ಇತ್ತೀಚೆಗೆ ನಡೆದ ಒಂದು ಕಾರ್ಯಕ್ರಮದಲ್ಲಿ ‘ಸಿರಿಭೂವಲಯ’ ಎಂಬ ಪ್ರಾಚೀನ ಕನ್ನಡ ಅಂಕಕಾವ್ಯದ ಮೂರು ಪರಿಚಯ ಕೃತಿಗಳು (ಎರಡು ಕನ್ನಡ ಹಾಗೂ ಒಂದು ಹಿಂದಿಯಲ್ಲಿ ಅನುವಾದಿತ) ಬಿಡುಗಡೆಯಾದವು. ಆ ಕೃತಿಯ ಬಗ್ಗೆ ತಿಳಿಸಿದ ಕೆಲವೇ ವಿಷಯಗಳೂ ಕುತೂಹಲದಿಂದ ಮುಂದಿನದನ್ನು ನಿರೀಕ್ಷಿಸುವಂತೆ ಆಸಕ್ತಿಕರವಾಗಿದ್ದವು. ಈ ಗ್ರಂಥವನ್ನು ರಚಿಸಿದ ಕುಮುದೇಂದುಮುನಿಯ ಅಗಾಧ ಜ್ಞಾನಸಂಪತ್ತಿಗೆ ತಲೆಬಾಗುತ್ತಾ ಪರಿಚಯಕೃತಿಗಳಿಂದ ತಿಳಿದುಕೊಂಡ ಕೆಲವು ಅಂಶಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ:
ಕ್ರಿ.ಶ.೮೦೦ರ ಸುಮಾರಿನಲ್ಲಿ ಈ ಕರ್ನಾಟಕ ಸಾಮ್ರಾಜ್ಯದ ರಾಜಧಾನಿಯಾಗಿ ನಿರ್ಮಾಣವಾದ ಮಾನ್ಯಖೇಟದ ಅರಸು ಅಮೋಘವರ್ಷನಿಗೆ ಗುರುವಾಗಿದ್ದ ಕುಮುದೇಂದುವೆಂಬ ಜೈನಯತಿಯು ಜಗತ್ತಿನ ಅತ್ಯಂತ ಅಚ್ಚರಿಯಾದ ಪ್ರಾಚೀನ ಕನ್ನಡ ಅಂಕಕಾವ್ಯವಾದ ಸಿರಿಭೂವಲಯವನ್ನು ರಚಿಸಿದನು. ‘ಸರ್ವ ಭಾಷಾಮಯೀ ಭಾಷಾ ಸಿರಿಭೂವಲಯ’ ಎಂಬ ಈ ಗ್ರಂಥವು, ‘ಜಗತ್ತಿನಲ್ಲಿ ಎಲ್ಲವೂ ಗಣಿತಾತ್ಮಕವಾಗಿ ರಚನೆಯಾಗಿದೆ. ಯಾವುದೂ ಆಕಸ್ಮಿಕವಾಗಿ ಸೃಷ್ಟಿಯಾಗಿಲ್ಲ. ಜೀವನದಲ್ಲಿ ಕಾಣಬರುವ ಸುಖ-ದುಃಖ, ಲಾಭ-ನಷ್ಟ, ಸತ್ಯ-ಮಿಥ್ಯ, ಒಳಿತು-ಕೆಡಕು, ಹಗಲು-ರಾತ್ರಿ, ಪಾಪ-ಪುಣ್ಯ ಇತ್ಯಾದಿ ದ್ವಂದ್ವಗಳೆಲ್ಲವೂ ಸಮವಾಗಿವೆ. ಇವುಗಳು ಎಲ್ಲರಿಗೂ ಸಮಪಾಲು. ಜಗತ್ತಿನ ಮಾನವ ಕುಲಕ್ಕೆಲ್ಲಾ ಒಂದೇ ಧರ್ಮ, ಅದು ಮಾನವ ಧರ್ಮ ಎಂಬ ಮೂರು ಮೂಲಭೂತ ಸಂಗತಿಗಳನ್ನು ಪ್ರತಿಪಾದಿಸುತ್ತದೆ.
