವೇ ನಿರ್ಧಾರಕ ಅಂಶವಾಗಿರುವ ಈ ಕಾಲದಲ್ಲಿ ಜೇಬಿಗಿರುವ ಮಹತ್ವ ಬೇರಾವುದಕ್ಕೂ ಇಲ್ಲ. `ವಿತ್ತೋ ರಕ್ಷತಿ ರಕ್ಷಿತ:’ (`ಧರ್ಮ’ವಲ್ಲ!) ಎನ್ನುವುದೇ ಎಲ್ಲರ ಧ್ಯೇಯ ವಾಕ್ಯವಾಗಿದೆ.
ಸಾಲಾಗಿ ನಿಲ್ಲಿಸಿರುವ ಕವಿಗಳ ಸಾಲಿನಲ್ಲಿ ಈಗ ನನ್ನನ್ನೂ ಕಂಡು ಗಾಭರಿಯಿಂದೊಡಗೂಡಿದ ಸಂತಸವಾಗ್ತಾ ಇದೆ. ನಾನೂ ಒಬ್ಬ ಕವಿಯಾದೆನೇನೋ ಎಂಬ ಸಂತಸ ಪಡುವುದರಲ್ಲಿದ್ದೆ. ಆದರೆ ನನ್ನ `ಕೈ’ ಎಲ್ಲಿ? `ಹಲವು ಹೂಗಳ ಬಂಡುಂಬ ಮಧುಕರನೆ ಎಲ್ಲಿ ಅವಿತೆ?’ ಈಗಾಗಲೇ ಎಷ್ಟೋ ಮಹಾನ್ ಜೇಬುಗಳನರಸಿ..!..!..! (ಜೇಬಿಗೂ ಜೇಬೇ ಮೂಲ!)
ಈ ನನ್ನ `ಜೇಬ’ನ್ನು ತುಂಬಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲಾ `ಹಿರಿಯ’ ಜೇಬುಗಳಿಗೂ ಅನೇಕಾನೇಕ ವಂದನೆಗಳನ್ನು ಸಲ್ಲಿಸುತ್ತಾ, `ಕೆಲವಂ ಬಲ್ಲವರಿಂದ ಕಲಿತು...’ ಎಂದು ವಿನಯಪೂರ್ವಕವಾಗಿ ಹೇಳುತ್ತಾ... `ಇತಿ ಸಂಪೂರ್ಣಂ’ ಎನ್ನಲಾಗದ `ಜೇಬಾಯಣಂ’.
*****************************

Friday, December 10, 2010

ಮನದ ಅಂಗಳದಿ..................೨೧. ಅಹಂಕಾರ

ಬುದ್ದಿಯ ಅಹಂಕಾರವೇ ಭುವನದ ಎಲ್ಲಾ ಸಮಸ್ಯೆಗಳಿಗೂ ತಾಯಿಬೇರು.
