Friday, December 31, 2010

ಮನದ ಅ೦ಗಳದಿ.............೨೪. ಹೊಸತು-ಹಳತು

ಹೊಸತನ್ನು ಅಪೇಕ್ಷಿಸುವುದು. ಅದಕ್ಕಾಗಿ ಕಾತರಿಸುವುದು, ನಮ್ಮ ಸ್ವಭಾವದ ಒಂದು ಬಹು ಪ್ರಮುಖ ಭಾಗವಾಗಿದೆ. ಇದು ಎಳವೆಯಿಂದಲೂ ನಮಗರಿವಿಲ್ಲದೆಯೇ ನಮ್ಮೊಳಗಿನ ಒಂದು ಅಂಶವಾಗಿದೆ. ಮಗುವಿಗೆ ಕಂಡದ್ದೆಲ್ಲಾ ಹೊಸದೇ! ಅವುಗಳನ್ನು ಕಾಣುವ ಆ ಕಣ್ಣುಗಳು ಕುತೂಹಲದ ಕೊಳಗಳಾಗಿರುತ್ತವೆ. ತಮ್ಮ ಸುತ್ತಮುತ್ತಲಿನ ಪರಿಸರವನ್ನು ತದೇಕವಾಗಿ ವೀಕ್ಷಿಸುತ್ತಾ, ಅದನ್ನು ತಿಳಿದುಕೊಳ್ಳುವ, ತಮ್ಮದಾಗಿಸಿಕೊಳ್ಳುವ ಉತ್ಕಟತೆಯಲ್ಲಿ ಮಗುವಿಗೆ ದಿನದಿನವೂ ನವನವೀನವಾಗಿಯೇ ಗೋಚರಿಸುತ್ತದೇನೋ ಎನ್ನುವಂತೆ ಅದರ ಭಾವವಿರುತ್ತದೆ. ಬೆಳೆದಂತೆ ತನಗೆಲ್ಲಾ ತಿಳಿದಿದೆ ಎನ್ನುವ ಭ್ರಮೆಯಲ್ಲಿ ಅಂತೂ ನಮಗರಿವಿಲ್ಲದೆಯೇ ಜೀವನವನ್ನು ಯಾಂತ್ರಿಕಗೊಳಿಸಿಕೊಂಡುಬಿಡುತ್ತೇವೆ. ಆಗ ನಮ್ಮಲ್ಲಿ ಚೈತನ್ಯದ ಚಾಲನೆಯುಂಟಾಗಲು ನಮ್ಮ ಜೀವನದಲ್ಲಿ ಯಾವುದಾದರೂ ‘ಹೊಸತು’ ಪ್ರವೇಶಿಸಬೇಕಾದದ್ದು ಅನಿವಾರ್ಯವೆನಿಸುತ್ತದೆ. ಅದು ವಸ್ತುವಿನ ರೂಪದಲ್ಲಿರಬಹುದು, ವ್ಯಕ್ತಿಯಾಗಿರಬಹುದು, ಯಾವುದೋ ಒಂದು ಘಟನೆಯಾಗಿರಬಹುದು, ಆಲೋಚನೆಯಾಗಿರಬಹುದು.... ಅಂತೂ ಹೊಸತಿಗಾಗಿ ಕಾತರಿಸಿ, ಕನವರಿಸಿ, ಹಪಹಪಿಸುವುದೇ ಜೀವನದ ಗುರಿಯಾದಂತೆನಿಸುತ್ತದೆ.

ಇದನ್ನು ‘ಹೊಸ ಹಸಿವು’ ಎನ್ನುವ ಮಹಾನ್ ಪ್ರತಿಭಾವಂತ, ಪ್ರಭಾವಶೀಲ ಬರಹಗಾರರಾದ ಡಿ.ವಿ.ಜಿ.ಯವರು,
‘ಬೆದಕಾಟ ಬದುಕೆಲ್ಲ; ಚಣಚಣವು ಹೊಸ ಹಸಿವು|
ಅದಕಾಗಿ ಇದಕಾಗಿ ಮತ್ತೊಂದಕಾಗಿ||
ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನ|
ಕುದಿಯುತಿಹುದಾವಗಂ-ಮಂಕುತಿಮ್ಮ||’ ಎನ್ನುವುದರ ಮೂಲಕ ಜೀವನವೆಲ್ಲಾ ನಾವು ಒಂದಲ್ಲಾ ಒಂದು ಹೊಸತರ ಅಪೇಕ್ಷೆಯಲ್ಲಿ ಕುದಿಯುತ್ತಲೇ ಇರುತ್ತೇವೆ ಎಂದು ತಿಳಿಸುತ್ತಾರೆ.

ಹೊಸತರ ಆಗಮನವಾದ ನಂತರ ಅಂದರೆ ನಮ್ಮದಾಗಿಸಿಕೊಂಡ ನಂತರ ಅದನ್ನು ಜೋಪಾನವಾಗಿ ನಮ್ಮೊಂದಿಗಿರಿಸಿಕೊಂಡು ಕಾಪಾಡಿಕೊಳ್ಳುವುದರಲ್ಲಿ ಅಜಾಗರೂಕರಾಗುತ್ತೇವೆ. ಹೊಸದಾಗಿ ಕೊಂಡ ವಸ್ತುಗಳು ಮೂಲೆ ಸೇರುವುದು, ಹೊಸ ಸ್ನೇಹ, ಸಂಬಂಧಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡು ಶಿಥಿಲವಾಗುವುದು, ಅತ್ಯಂತ ಶ್ರಮದಿಂದ, ಅನೇಕ ದೇಶಪ್ರೇಮಿಗಳ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯ ತನ್ನ ಮೌಲ್ಯವನ್ನು ಕಳೆದುಕೊಳ್ಳುವುದು,....... ಈ ನಮ್ಮ ಮನಃಸ್ಥಿತಿಯಿಂದಲೇ ಇರಬಹುದು. ಹೊಸತು ಎನಿಸಿಕೊಂಡದ್ದು ಹಳತರ ಗುಂಪನ್ನು ಸೇರಿಯೇಬಿಡುತ್ತದೆ! ಹಳೆಯ ರಾಶಿಯಲ್ಲಿ ಒಂದಾಗಿಯೂ ಬಿಡುತ್ತದೆ! ಹಳೆಯದು ಎನ್ನುವುದು ಹೊಸದರಲ್ಲಿಯೇ ಅಡಗಿದೆ ಎನ್ನುವುದನ್ನು ಡಿ.ವಿ.ಜಿ.ಯವರು ಹೀಗೆ ಹೇಳುತ್ತಾರೆ,

`ಹಳೆ ಸೂರ್ಯ ಹಳೆ ಚಂದ್ರ ಹಳೆ ಭೂಮಿ ಹಳೆ ನೀರು|
ಹಳೆ ಹಿಮಾಚಲ ಗಂಗೆ ಹಳೆ ವಂಶಚರಿತೆ||
ಹಳೆಯವಿವು ನೀನಿದರೊಳಾವುದನು ಕಳೆದೀಯೊ?|
ಹಳದು ಹೊಸದೊಳಿರದೆ? -ಮಂಕುತಿಮ್ಮ||’

ಹಳೆಯ ಬೆಟ್ಟದ ಮೇಲೆ ಬಿದ್ದ ಮಳೆ ನೀರು ಹಳೆಯ ನೆಲದ ಮೇಲೆಯೇ ಹರಿದು ಹೊಳೆಯನ್ನು ಸೇರಿದಾಗ ಅದನ್ನು ‘ಹೊಸನೀರು’ ಎನ್ನುತ್ತೇವೆ. ಹಳೆಯದೇ ಹೊಸತಾಗಿ ಬೆಳೆಯುತ್ತದೆ. ಹಾಗೆಯೇ ಹೊಸದೂ ಹಳೆಯದಾಗುತ್ತದೆ ಎನ್ನುವುದನ್ನು ತಮ್ಮ ‘ಮಂಕುತಿಮ್ಮನ ಕಗ್ಗ’ದಲ್ಲಿ ಅನೇಕ ಉದಾಹರಣೆಗಳನ್ನು ನೀಡುತ್ತಾ ಹೇಳಿದ್ದಾರೆ.

ಹಳೆಯದು ಮತ್ತು ಹೊಸದು ಎರಡರ ಸಾಮರಸ್ಯವನ್ನು, ‘ಹೊಸ ಚಿಗುರು, ಹಳೆ ಬೇರು ಕೂಡಿರಲು ಮರ ಸೊಗಸು’ ಎಂಬುದರ ಮೂಲಕ ಸಾರುತ್ತಾರೆ. ಹಾಗೆಯೇ ಹಳೆಯದೇ ಶ್ರೇಷ್ಠವೆಂದು ಹಲುಬುತ್ತಾ ಹೊಸತಿಗೆ ತಮ್ಮನ್ನು ತಾವು ಹೊಂದಿಸಿಕೊಳ್ಳಲಾರದೇ ಅಲ್ಲೇ ಜಡವಾಗಬಾರದೆಂದು ಹೀಗೆ ಹೇಳುತ್ತಾರೆ,

`ಹೊಸತನವೆ ಬಾಳು; ಹಳಸಿಕೆಯೆಲ್ಲ ಸಾವು ಬಿಡು|
ರಸವು ನವನವತೆಯಿಂದನುದಿನವು ಹೊಮ್ಮಿ||
ಹಸನೊಂದು ನುಡಿಯಲ್ಲಿ ದಡೆಯಲ್ಲಿ ನೋಟದಲಿ|
ಪಸರುತಿರೆ ಬಾಳ್ ಚೆಲುವು--ಮಂಕುತಿಮ್ಮ||’

ಬದುಕಿನ ಈ ಪ್ರವಾಹದಲ್ಲಿ ನಮ್ಮನ್ನು ನಾವು ಆಯಾ ಪರಿಸ್ಥಿತಿಗೆ ತಕ್ಕಂತೆ ಸರಿಪಡಿಸಿಕೊಳ್ಳುತ್ತಾ, ಓರೆಕೋರೆಗಳನ್ನು ತಿದ್ದಿಕೊಳ್ಳುತ್ತಾ ಜೊತೆಗೇ ನಮ್ಮತನವನ್ನೂ ಉಳಿಸಿಕೊಂಡು ಮುಂದೆ ಸಾಗುವುದೇ ನಿಜವಾದ ಜೀವನ. ಇಂದಿನ ಈ ತಾಂತ್ರಿಕ ಯುಗದಲ್ಲಿ ನಮಗೆ ಅತ್ಯವಶ್ಯಕವಾದ ಜ್ಞಾನವನ್ನು ಗಳಿಸಿಕೊಂಡು ಹೊಸತರೊಟ್ಟಿಗೇ ಮುನ್ನಡೆಯಬೇಕು ಇಲ್ಲದಿದ್ದರೆ ದಂಡೆಗೆ ಸಿಕ್ಕಿಕೊಂಡ ಕೊರಡಾಗಿಬಿಡುತ್ತೇವೆ. ಯಾವುದೋ ಹಳೆಯ ಕಾಲವೇ ಶ್ರೇಷ್ಟವೆಂದು ಹಲುಬುತ್ತಾ ಅಲ್ಲೇ ಸ್ಥಗಿತವಾಗಿಬಿಡುತ್ತೇವೆ. ಇವತ್ತಿನ ನಮ್ಮ ಜೀವನ ನಿನ್ನೆಯ ಫಲಶೃತಿಯಾಗಿರುತ್ತದೆ. ‘ನಾವು ನಿನ್ನೆಯವರಾಗಿ ಬಾಳುತ್ತೇವೆ.’ ಎಂಬ ಒಂದು ಉಕ್ತಿ ಇದೆ. ನಾಳಿನ ನಮ್ಮ ಜೀವನವನ್ನು ಹಸನುಗೊಳಿಸಿಕೊಳ್ಳಲು ಇಂದಿನಿಂದಲೇ ಉತ್ತಮ ಪ್ರಯತ್ನದೊಂದಿಗೆ ರೂಪಿಸಿಕೊಳ್ಳಬೇಕಾಗುತ್ತದೆ. ಈಗ ನಾವು ಮಾಡುವ ಅತ್ಯುತ್ತಮವೆಂದುಕೊಳ್ಳುವ ಆಲೋಚನೆಗಳೂ ನಮ್ಮ ಹಿಂದಿನವರು ಆಲೋಚಿಸಿ, ಕೆಲವೊಮ್ಮೆ ದಾಖಲಿಸಿದವೇ ಆಗಿರುತ್ತವೆ ಎನ್ನುವುದೂ ನಂಬಲೇಬೇಕಾದ ಸತ್ಯವಾಗಿದೆ! ಈ ಲೇಖನವನ್ನು ಬರೆಯಲು ಪ್ರಾರಂಭಿಸಿ ಒಂದು ಪ್ಯಾರಾವನ್ನು (ನನ್ನದೇ ಸ್ವಂತವಾದ ಹೊಸ ಆಲೋಚನೆ ಎಂದುಕೊಂಡು!) ಬರೆದು ನಂತರ `ಹೊಸ ಚಿಗುರು, ಹಳೆ ಬೇರು........’ನೆನಪಾಗಿ ‘ಡಿ.ವಿ.ಜಿ. ಕೃತಿಶ್ರೇಣಿ’ಯಲ್ಲಿ `ಮಂಕುತಿಮ್ಮನ ಕಗ್ಗ’ವನ್ನು ತೆರೆದು ನೋಡಿದಾಗ ‘ಹೊಸತು-ಹಳತು’ಗೆ ಸಂಬಂಧಿಸಿದ ಅನೇಕ ಪದ್ಯಗಳಿದ್ದುದು ಕಂಡುಬಂದಿತು! ಈಗ ‘ಹೊಸತು’ ಯಾವುದು? ‘ಹಳತು’ ಯಾವುದು?
೨೦೧೦ನೇ ಇಸವಿಯು ಮುಕ್ತಾಯವಾಗಿ ೨೦೧೧ನೇ ಇಸವಿಯು ಪ್ರಾರಂಭವಾಗಿರುವ ಈ ಸಂದರ್ಭದಲ್ಲಿ ಹಳೆಯವರ್ಷ, ಹೊಸವರ್ಷ ಎನ್ನುವ ತಾರತಮ್ಯವೇಕೆ? ೨೦೧೦ರಲ್ಲಿ ನಾವು ಯಾವ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆಯೋ ಅದರ ಪ್ರತಿಲನವೇ ೨೦೧೧ ಆಗಿರುತ್ತದೆ. ಇಲ್ಲದೇ ಬರಿಗೈಯಲ್ಲಿ ಅಬ್ಬರ, ಆಡಂಬರಗಳೊಡನೆ ಸ್ವಾಗತಿಸಿದರೆ ನಮಗರಿವಿಲ್ಲದಂತೆಯೇ ದಿನಗಳುರುಳಿ ವರುಷವು ಜಾರಿಹೋಗುತ್ತದೆ.

‘ನವ ನವ ಪ್ರಶ್ನೆಗಳು, ನವ ನವ ಪರೀಕ್ಷೆಗಳು
ದಿವಸಾಬ್ಧ ಯುಗಚಕ್ರ ತಿರುತಿರುಗಿದಂತೆ
ಪ್ರವಹಿಪ್ಪುವದರಂತೆ ಪೌರುಷ ಹಿತಪ್ರಜ್ಞೆ
ಅವಿರತದ ಚೈತನ್ಯ -ಮಂಕುತಿಮ್ಮ.’ ಎಂದು ಡಿ.ವಿ.ಜಿ.ಯವರು ಹೇಳಿದಂತೆ ಕಾಲಗತಿಯಲ್ಲಿ ಹೊಸ ಹೊಸ ಪ್ರಶ್ನೆಗಳು, ಹೊಸ ಹೊಸ ಪರೀಕ್ಷೆಗಳನ್ನು ಎದುರಿಸಲು ನಮ್ಮನ್ನು ಸಮರ್ಥರಾಗಿಸಿಕೊಂಡು ನಮ್ಮಲ್ಲಿಯ ‘ಚೈತನ್ಯ'ವನ್ನು ನಿರಂತರವಾಗಿ ಕಾಯ್ದುಕೊಳ್ಳೋಣ.

ಎಲ್ಲರಿಗೂ ೨೦೧೧ರ ಶುಭಾಶಯಗಳು.

Friday, December 24, 2010

ಮನದ ಅ೦ಗಳದಿ.............೨೩. ದಿವ್ಯ ಚೇತನ

ಬಹಳ ಹಿಂದಿನಿಂದಲೂ ಒಂದು ನಂಬಿಕೆಯಿದೆ. ಭೂಮಿಯ ಮೇಲೆ ಅನ್ಯಾಯ, ಅಧರ್ಮಗಳು ಹೆಚ್ಚಾದಾಗ ದಿವ್ಯಶಕ್ತಿಯು ಜನ್ಮವೆತ್ತಿ ಧರ್ಮದ ಪುನಃಸ್ಥಾಪನಾ ಕಾರ್ಯವು ನಡೆಯುತ್ತದೆ, ಎಂದು. ಅದನ್ನೇ ಭಗವದ್ಗೀತೆಯಲ್ಲಿ ‘ಧರ್ಮ ಸಂಸ್ಥಾಪನಾಯಾರ್ಥಂ ಸಂಭವಾಮಿ ಯುಗೇ ಯುಗೇ’ ಎಂದು ಶ್ರೀ ಕೃಷ್ಣನು ಹೇಳಿದ್ದಾನೆ. ಈ ಭೂಮಿಯ ಮೇಲೆ ನಮ್ಮೆಲ್ಲರ ನಡುವೆಯೇ ನಮ್ಮೆಲ್ಲರಂತೆಯೇ ಜನಿಸಿ ತಮ್ಮ ಅದ್ವಿತೀಯ ಜ್ಞಾನ ಪ್ರಭೆಯಿಂದ, ಅನನ್ಯ ಪ್ರೀತಿಯಿಂದ ತಮ್ಮ ಅಂತರಾಳದ ದಿವ್ಯ ಸಂದೇಶವನ್ನು ಸಾರಿ ನಿರ್ಗಮಿಸಿದ ಚೇತನಗಳ ಬಗ್ಗೆಯೂ ತಿಳಿದುಕೊಳ್ಳುತ್ತಿದ್ದೇವೆ. ಭೂಮಂಡಲದ ಬೇರೆಬೇರೆ ಪ್ರದೇಶಗಳಲ್ಲಿ ಹುಟ್ಟಿ, ಬೆಳೆದು, ತಮ್ಮ ಅಂತಃಪ್ರಜ್ಞೆಗೆ ಗೋಚರಿಸಿದುದನ್ನು ಅವರು ಸಾರಿದ್ದರೂ ಮೂಲತಃ ಆ ಎಲ್ಲಾ ಚಿಂತನೆಗಳ ಸಾರವೂ ಒಂದೇ ಆಗಿರುವುದನ್ನು ಮನಗಾಣುತ್ತೇವೆ. ಏಕೆಂದರೆ ಅವೆಲ್ಲದರ ಮೂಲವೂ ಒಂದೇ ಆಗಿದೆ. ಪ್ರಕೃತಿಯು ಜೈವಿಕ, ಅಜೈವಿಕಗಳ ನಡುವೆ ಸಮತೋಲನವನ್ನು ಕಾಪಾಡಲು ಪ್ರಯತ್ನಿಸುತ್ತಿರುವಂತೆಯೇ ಮೌಲ್ಯಗಳು ಅಪಮೌಲ್ಯವಾಗದಂತೆಯೂ ಒಂದು ಪ್ರಯತ್ನ ನಡೆಯುತ್ತಿದೆಯೇನೋ ಎನಿಸುತ್ತದೆ. ಆದರೆ ಮನುಕುಲ ದಿವ್ಯ ಚೇತನಗಳು ನೀಡಿರುವ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಶಾಂತಿಯಿಂದ ಬಾಳದೇ ಒಂದೊಂದು ಪ್ರತ್ಯೇಕ ಗುಂಪಾಗಿ ತಮ್ಮನ್ನೇ ತಾವು ಶ್ರೇಷ್ಠರೆಂದು ಪರಿಗಣಿಸಿಕೊಂಡು, ಇತರ ಗುಂಪುಗಳನ್ನು ತುಚ್ಛೀಕರಿಸುತ್ತಾ, ಅಥವಾ ತಮ್ಮ ಗುಂಪಿನತ್ತ ಸೆಳೆದುಕೊಳ್ಳುವ ಪ್ರಯತ್ನ ನಡೆಸುತ್ತಾ ಅಶಾಂತಿಗೆ ಕಾರಣರಾಗುತ್ತಿದ್ದಾರೆ. ಮೌಢ್ಯದಿಂದ ಮೂಢನಂಬಿಕೆಗಳನ್ನೇ ಪೋಷಿಸಿಕೊಂಡು ಅವನತಿಗೆ ಪ್ರೇರಕರಾಗುತ್ತಿದ್ದಾರೆ. ಏನೇ ಆದರೂ ತಮ್ಮ ವಿಶಿಷ್ಟ ಆಲೋಚನಾ ಶಕ್ತಿಯಿಂದ, ಅಂತಃಸತ್ವದಿಂದ ಜಗತ್ತನ್ನು ಬೆಳಗುವ ಚೇತನಗಳು ಅಲ್ಲೊಂದು, ಇಲ್ಲೊಂದು ಉದಯಿಸುತ್ತಲೇ ಇವೆ! ಅಂಥಾ ಒಂದು ಚಿರ ಸ್ಮರಣೀಯ ಚೇತನ ಯೇಸುಕ್ರಿಸ್ತ.
ಒಬ್ಬ ವ್ಯಕ್ತಿಯ ಅಂತರಾಳವನ್ನು ಅರ್ಥಮಾಡಿಕೊಳ್ಳಬೇಕಾದರೆ ಆತನ ಮನದಾಳಕ್ಕಿಳಿಯುವ ಸಾಮರ್ಥ್ಯವನ್ನು ಹೊಂದಿರುವವರೇ ಆಗಬೇಕು. ಆಧ್ಯಾತ್ಮಿಕ ಕವಿ ಖಲೀಲ್ ಗಿಬ್ರಾನ್ ಅವರ ಅಪರೂಪವೆನಿಸುವ ಪುಸ್ತಕ Jesus, The Son Of Man (His Words and His deeds as told and recorded by those who knew Him) ದಲ್ಲಿ ಈ ಕೆಲಸವನ್ನು ಸಮರ್ಥವಾಗಿ ಕೈಗೊಂಡಿದ್ದಾರೆ. ‘ಖಲೀಲ್ ಗಿಬ್ರಾನ್’ ಪುಸ್ತಕದ ಲೇಖಕ ಪ್ರಭುಶಂಕರರು ಹೀಗೆ ಹೇಳುತ್ತಾರೆ, ‘ಇದು ಕಲ್ಪನೆಯ ಸೃಷ್ಟಿ. ಅವನನ್ನು ಕಂಡವರು, ಬಲ್ಲವರು ಹೇಗೆ ಹೇಳಿರಬಹುದು ಎಂಬುದನ್ನು ಅಂದಿನ ಆವರಣವನ್ನು ರಚಿಸಿಕೊಂಡು ಮತ್ತೆ ಸೃಷ್ಟಿ ಮಾಡಿದ್ದು ಮತ್ತೆ ಯೇಸು ನಮ್ಮ ನಡುವೆ ಬಾಳುತ್ತಿರುವಂತಹ ಅನುಭವವನ್ನು ತಂದಿದೆ ಗಿಬ್ರಾನನ ಕಲಾಮಯ ಲೇಖನಿ. ಅವನ ವರ್ಣ ಶಿಲ್ಪ, ಕಾವ್ಯ ಶಕ್ತಿ ಎರಡೂ ಒಂದು ಕಡೆ ಅಭೂತಪೂರ್ವವಾಗಿ ಮಿಳಿತವಾಗಿದ್ದರೆ ಅದು ಇಲ್ಲಿ. ಎಪ್ಪತ್ತು ಪಾತ್ರಗಳುಮಾತನಾಡುತ್ತವೆ. ಎಲ್ಲಾ ಈ ಲೆಬನಾನಿನ ವ್ಯಕ್ತಿಯ ಮೂಲಕ. ಎಪ್ಪತ್ತು ಪಾತ್ರಗಳಿಗೆ ಪ್ರತ್ಯೇಕ ವ್ಯಕ್ತಿತ್ವ ಉಂಟು. ಎಪ್ಪತ್ತು ಜತೆ ಕಣ್ಣುಗಳ ಮೂಲಕ ಕ್ರಿಸ್ತನನ್ನು ಕಂಡ ಭಾಗ್ಯ ಈತನದು.’
ಮೊದಲನೆಯ ನಿರೂಪಣೆ ಯೇಸುವಿನ ಶಿಷ್ಯರಲ್ಲಿ ಒಬ್ಬನಾದ ಜೇಮ್ಸನದು. ‘ಯೇಸು ಜೆರೂಸೆಲಮ್ಮಿನಲ್ಲಿ ಜನ ಸಮೂಹಕ್ಕೆ ಸ್ವರ್ಗದ ರಾಜ್ಯವನ್ನು ಕುರಿತು ಮಾತನಾಡಿದ. ಆತ ಕಾರಕೂನರನ್ನೂ ಕರ್ಮಜಡರನ್ನೂ ತೆಗಳಿದ. ಆಗ ಆ ಗುಂಪಿನಲ್ಲಿ ಕೆಲವರು ಅವರನ್ನೂ ವಹಿಸಿಕೊಂಡು ಯೇಸುವಿನ ಮೇಲೆ, ನಮ್ಮ ಮೇಲೆ ಕೂಡ ಕೈ ಮಾಡಬಂದರು. ಅಲ್ಲಿಂದ ಹೊರಟ ಯೇಸು ನಮ್ಮನ್ನು ಕುರಿತು ಹೀಗೆ ಹೇಳಿದ, ‘ನನ್ನ ಕಾಲ ಇನ್ನೂ ಬಂದಿಲ್ಲ. ನಾನು ನಿಮಗೆ ಹೇಳಬೇಕಾದ್ದು ಬಹಳ ಇದೆ. ನಾನು ಜಗತ್ತನ್ನು ಬಿಡುವ ಮೊದಲು ಮಾಡಬೇಕಾದ ಕೆಲಸವೂ ಬಹಳ ಇದೆ.’
ಎರಡನೆಯ ನಿರೂಪಣೆ ಅನ್ನ, ಮೇರಿಯ ತಾಯಿ, ಎಂದರೆ ಯೇಸುವಿನ ಅಜ್ಜಿಯದು. ಮೊಮ್ಮಗನ ಜನನ, ಮಗಳ ಭಾವನೆಗಳು, ಕ್ರಿಸ್ತನ ಸಾವನ್ನು ತಿಳಿಯದೆ, ಅವನನ್ನು ಕಾಣದೆ ಅವಳು ಪಡುವ ಪರಿತಾಪ ಇವುಗಳನ್ನು ಗಿಬ್ರಾನ್ ಹೃದಯಂಗಮವಾಗಿ ಚಿತ್ರಿಸಿದ್ದಾನೆ. ಅಜ್ಜಿ ಹೇಳುತ್ತಾಳೆ, ‘.....ಮಗು ದೇಹ, ಚೇತನಗಳಲ್ಲಿ ಬೆಳೆಯಿತು. ಅದಕ್ಕೂ ಇತರ ಮಕ್ಕಳಿಗೂ ವ್ಯತ್ಯಾಸವಿತ್ತು.ಅದು ತನ್ನಷ್ಟಕ್ಕೆ ತಾನು ಇರುತ್ತಿತ್ತು.ಅದನ್ನು ಹತೋಟಿಯಲ್ಲಿಡುವುದೇ ಕಷ್ಟವಾಗಿತ್ತು. ಅವನನ್ನು ಹೊಡೆಯುವುದು ನನಗೆ ಸಾಧ್ಯವೇ ಇರಲಿಲ್ಲ. ಆದರೆ ನಜರೆತ್ ನಲ್ಲಿ ಎಲ್ಲರೂ ಅವನನ್ನು ಪ್ರೀತಿಸುತ್ತಿದ್ದರು. ಅದು ಏಕೆ ಎಂದು ನನ್ನ ಹೃದಯಕ್ಕೆ ತಿಳಿದಿತ್ತು. ಅನೇಕ ಸಲ ಅವನು ಆಹಾರವನ್ನು ತೆಗೆದುಕೊಂಡು ಹೋಗಿ ದಾರಿಯಲ್ಲಿ ಹೋಗುವವರಿಗೆ ಕೊಟ್ಟುಬಿಡುತ್ತಿದ್ದ.ಅವನಿಗೆ ತಿನ್ನಲು ಎಂದು ಕೊಟ್ಟ ಸಿಹಿಯನ್ನು ತಾನು ರುಚಿ ನೋಡದೆ ಉಳಿದ ಮಕ್ಕಳಿಗೆ ಹಂಚುತ್ತಿದ್ದ. ನಮ್ಮ ತೋಟದ ಮರಗಳನ್ನು ಹತ್ತಿ ಹಣ್ಣುಗಳನ್ನು ಕೀಳುತ್ತಿದ್ದ, ಆದರೆ ಅದು ಅವನಿಗಲ್ಲ! ಮಲಗಲೆಂದುನಾನು ಹಾಸಿಗೆಗೆ ಒಯ್ದಾಗ ಅವನು ಹೇಳುತ್ತಿದ್ದ: ನಮ್ಮ ಅಮ್ಮನಿಗೂ ಬೇರೆಯವರಿಗೂ ಹೇಳು, ನನ್ನ ದೇಹ ಮಾತ್ರ ನಿದ್ರಿಸುತ್ತದೆ. ನನ್ನ ಮನಸ್ಸೆಲ್ಲಾ ಅವರ ಜೊತೆ ಇರುತ್ತದೆ, ಅವರ ಮನಸ್ಸು ನನ್ನ ಬೆಳಗ್ಗೆಗೆ ಬರುವವರೆಗೂ.....’
ಅತ್ಯಂತ ಹೃದಯಂಗಮವಾದ ನಿರೂಪಣೆ ಮೇರಿ ಮಗ್ದಲೀನಳದು. ‘ನಾನಾಗ ನನ್ನ ಆತ್ಮದಿಂದ ವಿಚ್ಛೇದನ ಪಡೆದಿದ್ದ ಹೆಂಗಸಾಗಿದ್ದೆ......ಆದರೆ ಆತನ ಉಷಸ್ಸಿನ ಕಣ್ಣುಗಳು ನನ್ನ ಕಣ್ಣುಗಳ ಒಳಗನ್ನು ನೋಡಿದಾಗ ನನ್ನ ರಾತ್ರಿಯ ನಕ್ಷತ್ರಗಳು ಮಾಸಿಹೋದವು. ನನ್ನೊಳಗಿನ ವಿಷಸರ್ಪ ನಾಶವಾಯಿತು. ನಾನು ಮಿರಿಯಮ್, ಬರೀ ಮಿರಿಯಮ್ ಆದೆ....’
ಮತ್ತೊಬ್ಬಳು ಜೇವಾನಾ, ಅವಳು ತನ್ನ ಪ್ರಿಯನ ಜೊತೆಯಲ್ಲಿದ್ದಾಗ ಹಿಡಿದು ಯೇಸು ಉಪದೇಶ ಕೊಡುತ್ತಿದ್ದ ಕಡೆಗೆ ಕರೆದುಕೊಂಡು ಹೋಗುತ್ತಾರೆ. ‘ಅವರ ಉದ್ದೇಶ ಯೇಸುವಿನ ಮುಂದೆ ನನ್ನನ್ನು ನಿಲ್ಲಿಸಿ ಅವರನ್ನು ಪರೀಕ್ಷಿಸಿ ಬೋನಿಗೆ ಬೀಳಿಸುವುದು. ಆದರೆ ಯೇಸುಸ್ವಾಮಿ ನನ್ನನ್ನು ವಿಚಾರಣೆ ಮಾಡಲಿಲ್ಲ. ನನ್ನನ್ನು ನಾಚಿಕೆಗೆ ಗುರಿಮಾಡಿದ್ದವರನ್ನೇ ನಾಚಿಕೆಗೆ ಗುರಿಮಾಡಿದರು. ಅವರನ್ನೇ ದೂಷಿಸಿದರು....ಬಳಿಕ ಬದುಕಿನ ಎಲ್ಲ ರುಚಿಹೀನ ಫಲಗಳೂ ನನ್ನ ಬಾಯಿಗೆ ಮಧುರವಾದವು, ವಾಸನೆಯಿಲ್ಲದ ಹೂಗಳೆಲ್ಲಾ ನನ್ನ ಮೂಗಿಗೆ ಕಂಪನ್ನು ಸೂಸಿದವು. ಕಳಂಕವಿಲ್ಲದ ನೆನಪುಗಳ ಹೆಣ್ಣು ನಾನಾದೆ. ಸ್ವತಂತ್ರಳಾದೆ, ಇತರರೆದುರು ತಲೆತಗ್ಗಿಸಬೇಕಾದ ಸ್ಥಿತಿಯಿಂದ ಬಿಡುಗಡೆ ಪಡೆದೆ.’........
ಇನ್ನು ಆತ ದೂಷಿಸಿದವರ ದೃಷ್ಟಿಯಿಂದಲೂ ಗಿಬ್ರಾನ್ ಯೇಸುವನ್ನು ನೋಡಿದ್ದಾನೆ. ದೂಷಕರ ಪಂಕ್ತಿಯಲ್ಲಿ ಸೃಷ್ಟಿಯಾಗಿರುವ ‘ಗಲಿಲಿಯಾದ ವಿಧವೆ’ ಎಂಬುದು ಒಂದು ಕರುಣೆಯ ಕಾವ್ಯ. ಯೇಸುವಿನ ವ್ಯಕ್ತಿತ್ವದಿಂದ ಆಕರ್ಷಿತನಾದ ಆಕೆಯ ಮಗ ಯೇಸುವಿನೊಡನೆ ಹೊರಟುಹೋದ. ಇದರಿಂದ ಅಳಿಸಲಾಗದ ದ್ವೇಷವನ್ನು ಹೊಂದಿದ ಆಕೆ ಹೀಗೆ ಹೇಳುತ್ತಾಳೆ, ‘......ನಜರೆತ್ತಿನ ಯೇಸು ದುಷ್ಟ. ಏಕೆಂದರೆ ಯಾವ ಸಜ್ಜನ ತಾನೆ ತಾಯಿ ಮಕ್ಕಳನ್ನು ಅಗಲಿಸುತ್ತಾನೆ?........’
ಗಿಬ್ರಾನನ ಕಣ್ಣಿನಲ್ಲಿ ಕ್ರಿಸ್ತ ದಿವ್ಯ ಜ್ಞಾನ ಪಡೆದ ಮಾನವ, ಎಲ್ಲೆಯಿಲ್ಲದ, ಅಳೆಯಲಾರದ ಶಕ್ತಿಯನ್ನು ಪಡೆದವನು, ಪರಮ ಕವಿ! ಕೊನೆಯಲ್ಲಿ ಒಂದು ದೀರ್ಘ ಕವನವನ್ನು ಬರೆದು ಅದರಲ್ಲಿ ಯೇಸು ನಮ್ಮ ನಡುವೆ ಇನ್ನೂ ಇದ್ದಾನೆ, ಅವನ ಬದುಕಿಗೆ ಸಂಬಂಧಪಟ್ಟವರು, ಅವನನ್ನು ಬದುಕಿನಲ್ಲಿ ಕಂಡವರು ನಮ್ಮ ನಡುವೆ ಇನ್ನೂ ಇದ್ದಾರೆ ಎಂದು ತೋರಿಸಿದ್ದಾನೆ!
ಪ್ರೀತಿ, ಕರುಣೆ, ಕ್ಷಮಾಗುಣವನ್ನು ತನ್ನ ಉಸಿರಾಗಿಸಿಕೊಂಡಿದ್ದು ಜಗತ್ತಿನ ಕಲ್ಯಾಣಕ್ಕಾಗಿ ತನ್ನನ್ನೇ ಅರ್ಪಿಸಿಕೊಂಡ ಯೇಸುವಿನ ಜನ್ಮದಿನದ ಈ ಸಂದರ್ಭದಲ್ಲಿ ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.

