Thursday, January 30, 2025

'ಮಂದಾರ' ದ ಪ್ರಶಸ್ತಿ ಪತ್ರಗಳು😍

 2024ರ ಅಂತಿಮ ಭಾಗದಲ್ಲಿ ಫೇಸ್ಬುಕ್ ಮಿತ್ರರೊಬ್ಬರು ನನ್ನನ್ನು 'ಮಂದಾರ' ಸಾಹಿತ್ಯ ಬಳಗಕ್ಕೆ ಆಹ್ವಾನಿಸಿದರು. ಪ್ರತಿದಿನವೂ ಒಂದೊಂದು ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಾ ಅತ್ಯಂತ ಕ್ರಿಯಾಶೀಲವಾಗಿದ್ದ 'ಮಂದಾರ'ಕ್ಕೆ ಸೇರಿದ ನಾನು ನನಗೆ ಅಸಕ್ತಿಕರವೆನಿಸಿದ್ದರ ಬಗ್ಗೆ ಬರೆದು ಪಡೆದ ಕೆಲವು  ಪ್ರಶಸ್ತಿ  ಪತ್ರಗಳಿವು😍














      ಮಂದಾರದ ಸಹ ಸದಸ್ಯರ ಪರಸ್ಪರ ಪ್ರೋತ್ಸಾಹ, ಪ್ರೀತಿ ವರ್ಣನಾತೀತ👌❤️ 


       ನನ್ನ  ವೈಯಕ್ತಿಕ ಕಾರಣದಿಂದ ಹಾಗೂ ನಿರಂತರ ಸ್ಪರ್ಧೆಗೊಳಪಡಲು ಅಸಾಧ್ಯವೆನಿಸುವ ಮನಃಸ್ಥಿತಿಯಿಂದ ಒಂದು ತಿಂಗಳಿಗೇ ತಟಸ್ಥಳಾಗಬೇಕಾಯ್ತು🌼


      ಹೃತ್ಪೂರ್ವಕ  ಧನ್ಯವಾದಗಳು ನಲ್ಮೆಯ ಮಂದಾರ 💕🙏

Thursday, November 21, 2024

ಒಂದೆಲೆ ಮೇಲಿನ ಕಾಡು - ಸ. ವೆಂ. ಪೂರ್ಣಿಮಾ

 https://www.facebook.com/share/p/1ATrCV13Sb/

ದಿನಾಂಕ : 21_07_2024


'ಜೇನುಗಿರಿ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ ಇಲ್ಲಿದೆ. ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ🌼

                   ಪುಸ್ತಕ ಪರಿಚಯ :

ಒಂದೆಲೆ ಮೇಲಿನ ಕಾಡು  -  ಸ. ವೆಂ. ಪೂರ್ಣಿಮಾ

      ನಾನು ವಿವಾಹಾನಂತರ ಸಕಲೇಶಪುರದ ಜ್ಯೂನಿಯರ್ ಕಾಲೇಜಿನ(ಈಗಿನ ಪದವಿ ಪೂರ್ವ ಕಾಲೇಜು) ಪ್ರೌಢ ಶಾಲಾ ವಿಭಾಗಕ್ಕೆ ವರ್ಗವಾಗಿ ಹೋದಾಗ ಪೂರ್ಣಿಮಾ ಅಲ್ಲಿಯೇ ಓದುತ್ತಿದ್ದಳು. ಆದರೆ ನನಗೆ ಪ್ರಾರಂಭದಲ್ಲಿ ಟೈಮ್ ಟೇಬಲ್ ಪ್ರಕಾರ ಎಲ್ಲಾ ಇಂಗ್ಲಿಷ್ ಮೀಡಿಯಂಗಳಿಗೂ ಗಣಿತ ಮತ್ತು ವಿಜ್ಞಾನದ ತರಗತಿಗಳನ್ನು ತೆಗೆದುಕೊಳ್ಳುವಂತೆ ಇರುತ್ತಿದ್ದುದರಿಂದ    ವರ್ಕ್ ಲೋಡ್ ಆಗಿ  ಒಂದೆರಡು section ಕನ್ನಡ ಮಾಧ್ಯಮಕ್ಕೆ ಇದ್ದರೂ  ಪೂರ್ಣಿಮಾ ನನ್ನ ನೇರ ವಿದ್ಯಾರ್ಥಿಯಾಗಿರಲಿಲ್ಲ.  ಆದರೂ  ಹಾಡುವುದು ಮತ್ತು ಡ್ಯಾನ್ಸ್ ಮಾಡುವುದರಲ್ಲಿಯೂ ಚುರುಕಾಗಿದ್ದ ಹುಡುಗಿಯಾದ್ದರಿಂದ ನನ್ನ ಗಮನವನ್ನು ಸೆಳೆದಿದ್ದಳು. ಸಮಾರಂಭವೊಂದರಲ್ಲಿ ಅವಳು ಮಾಡಿದ ನೃತ್ಯ ಇನ್ನೂ ಅಚ್ಚಳಿಯದಂತೆ ಮನಸ್ಸಿನಲ್ಲಿದೆ. ನಂತರದ ವರ್ಷಗಳಲ್ಲಿ ತಾನು ಓದಿದ ಶಾಲೆಗೇ ಅವಳು ಪಾರ್ಟ್ ಟೈಮ್ ಶಿಕ್ಷಕಿಯಾಗಿ ಬಂದು ನಾವು ಸಹೋದ್ಯೋಗಿಗಳಾಗಿದ್ದಾಗ ತನ್ನ ಸರಳ ಭಾವಪೂರ್ಣ  ನಡವಳಿಕೆಯಿಂದ ಆಪ್ತಳಾಗಿದ್ದಳು. ನಾನು ವಿಷಯ ಪರಿವೀಕ್ಷಕಳಾಗಿದ್ದಾಗ ಆಗಾಗ ಪೂರ್ಣಿಮಾ ಕೆಲಸಮಾಡುತ್ತಿದ್ದ ಶಾಲೆಯ ತಪಾಸಣೆ ಹಾಗೂ ಭೇಟಿಗೆ ಹೋಗುತ್ತಿದ್ದು ಅವಳ ಅಚ್ಚುಕಟ್ಟಾದ ಕಾರ್ಯ ವೈಖರಿಯನ್ನೂ ನೋಡಿದ್ದೇನೆ. ಇವಿಷ್ಟು ಪೂರ್ಣಿಮಾ ಮತ್ತು ನನ್ನ ಪರಿಚಯದ ಹಿನ್ನೆಲೆ. 


'ನಾನು ತುಂಬಾ ಲೇಟಾಗಿ ಪುಸ್ತಕ ಮಾಡ್ತಿದೀನಿ ಟೀಚರ್' ಎಂದು ಇತ್ತೀಚೆಗೆ ಪೂರ್ಣಿಮಾ ಒಂದು ಸಾರಿ ಫೋನ್ ನಲ್ಲಿ ಹೇಳಿದಾಗ "'it is better late than never' ಎಂದಿದ್ದೆ. ಆದರೆ 'ಒಂದೆಲೆ ಮೇಲಿನ ಕಾಡು' ಎಂಬ  ಈ ವಿಶಿಷ್ಟ ನಾಮಧೇಯದ ಪುಸ್ತಕ ಪ್ರಕಟವಾಗಿ ಅದಕ್ಕೆ ದೊರೆತ ಮನ್ನಣೆ, ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಇದು ಪೂರ್ಣಿಮಾಳ ಆಂತರ್ಯಕ್ಕೆ ತೃಪ್ತಿ ತಂದಿರಬಹುದಾದ best time ಎನಿಸದೇ ಇರಲಿಲ್ಲ. ಮೊದಲ ಪುಸ್ತಕದಿಂದಲೇ ಈವರೆಗೂ ಬರಬೇಕಾಗಿದ್ದ ಎಲ್ಲಾ ಗೌರವಗಳನ್ನೂ ಒಟ್ಟಾಗೇ ಬಡ್ಡಿಸಮೇತ ಪಡೆಯಲಾಗಿದೆ ಎಂದರೆ ಅತಿಶಯೋಕ್ತಿಯೇನಲ್ಲವೆನಿಸುತ್ತದೆ. ಈಗ ಪೂರ್ಣಿಮಾ ಎಂದಿನ ಅತ್ಯಾಪ್ತತೆಯಿಂದ ಕೊಟ್ಟ ಈ  ಪುಸ್ತಕವನ್ನು ಓದುವಾಗ ಇಷ್ಟೊಂದು ಸರಳವಾಗಿ, ಸಹಜವಾಗಿ ನಮ್ಮ ಭಾವಬುತ್ತಿಯನ್ನು ತೆರೆದಿಡಬಹುದಲ್ಲಾ ಎಂಬ ಅಚ್ಚರಿಯಾಗುತ್ತಿದೆ. ತನಗಾದ ಅನುಭವಗಳನ್ನು, ಅನಿಸಿಕೆಗಳನ್ನು, ಹತ್ತಿರದಿಂದ ಕಂಡ ತನ್ನ ಆಪ್ತರ ಬದುಕಿನ ಏರಿಳಿತಗಳನ್ನು ನೇರಾನೇರವಾಗಿ ಎದುರಿಗೇ ಕುಳಿತು ಮಾತನಾಡುವಷ್ಟು ಸರಾಗವಾಗಿ ಹಂಚಿಕೊಳ್ಳುತ್ತಾ ಸಾಗುವುದು ಆಪ್ತವೆನಿಸುತ್ತದೆ.

ಇಲ್ಲಿಯ ಲೇಖನಗಳ ರಸಾಸ್ವಾದನೆಗೆ ಪ್ರವೇಶಿಕೆಯಂತಿರುವ ಪ್ರಬುದ್ಧವಾದ ಮೌಲ್ಯಯುತ ಮುನ್ನಡಿಯನ್ನು ಕೇಶವ ಮಳಗಿಯವರು ಬರೆದಿರುವುದು ಪುಸ್ತಕದ ಘನತೆಯನ್ನು ಹೆಚ್ಚಿಸುವಂತಿದೆ ಹಾಗೂ ಪುಸ್ತಕವನ್ನು ಓದಲೇಬೇಕೆಂದು ಪ್ರೇರೇಪಿಸುವಂತಿದೆ.

ಬಯಲುಸೀಮೆಯ ಬಿರು ಬಿಸಲಿನಲ್ಲಿ ಬೆಂದು ತಂಪಾದ ಮಲೆನಾಡಿಗೆ ಬಂದಾಗ ಇಲ್ಲಿಯ ಜಿಟಿಜಿಟಿ ಮಳೆ, ಎಲ್ಲಿಂದ ನೋಡಿದರೂ ಮೈತುಂಬಿದಂತಿದ್ದ ಹಸಿರ ಸೊಬಗು ನನ್ನನ್ನು ಬಹಳವಾಗಿ ಆಕರ್ಷಿಸಿತ್ತು.    ಈಗ ಪೂರ್ಣಿಮಾ ಮತ್ತೊಮ್ಮೆ ತನ್ನ ಬರಹಗಳ ಮೂಲಕ ನನ್ನನ್ನು ನನ್ನ ಪ್ರಿಯ  ಸಕಲೇಶಪುರವನ್ನು ಒಂದು ಸುತ್ತುಹಾಕಿಸಿದಂತಿದೆ. ಇಲ್ಲಿಯ ವರ್ಷಧಾರೆ, ನಮ್ಮೂರಿನಲ್ಲಿಯೂ ಹರಿಯುತ್ತಿರುವ ಇಲ್ಲಿ ಊರಿನ ಮಧ್ಯವೇ ಹಾದುಹೋಗಿರುವ ನನ್ನ ಪ್ರಿಯ ಹೇಮಾವತಿ ನದಿ, ಹಬ್ಬ-ಜಾತ್ರೆ-ಸಮಾರಂಭಗಳ ಸಂಭ್ರಮ ಎಲ್ಲವೂ ಚಂದವೇ!  

ಸಕಲೇಶಪುರದ ಮಳೆಯನ್ನು ವರ್ಣಿಸುತ್ತಾ 'ಶುಭ್ರವಾಗಿ ಮಿಂದ ಹಸಿ ಬಾಣಂತಿಯಂತೆ ಹಸಿರಸಿರಿ'  ಎನ್ನುವುದು ಬಹಳ ಮನಸ್ಸಿನಾಳಕ್ಕಿಳಿಯುತ್ತದೆ. 

ಜನಪದ ಗೀತ ಗಾಯಕಿಯಾದ ಲೇಖಕಿಯ ಬರಹಗಳ ಮಧ್ಯೆ ಮಿಂಚುವ ಜನಪದ ಗೀತೆಯ ಸಾಲುಗಳು  'ಕರಿಮಣಿಯ ಸರದಲ್ಲಿ ಕೆಂಪು ಹವಳವ ಕೋದಂತೆ' ಎಂಬ ಉಪಮೆಯಂತೆ ಆಕರ್ಷಕ

  ' ಜಗದ ಜೋಗುಳಕೆ ಅಮ್ಮನ ದನಿಯ ಬಿಟ್ಟು ಬೇರೆ ಮಂತ್ರ ಉಂಟೆ' ಪ್ರಬಂಧದಲ್ಲಿ ಲೇಖಕಿಯ ತಾಯಿಯು 'ಗೊಂಬೆ ಗೊಂಬೆ' ಎನ್ನುವ ರೋಮ್ಯಾಂಟಿಕ್ ಸಿನಿಮಾ ಗೀತೆಯನ್ನು ಜೋಗುಳದ  ಹಾಡಾಗಿಸಿದ ಪ್ರಸಂಗವು ನಗುವಿನೊಟ್ಟಿಗೇ  ಅವರ ವಾದ ಸರಣಿಯಂತೆ 'ಏಕಾಗಬಾರದು?' ಎಂಬ ಸಹಮತಿಯನ್ನು ನಮ್ಮ ಮನಗಳಲ್ಲಿಯೂ ಉಂಟುಮಾಡುತ್ತದೆ.