*ಶ್ರೀ ಅರವಿಂದರು
‘ಅಹಂಕಾರ’ವೆನ್ನುವುದು ಮನುಷ್ಯನನ್ನು ಹೇಗೆ, ಎಲ್ಲಿ, ಯಾವ ಸಂದರ್ಭದಲ್ಲಿ ಆವರಿಸಿಕೊಳ್ಳುತ್ತದೆ ಎನ್ನುವುದನ್ನು ತಿಳಿಯುವುದು ಕಷ್ಟಸಾಧ್ಯವಾಗಿದೆ. ನಮ್ಮ ಸಮೀಪ ಜೀವಿಗಳಾದ ಪ್ರಾಣಿಸಂಕುಲವನ್ನು ಆಕ್ರಮಿಸದ ಈ ‘ಅಹಂಕಾರ’ವು ಮನುಜರ ಮೇಲೆ ಸವಾರಿ ಮಾಡಲು ತುದಿಗಾಲಿನಲ್ಲಿ ನಿಂತಿರುತ್ತದೇನೋ ಎನಿಸುತ್ತದೆ. ನಾನು ಗಮನಿಸಿದಂತೆ ತಮ್ಮ ಜೀವಿತದ ಪ್ರಾರಂಭದಲ್ಲಿ ಕೀಳರಿಮೆಯಿಂದ ನಲುಗುತ್ತಿರುವವರು ಕ್ರಮೇಣ ತಮ್ಮ ಕಾರ್ಯಗಳನ್ನೆಲ್ಲಾ ಸಮರ್ಥಿಸಿಕೊಳ್ಳುತ್ತಾ, ತಮ್ಮ ಅಲ್ಪ ಸಾಧನೆಗಳನ್ನೂ ಪೀನ ಮಸೂರದಲ್ಲಿ ವೀಕ್ಷಿಸುತ್ತಾ, ತಮ್ಮನ್ನೇ ತಾವು ಬೆನ್ನು ತಟ್ಟಿಕೊಳ್ಳುತ್ತಾ..........ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವ ಬದಲು ಅಹಂಕಾರದತ್ತ ಹೆಜ್ಜೆ ಇಡಲಾರಂಭಿಸಿಬಿಡುತ್ತಾರೆ. ಕೆಲವರಂತೂ ಚಿಕ್ಕಂದಿನಿಂದಲೇ ಗರ್ವಿಷ್ಟ ರೀತಿನೀತಿಗಳನ್ನು ಮೈಗೂಡಿಸಿಕೊಂಡಿರುತ್ತಾರೆ.
ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ, ‘ನಮ್ಮ ವ್ಯಕ್ತಿತ್ವದಲ್ಲಿ ನಡೆಯುವ ಎಲ್ಲಾ ಕ್ರಿಯೆಗಳ ಹಿಂದೆಯೂ ‘ನಾನು ಮಾಡುತ್ತಿದ್ದೇನೆ’ ಎಂಬ ಪ್ರಜ್ಞೆಯೇ ಅಹಂಕಾರ. ನಾನು ಊಟಮಾಡುತ್ತೇನೆ, ನಾನು ನೋಡುತ್ತೇನೆ, ನಾನು ಮಾತನಾಡುತ್ತೇನೆ, ನಾನು ಚಿಂತಿಸುತ್ತೇನೆ, ನಾನು ಸುಖವಾಗಿದ್ದೇನೆ, ಇತ್ಯಾದಿ ನಮ್ಮ ಎಲ್ಲಾ ಕ್ರಿಯೆಗಳನ್ನೂ ಒಗ್ಗೂಡಿಸಿ ನಮ್ಮ ವ್ಯಕ್ತಿತ್ವಕ್ಕೆ ಒಂದು ಸಮಗ್ರತೆಯನ್ನು ನೀಡಿ ವ್ಯಕ್ತಿಭಾವಕ್ಕೆ ಕಾರಣವಾಗಿದೆ. ಈ ಅಹಂಕಾರವು ಸರಿಯಾಗಿ ಕೆಲಸ ಮಾಡದೇ ಇದ್ದರೆ ವ್ಯಕ್ತಿತ್ವದ ಸಮತೋಲನ ತಪ್ಪುತ್ತದೆ.’ ಅಹಂಕಾರವು ಮನಸ್ಸಿನ ನಾಲ್ಕು ಬಗೆಯ ಕ್ರಿಯೆಗಳಾದ ಚತುರ್ವಿಧ ಅಂತಃಕರಣ ವೃತ್ತಿಗಳಲ್ಲಿ ಒಂದಾಗಿದೆ.(ಮನಸ್, ಚಿತ್ತ, ಬುದ್ಧಿ ಮತ್ತು ಅಹಂಕಾರ)
‘ನಾನು’ ಎನ್ನುವುದು ಒಂದು ಹಂತದವರೆಗೂ ಸಹನೀಯವಾಗಿರುತ್ತದೆ. ಆದರೆ ಎಲ್ಲವೂ ನನ್ನಿಂದಲೇ ಆಗುತ್ತಿದೆ, ನಾನೇ ಎಲ್ಲವನ್ನೂ ಮಾಡುತ್ತಿದ್ದೇನೆ,.....ಎನ್ನುವಲ್ಲಿನ ‘ನಾನು’ ದುರಹಂಕಾರ ಸೂಚಕವಾಗುತ್ತದೆ. ಅಂದಮೇಲೆ ಒಳ್ಳೆಯ ‘ಅಹಂಕಾರ’ ಎನ್ನುವುದೂ ಇದೆಯೆ?
