Sunday, January 29, 2012

ಮನದ ಅಂಗಳದಿ.........೭೭. ‘ಸಿರಿಭೂವಲಯ’

ಇತ್ತೀಚೆಗೆ ನಡೆದ ಒಂದು ಕಾರ್ಯಕ್ರಮದಲ್ಲಿ ‘ಸಿರಿಭೂವಲಯ’ ಎಂಬ ಪ್ರಾಚೀನ ಕನ್ನಡ ಅಂಕಕಾವ್ಯದ ಮೂರು ಪರಿಚಯ ಕೃತಿಗಳು (ಎರಡು ಕನ್ನಡ ಹಾಗೂ ಒಂದು ಹಿಂದಿಯಲ್ಲಿ ಅನುವಾದಿತ) ಬಿಡುಗಡೆಯಾದವು. ಆ ಕೃತಿಯ ಬಗ್ಗೆ ತಿಳಿಸಿದ ಕೆಲವೇ ವಿಷಯಗಳೂ ಕುತೂಹಲದಿಂದ ಮುಂದಿನದನ್ನು ನಿರೀಕ್ಷಿಸುವಂತೆ ಆಸಕ್ತಿಕರವಾಗಿದ್ದವು. ಈ ಗ್ರಂಥವನ್ನು ರಚಿಸಿದ ಕುಮುದೇಂದುಮುನಿಯ ಅಗಾಧ ಜ್ಞಾನಸಂಪತ್ತಿಗೆ ತಲೆಬಾಗುತ್ತಾ ಪರಿಚಯಕೃತಿಗಳಿಂದ ತಿಳಿದುಕೊಂಡ ಕೆಲವು ಅಂಶಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ:

ಕ್ರಿ.ಶ.೮೦೦ರ ಸುಮಾರಿನಲ್ಲಿ ಈ ಕರ್ನಾಟಕ ಸಾಮ್ರಾಜ್ಯದ ರಾಜಧಾನಿಯಾಗಿ ನಿರ್ಮಾಣವಾದ ಮಾನ್ಯಖೇಟದ ಅರಸು ಅಮೋಘವರ್ಷನಿಗೆ ಗುರುವಾಗಿದ್ದ ಕುಮುದೇಂದುವೆಂಬ ಜೈನಯತಿಯು ಜಗತ್ತಿನ ಅತ್ಯಂತ ಅಚ್ಚರಿಯಾದ ಪ್ರಾಚೀನ ಕನ್ನಡ ಅಂಕಕಾವ್ಯವಾದ ಸಿರಿಭೂವಲಯವನ್ನು ರಚಿಸಿದನು. ‘ಸರ್ವ ಭಾಷಾಮಯೀ ಭಾಷಾ ಸಿರಿಭೂವಲಯ’ ಎಂಬ ಈ ಗ್ರಂಥವು, ‘ಜಗತ್ತಿನಲ್ಲಿ ಎಲ್ಲವೂ ಗಣಿತಾತ್ಮಕವಾಗಿ ರಚನೆಯಾಗಿದೆ. ಯಾವುದೂ ಆಕಸ್ಮಿಕವಾಗಿ ಸೃಷ್ಟಿಯಾಗಿಲ್ಲ. ಜೀವನದಲ್ಲಿ ಕಾಣಬರುವ ಸುಖ-ದುಃಖ, ಲಾಭ-ನಷ್ಟ, ಸತ್ಯ-ಮಿಥ್ಯ, ಒಳಿತು-ಕೆಡಕು, ಹಗಲು-ರಾತ್ರಿ, ಪಾಪ-ಪುಣ್ಯ ಇತ್ಯಾದಿ ದ್ವಂದ್ವಗಳೆಲ್ಲವೂ ಸಮವಾಗಿವೆ. ಇವುಗಳು ಎಲ್ಲರಿಗೂ ಸಮಪಾಲು. ಜಗತ್ತಿನ ಮಾನವ ಕುಲಕ್ಕೆಲ್ಲಾ ಒಂದೇ ಧರ್ಮ, ಅದು ಮಾನವ ಧರ್ಮ ಎಂಬ ಮೂರು ಮೂಲಭೂತ ಸಂಗತಿಗಳನ್ನು ಪ್ರತಿಪಾದಿಸುತ್ತದೆ.

‘ಕವಿರಾಜಮಾರ್ಗ’ವೇ ಕನ್ನಡದ ಪ್ರಾಚೀನ ಕೃತಿ, ‘ಹಲ್ಮಿಡಿ’ಶಾಸನವೇ ಪ್ರಾಚೀನ ಬರಹ, ಪಂಪನೇ ಕನ್ನಡದ ಆದಿ ಕವಿ, ಅವನ ಕಾವ್ಯವೇ ಕನ್ನಡದ ಪ್ರಾಚೀನ ಹಳಗನ್ನಡಕಾವ್ಯ ಮುಂತಾಗಿ ನಾವು ಇದುವರೆಗೆ ತಿಳಿದುಕೊಂಡಿರುವುದೆಲ್ಲವೂ ತಪ್ಪು ಎಂಬುದಕ್ಕೆ ಸಿರಿಭೂವಲಯ ಗ್ರಂಥವು ಸಾಕ್ಷಿಯಾಗಿದೆ. ಕನ್ನಡ ಅಕ್ಷರಲಿಪಿ ಹಾಗೂ ಕನ್ನಡಅಂಕಿಗಳ ಉಗಮ ಮತ್ತು ವಿಕಾಸವನ್ನು ಕುರಿತಂತೆ ಇದುವರೆಗಿನ ನಿರ್ಧಾರಗಳು ಹಾಗೂ ಹೇಳಿಕೆಗಳು ತಪ್ಪು ಎಂಬುದನ್ನೂ ಸಿರಿಭೂವಲಯವು ನಿರೂಪಿಸುತ್ತದೆ.