'ನನ್ನ ಪ್ರೀತಿಯ ರಜಿಯಾ', 'ಮನೆಗೊಂದು ಹಿರಿ ತಲೆ ಇರಬೇಕು' ಲೇಖನಗಳು ಕಥನ ಶೈಲಿಯಲ್ಲಿದ್ದು ವಿಷಾದವನ್ನು ಮೂಡಿಸುವಂತಿವೆ. ರಜಿಯಾ ಮತ್ತು ರಂಗನಾಯಕಿ ಲೇಖನಗಳಲ್ಲಿ ಬಹಳಷ್ಟು ಸಾಮ್ಯತೆ ಇದ್ದು ಎರಡರಲ್ಲಿಯೂ ಏಕಾಂಗಿಯಾಗಿ ಹೋರಾಡುವ ಹೆಣ್ಣಿನ ನೋವಿನ ಜೀವನದ ಚಿತ್ರಣವಿದೆ.

'ಹಸೆ ಹಾಕೋರ ಮನೆಯಲ್ಲಿ' ಲೇಖನದಲ್ಲಿ ಸೋಬಾನೆ ಪದದ ವೈಶಿಷ್ಟ್ಯವನ್ನು ಬಹಳ ಚೆನ್ನಾಗಿ ಲೇಖಿಸಿದ್ದು 'ಸೋ ಎನ್ನಿರೆ ಸೋಬಾನೆ ಎನ್ನಿರೇ...'ಸಾಲು ಮನಸ್ಸಿನಲ್ಲಿ ರಿಂಗಣಿಸುತ್ತದೆ.

   'ಸಾಲು ಸಾಲು ಕಥೆಗಳ ಮೆರವಣಿಗೆ...  ಈ ಕಥೆಗಳೆಲ್ಲ ನನ್ನೊಳಗೆ ಬೆಳೆದವೋ ಅಥವಾ ನಾನೇ ಕಥೆಯೊಳಗೆ ಬೆಳೆದೇನೋ ಆದರೆ ಕಥೆಯೊಳಗಿನ ಪಾತ್ರಗಳು ನಾನಾಗುತ್ತಿದ್ದೆ...' ಚಿಕ್ಕವಯಸಿನಲ್ಲಿ ಕೇಳುವ ಕಥೆಗಳು ಹೇಗೆ ಬದುಕನ್ನು ರೂಪಿಸುತ್ತದೆ ಪ್ರಭಾವಿಸುತ್ತದೆ ಎನ್ನುವುದನ್ನು 'ಕೃಷ್ಣ ಎಂದರೆ...' ಲೇಖನದಲ್ಲಿ ಮನಮುಟ್ಟುವಂತೆ ವಿವರಿಸಿದ್ದಾರೆ ಜೊತೆಗೆ ತನ್ನ ಸ್ವಂತ ಜೀವನದಲ್ಲಿ ತಾನು ನೃತ್ಯ, ಅಭಿನಯ ಮುಂತಾದವುಗಳಲ್ಲಿ ನಡೆಸಿದ ಸಾಧನೆಗಳನ್ನು ನೇರಾನೇರವಾಗಿ ಹೇಳುವುದು ಹುಬ್ಬೇರಿಸುವಂತಿದೆ.

 'ಪರ್ಸಿನಲ್ಲಿ ದುಡ್ಡು ಕಾಣೆಯಾದ ಆ ದಿನ' ಲೇಖನದಲ್ಲಿ ವಿದ್ಯಾರ್ಥಿನಿಯು ಕಳೆದುಕೊಂಡ ದುಡ್ಡನ್ನು ಒಂದು ಕಥೆಯನ್ನು ಹೇಳುವ ಮೂಲಕ ಪುನಃ ಹಣವನ್ನು ತೆಗೆದುಕೊಂಡವರು ಆಕೆಯ ಬ್ಯಾಗಿನಲ್ಲಿ ಇಡುವಂತೆ ಪ್ರೇರೇಪಿಸಿರುವುದು ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆಯ ಅರಿವನ್ನು ಉಂಟು ಮಾಡುವ ಶ್ಲಾಘನೀಯ ಅಂಶವಾಗಿದೆ. ಇದರಂತೆಯೇ 'ನಡೆಯುವರು ಎಡವದೆ' ಎನ್ನುವ ಲೇಖನದಲ್ಲಿಯೂ ಕಥೆಯ ಮೂಲಕ ಜೀವನ ಪಾಠವನ್ನು ಕಲಿಸುವ ಪ್ರಯತ್ನವಿದೆ. 

ಜನಪದ ದಿಗ್ಗಜರು ಕಟ್ಟಿಕೊಟ್ಟ ತವರು ಲೇಖನದಲ್ಲಿ  ತವರು ಎಂದರೆ ತಾಯಿ ಮಾತ್ರ ಅಲ್ಲ ತಂದೆಯೂ ಕೂಡ ಎಂದು ಹೇಳುತ್ತಾ ತಂದೆಯ ಬಗೆಗಿನ ತಮ್ಮ ಅಪರಿಮಿತ ಪ್ರೀತಿಯನ್ನು ತೆರೆದಿಡುತ್ತಾರೆ. 

  'ಮೇಡಂ, ನೀವು ಸಿಸ್ಟರ್ ಅಂತ ಹೇಳಿದ್ರಲ್ಲ ಅದಕ್ಕಾಗಿ' ಎನ್ನುವ ಲೇಖನದಲ್ಲಿ ಜೀವನದ ಬಗ್ಗೆಗಿನ ಸಕಾರಾತ್ಮಕತೆಯನ್ನು ಬಿಂಬಿಸುವ ಘಟನೆ ಇದೆ. ಸಾಮಾನ್ಯವಾಗಿ ಎಲ್ಲ ಕಡೆಯೂ ಮೋಸ ವಂಚನೆಗಳ ಬಗ್ಗೆ ಕೇಳುವ  ಈ ದುರಿತ ಕಾಲದಲ್ಲಿ 'ವಿನ್ಸೆಂಟ್ ಅಣ್ಣನಾಗಿ ಸಿಕ್ಕಿದ್ದು..' ಬದುಕಿಗೆ ಭರವಸೆಯನ್ನು ತುಂಬುವ ಲೇಖನ.

  ಎಲ್ಲ ತಾಯಂದಿರಿಗೂ ತಮ್ಮ ಮಕ್ಕಳು ಶ್ರೇಷ್ಠವೇ ಹಾಗೂ ಮಕ್ಕಳು ಓದಲು ಅಥವಾ ಉದ್ಯೋಗಕ್ಕಾಗಿಯೋ  ತಮ್ಮಿಂದ ದೂರ ಹೋದಾಗ ಆ ಅಗಲಿಕೆ ನೋವು ಕೂಡ ಕಷ್ಟವೇ. ಈ ಭಾವವನ್ನು,  ಪತಿ-ಪತ್ನಿಯ ಸ್ವಭಾವ ವೈರುಧ್ಯದ ನಡುವೆ ಮಕ್ಕಳು ಸೇತುವೆಯಾಗಿರುತ್ತಾರೆ ಎಂಬ ಅಂಶವನ್ನು ಹಾಗೂ ತಮ್ಮ ಮಗನ ಬಗೆಗೆ ತಮ್ಮೊಳಗೆ ತುಂಬಿ ತುಳುಕುತ್ತಿರುವ ವಾತ್ಸಲ್ಯವನ್ನು 'ಪ್ರೀತಿ ಮತ್ತು ಶಿಸ್ತಿನ ನಡುವಿನ ಒಂದು ಕೊಂಡಿ' ಪ್ರಬಂಧದಲ್ಲಿ ಲೇಖಕಿಯು ಬಹಳ ಹೃದ್ಯಂಗಮವಾಗಿ ಲೇಖಿಸಿದ್ದಾರೆ. 

ಪ್ರಕೃತಿಯೊಂದಿಗೆ  ನಿಕಟ ಸಂಪರ್ಕದಲ್ಲಿದ್ದ ತಮ್ಮ ತಾಯಿಯು ಆ ಕಾಲಕ್ಕೆ ಹೆಣ್ಣುಮಕ್ಕಳ ಗಾರ್ಮೆಂಟ್ಸ್ ಆಗಿದ್ದ ಏಲಕ್ಕಿ ಮಂಡಿಯಲ್ಲಿ ದುಡಿದು ಮಕ್ಕಳನ್ನು ಸಾಕಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರ ಮನಕಲಕುವ ಕಥೆಗಳು ಎಲ್ಲವನ್ನೂ ಹೃದಯಂಗಮವಾಗಿ ಚಿತ್ರಿಸಿದ್ದಾರೆ.

ಬಹುತೇಕ ಬರಹಗಳಲ್ಲಿ ಲೇಖಕಿಯ ಬಾಲ್ಯದ ಸಂಭ್ರಮ ಹಾಗೂ ಇತ್ತೀಚೆಗೆ ಬದಲಾದ ಪರಿಸ್ಥಿತಿಗಳಿಂದ ಉಂಟಾಗುತ್ತಿರುವ ನಿರಾಶಾ ಭಾವವನ್ನು ಕಾಣಬಹುದು. 

ಈ ಸಂಕಲನದಲ್ಲಿ ಒಟ್ಟು 39 ಬರಹಗಳಿದ್ದು ಒಂದೊಂದೂ ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟವಾಗಿದ್ದು ಸರಳತೆಯಲ್ಲೇ ಮನಸೆಳೆಯುವಂತಿವೆ. ಅಪಾರವಾದ ಅನುಭವಗಳ ಅಗರವೇ ಆಗಿರುವ ಪೂರ್ಣಿಮಾ ವೈಯಕ್ತಿಕತೆಯಿಂದ ವೈಶಾಲ್ಯತೆಯತ್ತ ಚಲಿಸಿ ಇನ್ನೂ ಉತ್ತಮವಾದ ಕೃತಿಗಳನ್ನು ನೀಡಲಿ ಹಾಗೂ ಮತ್ತಷ್ಟು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಎಲ್ಲರೂ ಓದಿ ಖುಷಿಪಡಬಹುದಾದ ಚಂದದ ಪುಸ್ತಕವನ್ನು ನೀಡಿರುವ ಪೂರ್ಣಿಮಾಗೆ ಹಾಗೂ ಅಚ್ಚುಕಟ್ಟಾಗಿ ಕೃತಿಯನ್ನು ಹೊರತಂದಿರುವ ಹಾಡ್ಲಹಳ್ಳಿ ಪಬ್ಲಿಕೇಷನ್ಸ್ ನ ಚಲಂಗೆ ಹೃತ್ಪೂರ್ವಕ ಅಭಿನಂದನೆಗಳು. 

           ~ಪ್ರಭಾಮಣಿ ನಾಗರಾಜ

ಉತ್ಥಾನ ಪತ್ರಿಕೆಯಲ್ಲಿ ನನ್ನ ಕವನ `ಮುಕ್ತಾ'



 https://www.facebook.com/share/p/1BbDCpd9C3/

ಜೂನ್,2024ರ ಉತ್ಥಾನ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕವನ `ಮುಕ್ತಾ' ನಿಮ್ಮ ಓದಿಗೆ❤️ ಅಭಿಪ್ರಾಯ ತಿಳಿಸಿ🙏


ಧನ್ಯವಾದಗಳು ಉತ್ಥಾನ❤️🙏


ಮುಕ್ತ?


ಅಬ್ಬಾ

ಒಮ್ಮೆ ಆ ದಿನಗಳ

ಪರ್ಯವಲೋಕಿಸಿದಾಗ...


ಬೀಳದಂತೆ

ಬೆನ್ನಮೇಲಿನ ಹೊರೆ

ಅತ್ತಿತ್ತ ಅಲುಗದಂತೆ

ಜಾರದಂತೆ

ಜರುಗದಂತೆ

ಸಮತೋಲಿಸುತ್ತಾ...


ಮುಗ್ಗರಿಸುವ

ಕೊರಕಲೋ

ಗುದ್ದಿ ಬೀಳಿಸುವ

ಗುಡ್ಡವೋ

ಗ್ರಹಿಸಲಾಗದ

ಗಾಡಾಂಧಕಾರದ

ಅವಕಾಶದಲಿ

ತಬ್ಬರಿಸಿ

ಮುಂದಡಿಯಿಡುತ್ತಾ...


ಅತ್ತಿತ್ತ 

ಹೆಜ್ಜೆಯೂರುತ್ತಿರುವವವರ

ಅಧ: ಪತನದ ಆಕ್ರಂದನ

ಏರಿ ಮೆರೆವವರ

ವಿಜಯದ ಕೇಕೆಗಳಿಗೆ

ಕಿವಿಯಾಗಿ

ಹಂಗಿಸಿ ಹಿಂದಿಕ್ಕುವವರ

ಸೈರಿಸುತ್ತಾ...