‘ನಾನು’, ‘ನಾನು’
ಎನ್ನುವವರೇ ತುಂಬಿದ್ದಾರೆ
ಇಲ್ಲಿ ಎಲ್ಲಾ,
‘ನಾನು’ಎನ್ನದೇ ಮಾರ್ಗವೇ ಇಲ್ಲ
ನನ್ನ ನಾ ಉಳಿಸಿಕೊಳ್ಳಲು!
‘ನಾನು’ ಎನ್ನವವರೇ ತುಂಬಿರುವೆಡೆ, ‘ನಾನು’ ಎನ್ನದೇ ಬದುಕುವುದಾದರೂ ಹೇಗೆ? ಎನ್ನುವುದು ಒಮ್ಮೆ ನನ್ನ ಪ್ರಶ್ನೆಯಾಗಿತ್ತು! ಅದನ್ನೇ ಅಸ್ತಿತ್ವದ ಪ್ರಶ್ನೆ ಎಂದೇ ಭಾವಿಸಿದ್ದೆ! ಈಗ ‘ನಾನು’ ಎನ್ನುವವರು ತಮ್ಮ ಅಹಮಿಕೆಯನ್ನು ಸ್ಥಾಪಿಸಲು ನಡೆಸುವ ಹೋರಾಟ, ಅನುಭವಿಸುವ ಒತ್ತಡ.......ಇವುಗಳನ್ನೆಲ್ಲಾ ನೋಡುವಾಗ ಕನಿಕರವೆನಿಸುತ್ತದೆ. ಅಹಂಕಾರಿಯಾದವರು ತಮ್ಮ ಹೆಗಲುಗಳ ಮೇಲೆ ಯಾರೋ ಕುಳಿತು, ಜುಟ್ಟನ್ನು ಹಿಡಿದುಕೊಂಡು ತಮ್ಮನ್ನು ನಿರ್ದೇಶಿಸುತ್ತಿರುವರೇನೋ ಎನ್ನುವಂತೆ ವರ್ತಿಸುತ್ತಿರುತ್ತಾರೆ. ತಾವು ಇರುವ ಗುಂಪಿನಲ್ಲಿ ತಮ್ಮನ್ನೇ ಎಲ್ಲರೂ ಗಮನಿಸುತ್ತಿರುವರೇನೋ ಎನ್ನುವ ಭಾವದಲ್ಲಿ ತಮ್ಮ ಗತ್ತನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಸರಳ, ಸುಂದರ ನಗೆ ಅವರಿಂದ ದೂರವಾಗಿರುತ್ತದೆ.
‘ಬಿಗಿದ ಮೊಗದಲಿ
ನಗೆಯ ಅಂತ್ಯ ಸಂಸ್ಕಾರ
ಅಂದವನೆ ಕಬಳಿಸುವ
ಅಹಂಕಾರ!’
