Saturday, October 30, 2010

ಮನದ ಅ೦ಗಳದಿ.................೧೫.`ಅನ್ನ'

ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯೂ ಬದುಕುಳಿಯಲು ಬೇಕಾದ ಪ್ರಾಥಮಿಕ ಅಗತ್ಯಗಳಲ್ಲಿ ’ಅನ್ನ’ ಎಂದರೆ ಆಹಾರವೂ ಒಂದು. ಸಾಮಾನ್ಯವಾಗಿ ಸಸ್ಯಗಳಾದರೆ ಪ್ರಕೃತಿಯಲ್ಲಿನ ಅಜೈವಿಕಗಳನ್ನೇ ಬಳಸಿಕೊಂಡು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ. ಸಸ್ಯಗಳನ್ನೋ ಅಥವಾ ತಮಗಿಂತಾ ದುರ್ಬಲ ಪ್ರಾಣಿಗಳನ್ನೋ ಅವಲಂಭಿಸಬೇಕಾದದ್ದು ಪ್ರಾಣಿಜಗತ್ತಿನ ಅನಿವಾರ್ಯವಾಗಿದೆ. ಎಷ್ಟೋಸಾರಿ ನಾವೂ ಸಸ್ಯಗಳಂತೆಯೇ ಸ್ವಪರಿಪೋಷಕಗಳಾಗಿದ್ದರೆ ಆಹಾರಕ್ಕಾಗಿ ಇತರ ಜೀವಿಗಳನ್ನು ಹಿಂಸಿಸುವುದು ತಪ್ಪುತ್ತಿತ್ತಲ್ಲಾ ಎನಿಸುವುದೂ ಇದೆ. ಸುಪ್ರಸಿದ್ಧ ಸಾಹಿತಿಯಾದ ಖಲೀಲ್ ಗಿಬ್ರಾನ್ ಅವರ ‘ಪ್ರವಾದಿ’ಯಲ್ಲಿ ‘ಮಹಾ ಪ್ರಸ್ಥಾನ’ಕ್ಕೆ ಹೊರಟ ಪ್ರವಾದಿಯಾದ ಆಲ್ ಮುಸ್ತಾಫಾನನ್ನು ಆರ್ಸಿಲಿಸ್ ಜನಗಳು ಜನನ-ಮರಣದ ನಡುವಿನ ಈ ಜೀವನದ ದರ್ಶನದ ಬಗ್ಗೆ ನಿನ್ನ ಅನುಭವವನ್ನುನಮಗೆ ತಿಳಿಸು ಎಂದು ಕೇಳುತ್ತಾರೆ......
‘ಅನ್ನಪಾನ’ದ ಬಗ್ಗೆ ಹೇಳಿ ಎಂದು ಊಟದ ಮನೆಯನ್ನು ಇಟ್ಟಂಥ ಒಬ್ಬ ವೃದ್ದ ಕೇಳಿದಾಗ ಹೀಗೆ ಹೇಳುತ್ತಾನೆ,
‘ವಾಯು ಜೀವಿಲತೆಯಂತೆ ನಿಮಗೂ ಭೂಗಂಧವನ್ನೀಂಟಿ ಮತ್ತು ಬೆಳಕ ಕದಿರುಗಳನ್ನು ಸೇವಿಸಿ ಬದುಕ ಬರುವಂತಿದ್ದರೆ ಎಷ್ಟು ಚೆನ್ನಾಗುತ್ತಿತ್ತು.
ಆದರೆ ತಿನ್ನಲು ಹಿಂಸೆ ಮಾಡುವ ಹೊರತು ಮತ್ತು ಕುಡಿಯಲು ಎಳೆಗರುವನ್ನು ತಾಯ ಮೊಲೆ ಬಿಡಿಸಿ ಹಿಂಡಿಕೊಳ್ಳುವ ಹೊರತು ಗತ್ಯಂತರವಿಲ್ಲ. ಆದುದರಿಂದ ನಿಮ್ಮ ಅನ್ನಪಾನಗಳು ಯಜ್ಞಾರ್ಥವಾಗಿ ಆಗಲಿ.
ನಿಮ್ಮ ಅಡುಗೆ ಮನೆ ಯಜ್ಞವೇದಿಕೆಯಾಗಲಿ. ಗಿರಿವನಗಳ ಶುದ್ಧ ಹಾಗೂ ನಿಷ್ಪಾಪ ಪ್ರಾಣಿಗಳ ಹವನವು ಮಾನವನಲ್ಲಿಯ ಇನ್ನೂ ಹೆಚ್ಚಿನ ಶುದ್ಧ ಮತ್ತು ಹೆಚ್ಚಿನ ನಿಷ್ಪಾಪ ತತ್ವದ ಬಗ್ಗೆ ಮಾತ್ರ ಹವನಿಸಲಿ.....
ಒಂದು ಹಣ್ಣನ್ನು ನೀವು ಬಾಯಿಯಲ್ಲಿ ಕಚ್ಚಿ ರಸ ಹೀರುತ್ತಿರುವಾಗ ನಿಮ್ಮ ಮನದಲ್ಲಿಯೇ ಅದಕ್ಕೆ ಹೀಗೆನ್ನಿರಿ;
ನಿನ್ನ ಬೀಜವು ನನ್ನ ದೇಹದಲ್ಲಿ ಜೀವಿಸುವುದು,
ನಿನ್ನ ನಾಳಿನ ಮೊಗ್ಗುಗಳು ನನ್ನ ಹೃದಯದಲ್ಲಿ ಅರಳುವುವು.
ನಿನ್ನ ಸುಗಂಧವು ನನ್ನ ಉಸಿರಾಗುವುದು,
ಹಾಗೂ ಎಲ್ಲ ಋತುಗಳಲ್ಲಿಯೂ ನಾವಿಬ್ಬರೂ ಕೂಡಿಯೇ ಆನಂದಿಸುವೆವು........
ಶರತ್ಕಾಲದಲ್ಲಿ ನಿಮ್ಮ ದ್ರಾಕ್ಷಾವನದಿಂದ ದ್ರಾಕ್ಷಿಹಣ್ಣುಗಳನ್ನು ಮಧುಚಕ್ರದಲ್ಲಿ ಹಾಕಿ ಹಿಂಡಬೇಕಾದಾಗ ನಿಮ್ಮ ಮನದಲ್ಲಿಯೇ ಅದಕ್ಕೆ ಹೀಗೆನ್ನಿರಿ;
ನಾನೂ ಒಂದು ದ್ರಾಕ್ಷಾವನವೇ, ನನ್ನ ಫಲಗಳೂ ಮಧುಚಕ್ರಕ್ಕಾಗಿ ಶೇಕರಿಸಲ್ಪಡುವುವು. ಹೊಸ ಮಧುವಿನಂತೆ ನಾನೂ ಚಿರಂತನ ಪಾತ್ರೆಗಳಲ್ಲಿ ಇಡಲ್ಪಡುವೆನು. ಛಳಿಗಾಲದಲ್ಲಿ ಮಧುಪಾತ್ರೆಯನ್ನು ಬಗ್ಗಿಸಿ ನೀವು ಮಧುವನ್ನುತುಂಬಿಕೊಳ್ಳುತ್ತಿರುವಾಗ ಪ್ರತಿಯೊಂದು ಬಟ್ಟಲು ಮಧುವಿಗೂ ನಿಮ್ಮ ಹೃದಯದಲ್ಲಿ ಒಂದೊಂದು ಹಾಡು ಇರಲಿ. ಆ ಹಾಡಿನಲ್ಲಿ ಶಿಶಿರ ಋತುವಿನ ದಿನಗಳ, ದ್ರಾಕ್ಷಾವನದ ಹಾಗೂ ದ್ರಾಕ್ಷಾರಸ ಚಕ್ರದ ನೆನಹು ನಿನದಿಸುತ್ತಿರಲಿ.’