ವ್ಯಾಸಮುನಿಯು ಮಹಾಭಾರತದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಉಪದೇಶಿಸುವುದನ್ನು ಚಿತ್ರಿಸಿರುವುದನ್ನು ನಾವು ಓದಿ ಅಥವಾ ಕೇಳಿ ತಿಳಿದಿದ್ದೇವೆ. ಆದರೆ ಶ್ರೀಕೃಷ್ಣನಿಗೆ ಭಗವದ್ಗೀತೆಯ ಉಪದೇಶವಾಗಿರುವುದು ನೇಮಿತೀರ್ಥಂಕರನಿಂದ ಎಂಬ ಮೂಲಭೂತ ಸತ್ಯಸಂಗತಿಯನ್ನು ಸಿರಿಭೂವಲಯವು ಖಚಿತವಾಗಿ ಚಿತ್ರೀಕರಿಸುತ್ತದೆ. ಆದಿತೀರ್ಥಂಕರ ಋಷಭದೇವನಿಂದ ಮಗಳು ಸುಂದರಿಗೆ ಬೋಧಿಸಲ್ಪಟ್ಟ ಕೇವಲಜ್ಞಾನವನ್ನು ಗ್ರಹಿಸಿದ ಬಾಹುಬಲಿಯು ಮುಂದೆ ಗೊಮ್ಮಟನೆನಿಸುತ್ತಾನೆ. ಪಶು-ಪಕ್ಷಿಸಹಿತವಾದ ಸಕಲ ಜೀವರಾಶಿಗೂ ಅರ್ಥವಾಗುವಂತೆ ತಿಳಿಯಹೇಳಿದ ಈ ಕೇವಲಜ್ಞಾನವೇ ‘ದಿವ್ಯಧ್ವನಿ’ ಎನಿಸಿ, ಪ್ರತಿಯೊಬ್ಬ ತೀರ್ಥಂಕರನ ಗಣಧರರ ಮೂಲಕ ಮುಂದಿನ ತೀರ್ಥಂಕರರ ಮೂಲಕ ನೇಮಿಯ ಕಾಲದವರೆವಿಗೂ ಹರಿದು ಬಂದಿತು. ಆತನಿಂದ ಈ ದಿವ್ಯವಾಣಿಯು ಶ್ರೀಕೃಷ್ಣನಿಗೆ ಉಪದೇಶವಾಯಿತು. ಕೃಷ್ಣನು ವ್ಯಾಸಮುನಿಗೆ ಇದನ್ನು ತಿಳಿಸಿಕೊಟ್ಟ. ಅವನು ತನ್ನ ಜಯಕಾವ್ಯದಲ್ಲಿ ಇದನ್ನೇ ೧೬೩ಶ್ಲೋಕಗಳ ಭಗವದ್ಗೀತೆಯಾಗಿ ನಿರೂಪಿಸಿದ್ದಾನೆ. ಯುದ್ಧವಿಮುಖನಾಗಲಿದ್ದ ಪಾರ್ಥನಿಗೂ ಕೃಷ್ಣನು ಗೀತೋಪದೇಶದ ರೂಪದಲ್ಲಿ ಈ ದಿವ್ಯಧ್ವನಿಯನ್ನು ಉಪದೇಶಿಸಿದ.(ಕ್ರಿ.ಪೂ. ೧೯೫೪)

ಭದ್ರಬಾಹುಮುನಿಯ ಕಾಲದಲ್ಲಿ ಕಳ್ವಪ್ಪುವಿಗೆ(ಇಂದಿನ ಶ್ರವಣಬೆಳಗೊಳ) ಪ್ರವೇಶಿಸುವ ಮೂಲಕ ಜೈನಧರ್ಮವು ಕನ್ನಡನಾಡಿನಲ್ಲಿ ಪ್ರಚಾರಕ್ಕೆ ಬಂದಿತೆಂಬುದು ಇದುವರೆಗಿನ ನಮ್ಮ ತಿಳುವಳಿಕೆಯಾಗಿತ್ತು, ಆದರೆ ಜೈನಸಂಪ್ರದಾಯದ ಮೊದಲ ತೀರ್ಥಂಕರ ಋಷಭದೇವನೇ ಕನ್ನಡಿಗನೆಂಬ ಕೋಟ್ಯಾಂತರ ವರ್ಷಗಳ ಹಿಂದಿನ ಸತ್ಯಸಂಗತಿಯನ್ನು ಸಿರಿಭೂವಲಯವು ಖಚಿತವಾಗಿ ವಿವರಿಸುತ್ತದೆ! ಆದಿ ತೀರ್ಥಂಕರ ಋಷಭದೇವನು ಬ್ರಾಹ್ಮಿ ಮತ್ತು ಸುಂದರಿ ಎಂಬ ತನ್ನ ಕುವರಿಯರಿಗೆ ತಿಳಿಸಿಕೊಟ್ಟ ಕನ್ನಡದ ೬೪ ಮೂಲಾಕ್ಷರಗಳ ವರ್ಣಮಾಲೆ ಹಾಗೂ ಸೊನ್ನೆಯಿಂದ ಹುಟ್ಟಿದ ೧ರಿಂದ ೯ರವರೆಗಿನ ಹತ್ತು ಅಂಕಿಗಳೇ ಮುಂದೆ ಬ್ರಾಹ್ಮಿ, ಸುಂದರಿ ಹೆಸರಿನ ಲಿಪಿಯೆಂದು ಪ್ರಸಿದ್ಧವಾದವು. ಲಭ್ಯವಿರುವ ಸಾಹಿತ್ಯಿಕ ಮಾಹಿತಿಗಳ ಆಧಾರದಲ್ಲಿ ಲೆಕ್ಕಹಾಕಿದರೆ, ಇದು ಕೋಟ್ಯಾಂತರ ವರ್ಷಳ ಹಿಂದಿನ ಇತಿಹಾಸವಾಗುತ್ತದೆ!