ಪ್ರಭುಶಂಕರ ಅವರು ತಮ್ಮ `ಖಲೀಲ್ ಗಿಬ್ರಾನ್’ ಕೃತಿಯಲ್ಲಿ ಹೀಗೆ ಹೇಳುತ್ತಾರೆ, ‘ಇದನ್ನು ನಾನು ಮಾಡಿದ್ದೇನೆ’ ಎನ್ನುವ ಅಹಂಕಾರ ಎಷ್ಟು ಬಲವಾದದ್ದು ಎಂದರೆ ಯಾವ ಕಾಲದಲ್ಲೂ ಯಾರಿಗೂ ಅದನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಅಹಂಕಾರವನ್ನು ಅದರ ಸರಿಯಾದ ಹಿನ್ನೆಲೆಯಲ್ಲಿರಿಸಿ ಬಯಲಿಗೆಳೆದು ಹಾಸ್ಯಮಾಡಿದ್ದಾನೆ ಗಿಬ್ರಾನ್, ‘ಸೇತುವೆಯನ್ನು ಕಟ್ಟುವವರು’ ಎಂಬುದರಲ್ಲಿ,
‘ಅಸ್ಸಿ ನದಿ ಸಮುದ್ರವನ್ನು ಸೇರಲು ಹೋಗುವ ಸ್ಥಳದಲ್ಲಿ, ನಗರದ ಎರಡು ಭಾಗಗಳನ್ನು ಹತ್ತಿರ ತರುವುದಕ್ಕೆ ಎಂದು ಒಂದು ಸೇತುವೆ ಕಟ್ಟಿದರು. ಅದಕ್ಕೆ ಬೇಕಾದ ದೊಡ್ಡ ದೊಡ್ಡ ಕಲ್ಲುಗಳನ್ನು ಬೆಟ್ಟದಿಂದ ಹೇಸರಗತ್ತೆಗಳ ಮೇಲೆ ಹೊರಿಸಿ ತರಿಸಿದರು.
ಸೇತುವೆ ಮುಗಿದ ಮೇಲೆ ಅರಾಬಿಕ್ ಮತ್ತು ಅರಾಮೆಯಿಕ್ ಭಾಷೆಗಳಲ್ಲಿ ಒಂದು ಕಂಬದ ಮೇಲೆ ಕೆತ್ತಿದರು: ‘ಎರಡನೇ ಆಂಟಿಯೋರಸ್ ದೊರೆ ಈ ಸೇತುವೆಯನ್ನು ಕಟ್ಟಿಸಿದ.’
ಒಂದು ಸಂಜೆ ಹುಚ್ಚನಂತೆ ತೋರುವ ಒಬ್ಬ ಯುವಕ ಆ ಕಂಬದ ಮೇಲೆ ಇದ್ದಲಿನ ಚೂರಿನಿಂದ ಬರೆದ: ‘ಈ ಸೇತುವೆಯ ಕಲ್ಲುಗಳನ್ನು ಬೆಟ್ಟದಿಂದ ಹೇಸರಗತ್ತೆಗಳು ತಂದವು. ಈ ಸೇತುವೆಯ ಮೇಲೆ ಓಡಾಡುವಾಗ ನೀವು ಈ ಸೇತುವೆಯನ್ನು ಕಟ್ಟಿದ ಆಂಟಿಯಾಕ್ನ ಹೇಸರಗತ್ತೆಗಳ ಬೆನ್ನಿನ ಮೇಲೆ ಸವಾರಿ ಮಾಡುತ್ತೀರಿ.’ ಅದನ್ನು ನೋಡಿದ ಕೆಲವರು ನಕ್ಕರು, ಕೆಲವರು ಆಶ್ಚರ್ಯ ಪಟ್ಟರು. ಕೆಲವರು ಹೇಳಿದರು, ‘ಇದನ್ನು ಮಾಡಿದವರು ಯಾರು ಎಂದು ನಮಗೆ ಗೊತ್ತು. ಆತನಿಗೆ ಸ್ವಲ್ಪ ಹುಚ್ಚಲ್ಲವೆ?’
ಆದರೆ ಒಂದು ಹೇಸರಗತ್ತೆ ನಗುತ್ತಾ ಮತ್ತೊಂದಕ್ಕೆ ಹೇಳಿತು: ‘ಹೌದು ಆ ಕಲ್ಲುಗಳನ್ನು ಹೊತ್ತವರು ನಾವು. ನಿನಗೆ ನೆನಪಿಲ್ಲವೆ? ಆದರೂ ಈವತ್ತಿಗೂ ಎಲ್ಲರೂ ಹೇಳುವುದು ಸೇತುವೆ ಕಟ್ಟಿದವನು ದೊರೆ ಆಂಟಿಯೋರಸ್ ಎಂದೇ!