ಮಾನವರಾದ ನಾವೂ ಇತರ ಜೈವಿಕ ಅಜೈವಿಕಗಳಂತೆಯೇ ಪ್ರಕೃತಿಯ ಒಂದು ಅಂಶವಾಗಿದ್ದೇವೆ. ಆದರೆ ಅದನ್ನು ಮರೆತು ಪ್ರಕೃತಿಯಲ್ಲಿರುವ ಎಲ್ಲವೂ ನಮಗಾಗೇ ಸೃಷ್ಟಿಸಲ್ಪಟ್ಟಿದ್ದು ಎಂಬ ಧೋರಣೆಯಲ್ಲಿ ನಮ್ಮ ಸಹ ಅಂಶಗಳ ಮೇಲೇ ದುರಾಕ್ರಮಣ ನಡೆಸುತ್ತಿದ್ದೇವೆ. ವಿಶೇಷವಾಗಿ ‘ಆಹಾರ’ಕ್ಕಾಗಿ ಎನ್ನುವುದಕ್ಕಿಂತ ಹೆಚ್ಚಾಗಿ ‘ಬಾಯಿಚಪಲ’ಕ್ಕಾಗಿ ಇತರ ಜೀವಿಗಳನ್ನು ನಿಷ್ಕರುಣೆಯಿಂದ, ನಿರ್ದಾಕ್ಷಿಣ್ಯವಾಗಿ, ನಿರ್ನಾಮಗೈಯುತ್ತಿದ್ದೇವೆ. ಒಮ್ಮೆ ನೆನಪುಮಾಡಿಕೊಂಡರೆ ನಮ್ಮ ಹಿರಿಯರು ಪ್ರಕೃತಿಯ ಬಗ್ಗೆ ಎಂಥಾ ಗೌರವವನ್ನು ಹೊಂದಿದ್ದರು ಎನ್ನುವುದು ಅರ್ಥವಾಗುತ್ತದೆ. ಧಾನ್ಯಗಳನ್ನು ಕೊಡುವ ಸಸ್ಯಗಳನ್ನು, ಹಣ್ಣುಕೊಡುವ ಮರಗಳನ್ನು, ಹಾಲುಕೊಡುವ ಗೋವನ್ನು...ಎಲ್ಲವನ್ನೂ ಪೂಜಿಸಿ ತಮ್ಮ ಕೃತಜ್ಞತೆಯನ್ನು ತೋರಿಸುತ್ತಿದ್ದರು. ಈಗ ಮರಗಳನ್ನು ಅನಿಯಂತ್ರಿತವಾಗಿ ಉರುಳಿಸುತ್ತಿದ್ದೇವೆ, ಗೋವನ್ನು ಹಾಲುಕೊಡುವ ಯಂತ್ರವಾಗಿಸಿಕೊಂಡು ಸಾಲದು ಎಂಬಂತೆ ಅದೇ ಅನಿವಾರ್ಯ ಆಹಾರವೆನ್ನುವಂತೆ ಬಿಂಬಿಸಹೊರಟಿದ್ದೇವೆ! ‘ರುಚಿ’ಯ ಬೆನ್ನು ಹಿಡಿದಿರುವ ನಾವು ಮನುಷ್ಯ ಮನುಷ್ಯನನ್ನೇತಿನ್ನುವ ಮಟ್ಟವನ್ನೂ ತಲುಪುವ ಕಾಲವೇನೂ ದೂರವಿಲ್ಲವೆನಿಸುತ್ತದೆ. ಈಗ ಪರೋಕ್ಷವಾಗಿ ಮತ್ತೊಬ್ಬರ ಅನ್ನವನ್ನು ಕಸಿದು ತಿನ್ನುವುದು ನಡೆಯುತ್ತಲೇ ಇದೆ.
‘ಅನ್ನವನ್ನು ಉಣ್ಣುವಾಗ ಕೇಳ್, ಅದನ್ನು ಬೇಯಿಸಿದ ನೀರು ನಿನ್ನ ಶ್ರಮದ ಬೆವರೊ ಅಥವಾ ಅನ್ಯರ ಕಣ್ಣೀರೊ?’
ಈ ಸೂಕ್ತಿಯನ್ನು ಗಮನಿಸಿದಾಗ ಇದು ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲರೂ ತಮ್ಮನ್ನು ತಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಎನಿಸುತ್ತದೆ. ತನ್ನ ಪ್ರಾಮಾಣಿಕ ದುಡಿಮೆಯಿಂದ ಗಳಿಸಿದ ‘ಅನ್ನ’ಕ್ಕಿರುವ ಮೌಲ್ಯ ಅಪಾರವಾದುದು. ಹಿಂದಿನ ಕೆಲವು ವ್ಯಕ್ತಿಗಳು ಪರಾನ್ನ ಭೋಜನವನ್ನು ಸೇವಿಸದೇ ಇರುತ್ತಿದ್ದುದಕ್ಕೆ ಇದೂ ಒಂದು ಕಾರಣವಾಗಿರಲೂ ಬಹುದು.
‘ಅನ್ನ ಪರಬ್ರಹ್ಮ ಸ್ವರೂಪ’ ಎಂದು ನಮ್ಮ ತಂದೆ ಹೇಳುತ್ತಿದ್ದರು. ‘ತುತ್ತು ಅನ್ನ ತೂಕ ಕೆಡಿಸಿತು’ ಎಂದು ನಮ್ಮ ಅವಿಭಕ್ತ ಕುಟುಂಬದ ಸದಸ್ಯರಾದ ಸೋದರತ್ತೆ ಪದೇಪದೇ ಹೇಳುತ್ತಿದ್ದರು. ಆಗ ನನಗೆ ಆ ಮಾತುಗಳ ಅಂತರಾರ್ಥದ ಅರಿವಾಗುತ್ತಲಿರಲಿಲ್ಲ. ಅನಗತ್ಯವಾಗಿ ಮತ್ತೊಬ್ಬರ ಮನೆಗೆ ಹೋಗಿ ತೊಂದರೆ ಕೊಡಬಾರದು ಎಂದಷ್ಟೇ ತಿಳಿದಿದ್ದೆ. ಪ್ರತಿಯೊಂದು ಜೀವಿಗೂ ತನ್ನದೇ ಆದ ಪಥವಿದೆ. ಅದು ಪ್ರಕೃತಿಯ ನಿಯಮದಂತೆ ತನ್ನ ಪಾಲಿನ ಆಹಾರವನ್ನು ಸೇವಿಸಿಕೊಂಡು ತನ್ನ ಪಾಡಿಗೆ ತಾನಿರುತ್ತದೆ. ಅದಕ್ಕೇ ಇರಬಹುದು, ‘ಹುಲಿ ಹುಲ್ಲು ತಿನ್ನಲ್ಲ’, ಎನ್ನುತ್ತಾರೆ. ಆಹಾರ ಸರಪಳಿಯಂತೆ ಒಂದು ಜೀವಿಯನ್ನು ಮತ್ತೊಂದು ತಿಂದು ಬದುಕುತ್ತಿದ್ದರೂ ಪ್ರಕೃತ್ತಿ ತನ್ನ ಸಮತೋಲನವನ್ನು ತಾನು ಕಾಯ್ದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಮಾನವರಾದ ನಾವು ನಮ್ಮ ಪಥದಲ್ಲಿರುವ ಆಹಾರ ಕ್ರಮವನ್ನು ಮೀರಿ ಇತರ ಎಲ್ಲಾ ಜೀವಿಗಳ ಪಥಗಳಿಗೂ ಅತಿಕ್ರಮಣ ಪ್ರವೇಶ ಮಾಡಿ ನಮ್ಮ ಚಪಲ ಹಾಗೂ ವೈಭೋಗಕ್ಕಾಗಿ ಅವುಗಳನ್ನು ನಿರ್ನಾಮ ಮಾಡುತ್ತಿದ್ದೇವೆ. ಈಗಿನ ಪರಿಸ್ಥಿತಿಯಲ್ಲಿ ‘ಮಾನವರಾದ ನಾವು’ ಎನ್ನುವುದನ್ನು ಒತ್ತಿ ಹೇಳಬೇಕಿದೆ. ಏಕೆಂದರೆ ‘ಮಾನವತ್ವ ಇನ್ನೂ ನಮ್ಮಲ್ಲಿ ಉಳಿದಿದೆಯೇ?’ ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುವಂತಾಗಿದೆ.
ಅನ್ನವನು ಇಕ್ಕುವುದು, ನನ್ನಿಯನು ನುಡಿಯುವುದು
ತನ್ನಂತೆ ಪರರ ಬಗೆದೊಡೆ ಕೈಲಾಸ
ಬಿನ್ನಾಣವಕ್ಕು ಸರ್ವಜ್ಞ.
ಸರ್ವಜ್ಞರ ಈ ವಚನ ಎಷ್ಟೊಂದು ಅರ್ಥಪೂರ್ಣವಾಗಿದೆ. ಹೃದಯ ಪೂರ್ವಕವಾಗಿ ಕರೆದು ಆದರಿಸಿ ಉಣ್ಣಲಿಟ್ಟಾಗ ಆ ಆತಿಥ್ಯ ಸ್ವೀಕಾರ ಯೋಗ್ಯವಾಗಿರುತ್ತದೆ. ಆದರೆ ಒತ್ತಾಯದಿಂದಲೋ, ಅನಿವಾರ್ಯವಾಗಿಯೋ ನೊಂದುಕೊಂಡು ಊಟವಿಕ್ಕುವ ಸ್ಥಿತಿಯನ್ನು ಉಂಟುಮಾಡಬಾರದಲ್ಲವೆ?