Friday, December 17, 2010

ಮನದ ಅ೦ಗಳದಿ........22 ಸೌಂದರ್ಯ-ಕುರೂಪ

ಸಾಮಾನ್ಯವಾಗಿ ಯಾರನ್ನಾದರೂ ಪರಿಚಿತರನ್ನು ಅಪರೂಪಕ್ಕೊಮ್ಮೆ ನೋಡಿದಾಗ ಮೊದಲು ನಾವು ಗಮನಿಸುವುದು ಅವರು ದಪ್ಪವಾಗಿದ್ದಾರೊ-ತೆಳ್ಳಗಾಗಿದ್ದಾರೊ ಅಥವಾ ಕಪ್ಪಗಾಗಿದ್ದಾರೊ-ಬೆಳ್ಳಗಾಗಿದ್ದಾರೊ ಎಂದು. ಸಲಿಗೆ ಇದ್ದರೆ ನೇರವಾಗಿ ಹೇಳಿಯೂ ಬಿಡುತ್ತೇವೆ. ವ್ಯಕ್ತಿಯ ಬಾಹ್ಯ ರೂಪಕ್ಕೆ ನಾವು ಕೊಡುವ ಪ್ರಾಮುಖ್ಯತೆಯೇ ಇದಕ್ಕೆ ಕಾರಣವಾಗಿರಲೂ ಬಹುದು. ಒಬ್ಬರನ್ನು ‘ಸುಂದರ’ ಎಂದು ಪರಿಗಣಿಸಬೇಕಾದರೆ ಅವರ ಎತ್ತರ, ಗಾತ್ರ, ಬಣ್ಣ ಇವುಗಳನ್ನೇ ಪ್ರಮುಖವಾಗಿ ಪರಿಗಣಿಸುತ್ತೇವೆ. ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಮದುವೆ ಮಾಡುವಾಗ ವಧೂ-ವರರನ್ನು ಜೋಡಿಸುವಾಗ ಅವರ ಬಾಹ್ಯ ಗೋಚರತೆಗೇ ಹೆಚ್ಚಿನ ಒತ್ತು ನೀಡುತ್ತಿದ್ದರು ಎನ್ನುವುದಕ್ಕೆ ವರಸಾಮ್ಯ ಎನ್ನುವ ಪದವೇ ಸಾಕ್ಷಿಯಾಗಿದೆ. ಇತ್ತೀಚೆಗೆ ಹೆಚ್ಚಾಗಿ ನಡೆಸುತ್ತಿರುವ ಸೌಂದರ್ಯ ಸ್ಪರ್ಧೆಗಳಲ್ಲಿ ದೇಹದ ಅಳತೆಯೇ ಪ್ರಮುಖ ಮಾನದಂಡವಾಗಿದೆ. ಈ ಅಳತೆಗಳು ಆರೋಗ್ಯ ಸೂಚಕವಾಗಿಯೂ ಇರಬಹುದು ಎಂದೂ ಎಷ್ಟೋ ಭಾರಿ ಅಂದುಕೊಂಡಿದ್ದೇನೆ. ಆದರೆ ವ್ಯಕ್ತಿಯನ್ನು ವಸ್ತುವಿನ ಮಟ್ಟಕ್ಕೆ ಇಳಿಸುವಷ್ಟು ಅತಿರೇಕವನ್ನು ಕಾಣುತ್ತಿರುವುದು ವಿಷಾದನೀಯ. ಆರೋಗ್ಯವಂತ ವ್ಯಕ್ತಿ ಹೇಗಿದ್ದರೂ ಸುಂದರನೇ. ಆದರೆ ಆರೋಗ್ಯ ಹಾಗೂ ಸೌಂದರ್ಯ ದೇಹಕ್ಕಷ್ಟೇ ಸೀಮಿತವಲ. ಒಬ್ಬ ವ್ಯಕ್ತಿಯಲ್ಲಿ ನಿಜವಾದ ಸೌಂದರ್ಯ ಹೊರಹೊಮ್ಮಬೇಕಾದರೆ ಅಂತರಂಗದ ಸೌಂದರ್ಯವನ್ನೂ ಹೊಂದಿರುವುದು ಬಹಳ ಅಗತ್ಯವಾಗುತ್ತದೆ. ‘ಸುಂದರನಾದ ಮೂರ್ಖನು ಕಣ್ಣಿಗೆ ಆನಂದವನ್ನೂ ಮನಸ್ಸಿಗೆ ನೋವನ್ನೂ ಉಂಟುಮಾಡುತ್ತಾನೆ’ ಎನ್ನುವ ಒಂದು ಉಕ್ತಿ ಇದೆ!
ಆತ್ಮೀಯ ಅನುಬಂಧ ಇರುವೆಡೆ ನಾವು ಸೌಂದರ್ಯವನ್ನು ಕಾಣುತ್ತೇವೆ. ‘ಮಜನೂ ದೃಷ್ಟಿ' ಎನ್ನುವ ಹನಿಗವನ ಈ ರೀತಿ ಇದೆ,

‘ಸೌಂದರ್ಯ ಅಡಗಿರುವುದು
ನೋಡುವ ಕಣ್ಣುಗಳಲ್ಲಲ್ಲ
ಆಸ್ವಾದಿಸುವ ಮನಗಳಲ್ಲಿ,
ಎಲ್ಲರ ಕಣ್ಣಿನಲ್ಲಿ
ಸಾಮಾನ್ಯ ಲೈಲಾ
ಮಜನೂ ದೃಷ್ಟಿಯಲ್ಲಿ
ಮನೋಜ್ಞ ಚೆಲುವೆ!’

ನಮ್ಮ ಹಾಗೂ ಇತರ ಎಲ್ಲಾ ಪುರಾಣ, ಪುಣ್ಯಕಥೆಗಳಲ್ಲಿಯೂ ದೇವತೆಗಳೆಂದರೆ ಪರಮ ಸೌಂದರ್ಯದ ಖನಿಗಳಂತೆಯೂ, ರಾಕ್ಷಸರು ಹಾಗೂ ಭೂತ-ಪ್ರೇತಗಳನ್ನು ವಿಕಾರರೂಪದ ಕುರೂಪಿಗಳಂತೆಯೂ ಚಿತ್ರಿಸಿರುವುದನ್ನು ಕಾಣುತ್ತೇವೆ. ಏಕೆ ಹೀಗೆ ಎಂದು ಮೊದಲು ಬಹಳವಾಗಿ ಚಿಂತಿಸುತ್ತಿದ್ದೆ. ಈಗ ತಿಳಿದಂತೆ ದೇವತೆ ಎಂಬ ಕಲ್ಪನೆಯೇ ಆಂತರಿಕ ಹಾಗೂ ಬಾಹ್ಯವಾಗಿ ಧನಾತ್ಮಕತೆಯಿಂದ ಕೂಡಿದೆ. ಎಲ್ಲಾ ದೇವತೆಗಳೂ ಒಳ್ಳೆಯವರೇ! ಅವರು ಕೆಟ್ಟ ಆಲೋಚನೆ ಅಥವಾ ಕಾರ್ಯವನ್ನು ಮಾಡಿದಾಗ ಶಾಪ ಉಂಟಾಗಿ ಕುರೂಪಿಗಳಾಗುತ್ತಾರೆ! ಸಂಪೂರ್ಣವಾಗಿ ಋಣಾತ್ಮಕ ಅಂಶಗಳಿಂದಲೇ ಆಗಿರುವುದೆಲ್ಲಾ ಕುರೂಪ ಎಂದು ಕಲ್ಪನೆ ಮಾಡಿರಬಹುದೆನಿಸುತ್ತದೆ. ಆದರೆ ವಾಸ್ತವವಾಗಿ ಯಾವುದೂ ಶೇಕಡಾ ನೂರರಷ್ಟು ಒಳ್ಳೆಯದು ಅಥವಾ ಕೆಟ್ಟದಾಗಿರುವುದು ಕಂಡುಬರುವುದಿಲ್ಲ,
ಪ್ರಭುಶಂಕರ ಅವರು ತಮ್ಮ `ಖಲೀಲ್ ಗಿಬ್ರಾನ್’’ ಕೃತಿಯಲ್ಲಿ ಹೀಗೆ ಹೇಳುತ್ತಾರೆ, ಲೋಕದಲ್ಲಿ ನಾವು ಯಾವುದನ್ನು ಸೌಂದರ್ಯ ಎನ್ನುತ್ತೇವೆಯೋ-ಎಂದು ಭ್ರಮಿಸುತ್ತೇವೆಯೋ ಎಂಬುದು ಸರಿಹೊಂದಬಹುದು-ಅದು ಸೌಂದರ್ಯ ಆಗಿರಬಹುದು, ಆಗಿಲ್ಲದೆಯೂ ಇರಬಹುದು. ಹಾಗೆಯೇ ಅಸೌಂದರ್ಯದ ವಿಷಯವೂ ಆಗಿದೆ. ಅಲ್ಲೂ ಭ್ರಮೆ ಸಾಧ್ಯ. ಬಹುಷಃ ಸುಂದರವಲ್ಲದ್ದನ್ನು ಜನ ಹೊಗಳಿ, ಸುಂದರವಾದದ್ದನ್ನು ಅಸುಂದರ ಎಂದು ಕರೆದದ್ದು ಅವನ ಮನಸ್ಸನ್ನು ಕಲಕಿತ್ತೋ ಏನೋ. ಉಡುಪುಗಳು (Garments) ಎಂಬ ಒಂದು ದೃಷ್ಟಾಂತದಲ್ಲಿ ಅದನ್ನು ಸೂಚಿಸಿದ್ದಾನೆ.
‘ಒಂದು ದಿನ ಸೌಂದರ್ಯ ಮತ್ತು ಕುರೂಪ ಒಂದು ಸಮುದ್ರ ತೀರದಲ್ಲಿ ಭೇಟಿಯಾದರು. ಒಬ್ಬರಿಗೊಬ್ಬರು ಹೇಳಿಕೊಂಡರು, ‘ನಾವು ಸಮುದ್ರ ಸ್ನಾನ ಮಾಡೋಣ.’
ಅವರಿಬ್ಬರೂ ಬಟ್ಟೆ ಬಿಚ್ಚಿ ಸ್ನಾನಕ್ಕೆ ಹೋದರು. ಸ್ವಲ್ಪ ಹೊತ್ತಾದ ಮೇಲೆ ಕುರೂಪ ದಂಡೆಗೆ ಬಂದು ಸೌಂದರ್ಯದ ಬಟ್ಟೆಗಳನ್ನು ಹಾಕಿಕೊಂಡು ನಡೆದುಬಿಟ್ಟಿತು. ಸೌಂದರ್ಯ ದಂಡೆಗೆ ಬಂದು ನೋಡಿದರೆ ತನ್ನ ಬಟ್ಟೆ ಇಲ್ಲ. ಬತ್ತಲೆ ಇರಲು ನಾಚಿಕೆಯಾಗಿ ಕುರೂಪದ ಉಡುಪನ್ನು ಹಾಕಿಕೊಂಡು ತನ್ನ ದಾರಿ ಹಿಡಿಯಿತು.
ಇಂದಿಗೂ ಜನ ಸೌಂದರ್ಯ ಕುರೂಪಗಳನ್ನು ತಪ್ಪಾಗಿಯೇ ತಿಳಿಯುತ್ತಾರೆ. ಆದರೆ ಕೆಲವರಿದ್ದಾರೆ, ಸೌಂದರ್ಯದ ಮುಖವನ್ನು ನೋಡಿದವರು. ಉಡುಪು ಕುರೂಪದ್ದೇ ಆದರೂ ಅವರು ಸೌಂದರ್ಯವನ್ನು ಬಲ್ಲರು. ಮತ್ತೆ ಕೆಲವರು, ಕುರೂಪವನ್ನು ಬಲ್ಲವರೂ ಇದ್ದಾರೆ. ಅವರಿಗೆ ಸೌಂದರ್ಯದ ಉಡುಪು ಕುರೂಪವನ್ನು ಮುಚ್ಚಿಡಲಾರದು.’

ನಾವು ನಮ್ಮ ಬಾಹ್ಯ ಸೌಂದರ್ಯಕ್ಕಷ್ಟೇ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ಆಂತರಿಕವಾಗಿ ಕುಸಿಯುತ್ತಿದ್ದೇವೇನೋ ಎನಿಸುತ್ತಿದೆ. ನಮ್ಮ ಅಂತರಂಗವನ್ನು ಸದೃಢಗೊಳಿಸಿಕೊಂಡು ನಮ್ಮಲ್ಲಿ ನೆಲೆಸಿರಬಹುದಾದ ಕುರೂಪವನ್ನು ಹೊರದೂಡುವ ಪ್ರಯತ್ನವನ್ನು ಕೈಗೊಳ್ಳಬೇಕಾಗಿದೆ.

Tuesday, December 14, 2010

ಜೇಬಾಯಣ

ಕಲ್ಯಾಣ ಸೇವೆ ಜೇಬಿನ ಬುಡದಲಿ
ಪುಟ್ಟಾಣಿಯ ಪುರಿ ಮೇಲೊಂದಿಷ್ಟು
ಗೋಲಿ ಬಳಪ ಮತ್ತೊಂದಿಷ್ಟು
ಬಂದ, ಬಂದ, ಸಣ್ತಮ್ಮಣ್ಣ
ಈ ಪದ್ಯವನ್ನು (ಆಗ `ಕವನ’ ಎಂದರೆ ಏನೆಂದೇ ನನಗೆ ತಿಳಿದಿರಲಿಲ್ಲ!) ಓದುವಾಗಲೆಲ್ಲಾ ನನಗೆ ಬಹಳ ದು:ಖವಾಗುತಿತ್ತು. ಏಕೆಂದರೆ ನನ್ನ ಕತ್ತಿನಿಂದ ಕಾಲಿನವರೆಗೂ ಇದ್ದ ಉದ್ದ ಲಂಗ, ರವಿಕೆಗಳಲ್ಲಿ ಒಂದಾದರೂ ಜೇಬಿರಲಿಲ್ಲ. ಅದೇ ಮಂಡಿಯ ಮೇಲಿದ್ದ ನನ್ನ ತಮ್ಮನ ನಿಕ್ಕರ್ನಲ್ಲಿ ಮೂರು, ನಾಲ್ಕು ಜೇಬುಗಳಿರುತ್ತಿದ್ದವು. ಅವು ಯಾವಾಗಲೂ ಹಬ್ಬಗಳಿಗನುಗುಣವಾಗಿ ವಿಶೇಷ ಖಾದ್ಯಗಳಿಂದ ತುಂಬಿ ತುಳುಕುತ್ತಾ ಅವನ ಜಿಹ್ವೆಯನ್ನು ಸದಾ ಕ್ರಿಯಾಶೀಲವಾಗಿರಿಸಿ, ತತ್ ಪರಿಣಾಮವಾಗಿ ಅವನನ್ನು ಅಪರಿಮಿತ ಶಕ್ತಿಶಾಲಿಯನ್ನಾಗಿಸಿದ್ದವು (ಪಕ್ಷಿಗಳಂತೆ!). ಗೌರಿಹಬ್ಬದಲ್ಲಿ ಅವನ ಜೇಬುಗಳು ಚಕ್ಕ್ಕುಲಿ, ಕೋಡುಬಳೆ, ಮುಚ್ಚೋರೆ, ತೇಂಕೊಳಲು.....ಗಳಿಂದ ತುಂಬಿದ್ದು, ರಾತ್ರಿ ಯಾವಾಗಲಾದರೂ ಎಚ್ಚರವಾದಾಗಲೂ ಅವನ ಕಡೆಯಿಂದ `ಕಟಂ, ಕುಟುಂ’ ಶಬ್ದ ಕೇಳಿಬರುವಂತೆ ಮಾಡುತ್ತಿದ್ದವು. ಈಗಿನಂತೆ ಡಿಟರ್ಜಂಟ್ಗಳಿಲ್ಲದ ಆ ಕಾಲದಲ್ಲಿ ಅಮ್ಮ ಎಣ್ಣೆಯಿಂದ ಮೊಣಕಾದ ಅವನ ನಿಕ್ಕರ್ ಜೇಬುಗಳನ್ನು ಶುಚಿಗೊಳಿಸಲಾಗದೇ ಹೆಣಗಾಡುತ್ತಿದ್ದರು! ಸಂಕ್ರಾಂತಿ ಬಂತೆಂದರೆ ಅವನ ಜೇಬುಗಳಲ್ಲಿ ಎಳ್ಳು (ಪಂಚಕಜ್ಜಾಯ!) ತುಂಬಿರುತ್ತಿತ್ತು. ಕಳೆದ ಸಂಕ್ರಾಂತಿಯಲ್ಲಿ ಅವನು ತಿಂದ ಎಳ್ಳಿನ ಪ್ರಭಾವದಿಂದ ಕಣ್ಣೆಲ್ಲಾ ಹಳದಿಯಾಗಿ ಜಾಂಡೀಸ್ ಬಂದಿರಬಹುದೆಂದು ಚಿಕಿತ್ಸೆ ಮಾಡಿಸಿದರೂ ಫಲಕಾರಿಯಾಗದೇ ಅಜ್ಜಿ `ಹಲವು ದೇವರಿಗೆ ಹರಕೆ’ ಹೊತ್ತದ್ದೂ ಆಗಿ ಅವನಿಗೆ `ಮುಡಿ’ಯನ್ನೂ ಬಿಟ್ಟಿದ್ದರು! ಅವನು ಒದಗಿಸುತ್ತಿದ್ದ `ಗೊಬ್ಬರ’ದಿಂದಲೋ ಏನೋ ಅವನ ಕೂದಲು ಹುಟ್ಟಿದಾಗಿನಿಂದಲೂ ಕತ್ತರಿ ಸೋಂಕದೇ ಬೆಳೆದಿದ್ದ ನಮ್ಮ ಕೂದಲಿಗಿಂತಲೂ ಉದ್ದವಾಗಿ ಬೆಳೆದಿತ್ತು! ಎರಡು ಜಡೆ ಹೆಣೆದು ಮೇಲೆ ಕಟ್ಟುತ್ತಿದ್ದ ಈ ಬದನೇಕಾಯಿ ಜಡೆಗಳೇ ಅವನು ಶಾಲೆಯಲ್ಲಿ ನಡೆಸುತ್ತಿದ್ದ ಎಲ್ಲಾ `ಫೈಟಿಂಗ್’ಗಳಿಗೂ ಮೂಲವಾಗುತ್ತಿದ್ದವು! `ಜೇಬು’ಗಳಿಂದ ಉಂಟಾದ ವಿಶೇಷ ಶಕ್ತಿ ಸಂಚಯನದಿಂದ ಅವನ ಎದುರಾಳಿಗಳು ಹಣ್ಣುಗಾಯಿ ನೀರುಗಾಯಾಗಿ ಅವನು ವಾರಗಟ್ಟಲೇ ಶಾಲೆಗೆ ಚಕ್ಕರ್ ಹೊಡೆಯುವಂತಾಗುತ್ತಿತ್ತು. ಹೀಗೆ ಚಿಕ್ಕವನಾಗಿದ್ದಾಗ ಜೇಬಿನ ಸಂಪೂರ್ಣ ಪ್ರಯೋಜನ ಪಡೆದ ನನ್ನ ತಮ್ಮ ಈಗಲೂ ಜೇಬನ್ನು ತುಂಬಿಸುವತ್ತಲೇ ವಿಶೇಷ ಗಮನ ಹರಿಸಿ ನನಗೆ ಆರ್ಥಿಕವಾಗಿ ಆಧಾರಸ್ಥಂಭವಾಗೇ ಇದ್ದಾನೆ!
`ಜೇಬು’ ಎನ್ನುವುದೇ `ಆರ್ಥಿಕತೆ’ಯ (`ಹಣ’ದ) ಸಂಕೇತವಾಗಿದೆ. ‘ಜೇಬು ಖಾಲಿಯಾಗಿದೆ’ ಅಂತ ಹೇಳೋದನ್ನ ನಾವು ಕೇಳ್ತಾನೇ ಇರ್ತೀವಲ್ಲ! ಸಾಮಾನ್ಯವಾಗಿ ನಮ್ಮ ಭಾರತೀಯ ಸಾಂಪ್ರದಾಯಿಕ ಉಡುಗೆಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಜೇಬಿನ ಅಸ್ಥಿತ್ವವೇ ಕಂಡುಬರುವುದಿಲ್ಲ. ಪುರುಷರು ಧರಿಸುತ್ತಿದ್ದ ಪಂಚೆ, ಶಲ್ಯಗಳಲ್ಲಾಗಲೀ, ಸ್ತ್ರೀಯರು ಧರಿಸುತ್ತಿದ್ದ, ಈಗಲೂ ಸಂಪ್ರದಾಯವನ್ನು ಉಳಿಸುವ ಹೊಣೆ ಹೊತ್ತು ಧರಿಸುತ್ತಲೇ ಇರುವ (ನನ್ನಂಥವರು!) ಸೀರೆಯಲ್ಲಾಗಲೀ ಜೇಬಿನ ಸುಳಿವೇ ಇಲ್ಲ. ಆ ಕಾಲಕ್ಕೆ ಹಣದ ಬಗ್ಗೆ ಅವರಿಗಿದ್ದ ನಿರ್ಲಿಪ್ತತೆಯನ್ನೋ ಅಥವಾ (ಅಪ್ರಾಮುಖ್ಯತೆಯನ್ನೋ) ಆ ಉಡುಗೆಗಳೇ ತೋರಿಸುತ್ತವೆ. ಕ್ರಮೇಣ ಕಾಲ ಬದಲಾದಂತೆ ಬರುತ್ತಿದ್ದ ಆರು ಕಾಸನ್ನೋ ,ಮೂರುಕಾಸನ್ನೋ ತಮ್ಮ ಸೊಂಟಕ್ಕೆ (ಪಂಚೆ ಕಟ್ಟಿಕೊಳ್ಳುತ್ತಿದ್ದ ಜಾಗ!) ಗಂಡಸರು ಸಿಕ್ಕಿಸಿಕೊಂಡರೆ, ಹೆಂಗಸರು ತಮ್ಮ ಬಾಳೆಕಾಯಿಗೆ (ಸೀರೆಯ ನೆರಿಗೆ ಸುರುಳಿಸುತ್ತಿ ಸಿಕ್ಕಿಸುತ್ತಿದ್ದ ರಚನೆ!) ಸಿಕ್ಕಿಸಿಕೊಳ್ಳುತ್ತಿದ್ದರು! ವಿದೇಶೀಯರು ನ ಮ್` ದೇಶವನ್ನು ತಮ್ಮ ಜೇಬು ತುಂಬಿಸಿಕೊಳ್ಳಲು ಆಕ್ರಮಿಸಿದಂತೆ, ಅವರ ಉಡುಗೆಗಳಲ್ಲಿ ಧಾರಾಳವಾಗಿದ್ದ ಜೇಬುಗಳೂ ಆಗಮಿಸಿದವು! ಆ ಜೇಬುಗಳ ಪ್ರಾಮುಖ್ಯತೆಯನ್ನು ಕ್ರಮೇಣ ಮನಗಂಡ ನಮ್ಮ ಭಾರತಮಾತೆಯ `ಗಂಡು’ ಸಂತಾನ ಆ ಉಡುಗೆಗಳನ್ನೇ ತಮ್ಮದಾಗಿಸಿಕೊಂಡರು. ಮಹಿಳೆಯರು ತಮ್ಮನ್ನೇ ಆರ್ಥಿಕವಾಗಿ ಅವಲಂಬಿಸಬೇಕೆಂಬ ಹಂಬಲದಿಂದಲೋ ಏನೋ ಅವರಿಗೆ ಸಂಪ್ರದಾಯದ ಸಂಕಲೆ ಬಿಗಿದು ಹದಿನಾರು ಮೊಳದ ಸೀರೆಯ ಸೆರೆಯಲ್ಲೇ ಉಳಿಸಿಬಿಟ್ಟರು. ಅಮ್ಮನ ಕಾಲಕ್ಕೆ ಅದು ಹನ್ನೆರಡು ಮೊಳವಾಗಿ, ಈಗ ಐದೂವರೆ ಮೀಟರ್ ಆಗಿ ನನ್ನಂಥವರ ಮೇಲೆ ರಾರಾಜಿಸುತ್ತಾ ಆರ್ಥಿಕ ಪರಾವಲಂಬನೆಯ ಸಂಕೇತವಾಗಿ ಉಳಿದುಬಿಟ್ಟಿದೆ! ನಮ್ಮ ಹಳ್ಳಿಯ ಕಡೆ ಮಹಿಳೆಯರು ‘ಎಲಡಿಕೆಚೀಲ’ (ಎಲೆ-ಅಡಿಕೆ ಚೀಲ) ಎನ್ನುವ ಒಂದು ೨-೩ಅಂಕಣಗಳಿರುವ ಪುಟ್ಟ ಚೀಲವೊಂದನ್ನು ತಮ್ಮ ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಿದ್ದರು. ಇದೂ ಒಂದುರೀತಿ ಜೇಬಿನ ಪರ್ಯಾಯ ವ್ಯವಸ್ಥೆಯೇ ಆಗಿತ್ತು! ಜೇಬಿನ ಸೌಕರ್ಯವಿಲ್ಲದ ನನ್ನಂಥಾ ಮಹಿಳೆಯರ ಪಾಡಂತೂ ಹೇಳತೀರದು. ಅದಕ್ಕಂದೇ ಇರಬಹುದು, `ವ್ಯಾನಿಟಿ ಬ್ಯಾಗ್’ ( ಯಾರೋ ಕುಹಕಿಗಳೇ ಈ ಹೆಸರು ಇಟ್ಟಿರಬಹುದು. `ವ್ಯಾನಿಟಿ’ ಎಂದರೆ `ಜಂಬ’ ಅಂತ. ಒಂದು ಕಾಲಕ್ಕೆ ಇದು `ಜಂಬದ ಚೀಲ’ ಆಗಿದ್ದಿರಲೂ ಬಹುದು. ಆದರೆ ಈಗಂತೂ ಇದು ನಿಜಕ್ಕೂ `ನೆಸೆಸ್ಸಿಟಿ’ ಎಂದರೆ `ಅಗತ್ಯ’ ಚೀಲವೇ ಆಗಿದೆ) ಎಂಬ `ಬಾಹ್ಯ ಜೇಬು’ ಆರ್ಥಿಕ ಸ್ವಾವಲಂಬಿಯಾದ ಉದ್ಯೋಗಸ್ಥ ಮಹಿಳೆಯ ಹೆಗಲೇರಿದ್ದು! ಇಂಥಾ ಬಾಹ್ಯ ಜೇಬನ್ನು ಹೊರಲು ಬೇಸರಿಸಿ ಕೆಲವರು ಹಣದ ಪುಟ್ಟ ಪರ್ಸ್ನ್ನು ರವಿಕೆಯೊಳಗೆ ಇಟ್ಟುಕೊಂಡು ಪಜೀತಿಪಟ್ಟುಕೊಳ್ಳುತ್ತಿರುತ್ತಾರೆ. ಇಂಥಹಾ ಪ್ರಯೋಗವೊಂದನ್ನು ನಾನೂ ಮಾಡಲುಹೋಗಿ ಇದ್ದ ಹಣವನ್ನೆಲ್ಲಾ ಕಳೆದುಕೊಂಡು ಕಡೆಗೆ ನಾನೂ `ಜೇಬೊಡತಿ`ಯಾಗಲೇಬೇಕೆಂಬ ಹಠದಲ್ಲಿ ನನ್ನ ಒಳಲಂಗ, ರವಿಕೆಗಳಿಗೆಲ್ಲಾ ಜೇಬನ್ನು ಹೊಲಿದುಕೊಳ್ಳುವ ಸ್ವಕರ್ಮ ಸಾಹಸದಲ್ಲಿಯೂ ತೊಡಗಿದೆ. (ಪ್ರವಾಸ ಹೋಗುವ ಕೆಲವರು ಈ ಕ್ರಮವನ್ನು ಕೈಗೊಂಡ ಉದಾಹರಣೆಗಳ ಆಧಾರದಮೇಲೆ!) ಆದರೆ ಅದರಲ್ಲಿ ಉಂಟಾದ ಅನೇಕ ಗೊಂದಲಗಳಿಂದ ಅನುಕೂಲಕ್ಕಿಂತಾ ಮುಜುಗರವೇ ಹೆಚ್ಚಾಯಿತು. ನಂತರ ಮನೆಯಲ್ಲಿ(!) ಜೇಬಿರುವ ನೈಟಿ ಹಾಕುವುದರಲ್ಲೇ ತೃಪ್ತಿ ಪಡಬೇಕಾಯ್ತು! (ನೆಗಡಿಯ ನೆಂಟಿರುವುದರಿಂದ!) ಇತ್ತೀಚೆಗೆ ಅನೇಕ ಹೆಣ್ಣುಮಕ್ಕಳು ಪ್ಯಾಂಟನ್ನು ಧರಿಸಿಕೊಂಡು ಜೇಬಿನ ಸದುಪಯೋಗ(!) ಪಡೆಯುವುದನ್ನು ನೋಡಿ ನನಗಂತೂ ಬಹಳ ಸಂತಸವಾಗಿದೆ.