ನಾವು ಮಾಡಿದೆವೆಂದು ಭ್ರಮಿಸುವ ಮಹತ್ಕಾರ್ಯಕ್ಕಾಗಿ ನಮ್ಮ ಹೆಸರು ಚಿರಸ್ಥಾಯಿಯಾಗಬೇಕೆಂದು ಬಯಸುವ ನಾವು ಇದರಿಂದ ಕಲಿಯಬೇಕಾಗಿರುವುದು ಬಹಳಷ್ಟಿದೆ. ಸದಾ ನಮ್ಮ ಹೆಗಲೇರಲು ತವಕಿಸುತ್ತಿರುವ ಅಹಂಕಾರವನ್ನು ಬಳಿಗೆ ಸುಳಿಯಲೂ ಬಿಡದಂತೆ ಜಾಗರೂಕರಾಗಿ ಆತ್ಮವಿಶ್ವಾಸದಿಂದ ಬದುಕನ್ನು ಸಾರ್ಥಕಗೊಳಿಸಿಕೊಳ್ಳೋಣ. ಅಲ್ಲವೆ?

Friday, December 3, 2010

ಮನದ ಅ೦ಗಳದಿ..........೨೦. ಸುಖ-ದುಃಖ

ಎಲ್ಲಾ ಜೀವಿಗಳೂ ತಮ್ಮ ಜೀವಿತದ ಅವಧಿಯಲ್ಲಿ ಸುಖ-ದುಃಖಗಳ ಅನುಭವವನ್ನು ಪಡೆದೇ ಇರುತ್ತವೆ. ತನ್ನಲ್ಲಿ ವಿವೇಚನಾ ಶಕ್ತಿಯನ್ನು ಹೊಂದಿರುವ ಮನುಷ್ಯನಿಗೆ ಈ ಅನುಭವಗಳು ಹೆಚ್ಚಿನದೇ ಪರಿಣಾಮವನ್ನು ಉಂಟುಮಾಡುತ್ತವೆ. ಸುಖ-ದುಃಖಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ತಿಳಿದವರು ಹೇಳುತ್ತಾರೆ. ಭಗವದ್ಗೀತೆಯು ‘ಸುಖ-ದುಃಖ ಸಮನ್ವಿತಾ’ ಎನ್ನುತ್ತದೆ. ಆದರೆ ಸಾಮಾನ್ಯರಾದ ನಾವು ಸುಖಕ್ಕಿರುವ ಮೋಹಕತೆಯಿಂದ ಆಕರ್ಷಿತರಾಗಿ ದುಃಖ ನಮ್ಮ ಪಥದಲ್ಲಿ ಬರುವುದೇ ಬೇಡವೆಂದು ಆಶಿಸುತ್ತೇವೆ! ಕೆಲವೊಮ್ಮೆ ಸುಖ-ದುಃಖಗಳು ಎಷ್ಟೊಂದು ಪರ್ಯಾಯವಾಗಿ ಬರುತ್ತವೆಂದರೆ ‘ಅವೇನು ಒಂದನ್ನೊಂದು ಅಟ್ಟಿಸಿಕೊಂಡು ಹೋಗುತ್ತಿವೆಯೆ?’ ಎನಿಸಿಬಿಡುತ್ತದೆ!
ಸುಖದ ಹಿಂದೆ ದುಃಖವೋ
ದುಃಖದ ಹಿಂದೆ ಸುಖವೋ
ತಿಳಿಯಲು ಬೆನ್ನಟ್ಟಿದೆ
ಓಡಿದಷ್ಟೂ ಪಥ ವೃತ್ತಾಕಾರವಾಗಿದೆ!