ಸಿರಿಭೂವಲಯವೆಂಬ ಅಂಕಕಾವ್ಯವು ೧ರಿಂದ ೬೪ರವರೆಗಿನ ಕನ್ನಡ ಅಂಕಿಗಳನ್ನು ಬಳಸಿ ರಚಿಸಲಾಗಿರುವ ಕಾವ್ಯವಾಗಿದೆ. ಇದರ ವ್ಯಾಪ್ತಿಯು ೧೬೦೦ ಪುಟಗಳು! ಇವುಗಳನ್ನು ‘ಚಕ್ರ’ಎಂದು ಕರೆಯಲಾಗುತ್ತದೆ. ಪ್ರತಿಯೊಂದು ಪುಟದಲ್ಲಿಯೂ ಸುಮಾರು ಆರು ಅಂಗುಲಗಳಷ್ಟು ಉದ್ದಗಲದ ಒಂದು ದೊಡ್ಡದಾದ ಚೌಕಾಕೃತಿ. ಅದನ್ನು ಉದ್ದಸಾಲಿನಲ್ಲಿ ೨೭; ಅಡ್ಡಸಾಲಿನಲ್ಲಿ ೨೭ ಚಿಕ್ಕಚಿಕ್ಕ ಮನೆಗಳಿರುವಂತೆ ೭೨೯ ಚೌಕಗಳಾಗಿ ರೂಪಿಸಲಾಗುತ್ತದೆ. ಇವುಗಳಲ್ಲಿ ೧ರಿಂದ ೬೪ರವರೆಗಿನ ಅಂಕಿಗಲನ್ನು ಸೂತ್ರಬದ್ಧವಾಗಿ ತುಂಬಲಾಗಿದೆ. ಸರ್ವಭಾಷಾಮಯೀಭಾಷಾ ಕನ್ನಡ ವರ್ಣಮಾಲೆಯ ೬೪ಅಕ್ಷರಗಳನ್ನು ೬೪ ಅಂಕಿಗಳಿಗೆ ಅಳವಡಿಸಿಕೊಳ್ಳಬೇಕು. ಆಗ ಗ್ರಂಥದ ಅಕ್ಷರ ಚಕ್ರ ದೊರೆಯುತ್ತದೆ. ಈ ಅಕ್ಷರ ಚಕ್ರದಲ್ಲಿ ಜಗತ್ತಿನ ೭೧೮ ಭಾಷೆಗಳ ಸಾಹಿತ್ಯವು ದೊರೆಯುತ್ತದೆ.ಗ್ರಂಥವನ್ನು ಒಂಭತ್ತು ಖಂಡಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಖಂಡದಲ್ಲೂ ಹಲವಾರು ಅಧ್ಯಾಯಗಳಿರುತ್ತವೆ. ಅಕ್ಷರ ಚಕ್ರವನ್ನು ಗ್ರಂಥದಲ್ಲಿ ಸೂಚಿಸಿರುವ ಸುಮಾರು ೪೦ಬಂಧಗಳಲ್ಲಿ ಜೋಡಿಸಿಕೊಮಡು ಓದಿದಾಗ, ಬೇರೆಬೇರೆ ಭಾಷೆಗಳ ಸಾಹಿತ್ಯವು ದೊರೆಯುತ್ತದೆ. ಇದು ಈ ಸಾಹಿತ್ಯದ ಬಾಹ್ಯರೂಪ. ವಿಶ್ವಭಾಷೆಯ ಸರಪಳಿಯಲ್ಲಿ ಬರುವ ೭೧೮ ಭಾಷೆಗಳಿಗೆ ಸೇರಿದ ಸಾಹಿತ್ಯದ ಸಾರ, ೩೬೩ ಮತಧರ್ಮಗಳಿಗೆ ಸಂಬಂಧಿಸಿದ ವಿಚಾರಗಳು;(ಸರ್ವಧರ್ಮ ಸಮನ್ವಯ) ಇತಿಹಾಸ, ಪಶುಪಾಲನೆಯಿಂದ ಮೊದಲ್ಗೊಂಡು ಅಣುವಿಜ್ಞಾನ, ಅಂಕಗಣಿತ, ಆಯುರ್ವೇದ, ಗಣಕಯಂತ್ರಕ್ರಮ, ಜ್ಯೋತಿಷ್ಯ, ಭೌತಶಾಸ್ತ್ರ, ಲೋಹಶಾಸ್ತ್ರ, ರಸಾಯನಶಾಸ್ತ್ರ, ಸಂಗೀತಶಾಸ್ತ್ರ, ನಾಟ್ಯಶಾಸ್ತ್ರ, ದಾಂಪತ್ಯವಿಜ್ಞಾನ ಮುಂತಾದ ೬೪ ವಿದ್ಯೆಗಳ ವಿಚಾರಗಳು ಮಾತ್ರವಲ್ಲ ರಾಮಾಯಣ, ಮಹಾಭಾರತ, ಭಾಗವತ, ಭಗವದ್ಗೀತೆ, ಸಹಸ್ರನಾಮ ಮುಂತಾದ ಭಾರತದ ಪ್ರಾಚೀನ ಸಾಹಿತ್ಯವೆಲ್ಲವೂ ಈ ಗ್ರಂಥದಲ್ಲಿ ಅಡಕವಾಗಿವೆ. ಇದನ್ನು ಬರೆದ ಕುಮುದೇಂದುಮುನಿಯು ಕನ್ನಡನಾಡಿನ ಚಿನ್ನದ ಭೂಮಿಯೆಂದು ಪ್ರಸಿದ್ಧವಾದ ಕೋಲಾರದ ಸಮೀಪದ ನಂದಿಬೆಟ್ಟದ ತಪ್ಪಲಿನ ಯಲವಳ್ಳಿಯಲ್ಲಿ ಸುಮಾರು ೧೨೦೦ವರ್ಷಗಳಷ್ಟು ಹಿಂದೆ ವಾಸವಿದ್ದವನು. ಇವನು ‘ಯಲವಭೂರಿಸಿ? ಎಂದು ಪ್ರಸಿದ್ಧನಾಗಿದ್ದ. ‘ಸಿರಿಭೂವಲಯ’ ಎಂಬುದನ್ನು ಹಿಂದುಮುಂದಾಗಿ ಓದಿದರೆ ಈ ಗ್ರಂಥಕರ್ತನ ಹೆಸರಾದ ‘ಯಲವಭೂರಿಸಿ’ ಎಂದಾಗುತ್ತದೆ!