ಕಗ್ಗತ್ತಲಿನ ಭವಿಷ್ಯದೊಳಗೂ

ಆಗಾಗ ಮಿಂಚುವ 

ಬೆಳಕನಾಶ್ರಯಿಸಿ

ಕಾತರಿಸುತ್ತಾ

ಕಂಗಾಲಾಗುತ್ತಿದ್ದ ಪರಿ....


ಈಗ 

ಹೊರಜಗತ್ತಿಗೆ 

ಹೊರೆಯೆನಿಸುವುದೂ 

ಹತ್ತಿಯಷ್ಟೇ ಹಗುರ

ಏಳುಬೀಳುಗಳ

ಹಂಗಿಲ್ಲದ ಹೂಭಾವ

ಅಂಧಕಾರದಲೂ

ಶರಣಾಗತಿಯಿಂದಷ್ಟೇ

ಅನಂತದರ್ಶನವೆಂಬ

ಸಮರ್ಪಣಾ ಭಾವ

ಸಚ್ಚಿದಾನಂದದಲಿ

ಮೀಯುತ್ತಿದೆ ಜೀವ.

     ~ಪ್ರಭಾಮಣಿ ನಾಗರಾಜ

Thursday, September 26, 2024

ಗುಟ್ಟು' ಗೆ ಬರೆದಿದ್ದ ಮುನ್ನುಡಿ

 

https://www.facebook.com/share/p/FyrhCaHCiMsDZPF9/?mibextid=oFDknk
👆ಅರ್ಥಪೂರ್ಣ ಚುಟುಕುಗಳನ್ನು ಬರೆಯುತ್ತಿದ್ದ ಸರಳ ಸಜ್ಜನರಾದ ಜರಗನಹಳ್ಳಿ ಶಿವಶಂಕರ್ ಅವರು 2009ರಲ್ಲಿ ಪ್ರಕಟವಾದ ನನ್ನ ಎರಡನೇ ಹನಿಗವನ ಸಂಕಲನ 'ಗುಟ್ಟು' ಗೆ ಬರೆದಿದ್ದ ಮುನ್ನುಡಿ 🙏


Wednesday, September 11, 2024

ಲಲಿತ ಪ್ರಬಂಧ '' ಗ್ಯಾರಂಟಿ ಕೊಸರು ಕವಿಗೋಷ್ಠಿಯಲ್ಲಿ ಹೆಸರು

 ನನ್ನ  ಲಲಿತ ಪ್ರಬಂಧ 'ಗ್ಯಾರಂಟಿ ಕೊಸರು ಕವಿಗೋಷ್ಠಿಯಲ್ಲಿ ಹೆಸರು


'   ಸೆಪ್ಟೆಂಬರ್2024ರ  'ಮಯೂರ' ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ. 

'ಮಯೂರ" ಪತ್ರಿಕಾ ಬಳಗಕ್ಕೆ ಧನ್ಯವಾದಗಳು❤️🙏

Wednesday, July 24, 2024

ಮುಗಿಯದ ಆಟ, ಆ ತುಂಟಾಟ!




 ಜುಲೈ 2024ರ 'ಅಪರಂಜಿ' ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನ ಒಂದು ಪುಟ್ಟ ಲಘು ಬರಹ ನಿಮ್ಮ ಪ್ರೀತಿಯ ಓದಿಗೆ😀


🏌️ಮುಗಿಯದ ಆಟ, ಆ ತುಂಟಾಟ!⛹️


ಅಕ್ಕಪಕ್ಕದ ಮನೆಗಳಿಲ್ಲದ ಹಳ್ಳಿಯ ನಮ್ಮ ಮನೆಯಲ್ಲಿ ನಮ್ಮ ಬಾಲ್ಯ ಚಿಕ್ಕ ಮಕ್ಕಳಾಗಿದ್ದ ನಾವು ನಾವೇ ಆಟವಾಡಿಕೊಳ್ಳುವುದರಲ್ಲೇ ಸರಿದುಹೋಯಿತು.

ನಮ್ಮ ಮನೆಯಲ್ಲಿ ಸುಂದರವಾಗಿ ಕೆತ್ತನೆ ಮಾಡಿದ್ದ ಒಂದು ಸಣ್ಣ ಮರದ ತೊಟ್ಟಿಲು ಇತ್ತು. ನಾನು ಚಿಕ್ಕವಳಾಗಿದ್ದಾಗ ಅದನ್ನು ಜಗುಲಿಯ ಮೇಲಿನ ಸೂರಿಗೆ ಕಟ್ಟಿಸಿಕೊಂಡು ತೂಗುವ ಆಟ ಅಡುತ್ತಿದ್ದೆ. ನನಗಿಂತ ಎರಡು ವರ್ಷ ಚಿಕ್ಕವನಾದ ನನ್ನ ತಮ್ಮ ಬಹಳ ಬಲಶಾಲಿಯಾಗಿದ್ದ. ದಿನದಲ್ಲಿ ಕನಿಷ್ಠ ಒಂದು ಸಾರಿಯಾದರೂ ಏನಾದರೂ ಕ್ಯಾತೆ ತೆಗೆದು ಹೊಡೆದು ನನ್ನನ್ನು ಅಳಿಸುತ್ತಿದ್ದ. ಅವತ್ತೂ ಹಾಗೇ ತನ್ಮಯತೆಯಿಂದ ತೊಟ್ಟಿಲು ತೂಗುತ್ತಿದ್ದವಳನ್ನು ಹಿಂದಿನಿಂದ ಅನಾಮತ್ತಾಗಿ ನೂಕಿಬಿಟ್ಟ! ನಾನು ಆಯತಪ್ಪಿ ಜಗುಲಿಯಿಂದ ಕೆಳಗುರುಳಿದಾಗ ನನ್ನ ತಲೆ ಜಗುಲಿಯ ಕೆಳಗೆ ದನಕಟ್ಟಲು ಹೊಡೆದಿದ್ದ ಗೂಟಕ್ಕೆ ಬಡಿದು ಬುರುಡೆ ಒಡೆದು ರಕ್ತ ಸುರಿಯಲಾರಂಭಿಸಿತು. ನನ್ನ ಕಿರುಚಾಟಕ್ಕೆ ಓಡಿಬಂದ ಹಿರಿಯರಲ್ಲಿ ಚಿಕ್ಕತ್ತೆ ನನ್ನ ಗಾಯ ತೊಳೆದು ಆ ಕಾಲದ ಪ್ರಥಮ ಚಿಕಿತ್ಸೆ ಕಾಫಿಪುಡಿ ತುಂಬಿದರೆ ದೊಡ್ಡತ್ತೆ ಹೇಗಾಯಿತು ಎಂದು ವಿಚಾರಿಸುವ ಮೊದಲೇ ನನ್ನ ತಮ್ಮನನ್ನು ಎಳೆದುಕೊಂಡು ಬಂದು ನಾಲ್ಕೇಟು ಬಾರಿಸಿ ಕೈಗಳನ್ನು ಹಿಂದಕ್ಕೆ ಕಟ್ಟಿ ಕಾಲನ್ನೂ ಕಟ್ಟಿ ಕೂರಿಸಿಯಾಗಿತ್ತು! ಅಳುತ್ತಿದ್ದ ನನ್ನ ಮುಂದೆ ಕಡಲೆಕಾಯಿ ಸುರಿದು, ಬೆಲ್ಲ ಕೊಟ್ಟು ರಮಿಸಿದರೆ ಅವನಿಗೆ ಏನನ್ನೂ ಕೊಡದೆ ಮನೆಗೆ ಬಂದವರೆಲ್ಲಾ ಬಯ್ಯುವುದೇ ಆಯಿತು. ದಿನವೂ ಅವನಿಂದ ಹೊಡೆತ ತಿಂದು ಏನೂ ಮಾಡಲಾಗದಿದ್ದ ಅಸಹಾಯಕ ಸ್ಥಿತಿಯಲ್ಲಿದ್ದ ನಾನು ಇದೇ ಸುಸಮಯವೆಂದು ಯಾರಾದರೂ ಬಂದಾಕ್ಷಣವೇ ಹೊಸದಾಗಿ ಅಳುತ್ತಾ ಅವನನ್ನು ಮತ್ತಷ್ಟು ಬೈಸಿ ಸೇಡು ತೀರಿಸಿಕೊಳ್ಳುತ್ತಿದ್ದೆ!

        ಬಹಳ ತುಂಟನಾಗಿದ್ದ ನನ್ನ ತಮ್ಮ ಒಮ್ಮೆ ದನೀನ ಕೊಟ್ಟಿಗೆಯಲ್ಲಿ ಒಂದು ಹಾವಿನಮರಿಯನ್ನು ಹಿಡಿದುಕೊಂಡು ಬಿಟ್ಟ. ಮನೆಯವರೆಲ್ಲರೂ ಜಮೀನು ಹಾಗೂ ಹೊರಗಿನ ಕೆಲಸಗಳಿಗೆ ಹೋಗಿದ್ದು ದೊಡ್ಡವರಾಗಿ ನಮ್ಮ ಚಿಕ್ಕತ್ತೆ ಒಬ್ಬರೇ ಮನೆಯಲ್ಲಿದ್ದದ್ದು. ನಾವೆಲ್ಲಾ ಓಡಿಹೋಗಿ ಅವರನ್ನು ಕರೆದುಕೊಂಡು ಬಂದೆವು. ಪಾಪ, ಕಣ್ಣೂ ಸರಿಯಾಗಿ ಕಾಣದ ಅವರು ಏನು ತಾನೇ ಮಾಡ್ತಾರೆ!  ಅವನು ಹಾವಿನಮರಿ ತಲೆ ಮೇಲೆತ್ತದಂತೆ ಒಂದೇ ಸಮನೆ ಕೊಡವುತ್ತಿದ್ದಾನೆ. ಏನೂ ತೋಚದೆ ಅವರು ಇನ್ನೆಲ್ಲಿ ಸ್ವಲ್ಪ ಹೆಚ್ಚುಕಮ್ಮಿಯಾದ್ರೆ ಕಚ್ಚಿಬಿಡುತ್ತೋ ಅಂತ ದೇವರನ್ನ ಪ್ರಾರ್ಥಿಸುತ್ತಾ, 'ಕಂದಾ, ದೂರಕ್ಕೆ ಎಸೆದುಬಿಡಪ್ಪ ಅಂತ ಗೋಗರೆಯಲಾರಂಭಿಸಿದರು. ಇದ್ದಕ್ಕಿದ್ದಂತೆಯೇ ಅವನು ಜೋರಾಗಿ ಬೀಸಿ ಎಸೆದುಬಿಟ್ಟ! ಅದು ಎಲ್ಲಿ ಹೋಯಿತೋ ಯಾರಿಗೂ ಕಾಣಲಿಲ್ಲ.

             ನನ್ನ ತಮ್ಮನ  ತುಂಟಾಟಗಳಿಗೆ ಕೊನೆಮೊದಲೇ ಇರಲಿಲ್ಲ. ದಿನದಲ್ಲಿ ಒಂದುಸಾರಿಯಾದರೂ ಏನಾದರೂ ಒಂದು ಚೇಷ್ಟೆ ಮಾಡಿ ನಮ್ಮ ದೊಡ್ಡತ್ತೆಯಿಂದ ಹೊಡೆಸಿಕೊಳ್ಳುತ್ತಿದ್ದ. `ಮೂರ್ತಿ ಬರಲಿ ತಾಳು,’ ಎಂದು ಅವರು ತಮ್ಮ ಅಣ್ಣನಿಗೂ ಕಂಪ್ಲೇಂಟ್ ಮಾಡಲು ಹೇಳಿದರೆ ಅಮ್ಮ ರಾತ್ರಿ ಅವರು ಬರುವ ವೇಳೆಗೆ ನಮಗೆಲ್ಲಾ ಊಟಬಡಿಸಿ ಮಲಗಿಸಿಬಿಡುತ್ತಿದ್ದರು! ಎದ್ದಿದ್ದರೆ ನಾವೂ ಸಾಕ್ಷಿ ಹೇಳಬೇಕಲ್ಲ! ಮಲಗಿದ್ದ ಮಕ್ಕಳನ್ನು ಎಬ್ಬಿಸಿ ಹೊಡೆಯುತ್ತಿರಲಿಲ್ಲ ನಮ್ಮ ತಂದೆ!     