ಆಧ್ಯಾತ್ಮಿಕ ಕವಿ, ಲೇಖಕ ಖಲೀಲ್ ಗಿಬ್ರಾನ್ ಅವರ ‘ದಿ ವಾಂಡರರ್-ಹಿಸ್ ಕೊಪಾರಬಲ್ಸ್ ಅಂಡ್ ಹಿಸ್ ಸೇಯಿಂಗ್ಸ್ (ಅಲೆಮಾರಿ-ಅವನ ದೃಷ್ಟಾಂತ ಕಥೆಗಳು, ಉಕ್ತಿಗಳು) ಇದರಲ್ಲಿರುವ ‘ದಿ ಟು ಹಂಟರ್ಸ್್’(ಇಬ್ಬರು ಬೇಟೆಗಾರರು) ಎಂಬ ದೃಷ್ಟಾಂತ ಕಥೆಯು ಸುಖ- ದುಃಖ ಮೀಮಾಸೆಯನ್ನು ಕುರಿತದ್ದಾಗಿದೆ.( ಶ್ರೀ ಪ್ರಭುಶಂಕರ ಅವರ ‘ಖಲೀಲ್ ಗಿಬ್ರಾನ್’ ಪುಸ್ತಕದಿಂದ)
‘ಮೇ ತಿಂಗಳಲ್ಲಿ ಒಂದು ದಿನ ಸುಖ ಮತ್ತು ದುಃಖ ಒಂದು ಸರೋವರದ ಪಕ್ಕದಲ್ಲಿ ಭೇಟಿ ಮಾಡಿದವು. ನಮಸ್ಕಾರ ಪ್ರತಿನಮಸ್ಕಾರದ ನಂತರ ಶಾಂತವಾದ ನೀರಿನ ಪಕ್ಕದಲ್ಲಿ ಕುಳಿತು ಸಂಭಾಷಣೆ ಪ್ರಾರಂಭಿಸಿದವು. ಈ ಭೂಮಿಯ ಮೇಲಿರುವ ಸುಖ, ಕಾಡುಬೆಟ್ಟಗಳಲ್ಲಿನ ಜೀವನದಲ್ಲಿರುವ ಪ್ರತಿದಿನದ ಆಶ್ಚರ್ಯ, ಉಷೆ-ಸಂಧ್ಯೆಗಳಲ್ಲಿ ಕೇಳುವ ಗಾನ ಇವುಗಳನ್ನು ಕುರಿತು ಸುಖ ನುಡಿಯಿತು. ಸುಖ ಹೇಳಿದ್ದೆಲ್ಲವನ್ನೂ ದುಃಖ ಒಪ್ಪಿತು. ಆ ಸಮಯದ ಮಾಂತ್ರಿಕತೆ, ಅದರ ಸೌಂದರ್ಯ ದುಃಖಕ್ಕೆ ಗೊತ್ತಿತ್ತು. ಬೆಟ್ಟ ಬಯಲುಗಳಲ್ಲಿ ಮೇ ತಿಂಗಳನ್ನು ಕುರಿತು ದುಃಖ ನಿರರ್ಗಳವಾಗಿ ಮಾತನಾಡಿತು.
ಸುಖ-ದುಃಖಗಳು ಬಹಳ ಹೊತ್ತು ಮಾತನಾಡಿದವು. ತಮಗೆ ತಿಳಿದಿದ್ದ ಎಲ್ಲಾ ವಿಷಯಗಳಲ್ಲೂ ಇಬ್ಬರಿಗೂ ಒಪ್ಪಿಗೆ ಇತ್ತು.
ಸರಸ್ಸಿನ ಆ ಕಡೆ ಇಬ್ಬರು ಬೇಟೆಗಾರರು ಚಲಿಸಿದರು. ನೀರಿನಾಚೆಗೆ ನೋಡಿ ಅವರಲ್ಲೊಬ್ಬ ಹೇಳಿದ, ‘ಅಲ್ಲಿ ಕುಳಿತ ಇಬ್ಬರು ಯಾರೋ ತಿಳಿಯದಲ್ಲಾ’, ಮತ್ತೊಬ್ಬ ಹೇಳಿದ, ‘ಇಬ್ಬರು ಎಂದೆಯಾ? ನನಗೆ ಒಬ್ಬರೇ ಕಾಣುತ್ತಾರಲ್ಲಾ,’
ಮೊದಲನೆಯವನು ಹೇಳಿದ, ‘ಇಲ್ಲ, ಇಬ್ಬರಿದ್ದಾರೆ’.