ಜೇಬಿಗೆ `ಕಿಸೆ’, `ಬೊಕ್ಕಣ,’ ಎಂದೂ ನಿಘಂಟಿನಲ್ಲಿ ಕೊಟ್ಟಿದ್ದಾರೆ. `ಕಿಸೆ’ ಏನೋ ನಮಗೆ ಪರಿಚಿತವಾದ ಪದವೇ. ಬಸ್ಸ್ಟಾಂಡ್ಗಳಲ್ಲಿ `ಕಿಸೆಗಳ್ಳರಿದ್ದಾರೆ ಎಚ್ಚರಿಕೆ’, ಎನ್ನುವ ಫಲಕಗಳನ್ನು ಓದ್ತಾನೇ ಇರ್ತೀವಲ್ಲ! ಆದರೆ `ಬೊಕ್ಕಣ’ ಎನ್ನುವುದನ್ನು ನಾನು ಇದುವರೆಗೂ ಕೇಳೇ ಇರಲಿಲ್ಲ. ಇದು ನನ್ನ ಭಾಷಾ ಅಲ್ಪ ಜ್ಞಾನದ ಸಂಕೇತವೂ ಇರಬಹುದು! ಹಿಂದಿಯಲ್ಲಿ `ಖೀಸಾ’ ಎಂದಿದೆ. `ಕಿಸೆ’ ಯಿಂದ `ಖೀಸಾ’ ಆಯ್ತೋ, `ಖೀಸಾ’ದಿಂದ `ಕಿಸೆ’ ಆಯ್ತೋ ಎನ್ನುವ ಬೀಜವೃಕ್ಷ ನ್ಯಾಯವನ್ನು ಭಾಷಾ ತಜ್ಞರೇ ಪರಿಹರಿಸಬೇಕು! ಆಂಗ್ಲಭಾಷೆಯ POCKET ಪಡೆದುಕೊಂಡಂಥಾ ವಿಸ್ತಾರವನ್ನು ಬಹುಷ: ಬೇರೆ ಯಾವ ಜೇಬುಗಳೂ ಪಡೆಯಲಿಲ್ಲವೇನೋ! ಈ ಆಧುನಿಕ, ವಿವಿಧ ವಿನ್ಯಾಸದ ಜೇಬಿನ ಮೂಲವೇ ಆಂಗ್ಲವಾದ್ದರಿಂದಲೇ ಏನೋ ಇದಕ್ಕೆ ಇಷ್ಟೊಂದು ಪ್ರಸಿದ್ದಿ! ‘Pickpocket’ ಎನ್ನುವುದಂತೂ ಬಳಕೆಯಲ್ಲೂ, ನಡೆಯುವುದರಲ್ಲೂ ಸರ್ವೇ ಸಾಮಾನ್ಯವಾಗಿಹೋಗಿದೆ. ನಮ್ಮ ಬಹುತೇಕ ಚಲನ ಚಿತ್ರಗಳಲ್ಲಿನ ನಾಯಕ, ನಾಯಿಕೆಯರದ್ದು ಇದೇ ಉದ್ಯೋಗ! ಈ ಹಿಂದೆ ನಮ್ಮ ಹಾಸ್ಯ ಸಾಹಿತಿಗಳು ತಮ್ಮ ಪತ್ನಿಯರನ್ನೇ ಹಾಸ್ಯದ PÉÃAದ್ರಬಿಂದುವಾಗಿಸಿಕೊಂಡು ತಮ್ಮ ಜೇಬಿನಲ್ಲಿರುವ ಪುಡಿಗಾಸನ್ನು ತಾವಿಲ್ಲದ ವೇಳೆಯಲ್ಲಿ ಹಾರಿಸಿಬಿಡುವ pick‘pocket’ (ಜೇಬುಗಳ್ಳಿ!) ಅಂತೆ ಚಿತ್ರಿಸಿಬಿಡುತ್ತಿದ್ದರು. (ಎಷ್ಟೋ ವೇಳೆ ಅವರ ಗುಪ್ತ ಕಾರ್ಯಗಳ ಬಹಿರಂಗವೂ ಆಗಿಬಿಡುವ ಸಂಭವವೂ ಇತ್ತು!) ಅವರೇನಾದರೂ ‘pocket money’ ಕೊಡುವ ಪರಿಪಾಠ ಇಟ್ಟುಕೊಂಡಿದ್ದರೆ ಹೀಗಾಗದೇ ಅವರ ಮರ್ಯಾದೆಯಾದರೂ ಉಳಿಯುತ್ತಿತ್ತೋ ಏನೋ! POCKETನ್ನು ನಾಮಪದದ ರೂಪದಲ್ಲಿ ತೆಗೆದುಕೊಂಡರೆ ಉಡುಪು, ಸೀಟು, ಚೀಲ ಇವುಗಳೊಳಗೆ ಹೊಲಿದಿರುವ ಒಂದು ಸಣ್ಣ ಚೀಲ ಎಂದಾಗುತ್ತದೆ. ಇದಕ್ಕೆ ಸಣ್ಣ ಪ್ರದೇಶ, ಸಣ್ಣ ಮೊತ್ತ ಎಂಬೆಲ್ಲಾ ಅರ್ಥಗಳೂ ಇವೆ. ವಿಶೇಷಣವಾದಾಗ pocketbook, pocketful, pocketknife, pocketmoney, pocket dictionary..... (ಈ ಪಾಕೆಟ್ ಪುಸ್ತಕಗಳು ಬಂದದ್ದು ಪರೀಕ್ಷೆಗಳಲ್ಲಿ ಕಾಪಿಹೊಡೆಯುವವರಿಗೆ ವರದಾನವಾಯ್ತು! ಈಗ ಬಿಡಿ ಎಲ್ಲಾ ಟಿಕ್, ಟಿಕ್!). ಕ್ರಿಯಾಪದವಾದಾಗ ‘pocket the money’ ಎಂದರೆ ಹಣ ಸಂಪಾದಿಸು, ‘pocketed the knife’ ಎಂದರೆ ಚಾಕುವನ್ನು ಜೇಬಿಗೆ ಸೇರಿಸುವುದು ಎಂದಾಗುತ್ತದೆ. `ಜೇಬಿಗೆ ಸೇರಿಸು’ ಎಂದರೇ ತನ್ನದಾಗಿ ಮಾಡಿಕೊಳ್ಳೊದು, ಅಡಗಿಸಿಡು, ಮುಚ್ಚಿಡು ಎಂದೆಲ್ಲಾ ಅರ್ಥೈಸಬಹುದು. ನೋಡಿ ಆಂಗ್ಲರಿಂದಲೇ ಬಂದ ಈ `ಪಾಕೆಟ್’ ತನ್ನದೇ ಮೂಲ ಭಾಷೆಯಲ್ಲಿ ಎಷ್ಟೆಲ್ಲಾ ಅxð ವೈವಿಧ್ಯವನ್ನು ಹೊಂದಿದೆ ಅಂತ!
ತನ್ನದಾಗಿ ಮಾಡಿಕೊಳ್ಳೋದು ಎನ್ನುವಾಗ ನನಗೆ ನೆನಪಾಗೋದು....... `ಕವಿಗಳನ್ನೆಲ್ಲಾ ಸಾಲಾಗಿ ನಿಲ್ಲಿಸಿದಾಗ ಒಬ್ಬರ ಕೈ ಮತ್ತೊಬ್ಬರ ಜೇಬಿನಲ್ಲಿರುತ್ತದೆ’ ಎನ್ನುವ ಉಕ್ತಿ. ಇಲ್ಲಿ `ಜೇಬು’ ಅಂತ ಇರೋದರಿಂದ ಸಾಲಾಗಿ ನಿಲ್ಲಿಸಿರೋದು ಪುರುಷ ಪುಂಗವರನ್ನೇ ಅನ್ನೋದು ಸರ್ವವಿಧಿತ. ಜೇಬಿನಲ್ಲಿ ಕೈ ಇರಬೇಕಾದರೆ ಅದು ಜುಬ್ಬಾದ ಜೇಬೇ ಆಗಿರಬೇಕು. ಅವರೆಲ್ಲಾ ಜುಬ್ಬಾ, ಪೈಜಾಮಾನೇ (ಅಥವಾ ಪಂಚೆಯೂ ಆಗಿರಬಹುದು) ಹಾಕಿಕೊಂಡು, ಕುರುಚಲು ಗಡ್ಡ ಬಿಟ್ಟು.....ಸಾಲಾಗಿ ನಿಂತು ಒಬ್ಬರ ಜುಬ್ಬಾ ಜೇಬಿನೊಳಗೆ ಮತ್ತೊಬ್ಬರು ಕೈ ಹಾಕಿಕೊಂಡಿರುವ ದೃಶ್ಯ ವರ್ಣನಾತೀತ. ಇದನ್ನ `ಕೃತಿಚೌರ್ಯ’ ಅಂತ ಸಾರಾಸಗಟಾಗಿ ಹೇಳಲಾಗದಿದ್ದರೂ ಹಲವು ಹೂಗಳಿಂದ ಮಕರಂದ ಹೀರಿ `ಮಧು’ವನ್ನು ತಯಾರಿಸುವ `ಮಧುಕರ ವೃತ್ತಿ’ ಎಂದು ಹೇಳಲೇನೂ ಅಡ್ಡಿ ಇರಲಾರದು. ಈ ಅಪವಾದದಿಂದ ಪಾರಾದ ಹೆಂಗೆಳೆಯರಂತೂ ಸಾಂಪ್ರದಾಯಿಕ ಉಡಿಗೆಗಳಿಗೆ ಸಾಷ್ಟಾಂಗ ನಮಿಸಲೇ ಬೇಕು. (`ಸಾಷ್ಟಾಂಗ ನಮಸ್ಕಾರ’ ಪುರುಷ ವರ್ಗಕ್ಕೇ ಮೀಸಲಾಗಿದ್ದರೂ ಸ್ವಲ್ಪ ಕಾಲ ಎರವಲು ಪಡೆದು!)
ಸಾಮಾನ್ಯವಾಗಿ ಜೇಬನ್ನು ನೋಡಿ ಒಬ್ಬರ ಕಾರ್ಯಕ್ಷೇತ್ರ, ಹವ್ಯಾಸ, ಸ್ವಭಾವಗಳನ್ನು ಗುರುತಿಸಬಹುದು. ಶಿಕ್ಷಕರು ಜೇಬಿನಲ್ಲಿ ನೀಲಿ ಮತ್ತು ಕೆಂಪು ಇಂಕಿನ ಪೆನ್ಗಳನ್ನು ಇಟ್ಟುಕೊಂಡಿರುತ್ತಾರೆ. ಪತ್ರಾಂಕಿತ ಅಧಿಕಾರಿಗಳಾದರೆ ಹಸಿರು ಇಂಕಿನ ಪೆನ್ ರಾರಾಜಿಸ್ತಾ ಇರುತ್ತದೆ. ಸಿಗರೇಟ್, ಪಾನ್, ನೆಶ್ಯ,...ಇವುಗಳನ್ನು ಹವ್ಯಾಸ ಎನ್ನುವುದೋ, ದುರಭ್ಯಾಸೆನ್ನುವುದೋ...,ಅಂತೂ ಜೇಬಿನಲ್ಲಿ ಮನೆ ಮಾಡಿರುತ್ತವೆ. ಸದಾ ನೆಗಡಿಯಿಂದ ಬಳಲುವವರ (ಜನ್ಮ ನೆಗಡಿ) ಜೇಬುಗಳಂತೂ ವೈರಸ್ಗಳ ಆಗರವೇ ಆಗಿರುತ್ತದೆ. ಕನ್ನಡಕಧಾರಿಗಳಾದರೆ ಕನ್ನಡಕ,... ಈಗಂತೂ ಮೊಬೈಲ್ ಅಗ್ರಸ್ಥಾನ ಪಡೆದುಬಿಟ್ಟಿದೆ. ಯಾವ ಸಂಶೋಧನೆ ಏನೇ ರಿಪೋರ್ಟ್ ಕೊಟ್ಟರೂ ಮೊಬೈಲ್ಗಳಂತೂ ತಮ್ಮ ಸ್ಥಾನವನ್ನು ಜೇಬಿನಲ್ಲೇ ಭದ್ರಪಡಿಸಿಕೊಂಡುಬಿಟ್ಟಿವೆ. ಕೆಲವು ಪ್ರದರ್ಶನಾಕಾಂಕ್ಷಿಗಳು ತಮ್ಮ ಪಾರದರ್ಶಕ ಜೇಬುಗಳಲ್ಲಿ ಐನೂರು, ಸಾವಿರದ ನೋಟುಗಳನ್ನು ಇಟ್ಟುಕೊಂಡು ತಮ್ಮ ಆರ್ಥಿಕ ಸಾಮರ್ಥ್ಯವನ್ನು ವೈಭವೀಕರಿಸುತ್ತಿರುತ್ತಾರೆ. ರಾಜಕಾರಿಣಿಗಳು ತಮ್ಮ ಪಕ್ಷವನ್ನು ಬಲವರ್ಧನೆ ಮಾಡಿಕೊಳ್ಳುವುದು ಅವರ ಜೇಬಿನ `ವಜನ್’ಗೆ ಅನುಗುಣವಾಗಿರುತ್ತದೆ. ಚುನಾವಣಾಕಾಲದಲ್ಲಿ ಜೇಬಿಗೇ ಮಹತ್ವ! `ಅವನು ನನ್ನ ಜೇಬಿನಲ್ಲೇ ಇದಾನೆ’ ಎನ್ನುವ ಮಾತನ್ನೂ ಆಡುವುದನ್ನು ಕೇಳಬಹುದು. ರಾಜಕಾರಿಣಿಗಳಿಗೆ ಅನೇಕ ಅಗೋಚರ ಜೇಬುಗಳು ಇರುತ್ತವೆ ಅಂತ ತಿಳಿದವರು ಹೇಳ್ತಾರೆ. ನಮ್ಮ ಮು. ಮಂ.ಗಳ ಎಂಟು ಜೇಬುಗಳ ಬಗ್ಗೆ ಹೇಳುತ್ತಾ ಅವರು ಧರಿಸುವ ಉಡುಪಿನಲ್ಲಿರುವ ಜೇಬುಗಳು ಅವರ ಅಂತರಂಗದ ಆಸೆಯ ಪ್ರತೀಕವೇ ಆಗಿವೆ ಅಂತಾರೆ.
ಅಪ್ಪನ ಜೇಬಿನ ದುಡ್ಡುಗಳೆಲ್ಲಾ
ಚಟಪಟಗುಟ್ಟುತ ಸಿಡಿಯುವುವು... ಎನ್ನುವುದನ್ನು ಓದುವಾಗ ಜೇಬಿನ ದುಡ್ಡು ಹೇಗೆ ಚಟಪಟ ಗುಟ್ತಾ ಸಿಡಿಯುತ್ತೆ? ಅಂತಾ ಬಹಳ ಯೋಚನೆ ಮಾಡ್ತಾ ಇದ್ದೆ. ನಂತರ ದೀಪಾವಳಿಯಲ್ಲಿ ತಿಳೀತು ಅವು ಚಟಪಟ ಗುಟ್ಟುವ ಪರಿ! (ಎಂಥಾ ಪೆದ್ದು ಅಲ್ವಾ?) ಈಗ ಚಟಪಟ ಏನು `ಢಂ ಢಮಾರ್’ ಆಗಿದೆ. ಈ ನಡುವೆ ಭಯೋತ್ಪಾದಕರೂ ಎಲ್ಲಿ ತಮ್ಮ ಕಾಣಿಕೆ ಸೇರಿಸ್ತಾರೋ ಎನ್ನುವುದೇ ಆತಂಕದ ವಿಷಯ! ದೀಪಾವಳಿಯೇ ಆಗಬೇಕೆಂದಿಲ್ಲ, ಯಾವ ಕಾರಣಕ್ಕಾದರೂ ಚಟಪಟಗುಟ್ಟಬಹುದು. ನನ್ನ ಬಾಹ್ಯ ಜೇಬಾದ ವ್ಯಾನಿಟಿ (ಅಲ್ಲಲ್ಲ `ನೆಸೆಸ್ಸಿಟಿ’ ಅಂತಾ ಈಗಾಗಲೇ ಹೇಳಿಯಾಗಿದೆ. ಆದರೂ ಆಡುವಾಗಿನ ಭಾಷೆಯಲ್ಲಿ...) ಬ್ಯಾಗಿನ ಒಳ ಜೇಬುಗಳಂತೂ ತುಂಬಿಸಿದಷ್ಟೂ ಖಾಲಿಯಾಗತ್ತಲೇ ಇರುತ್ತವೆ!
ಪಟಾಸು ಪೆಟ್ಲು ಒಳ ಜೇಬಲ್ಲಿ
ಕಾಸಿನ ಸಾಲು ಕಳ್ಳ ಜೇಬಲ್ಲಿ...
ಎಂ. ಎಸ್. ಸುಂಕಾಪುರ ಇವರು ತಮ್ಮ `ಮಾವ ಕೊಡಿಸಿದ ಕೋಟಿ’ನಲ್ಲಿ ಇರುವ ಕಿಸೆಗಳನ್ನು ಮಹಾಮನೆಗೆ ಇರುವ ನೂರುಬಾಗಿಲು, ಸಾವಿರ ಕಿಟಕಿಗಳಿಗೆ ಹೋಲಿಸಿದ್ದಾರೆ. ಎಡಬಲದಲ್ಲಿರುವ, ಬಹೋಪಯೋಗಿಯಾದ, ದೊಡ್ಡ ಕಿಸೆಗಳು, (ಅವುಗಳೊಳಗೆ ಒಂದೇ ಸಮನೆ ಸಾಮಾನು ತುಂಬುವುದನ್ನು ನೋಡಿ, `ಏನ್ರಿ ನಿಮ್ಮ ಕಿಸೆ ಹೋಲ್ಡಾಲ್ನಂತಿವೆ,’ ಎಂದೂ ಕೇಳಿದ್ದುಂಟಂತೆ!), ಎದೆಯಮೇಲಿರುವ ಎಳೆಯ ಕಂದನಂಥಾ ಹೊರಕಿಸೆ, ಚಂದ್ರನಂತೆ ವೃದ್ಧಿ, ಕ್ಷಯಗಳ ನಿರಂತರ ಚಕ್ರಗತಿಯಲ್ಲಿರುವ ಖಜಾನೆಯಾದ ಒಳ ಎಡಕಿಸೆ, ಮಹತ್ವದ ಸಾಮಾನುಗಳನ್ನು ತನ್ನೊಳಗೆ ಹುದುಗಿಸಿಕೊಂಡ ಮಹಾಮೌನಿ ಒಳ ಬಲಕಿಸೆ, ಚತುರ ಸಿಂಪಿಗನ ಚಾಣಾಕ್ಷಬುದ್ಧಿಯ ಪ್ರತೀಕವಾದ ಒಳ ಕಳ್ಳಕಿಸೆ...ಇದಕ್ಕಿಂತಾ ವಿವರ ಬೇಕೇ ಕಿಸೆಯ ವೈವಿಧ್ಯತೆಗಳನ್ನು ತಿಳಿಯಲು.
ಮಹಾನ್ ಪುಸ್ತಕ ಪ್ರೇಮಿಯಾದ ನಮ್ಮ ತಂದೆಯವರು ಧರಿಸುತ್ತಿದ್ದ ವಿಶೇಷವಾದ ಅಂಗಿಯಲ್ಲಿ ತೋಳಿನ ಕೆಳಗೆ ಇರುತ್ತಿದ್ದ ಒಳ ಜೇಬಿನಲ್ಲಿ ಯಾವಾಗಲೂ ಎರಡು-ಮೂರು ಸಣ್ಣ ಪುಸ್ತಕಗಳಿರುತ್ತಿದ್ದವು! ಜೊತೆಗೆ ಕನ್ನಡಕದ ಪೆಟ್ಟಿಗೆ, ಅಮೃತಾಂಜನ, ಕರವಸ್ತ್ರ, ನೆಶ್ಯದಡಬ್ಬಿ, ಮೆಣಸು ಸಕ್ಕರೆ ಡಬ್ಬಿ, ಒಂದೇ, ಎರಡೇ ... ತುಂಬಿ ತುಳುಕುತ್ತಿದ್ದವು. (ಅವರಿಗೆ ವಂಶಪಾರಂಪರ್ಯವಾಗಿ ಬಂದ ಚಿನ್ನದ ನಿಬ್ಬಿನ ಪೆನ್ನು ಆಗಾಗ ಉಕ್ಕೇರಿದ ಸಂತಸದಲ್ಲಿ ಇಂಕನ್ನು ಹೊರಚೆಲ್ಲುತ್ತಾ ಎದೆಯಭಾಗದ ಒಳಜೇಬಿನಲ್ಲಿ ಅಡಗಿರುತ್ತಿತ್ತು.) ಜೇಬಾದರೂ ಕೈಚೀಲದಷ್ಟೇ ತೂಕವನ್ನು ಹೊತ್ತು,ಹೊತ್ತು ಇನ್ನು ತಾಳಲಾರೆನೆಂದು ಅಂಗಿಯಿಂದ ವಿಚ್ಛೇದನ ಬಯಸುವ ಸ್ಥತಿಗೆ ತಲುಪಿದ ಜೇಬನ್ನು ಅಮ್ಮ ಸಂಧಾನಗೊಳಿಸಿ ಸೇರಿಸುವ ಭರದಲ್ಲಿ ಸ್ವಗತ ಸಹಸ್ರ ನಾಮಾರ್ಚನೆಯನ್ನೇ ಮಾಡುತ್ತಿದ್ದರು. ಯಾವಾಗಲೂ ಬೇಸಿಗೆ ರಜೆ ಬರುವಾಗ ಏನಾದರೊಂದು ಕುಶಲಕಲೆಯ ಕಾರ್ಯಕ್ರಮದಲ್ಲಿ ತೊಡಗುತಿದ್ದ ನಾನು, ಒಂದು ರಜೆಯಲ್ಲಿ ನಾಲ್ಕು ಗುಲಾಬಿ ಹೂಗಳಿದ್ದ ಒಂದು ಕಸೂತಿ ಚೀಲವನ್ನು ಹಾಕಿಕೊಟ್ಟಿದ್ದನ್ನು ಅವರು ಸಂಪೂರ್ಣ ಸದುಪಯೋಗಪಡಿಸಿಕೊಂಡು ಬಹಳ ಜೋಪಾನವಾಗಿ ಇಟ್ಟುಕೊಂಡಿದ್ದರು. ಆ ಪ್ರಭಾವದಿಂದಲೋ, ವಂಶವಾಹಿನಿಯ ಮಹಿಮೆಯೋ, ಸದಾ ಮುಂದಾಲೋಚನೆಯಲ್ಲೇ ಇರುವ ನಾನು ನನ್ನ ಬಾಹ್ಯ ಕಿಸೆಯ (ಅಗತ್ಯಚೀಲ!) ಜೊತೆಗೇ ಅಧಿಕಾರ (ಅಧಿ-ಖಾರ) ಭಾರದಿಂದ ಒಂದು ಫೈಲುಗಳ ಜೋಳಿಗೆಯನ್ನೂ ಹೊರಲಾರಂಭಿಸಿ ಅಪಹಾಸ್ಯಕ್ಕೆ ಪಾತ್ರಳಾಗಿದ್ದೇನೆ!
ನನ್ನವರು `ಹಣವೇ ಇಲ್ಲ’ ಎನ್ನುವ ಘೋಷವಾಕ್ಯದೊಂದಿಗೇ ಇರುವ ಜೇಬುಗಳನ್ನೆಲ್ಲಾ ಹೊರತೆಗೆದು ತೋರಿಸಿದರೂ (ತಿಂಗಳು ಪೂರ್ತಿ ಧಾರಾಳವಾಗಿ ನನ್ನ ಹಣವನ್ನೇ ಖರ್ಚುಮಾಡಿಸುತ್ತಾ...) ಮತ್ತೆಲ್ಲೋ ಹಣ ಅಡಗಿಸಿಟ್ಟಿದ್ದಾರೆ ಎಂಬ ಅನುಮಾನ ಬಂದು ಪರಿಶೀಲಿಸಿದಾಗ ಬೆಲ್ಟ್ನ ಒಳಭಾಗದಲ್ಲೊಂದು ಜೇಬು ನೋಡಿ ಪರಮಾಶ್ಚರ್ಯ ಹೊಂದಿದ್ದೆ! ಹಾಗೆಲ್ಲಾ ಜೇಬು `ಚೆಕ್’ ಮಾಡುವ ಜಾಯಮಾನ ನನ್ನದಲ್ಲ ಬಿಡಿ. ದ್ರವಗಳ ಗುಣಕ್ಕೆ ಸಾಮ್ಯತೆ ಹೊಂದಿರುವ `ಹಣ’ದ ಚಲನೆಯೂ ಎತ್ತರದಿಂದ ತಗ್ಗಿನ ಕಡೆಗೇ ಅಲ್ಲವೇ? ಈಗ ನನ್ನ ಮಗನ ಪ್ಯಾಂಟಿನ ಜೇಬುಗಳನ್ನು ಲೆಕ್ಕ ಹಾಕಲೇ ಆಗುವುದಿಲ್ಲ! ಜೇಬು ತನ್ನ ಸ್ಥಾನದ ಘನತೆಯನ್ನೇ ಕಳೆದುಕೊಂಡು ಮಂಡಿ, ಮೊಣಕಾಲುಗಳ ಮೇಲೆಲ್ಲಾ ಬಂದಿದೆ. ಇಷ್ಟೇ ಸಾಲದು ಅಂತ ಒಂದೊಂದಕ್ಕೂ ಎರಡು-ಮೂರು ಉದ್ದುದ್ದಾ ಬಾಲಗಳು!

ಇತ್ತೀಚೆಗಂತೂ ಕಳ್ಳಕಿಸೆಯ ಮಹತ್ವ ಬಹಳ ಹೆಚ್ಚಾಗಿದೆ. ಸಣ್ಣತಮ್ಮಣ್ಣನ ಕಳ್ಳಜೇಬಲ್ಲಿ ಕಾಸಿನ ಸಾಲು ಇದ್ದರೆ ಈಗಿನವರ ಕಳ್ಳಜೇಬಲ್ಲಂತೂ ನೋಟುಗಳ ಕಂತೆಯೇ ಅಡಗಿರುತ್ತದ್ದೆ! ಕಳ್ಳ ನೋಟಾಗದಿದ್ದರೆ ಭಾರತಾಂಬೆಯ ಪುಣ್ಯ! ಮೇಜಿನ ಕೆಳಗೆ ಬಂದು ಕ.ಜೇ.ನ್ನು ತುಂಬುತ್ತಿದ್ದುದೂ ಲೋಕಾಯುಕ್ತರ ಭಯದಿಂದ ತತ್ತರಿಸಲಾರಂಭಿಸಿದೆ. ಆದರೂ ತನ್ನದೇ ಮಾರ್ಗವನ್ನು ಕಂಡುಕೊಂಡು ಅವ್ಯಾಹತವಾಗಿ ಸಾಗುತ್ತಲೇ ಇದೆ. ಬಹುಷ: ಈ ಲಂಚಕೋರತನವನ್ನು ತಡೆಯುವ ಏಕೈಕ ಮಾರ್ಗವೆಂದರೆ `ಎಲ್ಲರೂ ಜೇಬೇ ಇಲ್ಲದ ಉಡುಪನ್ನೇ ತೊಡಬೇಕು’ ಎನ್ನುವ ಕಾನೂನನ್ನು ಜಾರಿಗೆ ತರುವುದು ಎನ್ನಬಹುದು. ಇದು ಮತ್ತೆ ಮೂಲ ಸಂಸ್ಕತಿಯತ್ತ ಪಯಣವಾಗಲೂ ಬಹುದು. ಆದರೂ ಚಿತ್ತವ ಸಂಯಮದಲ್ಲಿರಿಸದೇ ಮತ್ತೇನು ಮಾಡಿದರೂ ಫಲ ಕಾಣದೇನೋ.
`ಹಣ’ವೇ ನಿರ್ಧಾರಕ ಅಂಶವಾಗಿರುವ ಈ ಕಾಲದಲ್ಲಿ ಜೇಬಿಗಿರುವ ಮಹತ್ವ ಬೇರಾವುದಕ್ಕೂ ಇಲ್ಲ. `ವಿತ್ತೋ ರಕ್ಷತಿ ರಕ್ಷಿತ:’ (`ಧರ್ಮ’ವಲ್ಲ!) ಎನ್ನುವುದೇ ಎಲ್ಲರ ಧ್ಯೇಯ ವಾಕ್ಯವಾಗಿದೆ.
ಸಾಲಾಗಿ ನಿಲ್ಲಿಸಿರುವ ಕವಿಗಳ ಸಾಲಿನಲ್ಲಿ ಈಗ ನನ್ನನ್ನೂ ಕಂಡು ಗಾಭರಿಯಿಂದೊಡಗೂಡಿದ ಸಂತಸವಾಗ್ತಾ ಇದೆ. ನಾನೂ ಒಬ್ಬ ಕವಿಯಾದೆನೇನೋ ಎಂಬ ಸಂತಸ ಪಡುವುದರಲ್ಲಿದ್ದೆ. ಆದರೆ ನನ್ನ `ಕೈ’ ಎಲ್ಲಿ? `ಹಲವು ಹೂಗಳ ಬಂಡುಂಬ ಮಧುಕರನೆ ಎಲ್ಲಿ ಅವಿತೆ?’ ಈಗಾಗಲೇ ಎಷ್ಟೋ ಮಹಾನ್ ಜೇಬುಗಳನರಸಿ..!..!..! (ಜೇಬಿಗೂ ಜೇಬೇ ಮೂಲ!)
ಈ ನನ್ನ `ಜೇಬ’ನ್ನು ತುಂಬಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲಾ `ಹಿರಿಯ’ ಜೇಬುಗಳಿಗೂ ಅನೇಕಾನೇಕ ವಂದನೆಗಳನ್ನು ಸಲ್ಲಿಸುತ್ತಾ, `ಕೆಲವಂ ಬಲ್ಲವರಿಂದ ಕಲಿತು...’ ಎಂದು ವಿನಯಪೂರ್ವಕವಾಗಿ ಹೇಳುತ್ತಾ... `ಇತಿ ಸಂಪೂರ್ಣಂ’ ಎನ್ನಲಾಗದ `ಜೇಬಾಯಣಂ’.
*****************************

Friday, December 10, 2010

ಮನದ ಅಂಗಳದಿ..................೨೧. ಅಹಂಕಾರ

ಬುದ್ದಿಯ ಅಹಂಕಾರವೇ ಭುವನದ ಎಲ್ಲಾ ಸಮಸ್ಯೆಗಳಿಗೂ ತಾಯಿಬೇರು.
*ಶ್ರೀ ಅರವಿಂದರು
‘ಅಹಂಕಾರ’ವೆನ್ನುವುದು ಮನುಷ್ಯನನ್ನು ಹೇಗೆ, ಎಲ್ಲಿ, ಯಾವ ಸಂದರ್ಭದಲ್ಲಿ ಆವರಿಸಿಕೊಳ್ಳುತ್ತದೆ ಎನ್ನುವುದನ್ನು ತಿಳಿಯುವುದು ಕಷ್ಟಸಾಧ್ಯವಾಗಿದೆ. ನಮ್ಮ ಸಮೀಪ ಜೀವಿಗಳಾದ ಪ್ರಾಣಿಸಂಕುಲವನ್ನು ಆಕ್ರಮಿಸದ ಈ ‘ಅಹಂಕಾರ’ವು ಮನುಜರ ಮೇಲೆ ಸವಾರಿ ಮಾಡಲು ತುದಿಗಾಲಿನಲ್ಲಿ ನಿಂತಿರುತ್ತದೇನೋ ಎನಿಸುತ್ತದೆ. ನಾನು ಗಮನಿಸಿದಂತೆ ತಮ್ಮ ಜೀವಿತದ ಪ್ರಾರಂಭದಲ್ಲಿ ಕೀಳರಿಮೆಯಿಂದ ನಲುಗುತ್ತಿರುವವರು ಕ್ರಮೇಣ ತಮ್ಮ ಕಾರ್ಯಗಳನ್ನೆಲ್ಲಾ ಸಮರ್ಥಿಸಿಕೊಳ್ಳುತ್ತಾ, ತಮ್ಮ ಅಲ್ಪ ಸಾಧನೆಗಳನ್ನೂ ಪೀನ ಮಸೂರದಲ್ಲಿ ವೀಕ್ಷಿಸುತ್ತಾ, ತಮ್ಮನ್ನೇ ತಾವು ಬೆನ್ನು ತಟ್ಟಿಕೊಳ್ಳುತ್ತಾ..........ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವ ಬದಲು ಅಹಂಕಾರದತ್ತ ಹೆಜ್ಜೆ ಇಡಲಾರಂಭಿಸಿಬಿಡುತ್ತಾರೆ. ಕೆಲವರಂತೂ ಚಿಕ್ಕಂದಿನಿಂದಲೇ ಗರ್ವಿಷ್ಟ ರೀತಿನೀತಿಗಳನ್ನು ಮೈಗೂಡಿಸಿಕೊಂಡಿರುತ್ತಾರೆ.
ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ, ‘ನಮ್ಮ ವ್ಯಕ್ತಿತ್ವದಲ್ಲಿ ನಡೆಯುವ ಎಲ್ಲಾ ಕ್ರಿಯೆಗಳ ಹಿಂದೆಯೂ ‘ನಾನು ಮಾಡುತ್ತಿದ್ದೇನೆ’ ಎಂಬ ಪ್ರಜ್ಞೆಯೇ ಅಹಂಕಾರ. ನಾನು ಊಟಮಾಡುತ್ತೇನೆ, ನಾನು ನೋಡುತ್ತೇನೆ, ನಾನು ಮಾತನಾಡುತ್ತೇನೆ, ನಾನು ಚಿಂತಿಸುತ್ತೇನೆ, ನಾನು ಸುಖವಾಗಿದ್ದೇನೆ, ಇತ್ಯಾದಿ ನಮ್ಮ ಎಲ್ಲಾ ಕ್ರಿಯೆಗಳನ್ನೂ ಒಗ್ಗೂಡಿಸಿ ನಮ್ಮ ವ್ಯಕ್ತಿತ್ವಕ್ಕೆ ಒಂದು ಸಮಗ್ರತೆಯನ್ನು ನೀಡಿ ವ್ಯಕ್ತಿಭಾವಕ್ಕೆ ಕಾರಣವಾಗಿದೆ. ಈ ಅಹಂಕಾರವು ಸರಿಯಾಗಿ ಕೆಲಸ ಮಾಡದೇ ಇದ್ದರೆ ವ್ಯಕ್ತಿತ್ವದ ಸಮತೋಲನ ತಪ್ಪುತ್ತದೆ.’ ಅಹಂಕಾರವು ಮನಸ್ಸಿನ ನಾಲ್ಕು ಬಗೆಯ ಕ್ರಿಯೆಗಳಾದ ಚತುರ್ವಿಧ ಅಂತಃಕರಣ ವೃತ್ತಿಗಳಲ್ಲಿ ಒಂದಾಗಿದೆ.(ಮನಸ್, ಚಿತ್ತ, ಬುದ್ಧಿ ಮತ್ತು ಅಹಂಕಾರ)
‘ನಾನು’ ಎನ್ನುವುದು ಒಂದು ಹಂತದವರೆಗೂ ಸಹನೀಯವಾಗಿರುತ್ತದೆ. ಆದರೆ ಎಲ್ಲವೂ ನನ್ನಿಂದಲೇ ಆಗುತ್ತಿದೆ, ನಾನೇ ಎಲ್ಲವನ್ನೂ ಮಾಡುತ್ತಿದ್ದೇನೆ,.....ಎನ್ನುವಲ್ಲಿನ ‘ನಾನು’ ದುರಹಂಕಾರ ಸೂಚಕವಾಗುತ್ತದೆ. ಅಂದಮೇಲೆ ಒಳ್ಳೆಯ ‘ಅಹಂಕಾರ’ ಎನ್ನುವುದೂ ಇದೆಯೆ?
‘ನಾನು’, ‘ನಾನು’
ಎನ್ನುವವರೇ ತುಂಬಿದ್ದಾರೆ
ಇಲ್ಲಿ ಎಲ್ಲಾ,
‘ನಾನು’ಎನ್ನದೇ ಮಾರ್ಗವೇ ಇಲ್ಲ
ನನ್ನ ನಾ ಉಳಿಸಿಕೊಳ್ಳಲು!
‘ನಾನು’ ಎನ್ನವವರೇ ತುಂಬಿರುವೆಡೆ, ‘ನಾನು’ ಎನ್ನದೇ ಬದುಕುವುದಾದರೂ ಹೇಗೆ? ಎನ್ನುವುದು ಒಮ್ಮೆ ನನ್ನ ಪ್ರಶ್ನೆಯಾಗಿತ್ತು! ಅದನ್ನೇ ಅಸ್ತಿತ್ವದ ಪ್ರಶ್ನೆ ಎಂದೇ ಭಾವಿಸಿದ್ದೆ! ಈಗ ‘ನಾನು’ ಎನ್ನುವವರು ತಮ್ಮ ಅಹಮಿಕೆಯನ್ನು ಸ್ಥಾಪಿಸಲು ನಡೆಸುವ ಹೋರಾಟ, ಅನುಭವಿಸುವ ಒತ್ತಡ.......ಇವುಗಳನ್ನೆಲ್ಲಾ ನೋಡುವಾಗ ಕನಿಕರವೆನಿಸುತ್ತದೆ. ಅಹಂಕಾರಿಯಾದವರು ತಮ್ಮ ಹೆಗಲುಗಳ ಮೇಲೆ ಯಾರೋ ಕುಳಿತು, ಜುಟ್ಟನ್ನು ಹಿಡಿದುಕೊಂಡು ತಮ್ಮನ್ನು ನಿರ್ದೇಶಿಸುತ್ತಿರುವರೇನೋ ಎನ್ನುವಂತೆ ವರ್ತಿಸುತ್ತಿರುತ್ತಾರೆ. ತಾವು ಇರುವ ಗುಂಪಿನಲ್ಲಿ ತಮ್ಮನ್ನೇ ಎಲ್ಲರೂ ಗಮನಿಸುತ್ತಿರುವರೇನೋ ಎನ್ನುವ ಭಾವದಲ್ಲಿ ತಮ್ಮ ಗತ್ತನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಸರಳ, ಸುಂದರ ನಗೆ ಅವರಿಂದ ದೂರವಾಗಿರುತ್ತದೆ.
‘ಬಿಗಿದ ಮೊಗದಲಿ
ನಗೆಯ ಅಂತ್ಯ ಸಂಸ್ಕಾರ
ಅಂದವನೆ ಕಬಳಿಸುವ
ಅಹಂಕಾರ!’
ಪ್ರಭುಶಂಕರ ಅವರು ತಮ್ಮ `ಖಲೀಲ್ ಗಿಬ್ರಾನ್’ ಕೃತಿಯಲ್ಲಿ ಹೀಗೆ ಹೇಳುತ್ತಾರೆ, ‘ಇದನ್ನು ನಾನು ಮಾಡಿದ್ದೇನೆ’ ಎನ್ನುವ ಅಹಂಕಾರ ಎಷ್ಟು ಬಲವಾದದ್ದು ಎಂದರೆ ಯಾವ ಕಾಲದಲ್ಲೂ ಯಾರಿಗೂ ಅದನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಅಹಂಕಾರವನ್ನು ಅದರ ಸರಿಯಾದ ಹಿನ್ನೆಲೆಯಲ್ಲಿರಿಸಿ ಬಯಲಿಗೆಳೆದು ಹಾಸ್ಯಮಾಡಿದ್ದಾನೆ ಗಿಬ್ರಾನ್, ‘ಸೇತುವೆಯನ್ನು ಕಟ್ಟುವವರು’ ಎಂಬುದರಲ್ಲಿ,
‘ಅಸ್ಸಿ ನದಿ ಸಮುದ್ರವನ್ನು ಸೇರಲು ಹೋಗುವ ಸ್ಥಳದಲ್ಲಿ, ನಗರದ ಎರಡು ಭಾಗಗಳನ್ನು ಹತ್ತಿರ ತರುವುದಕ್ಕೆ ಎಂದು ಒಂದು ಸೇತುವೆ ಕಟ್ಟಿದರು. ಅದಕ್ಕೆ ಬೇಕಾದ ದೊಡ್ಡ ದೊಡ್ಡ ಕಲ್ಲುಗಳನ್ನು ಬೆಟ್ಟದಿಂದ ಹೇಸರಗತ್ತೆಗಳ ಮೇಲೆ ಹೊರಿಸಿ ತರಿಸಿದರು.
ಸೇತುವೆ ಮುಗಿದ ಮೇಲೆ ಅರಾಬಿಕ್ ಮತ್ತು ಅರಾಮೆಯಿಕ್ ಭಾಷೆಗಳಲ್ಲಿ ಒಂದು ಕಂಬದ ಮೇಲೆ ಕೆತ್ತಿದರು: ‘ಎರಡನೇ ಆಂಟಿಯೋರಸ್ ದೊರೆ ಈ ಸೇತುವೆಯನ್ನು ಕಟ್ಟಿಸಿದ.’
ಒಂದು ಸಂಜೆ ಹುಚ್ಚನಂತೆ ತೋರುವ ಒಬ್ಬ ಯುವಕ ಆ ಕಂಬದ ಮೇಲೆ ಇದ್ದಲಿನ ಚೂರಿನಿಂದ ಬರೆದ: ‘ಈ ಸೇತುವೆಯ ಕಲ್ಲುಗಳನ್ನು ಬೆಟ್ಟದಿಂದ ಹೇಸರಗತ್ತೆಗಳು ತಂದವು. ಈ ಸೇತುವೆಯ ಮೇಲೆ ಓಡಾಡುವಾಗ ನೀವು ಈ ಸೇತುವೆಯನ್ನು ಕಟ್ಟಿದ ಆಂಟಿಯಾಕ್ನ ಹೇಸರಗತ್ತೆಗಳ ಬೆನ್ನಿನ ಮೇಲೆ ಸವಾರಿ ಮಾಡುತ್ತೀರಿ.’ ಅದನ್ನು ನೋಡಿದ ಕೆಲವರು ನಕ್ಕರು, ಕೆಲವರು ಆಶ್ಚರ್ಯ ಪಟ್ಟರು. ಕೆಲವರು ಹೇಳಿದರು, ‘ಇದನ್ನು ಮಾಡಿದವರು ಯಾರು ಎಂದು ನಮಗೆ ಗೊತ್ತು. ಆತನಿಗೆ ಸ್ವಲ್ಪ ಹುಚ್ಚಲ್ಲವೆ?’
ಆದರೆ ಒಂದು ಹೇಸರಗತ್ತೆ ನಗುತ್ತಾ ಮತ್ತೊಂದಕ್ಕೆ ಹೇಳಿತು: ‘ಹೌದು ಆ ಕಲ್ಲುಗಳನ್ನು ಹೊತ್ತವರು ನಾವು. ನಿನಗೆ ನೆನಪಿಲ್ಲವೆ? ಆದರೂ ಈವತ್ತಿಗೂ ಎಲ್ಲರೂ ಹೇಳುವುದು ಸೇತುವೆ ಕಟ್ಟಿದವನು ದೊರೆ ಆಂಟಿಯೋರಸ್ ಎಂದೇ!
ನಾವು ಮಾಡಿದೆವೆಂದು ಭ್ರಮಿಸುವ ಮಹತ್ಕಾರ್ಯಕ್ಕಾಗಿ ನಮ್ಮ ಹೆಸರು ಚಿರಸ್ಥಾಯಿಯಾಗಬೇಕೆಂದು ಬಯಸುವ ನಾವು ಇದರಿಂದ ಕಲಿಯಬೇಕಾಗಿರುವುದು ಬಹಳಷ್ಟಿದೆ. ಸದಾ ನಮ್ಮ ಹೆಗಲೇರಲು ತವಕಿಸುತ್ತಿರುವ ಅಹಂಕಾರವನ್ನು ಬಳಿಗೆ ಸುಳಿಯಲೂ ಬಿಡದಂತೆ ಜಾಗರೂಕರಾಗಿ ಆತ್ಮವಿಶ್ವಾಸದಿಂದ ಬದುಕನ್ನು ಸಾರ್ಥಕಗೊಳಿಸಿಕೊಳ್ಳೋಣ. ಅಲ್ಲವೆ?