೧೯೫೩ಕ್ಕೆ ಮೊದಲು ಕರ್ಲಮಂಗಲಂ ಶ್ರೀಕಂಠಯ್ಯನವರು ಸಂಶೋಧಿಸಿ ಅಕ್ಷರಲಿಪಿಯಲ್ಲಿ ಮುದ್ರಿಸಿದ ಈ ಅಚ್ಚರಿಯ ಗ್ರಂಥಕ್ಕೆ ಕೆಲವು ವಿದ್ವಾಂಸರು ಪುನಃ ಜೀವತುಂಬುವ ಕಾರ್ಯ ನಡೆಸಿದರು. ಆದರೆ ಗೊಂದಲವೇ ಉಂಟಾಯಿತು........

ಸುಧಾರ್ಥಿ, ಹಾಸನ ಇವರು ಈ ಮೊದಲು ‘ಸರ್ವ ಭಾಷಾಮಯೀ ಭಾಷಾ ಸಿರಿಭೂವಲಯಸಾರ’ ಹಾಗೂ ‘ಸಿರಿಭೂವಲಯದ ಆಯ್ದ ಸಾಂಗತ್ಯ ಪದ್ಯಗಳ ಸಂಗ್ರಹ’ ಎಂಬ ಪುಸ್ತಕಗಳನ್ನು ಪ್ರಕಟಿಸಿದ್ದು ಇದೀಗ ‘ಸಿರಿಭೂವಲಯದ ಒಂದು ಮಿಂಚುನೋಟ’ ಹಾಗೂ ‘ಜಯಾಖ್ಯಾನಾಂತರ್ಗತ ಭಗವದ್ಗೀತೆ’ ಎಂಬ ಎರಡು ಪರಿಚಯ ಕೃತಿಗಳನ್ನು ಪ್ರಕಟಿಸಿದ್ದಾರೆ. ಸಿರಿಭೂವಲಯಸಾರದ ಸಂಕ್ಷಿಪ್ತ ಹಿಂದೀ ಭಾವಾನುವಾದ-‘ಸಿರಿಭೂವಲಯ ಕೀ ಏಕ್ ಝಾಂಕಿ’ಯನ್ನು ಶ್ರೀ ಎಸ್. ರಾಮಣ್ಣನವರು ಸಿದ್ಧಪಡಿಸಿ ಪ್ರಕಟಿಸಿದ್ದಾರೆ. ಇವು ಸಿರಿಭೂವಲಯದ ಸೂಕ್ತ ಪರಿಚಯಕ್ಕೆ ಉಪಯುಕ್ತ ಮಾರ್ಗದರ್ಶಿಗಳಾಗಿವೆ.

‘ಇದು ಒಬ್ಬಿಬ್ಬರಿಂದ ಮುನ್ನಡೆಯುವ ಕಾರ್ಯವಲ್ಲ. ಗ್ರಂಥದ ಸತ್ಯಾಸತ್ಯತೆಯನ್ನು ಪರೀಕ್ಷಿಸಬೇಕಾದರೆ ೭೧೮ಭಾಷೆಗಳನ್ನು ತಿಳಿದವರಿರಬೇಕು; ಸಕಲ ಜ್ಞಾನ-ವಿಜ್ಞಾನ-ಶಾಸ್ತ್ರ; ಇತಿಹಾಸ; ಸಾಹಿತ್ಯ ಮುಂತಾದುವನ್ನು ಬಲ್ಲವರು ಒಂದೆಡೆ ಕಲೆತು ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸಬೇಕು. ಆಗ ಮಾತ್ರವೇ ಕುಮುದೇಂದುವಿನ ಜ್ಞಾನನಿಧಿಯಾದ ಸಿರಿಭೂವಲಯದ ವಿಶ್ವರೂಪದರ್ಶನವು ಜಗತ್ತಿಗೆ ದೊರೆಯಲು ಸಾಧ್ಯವಾಗುತ್ತದೆ,’ ಎನ್ನುವುದು ಸುಧಾರ್ಥಿ, ಹಾಸನ ಇವರ ಅಭಿಪ್ರಾಯವಾಗಿದೆ.

‘ಸಿರಿಭೂವಲಯ’ದ ಬಗ್ಗೆ ಅಂತರ್ಜಾಲದಲ್ಲಿ ವೀಕ್ಷಿಸಿದಾಗ ಸಾಕಷ್ಟು ಮಾಹಿತಿಗಳಿರುವುದು ಕಂಡುಬಂದಿತು. ಇಂಥಾ ಒಂದು ಮಹಾನ್ ಗ್ರಂಥವು ಎಲ್ಲ ಆಸಕ್ತರನ್ನೂ ತಲುಪುವಂತಾಗಲಿ ಎಂದು ಆಶಿಸೋಣ.

Tuesday, January 24, 2012

ಮನದ ಅಂಗಳದಿ.........76.ಹದ್ದು

ಪ್ರಾಣಿಗಳಿಂದಲೂ ನಾವು ಕಲಿಯಬೇಕಾದ ಅನೇಕ ಗುಣಗಳ ಬಗ್ಗೆ ಸಂಸ್ಕೃ ಒಂದು ಶ್ಲೋಕದಲ್ಲಿ ಈ ರೀತಿಯಾಗಿದೆ:

‘ಸಿಂಹಾದೇಕಂ ಬಕಾದೇಕಂ ಷಟ್ ಶುನಸ್ತ್ರೀಣಿ ಗಾರ್ಧಬಾತ್|

ವಾಯಸಾತ್ ಪಂಚ ಶಿಕ್ಷೇಶ್ಚ ಚತ್ವಾರಿ ಕುಕ್ಕುಟಾದಪಿ||?