‘ಕವಿರಾಜಮಾರ್ಗ’ವೇ ಕನ್ನಡದ ಪ್ರಾಚೀನ ಕೃತಿ, ‘ಹಲ್ಮಿಡಿ’ಶಾಸನವೇ ಪ್ರಾಚೀನ ಬರಹ, ಪಂಪನೇ ಕನ್ನಡದ ಆದಿ ಕವಿ, ಅವನ ಕಾವ್ಯವೇ ಕನ್ನಡದ ಪ್ರಾಚೀನ ಹಳಗನ್ನಡಕಾವ್ಯ ಮುಂತಾಗಿ ನಾವು ಇದುವರೆಗೆ ತಿಳಿದುಕೊಂಡಿರುವುದೆಲ್ಲವೂ ತಪ್ಪು ಎಂಬುದಕ್ಕೆ ಸಿರಿಭೂವಲಯ ಗ್ರಂಥವು ಸಾಕ್ಷಿಯಾಗಿದೆ. ಕನ್ನಡ ಅಕ್ಷರಲಿಪಿ ಹಾಗೂ ಕನ್ನಡಅಂಕಿಗಳ ಉಗಮ ಮತ್ತು ವಿಕಾಸವನ್ನು ಕುರಿತಂತೆ ಇದುವರೆಗಿನ ನಿರ್ಧಾರಗಳು ಹಾಗೂ ಹೇಳಿಕೆಗಳು ತಪ್ಪು ಎಂಬುದನ್ನೂ ಸಿರಿಭೂವಲಯವು ನಿರೂಪಿಸುತ್ತದೆ.
ವ್ಯಾಸಮುನಿಯು ಮಹಾಭಾರತದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಉಪದೇಶಿಸುವುದನ್ನು ಚಿತ್ರಿಸಿರುವುದನ್ನು ನಾವು ಓದಿ ಅಥವಾ ಕೇಳಿ ತಿಳಿದಿದ್ದೇವೆ. ಆದರೆ ಶ್ರೀಕೃಷ್ಣನಿಗೆ ಭಗವದ್ಗೀತೆಯ ಉಪದೇಶವಾಗಿರುವುದು ನೇಮಿತೀರ್ಥಂಕರನಿಂದ ಎಂಬ ಮೂಲಭೂತ ಸತ್ಯಸಂಗತಿಯನ್ನು ಸಿರಿಭೂವಲಯವು ಖಚಿತವಾಗಿ ಚಿತ್ರೀಕರಿಸುತ್ತದೆ. ಆದಿತೀರ್ಥಂಕರ ಋಷಭದೇವನಿಂದ ಮಗಳು ಸುಂದರಿಗೆ ಬೋಧಿಸಲ್ಪಟ್ಟ ಕೇವಲಜ್ಞಾನವನ್ನು ಗ್ರಹಿಸಿದ ಬಾಹುಬಲಿಯು ಮುಂದೆ ಗೊಮ್ಮಟನೆನಿಸುತ್ತಾನೆ. ಪಶು-ಪಕ್ಷಿಸಹಿತವಾದ ಸಕಲ ಜೀವರಾಶಿಗೂ ಅರ್ಥವಾಗುವಂತೆ ತಿಳಿಯಹೇಳಿದ ಈ ಕೇವಲಜ್ಞಾನವೇ ‘ದಿವ್ಯಧ್ವನಿ’ ಎನಿಸಿ, ಪ್ರತಿಯೊಬ್ಬ ತೀರ್ಥಂಕರನ ಗಣಧರರ ಮೂಲಕ ಮುಂದಿನ ತೀರ್ಥಂಕರರ ಮೂಲಕ ನೇಮಿಯ ಕಾಲದವರೆವಿಗೂ ಹರಿದು ಬಂದಿತು. ಆತನಿಂದ ಈ ದಿವ್ಯವಾಣಿಯು ಶ್ರೀಕೃಷ್ಣನಿಗೆ ಉಪದೇಶವಾಯಿತು. ಕೃಷ್ಣನು ವ್ಯಾಸಮುನಿಗೆ ಇದನ್ನು ತಿಳಿಸಿಕೊಟ್ಟ. ಅವನು ತನ್ನ ಜಯಕಾವ್ಯದಲ್ಲಿ ಇದನ್ನೇ ೧೬೩ಶ್ಲೋಕಗಳ ಭಗವದ್ಗೀತೆಯಾಗಿ ನಿರೂಪಿಸಿದ್ದಾನೆ. ಯುದ್ಧವಿಮುಖನಾಗಲಿದ್ದ ಪಾರ್ಥನಿಗೂ ಕೃಷ್ಣನು ಗೀತೋಪದೇಶದ ರೂಪದಲ್ಲಿ ಈ ದಿವ್ಯಧ್ವನಿಯನ್ನು ಉಪದೇಶಿಸಿದ.(ಕ್ರಿ.ಪೂ. ೧೯೫೪)