Thursday, October 28, 2010

ಮನದ ಅ೦ಗಳದಿ........೧೪.ಓದು

ದಯಮಾಡಿ ಇದರ ಮೇಲೆ ಡಬಲ್ ಕ್ಲಿಕ್ ಮಾಡಿ ಓದಿರಿ.

Saturday, October 23, 2010

ಲಸನ್ ಮಂದಹಾಸ.....

`............ಮಂದಹಾಸ ಪ್ರಭಾ ವಕ್ರ ತುಂಡ
ಚಲತ್ ಚಂಚಲ...................................'
ನಿದ್ದೆಯ ಮಂಪರಿನಲ್ಲೇ ದಿನದ ಪ್ರಾರಂಭಕ್ಕಾಗಿ ಮನಸ್ಸನ್ನು ಅಣಿಗೊಳಿಸಿಕೊಳ್ಳುವ ವೇಳೆಯಲ್ಲಿ ಆಕಾಶವಾಣಿಯಿ೦ದ ತೇಲಿಬರುತ್ತಿದ್ದ ಈ ಸಾಲುಗಳು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿದ್ದವು. ಬೆಳಗಾದದ್ದನ್ನು ಸಾರುತ್ತಿದ್ದುದೇ ಅಮ್ಮ ಪ್ರತಿದಿನ ತಪ್ಪದಂತೆ ಹಾಕುತ್ತಿದ್ದ ಆಕಾಶವಾಣಿಯ ಗೀತಾರಾಧನಾ ಕಾರ್ಯಕ್ರಮ. ಅಮ್ಮ ವೇಳೆ ತಿಳಿಯಲು ಗಡಿಯಾರ ನೋಡುತ್ತಿದ್ದುದೇ ಅಪರೂಪ. `ಆಗಲೇ ಚಿಂತನ ಬರ್‍ತಿದೆ ಇನ್ನೂ ಎಲ್ಲರಿಗೂ ಕಾಫಿ ಆಗಿಲ್ಲ', 'ವಾರ್ತೆ ಬರೋ ಹೊತ್ತಿಗಾದರೂ ಹಾಲು ಕರೆದಿರಬೇಕು', ಎಂದು ಸ್ವಗತ ಸಂಭಾಷಣೆಗಳಲ್ಲಿ ಕಾರ್ಯಪ್ರವೃತ್ತರಾಗುತ್ತಿದ್ದರು. ಈ ಶಾರದಾ ಭುಜಂಗ ಸ್ತೋತ್ರದಲ್ಲಿ 'ಪಿ.ಬಿ'(ಅಮ್ಮ ತನ್ನ ಮೆಚ್ಚಿನ ಗಾಯಕರನ್ನು 'ಪಿ.ಬಿ'., 'ಎಸ್.ಪಿ', ಎಂದೇ ಹ್ರಸ್ವವಾಗಿ ಕರೆಯುತ್ತಿದ್ದುದು ನಮಗೂ ರೂಢಿಯಾಗಿತ್ತು.) 'ಪ್ರಭಾ'ಎಂದು ಉಚ್ಛರಿಸುತ್ತಿದ್ದ ಘನ ಘಂಭೀರ ಧನಿಗೆ ನಾನು ಬಹಳವಾಗಿ ಮನಸೋತಿದ್ದೆ! ಇದೇ ಗುಂಗಿನಲ್ಲಿ ಬೆಳೆದ ನಾನು ಮುಂದೆ ಇಂತಹದೇ ಕರೆಯನ್ನು ನನ್ನ ಪತಿಯಿಂದ ನಿರೀಕ್ಷಿಸಿದ್ದು ನನಗೆ ಕಿರಿಕಿರಿಯೇ ಆಗುವಂತಾಯ್ತು. ಅವರಿಗೆ ಈ ರೀತಿ ಸಂಭೋದನಾ ಚತುರತೆಯೇ ಸಿದ್ಧಿಸಿರಲಿಲ್ಲ. ಅವರ 'ಮೆಗಾ' ಕುಟುಂಬದಲ್ಲಿ ಎಲ್ಲರೂ ಈ ಎಲ್ಲಾ ಚಾತುರ್ಯವನ್ನೂ ತಮ್ಮ ಹಿರಿಯಣ್ಣನಿಗೇ ಮೀಸಲಿಟ್ಟಂತಿದ್ದರು. ಮೊದಲ ಸಾರಿ ಅವರ ಮನೆಗೆ ಹೋದಾಗ ಪೂಜೆಗೆ ಕುಳಿತಿದ್ದ ಹಿರಿಯಣ್ಣ ನಿಮಿಷಕ್ಕೊಮ್ಮೆ 'ಲಲಿತಾ..., ಲಲಿತಾ...'ಎಂದು ಕೂಗುವುದನ್ನು ಕೇಳಿ ನಮ್ಮ ಸಂಬಂಧಿಯೊಬ್ಬರು 'ಇದೇನು ಲಲಿತಾ ಸಹಸ್ರನಾಮ ಮಾಡುತ್ತಿದ್ದಾರೆಯೇ?' ಎಂದು ಕೇಳಿದ್ದರು!
ಮೊದಲ ಭಾರಿಗೆ ಇವರೊಡನೆ ಹೊಟೆಲ್‌ಗೆ ಹೋದದ್ದನ್ನು ಮರೆಯುವಂತೆಯೇ ಇಲ್ಲ. ಕುಳಿತ ತಕ್ಷಣವೇ ಇವರು ಮಾಣಿ ಪ್ರವರ ಒಪ್ಪಿಸುವುದನ್ನೂ ಕಾಯದೇ ಅಥವಾ ಮುಖ್ಯವಾಗಿ ನನ್ನನ್ನೂ ಕೇಳದೇ ಮಸಾಲೆ ದೋಸೆಗೆ ಆರ್ಡರ್ ಮಾಡಿದಾಗ ಇವರು ಪರ(ಪರಸ್ತ್ರೀ)ಇಂಗಿತ ಪ್ರಜ್ಷರಂತೆಯೇ ಕಂಡಿದ್ದರು. ತಟ್ಟೆಗಳಲ್ಲಿ ಹಾಯಾಗಿ ಪವಡಿಸಿದ ದೋಸೆಯುಕ್ತ ಪ್ಲೇಟ್‌ಗಳು ಟೇಬಲ್ ಮೇಲೆ ಹಾಜರಾದ ತಕ್ಷಣವೇ ಗರಿಗರಿ ದೋಸೆಯ ಅಂತರಂಗವನ್ನು ಬಗೆದ (ಹಿರಣ್ಯಕಷ್ಯಪನ ಉದರವನ್ನು ಸೀಳಿದ ಸಾಕ್ಷಾತ್ ನರಸಿಂಹಾವತಾರವೇ ಮೂರ್ತಿವೆತ್ತಂತೆ!) ಇವರು ಹೇಳದೇ ಕೇಳದೇ ಎದ್ದು ಹೊರನಡೆದೇ ಬಿಟ್ಟರು. ಇನ್ನೇನು ಬರಬಹುದು ಎಂದು ಮುರಿದ ದೋಸೆಯ ತುಂಡನ್ನು ಕೈಯಲ್ಲಿ ಹಿಡಿದಿದ್ದ ನಾನು 'ಕೈಯೊಳಗೇತಕೆ ಬಾಯೊಳಗಿದ್ದರೆ ಆಗದೆ ಮರಿಕಪಿಯೊಂದಾಗ ' ಎಂದ ಮನದ ಮಾತನ್ನು ಪುಷ್ಠೀಕರಿಸಿ ಮೆಲ್ಲ ಮೆಲ್ಲನೆ ಮೆಲ್ಲುತ್ತಾ ಹಿಂತಿರುಗಿ ನೋಡಿದಾಗ ಕೌಂಟರ್‌ನಲ್ಲಿ ಹಣ ನೀಡಿ ಹೊರನಡೆಯುತ್ತಿದ್ದ ಇವರನ್ನು ಕಂಡು ರಸಭಂಗವಾದಂತೆ ತಿನ್ನುವುದನ್ನು ಅಷ್ಟಕ್ಕೇ ಬಿಟ್ಟು ಒಲ್ಲದ ಮನಸ್ಸಿನಿಂದಲೇ ಹೊರ ಬಂದಿದ್ದೆ. ನಂತರವೇ ತಿಳಿದದ್ದು ಆ ದೋಸೆಗೆ ಬಳಿದಿದ್ದ ಕೆಂಪು ಚಟ್ನಿಗೆ ಬೆಳ್ಳುಳ್ಳಿ ಹಾಕಿದ್ದರು ಎಂದು!