ಸಿಂಹದಿಂದ ಒಂದು ಗುಣ_ ಎದುರಾಗುವುದು ಮೊಲವಿರಲಿ, ಆನೆಯಿರಲಿ ಸಿಂಹವು ಸಮಾನ ರಭಸದಿಂದ ಮೇಲೆ ಬೀಳುತ್ತದೆ.

ಹಾಗೇ ಮನುಷ್ಯ ತಾನು ಮಾಡುವ ಕೆಲಸ ದೊಡ್ಡದು-ಚಿಕ್ಕದು ಎಂದು ತಾರತಮ್ಯ

ಮಾಡಬಾರದು.

ಕೊಕ್ಕರೆಯಿಂದ ಒಂದು ಗುಣ_ ಏಕಾಗ್ರತೆ, (ಕಾರ್ಯಪ್ರವೃತ್ತನಾಗುವ ಮನುಷ್ಯನಿಗೆ, ವಿದ್ಯಾರ್ಥಿಗೆ,)

ನಾಯಿಯಿಂದ ಆರು ಗುಣ_ ದೊರೆತದ್ದರಲ್ಲೇ ತೃಪ್ತಿ ಪಡುವುದು, ಸರಿಯಾಗಿ ನಿದ್ರಿಸುವುದು, ಚುರುಕುತನ, ಸ್ವಾಮಿಭಕ್ತಿ,

ಶೌರ್ಯ, ವಾಸನಾ ಗ್ರಹಣಶಕ್ತಿ,

ಕತ್ತೆಯಿಂದ ಮೂರು ಗುಣ_ ಕಷ್ಟಪಟ್ಟು ದುಡಿಯುವುದು, ಚಳಿಸೆಕೆಗಳನ್ನು ಲಕ್ಷಿಸದಿರುವುದು, ಸಮಾಧಾನದಿಂದ ಇರುವುದು,

ಕಾಗೆಯಿಂದ ಐದು ಗುಣ_ ಗೌಪ್ಯತೆ, ಧೈರ್ಯದಿಂದ ಮುನ್ನುಗ್ಗುವಿಕೆ, ವಾಸಕ್ಕಾಗಿ ಸಮಯಾನುಸಾರ

ಸ್ಥಾನ, ಬಳಗ, ಸಂಘಜೀವನ,

ಕೋಳಿಯಿಂದ ನಾಲ್ಕುಗುಣ_ ಶತ್ರುವಿನೊಡನೆ ಹೋರಾಡುವಾಗ ಆಕ್ರಮಣ ಮನೋಧರ್ಮ, ಬೆಳಿಗ್ಗೆ ಬೇಗ ಎದ್ದು

ಬೇರೆಯವರನ್ನು ಎಬ್ಬಿಸುವುದು, ಬಂಧುಮಿತ್ರರೊಡನೆ ಸೇರಿ ಆಹಾರ ಸೇವನೆ, ಆಪತ್ತಿನಿಂದ

ರಕ್ಷಿಸುವುದು, ಸದಾ ಕಾರ್ಯಪ್ರವೃತ್ತವಾಗಿರುವುದು.

ಪ್ರಾಣಿಗಳಿಗೆ ಸಂಬಂಧಿಸಿದ ಕಥೆಗಳು, ಪದ್ಯಗಳು ನಮ್ಮ ‘ಪಂಚತಂತ್ರ’ದ ಕಥೆಗಳಲ್ಲಿ ಹಾಗೂ ಇತರ ಪೌರಾತ್ಯ ಹಾಗೂ ಪಾಶ್ಚಿಮಾತ್ಯ ಭಾಷೆಗಳಲ್ಲಿಯೂ ಸಮೃದ್ಧವಾಗಿವೆ. ಅವುಗಳಲ್ಲಿ ‘ಹದ್ದು’ ಪಕ್ಷಿಗೆ ಸಂಬಂಧಿಸಿದ ಅನೇಕ ಆಸಕ್ತಿಕರವಾಗ ನೀತಿ ಬೋಧಕ ಕಥೆಗಲ್ಲಿ ಕೆಲವನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ:

*ಮಳೆ ಬಂದಾಗ ಎಲ್ಲ ಪಕ್ಷಿಗಳೂ ತಮ್ಮ ಗೂಡು ಅಥವಾ ಇತರ ಆಸರೆಯನ್ನು ಹುಡುಕಿಕೊಂಡು ಹೋಗುತ್ತವೆ. ಆದರೆ ಹದ್ದು ಮಳೆಯನ್ನು ಸುರಿಸುವ ಮೋಡದಿಂದ ಎತ್ತರಕ್ಕೆ ಹಾರಿ ಮಳೆಯಿಂದ ಪಾರಾಗುತ್ತದೆ! ಅಂತೆಯೇ ಕಷ್ಟಗಳು ಬಂದಾಗ ಅದರಿಂದ ತಪ್ಪಿಸಿಕೊಳ್ಳಲು ಪಲಾಯನ ಮಾಡದೆ ಅದನ್ನು ಮೀರಿ ಎತ್ತರಕ್ಕೆ ಬೆಳೆಯಬೇಕು.