ಭದ್ರಬಾಹುಮುನಿಯ ಕಾಲದಲ್ಲಿ ಕಳ್ವಪ್ಪುವಿಗೆ(ಇಂದಿನ ಶ್ರವಣಬೆಳಗೊಳ) ಪ್ರವೇಶಿಸುವ ಮೂಲಕ ಜೈನಧರ್ಮವು ಕನ್ನಡನಾಡಿನಲ್ಲಿ ಪ್ರಚಾರಕ್ಕೆ ಬಂದಿತೆಂಬುದು ಇದುವರೆಗಿನ ನಮ್ಮ ತಿಳುವಳಿಕೆಯಾಗಿತ್ತು, ಆದರೆ ಜೈನಸಂಪ್ರದಾಯದ ಮೊದಲ ತೀರ್ಥಂಕರ ಋಷಭದೇವನೇ ಕನ್ನಡಿಗನೆಂಬ ಕೋಟ್ಯಾಂತರ ವರ್ಷಗಳ ಹಿಂದಿನ ಸತ್ಯಸಂಗತಿಯನ್ನು ಸಿರಿಭೂವಲಯವು ಖಚಿತವಾಗಿ ವಿವರಿಸುತ್ತದೆ! ಆದಿ ತೀರ್ಥಂಕರ ಋಷಭದೇವನು ಬ್ರಾಹ್ಮಿ ಮತ್ತು ಸುಂದರಿ ಎಂಬ ತನ್ನ ಕುವರಿಯರಿಗೆ ತಿಳಿಸಿಕೊಟ್ಟ ಕನ್ನಡದ ೬೪ ಮೂಲಾಕ್ಷರಗಳ ವರ್ಣಮಾಲೆ ಹಾಗೂ ಸೊನ್ನೆಯಿಂದ ಹುಟ್ಟಿದ ೧ರಿಂದ ೯ರವರೆಗಿನ ಹತ್ತು ಅಂಕಿಗಳೇ ಮುಂದೆ ಬ್ರಾಹ್ಮಿ, ಸುಂದರಿ ಹೆಸರಿನ ಲಿಪಿಯೆಂದು ಪ್ರಸಿದ್ಧವಾದವು. ಲಭ್ಯವಿರುವ ಸಾಹಿತ್ಯಿಕ ಮಾಹಿತಿಗಳ ಆಧಾರದಲ್ಲಿ ಲೆಕ್ಕಹಾಕಿದರೆ, ಇದು ಕೋಟ್ಯಾಂತರ ವರ್ಷಳ ಹಿಂದಿನ ಇತಿಹಾಸವಾಗುತ್ತದೆ!
ಸಿರಿಭೂವಲಯವೆಂಬ ಅಂಕಕಾವ್ಯವು ೧ರಿಂದ ೬೪ರವರೆಗಿನ ಕನ್ನಡ ಅಂಕಿಗಳನ್ನು ಬಳಸಿ ರಚಿಸಲಾಗಿರುವ ಕಾವ್ಯವಾಗಿದೆ. ಇದರ ವ್ಯಾಪ್ತಿಯು ೧೬೦೦ ಪುಟಗಳು! ಇವುಗಳನ್ನು ‘ಚಕ್ರ’ಎಂದು ಕರೆಯಲಾಗುತ್ತದೆ. ಪ್ರತಿಯೊಂದು ಪುಟದಲ್ಲಿಯೂ ಸುಮಾರು ಆರು ಅಂಗುಲಗಳಷ್ಟು ಉದ್ದಗಲದ ಒಂದು ದೊಡ್ಡದಾದ ಚೌಕಾಕೃತಿ. ಅದನ್ನು ಉದ್ದಸಾಲಿನಲ್ಲಿ ೨೭; ಅಡ್ಡಸಾಲಿನಲ್ಲಿ ೨೭ ಚಿಕ್ಕಚಿಕ್ಕ ಮನೆಗಳಿರುವಂತೆ ೭೨೯ ಚೌಕಗಳಾಗಿ ರೂಪಿಸಲಾಗುತ್ತದೆ. ಇವುಗಳಲ್ಲಿ ೧ರಿಂದ ೬೪ರವರೆಗಿನ ಅಂಕಿಗಲನ್ನು ಸೂತ್ರಬದ್ಧವಾಗಿ ತುಂಬಲಾಗಿದೆ. ಸರ್ವಭಾಷಾಮಯೀಭಾಷಾ ಕನ್ನಡ ವರ್ಣಮಾಲೆಯ ೬೪ಅಕ್ಷರಗಳನ್ನು ೬೪ ಅಂಕಿಗಳಿಗೆ ಅಳವಡಿಸಿಕೊಳ್ಳಬೇಕು. ಆಗ ಗ್ರಂಥದ ಅಕ್ಷರ ಚಕ್ರ ದೊರೆಯುತ್ತದೆ. ಈ ಅಕ್ಷರ ಚಕ್ರದಲ್ಲಿ ಜಗತ್ತಿನ ೭೧೮ ಭಾಷೆಗಳ ಸಾಹಿತ್ಯವು ದೊರೆಯುತ್ತದೆ.