Friday, December 3, 2010

ಮನದ ಅ೦ಗಳದಿ..........೨೦. ಸುಖ-ದುಃಖ

ಎಲ್ಲಾ ಜೀವಿಗಳೂ ತಮ್ಮ ಜೀವಿತದ ಅವಧಿಯಲ್ಲಿ ಸುಖ-ದುಃಖಗಳ ಅನುಭವವನ್ನು ಪಡೆದೇ ಇರುತ್ತವೆ. ತನ್ನಲ್ಲಿ ವಿವೇಚನಾ ಶಕ್ತಿಯನ್ನು ಹೊಂದಿರುವ ಮನುಷ್ಯನಿಗೆ ಈ ಅನುಭವಗಳು ಹೆಚ್ಚಿನದೇ ಪರಿಣಾಮವನ್ನು ಉಂಟುಮಾಡುತ್ತವೆ. ಸುಖ-ದುಃಖಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ತಿಳಿದವರು ಹೇಳುತ್ತಾರೆ. ಭಗವದ್ಗೀತೆಯು ‘ಸುಖ-ದುಃಖ ಸಮನ್ವಿತಾ’ ಎನ್ನುತ್ತದೆ. ಆದರೆ ಸಾಮಾನ್ಯರಾದ ನಾವು ಸುಖಕ್ಕಿರುವ ಮೋಹಕತೆಯಿಂದ ಆಕರ್ಷಿತರಾಗಿ ದುಃಖ ನಮ್ಮ ಪಥದಲ್ಲಿ ಬರುವುದೇ ಬೇಡವೆಂದು ಆಶಿಸುತ್ತೇವೆ! ಕೆಲವೊಮ್ಮೆ ಸುಖ-ದುಃಖಗಳು ಎಷ್ಟೊಂದು ಪರ್ಯಾಯವಾಗಿ ಬರುತ್ತವೆಂದರೆ ‘ಅವೇನು ಒಂದನ್ನೊಂದು ಅಟ್ಟಿಸಿಕೊಂಡು ಹೋಗುತ್ತಿವೆಯೆ?’ ಎನಿಸಿಬಿಡುತ್ತದೆ!
ಸುಖದ ಹಿಂದೆ ದುಃಖವೋ
ದುಃಖದ ಹಿಂದೆ ಸುಖವೋ
ತಿಳಿಯಲು ಬೆನ್ನಟ್ಟಿದೆ
ಓಡಿದಷ್ಟೂ ಪಥ ವೃತ್ತಾಕಾರವಾಗಿದೆ!
ಆಧ್ಯಾತ್ಮಿಕ ಕವಿ, ಲೇಖಕ ಖಲೀಲ್ ಗಿಬ್ರಾನ್ ಅವರ ‘ದಿ ವಾಂಡರರ್-ಹಿಸ್ ಕೊಪಾರಬಲ್ಸ್ ಅಂಡ್ ಹಿಸ್ ಸೇಯಿಂಗ್ಸ್ (ಅಲೆಮಾರಿ-ಅವನ ದೃಷ್ಟಾಂತ ಕಥೆಗಳು, ಉಕ್ತಿಗಳು) ಇದರಲ್ಲಿರುವ ‘ದಿ ಟು ಹಂಟರ್ಸ್್’(ಇಬ್ಬರು ಬೇಟೆಗಾರರು) ಎಂಬ ದೃಷ್ಟಾಂತ ಕಥೆಯು ಸುಖ- ದುಃಖ ಮೀಮಾಸೆಯನ್ನು ಕುರಿತದ್ದಾಗಿದೆ.( ಶ್ರೀ ಪ್ರಭುಶಂಕರ ಅವರ ‘ಖಲೀಲ್ ಗಿಬ್ರಾನ್’ ಪುಸ್ತಕದಿಂದ)
‘ಮೇ ತಿಂಗಳಲ್ಲಿ ಒಂದು ದಿನ ಸುಖ ಮತ್ತು ದುಃಖ ಒಂದು ಸರೋವರದ ಪಕ್ಕದಲ್ಲಿ ಭೇಟಿ ಮಾಡಿದವು. ನಮಸ್ಕಾರ ಪ್ರತಿನಮಸ್ಕಾರದ ನಂತರ ಶಾಂತವಾದ ನೀರಿನ ಪಕ್ಕದಲ್ಲಿ ಕುಳಿತು ಸಂಭಾಷಣೆ ಪ್ರಾರಂಭಿಸಿದವು. ಈ ಭೂಮಿಯ ಮೇಲಿರುವ ಸುಖ, ಕಾಡುಬೆಟ್ಟಗಳಲ್ಲಿನ ಜೀವನದಲ್ಲಿರುವ ಪ್ರತಿದಿನದ ಆಶ್ಚರ್ಯ, ಉಷೆ-ಸಂಧ್ಯೆಗಳಲ್ಲಿ ಕೇಳುವ ಗಾನ ಇವುಗಳನ್ನು ಕುರಿತು ಸುಖ ನುಡಿಯಿತು. ಸುಖ ಹೇಳಿದ್ದೆಲ್ಲವನ್ನೂ ದುಃಖ ಒಪ್ಪಿತು. ಆ ಸಮಯದ ಮಾಂತ್ರಿಕತೆ, ಅದರ ಸೌಂದರ್ಯ ದುಃಖಕ್ಕೆ ಗೊತ್ತಿತ್ತು. ಬೆಟ್ಟ ಬಯಲುಗಳಲ್ಲಿ ಮೇ ತಿಂಗಳನ್ನು ಕುರಿತು ದುಃಖ ನಿರರ್ಗಳವಾಗಿ ಮಾತನಾಡಿತು.
ಸುಖ-ದುಃಖಗಳು ಬಹಳ ಹೊತ್ತು ಮಾತನಾಡಿದವು. ತಮಗೆ ತಿಳಿದಿದ್ದ ಎಲ್ಲಾ ವಿಷಯಗಳಲ್ಲೂ ಇಬ್ಬರಿಗೂ ಒಪ್ಪಿಗೆ ಇತ್ತು.
ಸರಸ್ಸಿನ ಆ ಕಡೆ ಇಬ್ಬರು ಬೇಟೆಗಾರರು ಚಲಿಸಿದರು. ನೀರಿನಾಚೆಗೆ ನೋಡಿ ಅವರಲ್ಲೊಬ್ಬ ಹೇಳಿದ, ‘ಅಲ್ಲಿ ಕುಳಿತ ಇಬ್ಬರು ಯಾರೋ ತಿಳಿಯದಲ್ಲಾ’, ಮತ್ತೊಬ್ಬ ಹೇಳಿದ, ‘ಇಬ್ಬರು ಎಂದೆಯಾ? ನನಗೆ ಒಬ್ಬರೇ ಕಾಣುತ್ತಾರಲ್ಲಾ,’
ಮೊದಲನೆಯವನು ಹೇಳಿದ, ‘ಇಲ್ಲ, ಇಬ್ಬರಿದ್ದಾರೆ’.
ಎರಡನೆಯವನೆಂದ, ‘ನನಗೆ ಕಾಣುತ್ತಿರುವುದು ಒಬ್ಬರೇ. ಸರಸ್ಸಿನಲ್ಲಿ ಬಿದ್ದಿರುವ ಪ್ರತಿಬಿಂಬವೂ ಒಬ್ಬರದೇ.’
‘ಇಲ್ಲ, ಇಲ್ಲ ಇಬ್ಬರಿದ್ದಾರೆ, ಎರಡು ಪ್ರತಿಬಿಂಬಗಳೂ ಇವೆ.’ ಮೊದಲನೆಯವನು.
‘ನನಗೆ ಕಾಣುವವರು ಒಬ್ಬರೇ’ .ಮತ್ತೆ ಎರಡನೆಯವನೆಂದ.....
ಇಂದಿಗೂ ಒಬ್ಬ ಬೇಟೆಗಾರ ಹೇಳುತ್ತಾನೆ, ‘ಮತ್ತೊಬ್ಬನಿಗೆ ಒಂದು ಎರಡಾಗಿ ಕಾಣುತ್ತದೆ’, ಎಂದು. ಇನ್ನೊಬ್ಬ ಹೇಳುತ್ತಾನೆ, ‘ನನ್ನ ಮಿತ್ರನಿಗೆ ಸ್ವಲ್ಪ ಕುರುಡು.’
ಗಿಬ್ರಾನರ ಪ್ರಕಾರ ಸುಖ-ದುಃಖಗಳು ಎರಡಾಗಿ ನಮಗೆ ಕಂಡರೂ ಅವು ನಿಜವಾಗಿ ಒಂದೇ. ಸುಖ-ದುಃಖ ಮೀಮಾಂಸೆಯನ್ನು ಅವರು ತಮ್ಮ ‘ಪ್ರವಾದಿ’ಯಲ್ಲಿ ಅದ್ಭುತರೀತಿಯಲ್ಲಿ ಮಾಡಿದ್ದಾರೆ. ಸುಖ ಹೆಚ್ಚೋ, ದುಃಖ ಹೆಚ್ಚೋ ಎನ್ನುವ ಆಲೋಚನಾ ಜೀವಿಗಳ ಪ್ರಶ್ನೆಗೆ ‘ಪ್ರವಾದಿ’ ಹೀಗೆ ಉತ್ತರಿಸುತ್ತಾನೆ.
‘ನಿನ್ನ ಸುಖ, ಮುಖವಾಡ ಕಿತ್ತೆಸೆದ ನಿನ್ನ ದುಃಖವೇ ಆಗಿದೆ.
ಯಾವ ಭಾವಿಯಿಂದ ನಗೆ ಬುಗ್ಗೆಯುಕ್ಕುತ್ತಿದೆಯೋ ಆ ಅದೇ ಅನೇಕ ಸಲ ನಿನ್ನ ಕಂಬನಿಗಳಿಂದ ತುಂಬಿತ್ತು. ಬೇರೆ ಹೇಗಾಗಲು ಸಾಧ್ಯ?
ನಿನ್ನ ಚೇತನದ ಆಳವನ್ನು ದುಃಖ ಕೊರೆಕೊರೆದಷ್ಟೂ ಸುಖವನ್ನು ಅದು ತುಂಬಿಕೊಳ್ಳಬಲ್ಲದು!
ನಿನ್ನ ವೈನನ್ನು ತುಂಬಿರುವ ಬಟ್ಟಲೇ ಅಲ್ಲವೆ ಕುಂಬಾರನ ಒಲೆಯಲ್ಲಿ ಬೆಂದದ್ದು?
ನಿನ್ನ ಹೃದಯವನ್ನು ಸಮಾಧಾನಗೊಳಿಸುತ್ತಿರುವ ಕೊಳಲನ್ನೇ ಅಲ್ಲವೆ ಚಾಕು ಕೊರೆದು ಕೊರೆದದ್ದು?
ನೀವು ಸಂತೋಷಭರಿತರಾಗಿರುವಾಗ ನಿಮ್ಮ ಹೃದಯದಾಳವನ್ನು ನೋಡಿರಿ. ಆಗ ನಿಮಗೆ ತಿಳಿಯುತ್ತದೆ, ಯಾವುದು ನಿಮಗೆ ದುಃಖವನ್ನು ನೀಡಿತೋ ಅದೇ ಆನಂದವನ್ನು ನೀಡುತ್ತದೆ.
ನೀವು ದುಃಖಿತರಾಗಿರುವಾಗ, ನಿಮ್ಮ ಹೃದಯವನ್ನು ಹುಡುಕಿ ನೋಡಿ, ನಿಜವಾಗಿ ನೀವು ದುಃಖಿಸುತ್ತಿರುವುದು ಒಮ್ಮೆ ನಿಮ್ಮ ಆನಂದವಾಗಿದ್ದುದಕ್ಕಾಗಿ ಎಂಬುದು.
ನಿಮ್ಮಲ್ಲಿ ಕೆಲವರು ಹೇಳುತ್ತೀರಿ, ‘ದುಃಖಕ್ಕಿಂತ ಸುಖ ಹೆಚ್ಚು.’ಎಂದು. ಮತ್ತೆ ಕೆಲವರು ಹೇಳುತ್ತೀರಿ, ‘ಇಲ್ಲ ದುಃಖವೇ ಹೆಚ್ಚಿನದು’.
ಆದರೆ ನಾನು ಹೇಳುತ್ತೇನೆ, ‘ಅವೆರಡೂ ಬೇರ್ಪಡಿಸಲಾರದವು. ಅವು ಒಟ್ಟಾಗಿಯೇ ಬರುತ್ತವೆ. ಒಂದು ನಿಮ್ಮೊಡನೆ ಊಟಕ್ಕೆ ಕುಳಿತಾಗ, ನೆನಪಿಡಿ, ಮತ್ತೊಂದು ನಿಮ್ಮ ಹಾಸಿಗೆಯ ಮೇಲೆ ನಿದ್ರಿಸುತ್ತಿರುತ್ತದೆ.
ವಾಸ್ತವವಾಗಿ ನೀವು ತಕ್ಕಡಿಯ ತಟ್ಟೆಗಳಂತೆ ಸುಖ-ದುಃಖಗಳ ನಡುವೆ ಓಲಾಡುತ್ತಿದಿ ರಿ.
ಬರಿದಾಗಿರುವಾಗ ಮಾತ್ರ ನೀವು ನಿಶ್ಚಲ ಮತ್ತು ಸಮತೂಕದಲ್ಲಿರುತ್ತೀರಿ.
ಭಂಡಾರಿ ತನ್ನ ಚಿನ್ನ ಬೆಳ್ಳಿಗಳನ್ನು ತೂಗಲು ನಿಮ್ಮನ್ನು ಎತ್ತಿದಾಗ ಮಾತ್ರ ನಿಮ್ಮ ಸುಖ-ದುಃಖ ಏರುತ್ತದೆ ಅಥವಾ ಬೀಳುತ್ತದೆ.’
ಜೀವನದ ಮಹಾನ್ ಪಥದಲ್ಲಿ ಸಾಗಿದಂತೆ ಈ ಒಂದು ಸಮಸ್ಥಿತಿಗೆ ನಮ್ಮನ್ನು ನಾವು ಅಣಿಗೊಳಿಸುತ್ತಿರಬೇಕು ಅಲ್ಲವೇ.

Saturday, November 27, 2010

ಮನದ ಅ೦ಗಳದಿ................೧೯. ಮನಸ್ಸು- ಅದರ ಶಿಕ್ಷಣ

ಜೀವನದಲ್ಲಿ ನಾವು ಸಂತಸದಿಂದ ಇರಬೇಕಾದರೆ, ನಮ್ಮ ಪಾಲಿನ ಕರ್ತವ್ಯಗಳನ್ನು ನಿರಾತಂಕವಾಗಿ ನಿರ್ವಹಿಸಬೇಕಾದರೆ ಮೊದಲು ನಮ್ಮ ಮನಸ್ಸನ್ನು ನಾವು ಅರಿಯಬೇಕಾಗುತ್ತದೆ. ನಮ್ಮ ಮನಸ್ಸನ್ನು ನಾವು ನಿರ್ದಿಷ್ಟರೀತಿಯಲ್ಲಿ ಅಣಿಗೊಳಿಸಿಕೊಳ್ಳಬೇಕಾಗುತ್ತದೆ. ಆ ವಿಧಾನವನ್ನು ತಿಳಿದುಕೊಳ್ಳಲು ಸಂಬಂಧಿತ ತಜ್ಞರ, ಜ್ಞಾನಿಗಳ ಸಹಕಾರವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪಡೆಯಬೇಕಾಗುತ್ತದೆ. ಅನುಭವಿಗಳ ಹಾಗೂ ಅನುಭಾವಿಗಳ ಲೇಖನಗಳನ್ನು, ಅವರು ಬರೆದ ಪುಸ್ತಕಗಳನ್ನು ಓದುವುದು ಈ ನಿಟ್ಟಿನಲ್ಲಿ ಒಂದು ಸರಳ ಮಾರ್ಗವಾಗಿದೆ. ನಾನು ಇತ್ತೀಚೆಗೆ ಓದಿದ ಶಂಸ ಐತಾಳ ಅವರು ಬರೆದ ಸ್ವಾಮಿ ನಿರ್ಮಲಾನಂದರ ಬಗೆಗಿನ ಪುಸ್ತಕ ಹೆಚ್ಚು ಮಾರ್ಗದರ್ಶಕವಾಗಿದೆ.
‘ಮನಸ್ಸೇ ಎಲ್ಲಾ ರಾಗ-ದ್ವೇಶಗಳಿಗೆ, ಎಲ್ಲಾ ಸುಖ-ಸಂತೋಷಗಳಿಗೆ ಮೂಲ. ಮನಸ್ಸಿನ ಚೇಷ್ಟೆಗಳಿಗೆ ಸಿಲುಕಿಕೊಂಡವನು ಅದರ ಗುಲಾಮನಾಗುತ್ತಾನೆಯೇ ವಿನಾ ಅದರ ಯಜಮಾನನಾಗುವುದಿಲ್ಲ. ಮನಸ್ಸಿಗೆ ಸಂತೋಷವಾದಾಗ ಹಿಗ್ಗುವುದಾಗಲೀ, ದುಃಖವಾದಾಗ ಕುಗ್ಗುವುದಾಗಲೀ ಸರಿಯಲ್ಲ. ಬುದ್ದಿಯನ್ನು ಸಾಕ್ಷಿಯಾಗಿ ನಿಲ್ಲಿಸಿ, ಯಾವುದೇ ವಿಕಾರಕ್ಕೆ ಒಳಗಾಗದ ಸಮದೃಷ್ಟಿಯಿಂದ, ವಿಷಯಗಳನ್ನು ಪರಿಶೀಲಿಸಲು ಕಲಿಯಬೇಕು. ಈ ದೃಷ್ಟಿಯಿಂದ ಹೇಳುವುದಾದರೆ ಮನಸ್ಸಿಗೂ ಶಿಕ್ಷಣ ನೀಡಬೇಕಾದ ಅಗತ್ಯವುಂಟು.
ಮನಸ್ಸಿನ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಮೂರು ಮುಖ್ಯ ಪರಿಕಲ್ಪನೆಗಳನ್ನು ನೀಡುತ್ತಾರೆ ಸ್ವಾಮೀಜಿಯವರು.
*ಸ್ಥೂಲ ಮನಸ್ಸನ್ನು ಸೂಕ್ಷ್ಮಗೊಳಿಸುವುದು,
*ಮನಸ್ಸನ್ನು ಶುದ್ಧೀಕರಿಸುವುದು
ಮತ್ತು
*ಮನಸ್ಸನ್ನು ‘ಶೂನ್ಯ’ಗೊಳಿಸುವುದು.
ಸಾಮಾನ್ಯ ವ್ಯಕ್ತಿಗಳು ಸಾಧಾರಣವಾಗಿ ಹೊಂದಿರುವ ಮನಸ್ಸು ಸ್ಥೂಲವಾಗಿರುತ್ತದೆ. ‘ಇಂಥಾ ಸ್ಥೂಲ ಮನಸ್ಸೆಂಬುದು ಅವಿವೇಕವಲ್ಲದೆ ಬೇರೇನೂ ಅಲ್ಲ.’ ( Gross-mindedness is stupidity.) ವಿವಿಧ ಆಲೋಚನೆಗಳಲ್ಲಿ ತೊಡಗಿರುವ ಸ್ಥೂಲ ಮನಸ್ಸು ವಿಕಾರಕ್ಕೆ ಒಳಗಾಗುವುದು ಬಹಳ ಸುಲಭ. ಸ್ಥೂಲ ಮನಸ್ಸನ್ನು ಸೂಕ್ಷ್ಮಗೊಳಿಸುವುದು ಹೇಗೆ? ಇದಕ್ಕೆ ವ್ಯಕ್ತಿ ಅಂತರಂಗ ವೀಕ್ಷಣೆ, ಆತ್ಮ ಪರೀಕ್ಷೆ, ಮತ್ತು ಆತ್ಮ ಪರಿಶೀಲನೆಗಳಿಂದ ಮನಸ್ಸನ್ನು ಶೋಧಿಸಬೇಕಾದ ಅಗತ್ಯವಿದೆ. ಆಲೋಚನಾ ತರಂಗಗಳನ್ನು ಮನಸ್ಸಿನಲ್ಲಿ ಕೇಂದ್ರೀಕರಿಸದೇ ಆತ್ಮನಲ್ಲಿ ಕೇಂದ್ರೀಕರಿಸಬೇಕು. ಆಗ ಮನಸ್ಸು ನಿರ್ಮಲವಾಗುತ್ತದೆ, ಸುಸಂ¸ÀÌø ತವಾಗುತ್ತದೆ, ಸಂವೇದನಾಶೀಲವಾಗುತ್ತದೆ ಹಾಗೂ ಸೂಕ್ಷ್ಮವಾಗುತ್ತದೆ. ಇದು ಮನಸ್ಸಿನ ಶಿಕ್ಷಣದ ಮೊದಲ ಹಂತ.
ಎರಡನೆಯ ಹಂತಕ್ಕೆ ಸಂಬಂಧಿಸಿದಂತೆ ಸ್ವಾಮಿ ನಿರ್ಮಲಾನಂದರು ‘ಮಾನಸ ತೀರ್ಥ? ಎಂಬ ಪರಿಕಲ್ಪನೆಯನ್ನು ನಮ್ಮ ಮುಂದೆ ಇಡುತ್ತಾರೆ. ನಿರಂತರ ಆತ್ಮಪರಿಶೀಲನೆಯಿಂದ, ಸತತ ಧ್ಯಾನದಿಂದ ಸ್ಥೂಲ ಮನಸ್ಸು ಸರೋವರದ ನಿಶ್ಚಲ ಹಾಗೂ ಸ್ವಚ್ಛನೀರಿನಂತೆ ಪರಿಶುದ್ಧವೂ ಪಾರದರ್ಶಕವೂ ಸೂಕ್ಷ್ಮವೂ ಆಗುತ್ತದೆ. ಶ್ರೀ ರಮಣ ಮಹರ್ಶಿಗಳು ಹೇಳಿದಂತೆ ಇದೇ ಶುದ್ಧ ಮನಸ್ಸು; ಇದೇ ಬ್ರಹ್ಮ. `The pure in heart shall see God’ ಎಂಬ ಯೇಸುಕ್ರಿಸ್ತನ ವಚನದಲ್ಲಿಯೂ ಇದೇ ಅಭಿಪ್ರಾಯವೂ ಧ್ವನಿತವಾಗುತ್ತದೆ. ಪರಿಶುದ್ಧ ಹೃದಯ ಹಾಗೂ ಪರಿಶುದ್ಧ ಮನಸ್ಮ್ಸಗಳಲ್ಲಿ ಕಂಡುಬರುವಂತಹ ದಯೆಯ, ಅನುಕಂಪದ ಸ್ವಚ್ಛ ನಿರ್ಮಲ ಜಲವೇ ‘ಮಾನಸ ತೀರ್ಥ’. ಇದರಲ್ಲಿ ಈಜಾಡಲು, ಸ್ನಾನ ಮಾಡಿ ಪುನೀತರಾಗಲು ನಾವು ಕಲಿಯಬೇಕಾಗಿದೆ. ಒಮ್ಮೆ ಮಾತ್ರವಲ್ಲ. ಸಾಧ್ಯವಾದರೆ ಯಾವಾಗಲೂ.
ಪರಿಶುದ್ಧವಾಗಿರುವ ಸೂಕ್ಷ್ಮ ಮನಸ್ಸನ್ನು ‘ಶೂನ್ಯ’ಗೊಳಿಸುವುದೇ ಮೂರನೆಯ ಹಂತ. ಈ ಹಂತದಲ್ಲಿ ವ್ಯಕ್ತಿ ಆಲೋಚನೆಗಳಿಂದ ಸಂಪೂರ್ಣವಾಗಿ ಮುಕ್ತನಾಗಿರುತ್ತಾನೆ. ‘ಶೂನ್ಯಗೊಂಡ’ ಮನಸ್ಸೇ ‘ಬುದ್ಧಚಿತ್ತ’ ಅಥವಾ ‘ಕ್ರಿಸ್ತಚಿತ್ತ’. ಈ ಉನ್ನತ ಹಂತವನ್ನು ತಲುಪಲು ನಮಗೆ ‘ಮೌನಧ್ಯಾನ’ ನೆರವಾಗುತ್ತದೆ ಎನ್ನುತ್ತಾರೆ ಸ್ವಾಮೀಜಿ.
ಸತ್ಯವಂತನಾಗಿ ಬಾಳುವ ಬದಲು ವ್ಯಕ್ತಿ ತನ್ನ ಸ್ವಂತ ಮನಸ್ಸಿನಿಂದ ಹಾಗೂ ‘ಅಹಂ’ನಿಂದ ತಪ್ಪುದಾರಿಗೆ ಎಳೆಯಲ್ಪಡುವುದುಂಟು. ಇದರಿಂದ ಜೀವನದ ಹೋರಾಟ-ನರಳಾಟಗಳು ಅಧಿಕವಾಗುತ್ತವೆ. ಎಚ್ಚರಿಕೆಯಿಲ್ಲದ ಮನಸ್ಸನ್ನು ಬಳಸುವುದರಿಂದ ಹಾಗೂ ‘ಅಹಂ'ನ ಅನಿಯಂತ್ರಿತವಾದ ಪ್ರಭುತ್ವದಿಂದ ವ್ಯಕ್ತಿ ಅಪಾರ ದುಃಖಕ್ಕೆ ಈಡಾಗಬೇಕಾದ ಪರಿಸ್ಥಿತಿ ಬರುತ್ತದೆ. ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವ ಅಭ್ಯಾಸ ಮಾಡಬೇಕು. ಸಾಧ್ಯವಾದಷ್ಟೂ ಮಟ್ಟಿಗೆ ಇತರರ ವ್ಯವಹಾರಗಳಲ್ಲಿ ತಲೆತೂರಿಸದಿರುವುದು ಒಳ್ಳೆಯದು.
ಸ್ವಾಮಿ ಸುಖಬೋಧಾನಂದರ ‘ಮನಸೇ ರಿಲ್ಯಾಕ್ಸ್ ಪ್ಲೀಸ್! ಭಾಗ ೨’ ರಲ್ಲಿ ಹೀಗೆ ಹೇಳುತ್ತಾರೆ, ‘ಮೀನು ಮಾರುಕಟ್ಟೆಯ ಹಾಗೆ ನಮ್ಮ ಮನಸ್ಸಿನಲ್ಲಿ ಸದಾ ಕಾಲವೂ ಮಾತಿನ ಸದ್ದು ಕೇಳುತ್ತಲೇ ಇರುತ್ತದೆ! ಅದನ್ನು ಮೊದಲು ನಿಲ್ಲಿಸಬೇಕು. ಹೊರಗಿನಿಂದ ಬರುವ ಸದ್ದುಗಳು ನಮ್ಮ ಕಿವಿಯ ಮೇಲೆ ಬೀಳುತ್ತಲೇ ಇರುತ್ತವೆ. ಅವುಗಳನ್ನು ಕೇಳಿಸಿಕೊಳ್ಳದೇ ಓಡಿಸಬೇಕು.ನಾವು ದೀರ್ಘವಾಗಿ ಒಳಗೆ ತೆಗೆದುಕೊಂಡು ಹೊರಗೆ ಬಿಡುವ ಉಚ್ಛ್ವಾಸ-ನಿಚ್ಛ್ವಾಸಗಳಲ್ಲಿ ಮಾತ್ರ ನಮ್ಮ ಗಮನ ಆಳವಾಗಿ ಹುದುಗಿರಬೇಕು. ಹೀಗೆ ಆಲೋಚನೆ, ಮಾತು, ಭಾವನೆ, ಸದ್ದು ಯಾವುವೂ ಇಲ್ಲದ ಆ ಶೂನ್ಯತೆ ಅಧಿಕ ಶಕ್ತಿಶಾಲಿಯಾದದ್ದು.
ಈ ಅಭ್ಯಾಸಕ್ಕೆ ‘ಧ್ಯಾನ’ ಎಂದು ಹೆಸರು ಕೊಟ್ಟಿದ್ದಾರೆ. ಧ್ಯಾನದ ಶಕ್ತಿ ಅಪಾರವಾದದ್ದು. ಹೆಚ್ಚು ಬೇಡ, ಪ್ರತಿದಿನವೂ ಒಂದು ಹತ್ತು ನಿಮಿಷ ಈ ಅಭ್ಯಾಸವನ್ನು ಮಾಡಿ ನೋಡಿರಿ.
ನೀವು ನಿಮ್ಮ ಮನಸ್ಸಿನ ಯಜಮಾನ ಆಗುತ್ತೀರಿ!’
ಹೀಗೆ ನಮ್ಮನ್ನು ನಾವು ಸಿದ್ಧಗೊಳಿಸಿಕೊಂಡರೆ ನಾವೂ ಶಾಂತಿಯಿಂದ ಬಾಳಬಹುದು. ವಿಶ್ವ ಶಾಂತಿಗೂ ಕಾರಣರಾಗಬಹುದು.