       ಹಬ್ಬಗಳು ಬಂತೆಂದರೆ ತಿನ್ನಲು ಸಿಗುತ್ತಿದ್ದ ವಿಶೇಷ ತಿಂಡಿಗಳ ಬಗ್ಗೆ ಆಸೆ ಇದ್ದರೂ, `ಪೂಜೆಯಾಗುವವರೆಗೂ ಮಕ್ಕಳು ಏನೂ ತಿನ್ನುವುದು ಬೇಡ,’ ಎನ್ನುವ ನಿಯಮವಿರುತ್ತಿದ್ದುದರಿಂದ ಸಂಕಟವೇ ಹೆಚ್ಚಾಗುತ್ತಿತ್ತು. ಅದೂ ವಿಶೇಷವಾಗಿ ಗಣಪತಿ ಹಬ್ಬದಲ್ಲಿ ಬಹಳ ಕಟ್ಟುನಿಟ್ಟು! ನನ್ನ ತಮ್ಮನಿಗೋ ಹಸಿವು ತಡೆಯಲೇ ಆಗುತ್ತಿರಲಿಲ್ಲ. ಅಮ್ಮನಿಗೂ ಮಕ್ಕಳು ಉಪವಾಸವಿರುವುದು ಇಷ್ಟವಾಗುತ್ತಿರಲಿಲ್ಲ. ಆದರೆ ಹಿರಿಯರ ಕಣ್ಣುತಪ್ಪಿಸಿ ಏನನ್ನೂ ಕೊಡಲೂ ಆಗುತ್ತಿರಲಿಲ್ಲ. ತಮ್ಮ ಪ್ರೀತಿಯ ಕಿರಿಮಗನ ಪಾಡು ನೋಡಲಾಗದೇ ಅವನಿಗೆ ಒಂದು ಚೊಂಬಿನಲ್ಲಿ ಹಿಂದಿನ ದಿನ ಗೌರಿಹಬ್ಬದ ನಾಲ್ಕು ಒಬ್ಬಟ್ಟುಗಳನ್ನು ಹಾಕಿ ಕೊಡುತ್ತಿದ್ದರು. ಅವನು ಚೊಂಬು ಹಿಡಿದುಕೊಂಡು(!) ನಮ್ಮ ಮನೆ ಹಿಂದಿನ ಬಾವಿಕಟ್ಟೆ ಮೂಲೇಲಿ ಕುಳಿತು ತಿಂದು ಬರುತ್ತಿದ್ದ! `ಅಯ್ಯೋ ಸೂರ್ಯ ನೆತ್ತೀಗೆ ಸಿಕ್ಕಿಹಾಕಿಕೊಂಡರೂ ಇನ್ನೂ ಪೂಜೆ ಆಗಿಲ್ಲ. ಬೇಗ ಮಾಡೋ ಮೂರ್ತಿ, ಪಾಪ ನಮ್ಮ ಚಿಕ್ಕದೂ ಉಪವಾಸ ಇದೆ,’ ಎಂದು ಹಲುಬುತ್ತಿದ್ದರು ನಮ್ಮತ್ತೆ!  

               ಸದಾ ಆಟ, ಓಡಾಟಗಳಲ್ಲೇ ತೊಡಗಿರುತ್ತಿದ್ದ ನಮಗೆ ಅಗಾಧ ಹಸಿವು! ಇನ್ನೂ ಅಡುಗೆ ಪಾತ್ರೆ ಒಲೆಯಿಂದ ಇಳಿಯುವ ಮೊದಲೇ ತಟ್ಟೆ ಇಟ್ಟುಕೊಂಡು ಊಟಕ್ಕೆ ಕುಳಿತುಬಿಡುತ್ತಿದ್ದೆವು. ಪಲ್ಯ, ಗೊಜ್ಜುಗಳ ರುಚಿಗೆ ಇನ್ನಷ್ಟು, ಮತ್ತಷ್ಟು ಎಂದು ದುಂಬಾಲುಬೀಳುತ್ತಿದ್ದೆವು. ಅಮ್ಮ, `ಹಿಂದೆ-ಮುಂದೆ ನೋಡಿಕೊಂಡು ಊಟಮಾಡಿ ಎನ್ನುತ್ತಿದ್ದರು. ಅಮ್ಮ ಈ ಮಾತನ್ನು ನಂತರದವರಿಗೂ ಉಳಿಸಿ ಎಂಬ ಅರ್ಥದಲ್ಲಿ ಹೇಳಿದ್ದರೂ ನಾವು ಹಿಂದೆ ಮುಂದೆ ನೋಡುತ್ತಾ ಗದ್ದಲವೆಬ್ಬಿಸುತ್ತಿದ್ದೆವು! ಹುಳಿ ಮಾಡಿದರಂತೂ , `ಹೋಳು, ಹೋಳು’ ಎಂದು ಕಿರುಚಲಾರಂಭಿಸುತ್ತಿದ್ದೆವು ಅಮ್ಮ, `ಇನ್ನು ಹುಳಿಯೊಳಗೆ ಮುಳುಗಿ ತೆಗೆದು ಹಾಕಬೇಕು ಅಷ್ಟೆ,’ ಎನ್ನುತ್ತಿದ್ದರು. ಸಾರಿನ ಕಲ್ಲುಸೋರೆಯೊಳಗೆ ಘನ ಗಾತ್ರದ ಅಮ್ಮ ಮುಳುಗುವ ಕಲ್ಪನೆಯಲ್ಲಿ ನಮಗೆ ನಕ್ಕನಕ್ಕು ಸಾಕಾಗುತ್ತಿತ್ತು!  

                         ಅನುದಿನವೂ ನವನವೀನವಾಗಿರುತ್ತಿದ್ದ ಈ ಬಾಲ್ಯದಾಟಗಳಿಗೆ ಕೊನೆ ಎಂಬುದೇ ಇರುತ್ತಿರಲಿಲ್ಲ!


(ಇದು 'ಕನ್ನಡ ಕಥಾಗುಚ್ಚದಲ್ಲಿ ಪ್ರಕಟವಾಗಿದೆ.)

                                 ~ಪ್ರಭಾಮಣಿ ನಾಗರಾಜ

Friday, July 19, 2024

ಸುಧಾ ಯುಗಾದಿ ವಿಶೇಷಾಂಕ 2024 ಪ್ರಬಂಧ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನಿತ ಲಲಿತ ಪ್ರಬಂಧ 'ಎಲ್ಲದಕೂ ಕಾರಣ ನೀನೇ ಪ್ರಿಯ ದರ್ಪಣ'

 `ಸುಧಾ ಯುಗಾದಿ ವಿಶೇಷಾಂಕ 2024 ಪ್ರಬಂಧ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನಿತ ಲಲಿತ ಪ್ರಬಂಧ 'ಎಲ್ಲದಕೂ ಕಾರಣ ನೀನೇ ಪ್ರಿಯ ದರ್ಪಣ'  ನಿಮ್ಮ ಪ್ರೀತಿಯ ಓದಿಗೆ❤️🌼

    


ಎಲ್ಲದಕೂ ಕಾರಣ ನೀನೇ ಪ್ರಿಯ ದರ್ಪಣ


        ಅಪ್ಪಟ ಕನ್ನಡಮ್ಮನ ಕಂದನಾದ ಮತ್ತು ಕನ್ನಡ ಮಾಧ್ಯಮದಲ್ಲಿಯೇ ಪ್ರೌಢಶಾಲಾ ವ್ಯಾಸಂಗವನ್ನೂ ಮಾಡಿದ ನನಗೆ ವಿಜ್ಞಾನವನ್ನು ಓದುವಾಗ ʼದರ್ಪಣʼ ಎನ್ನುವ ಒಂದು ಅಧ್ಯಾಯವೇ ಇತ್ತು. ಬಹಳ ಉತ್ಸಾಹಿಯಾಗಿದ್ದ ನಮ್ಮ ವಿಜ್ಞಾನದ ಟೀಚರ್‌ ಸಣ್ಣಸಣ್ಣ ಗಾಜಿನ ಚೂರುಗಳನ್ನು ತಂದು ʼಇದು ಉಬ್ಬಿದೆ ನೋಡಿ, ಇದನ್ನು ಪೀನ ದರ್ಪಣ ಅಂತಾರೆ, ಇದು ತಗ್ಗಾಗಿರೊದರಿಂದ ನಿಮ್ನ ದರ್ಪಣ ಅಂತಾರೆʼ ಎಂದು ನಮ್ಮ ಕೈಗೆ ಕೊಟ್ಟಾಗ ʼಅಯ್ಯೋ ಇದು ಕನ್ನಡಿ ಚೂರುʼ ಎನ್ನುತ್ತಾ ಅದರಲ್ಲಿ ನಮ್ಮ ಮುಖ ನೋಡಿಕೊಂಡಾಗ ಮೂಗು ತುಟಿ ಎಲ್ಲಾ ದಪ್ಪದಪ್ಪಕ್ಕೆ ವಕ್ರವಾಗಿ ಕಂಡು ನಾವೆಲ್ಲಾ ಬಿದ್ದುಬಿದ್ದು ನಕ್ಕಿದ್ದೂ ನಕ್ಕಿದ್ದೇ! ಸಮತಲ ದರ್ಪಣ ಎನ್ನುವ ಪಾಠದ್ದೂ ನೆನಪಾಗಿ ದರ್ಪಣ ಅಂದ್ರೆ ಕನ್ನಡಿ ಎನ್ನುವುದು ಖಚಿತವಾಯ್ತು. ಆದರೆ ಮುಂದೆ ʼಮಸೂರʼ ಅನ್ನೋ ಪಾಠದಲ್ಲೂ ಪೀನ-ನಿಮ್ನ ಅಂತೆಲ್ಲಾ ಬಂದು ನಮ್ಮ ತಲೆ ಕೆಡಿಸಿ ಗೊಬ್ಬರಮಾಡಿತ್ತು.

ನಮ್ಮ ಮನೆಯಲ್ಲಿದ್ದ ಏಕೈಕ ಅಂಗೈ ಅಗಲದ ಕನ್ನಡಿಯನ್ನು ಅಮ್ಮ ಪೆಠಾರಿ ಮೇಲೆ ಕುಂಕುಮದ ಡಬ್ಬಿ ಪಕ್ಕದಲ್ಲಿ ಮರದ ಬಾಚಣಿಗೆ ಜೊತೆ ಇಟ್ಟಿರುತ್ತಿದ್ದರು. ಅದನ್ನು ಬೆಳಿಗ್ಗೆ ಎದ್ದು ಮುಖ ತೊಳೆದಾಕ್ಷಣವೇ ಹಣೆಗೆ ಕುಂಕುಮ ಇಟ್ಟುಕೊಳ್ಳಕ್ಕೆ, ಸ್ನಾನ ಆದ ನಂತರ ತಲೆಬಾಚಿಕೊಳ್ಳುವಾಗ ಬೈತಲೆ ತೆಗೆದುಕೊಳ್ಳಕ್ಕೆ ಮಾತ್ರ ಉಪಯೋಗಿಸುತ್ತಿದ್ದರು. ನಾವಂತೂ ಚಿಕ್ಕಂದಿನಲ್ಲಿ ಕನ್ನಡೀನೇ ನೋಡಿಕೊಳ್ತಿರಲಿಲ್ಲ. ನಮಗೆ ತಲೆಬಾಚಿ, ಹಣೆಗೆ ಸಾದು ಇಡೋ ಕೆಲಸಾನೆಲ್ಲಾ ನಮ್ಮ ಸೋದರತ್ತೇನೇ ಮಾಡ್ತಿದ್ದರಲ್ಲ! ಆದರೂ ಸ್ವಲ್ಪಸ್ವಲ್ಪ ದೊಡ್ಡವರಾದಂತೆ ಬಹಳ ಕುತೂಹಲದಿಂದ ಆಗಾಗ ಕದ್ದುಮುಚ್ಚಿ ಕನ್ನಡೀಲಿ ಹಲ್ಲು ಕಿರಿದು, ಮುಖ ಸೊಟ್ಟಗೆ ಮಾಡಿಕೊಂಡು ನೋಡಿಕೊಳ್ಳುತ್ತಾ ಕಿಸಕಿಸನೆ ನಗುತ್ತಿದ್ದೆವು. ತಲೆ ಬಾಚುವಾಗ ಕನ್ನಡಿ ಇರಲೇಬೇಕು ಎಂದು ಮೊದಲು ಹಠ ಮಾಡಿದ ಕೀರ್ತಿ ನಮ್ಮಕ್ಕನಿಗೇ ಸಲ್ಲುತ್ತದೆ. ಕನ್ನಡಿ ನೋಡಿಕೊಳ್ಳಲು ಪ್ರಾರಂಭಿಸಿದ ನಂತರ ಅವಳು ಹೇಗೆ ಅಲಂಕರಿಸಿದರೂ ಒಪ್ಪದೇ ಬೈತಲೆ ಸೊಟ್ಟಾಗಿದೆ, ಮುಂದಲೇಲೆ ಗುಬ್ಬಳು ಬಂದಿದೆ ಎಂದು ಸತಾಯಿಸಿ ನಮ್ಮತ್ತೆ ಕನ್ನಡೀನ ವಾಚಾಮಗೋಚರ ಬಯ್ಯುವಂತೆ ಮಾಡುತ್ತಿದ್ದಳು.