ಈರುಳ್ಳಿಗೇ ವಾರದಲ್ಲಿ ಮೂರುದಿನ ನಿಷಿದ್ಧವಿದ್ದ ನಮ್ಮ ಮನೆಯಲ್ಲಿ ಅಡುಗೆಯ ಮನೆಯ ಸಾಮ್ರಾಜ್ಞಿ ಅಮ್ಮ ಬೆಳ್ಳುಳ್ಳಿಯನ್ನು ಬಳಸುತ್ತಲೇ ಇರಲಿಲ್ಲ. ಆದರೂ ಆ ವಿಶಿಷ್ಟ ಘಾಟು ವಾಸನಾಯುಕ್ತ ತೀವ್ರ ರುಚಿಯ ಬಗ್ಗೆ ನಮಗೆ ಏನೋ ವಿಚಿತ್ರ ಮೋಹ. ಅಟ್ಟಲು ಗದ್ದೆ ಸಮಯದಲ್ಲಿ ಆಳುಮಕ್ಕಳಿಗೆ ಮಾಡುತ್ತಿದ್ದ ?ಮೆಣಸು ಬೆಳ್ಳುಳ್ಳಿ ಕಾರವನ್ನು ನಾವೂ ಕಣ್ಣು ಮೂಗಲ್ಲೆಲ್ಲಾ ನೀರು ಸುರಿಸಿಕೊಂಡು 'ಹಾ...ಹಾ...' ಎನ್ನುತ್ತಾ ತಿನ್ನುತ್ತಿದ್ದವು! ಇವರಿಗೆ ಬೆಳ್ಳುಳ್ಳಿಯ ಬಗ್ಗೆ ಇರುವ ಈಬಗೆಯ ಆದರವನ್ನು ನೋಡಿ ನನಗಂತೂ ತೀವ್ರ ನಿರಾಸೆಯೇ ಆಯ್ತು. ನನ್ನ ಆಸೆಯ ಈ ಘಾಟನ್ನು ಆಘ್ರಾಣಿಸಿದವರಂತೆ 'ಈಗ ಸಾಮಾನ್ಯವಾಗಿ ಎಲ್ಲಾಹೊಟೆಲ್‌ಗಳಲ್ಲೂ ಬೆಳ್ಳುಳ್ಳಿಯನ್ನ ಉಪಯೋಗಿಸ್ತಾರೆ...'ಎಂದುಕೊಂಡು ಅನಿವಾರ್ಯವೆನಿಸಿದರೂ ಹೊಟೆಲ್‌ಗೆ ಹೋಗುವುದನ್ನೇ ನಿಲ್ಲಿಸಿ ಉಳಿತಾಯ ಯೋಜನೆ ಪ್ರಾರಂಭಿಸಿಬಿಟ್ಟರು. ನಮ್ಮ ಮನೆಗಂತೂ ಯಾವ ಕಾರಣಕ್ಕೂ ಬೆಳ್ಳುಳ್ಳಿಗೆ ಪ್ರವೇಶವೇ ಇಲ್ಲ ಎನ್ನುವುದಂತೂ ಖಚಿತವಾಗಿಹೋಯ್ತು. 'ಬಾಣಂತಿ' ಊಟವಾಗಿ ಬರುತ್ತಿದ್ದ ಬೆಳ್ಳುಳ್ಳಿಗೂ ಬಹಿಷ್ಕಾರವಾಯ್ತು. ಹೀಗೆ ಒಂದು ದಿವ್ಯೌಷಧ, ರಾಮಬಾಣವೆನಿಸಿದ ಬೆಳ್ಳುಳ್ಳಿಯ ನಿಷಿದ್ಧ ಪ್ರದೇಶವಾಗಿ ನಮ್ಮ ಮನೆ ರೂಪುಗೊಂಡಿತು.
ಇವರು ಇಷ್ಟೆಲ್ಲಾ ವರ್ಜಿಸಿದ್ದರೂ ಒಮ್ಮೆಯಂತೂ ಈ ದಿವ್ಯೌಷಧಿಯೇ ಇವರ ಕೆಳಗಿಳಿದ ರಕ್ತದೊತ್ತಡವನ್ನು ಮೇಲೇರಿಸುವುದರಲ್ಲಿ ಸಹಕಾರಿಯಾಗಿದ್ದನ್ನು ನೆನಪಿಸಿಕೊಳ್ಳಲೇ ಬೇಕು. ಇವರಿಗೆ ಒಮ್ಮೆ ಅನಾರೋಗ್ಯವಾಗಿ ತೀವ್ರನಿಗಾಘಟಕದಲ್ಲಿ ಇಟ್ಟಿದ್ದಾಗ ಇದ್ದಕ್ಕಿದ್ದಂತೆಯೇ ರಕ್ತದೊತ್ತಡ ಇಳಿಯಲಾರಂಭಿಸಿತು. ಡಾಕ್ಟರ್‌ಗಳೆಲ್ಲಾ ತರಾತುರಿಯಲ್ಲಿ ಚಿಕಿತ್ಸೆ ನೀಡಿ ಸಹಜಸ್ಥಿತಿಗೆ ತರುವ ಸನ್ನಾಹದಲ್ಲಿದ್ದರು. ಅಷ್ಟರಲ್ಲಿ ಪೇಷೆಂಟ್ ಊಟ ಬಂದಿದ್ದರಿಂದ ಕ್ರಮೇಣ ಸರಿಹೋಗುವುದಾಗಿ ತಿಳಿಸಿ ಊಟ ಕೊಡಲು ಹೇಳಿದರು. ತಿಳಿಸಾರು ಅನ್ನ ಕಲೆಸಿ ಸ್ಪೂನ್‌ನಲ್ಲಿ ಇನ್ನೇನು ಬಾಯಿಗಿಡಬೇಕು ಆಕ್ಷಣವೇ ಬಿ.ಪಿ. ನಾರ್‍ಮಲ್ ಬಿಟ್ಟು ಮೇಲೇರಲಾರಂಭಿಸಿತು! ಇವರಂತೂ ಬಾಯಿ ಬಿಡದೇ ಎಳೇ ಮಗುವಿನಂತೆ ಹಠ ಹಿಡಿದು ಊಟ ಬೇಡವೆಂದು ಸನ್ನೆ ಮಾಡಲಾರಂಭಿಸಿದರು. ಮೊದಲೇ ಗಾಭರಿಗೊಂಡಿದ್ದ ನಾನು ಆಗ ಗಮನಿಸಿದೆ ಸಾರಿಗೆ ಬೆಳ್ಳುಳ್ಳಿ ಹಾಕಿದ್ದಾರೆಂಬುದನ್ನು! ಆದರೂ ..., ಹೃದಯಕ್ಕೆ ಒಳ್ಳೆಯದು ಎಂದು ಯಾವ ಡಯಟೀಷಿಯನ್ ಏನೇ ಹೇಳಿದರೂ ಇವರ ವ್ರತಭಂಗ ಮಾಡಲಾಗಲಿಲ್ಲ!
ಕುಟುಂಬದವರೆಲ್ಲಾ ಒಮ್ಮೆ ಶಿರಡಿಯಾತ್ರೆ ಕೈಗೊಂಡರು. ಈ ಮೊದಲೇ ಎಂದರೆ ಮದುವೆಯಾದ ಹೊಸತರಲ್ಲೇ ದಕ್ಷಿಣ ಕರ್ನಾಟಕದ ಪ್ರಮುಖ ಯಾತ್ರಾಸ್ಥಳಗಳಿಗೆಲ್ಲಾ ಇವರ ಹರಕೆಗಳನ್ನು ತೀರಿಸಲು(!) ಹೋಗಿದ್ದ ಹಾಗೂ ಹೋಗುತ್ತಿದ್ದ ನನಗೆ ಯಾತ್ರಗಳೇನೂ ಹೊಸತಾಗಿರಲಿಲ್ಲ! ಆಗಲೇ ನಿಂತರೂ ಕುಳಿತರೂ ಭಗವನ್ನಾಮ ಸ್ಮರಣೆಯನ್ನು ಜಪಿಸಲಾರಂಭಿಸಿದ್ದ (ಸಧ್ಯ ನನ್ನ ಹೆಸರನ್ನು ಕರೆಯದೇ ಇದ್ದುದು ಒಳ್ಳೆಯದೇ ಆಯ್ತು. ಇಲ್ಲದಿದ್ದರೆ ?ಸ್ಥಾನಪಲ್ಲಟ?ವಾದ ನೋವನ್ನು ಅನುಭವಿಸುವಂತಾಗುತ್ತಿತ್ತು!)