*ಒಂಟಿಯಾಗಿ ಸಿಕ್ಕ ಹದ್ದನ್ನು ಆಕ್ರಮಿಸಿ ಹೋರಾಡಲು ಕಾಗೆಗಳು ಧಾವಿಸುತ್ತವೆ. ಅವುಗಳಿಗಿಂತ ಬಹುಪಾಲು ಶಕ್ತಿಶಾಲಿಯಾದ ಹದ್ದು ಅವುಗಳೊಡನೆ ಹೋರಾಡಿ ಶಕ್ತಿಯನ್ನು ವ್ಯಯ ಮಾಡಿಕೊಳ್ಳದೇ ವೃತ್ತಾಕಾರವಾಗಿ ಚಲಿಸುತ್ತಾ ಸ್ವಲ್ಪಸ್ವಲ್ಪವೇ ಮೇಲೇರುತ್ತಾ ಅವುಗಳಿಗೆ ಸಿಗದಂತೆ ಅತಿ ಎತ್ತರಕ್ಕೆ ಹಾರಿಹೋಗುತ್ತದೆ! ಸಾಮಾನ್ಯ ಜನರು ನಮ್ಮನ್ನು ದೂಷಿಸಲಾರಂಭಿಸಿದಾಗ ನಾವು ಅವರಿಗೆ ಪ್ರತಿಕ್ರಿಯಿಸಿ ನಮ್ಮ ಶಕ್ತಿಯನ್ನು ನಷ್ಟ ಮಾಡಿಕೊಳ್ಳದೇ ಅವರನ್ನು ಮೀರಿ ಮೇಲೇರುವುದು ಒಳಿತು.

* ಒಮ್ಮೆ ಒಂದು ಎತ್ತರವಾದ ಮರದ ಮೇಲೆ ಒಂದು ಹದ್ದು ಕುಳಿತುಕೊಂಡು ಆರಾಮವಾಗಿ ನಿದ್ರಿಸುತ್ತಿರುತ್ತದೆ. ನೆಲದ ಮೇಲೆ ಓಡಾಡುತ್ತಿದ್ದ ಮೊಲವೊಂದು ಅದನ್ನ ನೋಡಿ, ‘ಆಹಾ ಅದು ಎಷ್ಟು ಆರಾಮವಾಗಿ ವಿಶ್ರಾಂತಿ ಪಡೆಯುತ್ತಿದೆ! ನಾನೇಕೆ ಇಷ್ಟು ಕಷ್ಟಪಡುತ್ತಿದ್ದೇನೆ? ನಾನೂ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆಡದುಕೊಳ್ಳೋಣ,? ಎಂದುಕೊಂಡು ಅಲ್ಲೇ ಮಲಗಿಕೊಳ್ಳುತ್ತದೆ. ಅದೇ ಮಾರ್ಗವಾಗಿ ಬಂದ ನರಿ ಅದನ್ನು ನೋಡಿ ಸಂತೋಷದಿಂದ ಕಚ್ಚಿಕೊಂಡು ಹೋಗುತ್ತದೆ. ನಾವು ವಿಶ್ರಮಿಸಿಕೊಳ್ಳಬೇಕಾದರೆ ಅಪಾಯಗಳಿಗೆ ನಿಲುಕದಂತೆ ಎತ್ತರದಲ್ಲಿರಬೇಕು. ಸುತ್ತಲೂ ಶತ್ರುಗಳಿರುವಾಗ ಮೈಮರೆತರೆ ಪ್ರಾಣಕ್ಕೇ ಸಂಚಕಾರ ಬರುತ್ತದೆ.

* ಹದ್ದು ಅತಿ ಎತ್ತರವಾದ ಪ್ರದೇಶದಲ್ಲಿರುವ ಕೋಡುಗಲ್ಲಿನ ತುದಿಯಲ್ಲಿ ಗೂಡು ಕಟ್ಟಿ ಮರಿಗಳನ್ನು ಸಾಕುತ್ತದೆ. ಅವುಗಳ ರೆಕ್ಕೆಪುಕ್ಕಗಳು ಚೆನ್ನಾಗಿ ಬಲಿತ ನಂತರ ಅವನ್ನು ಗೂಡಿನಿಂದ ಹೊರಕ್ಕೆ ನೂಕಿಬಿಡುತ್ತದೆ. ಕೆಳಕ್ಕೆ ಬೀಳಲಾರಂಭಿಸಿದ ಮರಿಗೆ ತನ್ನ ರೆಕ್ಕೆಯ ಶಕ್ತಿ ಅರಿವಾಗಿ ಅದನ್ನು ಬಳಸಿಕೊಂಡು ಹಾರಲಾರಂಭಿಸುತ್ತದೆ. `The Great Push’ ಎಂದೇ ಖ್ಯಾತಿಯಾಗಿರುವ ಈ ಕಥೆಯಿಂದ ನಮ್ಮೊಳಗಿನ ಸಾಮರ್ಥ್ಯ ನಮಗೆ ತಿಳಿಯಬೇಕಾದರೆ ಒಂದು ಇಂಥಾ `Great Push’ನ ಅಗತ್ಯವಿದೆ ಎನ್ನುವ ಅರಿವಾಗುತ್ತದೆ.

* ಖಲೀಲ್ ಗಿಬ್ರಾನ್ ಅವರ ` The Eagle and The Skylark’ (ಹದ್ದು ಮತ್ತು ಬಾನಾಡಿ) ಎಂಬ ದೃಷ್ಟಾಂತ ಕಥೆಯಲ್ಲಿ ದೊಡ್ಡವರ ಜಂಬ, ಆದರೆ ಉಪಾಯವಿಲ್ಲದಾಗ ಯಾವ ಸ್ಥಿತಿಗೂ ಹೊಂದಿಕೊಂಡು ನುಣುಚಿಕೊಳ್ಳುವ ಅವರ ಬುದ್ದಿ ಇವುಗಳನ್ನು ಈ ರೀತಿಯಾಗಿ ತಿಳಿಸಿದ್ದಾರೆ:

ಎತ್ತರದ ಬೆಟ್ಟವೊಂದರ ಬಂಡೆಯ ಮೇಲೆ ಒಂದು ಹದ್ದು, ಒಂದು ಬಾನಾಡಿ ಸಂಧಿಸಿದವು. ಬಾನಾಡಿ, ‘ನಮಸ್ಕಾರ, ಎದ್ದೆಯಾ?’ ಎಂದಿತು. ಹದ್ದು ತಿರಸ್ಕಾರ ದೃಷ್ಟಿಯಿಂದ ನೋಡುತ್ತಾ ‘ನಮಸ್ಕಾರ’ ಎಂದು ಕ್ಟೀಣಧ್ವನಿಯಲ್ಲಿ ಹೇಳಿತು.