Friday, November 19, 2010

ಮನದ ಅ೦ಗಳದಿ............೧೮.ಪ್ರವಾಸ

`ಜಗತ್ತಿನ ಇತರ ರಾಷ್ಟ್ರಗಳಲ್ಲಿ ಸಮಾಜದ ಯಂತ್ರಗಳು ಹೇಗೆ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿದುಕೊಳ್ಳಲು ನಮ್ಮ ಯುವ ಜನರು ಪ್ರವಾಸ ಮಾಡಬೇಕಾದ ಅಗತ್ಯವುಂಟು’
*ಸ್ವಾಮಿ ವಿವೇಕಾನಂದರು

ಇದು ಶಾಲಾ ಪ್ರವಾಸವನ್ನು ಕೈಗೊಳ್ಳುವ ಸಮಯ. ಕೆಲವು ಶಾಲೆಗಳಲ್ಲಿ ಈಗಾಗಲೇ ಪ್ರವಾಸಕ್ಕೆ ಹೋಗಿ ಬಂದ ಸಂಭ್ರಮದಲ್ಲಿದಾರೆ. ಎಷ್ಟೋ ಶಾಲೆಗಳಲ್ಲಿ ಪ್ರವಾಸಕ್ಕೆ ಹೊರಡುವ ಸಡಗರದ ವಾತಾವರಣವಿದೆ. ಹೊರಡಲು ಸಿದ್ದರಾದ ಮಕ್ಕಳಲ್ಲಿ ಕಾತುರ, ಕುತೂಹಲಗಳ ನಿರೀಕ್ಷೆಯಿದ್ದರೆ, ತಮ್ಮ ಪೋಷಕರ ಆರ್ಥಿಕ ತೊಂದರೆಯಿಂದ ಹೋಗಲಾಗದ ಮಕ್ಕಳ ಮನಸ್ಸುಗಳಲ್ಲಿ ನಿರಾಸೆ ಮಡುಗಟ್ಟಿದೆ.
ಮೂಲತಃ ಅಲೆಮಾರಿಯಾಗಿದ್ದ ಮಾನವ ಸಾಂಸ್ಕ?ತಿಕ ವಿಕಾಸದ ಹಾದಿಯಲ್ಲಿ ಒಂದೆಡೆ ನೆಲೆಸಿ ಜೀವಿಸಲಾರಂಭಿಸಿದ್ದರೂ ?ಪ್ರವಾಸ?ಮಾಡಬೇಕೆಂಬ ಇಚ್ಛೆಯನ್ನು ತನ್ನಲ್ಲೇ ಪೋಷಿಸುತ್ತಾ ಬಂದಿದ್ದಾನೆ. ಪ್ರಾರಂಭದಲ್ಲಿ ಎಲ್ಲೇ ದೂರ ಪ್ರಯಾಣ ಮಾಡಬೇಕಾದರೂ ತಮ್ಮದೇ ಕಾಲುಗಳನ್ನೋ ಇತರ ಪ್ರಾಣಿಗಳನ್ನೋ ಅವಲಂಭಿಸಬೇಕಾಗಿದ್ದ ಸಂದರ್ಭದಲ್ಲಿದ್ದ ತೊಂದರೆ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯ ನಂತರ ಇಲ್ಲವಾಗಿದೆ. ಹಣದ ಬೆಂಬಲವೊಂದಿದ್ದರೆ ದೂರದ ರಾಷ್ಟ್ರಗಳಿಗೆ ಹೋಗಿಬರುವುದೂ ಸರಾಗವೆನಿಸಿದೆ.
ಪ್ರವಾಸ ಏಕೆ ಬೇಕು? ಎನ್ನುವ ಬಗ್ಗೆ ವಿಶ್ವದ ಅನೇಕ ರಾಷ್ತ್ರಗಳಲ್ಲಿ ಸಂಚರಿಸಿ ಬಂದು ಈಗ ಬಿಳಿಗಿರಿರಂಗನ ಬೆಟ್ಟದಲ್ಲಿ `ವಿಶ್ವಶಾಂತಿನಿಕೇತನ?ದಲ್ಲಿ ನೆಲೆಸಿರುವ ಸ್ವಾಮಿ ನಿರ್ಮಲಾನಂದರು ಹೀಗೆ ಹೇಳುತ್ತಾರೆ, ` ಸತ್ಯವನ್ನು ಅನ್ವೇಶಿಸುವುದೇನನ್ನ ಜೀವನದ ಮೊತ್ತಮೊದಲ ಹಾಗೂ ಅತ್ಯಂತ ಮುಖ್ಯವಾದ ಮಹತ್ವಾಕಾಂಕ್ಷೆಯಾಗಿದ್ದರೂ, ಭಾರತ ಹಾಗೂ ವಿದೇಶಗಳಲ್ಲಿ ಪ್ರವಾಸ ಮಾಡಬೇಕೆಂಬ ಮತ್ತು ಎಲ್ಲ ರಾಷ್ರಗಳ ಜನಾಂಗಗಳ ಜನರ ಜೊತೆ ಬೆರೆಯಬೇಕೆಂಬ ಹೆಬ್ಬಯಕೆಯನ್ನು ಚಿಕ್ಕ ಹುಡುಗನಾಗಿದ್ದಾಗಲೇ ನಾನು ಇರಿಸಿಕೊಂಡಿದ್ದೆ. ಇಂಥದೊಂದು ಪ್ರವಾಸ ಕಾರ್ಯಕ್ರಮಕ್ಕೆ ನಾನು ವಿಶೇಷ ಮಹತ್ವವನ್ನೂ ನೀಡಿದ್ದೆ. `ಅಲೆದಾಟದಿಂದಲೇ ಜೇನು ಮಧುಸಂಗ್ರಹ ಮಾಡುತ್ತದೆ.? ಎಂಬ ಅರ್ಥದ ಸಂಸ್ಕ?ತ ಸೂಕ್ತಿಯೊಂದಿದೆ. ನಿಜವಾಗಿ ಹೇಳುವುದಾದರೆ ಜಗತ್ತನ್ನು ತಲ್ಲೀನತೆಯಿಂದ ವೀಕ್ಷಿಸುವವರಿಗೆ ಮಾತ್ರವೇ ಆ ಜಗತ್ತು ಸೇರಿರುತ್ತದೆ. ಹೆಗಲಿಗೆ ಗಂಟುಮೂಟೆಗಳನ್ನು ಏರಿಸಿಕೊಂಡು ಜಗದಗಲ ಸುತ್ತಾಡಿದರೆ ಏನು ಫಲ? ಏನು ಪ್ರಯೋಜನ? ಜಗತ್ ಪ್ರವಾಸ ಮಾಡುವ ಮಂದಿ ಈ ದಿನಗಳಲ್ಲಿ ಎಲ್ಲೆಡೆಯೂ ಇದ್ದಾರೆ. ಈಚೆಗೆ ಇಂಥಾ ಪ್ರವಾಸವು ಹಿಂದೆಂದಿಗಿಂತ ಹೆಚ್ಚು ಸುಲಭವೂ ಸುಗಮವೂ ಆಗಿದೆ. ರಾಜಕಾರಣಿಗಳೂ, ವಾಣಿಜ್ಯೋದ್ಯಮಿಗಳೂ ಎಷ್ಟು ತಿರುಗುವುದಿಲ್ಲ? ಆದರೆ ಇವರ ಪ್ರವಾಸ ಸ್ವಾರ್ಥಮೂಲವಾಗಿರುವುದರಿಂದ ಪ್ರವಾಸದ ಪರಿಣಾಮವಾಗಿ ಅವರ ವ್ಯಕ್ತಿತ್ವದಲ್ಲಿ ಮೂಲಭೂತವಾದ ಯಾವ ಬದಲಾವಣೆಯೂ ಸಂಭವಿಸುವುದಿಲ್ಲ. ಯಾವುದಾದರೂ ಮಹದೋದ್ದೇಶವನ್ನು ಇರಿಸಿಕೊಂಡು ಸೂಕ್ಷ್ಮ ವೀಕ್ಷಣೆ ಮಾಡುತ್ತಾ ಪ್ರವಾಸ ಮಾಡುವುದು ಪ್ರಯೋಜನಕರ ಮತ್ತು ಅಪೇಕ್ಷಣೀಯ. ಇಂಥ ಪ್ರವಾಸಗಳಿಂದ ವಿಶ್ವವಿದ್ಯಾನಿಲಯದ ಶಿಕ್ಷಣಕ್ಕಿಂತಲೂ ಮಿಗಿಲಾದ ಉಪಯೋಗವುಂಟು. ಇಂಥಾ ಪ್ರವಾಸ ವ್ಯಕ್ತಿಯ ಅನುಭವವನ್ನು ಶ್ರೀಮಂತಗೊಳಿಸುತ್ತದೆ; ಅವನ ದೃಷ್ಟಿಯನ್ನು ವಿಶಾಲಗೊಳಿಸುತ್ತದೆ.?
ಸತ್ಯಾನ್ವೇಷಣೆಯ ಘನ ಉದ್ದೇಶವನ್ನು ಇರಿಸಿಕೊಂಡು ಸ್ವಾಮಿ ನಿರ್ಮಲಾನಂದರು (ಜನನ ಡಿಸೆಂಬರ್೨, ೧೯೨೪) ೧೯೫೭ರಲ್ಲಿ ಭಾರತ ಪ್ರವಾಸವನ್ನು ಕೈಗೊಂಡರು. ಭಾರತದಲ್ಲಿ ಸುಮಾರು ಹದಿನೈದು ಸಾವಿರ ಮೈಲುಗಳಷ್ಟು ವಿಸ್ತಾರವಾಗಿ ದಿಬ್ರುಗಡದಿಂದ ಡಾರ್ಜಲಿಂಗ್ವರೆಗಿನ; ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಅನೇಕ ಆಶ್ರಮಗಳನ್ನು ಸಂದರ್ಶಿಸಿ ಅಲ್ಲಿ ತಾವು ಭೇಟಿಯಾದ ಅನೇಕ ಆಧ್ಯಾತ್ಮಿಕ ಗುರುಗಳಿಂದ ಸಲಹೆ-ಸೂಚನೆ-ಸಹಾಯ-ಮಾರ್ಗದರ್ಶನ ಪಡೆದರು. ೧೯೫೯ರಿಂದ ೧೯೬೪ರವರೆಗೆ ಸುಮಾರು ನಾಲ್ಕೂವರೆ ವರ್ಷಗಳ ಕಾಲದ ದೀರ್ಘ ವಿದೇಶ ಪ್ರವಾಸವನ್ನು ಮಾಡಿದರು. ಮೊದಲು ಭೂಮಾರ್ಗವಾಗಿ ಯೂರೋಪಿಗೆ ತೆರಳಿ ಅಲ್ಲಿಂದ ಮಧ್ಯಪ್ರಾಚ್ಯ ರಾಷ್ರಗಳಿಗೆಹೋಗಿ ಅನಂತರದ ಹತ್ತು ತಿಂಗಳ ಅವಧಿಯಲ್ಲಿ ಇಸ್ರೇಲನ್ನೂ ಪುಣ್ಯಭೂಮಿ ಪ್ಯಾಲಸ್ಟೈನಿನ ಎಲ್ಲಾ ಪವಿತ್ರ ಸ್ಥಳಗಳನ್ನೂ ಸಂದರ್ಶಿಸಿದರು.ತುರ್ಕಿ, ಗ್ರೀಸ್, ಫ್ರಾನ್ಸ್, ಬೆಲ್ಜಿಯಂ, ಹಾಲೆಂಡ್ಗಳಿಗೆ ಹೋದರು.
ಆಮ್ಸ್ಟರ್ಡಮ್ನಲ್ಲಿದ್ದಾಗ ಅವರಿಗೆ ಒಂದು ಅಪೂರ್ವ ಆಧ್ಯಾತ್ಮಿಕ ಅನುಭವವುಂಟಾಯಿತು. ಅದರ ಪರಿಣಾಮದಿಂದ ಪ್ರವಾಸದ ಗುರಿ ಬೇರೆಯೇ ಆಯಿತು. ಅವರೇ ಹೇಳುವಂತೆ ಇನ್ನಾರೋ ಹೇಳಿದ್ದನ್ನು ಗಿಳಿಪಾಠದಂತೆ ಪುನರುಚ್ಛರಿಸದೇ ತಮ್ಮ ಸ್ವಂತ ಅನುಭವದ ಆಧಾರದ ಮೇಲೆ ಮಾತನಾಡಲು ಅವರು ಸಮರ್ಥರಾಗಿದ್ದರು. ಲೋಕಸಂಚಾರವನ್ನು ಮುಂದುವರೆಸಿ ವಿಶ್ವಾದ್ಯಂತ ಮತ್ತೆಮತ್ತೆ ಸಂಚರಿಸಿದರು.
ಹೀಗೆ ವಿಶ್ವದ ವಿವಿಧ ಭಾಗಗಳಲ್ಲಿನ ಅನೇಕ ಜನರೊಂದಿಗೆ ಉಂಟಾದ ಸ್ನೇಹಸಂಪರ್ಕ ಮತ್ತು ದೀರ್ಘ, ನಿರಂತರ ಹಾಗೂ ದುರ್ಗಮ ಪ್ರವಾಸ- ಇವುಗಳು ತಮ್ಮ ಒಳನೋಟವನ್ನೂ ಜೀವನಾನುಭವವನ್ನೂ ವಿಸ್ತರಿಸಿದವು, ಶ್ರೀಮಂತಗೊಳಿಸಿದುವು ಎನ್ನುತ್ತಾರೆ ಸ್ವಾಮೀಜಿ. ಒಟ್ಟಿನಲ್ಲಿ ಪುಸ್ತಕಗಳಿಂದ ಕಲಿತದ್ದಕ್ಕಿಂತ ಪ್ರವಾಸಗಳಿಂದ ಕಲಿತದ್ದೇ ಹೆಚ್ಚು ಎನ್ನುವುದು ಅವರ ಅಭಿಪ್ರಾಯವಾಗಿದೆ.
ಮಹಾ ಪಂಡಿತ ರಾಹುಲ ಸಾಂಕೃತ್ಯಾನಂದರು ನಿರಂತರ ಯಾತ್ರಿಕರಾಗಿದ್ದರು. ಯಾವುದೇ ಗಟ್ಟಿ ಆರ್ಥಿಕ ಬಲವಿಲ್ಲದಿದ್ದರೂ, ಸರ್ಕಾರಗಳ ಸಹಕಾರವಿಲ್ಲದಿದ್ದರೂ ಟಿಬೆಟಿಗೆ ಮೂರು ಭಾರಿ ಭೇಟಿನೀಡಿ ಅಪೂರ್ವವಾದ ಸಂಸ್ಕ?ತ ಗ್ರಂಥಗಳನ್ನು ಭಾರತಕ್ಕೆ ತಂದರು. ಶ್ರೀಲಂಕಾಗೆ ಹೋಗಿ ಬೌದ್ಧಮತದ ಅಧ್ಯಯನ ನಡೆಸಿದರು. ಸುದೀರ್ಘವಾದ ಏಶ್ಯಾ ಮಹಾಯಾತ್ರೆಯನ್ನು ಕೈಗೊಂಡರು. ರಂಗೂನ್, ಪೆನಾಂಗ್, ಸಿಂಗಾಪುರ, ಹಾಂಗ್ಕಾಂಗ್, ಜಪಾನ್, ಕೊರಿಯಾ, ಮಂಚೂರಿಯಾ........ಮುಂತಾದ ಪ್ರಮುಖ ಸ್ಥಳಗಳನ್ನು ಸಂದರ್ಶಿಸಿ ಆಯಾ ಪ್ರದೇಶಗಳ ಭಾಷೆ, ಸಂಸ್ಕ?ತಿ, ಜನಜೀವನವನ್ನು ಕುತೂಹಲದಿಂದ ಗಮನಿಸುತ್ತಾ ಅಧ್ಯಯನ ಮಾಡುತ್ತಾ ಬರವಣಿಗೆ ಕಾರ್ಯವನ್ನು ಮುಂದುವರಿಸಿದರು.
ಮಹಾನ್ ಸಂತರು, ಜ್ಞಾನಾಕಾಂಕ್ಷಿಗಳು, ಲೇಖಕರು...ಮುಂತಾದವರು ಪ್ರವಾಸವನ್ನು ಮಾಡಿ ತಮ್ಮ ಅನುಭವವನ್ನು ಪ್ರವಚನ ಅಥವಾ ಲೇಖನದ ಮೂಲಕ ಎಲ್ಲರಿಗೂ ತಲುಪಿಸುವ ಪ್ರಯತ್ನ ನಡೆಸಿ ನಮ್ಮ ಅರಿವಿನ ಜಗತ್ತನ್ನು ವಿಸ್ತಾರಗೊಳಿಸಿದ್ದಾರೆ. ಪ್ರವಾಸ ಸಾಹಿತ್ಯಗಳು ಈ ದೃಷ್ಟಿಯಿಂದ ಬಹಳ ಅಮೂಲ್ಯವೆನಿಸುತ್ತವೆ. ಎಲ್ಲರಿಗೂ ಪ್ರಪಂಚದ ಮೂಲೆ ಮೂಲೆಗಳನ್ನು ಸುತ್ತಿ ಬರುವುದು ಅಶಕ್ಯವಾಗಿರುವುದರಿಂದ ಸುತ್ತಿ ಬಂದವರ ಅನುಭವವನ್ನು ಓದಿಯಾದರೂ ಕಲ್ಪನಾ ಪ್ರವಾಸವನ್ನು ಕೈಗೊಳ್ಳಬಹುದು. ಅಥವಾ..... ಅರಿವಿನ ಉನ್ನತ ಸ್ತರಗಳನ್ನು ಏರಬಲ್ಲವರಾದರೆ, ` ` THE BEST JOURNEY IS THE INWARD JOURNEY’ಎನ್ನುವುದರ ಅರ್ಥವರಿತು ಬದುಕನ್ನು ಸಾರ್ಥಕಗೊಳಿಸಿಕೊಳ್ಳಬಹುದು.

Friday, November 12, 2010

ಮನದ ಅಂಗಳದಿ..........೧೭.ಮಕ್ಕಳ ದಿನಾಚರಣೆ

ನವೆಂಬರ್ ೨೦, ವಿಶ್ವ ಮಕ್ಕಳ ದಿನ. ನಮ್ಮ ಭಾರತದಲ್ಲಿ ಮಕ್ಕಳ ದಿನವನ್ನು ಪಂಡಿತ್ ಜವಹರಲಾಲ್ ನೆಹರೂರವರ ಜನ್ಮದಿನವಾದ ನವೆಂಬರ್೧೪ ರಂದು ಆಚರಿಸುತ್ತೇವೆ. ಮಕ್ಕಳ ಹಿತರಕ್ಷಣೆಗಾಗಿ, ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರವು ಅನೇಕ ಉಪಯುಕ್ತ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದೆ. ಅದಕ್ಕಾಗೇ ಇರುವ ಸಂಬಂಧಿತ ಇಲಾಖೆಗಳು ಅವುಗಳನ್ನು ಕಾರ್ಯರೂಪಗೊಳಿಸುವ ಪ್ರಯತ್ನದಲ್ಲಿಯೂ ಇವೆ. ಆದರೂ ಉತ್ತಮವಾದ ಫಲ ಗೋಚರಿಸುವಲ್ಲಿ ಎಲ್ಲೋ ವಿಫಲತೆಯನ್ನು ಕಾಣುತ್ತಿದ್ದೇವೆ ಎನಿಸುತ್ತದೆ. ಅದಕ್ಕೆ ಕಾರಣವೇನು?
ಮಾನವ ಸಂಕುಲದ ಆದಿಯಿಂದಲೂ ಮನುಷ್ಯ ತನ್ನ ಸಂತಾನದ ಪ್ರಗತಿಗಾಗಿ ಶ್ರಮಿಸಿರುವುದು ಸುಳ್ಳಲ್ಲ. ಎಲ್ಲಾ ಜೀವಿಗಳಲ್ಲಿಯೂ ಇದು ಮೂಲಭೂತವಾದ ಕ್ರಿಯೆಯಾಗಿದ್ದರೂ ಮನುಷ್ಯ ಅದನ್ನು ಮತ್ತೂ ವಿಸ್ತರಿಸಿಕೊಂಡು ತನ್ನ ಮುಂದಿನ ಪೀಳಿಗೆಗಾಗಿಯೇ ಸ್ಥಿರ, ಚರಾಸ್ತಿಗಳ ಸಂಗ್ರಹದಲ್ಲಿಯೇ ತನ್ನ ಜೀವಿತಾವಧಿಯನ್ನು ಕಳೆಯುತ್ತಿದ್ದಾನೆ. ತನ್ನ ಜೀವನ ಮಟ್ಟಕ್ಕಿಂತಾ ತನ್ನ ಮಕ್ಕಳದ್ದು ಉನ್ನತದ್ದಾಗಿರಬೇಕೆಂಬುದು ಅವನ ಹಂಬಲವಾಗಿದೆ. ಅದರೂ...
ಒಂದು ಕಾಲಕ್ಕೆ ಮಕ್ಕಳಾಗಿದ್ದ ನಾವು ಆ ಸಂದರ್ಭದಲ್ಲಿ ನಮ್ಮ ಅನುಭವಗಳನ್ನು, ಎಂದರೆ ಎದುರಿಸಿದ ಸಮಸ್ಯೆಗಳು, ಗೊಂದಲಗಳು, ಕಾತರಗಳನ್ನು ನಮ್ಮ ಮಕ್ಕಳಲ್ಲಿ ಗುರುತಿಸಿ ತಿಳಿದುಕೊಳ್ಳಲು ವಿಫಲರಾಗಿದ್ದೇವೆ, ಅಥವಾ ಅದನ್ನು ನಿರ್ಲಕ್ಷಿಸಿ ನಮ್ಮದೇ ನಿರೀಕ್ಷೆಗಳನ್ನು ಮಕ್ಕಳ ಮೇಲೆ ಹೇರುವುದಷ್ಟೇ ನಮ್ಮ ಪ್ರೀತಿ ಎಂದುಕೊಂಡಿದ್ದೇವೆ. ಅವರಿಗೆ ಬೇಕು-ಬೇಡಗಳನ್ನು ಪೂರೈಸುವುದೇ ನಮ್ಮ ಜವಾಬ್ಧಾರಿ ಎಂದು ಭಾವಿಸುತ್ತೇವೆ. ಆ ಬೇಕು-ಬೇಡಗಳು ಭೌತಿಕ ವಸ್ತುಗಳಿಗಷ್ಟೇ ಸೀಮಿತವಾಗಿದ್ದು ಅವರ ನಿಜವಾದ ಬೇಡಿಕೆ ಏನು ಎಂದು ಗುರುತಿಸುವ ಪ್ರಯತ್ನವನ್ನೇ ನಡೆಸುತ್ತಿಲ್ಲ. ನಮ್ಮ ಮಕ್ಕಳೊಡನೆ ಕುಳಿತು, ಅವರ ಮನದಾಳದ ಮಾತುಗಳನ್ನು ಆಲಿಸುವ ವ್ಯವಧಾನವನ್ನು ನಾವು ತೋರಿಸುತ್ತಿಲ್ಲ. ಎಷ್ಟೋ ಸಮಯ ಹಾಗೆ ಮಾತನಾಡುವ ಸಲಿಗೆಯನ್ನೂ ಅವರಿಗೆ ಕೊಟ್ಟಿರುವುದಿಲ್ಲ. ಅವರನ್ನು ನಮ್ಮ ದಾರಿಗೆ ಎಳೆಯುವ ಸಡಗರದಲ್ಲಿ ಅವರಂತೆ ಅವರಿರಲು ಅವಕಾಶವನ್ನೇ ನೀಡುತ್ತಿಲ್ಲ. ಈ ಸಂದರ್ಭಕ್ಕೆ ಹೊಂದುವಂತಹ ಒಂದು ‘ಹನಿ?ಯನ್ನು ಇಲ್ಲಿ ಉದಾಹರಿಸಬಹುದು.

‘ನನ್ನಂತೆ ನೀನಾಗಬೇಕೆಂಬ
ಹಟದಲ್ಲಿ
ನಿನ್ನಂತಿರಲು ಬಿಡಲಿಲ್ಲ,
ನಿನ್ನಂತೆಯೇ ನೀನಿರು
ಎನ್ನುವಷ್ಟರಲ್ಲಿ
ನೀನು ನೀನಾಗಿರಲಿಲ್ಲ!?

ಹೀಗೆ ಮಕ್ಕಳನ್ನು ಅತಂತ್ರರಾಗಿಸುವಲ್ಲಿ ಸಫಲರಾಗುತ್ತಿದ್ದೇವೆ. ಮಕ್ಕಳನ್ನು ಸ್ವಾವಲಂಬಿಗಳನ್ನಾಗಿಸುವುದೆಂದರೆ ಆರ್ಥಿಕವಾಗಿ ಸಬಲರನ್ನಾಗಿಸುವುದಷ್ಟೇ ನಮ್ಮ ಗುರಿ ಎಂದುಕೊಂಡಿದ್ದೇವೆ ಅಥವಾ ಅವರನ್ನು ದುಡಿಯುವ ಯಂತ್ರಗಳನ್ನಾಗಿ ಮಾಡುತ್ತಿದ್ದೇವೆ. ಮಗುವಿಗೆ ತನ್ನ ನಿಜವಾದ ಹವ್ಯಾಸ ಯಾವುದು ಎಂದು ತಿಳಿದುಕೊಳ್ಳಲು ಅವಕಾಶವನ್ನೇ ನೀಡದೇ ಎಳವೆಯಲ್ಲೇ ಶಾಲೆಗೆ ಹೋಗುವುದರ ಜೊತೆಗೇ ನೃತ್ಯ, ಸಂಗೀತ, ಕರಾಟೆ, ಈಜು....ಹೀಗೆ ನಾಲ್ಕಾರು ಕಡೆಗೆ ಅವರನ್ನು ಕಳುಹಿಸಿ ಅವರ ಬಾಲ್ಯವನ್ನೇ ಯಾಂತ್ರಿಕಗೊಳಿಸಿಬಿಡುತ್ತಿದ್ದೇವೆ. ನಿಜವಾದ ತನ್ನ ಆಸಕ್ತಿ ಯಾವ ಕಡೆಗಿದೆ ಎಂದು ತಿಳಿಯಲಾಗದೇ ಮಗು ಗೊಂದಲಗೊಳ್ಳುತ್ತದೆ. ಇದರ ಜೊತೆಗೇ ಮಗು ಕಲಿತದ್ದನ್ನೆಲ್ಲಾ ಸ್ಪರ್ಧೆಗೆ ಒಡ್ಡಿ ಅದರಲ್ಲಿ ಆತಂಕವನ್ನು ಸೃಷ್ಟಿಸುತ್ತಿದ್ದೇವೆ. ಎಷ್ಟೋ ವೇಳೆ ಗೆಲುವು ಮಗುವಿನಲ್ಲಿ ಮೇಲರಿಮೆಯನ್ನೂ (ಕ್ರಮೇಣ ಇದೇ ಅಹಂಕಾರವಾಗಿ ನೈಜ ಪ್ರಗತಿಗೇ ಅಡ್ಡವಾಗುತ್ತದೆ.) ಸೋಲು ಕೀಳರಿಮೆಯನ್ನೂ ಉಂಟುಮಾಡುತ್ತದೆ. ಮಗು ತನ್ನ ಸ್ವಾಭಾವಿಕ ರೀತಿಯಲ್ಲಿ ಬೆಳೆಯಲು, ಪ್ರಗತಿಹೊಂದಲು ಇದು ಅಡ್ಡಿಯಾಗುತ್ತದೆ. ಮಗುವಿಗೆ ಒಂದು ಉತ್ತಮ ಹವ್ಯಾಸ ಬಾಲ್ಯದಿಂದಲೇ ರೂಪುಗೊಳ್ಳದಿದ್ದರೆ ಮುಂದೆ ಒತ್ತಡಗಳ ನಿವಾರಣೆಗೆ ಮಾರ್ಗವಿಲ್ಲದೇ ಅದು ಗೊಂದಲದ ಗೂಡಾಗುವ ಸಂಭವವಿರುತ್ತದೆ.

ಜಗತ್ತಿನಪ್ರಸಿದ್ಧ ಆಧ್ಯಾತ್ಮಿಕ ಸಾಹಿತಿಯಾದ ಖಲೀಲ್ ಗಿಬ್ರಾನ್ ತಮ್ಮ ಮಹೋನ್ನತ ಕೃತಿಯಾದ ‘ಪ್ರವಾದಿ?(ಪ್ರೊಫೆಟ್)ಯಲ್ಲಿ ಮಕ್ಕಳ ಬಗ್ಗೆ ಹೀಗೆ ಹೇಳಿದ್ದಾರೆ.

‘ನಿಮ್ಮ ಮಕ್ಕಳು ನಿಮ್ಮ ಮಕ್ಕಳೇ ಅಲ್ಲ. ಅವರು ಜೀವನೋತ್ಕಂಟಿತ ಜೀವನದ ಬಾಲಕ, ಬಾಲಿಕೆಯಾಗಿದ್ದಾರೆ. ಅವರು ನಿಮ್ಮೊಳಗಿನಿಂದ ಬಂದಿರುವರಲ್ಲದೆ ನಿಮ್ಮಿಂದ ಬಂದಿರುವುದಿಲ್ಲ. ಅವರು ನಿಮ್ಮ ಬಳಿ ಇರುತ್ತಿದ್ದಾಗ್ಯೂ ನಿಮಗಾಗಿಯೇ ಇರುವುದಿಲ್ಲ. ಅವರಿಗೆ ನೀವು ನಿಮ್ಮ ಪ್ರೀತಿಯನ್ನೀಯಬಹುದು. ಆದರೆ ನಿಮ್ಮ ವಿಚಾರಗಳನ್ನಲ್ಲ. ಏಕೆಂದರೆ ಅವರಿಗೆ ತಮ್ಮವೇ ಆದ ವಿಚಾರಗಳಿರುತ್ತವೆ. ಅವರ ಮೈಗಾಗಿ ನೀವು ಮನೆ ಮಾಡಿಕೊಡಿ; ಆದರೆ ಆತ್ಮಕ್ಕಾಗಿ ಬೇಡ. ಏಕೆಂದರೆ ಅವರ ಆತ್ಮಗಳೆ ಮುಂಬರುವ ಮನೆಯಲ್ಲಿ ವಾಸಿಸುವವು. ಆ ಮನೆಗಳನ್ನು ನೀವು ಕಾಣಲಾರಿರಿ. ನಿಮ್ಮ ಕನಸುಗಳಲ್ಲಿ ಕೂಡ ಕಾಣಲಾರಿರಿ.
ಅವರಂತಾಗಲು ನೀವು ಹವಣಿಸಿರಿ; ಆದರೆ ನಿಮ್ಮಂತೆ ಅವರನ್ನು ಮಾಡಲು ಮಾತ್ರ ಹವಣಿಸಬೇಡಿ. ಏಕೆಂದರೆ ಜೀವನವು ಹಿಂದೆ ಹೋಗದು. ಮತ್ತು ನಿನ್ನೆಯೊಂದಿಗೆ ನಿಲ್ಲದು.
ನೀವು ಬಿಲ್ಲುಗಳು; ಅವುಗಳಿಂದ ಬಿಟ್ಟ ಜೀವಂತ ಬಾಣಗಳೇ ನಿಮ್ಮ ಮಗುಗಳು. ಆ ಬಿಲ್ಲುಗಾರನು ಅನಂತ ಪಥದ ಮೇಲಿನ ತನ್ನ ಗುರಿಯನ್ನು ಲಕ್ಷಿಸಿ ನಿಮ್ಮನ್ನು ತನ್ನ ಶಕ್ತಿಯಿಂದ ಬಗ್ಗಿಸಿ ತನ್ನ ಬಾಣಗಳು ಶೀಘ್ರ ವೇಗದಿಂದ ಹೋಗುವಂತೆ ಮಾಡುತ್ತಾನೆ. ಆ ಬಿಲ್ಲುಗಾರನು ತನ್ನ ಕೈಮುಟ್ಟ ಮಣಿಸುವ ನಿಮ್ಮ ಮಣಿತವು ನಿಮಗೆ ಆನಂದದಾಯಕವೆನಿಸಲಿ. ಆದರೆ ಚಿಮ್ಮಿ ಹೋಗುವ ಬಿಲ್ಲನ್ನು ಆತನು ಪ್ರೀತಿಸುವಂತೆ ಟ್ಟಿಮುಟ್ಟಾದ ಬಿಲ್ಲನ್ನೂ ಆತನು ಪ್ರೀತಿಸುವನು.?

ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ, ಪ್ರಗತಿಗೆ ಅವರೊಂದಿಗೆ ನಾವಿದ್ದು ಸಹಕರಿಸೋಣ. ಆದರೆ ನಮ್ಮ ದಾರಿಗೆ ಅವರನ್ನು ಎಳೆದು, ನಮ್ಮಲ್ಲಿರುವ ಋಣಾತ್ಮಕ ಅಂಶಗಳನ್ನೆಲ್ಲಾ ಅವರಲ್ಲಿಯೂ ತುಂಬಿ ಅವರನ್ನು ಪಥ ಭ್ರಷ್ಟರನ್ನಾಗಿಸುವುದು ಬೇಡ. ನಮ್ಮನ್ನು ಗಮನಿಸಿದಾಗ ಕೆಲವಾದರೂ ಮೌಲ್ಯಗಳನ್ನು ತಮ್ಮಲ್ಲಿ ಮೈಗೂಡಿಸಿಕೊಳ್ಳಲು ಅನುಕೂಲವಾಗುವಂತೆ ಹಿರಿಯರೆನಿಸಿಕೊಳ್ಳಲು ಇಚ್ಛಿಸುವ ನಾವು ಹಿರಿತನದಿಂದ ನಮ್ಮನ್ನು ನಾವು ತಿದ್ದಿಕೊಳ್ಳೋಣ. ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ ಇದನ್ನೇ ನಮ್ಮ ಕೊಡುಗೆ ಎಂದು ಭಾವಿಸಿ ಮಕ್ಕಳೊಂದಿಗೆ ನಾವೂ ಸಕ್ರಿಯವಾಗಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಿದ್ಧರಾಗೋಣ.

Saturday, November 6, 2010

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು
ದೀಪಾವಳಿಯ ಪ್ರಯುಕ್ತ ೨೦೦೧ರಲ್ಲಿ ಪ್ರಕಟವಾದ ನನ್ನ `ಗುಟುಕು' ಹನಿಗವನ ಸ೦ಕಲನದಲ್ಲಿಯ 'ಪ್ರಣತಿ ಹನಿ' ಗಳನ್ನು ನಿಮ್ಮ ಮು೦ದಿಡುತ್ತಿದ್ದೆನೆ.
ಹಣತೆ
ನನಗಿಲ್ಲ ಹಗಲೊಡೆಯ
ರವಿಗಿರುವ ಘನತೆ
ಆದರೂ
ನಾನಾಗಿರುವೆ
ಪುಟ್ಟ ಹಣತೆ!

ಬಹು-ಮಾನ
ಪ್ರಣತಿಗೆ ಬೇಕಿಲ್ಲ
ಯಾವುದೇ ಬಹುಮಾನ
ಪ್ರಶಸ್ತಿ
ಪ್ರೀತಿ ಅಭಿಮಾನಗಳೇ
ಬಹುದೊಡ್ಡ ಆಸ್ತಿ.

ನಿಖರ
ನಾನಲ್ಲ ದಿನಮಣಿಯ
ದಿವ್ಯ ಪ್ರಭೆಯಷ್ಟು ಪ್ರಖರ
ಆದರೂ
ನಾನಾಗಬಯಸುವೆ
ಸ್ಪಷ್ಟ ನಿಖರ.

ಅಲ್ಪ ಕಾರ್ಯ
ಅತುಲ ಬೈಜಿಕ ಶಕ್ತಿ
ಫಲಶ್ರುತಿಯೇ ಸೂರ್ಯ
ಅಲ್ಪ ಸ್ನೇಹವ ಹೀರಿ
ಬೆಳಗುವುದೆನ್ನ ಕಾರ್ಯ!

ವಿರೂಪ
ಸೋ೦ಕಲು ನನ್ನ ಕುಡಿ
ಬೆಳಗುವುದು ನ೦ದಾದೀಪ
ಸ್ಪರ್ಶಿಸಿದಾಕ್ಷಣವೇ ಸಿಡಿವ
ಸ್ಪೋಟಕವೇ ವಿರೂಪ.

ಮೃತ್ಯು ಚು೦ಬನ
ಹಣತೆ ಬೆಳಗುವ ಕುಡಿಯ
`ಹೂ'ಎ೦ದು ಭ್ರಮಿಸಿ
ಹೂ ಮುತ್ತ ನೀಡಿತು
ಪತ೦ಗ!