ಇವರೂ ಇಷ್ಟ ದೈವದಶನದ ಆನಂದ ಸ್ಥಿತಿಯಲ್ಲಿ ಪ್ರಸಾದ ಸೇವನೆಗೆ ಕುಳಿತಾಗ ಊಟದ ಎಲ್ಲಾ ಐಟಂಗಳಲ್ಲಿಯೂ ಬೆಳ್ಳುಳ್ಳಿಯೇ ರಾರಾಜಿಸುತ್ತಿದ್ದುದನ್ನು ನೋಡಿ (ಆಘ್ರಾಣಿಸಿ) ಎದ್ದು ಹೊರ ನಡೆದೇ ಬಿಟ್ಟರು. ಅದುವರ 'ಬೆಳ್ಳುಳಿ' ಎಂದರೇನೆಂದೇ ಅರಿಯದ ಮಕ್ಕಳೂ ಆ ವಿಶೇಷ ಕಟುವಾಸನೆಗೆ ಬೆದರಿ ಅಪ್ಪನ ಹಿಂದೇ ಓಟ ಕಿತ್ತರು (ಬಸವನ ಹಿಂದೆ ಬಾಲದಂತೆ!) ನಾನೂ ಸಿಕ್ಕ ಒಂದು ವಿಶೇಷಾವಕಾಶ ವಂಚಿತಳಾಗಿ ಅವರನ್ನು ಹಿಂಬಾಲಿಸಿದೆ. ಹಸಿದ ಹೊಟ್ಟೆಯನ್ನು ತುಂಬಲು ಪ್ರತಿ ಹೊಟೆಲ್ ಮುಂದೂ ನಿಂತು 'ಅಮ್ಮಾ..., ತಾಯೀ...,' ಎನ್ನುವಂತೆ , 'ಅಡುಗೆಗೆ ಬೆಳ್ಳುಳ್ಳಿ ಹಾಕಿದೀರಾ...?'ಎಂದು ಹರುಕು ಮುರುಕು ಹಿಂದಿಯಲ್ಲಿ ವಿಚಾರಿಸುತ್ತಾ ಅಲೆದಲೆದು ಕಡೆಗೆ 'ಆಂದ್ರ ಸ್ಪೆಷಲ್' ಎಂಬ ಹೊಟೆಲ್‌ನಲ್ಲಿ ಒಂದಕ್ಕೆರಡರಷ್ಟು ಬೆಲೆತೆತ್ತು ಅಲ್ಲಿದ್ದಷ್ಟು ದಿನವೂ ಊಟ ಮಾಡಿದ್ದಾಯ್ತು!
ನಾವು ಸೈಟನ್ನು ತೆಗೆದುಕೊಂಡು ಬಹಳದಿನ ( ಏಕೆ ವರ್ಷಗಳೇ)ಆ ಕಡೆಗೆ ತಲೆ ಹಾಕದೇ ಕಟ್ಟಿದ ಮನೆಯನ್ನೇ ಕೊಳ್ಳುವ ಯೋಜನೆಯಲ್ಲಿ ಸಾಕಷ್ಟು ಅಲೆದಲೆದು ಯಾವುದೂ ಸರಿಬರದಿದ್ದಾಗ (ನಮ್ಮ ಆರ್ಥಿಕ ಮಿತಿಗೆ ಹೊಂದದಿದ್ದಾಗ!) ಸ್ವತ: ಕಟ್ಟುವ ತೀರ್ಮಾನಕ್ಕೆ ಬಂದು ಸೈಟನ್ನು ನೋಡಲು ಹೋದೆವು. ದೂರದಿಂದಲೇ ನಮ್ಮ ಸೈಟಿನಲ್ಲಿ ಧವಳಾಚ್ಛಾದಿತ ರಾಶಿಯನ್ನು ನೋಡಿ ಏನಿರಬಹುದೆಂಬ ಕುತೂಹಲದಲ್ಲಿ ಹತ್ತಿರ ಸಾರುವ ಮೊದಲೇ ನಮ್ಮ ಬಳಿಗೇ ತನ್ನ ಇರವನ್ನು ವಾಸನಾ ರೂಪದಲ್ಲಿ ಸಾರಿಬಿಟ್ಟಿತು! ಆಗಲೇ ಗೊತ್ತಾಗಿದ್ದು ಅಲ್ಲಿ ಸುತ್ತೆಲ್ಲಾ ತಲೆ ಎತ್ತಿರುವ ಗೃಹಗಳ ನಿವಾಸಿಗಳು ಬೆಳ್ಳುಳ್ಳಿ ವ್ಯಾಪಾರ ಮಾಡುವವರು ಎಂದು. ಕ್ಲೀನ್ ಮಾಡಬೇಕಾದ ಬೆಳ್ಳುಳ್ಳಿಯನ್ನು ರಾಶಿರಾಶಿಯಾಗಿ ಖಾಲಿ ಸೈಟ್‌ಗಳಲ್ಲಿ ಸುರಿದಿರುತ್ತಿದ್ದರು. ಈಗಾಗಲೇ ಮನೆ ಹುಡುಕಿ ಹುಡುಕಿ ದಣಿದಿದ್ದ ಇವರು ಈ 'ಲಸನ್' ವಾಸನಾಸ್ತ್ರದಿಂದ ಹಿಮ್ಮೆಟ್ಟದೇ ಮನೆ ಕಟ್ಟಲು ನಿರ್ಧರಿಸೇ ಬಿಟ್ಟರು. ಗೃಹ ಪ್ರವೇಶವಾದನಂತರ ಸುತ್ತಿನ ವಾಸನಾ ಜಗತ್ತಿನ ಬಲದಿಂದ 'ಬೆಳ್ಳು'ಗೆ ಮನೆಯ ಗುಪ್ತ ಸ್ಥಳವೊಂದರಲ್ಲಿ ವಾಸ ಪರವಾನಗಿ ನೀಡಿದೆ. ಇವರು ಪರ ಊರುಗಳಿಗೆ ಪ್ರಯಾಣ ಬೆಳೆಸಿದಾಗ ಅಡುಗೆಯ ವಿಶೇಷ 'ಬೆಳ್ಳು' ವಿನಿಂದೊಡಗೂಡಿರುವುದು ಮಕ್ಕಳಿಗೆ ಸರ್ವೇ ಸಾಮಾನ್ಯವಾಯಿತು. ಅಂತೂ ಈ ಮೂಲಕ ಮಕ್ಕಳನ್ನು ಒಂದು ವಿಶಿಷ್ಟ ಆರೋಗ್ಯಕರ ರುಚಿಗೆ ಪರಿಚಯಿಸಿದ ಹಾಗೂ ಯಾವುದೇ ಶಾಕಾಹಾರೀ ಹೊಟೆಲ್‌ಗಳಲ್ಲಿಯೂ ಊಟಮಾಡಬಹುದಾದ ಸಾಮರ್ಥ್ಯವನ್ನು ದಯಪಾಲಿಸಿದ ಭಾಗ್ಯ ನನ್ನದಾಯಿತು!
ಬೆಳ್ಳುಳ್ಳಿ ಮತ್ತು ಇವರ ನಡುವಿನ ವಿಕರ್ಷಣಾ ಸಂಬಂಧ ಎಷ್ಟೊಂದು ಗಾಢವಾಗಿದೆಯೆಂದರೆ (ಆಕರ್ಷಣೆಗಿಂತ ವಿಕರ್ಷಣೆಯೇ ಅತ್ಯಂತ ಪ್ರಭಲವಾದ ಶಕ್ತಿ ಎಂದು ನಂಬಲು ನನಗೆ ಇದಕ್ಕಿಂತಾ ಪುರಾವೆ ಬೇಕು ಎನಿಸುವುದಿಲ್ಲ!) ಇವರ ಬಗ್ಗೆ ಹೇಳದೇ ಬೆಳ್ಳುಳ್ಳಿಯ ಬಗ್ಗೆ ಹೇಳಲು ಸಾಧ್ಯವಾಗುತ್ತಲೇ ಇಲ್ಲ. ಆದರೂ ಒಮ್ಮೆ ಬೆಳ್ಳುಳ್ಳಿಯ ಅರ್ಥ ಲೋಕವನ್ನು ಪ್ರವೇಶಿಸಿದಾಗ ಎಂದರೆ ನಿಘಂಟುಗಳನ್ನು ತೆರೆದಾಗ ನನಗೆ ತೀವ್ರ ಆಘಾತವೇ ಕಾದಿತ್ತು! ಎಲ್ಲಾ ಮನುಜ ನಿರ್ಮಿತ ವರ್ಗಗಳಲ್ಲೂ ಭೇದ ಭಾವವಿರುವಂತೆ ಸಹೋದರ ರೂಪಿಗಳಾದ ಈರುಳ್ಳಿ ಬೆಳ್ಳುಳ್ಳಿಗಳಲ್ಲಿಯೂ ತಾರತಮ್ಯ ಎದ್ದು ಕಾಣುವಂತಿತ್ತು. 