ಬಾನಾಡಿ: ಎಲ್ಲ ಕ್ಷೇಮವಷ್ಟೆ?

ಹದ್ದು: ಕ್ಷೇಮ, ಆದರೆ ನಿನಗೆ ತಿಳಿಯದೇ? ನಾವು ಪಕ್ಷಿರಾಜರು. ನಾವು ಮಾತನಾಡಿಸದಲ್ಲದೇ ನೀವು ಮಾತನಾಡಕೂಡದು.

ಬಾನಾಡಿ: ನನಗೆ ತಿಳಿದಂತೆ ನಾವೆಲ್ಲಾ ಒಂದೇ ಬಳಗದವರು.

ಹದ್ದು: (ಅಸಡ್ಡೆಯಿಂದ) ಯಾರೋ ನಿನಗೆ ಹಾಗೆ ಹೇಳಿದ್ದು?

ಬಾನಾಡಿ: ನಿನಗೆ ಇದನ್ನು ನಾನು ಜ್ಞಾಪಿಸಬೇಕು. ನಿನ್ನಷ್ಟೇ ಎತ್ತರಕ್ಕೆ ನಾನು ಹಾರಬಲ್ಲೆ. ಅಲ್ಲದೇ ನನ್ನ ಹಾಡಿನಿಂದ ನಾನು ಜನಕ್ಕೆ ಸುಖ ಸಂತೋಷಗಳನ್ನು ಕೊಡಬಲ್ಲೆ. ನೀನು ಅದನ್ನು ಮಾಡಲಾರೆ.

ಹದ್ದಿಗೆ ಕೋಪ ಬ0ತು: ‘ಸುಖ, ಸಂತೋಷ! ದುರಹಂಕಾರದ ಕ್ಷುದ್ರ ಹಕ್ಕಿ! ನನ್ನ ಕೊಕ್ಕಿನ ಒಂದೇ ಕುಕ್ಕಿನಿಂದ ನಿನ್ನನ್ನು ನಾಶ ಮಾಡಿಬಿಡಬಲ್ಲೆ. ನೀನಿರುವುದು ನನ್ನ ಕಾಲಿನಷ್ಟು!’

ಬಾನಾಡಿ ಹಾರಿ ಹದ್ದಿನ ಬೆನ್ನಿನ ಮೇಲೆ ಕುಳಿತು ಅದರ ಗರಿಗಳನ್ನು ಕುಕ್ಕಲಾರಂಭಿಸಿತು.ಹದ್ದಿಗೆ ಹಿಂಸೆಯಾಯಿತು. ವೇಗವಾಗಿ ಮೇಲೆ ಕೆಳಗೆ ಹಾರಿ ಬಾನಾಡಿಯನ್ನು ಕೊಡವಿ ಹಾಕಲು ಪ್ರಯತ್ನಿಸಿತು. ಆದರೆ ಆಗಲಿಲ್ಲ. ಕೊನೆಗೆ ಕೋಪ ಇನ್ನೂ ಹೆಚ್ಚಿ, ಎತ್ತರದ ಬಂಡೆಯ ಮೇಲೆ ಮತ್ತೆ ಕುಳಿತಿತು. ಬಾನಾಡಿ ಇನ್ನೂ ಅದರ ಬೆನ್ನ ಮೇಲೇ ಇತ್ತು.ಹದ್ದು ಎಂಥಾ ಕೆಟ್ಟ ಗಳಿಗೆ ಎಂದು ಶಾಪ ಹಾಕುತ್ತಿತ್ತು.

ಅಷ್ಟರಲ್ಲಿ ಒಂದು ಆಮೆ ಮೆಲ್ಲಗೆ ತೆವಳಿಕೊಂಡು ಬಂದು ಈ ದೃಶ್ಯ ನೋಡಿ ನಗು ತಡೆಯಲಾರದೆ ಬಿದ್ದು ಹೊರಳಾಡಿತು. ಹದ್ದಿನ ಕೋಪ ಹದ್ದುಮೀರಿತು! ತಿರಸ್ಕಾರದಿಂದ ಆಮೆಯ ಕಡೆ ನೋಡಿ ಹೇಳಿತು: ‘ನಿಧಾನವಾಗಿ ತೆವಳುವ ಕ್ಷುದ್ರ ಪ್ರಾಣಿ, ಯಾವಾಗಲೂ ಭೂಮಿಗೆ ಅಂಟಿಕೊಂಡೇ ಇರುವ ನೀನು ಏನು ನೋಡಿ ನಗುತ್ತಿದ್ದೀಯ?’

ಆಮೆ ಹೇಳಿತು: ಏಕೆ? ನೀನು ಕುದುರೆ ಆಗಿ ಹೋಗಿದ್ದೀಯ. ಒಂದು ಸಣ್ಣ ಹಕ್ಕಿ ನಿನ್ನ ಮೇಲೆ ಸವಾರಿ ಮಾಡುತ್ತಿದೆ. ಹಾಗೆ ನೋಡಿದರೆ ಆ ಹಕ್ಕಿಯೇ ಚೆನ್ನಾಗಿದೆ!’

ಹದ್ದು ಹೇಳಿತು: ನಿನ್ನ ಕೆಲಸ ನೀನು ನೋಡು ಹೋಗು, ನನ್ನ ಸೋದರ ಬಾನಾಡಿಗೂ ನನಗೂ ಸಂಬಂಧಪಟ್ಟ ಮನೆ ವಿಷಯ ಇದು!’