Thursday, November 4, 2010

ಮನದ ಅ೦ಗಳದಿ......... ೧೬- ಒಂದು ಸಾರ್ಥಕ ಸಂಜೆ

(ವರಕವಿ ಬೇಂದ್ರೆಯವರ ನೆನಪು)

ತಾನು ಹೋದ ಕಡೆಗೆಲ್ಲಾ ನನ್ನನ್ನೂ ಕರೆದುಕೊಂಡು ಹೋಗಿ ಸ್ಥಳ ಪರಿಚಯ ಮಾಡಿಕೊಡುತ್ತಿದ್ದರು ನನ್ನಕ್ಕ. ಹಾಗೆಯೇ ಅವರು ಧಾರವಾಡಕ್ಕೆ ಮೌಲ್ಯಮಾಪನಕಾರ್ಯಕ್ಕೆ ಹೋದಾಗ ನನ್ನನ್ನೂ ಕರೆದುಕೊಂಡು ಹೋದರು. (ಆಗ S.S.L.C. ಉತ್ತರ ಪತ್ರಿಕೆಗಳ ಬೇರೆ ಬೇರೆ ವಿಷಯಗಳ ಮೌಲ್ಯಮಾಪನಕಾರ್ಯ ಬೇರೆಬೇರೆ ಊರುಗಳಲ್ಲಿ ನಡೆಯುತ್ತಿತ್ತು) ಬೇರೆಬೇರೆ ಸ್ಥಳಗಳಿಂದ ಹೋದವರಿಗೆ ಉಳಿಯಲೂ ವ್ಯವಸ್ಥೆ ಮಾಡಿದ್ದರು. ನಮ್ಮ ಕ್ಯಾಂಪಸ್ ಮುಂದೇ ಸಾಧನಕೇರಿಯ ಬಸ್ ಹಾದು ಹೋಗುತ್ತಿತ್ತು. ಧಾರವಾಡಕ್ಕೆ ಹೋಗುತ್ತೇವೆಂದು ತಿಳಿದಾಗಲೇ ವರಕವಿ ಬೇಂದ್ರೆಯವರನ್ನು ನೋಡಬೇಕು ಎಂದುಕೊಂಡಿದ್ದ ನಮಗೆ ಆ ಬಸ್ ನೋಡಿದ ತಕ್ಷಣ ಸಾಧನಕೇರಿ ಕೈ ಬೀಸಿ ಕರೆದಂತಾಯ್ತು. ಯಾವಾಗ ಅಲ್ಲಿಗೆ ಹೋಗುತ್ತೇವೆಯೋ ಎನ್ನುವ ತವಕ . ಆದರೆ ಅಕ್ಕನಿಗೆ ಬಿಡುವೇ ಇಲ್ಲ.
ಒಂದು ದಿನ ಸಂಜೆ ನಾವು ಸಮೀಪದಲ್ಲೇ ನಡೆಯುತ್ತಿದ್ದ ಒಂದು ಸಂಗೀತ ಕಛೇರಿಗೆ ಹೋದೆವು. ಪಕ್ಕದಲ್ಲಿ ಕುಳಿತ ಮಹಿಳೆ, `ನೀವು ಮೈಸೂರಿನ ಕಡೆಯವರೇ?’ ಎಂದು ಪ್ರಶ್ನಿಸಿದರು. ಅಕ್ಕ `ಹೌದು’ ಎಂದರು. `ನಿಮಗೆ ಕರ್ನಾಟಕ ಸಂಗೀತ ಕೇಳಿ ರೂಢಿಯಾಗಿರುವುದರಿಂದ ಹಿಂದೂಸ್ಥಾನಿ ಕೇಳುವುದು ಸ್ವಲ್ಪ ಬೇರೆ ರೀತಿಯೇ ಎನಿಸಬಹುದು’. ಎಂದು ಮೆಲುದನಿಯಲ್ಲಿ ಮಾತಿಗಾರಂಭಿಸಿದರು. ವೇದಿಕೆಯ ಮೇಲೆ ಕುಳಿತು ಹಾಡುತ್ತಿದ್ದ ಗಾಯಕಿಗೆ ಹಿಂದೆಯೇ ಕುಳಿತು ಪ್ರೋತ್ಸಾಹ ಕೊಡುತ್ತಿದ್ದವರು ಅವರ ತಂದೆ ಎಂದು ಹೇಳಿದ ಅವರು, `ನಾನೂ ಚಿಕ್ಕವಳಿದ್ದಾಗ ನೃತ್ಯ ಮಾಡುತ್ತಿದ್ದೆ. ಆಗ ನಮ್ಮ ತಂದೆಯವರು ಕಾಲಿಗೆ ಗೆಜ್ಜೆ ಕಟ್ಟಿ ಆಶೀರ್ವದಿಸುತ್ತಿದ್ದರು. ಈಗ ಆ ಪ್ರೋತ್ಸಾಹ ಬರೀ ನೆನಪು ಮಾತ್ರ...’ಎಂದು ತಮ್ಮ ವಿಷಯವನ್ನೂ ಹೇಳಿದರು. ನಾವು ನಮಗೆ ಬೇಂದ್ರೆಯವರನ್ನು ನೋಡಬೇಕೆಂಬ ಹಂಬಲವನ್ನು ತಿಳಿಸಿದೆವು. ಬೇಂದ್ರೆಯವರು ಹಾಗೆ ಎಲ್ಲರನ್ನೂ ನೋಡಿ ಮಾತನಾಡಿಸುವುದಿಲ್ಲ. ನನಗೆ ಚೆನ್ನಾಗಿ ಪರಿಚಯವಿದ್ದಾರೆ. ನಾನು ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ. ನಿಮಗೆ ಯಾವಾಗ ಬಿಡುವಾಗುತ್ತದೆ ತಿಳಿಸಿ.? ಎಂದರು.

ಸಾರ್ವಜನಿಕ ರಜಾದಿನಗಳಲ್ಲಿ ಮೌಲ್ಯಮಾಪನ ಕಾರ್ಯ ಅರ್ಧದಿನ ಮಾತ್ರ ನಡೆಯುತ್ತಿತ್ತು. ಅಂಥಾ ಒಂದು ದಿನವನ್ನು ಹೇಳಿ ಅಕ್ಕ ವೇಳೆಯನ್ನು ಗೊತ್ತುಪಡಿಸಿಕೊಂಡರು. ಅವರು ಸಾಧನಕೇರಿಯ ಬಸ್ಸ್ಟಾಪಿನಲ್ಲಿ ತಮಗಾಗಿ ಕಾಯಬೇಕಾಗಿ ತಿಳಿಸಿದರು. ನಾವು ಹೊಸ ಹುಮ್ಮಸ್ಸಿನಿಂದ ಆ ದಿನಕ್ಕಾಗಿ ಕಾಯಲಾರಂಭಿಸಿದೆಡವು. ಆ ದಿನವೂ ಬಂದು ಸಾಧನಕೇರಿ ಸ್ಟಾಪಿನಲ್ಲಿ ಇಳಿದು ಆಕೆಗಾಗಿ ಕಾದದ್ದೇ ಆಯ್ತು. ಸಂಜೆಯಾದರೂ ಅವರು ಬರಲೇ ಇಲ್ಲ. ಏನು ತೊಂದರೆಯಾಯಿತೋ ಏನೋ ಎನಿಸಿದರೂ ಅಲ್ಲಿಯವರೆಗೂ ಹೋಗಿ ಬೇಂದ್ರೆಯವರನ್ನು ನೋಡದೇ ಬರಲು ಮನಸ್ಸು ಒಪ್ಪಲಿಲ್ಲ.

ಅಂಥಾ ಸುಪ್ರಸಿದ್ಧ ಕವಿಯ ಮನೆಯನ್ನು ಹುಡುಕುವುದು ಕಷ್ಟವೇನೂ ಆಗಲಿಲ್ಲ. `ಶ್ರೀಮಾತಾ’ ಬಾಗಿಲ ಬಳಿ ನಿಂತು ಅಂಜುತ್ತಾ, ಅಳುಕುತ್ತಾ ಕರೆಗಂಟೆಯನ್ನು ಒತ್ತಿದಾಗ ನಮ್ಮ ಎದೆಬಡಿತ ನಮಗೇ ಕೇಳುತ್ತಿತ್ತು. ಸ್ವತ: ಬೇಂದ್ರೆಯವರೇ ಬಾಗಿಲು ತೆರೆದಾಗ ನಮಗಾದ ಸಂತಸ ಅಷ್ಟಿಷ್ಟಲ್ಲ. ಆದರೆ ಏನು ಮಾತನಾಡಬೇಕೆಂದೇ ತಿಳಿಯಲಿಲ್ಲ. ಬೇಂದ್ರೆಯವರೇ ನಮಗೆ ಒಳಗೆ ಬಂದು ಕುಳಿತುಕೊಳ್ಳಲು ಹೇಳಿ, `ಎಲ್ಲಿಂದ ಬಂದಿರಿ?’ ಎಂದು ವಿಚಾರಿಸಿಕೊಂಡರು. ನಾವು ವಿಷಯ ತಿಳಿಸಿದಾಗ, `ಎಲ್ರಿಗೂ ರಜ ಸಿಕ್ಕಾಗ ಸಿನೇಮಾ, ಪಿಕ್ನಿಕ್ ಅಂತ ಹೋಗ್ತಾರೆ. ನೀವು ಈ ಮುದುಕನ್ನ ನೋಡಕ್ಕೆ ಬಂದಿದೀರಲ್ಲ’ ಎಂದು ನಗುತ್ತಾ ಹೇಳಿದರು. (ಕ್ಷಮಿಸಿ, ಅವರದ್ದೇ ಮಾತಿನ ಧಾಟಿಯಲ್ಲಿ ಬರೆಯಲು ಆಗುತ್ತಿಲ್ಲ. ಸಾರಾಂಶ ತಿಳಿಸುತ್ತೇನೆ.) ನಂತರ ನಮ್ಮ ತಂದೆ, ತಾಯಿ, ಊರಿನಬಗ್ಗೆ ಎಲ್ಲಾ ವಿಚಾರಿಸಿಕೊಂಡರು. ಮಾತನಾಡುತ್ತಾ ನಮಗೂ ಮೊದಲಿನ ಅಂಜಿಕೆ ಕಮ್ಮಿಯಾಯ್ತು. `ನಮ್ಮ ತಂದೆಗೆ ಸಂತ, ಭೂಗೋಳ, ಜ್ಯೋತಿಷ್ಯಶಾಸ್ತ್ರದಲ್ಲಿ ವಿಶೇಷ ಆಸಕ್ತಿ ಮತ್ತು ಪರಿಣತಿ ಇತ್ತು. ಇಂಗ್ಲಿಷ್ ವ್ಯಾಕರಣವನ್ನು ಚೆನ್ನಾಗಿ ತಿಳಿದಿದ್ದರು.’ ಎಂದು ಹೇಳಿದೆವು. ನಮ್ಮ ಹೆಸರನ್ನು ಕೇಳಿದರು. ನಮ್ಮಕ್ಕ `ಸೀತ’ ಎಂದರು. ನಾನು `ಪ್ರಭಾ’ ಎಂದೆ. `ನಿಮ್ಮ ಪೂರ್ತಿ ಹೆಸರು ಹೇಳಿ. ಇಷ್ಟೆಲ್ಲಾ ತಿಳೀದುಕೊಂಡಿರುವ ನಿಮ್ಮ ತಂದೆ ನಿಮಗೆ ಇಷ್ಟು ಚಿಕ್ಕ ಹೆಸರು ಇಟ್ಟಿರಲಾರರು.’ ಎಂದರು. ಆಗ ನಮ್ಮ ಪೂರ್ತಿ ಹೆಸರುಗಳಾದ `ಸೀತಾಲಕ್ಷ್ಮಿ’ ಮತ್ತು `ಪ್ರಭಾಮಣಿ’ ಗಳನ್ನು ಹೇಳಿದೆವು.

`ಹಿಂದೆ ಎರಡು ಹೆಸರುಗಳನ್ನು ಏಕೆ ಇಡ್ತಿದ್ದರು ಎಂದರೆ ಒಂದು ಹೆಸರಿನಿಂದ ಒಳ್ಳೆಯದು ಆಗದಿದ್ದರೆ ಮತ್ತೊಂದರಿಂದಲಾದರೂ ಒಳ್ಳೆಯದಾಗಲಿ ಎಂದು’ ಎಂಬ ಕಾರಣವನ್ನು ತಿಳಿಸಿದರು. ಅದುವರೆಗೂ ಹ್ರಸ್ವನಾಮದ ಮೋಹದಲ್ಲಿದ್ದ ನಾನು ನಂತರ ಪೂರ್ಣ ಹೆಸರನ್ನು ಹೇಳಲಾರಂಭಿಸಿದೆ. ಈಗಂತೂ ನನ್ನ ಹೆಸರಿನ ಜೊತೆಗೆ ಅಷ್ಟೇ ಅಕ್ಷರಗಳ `ಇವರ’ ಹೆಸರನ್ನೂ ಸೇರಿಸಿಕೊಂಡು ದೀರ್ಘನಾಮಳಾಗಿದ್ದೇನೆ. ಜೀವಶಾಸ್ತ್ರದ ಬೈ ನಾಮಿಯಲ್ ನಾಮಿಂಕ್ಲೇಚರ್ನಂತೆ! (ದ್ವಿನಾಮ ನಾಮಕರಣ!)

ಸಾಹಿತ್ಯದ ಬಗ್ಗೆ ಯಾವುದೇ ಮಾತನಾಡುವುದೂ ಬೇಡ. ಅವರನ್ನು ನೋಡಿ ಬಂದರಷ್ಟೇ ಸಾಕು ಎಂದು ಮೊದಲೇ ತೀರ್ಮಾನಿಸಿಕೊಂಡು ಹೋಗಿದ್ದರೂ ಅದು ಹೇಗೋ ಮಾತು ಸಾಹಿತ್ಯದ ಕಡೆಗೇ ಹೊರಳಿತು. ಬೇಂದ್ರೆಯವರು, `ನನ್ನ ಸಾಹಿತ್ಯ ಎಂದರೆ ಕಾಸಾರದಲ್ಲಿ ಈಜಾಡಿದಂತೆ. ಅವರ ಕೃತಿಗಳನ್ನು ಓದುವುದು ಎಂದರೆ ಪರ್ವತವನ್ನು ಏರಿದಂತೆ. ಯಾವುದು ಹೆಚ್ಚು ಸಂತೋಷ ನೀಡುತ್ತದೆ ನೀವೇ ಹೇಳಿ’ ಎಂದರು. ಅದನ್ನು ಹೇಳುವಷ್ಟು ನಾವು ಪ್ರಬುದ್ಧರಾಗಿರಲಿಲ್ಲ. ಆದರೂ ಎರಡಕ್ಕೂ ತಮ್ಮದೇ ಆದ ಘನತೆ, ಆನಂದ ಇದೆ ಎಂದುಕೊಂಡೆವು. ಅಷ್ಟರಲ್ಲಿ ಜೋರಾಗಿ ಮಳೆ ಬೀಳಲಾರಂಭಿಸಿತು. ಒಳಗೆ ವರಾಂಡದಲ್ಲಿ ಕುಳಿತಿದ್ದ ನಮಗೂ ಇರಚಲು ಹೊಡೆಯುತ್ತಿತ್ತು. ನಮ್ಮನ್ನು ಒಳ ಮನೆಗೆ ಕರೆದುಕೊಂಡು ಹೋದರು.

`ನನ್ನ ನೋಡಕ್ಕೆ ದೂರದ ಊರಿನಿಂದ ಇಬ್ಬರು ಹೆಣ್ಣುಮಕ್ಕಳು ಬಂದಾಗ ರಂಬೆ, ಊರ್ವಶಿ ನರ್ತನ ಮಾಡ್ದಂಗೆ ಮಳೆ ಬರ್ತಿತ್ತು ಅಂತ ಇನ್ನು ಮುಂದ ಮಳೆ ಬಂದಾಗಲೆಲ್ಲಾ ನಿಮ್ಮ ನೆನಪು ಮಾಡ್ಕೋತೀನಿ’, ಎಂದರು. ನಮಗೆ ಒಂದು ಡಬ್ಬಿಯಿಂದ ಸಕ್ಕರೆ ತೆಗೆದು ಕೊಟ್ಟು ತಿನ್ನಲು ಹೇಳಿದರು. ತಮಗೆ ಪ್ರಿಯರಾದವರಿಗೆ ಮಾತ್ರ ಸಕ್ಕರೆ ತಿನ್ನಲು ಕೊಡ್ತಾರೆ ಎಂದು ಕೇಳಿ ತಿಳಿದಿದ್ದ ನಮಗೆ ಬಹಳ ಸಂತೋಷವಾಯ್ತು. ಅವರು ಕುಳಿತಿದ್ದಾಗ ಅವರ ಕಾಲ ಬಳಿಯೇ ಸುಳಿದಾಡುತ್ತಿದ್ದ ಬೆಕ್ಕನ್ನು ತೋರಿಸಿ ಅದು ತಮ್ಮ ಪತ್ನಿಯ ಮನೆಯಿಂದ ತಂದ ಸಂತತಿ ಎಂದು ತಿಳಿಸಿದರು. ಒಂದು ಪುಸ್ತಕ ಕೊಟ್ಟು ಅದರಲ್ಲಿ ನಮ್ಮ ಪೂರ್ಣ ವಿಳಾಸ ಬರೆಯಲು ತಿಳಿಸಿದರು. ಅಲ್ಲಿದ್ದ ಬ್ರಹ್ಮ ಚೈತನ್ಯರ ಫೋಟೋ ನೋಡಿ ನಮ್ಮ ತಂದೆಯವರೂ ಅವರ ಆರಾಧಕರು ಎಂದು ಹೇಳಿದಾಗ ಅವರಿಗೆ ತುಂಬಾ ಸಂತೋಷವಾಯಿತು.

ಸಂಜೆ ಸರಿದು ಇರುಳು ಪಸರಿಸಲಾರಂಭಿಸಿತು. ಒಲ್ಲದ ಮನಸ್ಸಿನಿಂದಲೇ ನಾವು ಹೊರಡಬೇಕಾಯ್ತು. ಇನ್ನೂ ಮಳೆ ಹನಿಯುತ್ತಿದ್ದುದರಿಂದ ನಮ್ಮನ್ನು ಬಸ್ಸ್ಟಾಪ್ವರಗೆ ಛತ್ರಿ ಹಿಡಿದು ಕಳುಹಿಸಿ ಬರಲು ತಮ್ಮ ಮಗನಿಗೆ ಹೇಳಿದರು. ನಾವು ಗಾಭರಿಯಿಂದ ಬೇಡವೆಂದು ತಿಳಿಸಿ ಬೀಳ್ಕೊಂಡು ಬಂದೆವು. ಆ ಒಂದು ಸಂಜೆ ಎಂದಿಗೂ ಮರೆಯಲಾಗದ ಸಂಜೆಯಾಗಿದೆ.
ಅದೇ ವರ್ಷ ದೀಪಾವಳಿಯ ದಿನವೇ ನಮಗೆ ಬೇಂದ್ರೆಯವರು ನಿಧನರಾದ ಸುದ್ಧಿ ತಿಳಿಯಿತು. ಆದಿನ ನಮಗೆ ಹಬ್ಬದಂತೆ ಕಾಣಲಿಲ್ಲ. ನನ್ನಕ್ಕ ಬೇಂದ್ರೆಯವರ ನೆನಪಿನಲ್ಲಿ ಅತ್ತೂ ಅತ್ತೂ ಸಾಕಾದರು. ನಾನೂ ಮೂಕವಾಗಿ ರೋಧಿಸುತ್ತಿದ್ದೆ. ಎಲ್ಲರ ಮನೆಗಳಲ್ಲೂ ದೀಪಗಳು ಬೆಳಗಬೇಕಾದ ದಿನ ಸಾಹಿತ್ಯಕ್ಷೇತ್ರವನ್ನೇ ತನ್ನ ದಿವ್ಯಪ್ರಭೆಯಿಂದ ಬೆಳಗಿದ ಒಂದು ಮಹಾನ್ ಜ್ಯೋತಿ ನಂದಿಹೋಗಿತ್ತು. ಆದರೆ ಆ ಜ್ಯೋತಿ ನೀಡಿದ ಬೆಳಕು ಚಿರನೂತನವಾಗಿದೆ. ಚಿರಸ್ಥಾಯಿಯಾಗಿದೆ.

Saturday, October 30, 2010

ಮನದ ಅ೦ಗಳದಿ.................೧೫.`ಅನ್ನ'

ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯೂ ಬದುಕುಳಿಯಲು ಬೇಕಾದ ಪ್ರಾಥಮಿಕ ಅಗತ್ಯಗಳಲ್ಲಿ ’ಅನ್ನ’ ಎಂದರೆ ಆಹಾರವೂ ಒಂದು. ಸಾಮಾನ್ಯವಾಗಿ ಸಸ್ಯಗಳಾದರೆ ಪ್ರಕೃತಿಯಲ್ಲಿನ ಅಜೈವಿಕಗಳನ್ನೇ ಬಳಸಿಕೊಂಡು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ. ಸಸ್ಯಗಳನ್ನೋ ಅಥವಾ ತಮಗಿಂತಾ ದುರ್ಬಲ ಪ್ರಾಣಿಗಳನ್ನೋ ಅವಲಂಭಿಸಬೇಕಾದದ್ದು ಪ್ರಾಣಿಜಗತ್ತಿನ ಅನಿವಾರ್ಯವಾಗಿದೆ. ಎಷ್ಟೋಸಾರಿ ನಾವೂ ಸಸ್ಯಗಳಂತೆಯೇ ಸ್ವಪರಿಪೋಷಕಗಳಾಗಿದ್ದರೆ ಆಹಾರಕ್ಕಾಗಿ ಇತರ ಜೀವಿಗಳನ್ನು ಹಿಂಸಿಸುವುದು ತಪ್ಪುತ್ತಿತ್ತಲ್ಲಾ ಎನಿಸುವುದೂ ಇದೆ. ಸುಪ್ರಸಿದ್ಧ ಸಾಹಿತಿಯಾದ ಖಲೀಲ್ ಗಿಬ್ರಾನ್ ಅವರ ‘ಪ್ರವಾದಿ’ಯಲ್ಲಿ ‘ಮಹಾ ಪ್ರಸ್ಥಾನ’ಕ್ಕೆ ಹೊರಟ ಪ್ರವಾದಿಯಾದ ಆಲ್ ಮುಸ್ತಾಫಾನನ್ನು ಆರ್ಸಿಲಿಸ್ ಜನಗಳು ಜನನ-ಮರಣದ ನಡುವಿನ ಈ ಜೀವನದ ದರ್ಶನದ ಬಗ್ಗೆ ನಿನ್ನ ಅನುಭವವನ್ನುನಮಗೆ ತಿಳಿಸು ಎಂದು ಕೇಳುತ್ತಾರೆ......
‘ಅನ್ನಪಾನ’ದ ಬಗ್ಗೆ ಹೇಳಿ ಎಂದು ಊಟದ ಮನೆಯನ್ನು ಇಟ್ಟಂಥ ಒಬ್ಬ ವೃದ್ದ ಕೇಳಿದಾಗ ಹೀಗೆ ಹೇಳುತ್ತಾನೆ,
‘ವಾಯು ಜೀವಿಲತೆಯಂತೆ ನಿಮಗೂ ಭೂಗಂಧವನ್ನೀಂಟಿ ಮತ್ತು ಬೆಳಕ ಕದಿರುಗಳನ್ನು ಸೇವಿಸಿ ಬದುಕ ಬರುವಂತಿದ್ದರೆ ಎಷ್ಟು ಚೆನ್ನಾಗುತ್ತಿತ್ತು.
ಆದರೆ ತಿನ್ನಲು ಹಿಂಸೆ ಮಾಡುವ ಹೊರತು ಮತ್ತು ಕುಡಿಯಲು ಎಳೆಗರುವನ್ನು ತಾಯ ಮೊಲೆ ಬಿಡಿಸಿ ಹಿಂಡಿಕೊಳ್ಳುವ ಹೊರತು ಗತ್ಯಂತರವಿಲ್ಲ. ಆದುದರಿಂದ ನಿಮ್ಮ ಅನ್ನಪಾನಗಳು ಯಜ್ಞಾರ್ಥವಾಗಿ ಆಗಲಿ.
ನಿಮ್ಮ ಅಡುಗೆ ಮನೆ ಯಜ್ಞವೇದಿಕೆಯಾಗಲಿ. ಗಿರಿವನಗಳ ಶುದ್ಧ ಹಾಗೂ ನಿಷ್ಪಾಪ ಪ್ರಾಣಿಗಳ ಹವನವು ಮಾನವನಲ್ಲಿಯ ಇನ್ನೂ ಹೆಚ್ಚಿನ ಶುದ್ಧ ಮತ್ತು ಹೆಚ್ಚಿನ ನಿಷ್ಪಾಪ ತತ್ವದ ಬಗ್ಗೆ ಮಾತ್ರ ಹವನಿಸಲಿ.....
ಒಂದು ಹಣ್ಣನ್ನು ನೀವು ಬಾಯಿಯಲ್ಲಿ ಕಚ್ಚಿ ರಸ ಹೀರುತ್ತಿರುವಾಗ ನಿಮ್ಮ ಮನದಲ್ಲಿಯೇ ಅದಕ್ಕೆ ಹೀಗೆನ್ನಿರಿ;
ನಿನ್ನ ಬೀಜವು ನನ್ನ ದೇಹದಲ್ಲಿ ಜೀವಿಸುವುದು,
ನಿನ್ನ ನಾಳಿನ ಮೊಗ್ಗುಗಳು ನನ್ನ ಹೃದಯದಲ್ಲಿ ಅರಳುವುವು.
ನಿನ್ನ ಸುಗಂಧವು ನನ್ನ ಉಸಿರಾಗುವುದು,
ಹಾಗೂ ಎಲ್ಲ ಋತುಗಳಲ್ಲಿಯೂ ನಾವಿಬ್ಬರೂ ಕೂಡಿಯೇ ಆನಂದಿಸುವೆವು........
ಶರತ್ಕಾಲದಲ್ಲಿ ನಿಮ್ಮ ದ್ರಾಕ್ಷಾವನದಿಂದ ದ್ರಾಕ್ಷಿಹಣ್ಣುಗಳನ್ನು ಮಧುಚಕ್ರದಲ್ಲಿ ಹಾಕಿ ಹಿಂಡಬೇಕಾದಾಗ ನಿಮ್ಮ ಮನದಲ್ಲಿಯೇ ಅದಕ್ಕೆ ಹೀಗೆನ್ನಿರಿ;
ನಾನೂ ಒಂದು ದ್ರಾಕ್ಷಾವನವೇ, ನನ್ನ ಫಲಗಳೂ ಮಧುಚಕ್ರಕ್ಕಾಗಿ ಶೇಕರಿಸಲ್ಪಡುವುವು. ಹೊಸ ಮಧುವಿನಂತೆ ನಾನೂ ಚಿರಂತನ ಪಾತ್ರೆಗಳಲ್ಲಿ ಇಡಲ್ಪಡುವೆನು. ಛಳಿಗಾಲದಲ್ಲಿ ಮಧುಪಾತ್ರೆಯನ್ನು ಬಗ್ಗಿಸಿ ನೀವು ಮಧುವನ್ನುತುಂಬಿಕೊಳ್ಳುತ್ತಿರುವಾಗ ಪ್ರತಿಯೊಂದು ಬಟ್ಟಲು ಮಧುವಿಗೂ ನಿಮ್ಮ ಹೃದಯದಲ್ಲಿ ಒಂದೊಂದು ಹಾಡು ಇರಲಿ. ಆ ಹಾಡಿನಲ್ಲಿ ಶಿಶಿರ ಋತುವಿನ ದಿನಗಳ, ದ್ರಾಕ್ಷಾವನದ ಹಾಗೂ ದ್ರಾಕ್ಷಾರಸ ಚಕ್ರದ ನೆನಹು ನಿನದಿಸುತ್ತಿರಲಿ.’
ಮಾನವರಾದ ನಾವೂ ಇತರ ಜೈವಿಕ ಅಜೈವಿಕಗಳಂತೆಯೇ ಪ್ರಕೃತಿಯ ಒಂದು ಅಂಶವಾಗಿದ್ದೇವೆ. ಆದರೆ ಅದನ್ನು ಮರೆತು ಪ್ರಕೃತಿಯಲ್ಲಿರುವ ಎಲ್ಲವೂ ನಮಗಾಗೇ ಸೃಷ್ಟಿಸಲ್ಪಟ್ಟಿದ್ದು ಎಂಬ ಧೋರಣೆಯಲ್ಲಿ ನಮ್ಮ ಸಹ ಅಂಶಗಳ ಮೇಲೇ ದುರಾಕ್ರಮಣ ನಡೆಸುತ್ತಿದ್ದೇವೆ. ವಿಶೇಷವಾಗಿ ‘ಆಹಾರ’ಕ್ಕಾಗಿ ಎನ್ನುವುದಕ್ಕಿಂತ ಹೆಚ್ಚಾಗಿ ‘ಬಾಯಿಚಪಲ’ಕ್ಕಾಗಿ ಇತರ ಜೀವಿಗಳನ್ನು ನಿಷ್ಕರುಣೆಯಿಂದ, ನಿರ್ದಾಕ್ಷಿಣ್ಯವಾಗಿ, ನಿರ್ನಾಮಗೈಯುತ್ತಿದ್ದೇವೆ. ಒಮ್ಮೆ ನೆನಪುಮಾಡಿಕೊಂಡರೆ ನಮ್ಮ ಹಿರಿಯರು ಪ್ರಕೃತಿಯ ಬಗ್ಗೆ ಎಂಥಾ ಗೌರವವನ್ನು ಹೊಂದಿದ್ದರು ಎನ್ನುವುದು ಅರ್ಥವಾಗುತ್ತದೆ. ಧಾನ್ಯಗಳನ್ನು ಕೊಡುವ ಸಸ್ಯಗಳನ್ನು, ಹಣ್ಣುಕೊಡುವ ಮರಗಳನ್ನು, ಹಾಲುಕೊಡುವ ಗೋವನ್ನು...ಎಲ್ಲವನ್ನೂ ಪೂಜಿಸಿ ತಮ್ಮ ಕೃತಜ್ಞತೆಯನ್ನು ತೋರಿಸುತ್ತಿದ್ದರು. ಈಗ ಮರಗಳನ್ನು ಅನಿಯಂತ್ರಿತವಾಗಿ ಉರುಳಿಸುತ್ತಿದ್ದೇವೆ, ಗೋವನ್ನು ಹಾಲುಕೊಡುವ ಯಂತ್ರವಾಗಿಸಿಕೊಂಡು ಸಾಲದು ಎಂಬಂತೆ ಅದೇ ಅನಿವಾರ್ಯ ಆಹಾರವೆನ್ನುವಂತೆ ಬಿಂಬಿಸಹೊರಟಿದ್ದೇವೆ! ‘ರುಚಿ’ಯ ಬೆನ್ನು ಹಿಡಿದಿರುವ ನಾವು ಮನುಷ್ಯ ಮನುಷ್ಯನನ್ನೇತಿನ್ನುವ ಮಟ್ಟವನ್ನೂ ತಲುಪುವ ಕಾಲವೇನೂ ದೂರವಿಲ್ಲವೆನಿಸುತ್ತದೆ. ಈಗ ಪರೋಕ್ಷವಾಗಿ ಮತ್ತೊಬ್ಬರ ಅನ್ನವನ್ನು ಕಸಿದು ತಿನ್ನುವುದು ನಡೆಯುತ್ತಲೇ ಇದೆ.
‘ಅನ್ನವನ್ನು ಉಣ್ಣುವಾಗ ಕೇಳ್, ಅದನ್ನು ಬೇಯಿಸಿದ ನೀರು ನಿನ್ನ ಶ್ರಮದ ಬೆವರೊ ಅಥವಾ ಅನ್ಯರ ಕಣ್ಣೀರೊ?’
ಈ ಸೂಕ್ತಿಯನ್ನು ಗಮನಿಸಿದಾಗ ಇದು ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲರೂ ತಮ್ಮನ್ನು ತಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಎನಿಸುತ್ತದೆ. ತನ್ನ ಪ್ರಾಮಾಣಿಕ ದುಡಿಮೆಯಿಂದ ಗಳಿಸಿದ ‘ಅನ್ನ’ಕ್ಕಿರುವ ಮೌಲ್ಯ ಅಪಾರವಾದುದು. ಹಿಂದಿನ ಕೆಲವು ವ್ಯಕ್ತಿಗಳು ಪರಾನ್ನ ಭೋಜನವನ್ನು ಸೇವಿಸದೇ ಇರುತ್ತಿದ್ದುದಕ್ಕೆ ಇದೂ ಒಂದು ಕಾರಣವಾಗಿರಲೂ ಬಹುದು.
‘ಅನ್ನ ಪರಬ್ರಹ್ಮ ಸ್ವರೂಪ’ ಎಂದು ನಮ್ಮ ತಂದೆ ಹೇಳುತ್ತಿದ್ದರು. ‘ತುತ್ತು ಅನ್ನ ತೂಕ ಕೆಡಿಸಿತು’ ಎಂದು ನಮ್ಮ ಅವಿಭಕ್ತ ಕುಟುಂಬದ ಸದಸ್ಯರಾದ ಸೋದರತ್ತೆ ಪದೇಪದೇ ಹೇಳುತ್ತಿದ್ದರು. ಆಗ ನನಗೆ ಆ ಮಾತುಗಳ ಅಂತರಾರ್ಥದ ಅರಿವಾಗುತ್ತಲಿರಲಿಲ್ಲ. ಅನಗತ್ಯವಾಗಿ ಮತ್ತೊಬ್ಬರ ಮನೆಗೆ ಹೋಗಿ ತೊಂದರೆ ಕೊಡಬಾರದು ಎಂದಷ್ಟೇ ತಿಳಿದಿದ್ದೆ. ಪ್ರತಿಯೊಂದು ಜೀವಿಗೂ ತನ್ನದೇ ಆದ ಪಥವಿದೆ. ಅದು ಪ್ರಕೃತಿಯ ನಿಯಮದಂತೆ ತನ್ನ ಪಾಲಿನ ಆಹಾರವನ್ನು ಸೇವಿಸಿಕೊಂಡು ತನ್ನ ಪಾಡಿಗೆ ತಾನಿರುತ್ತದೆ. ಅದಕ್ಕೇ ಇರಬಹುದು, ‘ಹುಲಿ ಹುಲ್ಲು ತಿನ್ನಲ್ಲ’, ಎನ್ನುತ್ತಾರೆ. ಆಹಾರ ಸರಪಳಿಯಂತೆ ಒಂದು ಜೀವಿಯನ್ನು ಮತ್ತೊಂದು ತಿಂದು ಬದುಕುತ್ತಿದ್ದರೂ ಪ್ರಕೃತ್ತಿ ತನ್ನ ಸಮತೋಲನವನ್ನು ತಾನು ಕಾಯ್ದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಮಾನವರಾದ ನಾವು ನಮ್ಮ ಪಥದಲ್ಲಿರುವ ಆಹಾರ ಕ್ರಮವನ್ನು ಮೀರಿ ಇತರ ಎಲ್ಲಾ ಜೀವಿಗಳ ಪಥಗಳಿಗೂ ಅತಿಕ್ರಮಣ ಪ್ರವೇಶ ಮಾಡಿ ನಮ್ಮ ಚಪಲ ಹಾಗೂ ವೈಭೋಗಕ್ಕಾಗಿ ಅವುಗಳನ್ನು ನಿರ್ನಾಮ ಮಾಡುತ್ತಿದ್ದೇವೆ. ಈಗಿನ ಪರಿಸ್ಥಿತಿಯಲ್ಲಿ ‘ಮಾನವರಾದ ನಾವು’ ಎನ್ನುವುದನ್ನು ಒತ್ತಿ ಹೇಳಬೇಕಿದೆ. ಏಕೆಂದರೆ ‘ಮಾನವತ್ವ ಇನ್ನೂ ನಮ್ಮಲ್ಲಿ ಉಳಿದಿದೆಯೇ?’ ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುವಂತಾಗಿದೆ.
ಅನ್ನವನು ಇಕ್ಕುವುದು, ನನ್ನಿಯನು ನುಡಿಯುವುದು
ತನ್ನಂತೆ ಪರರ ಬಗೆದೊಡೆ ಕೈಲಾಸ
ಬಿನ್ನಾಣವಕ್ಕು ಸರ್ವಜ್ಞ.
ಸರ್ವಜ್ಞರ ಈ ವಚನ ಎಷ್ಟೊಂದು ಅರ್ಥಪೂರ್ಣವಾಗಿದೆ. ಹೃದಯ ಪೂರ್ವಕವಾಗಿ ಕರೆದು ಆದರಿಸಿ ಉಣ್ಣಲಿಟ್ಟಾಗ ಆ ಆತಿಥ್ಯ ಸ್ವೀಕಾರ ಯೋಗ್ಯವಾಗಿರುತ್ತದೆ. ಆದರೆ ಒತ್ತಾಯದಿಂದಲೋ, ಅನಿವಾರ್ಯವಾಗಿಯೋ ನೊಂದುಕೊಂಡು ಊಟವಿಕ್ಕುವ ಸ್ಥಿತಿಯನ್ನು ಉಂಟುಮಾಡಬಾರದಲ್ಲವೆ?

Thursday, October 28, 2010

ಮನದ ಅ೦ಗಳದಿ........೧೪.ಓದು

ದಯಮಾಡಿ ಇದರ ಮೇಲೆ ಡಬಲ್ ಕ್ಲಿಕ್ ಮಾಡಿ ಓದಿರಿ.

Saturday, October 23, 2010

ಲಸನ್ ಮಂದಹಾಸ.....