ಹಳ್ಳಿಯಲ್ಲಿದ್ದ ನಮ್ಮ ಮನೆಯ ಹಿತ್ತಲಿನಲ್ಲಿ ನಾಲ್ಕೈದು ರೀತಿಯ ಮಲ್ಲಿಗೆಯ ಬಳ್ಳಿಗಳಿದ್ದು ಅವುಗಳನ್ನು ಕೊಂಡಮಾವಿನ ಗಿಡಗಳಿಗೆ ಹಬ್ಬಿಸಿದ್ದರು. ಇವುಗಳ ನಡುವೆ ದುಂಡುಮಲ್ಲಿಗೆಯ ಪಕ್ಕ ಒಂದು ದೊಡ್ಡ ನೀರಿನ ತೊಟ್ಟಿ ಇತ್ತು. ಬಾವಿಯಿಂದ ಸೇದಿದ ನೀರನ್ನು ಅದಕ್ಕೆ ತುಂಬಿ ಗೃಹಕೃತ್ಯಗಳಿಗೆ ಬಳಸುತ್ತಿದ್ದರು. ನನಗೆ ಆ ತೊಟ್ಟಿಯ ಕಟ್ಟೆಯ ಮೇಲೆ ಕುಳಿತು ನೀರಿನಲ್ಲಿ ಕಾಣುವ ಪ್ರತಿಬಿಂಬವನ್ನು ನೋಡಿಕೊಳ್ಳುವುದೆಂದರೆ ಎಲ್ಲಿಲ್ಲದ ಸಂಭ್ರಮ! ವಿಶಾಲವಾದ ನೀಲಾಗಸದಲ್ಲಿಯೇ ಹಬ್ಬಿದಂತಿದ್ದ  ಹಸಿರ ಹಂದರದ ನಡುವಿನ ‘ಆ ಮುಖ’ ನನ್ನನ್ನು ಪರವಶಳನ್ನಾಗಿಸಿಬಿಡುತ್ತಿತ್ತು. ನಮ್ಮ ವಿಶ್ವಕವಿ ವಾಣಿಯಾದ ʼತನ್ನ ಕಾವ್ಯಕ್ಕೆ ತಾ ಮಹಾಕವಿ ಮಣಿದಂತೆ!ʼ ‘ಸ್ವಮೋಹ’ ಎನ್ನುವುದು ಇದಕ್ಕೇ ಇರಬಹುದು. ನಂತರದ ದಿನಗಳಲ್ಲಿ ನಾನು ಓದಿದ ಪೋವ್ಲೋ ಕೋಯ್ಲೋ ಅವರ ‘ದಿ ಆಲ್ ಕೆಮಿಸ್ಟ್’ನಲ್ಲಿಯ ನಾರ್ಸಿಸ್ಸಸ್ ಎಂಬ ಒಬ್ಬ ಯುವಕ ತನ್ನ ಸೌಂದರ್ಯವನ್ನು ಆಸ್ವಾದಿಸಲು ಪ್ರತಿದಿನ ಒಂದು ಕೊಳದ ದಂಡೆಯಲ್ಲಿ ಮಂಡಿಯೂರಿ ಕುಳಿತು ನೀರಿನಲ್ಲಿ ತನ್ನ ಪ್ರತಿಬಿಂಬವನ್ನು ತಾನೇ ನೋಡಿಕೊಳ್ಳುತ್ತಿದ್ದ ಕಥೆ ನನಗೆ ನಮ್ಮ ಹಳ್ಳಿಯ ನೀರಿನ ತೊಟ್ಟಿಯನ್ನೇ ನೆನಪಿಸುತ್ತಿತ್ತು. ಪಾಪ, ಒಂದು ದಿನ ಹೀಗೇ ತನ್ಮಯನಾಗಿ ತನ್ನನ್ನೇ ತಾನು ನೋಡಿಕೊಳ್ಳುತ್ತಿರುವಾಗ ಅವನು ಕೊಳದೊಳಗೇ ಮುಳುಗಿಹೋಗುತ್ತಾನೆ. ಅವನು ಮುಳುಗಿದ ಜಾಗದಲ್ಲೇ ಒಂದು ಹೂ ಅರಳುತ್ತದೆ. ಅದನ್ನು ‘ನಾರ್ಸಿಸ್ಸಸ್’ಎಂದೇ ಕರೆಯುತ್ತಾರೆ ಎನ್ನುವುದು ಮೂಲಕಥೆ. ಈ  ಕಥೆಗೆ ಒಂದು ಹೊಸ ತಿರುವನ್ನು ನೀಡಿ ಮುಂದುವರಿಸುತ್ತಾ... ನಾರ್ಸಿಸ್ಸಸ್ ನಿಧನದ ನಂತರ ವನದೇವತೆಗಳೆಲ್ಲಾ ಕೊಳದ ಬಳಿ ಬಂದು ಈ ಮೊದಲು ಸ್ವಚ್ಛವಾಗಿದ್ದ ಕೊಳದ ನೀರು ಉಪ್ಪಾಗಿರುವುದನ್ನು ಗಮನಿಸಿ, ‘ಏಕೆ ಅಳುತ್ತಿರುವೆ?’ ಎಂದು ಕೊಳವನ್ನು ಕೇಳುತ್ತಾರೆ.

‘ನಾನು ನಾರ್ಸಿಸ್ಸಸ್‍ಗಾಗಿ ಅಳುತ್ತಿರುವೆ.’ಎಂದು ಕೊಳ ಉತ್ತರಿಸುತ್ತದೆ.

‘ನಾರ್ಸಿಸ್ಸಸ್‍ಗಾಗಿ ನೀನು ದುಃಖಿಸುವುದರಲ್ಲಿ ಅಚ್ಚರಿಯೇ ಇಲ್ಲ. ಅವನ ಸೌಂದರ್ಯವನ್ನು ಅತ್ಯಂತ ಸಮೀಪದಿಂದ ನೋಡುತ್ತಿದ್ದುದೇ ನೀನು.’ ಎಂದು ವನದೇವತೆಗಳೆಂದಾಗ, ‘ಆದರೆ... ಅವನು ಸುಂದರವಾಗಿದ್ದನೆ?’ ಎಂದು ಕೇಳಿದ ಕೊಳ ‘ನಾನು ಅಳುತ್ತಿರುವುದೇಕೆಂದರೆ ನಾರ್ಸಿಸ್ಸಸ್‍ನ ಕಣ್ಣುಗಳ ಆಳದಲ್ಲಿ ನಾನು ನನ್ನ ಸೌಂದರ್ಯವನ್ನೇ ನೋಡುತ್ತಿದ್ದೆ’ ಎನ್ನುತ್ತೆ. ಇದರ ಅಂತರಾರ್ಥದ ಗಾಂಭೀರ್ಯದ ಬಗ್ಗೆ ಗಹನವಾಗಿ ಚಿಂತಿಸುವಷ್ಟು ಪ್ರೌಢಿಮೆಯನ್ನು ಪಡೆದು ಬಂದಿಲ್ಲವಾದ್ದರಿಂದ ಅವರವರಿಗೆ ಅವರವರದ್ದೇ ಚಿಂತೆ ಎಂದೇ ಸ್ಥೂಲವಾಗಿ ಅಭಿಪ್ರಾಯಿಸಬಹುದೇನೋ.  ʼನಿನ್ನಾ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪʼ ಎನ್ನುವ ಹಾಡು ನನ್ನ ಜಮಾನಾದ ಆಸುಪಾಸಿನವರಿಗೆ  ನೆನಪಾಗುತ್ತದೆ ಅಲ್ಲವೆ?                   

      ಪ್ರಾಚೀನ ಕಾಲದಲ್ಲಿ ಗಾಜನ್ನು ಇನ್ನೂ ಕಂಡುಹಿಡಿಯದೆ ಗಾಜೆಂಬ ಅತ್ಯಚ್ಛರಿ ಅಜ್ಞಾತಸ್ಥಿತಿಯಲ್ಲಿದ್ದಾಗ ವಿವಿಧ ವಿನ್ಯಾಸಗಳ ಹೆಚ್ಚು ಪಾಲಿಶ್ ಮಾಡಿದ ಲೋಹದ ಫಲಕಗಳನ್ನೇ ಕನ್ನಡಿಗಳಾಗಿ ಬಳಸುತ್ತಿದ್ದರಂತೆ. ತಿರುವಾಂಕೂರ್‌ನ ಆರಾಮುಲ ಎಂಬ ಸ್ಥಳದಲ್ಲಿ ಅಂತಹ ಕನ್ನಡಿಗಳನ್ನು ಇನ್ನೂ ತಯಾರಿಸಲಾಗುತ್ತಿದ್ದು ಆ ಭಾಗದ  ಕೆಲವು ದೇವಾಲಯದ ಸೇವೆಯಲ್ಲಿ ಗಾಜಿನ ಕನ್ನಡಿಗಳನ್ನು ಬಳಸಲು ಅನುಮತಿ ಇಲ್ಲದಿರುವುದರಿಂದ ಇಂಥಾ ಸ್ಪೆಕ್ಯುಲಮ್ ಕನ್ನಡಿಗಳನ್ನೇ ಬಳಸುತ್ತಾರಂತೆ.

        ನಾವೆಲ್ಲಾ ಸ್ವಲ್ಪ ದೊಡ್ಡವರಾದಂತೆ ನಮ್ಮೆಲ್ಲರ ತೀವ್ರ ಬೇಡಿಕೆಯಂತೆ ಒಂದು ಚಚ್ಚೌಕವಾದ ಕನ್ನಡಿ ನಮ್ಮ ಹಳ್ಳಿಯ ಮನೆಯ ಗೋಡೆಯನ್ನು ಅಲಂಕರಿಸಿತು. ನಾವು ಆ ಕಡೆ ಈ ಕಡೆ ಓಡಾಡುವಾಗಲೆಲ್ಲಾ ರಾಷ್ಟ್ರೀಯ ಹಬ್ಬಗಳಲ್ಲಿ ಪೆರೇಡ್‌ ಮಾಡುವಾಗ ಮುಖ್ಯ ಅತಿಥಿಗಳಿಗೆ ಸೆಲ್ಯೂಟ್‌ ಮಾಡಿ ಹೋಗುವಂತೆ ಅನವಶ್ಯಕವಾಗಿ ಕನ್ನಡಿಯ ಮುಂದೆ ನಿಂತು ಮೆಟ್ಟಿಂಗಾಲಿಟ್ಟು ನಮ್ಮ ವದನಾರವಿಂದದ ಸೌಂದರ್ಯಾಸ್ವಾದನೆ ಮಾಡಿಕೊಂಡು ಮುಂದುವರಿಯುತ್ತಿದ್ದೆವು. ಕೆಲವೊಮ್ಮೆ ಈ ವಿಷಯದಲ್ಲಿ ತಿಕ್ಕಾಟ ನೂಕಾಟಗಳ ಜಗಳವೂ ಆಗುತ್ತಿತ್ತು. ಇದನ್ನು ಗಮನಿಸುತ್ತಿದ್ದ ನಮ್ಮ ಸೋದರತ್ತೆ ʼಎಲ್ಲಾರೂ ಮುಖಕ್ಕೆ ಒಂದೊಂದು ಕನ್ನಡಿ ಕಟ್ಟಿಕೊಂಡುಬಿಡಿ ಸರಿಹೋಗುತ್ತೆʼ ಎಂದು ವಾಗ್ಬಾಣ ಪ್ರಯೋಗಿಸುತ್ತಿದ್ದರು. ಈ ನಡುವೆ ನಮ್ಮಣ್ಣ ಗೋಡೆಗೆ ನೇತುಹಾಕಿದ್ದ ಕನ್ನಡಿಯನ್ನೇ ಎತ್ತಿಕೊಂಡು ಓಡಿಬಿಡುತ್ತಿದ್ದ. ನಾವೂ ಅವನನ್ನು ಹಿಂಬಾಲಿಸಿ ʼನಂಗೂ ತೋರಿಸೋʼ ಎಂದು ಬಿದ್ದಂಬೀಳ ಓಡುತ್ತಿದ್ದೆವು. ನಮ್ಮ ಹಿಂದೆಯೇ ನಮ್ಮತ್ತೆ ʼಪಾಪಿ ಮುಂಡೇವ, ಮನೇಲಿ ಕನ್ನಡಿ ಒಡೀಬಾರದು, ಅನಿಷ್ಟʼ ಎಂದು ಕೂಗುತ್ತಾ ಓಡಿಬರುತ್ತಿದ್ದರು. ಅವತ್ತಂತೂ ಅಣ್ಣನಿಗೆ ನಮ್ಮ ತಂದೆಯ ಕೈಯಿಂದ ಗೂಸು ಗ್ಯಾರಂಟಿ! ಎಲ್ಲಾ ಏಟು ತಪ್ಪಿಸಿಕೊಂಡು ಓಡಿದರೆ ಆ ಒದೆ ಬೀಳುತ್ತಿದ್ದುದು ಓಡಿನಲ್ಲಿ ಸದಾ ಹಿಂದುಳಿಯುತ್ತಿದ್ದ ನನಗೇ. ಸೂರುಕಟ್ಟಿನಿಂದ ಹೊರಗೆಳೆದಿದ್ದ ನಾಗರಬೆತ್ತಕ್ಕೆ ಹೀಗೆ ಶಾಂತಿ ಮಾಡಿ ಪುನಃ ಸ್ವಸ್ಥಾನಕ್ಕೆ ಸೇರಿಸುತ್ತಿದ್ದರು ನಮ್ಮಣ್ಣ.