ಗ್ರಂಥವನ್ನು ಒಂಭತ್ತು ಖಂಡಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಖಂಡದಲ್ಲೂ ಹಲವಾರು ಅಧ್ಯಾಯಗಳಿರುತ್ತವೆ. ಅಕ್ಷರ ಚಕ್ರವನ್ನು ಗ್ರಂಥದಲ್ಲಿ ಸೂಚಿಸಿರುವ ಸುಮಾರು ೪೦ಬಂಧಗಳಲ್ಲಿ ಜೋಡಿಸಿಕೊಮಡು ಓದಿದಾಗ, ಬೇರೆಬೇರೆ ಭಾಷೆಗಳ ಸಾಹಿತ್ಯವು ದೊರೆಯುತ್ತದೆ. ಇದು ಈ ಸಾಹಿತ್ಯದ ಬಾಹ್ಯರೂಪ. ವಿಶ್ವಭಾಷೆಯ ಸರಪಳಿಯಲ್ಲಿ ಬರುವ ೭೧೮ ಭಾಷೆಗಳಿಗೆ ಸೇರಿದ ಸಾಹಿತ್ಯದ ಸಾರ, ೩೬೩ ಮತಧರ್ಮಗಳಿಗೆ ಸಂಬಂಧಿಸಿದ ವಿಚಾರಗಳು;(ಸರ್ವಧರ್ಮ ಸಮನ್ವಯ) ಇತಿಹಾಸ, ಪಶುಪಾಲನೆಯಿಂದ ಮೊದಲ್ಗೊಂಡು ಅಣುವಿಜ್ಞಾನ, ಅಂಕಗಣಿತ, ಆಯುರ್ವೇದ, ಗಣಕಯಂತ್ರಕ್ರಮ, ಜ್ಯೋತಿಷ್ಯ, ಭೌತಶಾಸ್ತ್ರ, ಲೋಹಶಾಸ್ತ್ರ, ರಸಾಯನಶಾಸ್ತ್ರ, ಸಂಗೀತಶಾಸ್ತ್ರ, ನಾಟ್ಯಶಾಸ್ತ್ರ, ದಾಂಪತ್ಯವಿಜ್ಞಾನ ಮುಂತಾದ ೬೪ ವಿದ್ಯೆಗಳ ವಿಚಾರಗಳು ಮಾತ್ರವಲ್ಲ ರಾಮಾಯಣ, ಮಹಾಭಾರತ, ಭಾಗವತ, ಭಗವದ್ಗೀತೆ, ಸಹಸ್ರನಾಮ ಮುಂತಾದ ಭಾರತದ ಪ್ರಾಚೀನ ಸಾಹಿತ್ಯವೆಲ್ಲವೂ ಈ ಗ್ರಂಥದಲ್ಲಿ ಅಡಕವಾಗಿವೆ. ಇದನ್ನು ಬರೆದ ಕುಮುದೇಂದುಮುನಿಯು ಕನ್ನಡನಾಡಿನ ಚಿನ್ನದ ಭೂಮಿಯೆಂದು ಪ್ರಸಿದ್ಧವಾದ ಕೋಲಾರದ ಸಮೀಪದ ನಂದಿಬೆಟ್ಟದ ತಪ್ಪಲಿನ ಯಲವಳ್ಳಿಯಲ್ಲಿ ಸುಮಾರು ೧೨೦೦ವರ್ಷಗಳಷ್ಟು ಹಿಂದೆ ವಾಸವಿದ್ದವನು. ಇವನು ‘ಯಲವಭೂರಿಸಿ? ಎಂದು ಪ್ರಸಿದ್ಧನಾಗಿದ್ದ. ‘ಸಿರಿಭೂವಲಯ’ ಎಂಬುದನ್ನು ಹಿಂದುಮುಂದಾಗಿ ಓದಿದರೆ ಈ ಗ್ರಂಥಕರ್ತನ ಹೆಸರಾದ ‘ಯಲವಭೂರಿಸಿ’ ಎಂದಾಗುತ್ತದೆ!