'ಈರುಳ್ಳಿ' ಎಂದರೆ ಉಳ್ಳೇಗೆಡ್ಡೆ, ನೀರುಳ್ಳೆ ಎಂದಿದ್ದರೆ 'ಬೆಳ್ಳುಳ್ಳಿ' ಎನ್ನುವ ಪದವೇ ಕಾಣಲಿಲ್ಲ! ಇರಲಿ ಎಂದು ಆಂಗ್ಲ ಪದ GARLIC ( ಗಾರ್ಲಿಕ್) ಅನ್ನು ನೋಡಿದೆ. ‘A plant with bulbous strong smelling root-ಬೆಳ್ಳುಳ್ಳಿ' ಎಂದಿತ್ತು. ಅಯ್ಯೋ ನಮ್ಮ ಬೆಳ್ಳುಳ್ಳಿಯ ಸ್ಥತಿಯೇ ಎಂದುಕೊಂಡು ಛಲ ಬಿಡದಂತೆ ಹಿಂದಿಯಲ್ಲಿ ?ಲಸನ್? ಎನ್ನುತ್ತಾರೆ ಎಂದು ತಿಳಿದು ಆ ಪದವನ್ನೇನಾದರೂ ಕೊಟ್ಟಿದ್ದಾರೆಯೋ ನೋಡೋಣ ನಮ್ಮ ಸರ್ವಭಾಷಾ ಸಮನ್ವಯ ಭಾವಾಪ್ರಿಯ ಪಂಡಿತರು ಎನ್ನುವ ಕುತೂಹಲದಿಂದ ಹಾಳೆಗಳನ್ನು ಮಗುಚಿದೆ. ಓಹೋ ಸಿಕ್ಕೇ ಬಿಟ್ಟಿತು! ಲಸನ್ ಅಲ್ಲ 'ಲಶುನ' ಎಂದರೆ ಬೆಳ್ಳುಳ್ಳಿ ಎಂದು! ನಮ್ಮ ಹಿಂದೂ ಸಂಪ್ರದಾಯದ ಮದುವೆಯಲ್ಲಿ ಭೂಮದ ಊಟದಲ್ಲಿ ವರನು ವಧುವಿನ ( ವಧು ಬಲಭಾಗದಲ್ಲಿ ಕೂರುವ ಅನಾನುಕೂಲದಿಂದಲೋ ಏನೋ!) ಕತ್ತನ್ನು ಬಳಸಿ ಬಾಯಿಗೆ ತುತ್ತನ್ನು ಇಟ್ಟಂತೆ! ಬಿಳಿಯ ಬಣ್ಣದಿಂದಲೇ ಈ ಹೆಸರು ಬಂದಿದೆ ಎಂದು ತರ್ಕಿಸಿ 'ಬೆಳ್' (ಬೆಳ್ಳುಳ್ಳಮ್ಮ ಬೆಳ್ಳುಳ್ಳಿ ಬೆಳ್ಳಿ ಬೆಳಕಿನ ಬೆಳ್ಳುಳ್ಳಿ..!) ಎನ್ನುವ ಪದದ ಅರ್ಥ ಶೋಧನೆಗೆ ಹೊರಟೆ. 'ಬೆಳ್' ಎಂದರೆ ಬಿಳುಪಾದ , ದಡ್ಡತನ(!)ದಿಂದ ಕೂಡಿದ ಎನ್ನುವುದರ ಜೊತೆಗೇ 'ಉಳ್ಳಿ' ಸೇರಿಸಿದಾಗ ಅಡುಗೆಗೆ ಉಪಯೋಗಿಸುವ ಕಟು ವಾಸನೆ ಮತ್ತು ರುಚಿಯುಳ್ಳ ಒಂದು ಜಾತಿಯ ಗೆಡ್ಡೆ ಎಂದಿತ್ತು. ಅದರ ರುಚಿ, ವಾಸನೆಯೇ ಮುಖ್ಯವಾಯಿತೇ ಹೊರತು ಅದರ ವೈದ್ಯಕೀಯ ಪ್ರಾಮುಖ್ಯತೆಯ ಬಗ್ಗೆ ಸೂಚಿಸಿಲ್ಲವಲ್ಲಾ ಎನ್ನುವ ತವಕದಲ್ಲೇ 'ಉಳ್ಳಿ' ಅರ್ಥಾನ್ವೇಷಿಯಾದೆ. ನೀರುಳ್ಳಿ, ಉರುಳುಗೆಡ್ಡೆ ಎಂದು ಒಂದು ಕಡೆ ಇದ್ದರೆ ಈರುಳ್ಳಿ, ಬೆಳ್ಳುಳ್ಳಿ ಎಂದು ಮತ್ತೊಂದು ಕಡೆ ಸಿಕ್ಕಿತು. 'ಉಳ್ಳಿ' ಎಂದರೆ ಹುರುಳಿಕಾಳು ಎಂದು ಮಾತ್ರ ತಿಳಿದಿದ್ದೆ. 'ಉಳ್ಳಿ ತಿಂದಮ್ಮನಿಗೆ ಉಳುಕಿತು. ಬೆಳ್ಳುಳ್ಳಿ ತಿಂದಮ್ಮನಿಗೆ ನಾರ್‍ತು.' ಎನ್ನುವುದು ನಮ್ಮ ಕಡೆಯ ಸಾಮಾನ್ಯ ಮಾತಾಗಿತ್ತು.
ನನ್ನ ದೃಷ್ಟಿಯಲ್ಲಿ ಇವರ ಮತ್ತು ಬೆಳ್ಳುಳ್ಳಿಯ ನಡುವೆ ಹೇಗೆ ಅವಿನಾಭಾವ ಸಂಬಂಧ ಏರ್ಪಟ್ಟಿದೆಯೋ ಅದೇ ರೀತಿ ಆಂತರಿಕವಾಗಿ ಬೆಳ್ಳುಳ್ಳಿ ನನ್ನೊಳಗಿನ ವಿಕಟಕವಿಯನ್ನು ಬಡಿದೆಬ್ಬಿಸಿ ಮೊಗದ ಮೇಲಿನ ನಗೆಯಾಗಿ ಮಾರ್ಪಟ್ಟು ನನ್ನಲ್ಲಿ ಲಸನ್ ಮಂದಹಾಸವಾಗಿ ('ಲಸನ್ ಮಂದಹಾಸ' ಪ್ರಭಾ ವಕ್ರ ತುಂಡ...!)ಮೂಡಿ ಮೆರೆಯುತ್ತಿದೆ! ಈಗ ಅಕ್ಕಪಕ್ಕದಲ್ಲಿ ಮನೆಗಳಾಗಿ ಅವರ ಮನೆಗಳಲ್ಲಿ ಅಟ್ಟುವ ಅಡುಗೆಯ ಪರಿಮಳ ನಮ್ಮ ಮನೆಯನ್ನೂ ತುಂಬುವುದರಿಂದ ಆ ಲಶುನ ವಾಸನಾ ತೆರೆಯ ಮರೆಯಲ್ಲಿಯೇ ನಮ್ಮ ಮನೆಯಲ್ಲಿಯೂ ಬೆಳ್ಳುಳ್ಳಿಯನ್ನು ಅಡುಗೆಯ ಒಂದು ಭಾಗವನ್ನಾಗಿಸುವ ಪ್ರಯತ್ನವನ್ನು ಮುಂದುವರಿಸೇ ಇದ್ದೇನೆ. ಈ ಸೂಕ್ಷ್ಮವನ್ನು ಮನಗಂಡ ಇವರು ಹುರಿಯುವ, ಅರೆಯುವ,...ಒಗ್ಗರಣೆಹಾಕುವಂತಹ ಪ್ರಮುಖ ಕಾರ್ಯಭಾರಗಳನ್ನು ತಮ್ಮದಾಗಿಸಿಕೊಂಡು ನನಗೆ ಅಡುಗೆಮನೆಗೆ ಪ್ರವೇಶ ನಿಶಿದ್ಧ ಮಾಡುವ ಸನ್ನಾಹದಲ್ಲಿದ್ದಾರೆ! ಆದರೂ..... ಫಲಕಾರಿಯಾಗುವ ಆಶಾಭಾವನೆಯಲ್ಲಿ ಕೋಲಿನ ತುದಿಗೆ ಕಟ್ಟಿದ ಹುಲ್ಲಿನ ಆಸೆಗೆ ಮುನ್ನುಗ್ಗುತ್ತಿರುವ ಕುದುರೆಯಂತೆ ಬದುಕ ಬಂಡಿಯನ್ನು ಓಡಿಸುತ್ತಿದ್ದೇನೆ!