        ನನಗಂತೂ ನನ್ನದೇ ಆದ ಸ್ವಂತಮನೆಗೆ ಹೋದಾಗ ಮನೆಯ ಎಲ್ಲಾ ಕಡೆಗೂ ಒಂದೊಂದು ಕನ್ನಡಿ ಹಾಕಿಕೊಂಡುಬಿಡಬೇಕು ಎಂಬ ಮಹದಾಸೆಯಿತ್ತು. ʼಮೈಸೂರಿನ ಅರಮನೆಯಲ್ಲಿ ದೊಡ್ಡದೊಡ್ಡ ಕನ್ನಡಿಗಳನ್ನು ಹಾಕಿದಾರಂತೆ. ಕನ್ನಡಿ ಯಾವುದು, ಬಾಗಿಲು ಯಾವುದು ಎಂದು ಗೊತ್ತಾಗದೇ ಬಾಗಿಲು ಅಂತ ಹೋಗಿ ಕನ್ನಡೀಗೆ ಡಿಕ್ಕಿ ಹೊಡೆದುಕೊಳ್ತಾರಂತೆ,ʼ ಎಂದು ಎಲ್ಲರೂ ಮಾತನಾಡಿಕೊಳ್ಳುವಾಗ ಯಾವಾಗ ಹೋಗಿ ಮೈಸೂರಿನ ಅರಮನೆ  ನೋಡ್ತೀನೋ ಎನ್ನುವ ತಹತಹ ಉಂಟಾಗುತ್ತಿತ್ತು.  

ʼಕನ್ನಡಿಯೊಳಗಿನ ಗಂಟು’ ಎಂಬ ನುಡಿಗಟ್ಟನ್ನು ಅಜ್ಜಿ  ಸಮಯಾನುಸಾರ ಬಳಸಿದಾಗ ಚಿಕ್ಕವಳಾಗಿದ್ದ ನಾನು ಬಹಳ ಗೊಂದಲಗೊಳ್ಳುತ್ತಿದ್ದೆ. ಇದು ನನ್ನ ಎಳೆಮನದಲ್ಲಿ `ಆ ದುಡ್ಡಿನ ಗಂಟನ್ನು ಹೊರತೆಗೆಯುವುದು ಹೇಗೆ?’ ಎನ್ನುವ ಪ್ರಶ್ನೆಯನ್ನು ಉಂಟುಮಾಡಿತ್ತು. ನಂತರದ ದಿನಗಳಲ್ಲಿ ವೈವಿಧ್ಯಮಯ ಬದುಕಿನ ಗಂಟುಗಳು ಉಂಟುಮಾಡಿದ ಎಲ್ಲಾ ಗೋಜಲುಗಳಿಂದ `ಈ ಗಂಟನ್ನು ಪುನಃ ಕನ್ನಡಿಯೊಳಗೇ ಸೇರಿಸುವುದು ಹೇಗೆ?’ ಎಂದು ನನ್ನನ್ನೇ ಪ್ರಶ್ನಿಸಿಕೊಳ್ಳುವಂತಾಯಿತು! ಬಿಡಿಸಲಾಗದ, ಬಯಲಾಗದ, ಕರಗದ, ಕುಗ್ಗದ...ಯಾವುದೇ ಗಂಟುಗಳಿದ್ದರೂ ಅವು ಕನ್ನಡಿಯೊಳಗೇ ಪ್ರವೇಶಿಸಿ `ಕನ್ನಡಿಯೊಳಗಿನ ಗಂಟು’ಆಗೇ ಉಳಿದುಬಿಡಲಿ ಎಂದುಕೊಳ್ಳುವಂತಾಯಿತು.  

ಒಮ್ಮೆ ಪಟ್ಟಣದ ಜಾತ್ರೆಗೆ ಹೋಗಿದ್ದಾಗ ಇನ್ನೂ ಪ್ರವೇಶದ್ವಾರದಲ್ಲಿಯೇ ʼತಕ್ಷಣವೇ ಬನ್ನಿ ನೋಡಿ, ಎಲ್ಲರೂ ಬಿದ್ದುಬಿದ್ದು ನಗುವಂತೆ ಮಾಡುವ`ನಗಿಸುವ ಕನ್ನಡಿ’ಯಲ್ಲಿ ನಿಮ್ಮ ಹೊಸ ರೂಪ,ʼ ಎಂದು ಹೇಳುವಾಗಲೇ ಎಲ್ಲರೂ ಜೋರಾಗಿ ನಗುವ ಅಡ್ವರ್‌ಟೈಸ್ಮೆಂಟ್ ಕೇಳಿ ನಾವು ಅದನ್ನೇ ಮೊದಲು ನೋಡಬೇಕು ಎಂದು ಹಠ ಹಿಡಿದಾಗ ʼಬೇರೇದೆಲ್ಲಾ ನೋಡ್ಕೊಂಡು ಬರೋಣ ನಡೀರಿʼ ಎಂದು ನಮ್ಮನ್ನು ಅಕ್ಷರಶಃ ದಬ್ಬಿಕೊಂಡೇ ಹೊರಟಿದ್ದರು ಹಿರಿಯರು. ಅಯ್ಯೋ ಅದಕ್ಕೆ ಟಿಕೆಟ್‌ ಇರುತ್ತೆ. ದುಡ್ಡು ಯಾರು ಕೊಡೋರು ಅನ್ನೋದು ಅವರ ಚಿಂತೆ. ಎಲ್ಲಾ ಕಡೆ ನೋಡ್ಕೊಂಡು ಬಂದ ನಂತರ ಮರೆತಿರ್ತಾರೆ ಎನ್ನುವುದು ಅವರ ಎಣಿಕೆ. ಹಿಂತಿರುಗುವಾಗ ಬೇರೆ ದಾರಿಯಲ್ಲಿ ನಮ್ಮನ್ನು ಕರೆದುಕೊಂಡು ಬಂದರೂ ಆ `ನಗಿಸುವ ಕನ್ನಡಿ’ ನನ್ನ ತಲೆಯೊಳಗೇ ಥೈಥೈ ಕುಣಿಯುತ್ತಿದ್ದು ಹೊರಗೆ ಬರುವಾಗಲೂ  ನಾನು ನೋಡಲೇಬೇಕು ಎಂದು ಅಳುತ್ತಾ ಹಠಹಿಡಿದು ಕುಳಿತಾಗ ನಂಗೆ ಎರಡೇಟು ಬಾರಿಸಿ ಎಲ್ಲರನ್ನೂ ಕರೆದುಕೊಂಡುಹೋಗಿದ್ದರು. ಒಳಹೋದನಂತರ ಅಲ್ಲಿ ಜೋಡಿಸಿಟ್ಟಿದ್ದ ದೊಡ್ಡದೊಡ್ಡ ಉಬ್ಬು-ತಗ್ಗಿನ ಕನ್ನಡಿಗಳಲ್ಲಿ ನಮ್ಮನ್ನು ನೋಡಿಕೊಂಡು ಉರುಳಾಡಿಕೊಂಡು ನಗುವಾಗ ಏಟಿನ ಚುರುಚುರು ಮರೆತೇಹೋಯ್ತು. ಎತ್ತರಕ್ಕೆ ಇಟ್ಟಿದ್ದ ಎರಡು ಕನ್ನಡಿಗಳ ಮಧ್ಯೆ ಹೋದಾಗಲಂತೂ ಸಾಲುಸಾಲಾಗಿದ್ದ ಎಷ್ಟೊಂದು ಜನ ನಮ್ಮನ್ನೇ ನೋಡಿ ಬೆರಗಾಗಿಹೋದೆವು. ಒಲ್ಲದ ಮನಸ್ಸಿನಿಂದ ಈಚೆ ಬರುವಾಗ ಒಬ್ಬೊಬ್ಬರೂ ಹೇಗೆ ಕಾಣ್ತಿದ್ದೆವು ಎಂದು ನೆನೆಸಿಕೊಳ್ಳುತ್ತಿದ್ದ ಮಕ್ಕಳಾದ ನಮ್ಮ ಸಡಗರದ ನಗುವಿನ ನಡುವೆ ದೊಡ್ಡೋರು ʼದುಡ್ಡು ದಂಡʼ ಎಂದು ಮಾತನಾಡಿಕೊಳ್ಳುತ್ತಿದ್ದರು. 

ನಮ್ಮಕ್ಕನ ಮನೆಯ ಮುಂದೆ ಮಾವಿನಮರಗಳಿದ್ದವು. ವಸಂತಾಗಮನವಾಗಿ ಅವು ಕಾಯಿಬಿಡುವ ಕಾಲ ಬಂದಾಕ್ಷಣವೇ ಮಂಗಗಳ ಹಿಂಡಿನ ಆಗಮನವೂ ಆಗುತ್ತಿತ್ತು. ಅವುಗಳದ್ದಂತೂ ಬಹಳ ಹಾವಳಿಯಾಗಿತ್ತು. ಮಂಗವೊಂದು ಒಳಗೆ ಬಂದು ಟೇಬಲ್‌ ಮೇಲಿಟ್ಟಿದ್ದ ಕನ್ನಡಿಯನ್ನು ತೆಗೆದುಕೊಂಡು ಹೋಗಿ ಮರದ ರೆಂಬೆಯ ಮೇಲೆ ಕುಳಿತು ಹಲ್ಲುಕಿರಿಯುತ್ತಾ ತನ್ನನ್ನುತಾನು ನೋಡಿಕೊಂಡದ್ದೂ ನೋಡಿಕೊಂಡಿದ್ದೆ! ಆ ಖುಷಿಯನ್ನು ತಾವೂ ಅನುಭವಿಸಬೇಕೆನ್ನುವಂತೆ ಕನ್ನಡಿಗಾಗಿ ಎಲ್ಲಾ ಮಂಗಗಳೂ ನಡೆಸಿದ ಫೈಟಿಂಗ್‌ ಅಂತೂ ಮರೆಯಕ್ಕೇ ಸಾಧ್ಯವಿಲ್ಲ! ನಮ್ಮ ಮನೆಗೆ ಹೊಸ ಡ್ರೆಸ್ಸಿಂಗ್‌ ಟೇಬಲ್‌ ತಂದಾಗ ಜಿಮ್ಮಿ ಅದರ ಕನ್ನಡಿಯ ಮುಂದೆ ನಿಂತು ಬೊಗಳಿದ್ದೂ ಬೊಗಳಿದ್ದೆ. ಪ್ರತಿಸಾರಿಯೂ ನವನವೀನವಾಗಿ ಹಾಗೇ ಬೊಗಳುತ್ತಿತ್ತು. ಚಿಪ್ಪಿ ಹಾಗಲ್ಲ. ಅದರ ಮುಂದೆ ಕನ್ನಡಿ ಹಿಡಿದರೆ ಸಾಕು, ಕನ್ನಡಿಯ ಹಿಂಭಾಗಕ್ಕೆ ಹೋಗಿ ಅದರ ರೈವಲ್‌ ಬೆಕ್ಕನ್ನು ಹಿಡಿಯುವ ಪ್ರಯತ್ನ ಮಾಡುತ್ತಿತ್ತು! ನಮಗೆ ಅದೇ ಆಟ. 

ಪ್ರತಿದಿನ ಬೆಳಿಗ್ಗೆ ನಾವು ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಹೆಚ್ಚಾಗಿ ನೋಡುವುದೇ ಕನ್ನಡಿಯನ್ನು. ಇದು ನಮಗೆ ಎಷ್ಟು ಅಚ್ಚುಮೆಚ್ಚು ಎಂದರೆ ನಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೂ ನಾವು ಸೆಲ್ಫಿ ಕ್ಯಾಮೆರಾವನ್ನು ತೆರೆದು ಅದನ್ನು ಕನ್ನಡಿಯಾಗಿ ಬಳಸ್ತೀವಿ. ಕೆಲವು ಮೊಬೈಲ್‌ ಗಳಲ್ಲಿ ಪ್ರತ್ಯೇಕವಾಗಿ ಕನ್ನಡಿಯೂ ಇರುತ್ತದೆ. ಸಮಯ ಸಿಕ್ಕಾಗಲೆಲ್ಲಾ ವಿವಿಧ ಆಂಗಲ್ ಗಳಲ್ಲಿ ನಮ್ಮನ್ನು ನಾವೇ ನೋಡಿಕೊಳ್ಳುತ್ತಾ ಸೆಲ್ಫಿ ತೆಗೆದುಕೊಳ್ಳುವುದೆಂದರೆ ಸಂಭ್ರಮವೋ ಸಂಭ್ರಮ! ಹೇಗಿದ್ದರೂ ಹೇಗಾದರೂ ನಮ್ಮ ಮುಖವೇ ತಾನೇ. 