ಎರಡನೆಯವನೆಂದ, ‘ನನಗೆ ಕಾಣುತ್ತಿರುವುದು ಒಬ್ಬರೇ. ಸರಸ್ಸಿನಲ್ಲಿ ಬಿದ್ದಿರುವ ಪ್ರತಿಬಿಂಬವೂ ಒಬ್ಬರದೇ.’
‘ಇಲ್ಲ, ಇಲ್ಲ ಇಬ್ಬರಿದ್ದಾರೆ, ಎರಡು ಪ್ರತಿಬಿಂಬಗಳೂ ಇವೆ.’ ಮೊದಲನೆಯವನು.
‘ನನಗೆ ಕಾಣುವವರು ಒಬ್ಬರೇ’ .ಮತ್ತೆ ಎರಡನೆಯವನೆಂದ.....
ಇಂದಿಗೂ ಒಬ್ಬ ಬೇಟೆಗಾರ ಹೇಳುತ್ತಾನೆ, ‘ಮತ್ತೊಬ್ಬನಿಗೆ ಒಂದು ಎರಡಾಗಿ ಕಾಣುತ್ತದೆ’, ಎಂದು. ಇನ್ನೊಬ್ಬ ಹೇಳುತ್ತಾನೆ, ‘ನನ್ನ ಮಿತ್ರನಿಗೆ ಸ್ವಲ್ಪ ಕುರುಡು.’
ಗಿಬ್ರಾನರ ಪ್ರಕಾರ ಸುಖ-ದುಃಖಗಳು ಎರಡಾಗಿ ನಮಗೆ ಕಂಡರೂ ಅವು ನಿಜವಾಗಿ ಒಂದೇ. ಸುಖ-ದುಃಖ ಮೀಮಾಂಸೆಯನ್ನು ಅವರು ತಮ್ಮ ‘ಪ್ರವಾದಿ’ಯಲ್ಲಿ ಅದ್ಭುತರೀತಿಯಲ್ಲಿ ಮಾಡಿದ್ದಾರೆ. ಸುಖ ಹೆಚ್ಚೋ, ದುಃಖ ಹೆಚ್ಚೋ ಎನ್ನುವ ಆಲೋಚನಾ ಜೀವಿಗಳ ಪ್ರಶ್ನೆಗೆ ‘ಪ್ರವಾದಿ’ ಹೀಗೆ ಉತ್ತರಿಸುತ್ತಾನೆ.
‘ನಿನ್ನ ಸುಖ, ಮುಖವಾಡ ಕಿತ್ತೆಸೆದ ನಿನ್ನ ದುಃಖವೇ ಆಗಿದೆ.
ಯಾವ ಭಾವಿಯಿಂದ ನಗೆ ಬುಗ್ಗೆಯುಕ್ಕುತ್ತಿದೆಯೋ ಆ ಅದೇ ಅನೇಕ ಸಲ ನಿನ್ನ ಕಂಬನಿಗಳಿಂದ ತುಂಬಿತ್ತು. ಬೇರೆ ಹೇಗಾಗಲು ಸಾಧ್ಯ?
ನಿನ್ನ ಚೇತನದ ಆಳವನ್ನು ದುಃಖ ಕೊರೆಕೊರೆದಷ್ಟೂ ಸುಖವನ್ನು ಅದು ತುಂಬಿಕೊಳ್ಳಬಲ್ಲದು!
ನಿನ್ನ ವೈನನ್ನು ತುಂಬಿರುವ ಬಟ್ಟಲೇ ಅಲ್ಲವೆ ಕುಂಬಾರನ ಒಲೆಯಲ್ಲಿ ಬೆಂದದ್ದು?