`The Story Of The Eagle’ ಎನ್ನುವ ಒಂದು ವಿಡಿಯೊ ಚಿತ್ರಣದಲ್ಲಿ ಈ ರೀತಿ ಇದೆ:

‘ಹದ್ದು ಇತರ ಪಕ್ಷಿಗಳಿಗಿಂತ ದೀರ್ಘವಾದ ಆಯುಷ್ಯವನ್ನು ಹೊಂದಿದೆ. ಅದು ೭೦ವರ್ಷಗಳವರೆಗೂ ಬದುಕಬಹುದು. ಆದರೆ ಅದಕ್ಕಾಗಿ ಒಂದು ಕಠಿಣ ನಿರ್ಧಾರವನ್ನು ಮಾಡಬೇಕು. ಹದ್ದಿಗೆ ೪೦ವರ್ಷಗಳಾದ ನಂತರ ಅದರ ನಖಗಳು ಬೇಟೆಯನ್ನು ಹಿಡಿಯಲು ಅಸಮರ್ಥವಾಗುತ್ತವೆ, ದೀರ್ಘ ಮತ್ತು ಹರಿತವಾದ ಕೊಕ್ಕು ಬಾಗುತ್ತದೆ. ವಯಸ್ಸಾದಂತೆ ಅದರ ಭಾರವಾದ ರೆಕ್ಕೆಗಳು ಎದೆಯ ಭಾಗಕ್ಕೆ ಅಂಟಿದಂತಾಗಿ ಹಾರಲು ಅಶಕ್ತವಾಗುತ್ತವೆ. ಆಗ ಅದಕ್ಕೆ ಎರಡು ಆಯ್ಕೆಗಳು ಉಳಿಯುತ್ತವೆ. ಸಾಯುವುದು ಇಲ್ಲವೆ ೧೫೦ದಿನಗಳ ಒಂದು ನೋವಿನಿಂದ ಕೂಡಿದ ಪರಿವರ್ತನೆಯ ಕ್ರಿಯೆಗೆ ಒಳಗಾಗುವುದು! ಹದ್ದು ಪರ್ವತದ ಎತ್ತರವಾದ ಬಂಡೆಯ ಮೇಲೆ ಕುಳಿತು ತನ್ನ ಹಳೆಯ ಕೊಕ್ಕನ್ನು ಬಿದ್ದುಹೋಗುವವರೆಗೂ ಮಸೆಯುತ್ತದೆ. ನಂತರ ಹೊಸಕೊಕ್ಕು ಬರುವವರೆಗೂ ಕಾದಿದ್ದು ತನ್ನ ಹಳೆಯ ನಖಗಳನ್ನು ವಿಸರ್ಜಿಸುತ್ತದೆ. ಹೊಸ ನಖಗಳು ಬೆಳೆದ ನಂತರ ತನ್ನ ವಯಸ್ಸಾದ ರೆಕ್ಕೆ-ಪುಕ್ಕಗಳನ್ನು ಕಿತ್ತುಕೊಳ್ಳಲಾರಂಭಿಸುತ್ತದೆ........ ಐದು ತಿಂಗಳ ನಂತರ ತನ್ನ ಹೊಸಹುಟ್ಟಿನ ಹಾರಾಟವನ್ನು ಪ್ರಾರಂಭಿಸಿ ಇನ್ನೂ ೩೦ವರ್ಷಗಳಕಾಲ ಜೀವಿಸುತ್ತದೆ!

ಎಷ್ಟೋ ವೇಳೆ ನಮ್ಮ ಉಳಿವಿಗಾಗಿ ನಾವು ಈ ಪರಿವರ್ತನೆಯ ಕ್ರಿಯೆಯಲ್ಲಿ ತೊಡಗಬೇಕಾಗುತ್ತದೆ. ಕೆಲವುವೇಳೆ ನಾವು ನಮ್ಮ ಹಳೆಯ ನೆನಪುಗಳು, ಕಂದಾಚಾರಗಳಿಂದ ಹೊರಬಂದು, ಹಳೆಯ ಹೊರೆಗಳನ್ನು ಕಳಚಿ ಹೊಸ ಜೀವನವನ್ನು ಪ್ರಾರಂಭಿಸಬೇಕಾಗುತ್ತದೆ.

ಹದ್ದುಗಳನ್ನು ಕುರಿತು ಜನಜನಿತವಾಗಿರುವ ಈ ಕಥೆಗಳ ಸತ್ಯಾಸತ್ಯತೆಗಳ ಬಗ್ಗೆ ವಿವೇಚಿಸದೇ ಇವುಗಳಿಂದ ನಾವು ಕಲಿಯಬೇಕಾದದ್ದು ಸಾಕಷ್ಟಿದೆ ಎಂದು ಭಾವಿಸೋಣ.

Saturday, January 21, 2012

ಆಸ್ಫೋಟ

ತೆರೆದಿತ್ತು ಮೇಲ್ಮೈ

ಅವಕಾಶಕ್ಕ೦ದು

ನಿರ೦ತರ ಆವೀಕರಣ

ನಿರಾಳ

ಸಾ೦ತ್ವನ

ಮುಚ್ಚಿದ ಧಾರಕದಲ್ಲೀಗ

ಮಿತಿ ಮೀರಿದ

ಬಾಹ್ಯದೊತ್ತಾಯ

ಹಬೆಯ ಹೊರ

ನೂಕಲೂ ಆಗದೇ

ಇ೦ಗಲೂ ಬಿಡದೇ

ಆ೦ತರ್ಯದಲೇ

ಕುದ್ದು ಕುದ್ದು...

ಅಧಿಕವಾದ

ಅ೦ತರ೦ಗದೊತ್ತಡ

ಕ್ಷಣಗಣನೆಯಾಗುತಿದೆ

ಆಸ್ಫೋಟಕೆ!