Wednesday, October 20, 2010

ಮನದ ಅ೦ಗಳದಿ.......13 ನೀನೇ ನಾನು

ಒಮ್ಮೆ ಮೂರು ಜನ ಪಯಣಿಗರು ದಾರಿಯಲ್ಲಿ ನಡೆಯುತ್ತಿದ್ದರು. ರಸ್ತೆಯಲ್ಲಿ ಅವರಿಗೊಂದು ನಾಣ್ಯ ಸಿಕ್ಕಿತು. ಒಬ್ಬ ಹೇಳಿದ, 'ಈ ಹಣದಿಂದ ನಾವೇನಾದರೂ ಸಿಹಿ ತಿನಿಸನ್ನು ತಿನ್ನೋಣ.?' ಮತ್ತೊಬ್ಬ ಹೇಳಿದ, 'ಸಿಹಿ ತಿನಿಸು ಬೇಡ. ಹಣ್ಣನ್ನು ಕೊಂಡು ತಿನ್ನೋಣ'. ಮೂರನೆಯವನು ಹೇಳಿದ, 'ಏನೂ ತಿನಿಸು ಬೇಡ. ಪಾನೀಯವನ್ನು ಕುಡಿಯೋಣ.'
ಮೂವರ ನಡುವೆ ಭಾರೀ ಚರ್ಚೆ ನಡೆಯಿತು. ಎದುರಿಗೆ ಒಬ್ಬ ಅಪರಿಚಿತ ವ್ಯಕ್ತಿ ಬಂದ. ಇವರ ಸಮಸ್ಯೆಯನ್ನು ಕೇಳಿ ತಿಳಿದು ಮೂವರನ್ನೂ ಹತ್ತಿರದ ಹಣ್ಣಿನ ಅಂಗಡಿಗೆ ಕರೆದೊಯ್ದ. ದ್ರಾಕ್ಷಿಯ ಗೊಂಚಲುಗಳನ್ನು ಕೊಡಿಸಿದ.
ಮೊದಲನೆಯವ ಹೇಳಿದ, 'ಅರೆ ಇದೊಂದು ಸಿಹಿ ತಿನಿಸು!'
ಎರಡನೆಯವ ಹೇಳಿದ, 'ಇದೊಂದು ಹಣ್ಣು!'
ಮೂರನೆಯವ ಹೇಳಿದ, 'ಈ ದ್ರಾಕ್ಷಿಯಿಂದ ನನ್ನ ಬಾಯಾರಿಕೆ ಇಂಗಿತು.'
ಎಲ್ಲಾ ಆಧ್ಯಾತ್ಮಿಕ ಪಥಿಕರ ಗುರಿ ಒಂದೇ, ಪಥಗಳು ಬೇರೆ ಬೇರೆ.
ಇದೊಂದು ಸೂಫಿ ಕಥೆ. ಕ್ರಿ.ಶ.ಎಂಟರಿಂದ ಹದಿನೈದನೆಯ ಶತಮಾನಗಳ ಅವಧಿಯಲ್ಲಿ ಜಗತ್ತು ನೂರಾರು ಸೂಫಿಗಳನ್ನು ಕಂಡಿತು. ಇವರು ಇಸ್ಲಾಂ ಮತದಲ್ಲಿ ನಂಬಿಕೆ ಉಳ್ಳವರಾಗಿದ್ದರು. ಬಡತನದ ಕುಟುಂಬಗಳಿಂದ ಹೆಚ್ಚಾಗಿ ಬರುತ್ತಿದ್ದ ಇವರು ಮಸೀದಿಗಳಲ್ಲಿ 'ಸುಪ್ಪಾ' ಎಂದರೆ ಮಾಳಿಗೆಗಳಲ್ಲಿ ಕಾಲ ಕಳೆಯುತ್ತಿದ್ದುದರಿಂದ ಇವರನ್ನು 'ಸೂಫಿ'ಗಳೆಂದು ಕರೆದರು. ಹೆಚ್ಚಿನ ಕಾಲ ತಪಸ್ಸಿನಲ್ಲಿ ಮಗ್ನರಾಗುತ್ತಿದ್ದ ಸೂಫಿಗಳ ಅನುಕ್ಷಣದ ಬದುಕಿನಲ್ಲೂ ಧರ್ಮವು ಮಿಳಿತವಾಗಿತ್ತು. ಹಲವು ಸಲ ಮೆಕ್ಕಾ ಯಾತ್ರೆ ಮಾಡುತ್ತಿದ್ದ ಇವರು ಹಳ್ಳಿ ಹಳ್ಳಿಗಳಲ್ಲಿ ಧರ್ಮ ಬೋಧನೆ ಮಾಡುತ್ತಿದ್ದರು. ಆದರೆ ಜನರಿಂದ ದೂರವಾಗಿ ಊರ ಹೊರಗೆ ವಾಸಿಸುತ್ತಿದ್ದರು.
ಸೂಫಿಗಳು ಬರೆದಿರಬಹುದಾದ ಲಿಖಿತ ಸಾಹಿತ್ಯ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿಲ್ಲ. ಆದರೆ ಅವರ ಹೇಳಿಕೆಗಳು, ಗೀತೆಗಳು, ಪ್ರವಚನಗಳು, ಮತ್ತು ಕಥೆಗಳು ಒಬ್ಬರಿಂದ ಒಬ್ಬರಿಗೆ ತಿಳಿದು ಇಲ್ಲಿಯವರೆಗೂ ಉಳಿದು ಬಂದಿವೆ. ಸೂಫಿ ಮತದ ಉದ್ದೇಶವನ್ನು ಬಾಯ್ಸೀದ್ ಬಹಳ ಚೆನ್ನಾಗಿ ತಿಳಿಸಿದ್ದಾರೆ, 'ಒಂದೆಡೆಯಿಂದ ಮತ್ತೊಂದೆಡೆಗೆ ದೇವರನ್ನು ಅರಸುತ್ತಾ ಹೋದೆ. ಅಂತರಂಗದ ದನಿ ಹೇಳಿತು, ನೀನೇ ನಾನು'.
ರೂಮಿ ಎಂಬ ಸೂಫಿಯು ತನ್ನ ಎಲ್ಲಾ ಶಿಷ್ಯರೂ ಈ ಪದ್ಯವನ್ನು ಬಾಯಿ ಪಾಠ ಮಾಡುವಂತೆಹೇಳುತ್ತಿದ್ದರು.
ಆಧ್ಯಾತ್ಮದ ಔಷಧಗಳ
ಮಾರಾಟಗಾರರ ಈ ಮಾರುಕಟ್ಟೆಯಲ್ಲಿ
ಅತ್ತಿಂದ ಇತ್ತ, ಅಂಗಡಿಯಿಂದ ಅಂಗಡಿಗೆ ಓಡದಿರು,
ಬದಲಿಗೆ,
ನಿಜವಾದ ಔಷಧ ಸಿಗುವ
ಒಂದೇ ಅಂಗಡಿಯಲಿ ಕುಳಿತುಕೊ.
ಮೂಲತಃ ಇಸ್ಲಾಂ ಮತದ ಅನುಯಾಯಿಗಳಾಗಿದ್ದ ಸೂಫಿಗಳ ಮೇಲೆ ಕ್ರೈಸ್ತ ಮತ್ತು ಬೌದ್ಧ ಧರ್ಮದ ಪ್ರಭಾವವೂ ಆಗಿದೆ. ಭಾರತದಲ್ಲಿ ದಾರಾ ಶುಕೊ ಸೂಫಿಮತದ ಬೆಳವಣಿಗೆಗೆ ಬಹಳ ನೆರವು ನೀಡಿದರು. ಹಲವು ಮತಧರ್ಮಗಳನ್ನು ಸಾಕಷ್ಟು ಅಧ್ಯಯನ ಮಾಡಿ ವೇದಾಂತವನ್ನು ಚೆನ್ನಾಗಿ ಅರಿತಿದ್ದ ಇವರು ಸೂಫಿ ಮತದ ಮತ್ತು ವೇದಾಂತದ ನಡುವೆ ಇರುವ ಸಾಮ್ಯಗಳನ್ನು ಕುರಿತು ಎಲ್ಲರಿಗೂ ಹೇಳುತ್ತಿದ್ದರು.
ಈ ಕುರಿತು ಬರೆಯುವಾಗ ನನಗೆ ಸದಾ ನನ್ನೊಳಗೇ ಅನುರಣಿಸುವ ಆಕೆಯ ದನಿ ನೆನಪಾಗುತ್ತದೆ.
ಆಕೆ ಸುತ್ತಿನ ಊರುಗಳಲ್ಲಿ ತಿರುಗುತ್ತಾ ಕೌದಿಯನ್ನು ಹೊಲಿದು ಕೊಡುವುದು, ಬಟ್ಟೆಗಳನ್ನು ರಿಪೇರಿ ಮಾಡಿಕೊಡುವುದು ಮುಂತಾದ ಕೆಲಸಗಳನ್ನು ಮಾಡಿ ರೈತರು ಕೊಡುತ್ತಿದ್ದ ಧವಸ, ಧಾನ್ಯಗಳನ್ನು ಸಂಪಾದಿಸಿಕೊಂಡು ಬಂದು ಗಂಡನ ಅಲ್ಪಸ್ವಲ್ಪ ಗಳಿಕೆಯೊಂದಿಗೆ ಮನೆಯಲ್ಲಿದ್ದ ೮-೯ ಮಕ್ಕಳ ಹೊಟ್ಟೆಯನ್ನು ತುಂಬಬೇಕಾಗಿತ್ತು. ಅದರಲ್ಲಿಯೂ ಬಿಡುವು ಮಾಡಿಕೊಂಡು ನಮ್ಮ ಮನೆಗೆ ಬಂದು ಕೆಲವು ಹಾಡುಗಳನ್ನು ತಮ್ಮ ಉಚ್ಛ ಕಂಠದಲ್ಲಿ ಹಾಡುತ್ತಿದ್ದರು. ಅದರ ಅರ್ಥವನ್ನು ವಿವರಿಸಿ ಹೇಳುತ್ತಿದ್ದರು. ನಮ್ಮ ತಂದೆ ಅದಕ್ಕೆ ಸಮೀಕರಿಸುವಂಥಾ ಶ್ಲೋಕಗಳನ್ನು ಹೇಳಿ ತಾತ್ಪರ್ಯವನ್ನು ತಿಳಿಸುತ್ತಿದ್ದರು. ಅವುಗಳಲ್ಲಿರುವ ಸಾಮ್ಯತೆಯ ಬಗ್ಗೆ ಮಾತನಾಡುತ್ತಿದ್ದರು. ಕೆಲವೊಮ್ಮೆ ನಮ್ಮ ಅತ್ತೆಯೂ (ತಂದೆಯ ತಂಗಿ) ಅದಕ್ಕೆ ಸಂಬಂಧಿಸಿದ ಯಾವುದಾದರೊಂದು ಕೀರ್ತನೆಯನ್ನು ಹಾಡುತ್ತಾ ಜೊತೆಗೂಡುತ್ತಿದ್ದರು. ಅವರು ಏನು ಮಾತನಾಡುತ್ತಿದ್ದಾರೆ ಎನ್ನುವುದರ ಅರ್ಥ ಆಗ ನನಗೆ ಆಗದಿದ್ದರೂ ತನ್ನತ್ತ ಸೆಳೆಯುತ್ತಿತ್ತು.
ಎಲ್ಲ ಧರ್ಮಗಳ ಮೂಲಸಾರವೂ ಅಂತರಂಗದ ಅರಿವಿನಿಂದಲೇ ಆಗಿದೆ. ಅದೇ ಅವುಗಳ ಸಾಮ್ಯತೆಗೆ ಕಾರಣವೆನಿಸುತ್ತದೆ. ಅರಿವಿನ ಸಂಪಾದನೆ ಒಂದು ಆಂತರಿಕ ಅಭೀಪ್ಸೆ. ಅದಕ್ಕಾಗಿ ವ್ಯಕ್ತಿಗಳು ಸಮಾನಾಸಕ್ತರನ್ನು ಹುಡುಕಿಕೊಂಡು ಹೋಗುತ್ತಾರೆ. ತಾವು ಸತ್ಯವೆಂದು ಕಂಡದ್ದನ್ನು ಮತ್ತೊಬ್ಬರಲ್ಲಿ ಹಂಚಿಕೊಳ್ಳಲು ಕಾತರಿಸುತ್ತಾರೆ ಎನಿಸುತ್ತದೆ. ಈ ಮಾತನ್ನು ಪುಷ್ಟೀಕರಿಸುವಂತಿರುವ ಒಂದು ಚೀನೀ ಗಾದೆಯು ಈ ರೀತಿ ಇದೆ, ‘If you have something valuable with you, you have a moral obligation to share it with 0thers.’
ನಮ್ಮ ಅರಿವನ್ನು ಆಳಗೊಳಿಸುವ ಒಂದು ಸೂಫಿ ಕಥೆ ಈರೀತಿ ಇದೆ:
ಒಬ್ಬ ಹೋಗಿ ಬಾಗಿಲು ತಟ್ಟಿದ. ಒಳಗಿನಿಂದ ದನಿ ಕೇಳಿತು, 'ಯಾರದು?' ಈತ ಹೇಳಿದ, 'ನಾನು'. ಬಾಗಿಲು ತೆರೆಯಲೇ ಇಲ್ಲ. ಈತ ಬಹಳ ಸಮಯದ ನಂತರ ಮತ್ತೊಮ್ಮೆ ಬಂದು ಬಾಗಿಲು ತಟ್ಟಿದ. ಒಳಗಿನಿಂದ ಮತ್ತೆ ಕೇಳಿತು, 'ಯಾರದು?'ಈತ ಹೇಳಿದ, 'ನೀನು'. ಬಾಗಿಲು ತೆರೆಯಿತು.
ಜಲಾಲುದ್ದೀನ್ ರೂಮಿ ಹೇಳಿದ ಈ ಕಥೆಗೂ, ಸೂಫಿ ಮತದ ಉದ್ದೇಶವನ್ನು ತಿಳಿಸಿದ ಬಾಯ್ಸೀದ್ ಹೇಳಿಕೆಗೂ ಎಂಥಾ ಹೋಲಿಕೆ ಇದೆ ಅಲ್ಲವೇ?
********************************************************