೧೯೫೩ಕ್ಕೆ ಮೊದಲು ಕರ್ಲಮಂಗಲಂ ಶ್ರೀಕಂಠಯ್ಯನವರು ಸಂಶೋಧಿಸಿ ಅಕ್ಷರಲಿಪಿಯಲ್ಲಿ ಮುದ್ರಿಸಿದ ಈ ಅಚ್ಚರಿಯ ಗ್ರಂಥಕ್ಕೆ ಕೆಲವು ವಿದ್ವಾಂಸರು ಪುನಃ ಜೀವತುಂಬುವ ಕಾರ್ಯ ನಡೆಸಿದರು. ಆದರೆ ಗೊಂದಲವೇ ಉಂಟಾಯಿತು........
ಸುಧಾರ್ಥಿ, ಹಾಸನ ಇವರು ಈ ಮೊದಲು ‘ಸರ್ವ ಭಾಷಾಮಯೀ ಭಾಷಾ ಸಿರಿಭೂವಲಯಸಾರ’ ಹಾಗೂ ‘ಸಿರಿಭೂವಲಯದ ಆಯ್ದ ಸಾಂಗತ್ಯ ಪದ್ಯಗಳ ಸಂಗ್ರಹ’ ಎಂಬ ಪುಸ್ತಕಗಳನ್ನು ಪ್ರಕಟಿಸಿದ್ದು ಇದೀಗ ‘ಸಿರಿಭೂವಲಯದ ಒಂದು ಮಿಂಚುನೋಟ’ ಹಾಗೂ ‘ಜಯಾಖ್ಯಾನಾಂತರ್ಗತ ಭಗವದ್ಗೀತೆ’ ಎಂಬ ಎರಡು ಪರಿಚಯ ಕೃತಿಗಳನ್ನು ಪ್ರಕಟಿಸಿದ್ದಾರೆ. ಸಿರಿಭೂವಲಯಸಾರದ ಸಂಕ್ಷಿಪ್ತ ಹಿಂದೀ ಭಾವಾನುವಾದ-‘ಸಿರಿಭೂವಲಯ ಕೀ ಏಕ್ ಝಾಂಕಿ’ಯನ್ನು ಶ್ರೀ ಎಸ್. ರಾಮಣ್ಣನವರು ಸಿದ್ಧಪಡಿಸಿ ಪ್ರಕಟಿಸಿದ್ದಾರೆ. ಇವು ಸಿರಿಭೂವಲಯದ ಸೂಕ್ತ ಪರಿಚಯಕ್ಕೆ ಉಪಯುಕ್ತ ಮಾರ್ಗದರ್ಶಿಗಳಾಗಿವೆ.
‘ಇದು ಒಬ್ಬಿಬ್ಬರಿಂದ ಮುನ್ನಡೆಯುವ ಕಾರ್ಯವಲ್ಲ. ಗ್ರಂಥದ ಸತ್ಯಾಸತ್ಯತೆಯನ್ನು ಪರೀಕ್ಷಿಸಬೇಕಾದರೆ ೭೧೮ಭಾಷೆಗಳನ್ನು ತಿಳಿದವರಿರಬೇಕು; ಸಕಲ ಜ್ಞಾನ-ವಿಜ್ಞಾನ-ಶಾಸ್ತ್ರ; ಇತಿಹಾಸ; ಸಾಹಿತ್ಯ ಮುಂತಾದುವನ್ನು ಬಲ್ಲವರು ಒಂದೆಡೆ ಕಲೆತು ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸಬೇಕು. ಆಗ ಮಾತ್ರವೇ ಕುಮುದೇಂದುವಿನ ಜ್ಞಾನನಿಧಿಯಾದ ಸಿರಿಭೂವಲಯದ ವಿಶ್ವರೂಪದರ್ಶನವು ಜಗತ್ತಿಗೆ ದೊರೆಯಲು ಸಾಧ್ಯವಾಗುತ್ತದೆ,’ ಎನ್ನುವುದು ಸುಧಾರ್ಥಿ, ಹಾಸನ ಇವರ ಅಭಿಪ್ರಾಯವಾಗಿದೆ.
‘ಸಿರಿಭೂವಲಯ’ದ ಬಗ್ಗೆ ಅಂತರ್ಜಾಲದಲ್ಲಿ ವೀಕ್ಷಿಸಿದಾಗ ಸಾಕಷ್ಟು ಮಾಹಿತಿಗಳಿರುವುದು ಕಂಡುಬಂದಿತು. ಇಂಥಾ ಒಂದು ಮಹಾನ್ ಗ್ರಂಥವು ಎಲ್ಲ ಆಸಕ್ತರನ್ನೂ ತಲುಪುವಂತಾಗಲಿ ಎಂದು ಆಶಿಸೋಣ.