`............ಮಂದಹಾಸ ಪ್ರಭಾ ವಕ್ರ ತುಂಡ
ಚಲತ್ ಚಂಚಲ...................................'
ನಿದ್ದೆಯ ಮಂಪರಿನಲ್ಲೇ ದಿನದ ಪ್ರಾರಂಭಕ್ಕಾಗಿ ಮನಸ್ಸನ್ನು ಅಣಿಗೊಳಿಸಿಕೊಳ್ಳುವ ವೇಳೆಯಲ್ಲಿ ಆಕಾಶವಾಣಿಯಿ೦ದ ತೇಲಿಬರುತ್ತಿದ್ದ ಈ ಸಾಲುಗಳು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿದ್ದವು. ಬೆಳಗಾದದ್ದನ್ನು ಸಾರುತ್ತಿದ್ದುದೇ ಅಮ್ಮ ಪ್ರತಿದಿನ ತಪ್ಪದಂತೆ ಹಾಕುತ್ತಿದ್ದ ಆಕಾಶವಾಣಿಯ ಗೀತಾರಾಧನಾ ಕಾರ್ಯಕ್ರಮ. ಅಮ್ಮ ವೇಳೆ ತಿಳಿಯಲು ಗಡಿಯಾರ ನೋಡುತ್ತಿದ್ದುದೇ ಅಪರೂಪ. `ಆಗಲೇ ಚಿಂತನ ಬರ್‍ತಿದೆ ಇನ್ನೂ ಎಲ್ಲರಿಗೂ ಕಾಫಿ ಆಗಿಲ್ಲ', 'ವಾರ್ತೆ ಬರೋ ಹೊತ್ತಿಗಾದರೂ ಹಾಲು ಕರೆದಿರಬೇಕು', ಎಂದು ಸ್ವಗತ ಸಂಭಾಷಣೆಗಳಲ್ಲಿ ಕಾರ್ಯಪ್ರವೃತ್ತರಾಗುತ್ತಿದ್ದರು. ಈ ಶಾರದಾ ಭುಜಂಗ ಸ್ತೋತ್ರದಲ್ಲಿ 'ಪಿ.ಬಿ'(ಅಮ್ಮ ತನ್ನ ಮೆಚ್ಚಿನ ಗಾಯಕರನ್ನು 'ಪಿ.ಬಿ'., 'ಎಸ್.ಪಿ', ಎಂದೇ ಹ್ರಸ್ವವಾಗಿ ಕರೆಯುತ್ತಿದ್ದುದು ನಮಗೂ ರೂಢಿಯಾಗಿತ್ತು.) 'ಪ್ರಭಾ'ಎಂದು ಉಚ್ಛರಿಸುತ್ತಿದ್ದ ಘನ ಘಂಭೀರ ಧನಿಗೆ ನಾನು ಬಹಳವಾಗಿ ಮನಸೋತಿದ್ದೆ! ಇದೇ ಗುಂಗಿನಲ್ಲಿ ಬೆಳೆದ ನಾನು ಮುಂದೆ ಇಂತಹದೇ ಕರೆಯನ್ನು ನನ್ನ ಪತಿಯಿಂದ ನಿರೀಕ್ಷಿಸಿದ್ದು ನನಗೆ ಕಿರಿಕಿರಿಯೇ ಆಗುವಂತಾಯ್ತು. ಅವರಿಗೆ ಈ ರೀತಿ ಸಂಭೋದನಾ ಚತುರತೆಯೇ ಸಿದ್ಧಿಸಿರಲಿಲ್ಲ. ಅವರ 'ಮೆಗಾ' ಕುಟುಂಬದಲ್ಲಿ ಎಲ್ಲರೂ ಈ ಎಲ್ಲಾ ಚಾತುರ್ಯವನ್ನೂ ತಮ್ಮ ಹಿರಿಯಣ್ಣನಿಗೇ ಮೀಸಲಿಟ್ಟಂತಿದ್ದರು. ಮೊದಲ ಸಾರಿ ಅವರ ಮನೆಗೆ ಹೋದಾಗ ಪೂಜೆಗೆ ಕುಳಿತಿದ್ದ ಹಿರಿಯಣ್ಣ ನಿಮಿಷಕ್ಕೊಮ್ಮೆ 'ಲಲಿತಾ..., ಲಲಿತಾ...'ಎಂದು ಕೂಗುವುದನ್ನು ಕೇಳಿ ನಮ್ಮ ಸಂಬಂಧಿಯೊಬ್ಬರು 'ಇದೇನು ಲಲಿತಾ ಸಹಸ್ರನಾಮ ಮಾಡುತ್ತಿದ್ದಾರೆಯೇ?' ಎಂದು ಕೇಳಿದ್ದರು!
ಮೊದಲ ಭಾರಿಗೆ ಇವರೊಡನೆ ಹೊಟೆಲ್‌ಗೆ ಹೋದದ್ದನ್ನು ಮರೆಯುವಂತೆಯೇ ಇಲ್ಲ. ಕುಳಿತ ತಕ್ಷಣವೇ ಇವರು ಮಾಣಿ ಪ್ರವರ ಒಪ್ಪಿಸುವುದನ್ನೂ ಕಾಯದೇ ಅಥವಾ ಮುಖ್ಯವಾಗಿ ನನ್ನನ್ನೂ ಕೇಳದೇ ಮಸಾಲೆ ದೋಸೆಗೆ ಆರ್ಡರ್ ಮಾಡಿದಾಗ ಇವರು ಪರ(ಪರಸ್ತ್ರೀ)ಇಂಗಿತ ಪ್ರಜ್ಷರಂತೆಯೇ ಕಂಡಿದ್ದರು. ತಟ್ಟೆಗಳಲ್ಲಿ ಹಾಯಾಗಿ ಪವಡಿಸಿದ ದೋಸೆಯುಕ್ತ ಪ್ಲೇಟ್‌ಗಳು ಟೇಬಲ್ ಮೇಲೆ ಹಾಜರಾದ ತಕ್ಷಣವೇ ಗರಿಗರಿ ದೋಸೆಯ ಅಂತರಂಗವನ್ನು ಬಗೆದ (ಹಿರಣ್ಯಕಷ್ಯಪನ ಉದರವನ್ನು ಸೀಳಿದ ಸಾಕ್ಷಾತ್ ನರಸಿಂಹಾವತಾರವೇ ಮೂರ್ತಿವೆತ್ತಂತೆ!) ಇವರು ಹೇಳದೇ ಕೇಳದೇ ಎದ್ದು ಹೊರನಡೆದೇ ಬಿಟ್ಟರು. ಇನ್ನೇನು ಬರಬಹುದು ಎಂದು ಮುರಿದ ದೋಸೆಯ ತುಂಡನ್ನು ಕೈಯಲ್ಲಿ ಹಿಡಿದಿದ್ದ ನಾನು 'ಕೈಯೊಳಗೇತಕೆ ಬಾಯೊಳಗಿದ್ದರೆ ಆಗದೆ ಮರಿಕಪಿಯೊಂದಾಗ ' ಎಂದ ಮನದ ಮಾತನ್ನು ಪುಷ್ಠೀಕರಿಸಿ ಮೆಲ್ಲ ಮೆಲ್ಲನೆ ಮೆಲ್ಲುತ್ತಾ ಹಿಂತಿರುಗಿ ನೋಡಿದಾಗ ಕೌಂಟರ್‌ನಲ್ಲಿ ಹಣ ನೀಡಿ ಹೊರನಡೆಯುತ್ತಿದ್ದ ಇವರನ್ನು ಕಂಡು ರಸಭಂಗವಾದಂತೆ ತಿನ್ನುವುದನ್ನು ಅಷ್ಟಕ್ಕೇ ಬಿಟ್ಟು ಒಲ್ಲದ ಮನಸ್ಸಿನಿಂದಲೇ ಹೊರ ಬಂದಿದ್ದೆ. ನಂತರವೇ ತಿಳಿದದ್ದು ಆ ದೋಸೆಗೆ ಬಳಿದಿದ್ದ ಕೆಂಪು ಚಟ್ನಿಗೆ ಬೆಳ್ಳುಳ್ಳಿ ಹಾಕಿದ್ದರು ಎಂದು!
ಈರುಳ್ಳಿಗೇ ವಾರದಲ್ಲಿ ಮೂರುದಿನ ನಿಷಿದ್ಧವಿದ್ದ ನಮ್ಮ ಮನೆಯಲ್ಲಿ ಅಡುಗೆಯ ಮನೆಯ ಸಾಮ್ರಾಜ್ಞಿ ಅಮ್ಮ ಬೆಳ್ಳುಳ್ಳಿಯನ್ನು ಬಳಸುತ್ತಲೇ ಇರಲಿಲ್ಲ. ಆದರೂ ಆ ವಿಶಿಷ್ಟ ಘಾಟು ವಾಸನಾಯುಕ್ತ ತೀವ್ರ ರುಚಿಯ ಬಗ್ಗೆ ನಮಗೆ ಏನೋ ವಿಚಿತ್ರ ಮೋಹ. ಅಟ್ಟಲು ಗದ್ದೆ ಸಮಯದಲ್ಲಿ ಆಳುಮಕ್ಕಳಿಗೆ ಮಾಡುತ್ತಿದ್ದ ?ಮೆಣಸು ಬೆಳ್ಳುಳ್ಳಿ ಕಾರವನ್ನು ನಾವೂ ಕಣ್ಣು ಮೂಗಲ್ಲೆಲ್ಲಾ ನೀರು ಸುರಿಸಿಕೊಂಡು 'ಹಾ...ಹಾ...' ಎನ್ನುತ್ತಾ ತಿನ್ನುತ್ತಿದ್ದವು! ಇವರಿಗೆ ಬೆಳ್ಳುಳ್ಳಿಯ ಬಗ್ಗೆ ಇರುವ ಈಬಗೆಯ ಆದರವನ್ನು ನೋಡಿ ನನಗಂತೂ ತೀವ್ರ ನಿರಾಸೆಯೇ ಆಯ್ತು. ನನ್ನ ಆಸೆಯ ಈ ಘಾಟನ್ನು ಆಘ್ರಾಣಿಸಿದವರಂತೆ 'ಈಗ ಸಾಮಾನ್ಯವಾಗಿ ಎಲ್ಲಾಹೊಟೆಲ್‌ಗಳಲ್ಲೂ ಬೆಳ್ಳುಳ್ಳಿಯನ್ನ ಉಪಯೋಗಿಸ್ತಾರೆ...'ಎಂದುಕೊಂಡು ಅನಿವಾರ್ಯವೆನಿಸಿದರೂ ಹೊಟೆಲ್‌ಗೆ ಹೋಗುವುದನ್ನೇ ನಿಲ್ಲಿಸಿ ಉಳಿತಾಯ ಯೋಜನೆ ಪ್ರಾರಂಭಿಸಿಬಿಟ್ಟರು. ನಮ್ಮ ಮನೆಗಂತೂ ಯಾವ ಕಾರಣಕ್ಕೂ ಬೆಳ್ಳುಳ್ಳಿಗೆ ಪ್ರವೇಶವೇ ಇಲ್ಲ ಎನ್ನುವುದಂತೂ ಖಚಿತವಾಗಿಹೋಯ್ತು. 'ಬಾಣಂತಿ' ಊಟವಾಗಿ ಬರುತ್ತಿದ್ದ ಬೆಳ್ಳುಳ್ಳಿಗೂ ಬಹಿಷ್ಕಾರವಾಯ್ತು. ಹೀಗೆ ಒಂದು ದಿವ್ಯೌಷಧ, ರಾಮಬಾಣವೆನಿಸಿದ ಬೆಳ್ಳುಳ್ಳಿಯ ನಿಷಿದ್ಧ ಪ್ರದೇಶವಾಗಿ ನಮ್ಮ ಮನೆ ರೂಪುಗೊಂಡಿತು.
ಇವರು ಇಷ್ಟೆಲ್ಲಾ ವರ್ಜಿಸಿದ್ದರೂ ಒಮ್ಮೆಯಂತೂ ಈ ದಿವ್ಯೌಷಧಿಯೇ ಇವರ ಕೆಳಗಿಳಿದ ರಕ್ತದೊತ್ತಡವನ್ನು ಮೇಲೇರಿಸುವುದರಲ್ಲಿ ಸಹಕಾರಿಯಾಗಿದ್ದನ್ನು ನೆನಪಿಸಿಕೊಳ್ಳಲೇ ಬೇಕು. ಇವರಿಗೆ ಒಮ್ಮೆ ಅನಾರೋಗ್ಯವಾಗಿ ತೀವ್ರನಿಗಾಘಟಕದಲ್ಲಿ ಇಟ್ಟಿದ್ದಾಗ ಇದ್ದಕ್ಕಿದ್ದಂತೆಯೇ ರಕ್ತದೊತ್ತಡ ಇಳಿಯಲಾರಂಭಿಸಿತು. ಡಾಕ್ಟರ್‌ಗಳೆಲ್ಲಾ ತರಾತುರಿಯಲ್ಲಿ ಚಿಕಿತ್ಸೆ ನೀಡಿ ಸಹಜಸ್ಥಿತಿಗೆ ತರುವ ಸನ್ನಾಹದಲ್ಲಿದ್ದರು. ಅಷ್ಟರಲ್ಲಿ ಪೇಷೆಂಟ್ ಊಟ ಬಂದಿದ್ದರಿಂದ ಕ್ರಮೇಣ ಸರಿಹೋಗುವುದಾಗಿ ತಿಳಿಸಿ ಊಟ ಕೊಡಲು ಹೇಳಿದರು. ತಿಳಿಸಾರು ಅನ್ನ ಕಲೆಸಿ ಸ್ಪೂನ್‌ನಲ್ಲಿ ಇನ್ನೇನು ಬಾಯಿಗಿಡಬೇಕು ಆಕ್ಷಣವೇ ಬಿ.ಪಿ. ನಾರ್‍ಮಲ್ ಬಿಟ್ಟು ಮೇಲೇರಲಾರಂಭಿಸಿತು! ಇವರಂತೂ ಬಾಯಿ ಬಿಡದೇ ಎಳೇ ಮಗುವಿನಂತೆ ಹಠ ಹಿಡಿದು ಊಟ ಬೇಡವೆಂದು ಸನ್ನೆ ಮಾಡಲಾರಂಭಿಸಿದರು. ಮೊದಲೇ ಗಾಭರಿಗೊಂಡಿದ್ದ ನಾನು ಆಗ ಗಮನಿಸಿದೆ ಸಾರಿಗೆ ಬೆಳ್ಳುಳ್ಳಿ ಹಾಕಿದ್ದಾರೆಂಬುದನ್ನು! ಆದರೂ ..., ಹೃದಯಕ್ಕೆ ಒಳ್ಳೆಯದು ಎಂದು ಯಾವ ಡಯಟೀಷಿಯನ್ ಏನೇ ಹೇಳಿದರೂ ಇವರ ವ್ರತಭಂಗ ಮಾಡಲಾಗಲಿಲ್ಲ!
ಕುಟುಂಬದವರೆಲ್ಲಾ ಒಮ್ಮೆ ಶಿರಡಿಯಾತ್ರೆ ಕೈಗೊಂಡರು. ಈ ಮೊದಲೇ ಎಂದರೆ ಮದುವೆಯಾದ ಹೊಸತರಲ್ಲೇ ದಕ್ಷಿಣ ಕರ್ನಾಟಕದ ಪ್ರಮುಖ ಯಾತ್ರಾಸ್ಥಳಗಳಿಗೆಲ್ಲಾ ಇವರ ಹರಕೆಗಳನ್ನು ತೀರಿಸಲು(!) ಹೋಗಿದ್ದ ಹಾಗೂ ಹೋಗುತ್ತಿದ್ದ ನನಗೆ ಯಾತ್ರಗಳೇನೂ ಹೊಸತಾಗಿರಲಿಲ್ಲ! ಆಗಲೇ ನಿಂತರೂ ಕುಳಿತರೂ ಭಗವನ್ನಾಮ ಸ್ಮರಣೆಯನ್ನು ಜಪಿಸಲಾರಂಭಿಸಿದ್ದ (ಸಧ್ಯ ನನ್ನ ಹೆಸರನ್ನು ಕರೆಯದೇ ಇದ್ದುದು ಒಳ್ಳೆಯದೇ ಆಯ್ತು. ಇಲ್ಲದಿದ್ದರೆ ?ಸ್ಥಾನಪಲ್ಲಟ?ವಾದ ನೋವನ್ನು ಅನುಭವಿಸುವಂತಾಗುತ್ತಿತ್ತು!)ಇವರೂ ಇಷ್ಟ ದೈವದಶನದ ಆನಂದ ಸ್ಥಿತಿಯಲ್ಲಿ ಪ್ರಸಾದ ಸೇವನೆಗೆ ಕುಳಿತಾಗ ಊಟದ ಎಲ್ಲಾ ಐಟಂಗಳಲ್ಲಿಯೂ ಬೆಳ್ಳುಳ್ಳಿಯೇ ರಾರಾಜಿಸುತ್ತಿದ್ದುದನ್ನು ನೋಡಿ (ಆಘ್ರಾಣಿಸಿ) ಎದ್ದು ಹೊರ ನಡೆದೇ ಬಿಟ್ಟರು. ಅದುವರ 'ಬೆಳ್ಳುಳಿ' ಎಂದರೇನೆಂದೇ ಅರಿಯದ ಮಕ್ಕಳೂ ಆ ವಿಶೇಷ ಕಟುವಾಸನೆಗೆ ಬೆದರಿ ಅಪ್ಪನ ಹಿಂದೇ ಓಟ ಕಿತ್ತರು (ಬಸವನ ಹಿಂದೆ ಬಾಲದಂತೆ!) ನಾನೂ ಸಿಕ್ಕ ಒಂದು ವಿಶೇಷಾವಕಾಶ ವಂಚಿತಳಾಗಿ ಅವರನ್ನು ಹಿಂಬಾಲಿಸಿದೆ. ಹಸಿದ ಹೊಟ್ಟೆಯನ್ನು ತುಂಬಲು ಪ್ರತಿ ಹೊಟೆಲ್ ಮುಂದೂ ನಿಂತು 'ಅಮ್ಮಾ..., ತಾಯೀ...,' ಎನ್ನುವಂತೆ , 'ಅಡುಗೆಗೆ ಬೆಳ್ಳುಳ್ಳಿ ಹಾಕಿದೀರಾ...?'ಎಂದು ಹರುಕು ಮುರುಕು ಹಿಂದಿಯಲ್ಲಿ ವಿಚಾರಿಸುತ್ತಾ ಅಲೆದಲೆದು ಕಡೆಗೆ 'ಆಂದ್ರ ಸ್ಪೆಷಲ್' ಎಂಬ ಹೊಟೆಲ್‌ನಲ್ಲಿ ಒಂದಕ್ಕೆರಡರಷ್ಟು ಬೆಲೆತೆತ್ತು ಅಲ್ಲಿದ್ದಷ್ಟು ದಿನವೂ ಊಟ ಮಾಡಿದ್ದಾಯ್ತು!
ನಾವು ಸೈಟನ್ನು ತೆಗೆದುಕೊಂಡು ಬಹಳದಿನ ( ಏಕೆ ವರ್ಷಗಳೇ)ಆ ಕಡೆಗೆ ತಲೆ ಹಾಕದೇ ಕಟ್ಟಿದ ಮನೆಯನ್ನೇ ಕೊಳ್ಳುವ ಯೋಜನೆಯಲ್ಲಿ ಸಾಕಷ್ಟು ಅಲೆದಲೆದು ಯಾವುದೂ ಸರಿಬರದಿದ್ದಾಗ (ನಮ್ಮ ಆರ್ಥಿಕ ಮಿತಿಗೆ ಹೊಂದದಿದ್ದಾಗ!) ಸ್ವತ: ಕಟ್ಟುವ ತೀರ್ಮಾನಕ್ಕೆ ಬಂದು ಸೈಟನ್ನು ನೋಡಲು ಹೋದೆವು. ದೂರದಿಂದಲೇ ನಮ್ಮ ಸೈಟಿನಲ್ಲಿ ಧವಳಾಚ್ಛಾದಿತ ರಾಶಿಯನ್ನು ನೋಡಿ ಏನಿರಬಹುದೆಂಬ ಕುತೂಹಲದಲ್ಲಿ ಹತ್ತಿರ ಸಾರುವ ಮೊದಲೇ ನಮ್ಮ ಬಳಿಗೇ ತನ್ನ ಇರವನ್ನು ವಾಸನಾ ರೂಪದಲ್ಲಿ ಸಾರಿಬಿಟ್ಟಿತು! ಆಗಲೇ ಗೊತ್ತಾಗಿದ್ದು ಅಲ್ಲಿ ಸುತ್ತೆಲ್ಲಾ ತಲೆ ಎತ್ತಿರುವ ಗೃಹಗಳ ನಿವಾಸಿಗಳು ಬೆಳ್ಳುಳ್ಳಿ ವ್ಯಾಪಾರ ಮಾಡುವವರು ಎಂದು. ಕ್ಲೀನ್ ಮಾಡಬೇಕಾದ ಬೆಳ್ಳುಳ್ಳಿಯನ್ನು ರಾಶಿರಾಶಿಯಾಗಿ ಖಾಲಿ ಸೈಟ್‌ಗಳಲ್ಲಿ ಸುರಿದಿರುತ್ತಿದ್ದರು. ಈಗಾಗಲೇ ಮನೆ ಹುಡುಕಿ ಹುಡುಕಿ ದಣಿದಿದ್ದ ಇವರು ಈ 'ಲಸನ್' ವಾಸನಾಸ್ತ್ರದಿಂದ ಹಿಮ್ಮೆಟ್ಟದೇ ಮನೆ ಕಟ್ಟಲು ನಿರ್ಧರಿಸೇ ಬಿಟ್ಟರು. ಗೃಹ ಪ್ರವೇಶವಾದನಂತರ ಸುತ್ತಿನ ವಾಸನಾ ಜಗತ್ತಿನ ಬಲದಿಂದ 'ಬೆಳ್ಳು'ಗೆ ಮನೆಯ ಗುಪ್ತ ಸ್ಥಳವೊಂದರಲ್ಲಿ ವಾಸ ಪರವಾನಗಿ ನೀಡಿದೆ. ಇವರು ಪರ ಊರುಗಳಿಗೆ ಪ್ರಯಾಣ ಬೆಳೆಸಿದಾಗ ಅಡುಗೆಯ ವಿಶೇಷ 'ಬೆಳ್ಳು' ವಿನಿಂದೊಡಗೂಡಿರುವುದು ಮಕ್ಕಳಿಗೆ ಸರ್ವೇ ಸಾಮಾನ್ಯವಾಯಿತು. ಅಂತೂ ಈ ಮೂಲಕ ಮಕ್ಕಳನ್ನು ಒಂದು ವಿಶಿಷ್ಟ ಆರೋಗ್ಯಕರ ರುಚಿಗೆ ಪರಿಚಯಿಸಿದ ಹಾಗೂ ಯಾವುದೇ ಶಾಕಾಹಾರೀ ಹೊಟೆಲ್‌ಗಳಲ್ಲಿಯೂ ಊಟಮಾಡಬಹುದಾದ ಸಾಮರ್ಥ್ಯವನ್ನು ದಯಪಾಲಿಸಿದ ಭಾಗ್ಯ ನನ್ನದಾಯಿತು!
ಬೆಳ್ಳುಳ್ಳಿ ಮತ್ತು ಇವರ ನಡುವಿನ ವಿಕರ್ಷಣಾ ಸಂಬಂಧ ಎಷ್ಟೊಂದು ಗಾಢವಾಗಿದೆಯೆಂದರೆ (ಆಕರ್ಷಣೆಗಿಂತ ವಿಕರ್ಷಣೆಯೇ ಅತ್ಯಂತ ಪ್ರಭಲವಾದ ಶಕ್ತಿ ಎಂದು ನಂಬಲು ನನಗೆ ಇದಕ್ಕಿಂತಾ ಪುರಾವೆ ಬೇಕು ಎನಿಸುವುದಿಲ್ಲ!) ಇವರ ಬಗ್ಗೆ ಹೇಳದೇ ಬೆಳ್ಳುಳ್ಳಿಯ ಬಗ್ಗೆ ಹೇಳಲು ಸಾಧ್ಯವಾಗುತ್ತಲೇ ಇಲ್ಲ. ಆದರೂ ಒಮ್ಮೆ ಬೆಳ್ಳುಳ್ಳಿಯ ಅರ್ಥ ಲೋಕವನ್ನು ಪ್ರವೇಶಿಸಿದಾಗ ಎಂದರೆ ನಿಘಂಟುಗಳನ್ನು ತೆರೆದಾಗ ನನಗೆ ತೀವ್ರ ಆಘಾತವೇ ಕಾದಿತ್ತು! ಎಲ್ಲಾ ಮನುಜ ನಿರ್ಮಿತ ವರ್ಗಗಳಲ್ಲೂ ಭೇದ ಭಾವವಿರುವಂತೆ ಸಹೋದರ ರೂಪಿಗಳಾದ ಈರುಳ್ಳಿ ಬೆಳ್ಳುಳ್ಳಿಗಳಲ್ಲಿಯೂ ತಾರತಮ್ಯ ಎದ್ದು ಕಾಣುವಂತಿತ್ತು. 'ಈರುಳ್ಳಿ' ಎಂದರೆ ಉಳ್ಳೇಗೆಡ್ಡೆ, ನೀರುಳ್ಳೆ ಎಂದಿದ್ದರೆ 'ಬೆಳ್ಳುಳ್ಳಿ' ಎನ್ನುವ ಪದವೇ ಕಾಣಲಿಲ್ಲ! ಇರಲಿ ಎಂದು ಆಂಗ್ಲ ಪದ GARLIC ( ಗಾರ್ಲಿಕ್) ಅನ್ನು ನೋಡಿದೆ. ‘A plant with bulbous strong smelling root-ಬೆಳ್ಳುಳ್ಳಿ' ಎಂದಿತ್ತು. ಅಯ್ಯೋ ನಮ್ಮ ಬೆಳ್ಳುಳ್ಳಿಯ ಸ್ಥತಿಯೇ ಎಂದುಕೊಂಡು ಛಲ ಬಿಡದಂತೆ ಹಿಂದಿಯಲ್ಲಿ ?ಲಸನ್? ಎನ್ನುತ್ತಾರೆ ಎಂದು ತಿಳಿದು ಆ ಪದವನ್ನೇನಾದರೂ ಕೊಟ್ಟಿದ್ದಾರೆಯೋ ನೋಡೋಣ ನಮ್ಮ ಸರ್ವಭಾಷಾ ಸಮನ್ವಯ ಭಾವಾಪ್ರಿಯ ಪಂಡಿತರು ಎನ್ನುವ ಕುತೂಹಲದಿಂದ ಹಾಳೆಗಳನ್ನು ಮಗುಚಿದೆ. ಓಹೋ ಸಿಕ್ಕೇ ಬಿಟ್ಟಿತು! ಲಸನ್ ಅಲ್ಲ 'ಲಶುನ' ಎಂದರೆ ಬೆಳ್ಳುಳ್ಳಿ ಎಂದು! ನಮ್ಮ ಹಿಂದೂ ಸಂಪ್ರದಾಯದ ಮದುವೆಯಲ್ಲಿ ಭೂಮದ ಊಟದಲ್ಲಿ ವರನು ವಧುವಿನ ( ವಧು ಬಲಭಾಗದಲ್ಲಿ ಕೂರುವ ಅನಾನುಕೂಲದಿಂದಲೋ ಏನೋ!) ಕತ್ತನ್ನು ಬಳಸಿ ಬಾಯಿಗೆ ತುತ್ತನ್ನು ಇಟ್ಟಂತೆ! ಬಿಳಿಯ ಬಣ್ಣದಿಂದಲೇ ಈ ಹೆಸರು ಬಂದಿದೆ ಎಂದು ತರ್ಕಿಸಿ 'ಬೆಳ್' (ಬೆಳ್ಳುಳ್ಳಮ್ಮ ಬೆಳ್ಳುಳ್ಳಿ ಬೆಳ್ಳಿ ಬೆಳಕಿನ ಬೆಳ್ಳುಳ್ಳಿ..!) ಎನ್ನುವ ಪದದ ಅರ್ಥ ಶೋಧನೆಗೆ ಹೊರಟೆ. 'ಬೆಳ್' ಎಂದರೆ ಬಿಳುಪಾದ , ದಡ್ಡತನ(!)ದಿಂದ ಕೂಡಿದ ಎನ್ನುವುದರ ಜೊತೆಗೇ 'ಉಳ್ಳಿ' ಸೇರಿಸಿದಾಗ ಅಡುಗೆಗೆ ಉಪಯೋಗಿಸುವ ಕಟು ವಾಸನೆ ಮತ್ತು ರುಚಿಯುಳ್ಳ ಒಂದು ಜಾತಿಯ ಗೆಡ್ಡೆ ಎಂದಿತ್ತು. ಅದರ ರುಚಿ, ವಾಸನೆಯೇ ಮುಖ್ಯವಾಯಿತೇ ಹೊರತು ಅದರ ವೈದ್ಯಕೀಯ ಪ್ರಾಮುಖ್ಯತೆಯ ಬಗ್ಗೆ ಸೂಚಿಸಿಲ್ಲವಲ್ಲಾ ಎನ್ನುವ ತವಕದಲ್ಲೇ 'ಉಳ್ಳಿ' ಅರ್ಥಾನ್ವೇಷಿಯಾದೆ. ನೀರುಳ್ಳಿ, ಉರುಳುಗೆಡ್ಡೆ ಎಂದು ಒಂದು ಕಡೆ ಇದ್ದರೆ ಈರುಳ್ಳಿ, ಬೆಳ್ಳುಳ್ಳಿ ಎಂದು ಮತ್ತೊಂದು ಕಡೆ ಸಿಕ್ಕಿತು. 'ಉಳ್ಳಿ' ಎಂದರೆ ಹುರುಳಿಕಾಳು ಎಂದು ಮಾತ್ರ ತಿಳಿದಿದ್ದೆ. 'ಉಳ್ಳಿ ತಿಂದಮ್ಮನಿಗೆ ಉಳುಕಿತು. ಬೆಳ್ಳುಳ್ಳಿ ತಿಂದಮ್ಮನಿಗೆ ನಾರ್‍ತು.' ಎನ್ನುವುದು ನಮ್ಮ ಕಡೆಯ ಸಾಮಾನ್ಯ ಮಾತಾಗಿತ್ತು.
ನನ್ನ ದೃಷ್ಟಿಯಲ್ಲಿ ಇವರ ಮತ್ತು ಬೆಳ್ಳುಳ್ಳಿಯ ನಡುವೆ ಹೇಗೆ ಅವಿನಾಭಾವ ಸಂಬಂಧ ಏರ್ಪಟ್ಟಿದೆಯೋ ಅದೇ ರೀತಿ ಆಂತರಿಕವಾಗಿ ಬೆಳ್ಳುಳ್ಳಿ ನನ್ನೊಳಗಿನ ವಿಕಟಕವಿಯನ್ನು ಬಡಿದೆಬ್ಬಿಸಿ ಮೊಗದ ಮೇಲಿನ ನಗೆಯಾಗಿ ಮಾರ್ಪಟ್ಟು ನನ್ನಲ್ಲಿ ಲಸನ್ ಮಂದಹಾಸವಾಗಿ ('ಲಸನ್ ಮಂದಹಾಸ' ಪ್ರಭಾ ವಕ್ರ ತುಂಡ...!)ಮೂಡಿ ಮೆರೆಯುತ್ತಿದೆ! ಈಗ ಅಕ್ಕಪಕ್ಕದಲ್ಲಿ ಮನೆಗಳಾಗಿ ಅವರ ಮನೆಗಳಲ್ಲಿ ಅಟ್ಟುವ ಅಡುಗೆಯ ಪರಿಮಳ ನಮ್ಮ ಮನೆಯನ್ನೂ ತುಂಬುವುದರಿಂದ ಆ ಲಶುನ ವಾಸನಾ ತೆರೆಯ ಮರೆಯಲ್ಲಿಯೇ ನಮ್ಮ ಮನೆಯಲ್ಲಿಯೂ ಬೆಳ್ಳುಳ್ಳಿಯನ್ನು ಅಡುಗೆಯ ಒಂದು ಭಾಗವನ್ನಾಗಿಸುವ ಪ್ರಯತ್ನವನ್ನು ಮುಂದುವರಿಸೇ ಇದ್ದೇನೆ. ಈ ಸೂಕ್ಷ್ಮವನ್ನು ಮನಗಂಡ ಇವರು ಹುರಿಯುವ, ಅರೆಯುವ,...ಒಗ್ಗರಣೆಹಾಕುವಂತಹ ಪ್ರಮುಖ ಕಾರ್ಯಭಾರಗಳನ್ನು ತಮ್ಮದಾಗಿಸಿಕೊಂಡು ನನಗೆ ಅಡುಗೆಮನೆಗೆ ಪ್ರವೇಶ ನಿಶಿದ್ಧ ಮಾಡುವ ಸನ್ನಾಹದಲ್ಲಿದ್ದಾರೆ! ಆದರೂ..... ಫಲಕಾರಿಯಾಗುವ ಆಶಾಭಾವನೆಯಲ್ಲಿ ಕೋಲಿನ ತುದಿಗೆ ಕಟ್ಟಿದ ಹುಲ್ಲಿನ ಆಸೆಗೆ ಮುನ್ನುಗ್ಗುತ್ತಿರುವ ಕುದುರೆಯಂತೆ ಬದುಕ ಬಂಡಿಯನ್ನು ಓಡಿಸುತ್ತಿದ್ದೇನೆ!