ಕನ್ನಡಿ ಎಂದರೆ ಮುಖ ನೋಡಿಕೊಳ್ಳಲು ಮಾತ್ರ ಎಂದುಕೊಳ್ಳುವಂತಿಲ್ಲ. ವಾಸ್ತುಶಾಸ್ತ್ರದಲ್ಲಿ ಕನ್ನಡಿಗೆ ಬಹಳಷ್ಟು ಮಹತ್ವವನ್ನು ನೀಡುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಕನ್ನಡಿಯು ನಕಾರಾತ್ಮಕ ಶಕ್ತಿಯನ್ನು ಹೀರಿಕೊಂಡು, ಸಕಾರಾತ್ಮಕ ಶಕ್ತಿಯನ್ನು ಬಿಡುಗಡೆಗೊಳಿಸಿ, ಸಂಪತ್ತನ್ನು ಆಕರ್ಷಿಸುತ್ತದೆ ಎಂಬ ನಂಬಿಕೆಯಿದೆ. ಸಾಮಾನ್ಯವಾಗಿ ವ್ಯಾಪಾರಸ್ಥರು ನಗದು ಪೆಟ್ಟಿಗೆಯ ಪಕ್ಕದಲ್ಲಿ ಇಟ್ಟಿರುವ ಕನ್ನಡಿ ಸಂಪತ್ತನ್ನು ಹೆಚ್ಚಿಸುವುದಲ್ಲದೇ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಂತೆ. ಒಡೆದ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದಂತೆ. ನಮ್ಮ ಸುಂದರ ಮೋರೆಯ ಮೇಲೆ ಸೀಳುಸೀಳು ಗೆರೆಗಳು ಬಂದರೆ ಯಾರಿಗೆ ತಾನೇ ಇಷ್ಟವಾಗುತ್ತದೆ ಹೇಳಿ. ಕನ್ನಡಿ ಯಾವ ಆಕಾರದಲ್ಲಿರಬೇಕು, ಅದನ್ನು ಮನೆಯ ಯಾವದಿಕ್ಕಿನಲ್ಲಿ ಹಾಕಬೇಕು,… ಇನ್ನೂ ಹೆಚ್ಚಿನ ಮಾಹಿತಿಗಾಗಿ ವಾಸ್ತುಶಾಸ್ತ್ರಜ್ಞರನ್ನು ಸಂಪರ್ಕಿಸಬಹುದು. ಅಹಾ ಕನ್ನಡಿಯ ಮಹಿಮೆಯೇ!

ದರ್ಪಣ ಎನ್ನುವ ಪದಕ್ಕೆ ಬಹಳವಾದ ಪ್ರಾಮುಖ್ಯತೆಯಿದೆ. ಅದರ ವ್ಯಾಪ್ತಿಯೂ ಅನೂಹ್ಯ. ಅಭಿನಯ ದರ್ಪಣ,ರ್ ಇತಿಹಾಸ ದರ್ಪಣ, ಪ್ರಪಂಚ ದರ್ಪಣ,  ವನಸಿರಿ ದರ್ಪಣ,  ನೃತ್ಯ ದರ್ಪಣ… ಸರ್ವಂ ದರ್ಪಣಮಯಂ ಜಗತ್. ʼಸಾಹಿತ್ಯ ದರ್ಪಣʼ ಅಥವಾ 'ರಚನೆಯ ಕನ್ನಡಿ' ಹದಿನಾಲ್ಕನೆಯ ಶತಮಾನದ ಆರಂಭದಲ್ಲಿ ವಿಶ್ವನಾಥರ ಕಾವ್ಯದ ಕುರಿತಾದ ಪ್ರಸಿದ್ಧ ಸಂಸ್ಕೃತ ಕೃತಿಯಾಗಿದೆ. ಕನ್ನಡದಲ್ಲಿಯೇ ರಚನೆಗೊಂಡಿರುವ ಸ್ವತಂತ್ರ ಕನ್ನಡ ವ್ಯಾಕರಣ ಗ್ರಂಥಗಳಲ್ಲಿ ಕೇಶಿರಾಜನ ಶಬ್ದಮಣಿದರ್ಪಣವು ಮೊಟ್ಟ ಮೊದಲನೆಯದು. ದರ್ಪಣದ ಬಗ್ಗೆ ಹೇಳುವಾಗ ನಮ್ಮ ಸುಪ್ರಸಿದ್ಧ ಬೇಲೂರಿನ ಚನ್ನಕೇಶವ ದೇವಾಲಯದಲ್ಲಿರುವ ದರ್ಪಣ ಸುಂದರಿಯನ್ನು ಸ್ಮರಿಸದಿರುವುದು ಸಾಧ್ಯವೆ? ನಿತ್ಯ ನಲಿಯುವ ಈ ಶಿಲಾಬಾಲಿಕೆಯರ ಬಗ್ಗೆ ದಾರ್ಶನಿಕ ಕವಿ ಡಿ.ವಿ.ಜಿ.ಯವರು ಅಂತಃಪುರಗೀತೆ ಎಂಬ ಕವನ ಸಂಕಲನವನ್ನೇ ರಚಿಸಿದ್ದಾರೆ. ʼಮುಗುದೆಯಾದೆಯಾ ಕನ್ನೆ ಮುಕುರದ ಚನ್ನೆ…ʼ ಆಂಗ್ಲಭಾಷೆಯಲ್ಲಿನ ಮಿರರ್ ನಮ್ಮ ಈ ʼಮುಕುರʼಕ್ಕೆ ಎಷ್ಟೊಂದು ಸಮೀಪದಲ್ಲಿದೆ ಅಲ್ಲವೆ? ಅಥವಾ ಮುಕುರದಿಂದಲೇ ಮಿರರ್‌ ಬಂದಿರಬಹುದೆ ಎನಿಸದಿರುವುದಿಲ್ಲ.  

ಕನ್ನಡಿಯ ಖಯಾಲಿಯ ಕುರಿತು ಹೇಳುವುದಾದರೆ ಹಂಗೇರಿಯ ಮದ್ಯದ ದೊರೆಯ ಹೆಂಡತಿಯೊಬ್ಬಳಿಗೆ ತರಹೇವಾರಿ ಕನ್ನಡಿಗಳಲ್ಲಿ ತನ್ನ ಸೌಂದರ್ಯವನ್ನು ನೋಡಿಕೊಂಡು ಆನಂದಿಸಬೇಕು ಎಂಬ ವಿಕ್ಷಿಪ್ತ ಆಸೆ ಇದ್ದುದರಿಂದ ಜಗತ್ತಿನ ನಾನಾ ಕಡೆಗಳಿಂದ ಆಕೆ ಸುಮಾರು 2750 ದುಬಾರಿ ಬೆಲೆಯ ಕನ್ನಡಿಗಳನ್ನು ತರಿಸಿಟ್ಟುಕೊಂಡಿದ್ದಳಂತೆ! 

ನಮ್ಮನ್ನು ನಾವು ನೋಡಿಕೊಳ್ಳಲು ಅಂದಗೊಳಿಸಿಕೊಳ್ಳಲು ಸಂಪೂರ್ಣವಾಗಿ ಅವಲಂಭಿಸಿರುವ ಈ ಪರಮಾಪ್ತ ಕನ್ನಡಿ ವಸ್ತುವೇ ಅದರೂ ಆತ್ಮೀಯ ಗೆಳೆಯನ ಸ್ಥಾನವನ್ನೇ ಕೊಟ್ಟಿರುತ್ತೇವೆ. ಕಿಶೋರಾವಸ್ಥೆಯಲ್ಲಿ ಕುತೂಹಲದಿಂದ ವೀಕ್ಷಿಸುವ ಈ ಸಾಧನವನ್ನು ಹದಿವಯಕ್ಕೆ ಕಾಲಿಟ್ಟ ಕ್ಷಣದಿಂದಲೇ ಹದಮೀರಿ ಆರಾಧಿಸಲಾರಂಭಿಸುತ್ತೇವೆ. ನಮ್ಮನ್ನೇ ನಾವು ತಿದ್ದಿತೀಡಿ ಅಂದಗೊಳಿಸುವ ಪ್ರಕ್ರಿಯೆಯಲ್ಲಿ ಪದೇಪದೇ ಕನ್ನಡಿಯ ಎದುರು ನಿಲ್ಲುವುದು ವಯೋಸಹಜ ಗುಣವೆನಿಸಿಬಿಟ್ಟಿದೆ. ಮುಂದೆ ಸಾಗಿದಂತೆ ನಮ್ಮನ್ನು ನಾವು ಬದುಕಿನ ಯಾಂತ್ರಿಕತೆಗೆ ಒಡ್ಡಿಕೊಳ್ಳುತ್ತಾ, ಒಗ್ಗಿಕೊಳ್ಳುತ್ತಾ ಕನ್ನಡಿಯಲ್ಲಿ ನೋಡಿಕೊಳ್ಳುವುದನ್ನೂ ಒಂದು ಯಾಂತ್ರಿಕ ಕ್ರಿಯೆಯನ್ನಾಗೇ ಮಾಡಿಕೊಂಡುಬಿಡುತ್ತೇವೆ. ಯಾಂತ್ರಿಕತೆಯಲ್ಲೂ ತನ್ನತ್ತ ಸೆಳೆವ ಮಾಂತ್ರಿಕತೆಯನ್ನು ಹೊಂದಿರುವುದು ಕನ್ನಡಿಯೊಂದೇಯೇನೋ! ಕನ್ನಡಿಯೇ ಇಲ್ಲದ ಬದುಕಿನ ಕಲ್ಪನೆಯೇ ಅಸಾಧ್ಯವೇನೋ ಎನ್ನುವಷ್ಟರ ಮಟ್ಟಿಗೆ ಈ ಕನ್ನಡಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. 

ಕನ್ನಡಿ ಇನ್ನೂ ಜನಸಾಮಾನ್ಯರ ಕೈಗೆಟಕುವಂತಾಗುವ ಮೊದಲಿನ ಅಜ್ಜಿ ಹೇಳುತ್ತಿದ್ದ ಈ ಕಥೆ ನನಗೆ ತುಂಬಾ ಇಷ್ಟವಾಗಿತ್ತು. ಒಬ್ಬಾತನಿಗೆ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಒಂದು ಕನ್ನಡಿ ಸಿಗುತ್ತೆ. ಅದನ್ನು ನೋಡಿದವನಿಗೆ 'ಓಹೋ ನಮ್ಮಪ್ಪನ ಪೋಟ' ಅಂತ ಬಹಳ ಖುಷಿಯಾಗಿ ಮನೆಗೆ ತಂದಿಟ್ಟುಕೊಂಡು ಆಗಾಗ ನೋಡುತ್ತಾ ಸಂತೋಷಪಡ್ತಿರ್ತಾನೆ. ಇದನ್ನು ಗಮನಿಸಿದ ಅವನ ಹೆಂಡತಿ ಏನದು ಅಂತ ನೋಡಿದವಳು ಕೆಂಡಾಮಂಡಲವಾಗಿ 'ಯಾರಿವಳು ನನ್ನ ಸವತಿ' ಅಂತ ಗಂಡನ್ನ ತರಾಟೆಗೆ ತಗೊಳ್ತಾಳೆ. ಆತ ನಮ್ಮಪ್ಪ ಅಂತ ಎಷ್ಟು ಹೇಳಿದ್ರೂ ಒಪ್ಪಲ್ಲ. ಅಚಾನಕ್ಕಾಗಿ ಇಬ್ಬರೂ ಒಟ್ಟಾಗಿ ನೋಡಿದಾಗ ಅದು ತಾವಿಬ್ಬರೇ ಎಂದು ಗೊತ್ತಾಗಿ ದಿನವೂ ನೋಡಿಕೊಳ್ಳುತ್ತಾ ಖುಷಿಯಾಗಿರ್ತಾರೆ!

        ಕನ್ನಡಿಯ ಬಗ್ಗೆ ಕಥೆಗಳಿಗೇನೂ ಕಮ್ಮಿಯಿಲ್ಲ. ಆ ಕಾಲ ಈ ಕಾಲ ಸರ್ವಕಾಲದಲ್ಲೂ ಮನುಕುಲದಲ್ಲಿ ಹೊಸಹೊಸ ಪೀಳಿಗೆಗಳು ಹೊರಬಂದು ಕನ್ನಡಿಯಲ್ಲಿ ತಮ್ಮನ್ನು ತಾವೇ ಕಂಡು ಹಿರಿಹಿರಿ ಹಿಗ್ಗುವಂತೆ ಕಥೆ, ಕವನ, ಲೇಖನಗಳು ಪುಂಖಾನುಪುಂಖವಾಗಿ ಸೃಷ್ಟಿಯಾಗುತ್ತಲೇ ಇವೆ. 

ನಮ್ಮ ತಾತ ಹೇಳುತ್ತಿದ್ದ ಮ್ಯಾಜಿಕ್‌ ಕನ್ನಡಿಯ ಕಥೆ ಬಹಳ ಆಸಕ್ತಿದಾಯಕವಾಗಿತ್ತು. ಆ ಕನ್ನಡೀನ ಯಾರ ಮುಖಕ್ಕೆ ಹಿಡೀತಾರೋ ಅವರ ಗುಣಗಳೆಲ್ಲಾ ಕನ್ನಡಿ ಮೇಲೆ ಬರ್ತಿತ್ತು. ಕನ್ನಡಿ ಸಿಕ್ಕಿದ ಹುಡುಗ ಅದನ್ನ ತನ್ನ ಅಪ್ಪ, ಅಮ್ಮ, ಅಕ್ಕ, ತಮ್ಮ, ಫ್ರೆಂಡ್ಸ್‌, ಮೇಷ್ಟ್ರು, … ಎಲ್ಲಾರ ಮುಖಕ್ಕೂ ಹಿಡೀತಾನೆ. ಅವರ ಬುದ್ದಿಯೆಲ್ಲಾ ತಿಳಿದು ಅವನ ತಲೆ ಚಿಟ್ಟುಹಿಡಿದುಹೋಗುತ್ತೆ. ಆಗ ಆ ಕನ್ನಡಿ ಕೊಟ್ಟ ಮ್ಯಾಜಿಕ್‌ ಮಾಮ ಬಂದು ʼಅದನ್ನು ದಿನಾ ಬೆಳಿಗ್ಗೆ ನಿನ್ನ ಮುಖ ನೋಡಿಕೊಂಡು ನಿನ್ನ ನೀನು ತಿದ್ದಿಕೊಳ್ಳಕ್ಕೆ ಕೊಟ್ಟಿದ್ದುʼ ಅಂತ ಹೇಳ್ತಾನೆ. ಆಗಂತೂ ಈ ಕಥೆಯ ತಲೆಬುಡ ಅರ್ಥವಾಗಿರಲಿಲ್ಲ. ಈಗ ಅಂಥಾ ಕನ್ನಡಿ ಒಂದು ನನ್ನ ಬಳಿ ಇದ್ದಿದ್ದರೆ ಎನಿಸದೇ ಇರುವುದಿಲ್ಲ. 