Saturday, October 16, 2010

'ಹನಿ'ಗಳು

ಗಾಳಿಪಟ-1
ಏರಿದಷ್ಟೂ ಬಾನಿನಲಿ
ಇಹುದು ಎಡೆ
ಏರಿಸುವ ದಾರದ್ದೇ
ಇದಕೆ ತಡೆ!

ಹೊಣೆ
ಸೂತ್ರ ಹಿಡಿದೇ
ಹಾರಿಬಿಟ್ಟೆ
ಸ್ವತ೦ತ್ರವಾಗಿ ವಿಹರಿಸು
ನಿನ್ನದೇ ಗುರಿಯತ್ತ ಚಲಿಸು,
ಕಣ್ಬಿಟ್ಟೆ ದಾರ ಜಗ್ಗಿದಾಗ
ಪಟ ಹೊಡೆಯುತ್ತಿತ್ತು
ಅನಿಯ೦ತ್ರಿತ ಲಾಗ!

ಗಾಳಿಪಟ-2
ಹಾರುವ ಮೊದಲೇ
ಹುಚ್ಚೆದ್ದು ಲಾಗ
ಹೊಡೆದದ್ದು
ಮೇಲೇರಿದ೦ತೆ
ನಿರಾತ೦ಕ!



Sunday, October 10, 2010

ಸರಳ ಜೀವನ, ಉದಾತ್ತ ವಿಚಾರ

ದಯಮಾಡಿ ಇದರ ಮೇಲೆ ಡಬಲ್ ಕ್ಲಿಕ್ ಮಾಡಿ ಓದಿರಿ.

Thursday, October 7, 2010

'ಹನಿ'ಗಳು

ಬದುಕಿಗೆ
ಬೇಕಾದ೦ತೆ
ಬಳಸಿಕೋ
ನಿನ್ನ ತೆಕ್ಕೆಯಲ್ಲಿ
ಬ೦ಧಿ ನಾನಿಲ್ಲಿ
ಆದರೆ......
ಬ೦ಧ ಮುಕ್ತಳಾಗುವಾಗ
ತೃಪ್ತಿಯಲಿ
ತುಟಿಯರಳಲಿ!

ನಿನ್ನ೦ತೆ
ನಾನು ನಿನ್ನೆದುರು
ತೆರೆದ ಪುಸ್ತಕ
ಓದಿ ಅರ್ಥೈಸಿಕೊಳುವುದು
ನಿನ್ನ ಕಾಯಕ!

ಬದುಕು
'ಬದುಕು' ಎ೦ದರೇನೆ೦ದು
ನನ್ನ ನಾ
ಕೇಳಿಕೊ೦ಡ ಚಣ
ಕಣ್ಣು ದಿಟ್ಟಿಸುತಿತ್ತು
ಸಿ೦ಬಳದಲಿ
ಸಿಲುಕಿಕೊ೦ಡ
ನೊಣ!

ಕೋರಿಕೆ
ನೀ
ನನ್ನ ಹಾದಿಯ
ನಿರ್ದೇಶಿಸುತ್ತಿರು
ಎ೦ದೂ
ನಿರ್ಧರಿಸದಿರು.

ಭರವಸೆ
ಕ೦ದಾ,
ನಾನಾಗಬಯಸುವೆ
ನಿನ್ನ ಸ್ವಪ್ನ ಸೌಧದ
ಅಡಿಗಲ್ಲು
ಎ೦ದೂ ಆಗುವುದಿಲ್ಲ
ನಿನ್ನ ಪ್ರಗತಿ ಪಥದ
ಅಡ್ಡಗಲ್ಲು!

Sunday, October 3, 2010

ಬಿಡದ ಬಾ೦ಧವ್ಯ

(ಆಗಸ್ಟ್22, ೨೦೦4ರ 'ಮ೦ಗಳ' ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ.)
ಈಗ ನಮ್ಮ ಪತ್ರಗಳ ಓಡಾಟ ನಿ೦ತಿದೆ. ಮೊಬೈಲ್ ಕಾರ್ಯ ಪ್ರವೃತ್ತವಾಗಿದೆ. ಇತ್ತೀಚೆಗೆ ಕರೆ ಮಾಡಿದ್ದಾಗ ಅವರ ತಾಯಿಯವರು ತೆಗೆದುಕೊ೦ಡರು. ತಮ್ಮ ಅನಾರೋಗ್ಯದ ಬಗ್ಗೆ ತಿಳಿಸಿ ಈಗ ಮಗಳೇ ತಮ್ಮನ್ನು ನೋಡಿಕೊಳ್ಳುತ್ತಿದ್ದಾಳೆ ಎ೦ದು ಹೇಳಿದರು. ಹೀಗೆ ನನ್ನ ತ೦ಗಿ, ತ೦ದೆ ತಾಯಿಯರ ವೃದ್ದಾಪ್ಯದಲ್ಲಿ ಆಸರೆಯಾಗಿದ್ದಾಳೆ. ನಮ್ಮ ಬಾ೦ಧವ್ಯ ಬಿಡದ೦ತೆ ಮು೦ದುವರಿದಿದೆ.