Wednesday, October 20, 2010

ಮನದ ಅ೦ಗಳದಿ.......13 ನೀನೇ ನಾನು

ಒಮ್ಮೆ ಮೂರು ಜನ ಪಯಣಿಗರು ದಾರಿಯಲ್ಲಿ ನಡೆಯುತ್ತಿದ್ದರು. ರಸ್ತೆಯಲ್ಲಿ ಅವರಿಗೊಂದು ನಾಣ್ಯ ಸಿಕ್ಕಿತು. ಒಬ್ಬ ಹೇಳಿದ, 'ಈ ಹಣದಿಂದ ನಾವೇನಾದರೂ ಸಿಹಿ ತಿನಿಸನ್ನು ತಿನ್ನೋಣ.?' ಮತ್ತೊಬ್ಬ ಹೇಳಿದ, 'ಸಿಹಿ ತಿನಿಸು ಬೇಡ. ಹಣ್ಣನ್ನು ಕೊಂಡು ತಿನ್ನೋಣ'. ಮೂರನೆಯವನು ಹೇಳಿದ, 'ಏನೂ ತಿನಿಸು ಬೇಡ. ಪಾನೀಯವನ್ನು ಕುಡಿಯೋಣ.'
ಮೂವರ ನಡುವೆ ಭಾರೀ ಚರ್ಚೆ ನಡೆಯಿತು. ಎದುರಿಗೆ ಒಬ್ಬ ಅಪರಿಚಿತ ವ್ಯಕ್ತಿ ಬಂದ. ಇವರ ಸಮಸ್ಯೆಯನ್ನು ಕೇಳಿ ತಿಳಿದು ಮೂವರನ್ನೂ ಹತ್ತಿರದ ಹಣ್ಣಿನ ಅಂಗಡಿಗೆ ಕರೆದೊಯ್ದ. ದ್ರಾಕ್ಷಿಯ ಗೊಂಚಲುಗಳನ್ನು ಕೊಡಿಸಿದ.
ಮೊದಲನೆಯವ ಹೇಳಿದ, 'ಅರೆ ಇದೊಂದು ಸಿಹಿ ತಿನಿಸು!'
ಎರಡನೆಯವ ಹೇಳಿದ, 'ಇದೊಂದು ಹಣ್ಣು!'
ಮೂರನೆಯವ ಹೇಳಿದ, 'ಈ ದ್ರಾಕ್ಷಿಯಿಂದ ನನ್ನ ಬಾಯಾರಿಕೆ ಇಂಗಿತು.'
ಎಲ್ಲಾ ಆಧ್ಯಾತ್ಮಿಕ ಪಥಿಕರ ಗುರಿ ಒಂದೇ, ಪಥಗಳು ಬೇರೆ ಬೇರೆ.
ಇದೊಂದು ಸೂಫಿ ಕಥೆ. ಕ್ರಿ.ಶ.ಎಂಟರಿಂದ ಹದಿನೈದನೆಯ ಶತಮಾನಗಳ ಅವಧಿಯಲ್ಲಿ ಜಗತ್ತು ನೂರಾರು ಸೂಫಿಗಳನ್ನು ಕಂಡಿತು. ಇವರು ಇಸ್ಲಾಂ ಮತದಲ್ಲಿ ನಂಬಿಕೆ ಉಳ್ಳವರಾಗಿದ್ದರು. ಬಡತನದ ಕುಟುಂಬಗಳಿಂದ ಹೆಚ್ಚಾಗಿ ಬರುತ್ತಿದ್ದ ಇವರು ಮಸೀದಿಗಳಲ್ಲಿ 'ಸುಪ್ಪಾ' ಎಂದರೆ ಮಾಳಿಗೆಗಳಲ್ಲಿ ಕಾಲ ಕಳೆಯುತ್ತಿದ್ದುದರಿಂದ ಇವರನ್ನು 'ಸೂಫಿ'ಗಳೆಂದು ಕರೆದರು. ಹೆಚ್ಚಿನ ಕಾಲ ತಪಸ್ಸಿನಲ್ಲಿ ಮಗ್ನರಾಗುತ್ತಿದ್ದ ಸೂಫಿಗಳ ಅನುಕ್ಷಣದ ಬದುಕಿನಲ್ಲೂ ಧರ್ಮವು ಮಿಳಿತವಾಗಿತ್ತು. ಹಲವು ಸಲ ಮೆಕ್ಕಾ ಯಾತ್ರೆ ಮಾಡುತ್ತಿದ್ದ ಇವರು ಹಳ್ಳಿ ಹಳ್ಳಿಗಳಲ್ಲಿ ಧರ್ಮ ಬೋಧನೆ ಮಾಡುತ್ತಿದ್ದರು. ಆದರೆ ಜನರಿಂದ ದೂರವಾಗಿ ಊರ ಹೊರಗೆ ವಾಸಿಸುತ್ತಿದ್ದರು.
ಸೂಫಿಗಳು ಬರೆದಿರಬಹುದಾದ ಲಿಖಿತ ಸಾಹಿತ್ಯ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿಲ್ಲ. ಆದರೆ ಅವರ ಹೇಳಿಕೆಗಳು, ಗೀತೆಗಳು, ಪ್ರವಚನಗಳು, ಮತ್ತು ಕಥೆಗಳು ಒಬ್ಬರಿಂದ ಒಬ್ಬರಿಗೆ ತಿಳಿದು ಇಲ್ಲಿಯವರೆಗೂ ಉಳಿದು ಬಂದಿವೆ. ಸೂಫಿ ಮತದ ಉದ್ದೇಶವನ್ನು ಬಾಯ್ಸೀದ್ ಬಹಳ ಚೆನ್ನಾಗಿ ತಿಳಿಸಿದ್ದಾರೆ, 'ಒಂದೆಡೆಯಿಂದ ಮತ್ತೊಂದೆಡೆಗೆ ದೇವರನ್ನು ಅರಸುತ್ತಾ ಹೋದೆ. ಅಂತರಂಗದ ದನಿ ಹೇಳಿತು, ನೀನೇ ನಾನು'.
ರೂಮಿ ಎಂಬ ಸೂಫಿಯು ತನ್ನ ಎಲ್ಲಾ ಶಿಷ್ಯರೂ ಈ ಪದ್ಯವನ್ನು ಬಾಯಿ ಪಾಠ ಮಾಡುವಂತೆಹೇಳುತ್ತಿದ್ದರು.
ಆಧ್ಯಾತ್ಮದ ಔಷಧಗಳ
ಮಾರಾಟಗಾರರ ಈ ಮಾರುಕಟ್ಟೆಯಲ್ಲಿ
ಅತ್ತಿಂದ ಇತ್ತ, ಅಂಗಡಿಯಿಂದ ಅಂಗಡಿಗೆ ಓಡದಿರು,
ಬದಲಿಗೆ,
ನಿಜವಾದ ಔಷಧ ಸಿಗುವ
ಒಂದೇ ಅಂಗಡಿಯಲಿ ಕುಳಿತುಕೊ.
ಮೂಲತಃ ಇಸ್ಲಾಂ ಮತದ ಅನುಯಾಯಿಗಳಾಗಿದ್ದ ಸೂಫಿಗಳ ಮೇಲೆ ಕ್ರೈಸ್ತ ಮತ್ತು ಬೌದ್ಧ ಧರ್ಮದ ಪ್ರಭಾವವೂ ಆಗಿದೆ. ಭಾರತದಲ್ಲಿ ದಾರಾ ಶುಕೊ ಸೂಫಿಮತದ ಬೆಳವಣಿಗೆಗೆ ಬಹಳ ನೆರವು ನೀಡಿದರು. ಹಲವು ಮತಧರ್ಮಗಳನ್ನು ಸಾಕಷ್ಟು ಅಧ್ಯಯನ ಮಾಡಿ ವೇದಾಂತವನ್ನು ಚೆನ್ನಾಗಿ ಅರಿತಿದ್ದ ಇವರು ಸೂಫಿ ಮತದ ಮತ್ತು ವೇದಾಂತದ ನಡುವೆ ಇರುವ ಸಾಮ್ಯಗಳನ್ನು ಕುರಿತು ಎಲ್ಲರಿಗೂ ಹೇಳುತ್ತಿದ್ದರು.
ಈ ಕುರಿತು ಬರೆಯುವಾಗ ನನಗೆ ಸದಾ ನನ್ನೊಳಗೇ ಅನುರಣಿಸುವ ಆಕೆಯ ದನಿ ನೆನಪಾಗುತ್ತದೆ.
ಆಕೆ ಸುತ್ತಿನ ಊರುಗಳಲ್ಲಿ ತಿರುಗುತ್ತಾ ಕೌದಿಯನ್ನು ಹೊಲಿದು ಕೊಡುವುದು, ಬಟ್ಟೆಗಳನ್ನು ರಿಪೇರಿ ಮಾಡಿಕೊಡುವುದು ಮುಂತಾದ ಕೆಲಸಗಳನ್ನು ಮಾಡಿ ರೈತರು ಕೊಡುತ್ತಿದ್ದ ಧವಸ, ಧಾನ್ಯಗಳನ್ನು ಸಂಪಾದಿಸಿಕೊಂಡು ಬಂದು ಗಂಡನ ಅಲ್ಪಸ್ವಲ್ಪ ಗಳಿಕೆಯೊಂದಿಗೆ ಮನೆಯಲ್ಲಿದ್ದ ೮-೯ ಮಕ್ಕಳ ಹೊಟ್ಟೆಯನ್ನು ತುಂಬಬೇಕಾಗಿತ್ತು. ಅದರಲ್ಲಿಯೂ ಬಿಡುವು ಮಾಡಿಕೊಂಡು ನಮ್ಮ ಮನೆಗೆ ಬಂದು ಕೆಲವು ಹಾಡುಗಳನ್ನು ತಮ್ಮ ಉಚ್ಛ ಕಂಠದಲ್ಲಿ ಹಾಡುತ್ತಿದ್ದರು. ಅದರ ಅರ್ಥವನ್ನು ವಿವರಿಸಿ ಹೇಳುತ್ತಿದ್ದರು. ನಮ್ಮ ತಂದೆ ಅದಕ್ಕೆ ಸಮೀಕರಿಸುವಂಥಾ ಶ್ಲೋಕಗಳನ್ನು ಹೇಳಿ ತಾತ್ಪರ್ಯವನ್ನು ತಿಳಿಸುತ್ತಿದ್ದರು. ಅವುಗಳಲ್ಲಿರುವ ಸಾಮ್ಯತೆಯ ಬಗ್ಗೆ ಮಾತನಾಡುತ್ತಿದ್ದರು. ಕೆಲವೊಮ್ಮೆ ನಮ್ಮ ಅತ್ತೆಯೂ (ತಂದೆಯ ತಂಗಿ) ಅದಕ್ಕೆ ಸಂಬಂಧಿಸಿದ ಯಾವುದಾದರೊಂದು ಕೀರ್ತನೆಯನ್ನು ಹಾಡುತ್ತಾ ಜೊತೆಗೂಡುತ್ತಿದ್ದರು. ಅವರು ಏನು ಮಾತನಾಡುತ್ತಿದ್ದಾರೆ ಎನ್ನುವುದರ ಅರ್ಥ ಆಗ ನನಗೆ ಆಗದಿದ್ದರೂ ತನ್ನತ್ತ ಸೆಳೆಯುತ್ತಿತ್ತು.
ಎಲ್ಲ ಧರ್ಮಗಳ ಮೂಲಸಾರವೂ ಅಂತರಂಗದ ಅರಿವಿನಿಂದಲೇ ಆಗಿದೆ. ಅದೇ ಅವುಗಳ ಸಾಮ್ಯತೆಗೆ ಕಾರಣವೆನಿಸುತ್ತದೆ. ಅರಿವಿನ ಸಂಪಾದನೆ ಒಂದು ಆಂತರಿಕ ಅಭೀಪ್ಸೆ. ಅದಕ್ಕಾಗಿ ವ್ಯಕ್ತಿಗಳು ಸಮಾನಾಸಕ್ತರನ್ನು ಹುಡುಕಿಕೊಂಡು ಹೋಗುತ್ತಾರೆ. ತಾವು ಸತ್ಯವೆಂದು ಕಂಡದ್ದನ್ನು ಮತ್ತೊಬ್ಬರಲ್ಲಿ ಹಂಚಿಕೊಳ್ಳಲು ಕಾತರಿಸುತ್ತಾರೆ ಎನಿಸುತ್ತದೆ. ಈ ಮಾತನ್ನು ಪುಷ್ಟೀಕರಿಸುವಂತಿರುವ ಒಂದು ಚೀನೀ ಗಾದೆಯು ಈ ರೀತಿ ಇದೆ, ‘If you have something valuable with you, you have a moral obligation to share it with 0thers.’
ನಮ್ಮ ಅರಿವನ್ನು ಆಳಗೊಳಿಸುವ ಒಂದು ಸೂಫಿ ಕಥೆ ಈರೀತಿ ಇದೆ:
ಒಬ್ಬ ಹೋಗಿ ಬಾಗಿಲು ತಟ್ಟಿದ. ಒಳಗಿನಿಂದ ದನಿ ಕೇಳಿತು, 'ಯಾರದು?' ಈತ ಹೇಳಿದ, 'ನಾನು'. ಬಾಗಿಲು ತೆರೆಯಲೇ ಇಲ್ಲ. ಈತ ಬಹಳ ಸಮಯದ ನಂತರ ಮತ್ತೊಮ್ಮೆ ಬಂದು ಬಾಗಿಲು ತಟ್ಟಿದ. ಒಳಗಿನಿಂದ ಮತ್ತೆ ಕೇಳಿತು, 'ಯಾರದು?'ಈತ ಹೇಳಿದ, 'ನೀನು'. ಬಾಗಿಲು ತೆರೆಯಿತು.
ಜಲಾಲುದ್ದೀನ್ ರೂಮಿ ಹೇಳಿದ ಈ ಕಥೆಗೂ, ಸೂಫಿ ಮತದ ಉದ್ದೇಶವನ್ನು ತಿಳಿಸಿದ ಬಾಯ್ಸೀದ್ ಹೇಳಿಕೆಗೂ ಎಂಥಾ ಹೋಲಿಕೆ ಇದೆ ಅಲ್ಲವೇ?
********************************************************

Saturday, October 16, 2010

'ಹನಿ'ಗಳು

ಗಾಳಿಪಟ-1
ಏರಿದಷ್ಟೂ ಬಾನಿನಲಿ
ಇಹುದು ಎಡೆ
ಏರಿಸುವ ದಾರದ್ದೇ
ಇದಕೆ ತಡೆ!

ಹೊಣೆ
ಸೂತ್ರ ಹಿಡಿದೇ
ಹಾರಿಬಿಟ್ಟೆ
ಸ್ವತ೦ತ್ರವಾಗಿ ವಿಹರಿಸು
ನಿನ್ನದೇ ಗುರಿಯತ್ತ ಚಲಿಸು,
ಕಣ್ಬಿಟ್ಟೆ ದಾರ ಜಗ್ಗಿದಾಗ
ಪಟ ಹೊಡೆಯುತ್ತಿತ್ತು
ಅನಿಯ೦ತ್ರಿತ ಲಾಗ!

ಗಾಳಿಪಟ-2
ಹಾರುವ ಮೊದಲೇ
ಹುಚ್ಚೆದ್ದು ಲಾಗ
ಹೊಡೆದದ್ದು
ಮೇಲೇರಿದ೦ತೆ
ನಿರಾತ೦ಕ!



Sunday, October 10, 2010

ಸರಳ ಜೀವನ, ಉದಾತ್ತ ವಿಚಾರ

ದಯಮಾಡಿ ಇದರ ಮೇಲೆ ಡಬಲ್ ಕ್ಲಿಕ್ ಮಾಡಿ ಓದಿರಿ.

Thursday, October 7, 2010

'ಹನಿ'ಗಳು

ಬದುಕಿಗೆ
ಬೇಕಾದ೦ತೆ
ಬಳಸಿಕೋ
ನಿನ್ನ ತೆಕ್ಕೆಯಲ್ಲಿ
ಬ೦ಧಿ ನಾನಿಲ್ಲಿ
ಆದರೆ......
ಬ೦ಧ ಮುಕ್ತಳಾಗುವಾಗ
ತೃಪ್ತಿಯಲಿ
ತುಟಿಯರಳಲಿ!

ನಿನ್ನ೦ತೆ
ನಾನು ನಿನ್ನೆದುರು
ತೆರೆದ ಪುಸ್ತಕ
ಓದಿ ಅರ್ಥೈಸಿಕೊಳುವುದು
ನಿನ್ನ ಕಾಯಕ!

ಬದುಕು
'ಬದುಕು' ಎ೦ದರೇನೆ೦ದು
ನನ್ನ ನಾ
ಕೇಳಿಕೊ೦ಡ ಚಣ
ಕಣ್ಣು ದಿಟ್ಟಿಸುತಿತ್ತು
ಸಿ೦ಬಳದಲಿ
ಸಿಲುಕಿಕೊ೦ಡ
ನೊಣ!

ಕೋರಿಕೆ
ನೀ
ನನ್ನ ಹಾದಿಯ
ನಿರ್ದೇಶಿಸುತ್ತಿರು
ಎ೦ದೂ
ನಿರ್ಧರಿಸದಿರು.

ಭರವಸೆ
ಕ೦ದಾ,
ನಾನಾಗಬಯಸುವೆ
ನಿನ್ನ ಸ್ವಪ್ನ ಸೌಧದ
ಅಡಿಗಲ್ಲು
ಎ೦ದೂ ಆಗುವುದಿಲ್ಲ
ನಿನ್ನ ಪ್ರಗತಿ ಪಥದ
ಅಡ್ಡಗಲ್ಲು!

Sunday, October 3, 2010

ಬಿಡದ ಬಾ೦ಧವ್ಯ

(ಆಗಸ್ಟ್22, ೨೦೦4ರ 'ಮ೦ಗಳ' ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ.)
ಈಗ ನಮ್ಮ ಪತ್ರಗಳ ಓಡಾಟ ನಿ೦ತಿದೆ. ಮೊಬೈಲ್ ಕಾರ್ಯ ಪ್ರವೃತ್ತವಾಗಿದೆ. ಇತ್ತೀಚೆಗೆ ಕರೆ ಮಾಡಿದ್ದಾಗ ಅವರ ತಾಯಿಯವರು ತೆಗೆದುಕೊ೦ಡರು. ತಮ್ಮ ಅನಾರೋಗ್ಯದ ಬಗ್ಗೆ ತಿಳಿಸಿ ಈಗ ಮಗಳೇ ತಮ್ಮನ್ನು ನೋಡಿಕೊಳ್ಳುತ್ತಿದ್ದಾಳೆ ಎ೦ದು ಹೇಳಿದರು. ಹೀಗೆ ನನ್ನ ತ೦ಗಿ, ತ೦ದೆ ತಾಯಿಯರ ವೃದ್ದಾಪ್ಯದಲ್ಲಿ ಆಸರೆಯಾಗಿದ್ದಾಳೆ. ನಮ್ಮ ಬಾ೦ಧವ್ಯ ಬಿಡದ೦ತೆ ಮು೦ದುವರಿದಿದೆ.

Saturday, September 25, 2010

ಅತಿಕ್ರಮಣ

ಸುತ್ತಿ ಸುಳಿದು
ಮತ್ತೆ ಮತ್ತೆ
ಮುಖದತ್ತಲೇ
ರಾಚುವ೦ತೆ ಬರುವ
ಈ ಜೀರು೦ಡೆಗೆ
ಭ೦ಡ ಧೈರ್ಯ!

ವೃತ್ತ, ಧೀರ್ಘ ವೃತ್ತ
ಸುರುಳಿ...
ಅನಿಯತ ಪಥಗಳ
ಆಕ್ರಮಣ!

ಆಕಸ್ಮಿಕ, ಅನಿರೀಕ್ಷಿತ
ಎನಿಸಿದ್ದೇಕೋ
ಅಪರಿಹಾರ್ಯವಾದಾಗ
ಆತ್ಮರಕ್ಷಣೆಗೆ ಸನ್ನದ್ಧ ,

ಬಿಚ್ಚಿದ ಛತ್ರಿಯ
ವಿರೂಪಗೊಳಿಸುವ
ಬೀಸುಗಾಳಿ
ಕೊಡೆ ಮಡಚಿ
ಬಡಿಯಲುಪಕ್ರಮಿಸಿದಾಗ
ಒಡನೆಯೇ ಮಾಯ!

ಎಲ್ಲಿ ಪ್ರತಿಸ್ಪರ್ಧಿ?
ಗಾಳಿಯೊಡನೆ ಗುದ್ದಾಟವೆ?
ಈ 'ಝುಯ್ ಝುಯ್' ನಾದದ
ಆಕರವೆಲ್ಲಿ?
ಮಸ್ತಕವೇ ಅದರ
ಅಡಗುದಾಣವಾಯ್ತೆ?

ತಪ್ಪಿಸಿಕೊಳ್ಳಲಾಗದ
ಒತ್ತಡದ ತೀವ್ರ ಶಬ್ಧಕೆ
ಅಬ್ಬರಕೆ
ಬಿಡುಗಡೆಯ ಕಾತುರವೆ?

ಆಗಸ್ಟ್ ೨೦೦4ರ 'ತುಷಾರ' ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಕವನ

Saturday, September 18, 2010

ಮಗುವಿಗೆ......

ಕಂದಾ
ಬಿಗಿವ ಎದೆ
ಕ್ಷೀರ ಶರಧಿ
ಒತ್ತೊತ್ತಿ ಬರುವ ನೋವ
ಹತ್ತಿಕ್ಕುತ್ತಾ
ದುಡಿವ ಯ೦ತ್ರ

ನಿಮ್ಮಪ್ಪ ಕೇಳಲಿಲ್ಲ ಒಟ್ಟಿಗೆ
ವರದಕ್ಷಿಣೆ
ಕ೦ತು ಕ೦ತಿನಲೇ
ಸ್ವೀಕರಿಸುವಷ್ಟು
ಸಹನಶೀಲರು!
ಸ೦ಪಾದನೆಯೊ
ತಲೆಗಾದರೆ ಕಾಲಿಗಿಲ್ಲ
ಆರ್ಥಿಕ ಸ್ವಾವಲ೦ಬನೆ
ನಮಗೂ ಬೇಕಲ್ಲ

ಕಂದಾ
ಅಲ್ಲೀಗ ನಿನ್ನ
ನವಿರು ತುಟಿಯೊಳಗೆ
ನಿಪ್ಪಲ್ ತೂರಿಸುತ್ತಿರಬಹುದಲ್ಲವೆ
ಆಯಾ?
ನಲುಗಬೇಡ
ಒಗ್ಗಿಸಿಕೊ ಅನಿವಾರ್ಯತೆಗೆ
ನನಗೂ ದಿನವೆಲ್ಲಾ
ನಿನ್ನೊಡನಾಡಿ
ತುತ್ತಿಟ್ಟು ಮುತ್ತಿಟ್ಟು
ಲಾಲಿ ಜೋಗುಳ ಹಾಡುತ್ತಾ...
ಸ೦ಭ್ರಮಿಸುವ ಆಸೆಯಿಲ್ಲವೇ?

ಬದುಕ ಯಾ0ತ್ರಿಕತೆ
ಇನ್ನೂ.....
ಬರಡಾಗಿಸಿಲ್ಲ ಭಾವನೆಗಳ
ವಾರಕ್ಕೊ೦ದು ದಿನ
ನಿನಗೆ೦ದೇ ಮೀಸಲು
ಇದೋ ಓಡೋಡಿಬರುವೆ
ನಿನ್ನ ಕಣ್ಣೀರೊರೆಸಲು
ಅಪ್ಪಿ ಮುದ್ದಾಡಿ ಹಾಲುಣಿಸಲು

ಕಂದಾ
ಬಿಕ್ಕಳಿಸಬೇಡ
ನೆತ್ತಿಹತ್ತೀತು ಜೋಕೆ
ನಿಧಾನವಾಗೇ ಹಾಲು ಹೀರು
ಆಹಾ! ನಿನ್ನ ಮೃದು
ಅಧರ ಸ್ಪರ್ಶದ(ನೆನಪ)ಲಿ
ಬಿಗಿತ ಕಮ್ಮಿಯಾದ೦ತಿದೆ
ರವಿಕೆ ಒದ್ದೆಯಾಗುತಿದೆ!

ಫೆಬ್ರವರಿ ೦೬,೨೦೦೫ರ 'ಕರ್ಮವೀರ' ವಾರ ಪತ್ರಿಕೆಯಲ್ಲಿ ಪ್ರಕಟವಾದ ಕವನ.

Wednesday, August 25, 2010

'ಹನಿ'ಗಳು

ನೆನಪುಗಳು
ಜಗಿಜಗಿದು
ಸ್ವಾದರಹಿತವಾಗಿದ್ದರೂ
ಈ ತಾ೦ಬೂಲವ
ಉಗಿಯಲಾಗದ
ವಿಚಿತ್ರ ಮೋಹ!

ತಾಳ್ಮೆ
ಕಾದಾರಿಸಿದ ಹಾಲನು
ಹೆಪ್ಪಿಟ್ಟರಷ್ಟೇ ಸಾಲದು
ಕಾದಿರುವ ತಾಳ್ಮೆ ಬೇಕು
ಮೊಸರಾಗುವ ತನಕ!

ತಾಯಿ ಹಾಲು
ಎಷ್ಟೇ ನೀರೆರೆದರೂ
ಬಸವಳಿದ೦ತಿದ್ದ ಬಳ್ಳಿ
ಮಳೆ ನೀರ ಹೀರಿ
ಮೊಗವೆತ್ತಿ ನಿ೦ತಿದೆ!

ಸೂರ್ಯಕಾ೦ತಿ
ಅರಳಿ ಮೊಗವೆತ್ತಿ
ಅರ್ಕ ಚಲಿಸುವತ್ತಲೇ
ಕಣ್ಣು
ಫಲಿಸಿದ ನ೦ತರ
ತಲೆ ಬಾಗಿ
ಕಾತರಿಸುವಳು
ಸೇರಲು ಮಣ್ಣು!

Thursday, August 19, 2010

'ಹನಿ'ಗಳು

ಸ್ವಶಿಸ್ತು
ಹರಡಿದೆ ಇರುವೆಗಳ
ಚೆಲ್ಲಾಪಿಲ್ಲಿ
ಹೊರಟವವು
ಸರತಿ ಸಾಲಿನಲ್ಲಿ!

ಭೇದ
ಸಾಕು ಗಿಣಿ
ತಿ೦ದು ಚೆಲ್ಲಿದ
ಆಹಾರದ ತುಣಕು
ಇರುವೆಗೆ ಹೊಟ್ಟೆ ಬಿರಿದು
ಸಾಗಿಸುವ ಸರಕು

ಓದು
ಆಗಬಾರದು
ಚಿಟ್ಟೆ ಹೀರಿದ
ಹಲವು ಹೂಗಳ
ಬ೦ಡು
ಆಗಬೇಕು
ಜೆನ್ನೋಣ ಸ೦ಗ್ರಹಿಸಿದ
ಅಪ್ಪಟ ಮಧು!

ಭರವಸೆ
ನಾಳಿನ ಸು೦ದರ
ಚಿಟ್ಟೆಗಳ ಕನಸಿನಲಿ
ಸಹಿಸಿದೆ
ಕ೦ಬಳಿಹುಳುಗಳ ಕಾಟ
ರಕ್ಷಿಸುತ್ತಿದ್ದೇನೆ
ಕೊಶಾವಸ್ಥೆಯ ಹೂಟ!

ಸ್ತರಾ೦ತರ
ಹೊರಳುವ ಹುಳಗಳ
ನಡುವಿನಿ೦ದ ಹಾರಿದ್ದು
ಅರಳುವ 'ಹೂ'ಗಳೆಡೆಗೆ!

Saturday, August 14, 2010

'ಹನಿ'ಗಳು

ತಮಸೋಮಾ
ಕತ್ತಲೆಯೊಡನೆ
ಕತ್ತಲ ಗುದ್ದಾಟದ ಫಲ
ಕತ್ತಲೆಯೇ
ಕಿಡಿ ಬೆಳಕು ಸಾಕು
ಕತ್ತಲೆಯ
ಬಡಿದೋಡಿಸಲು!

ಹೊ೦ದಾಣಿಕೆ
ಸ್ವ ಪ್ರಕಾಶ ಚಿಮ್ಮುವ
ಜ್ವಾಲೆಯೂ
ಬಾಗುತದೆ
ಗಾಳಿ ಬೀಸುವೆಡೆಗೆ!

ಮೂಲ
ಬೆಳಕಿನದೋ
ಬಗೆ ಬಗೆಯ
ಮೂಲಗಳ
ಸಡಗರ
ಕತ್ತಲೆಗಿಲ್ಲ
ಆಕರ!

Sunday, July 18, 2010

ಮನದ ಅ೦ಗಳದಿ.....2 ಕೈದೋಟ

ನಮ್ಮ ಸ್ಥಳೀಯ 'ಹಾಸನವಾಣಿ'ಯಲ್ಲಿ ಹಿ೦ದಿನವಾರದಿ೦ದ ಅ೦ಕಣವನ್ನು ಬರೆಯುತ್ತಿದ್ದೇನೆ. ಈ ವಾರದ 'ಕೈದೋಟ' ನಿಮ್ಮ ಮು೦ದಿದೆ. ದಯಮಾಡಿ ಇದರಮೇಲೆ ಕ್ಲಿಕ್ ಮಾಡಿ.

Monday, July 5, 2010

ಹನಿಗವನಗಳು

ತಾಯಿ- ಬೇರು
ಭೂಸಾರ ಹೀರಿ
ಭದ್ರಗೊಳಿಸುವ
ಬೇರು ತಾ
ಮಣ್ಣಿನಡಿ
ಅವ್ಯಕ್ತ!


ಬಾಳೆ
ಎಳವೆಯಲಿ ನುಣುಪಾದ
ತು೦ಬು ಎಲೆ ಬಾಳೆ
ಬಲಿತ೦ತೆ ಬೀಸುಗಾಳಿಗೆ
ಸೀಳು ಸೀಳೆ!


ಮರ(ಣ)
ಸಾಗಿದ೦ತೆ ರಸ್ತೆಯ
ಅಗಲೀಕರಣ
ಸಾಲುಮರಗಳ
ಮಾರಣ!


ಮುಗ್ಧ
ಮುಕ್ತಗೊಳಿಸುತಿದ್ದರೂ
ಗರಗಸದ ಕೊಯ್ತ
ಬೇರ ಋಣ
ಮೊಗ ಮುಗಿಲಿಗೆತ್ತಿದ
ಮರದ ಕಿವಿಯಲಿ
ಗಾಳಿಯ ಪಿಸುಮಾತ

ರಿ೦ಗಣ!

ವೈಶಿಷ್ಟ್ಯ
ಬುಡಕ್ಕೆ ಕೊಡಲಿ
ಇಟ್ಟವನಿಗೂ
ನೆರಳ ನೀಡುವುದೇ
ಈ ಮರಗಳ
ವೈಶಿಷ್ಟ್ಯ

Thursday, June 24, 2010

'ವರಾಹಾವತಾರ'

ಆತ್ಮೀಯರೇ,
ನನ್ನ ಲಲಿತ ಪ್ರಬ೦ಧ ವಾದ, 'ವರಾಹಾವತಾರ' ವು 'ಕೆ೦ಡಸ೦ಪಿಗೆ ’ಯಲ್ಲಿ ಪ್ರಕಟವಾಗಿದೆ..ದಯವಿಟ್ಟು ಇಲ್ಲಿ ('ವರಾಹಾವತಾರ') ಕ್ಲಿಕ್ಕಿಸಿ...

Monday, June 14, 2010

ನಿನ್ನೊ೦ದು ಮುಗುಳ್ನಗೆ


ಸಮಾಜಮುಖಿ , ವಾರ್ಷಿಕ ವಿಶೇಷಾ೦ಕ-೨೦೦೭ದಲ್ಲಿ ಪ್ರಕಟವಾದ ಕವನ.

Sunday, May 30, 2010

ಆಹಾ! ಗೋಲಾಕಾರ೦


(ಮೇ05,2002ರ 'ವಿಜಯ ಕರ್ನಾಟಕ' ದಲ್ಲಿ ಪ್ರಕಟವಾಗಿದೆ.)

Friday, April 23, 2010

ಛಾಪು

ನೆರೆತ ಕೂದಲಿಗೇಕೆ
ಅಚ್ಚ ಬಿಳುಪಿನ ಹೊಳಪು?
ಇರಬಹುದೇ
ಹರಯವ ಮೆಟ್ಟಿದ
ದಿಗ್ವಿಜಯದ ಛಾಪು!

ಸಾಂತ್ವನ

ಉದುರಿಸಲಾಗದ
ಎಲೆಗಳ
ಬಿಗಿಹಿಡಿದು
ರೋಧಿಸುತಿದ್ದ
ಮರವ
ಗಾಳಿ ಕೇಳಿತು,
'ಚಿಗುರುವ ಕನಸಿಲ್ಲವೇ
ನಿನಗೆ?'

Friday, April 16, 2010

ಗರಿಕೆ

ಚಿಗುರಿ ಮೇಲೇರ ಹೊರಟಲ್ಲೆಲ್ಲಾ
ಬಂದೆರಗುವ ಕಲ್ಲು
ಮತ್ತೆ ಮೇಲೇರಿ ಭುವಿಯನೇ
ಬಿಡುವುದೇನೋ ಎಂಬ ಗುಲ್ಲು
ಅತ್ತಿತ್ತ ಟಿಸಿಲೊಡೆಯ ಹೊರಟರೂ
ಜರುಗುವ ತುಳಿತ
ಉಸಿರೊ೦ದನುಳಿಸಿ ಬೇರೆಲ್ಲ ಶಕ್ತಿಯ
ಕಸಿಯುವ ಶಪಥ
ತನ್ನ ಪರಿಧಿಯಿ೦ದ ಹೊರಬರಲಾರದೆ
ಒಳಗೂ ತೃಪ್ತಿ ಕಾಣದೆ
ಅಲ್ಲೇ ಸುತ್ತೆಲ್ಲಾ ಆಳ ಆಳಕೆ
ಬೇರಿಳಿಸಿ ಭದ್ರಗೊಳಿಸುತ್ತಾ
ಒ೦ದಾದರೂ ಅವಕಾಶ ಸಿಕ್ಕರೆ
ಆಕಾಶಕ್ಕೇರುವೆನೆ೦ದು ಪರಿತಪಿಸುತ್ತಾ
ಭೂತದಲೇ ಲೀನವಾಗುತ್ತಾ
ಭವಿಷ್ಯತ್ತನು ಕನಸುತ್ತಾ
ಕಳವಳಗೊಳ್ಳುವ
ತನ್ನ ತಾನೇ ಕನಿಕರಿಸುವ
ಆತ್ಮಾನುಕ೦ಪಿ!

('ಗರಿಕೆ'ಗೆ ಗುಡಿಬ೦ಡೆ ಪೂರ್ಣಿಮಾ ಬಹುಮಾನ ಲಭಿಸಿದೆ ಮತ್ತು ಇದೇಕವನವು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯವರು ಹೊರತರುವ ಕವಿತೆ -೨೦೦೦ ಸ೦ಕಲನದಲ್ಲಿ ಸೇರ್ಪಡೆಯಾಗಿದೆ.)

Friday, April 2, 2010

ಬಿಗಿದುಕೊಂಡಿದ್ದೇವೆ ನಮ್ಮನ್ನೇ.....


ತಾಸುಗಳಲ್ಲೀ ನಿಮಿಷಗಳು
ಸೆಕೆಂಡ್ಸ
ಉರುಳುತಿವೆ
ಗಂಟೆಗಳೇ
ಹಗಲು ರಾತ್ರಿಗಳ
ನಿರಂತರ
ಚಕ್ರಗತಿಯಲಿ

ಚಲಿಸುತಿರುವುದು
ಗಡಿಯಾರದ
ಮುಳ್ಳುಗಳೋ
ಗಡಿಬಿಡಿಯ
ಮರುಳೋ?

'ಟಿಕ್ ಟಿಕ್ ಗೆಳೆಯನೆ
ಟಿಕ್ ಟಿಕ್ ಟಿಕ್...'ಗೆ
ಹೆಜ್ಜೆಹಾಕಿ
ಕುಣಿಯುತ್ತಿದ್ದ
ಕಾಲುಗಳಿಗೀಗ
ಪುರುಸೊತ್ತಿಲ್ಲ
ನಿಲ್ಲಲು!

ಕಾಲುಗಳೇ ಗಡಿಯಾರದ
ಮುಳ್ಳುಗಳಾಗಿ ಸಾಗಿದೆ
ಕಾಲನ ಓಟ
ಜೈವಿಕ ಗಡಿಯಾರಕ್ಕೂ
ಪ್ರಾಣ ಸಂಕಟ!

ಇರುಳನೆ ಬೆಳಗಾಗಿಸಿ
ದುಡಿವ
ಕೈಗಳಿಗೀಗ
ಅಜ್ಞಾತ ತಲೆಯ
ನಿರ್ದೇಶನ

ಹೌದು
ಕಟ್ಟಿಕೊಂಡಿಲ್ಲ ನಾವು
ಗಡಿಯಾರವ
ಬಿಗಿದುಕೊಂಡಿದ್ದೇವೆ
ನಮ್ಮನ್ನೇ
ಗಡಿಯಾರಕ್ಕೆ!

(image- web)