ತನ್ನದೇ ಸ್ವಂತ ಪ್ರಕಾಶವಿಲ್ಲದಿದ್ದರೂ ಆಗಸದ ಚಂದ್ರನಂತೆ ಪ್ರಸಿದ್ಧಿಯ ಪರಾಕಾಷ್ಟೆಗೆ ಏರಿರುವುದು ಈ ನಮ್ಮ ದರ್ಪಣವೇ ಇರಬಹುದು.  ಈ ಕನ್ನಡಿಯನ್ನು ನೋಡಿದರೆ ನನಗೆ ಕೆಲವೊಮ್ಮೆ ಕೃತಿ ಚೌರ್ಯ ಮಾಡುವವರ ನೆನಪಾಗುತ್ತದೆ.

ಬೆಳಗುವ ಪುಟ್ಟ ಹಣತೆಗೆ

ಪರಮಾನಂದದ ಸಂತೃಪ್ತಿ

ಸುತ್ತಲಿನ ಮಂದ ಪ್ರಕಾಶ

ತನ್ನೊಳಗಿನ

ಬೆಳಕ ಸೃಜನತೆಯೆಂದು,

ಪಕ್ಕದಲ್ಲಿಟ್ಟ ದರ್ಪಣಕ್ಕೋ

ಫಲಿತ ಎರವಲು ಕಿರಣಗಳ

ಪ್ರತಿಫಲಿಸಿ ಪ್ರಖರಿಸಿ

ಪ್ರಖ್ಯಾತಗೊಳ್ಳುವ ಅತೃಪ್ತ ಗೀಳು!


ಏನೇ ಆದರೂ ತನ್ನ ಪ್ರತಿಫಲನ ಸಾಮರ್ಥ್ಯದಿಂದಲೇ ಈ ನಮ್ಮ ದರ್ಪಣ ಬಾಹ್ಯಾಕಾಶಕ್ಕೂ ಏರಿ ತನ್ನ ಪ್ರಾಮುಖ್ಯತೆಯನ್ನು ಸಾರುತ್ತಿದೆ. ನಮ್ಮ ಭೂಮಿಯಿಂದ 560ಕಿ.ಮೀ. ಎತ್ತರದಲ್ಲಿ ಸ್ಥಾಪಿಸಿರುವ ಹಬಲ್‌ ದೂರದಶಕದಲ್ಲಿ ದೊಡ್ಡದಾದ ಕನ್ನಡಿಯಿದ್ದು ಹಬಲ್‌ನ ಕಾರ್ಯನಿರ್ವಹಣೆಗೆ ಸಹಕರಿಸುತ್ತಿದೆ. ಚಂದ್ರನ ಮೇಲೆಯೂ ಈ ನಮ್ಮ ಪ್ರತಿಫಲಕ ರೂಪದ ಕನ್ನಡಿಗಳನ್ನು ಇಟ್ಟು ದರ್ಪಣದ ಕೀರ್ತಿಯನ್ನು ಅಜರಾಮರಗೊಳಿಸಿದ್ದಾರೆ. ವೈಜ್ಞಾನಿಕವಾಗಿ ಇನ್ನೂ ಅನೇಕಾನೇಕ ಸಂದರ್ಭಗಳಲ್ಲಿ ಬಳಕೆಯಾಗುತ್ತಿರುವ ಈ ದರ್ಪಣ ತನ್ನ ಗುಣವಾದ ಪ್ರತಿಫಲನದ ಪ್ರಯೋಜನಗಳನ್ನು ಪರಾಕಾಷ್ಟೆಗೇರಿಸಿದೆ!  

      ಇತ್ತೀಚೆಗೆ ನಮ್ಮ ಬಗ್ಗೆ ನಮಗಿರುವ ಮನಸ್ಸಿನ ಚಿತ್ರಣಕ್ಕೂ ವಾಸ್ತವದ ಚಿತ್ರಕ್ಕೂ ತಾಳೆಯೇ ಇರುವುದಿಲ್ಲ. ಕೆಲವೊಮ್ಮೆ ಆನಂದದ ಅತ್ಯುತ್ಸಾಹದಲ್ಲಿ ನಲಿಯುತ್ತಾ ಕನ್ನಡಿಯೆದುರು ನಿಂತಾಗ ಕಂಡುಬರುವ ಕಟುಸತ್ಯವನ್ನು ಅರಗಿಸಿಕೊಳ್ಳಲು ಅಸಾಧ್ಯವೆನಿಸುವಂತಿರುತ್ತದೆ. ನಮ್ಮೊಳಗಿನ ಸತ್ವವನ್ನು(!) ಮರೆಮಾಚಿ ದುರ್ಬಲ ದೇಹವನ್ನಷ್ಟೇ ತೋರಿಸುವ ಕನ್ನಡಿಯ ಬಗ್ಗೆ ಕೋಪ ಬರದಿರಲು ಹೇಗೆ ಸಾಧ್ಯ.

ಆದರೂ ನನಗೆ ಕನ್ನಡಿ ಅಂದೂ, ಇಂದೂ, ಎಂದೆಂದಿಗೂ ಪರಮಪ್ರಿಯವೇ. ‘ಪ್ರತಿಬಿಂಬ’ ಎಂಬ ನನ್ನ ಹನಿಗವನವೊಂದು ಈ ರೀತಿ ಇದೆ:

ಕನ್ನಡಿಯೊಂದಿರಬೇಕು ಆಗಾಗ

ನನ್ನ ನಾ ನೋಡಿಕೊಳ್ಳಲು

ಸುಂದರಿ ಎಂಬ ಹಮ್ಮಿನಿಂದ

ವದನಾರವಿಂದದ ಅಂದ

ನೋಡಲು ಅಲ್ಲ

ಬಂದಿರಬಹುದಾದ ಹೊಸಕಲೆಗಳ

ಗುರುತಿಸಿ ನಿವಾರಿಸಲು!


ನಾವು ನೋಡಿಕೊಳ್ಳುವ ಕನ್ನಡಿ ನಿಮ್ನ ಅಥವಾ ಪೀನ ಆಗಿರಬಾರದು, ಇತರರ ಹೊಗಳಿಕೆ ಅಥವಾ ತೆಗಳಿಕೆಯಂತೆ. ಸಮತಲ ದರ್ಪಣವೇ ನಿಜ ಮಾನದಂಡ.

ಕನ್ನಡಿಯ ಬಗ್ಗೆ ಬಹಳ ಅರ್ಥಪೂರ್ಣವಾದ ಝೆನ್‌ ಸೂಕ್ತಿಯೊಂದು ಈ ರೀತಿ ಇದೆ:

ಏನನ್ನೂ ಸ್ವೀಕರಿಸುವುದಿಲ್ಲ

ಏನನ್ನೂ ತಿರಸ್ಕರಿಸುವುದಿಲ್ಲ

ಏನಿದ್ದರೂ ಗ್ರಹಿಸುತ್ತದೆ

ಯಾವುದನ್ನೂ ಸಂಗ್ರಹಿಸುವುದಿಲ್ಲ.


ಝನ್‌ ಸಾಧಕನ ಬಳಿಯಿದ್ದ ಜಾದೂ ಕನ್ನಡಿಯಂತೆ ಯಾವುದಾದರೂ ಸಮಸ್ಯೆ ಎದುರಾದಾಗ ಕನ್ನಡಿಯನ್ನೇ ದಿಟ್ಟಿಸಿ ಸಮಸ್ಯೆಯ ಮೂಲ ಮತ್ತು ಪರಿಹಾರ ಎರಡನ್ನೂ ತಿಳಿದುಕೊಳ್ಳುವಂತಿದ್ದರೆ….ಎಷ್ಟು ಚೆನ್ನಾಗಿರುತ್ತಿತ್ತು ನಮ್ಮೀ ಬದುಕು. ಎಲ್ಲವೂ ʼರೆʼ ರಾಜ್ಯ!                                    

ದರ್ಪಣದೊಳಗೇ ʼದರ್ಪʼ ಅಡಗಿರುವುದರಿಂದ ಅದು ನಮ್ಮ ಬಾಹ್ಯ ರೂಪ, ಮೈ ಬಣ್ಣ, ಮುಖ ಸೌಂದರ್ಯದ ಜೊತೆಗೇ ಅಹಂಕಾರವನ್ನೂ  ಬಿಂಬಿಸುತ್ತಿರುತ್ತದೇನೋ! ಇದೆಲ್ಲಾ ಬಾಹ್ಯ ಕನ್ನಡಿಯ ವಿಷಯವಾಯ್ತು. ವಾಸ್ತವದಲ್ಲಿ ನಮಗೆ ಬೇಕಾಗಿರುವುದು ನಮ್ಮ ನಿಜವಾದ ವ್ಯಕ್ತಿತ್ವ  ದರ್ಶನ ಮಾಡಿಸುವ ಮನದೊಳಗಿನ ಕನ್ನಡಿ. ಅಂತರಂಗದ ಕನ್ನಡಿಯಲ್ಲಿ ನಮ್ಮನ್ನು ನಾವು ನೋಡಲು ಸಾಧ್ಯವಾದರೆ ಅದ್ಭುತವೇ ಸೃಷ್ಟಿಯಾಗಿ ನಮ್ಮ ನೈಜ ಪ್ರತಿಭೆಯ ಅನಾವರಣವಾಗಲೂಬಹುದು. 

ಸಂಸ್ಕೃತದಲ್ಲಿ ಒಂದು ಸುಭಾಷಿತವು ಹೀಗಿದೆ-

ಯಸ್ಯಾ ನಾಸ್ತಿ ಸ್ವಯಂ ಪ್ರಜ್ಞಾ ಶಾಸ್ತ್ರಂ ತಸ್ಯ ಕರೋತಿ ಕಿಂ|

ಲೋಚನಾಭ್ಯಾಂ ವಿಹೀನಸ್ಯ ದರ್ಪಣಂ ಕಿಂ ಕರಿಷ್ಯತಿ||

(ಯಾರಿಗೆ ಸ್ವಪ್ರಜ್ಞೆ ಇರುವುದಿಲ್ಲವೋ ಅವರಿಗೆ ಶಾಸ್ತ್ರಗಳಿಂದ ಏನು ಪ್ರಯೋಜನ?

ಕಣ್ಣುಗಳೇ ಇಲ್ಲದವರಿಗೆ ಕನ್ನಡಿಯಿಂದ ಏನು ಪ್ರಯೋಜನ?)


ಇದರಿಂದ ಅಂಧರ ಮನಸ್ಸಿಗೆ ಎಷ್ಟೊಂದು ನೋವಾಗುತ್ತದೆ ಎಂಬ ಅಭಿಪ್ರಾಯ ಮೊದಲ ಓದಿನಲ್ಲಿ ಬಂದಿತ್ತು. ಒಮ್ಮೆ ಈ ಬಗ್ಗೆ ನನ್ನ ಆಪ್ತರೊಂದಿಗೆ ಚರ್ಚಿಸಿದಾಗ ತಿಳಿದದ್ದು, ‘ಕಣ್ಣು ಬಾಹ್ಯದ್ದೇ ಆಗಬೇಕಿಲ್ಲ. ಆಂತರ್ಯದ ಕಣ್ಣುಗಳನ್ನು ತೆರೆಯಲಾಗದವರು ಏನನ್ನೂ ನೋಡಲಾರರು. ನಮ್ಮನ್ನು ನಾವು ಹೇಗಿದ್ದೇವೆಂದು ತೋರಿಸುವ ಕನ್ನಡಿ ನಮ್ಮೊಳಗೇ ಇದೆ. ನಮ್ಮ ಅಂತರಂಗವೇ ಒಂದು ದರ್ಪಣ. ಅದನ್ನು ಕಾಣುವಂತಹ ಮನಃಸ್ಥಿತಿಯನ್ನು ಪಡೆದುಕೊಳ್ಳಲು ಕಾರ್ಯಪ್ರವೃತ್ತರಾಗಬೇಕು, ಅಷ್ಟೆ.’      

ಅಂತರಂಗದ ಕನ್ನಡಿಯನ್ನು ನಮ್ಮದಾಗಿಸಿಕೊಳ್ಳುವಂತೆ ಅಂತಃಚಕ್ಷುಗಳಿಗೆ ಅರಿವ ನೀಡೆನ್ನುವುದು ಅಂತರಾತ್ಮನಲ್ಲಿ ನಮ್ಮ ಕಳಕಳಿಯ ಪ್ರಾರ್ಥನೆಯಾಗಲಿ.

            ~ಪ್ರಭಾಮಣಿ ನಾಗರಾಜ