ನಿನ್ನ ಹೃದಯವನ್ನು ಸಮಾಧಾನಗೊಳಿಸುತ್ತಿರುವ ಕೊಳಲನ್ನೇ ಅಲ್ಲವೆ ಚಾಕು ಕೊರೆದು ಕೊರೆದದ್ದು?
ನೀವು ಸಂತೋಷಭರಿತರಾಗಿರುವಾಗ ನಿಮ್ಮ ಹೃದಯದಾಳವನ್ನು ನೋಡಿರಿ. ಆಗ ನಿಮಗೆ ತಿಳಿಯುತ್ತದೆ, ಯಾವುದು ನಿಮಗೆ ದುಃಖವನ್ನು ನೀಡಿತೋ ಅದೇ ಆನಂದವನ್ನು ನೀಡುತ್ತದೆ.
ನೀವು ದುಃಖಿತರಾಗಿರುವಾಗ, ನಿಮ್ಮ ಹೃದಯವನ್ನು ಹುಡುಕಿ ನೋಡಿ, ನಿಜವಾಗಿ ನೀವು ದುಃಖಿಸುತ್ತಿರುವುದು ಒಮ್ಮೆ ನಿಮ್ಮ ಆನಂದವಾಗಿದ್ದುದಕ್ಕಾಗಿ ಎಂಬುದು.
ನಿಮ್ಮಲ್ಲಿ ಕೆಲವರು ಹೇಳುತ್ತೀರಿ, ‘ದುಃಖಕ್ಕಿಂತ ಸುಖ ಹೆಚ್ಚು.’ಎಂದು. ಮತ್ತೆ ಕೆಲವರು ಹೇಳುತ್ತೀರಿ, ‘ಇಲ್ಲ ದುಃಖವೇ ಹೆಚ್ಚಿನದು’.
ಆದರೆ ನಾನು ಹೇಳುತ್ತೇನೆ, ‘ಅವೆರಡೂ ಬೇರ್ಪಡಿಸಲಾರದವು. ಅವು ಒಟ್ಟಾಗಿಯೇ ಬರುತ್ತವೆ. ಒಂದು ನಿಮ್ಮೊಡನೆ ಊಟಕ್ಕೆ ಕುಳಿತಾಗ, ನೆನಪಿಡಿ, ಮತ್ತೊಂದು ನಿಮ್ಮ ಹಾಸಿಗೆಯ ಮೇಲೆ ನಿದ್ರಿಸುತ್ತಿರುತ್ತದೆ.
ವಾಸ್ತವವಾಗಿ ನೀವು ತಕ್ಕಡಿಯ ತಟ್ಟೆಗಳಂತೆ ಸುಖ-ದುಃಖಗಳ ನಡುವೆ ಓಲಾಡುತ್ತಿದಿ ರಿ.
ಬರಿದಾಗಿರುವಾಗ ಮಾತ್ರ ನೀವು ನಿಶ್ಚಲ ಮತ್ತು ಸಮತೂಕದಲ್ಲಿರುತ್ತೀರಿ.
ಭಂಡಾರಿ ತನ್ನ ಚಿನ್ನ ಬೆಳ್ಳಿಗಳನ್ನು ತೂಗಲು ನಿಮ್ಮನ್ನು ಎತ್ತಿದಾಗ ಮಾತ್ರ ನಿಮ್ಮ ಸುಖ-ದುಃಖ ಏರುತ್ತದೆ ಅಥವಾ ಬೀಳುತ್ತದೆ.’
ಜೀವನದ ಮಹಾನ್ ಪಥದಲ್ಲಿ ಸಾಗಿದಂತೆ ಈ ಒಂದು ಸಮಸ್ಥಿತಿಗೆ ನಮ್ಮನ್ನು ನಾವು ಅಣಿಗೊಳಿಸುತ್ತಿರಬೇಕು ಅಲ್ಲವೇ.