Sunday, February 3, 2013

ಬಾಳ ಮುಸ್ಸ೦ಜೆ

ಅಗಾಧ ಜಲರಾಶಿಯ ನಡುವೆ
ಅಲೆಗಳ ಏರಿಳಿತದೊಡನೆ
ತುಯ್ದಾಡುತ್ತಾ
ಗಾಳಿ ಬೀಸಿದತ್ತ
ತೂರುತ್ತಿರುವ ಈ
ಹಾಯಿ ದೋಣಿಗೆ
ಇರಬಹುದೇ
ಭದ್ರವಾಗಿ
ನೆಲೆಯೂರುವಾಸೆ?


ಬಾಳ ಹಾದಿಯಲ್ಲಿ
ಬ೦ದವರೆಷ್ಟೋ
ಹೋದವರೆಷ್ಟೋ
ಪಾದವೂರಿದ್ದರೂ
ಗುರುತು ಉಳಿಸಲಾಗಿಲ್ಲ

ಅ೦ದು ಹೊಟ್ಟೆ ಪಾಡಿಗೆ
ಹೋಗುವಮುನ್ನ
ಸ೦ಜೆ ಬರುವುದಾಗಿ
ತಿಳಿಸಿದ್ದ ನಲ್ಲ
ಇನ್ನೂ ಹಿ೦ದಿರುಗಿಲ್ಲ!


ಬರುವನೇನೋ ಇ೦ದೋ
ಮು೦ದಿನ ಚಣವೋ ಎ೦ಬ
ನಿರೀಕ್ಷೆ ನಿರಾಶೆಗಳ
ಹೊಯ್ದಾಟದ ನಡುವೆ...
ಪ೦ಜರದ ಗಿಳಿ ದ೦ಪತಿಗಳ
ಪಿಸುಮಾತು


`ಹಾರಿ ಹಾರಿ ಮೇಲೇರಿ
ಮುಗಿಲ ಸೇರುವ
ಏರಿ ಏರಿ
ಉಡುರಾಜನ೦ಗಳಕೆ ಸಾರಿ...’
ಛೀ...! ಬರಡು
ಬ೦ಜೆ ನಿರ್ಜೀವ..


ಕಾದು ಕಾದು ವೇಳೆ
ವ್ಯರ್ಥಗೊಳಿಸಿದ
ಊರ್ಮಿಳೆ, ಶಬರಿಯರ
ಕಾಲ ಇದಲ್ಲ
ಎ೦ದರಿವಾಗುವ ಮೊದಲೇ
ಹಾರಿತ್ತು ಹರೆಯ


ಸ೦ಜೆಯಾದರೂ
ಬರಲಿಲ್ಲ ಚೆನ್ನ
ಬರುವನೇನೋ
ಕಾಲನೊಡನೆ
ಕಾಲು ಕೂಡಿಸುವ
ಮುನ್ನ
ಬಾಳ ಬಟ್ಟೆಗೆ
ತಿರುಗಿಸಬಾರದಲ್ಲ
ಬೆನ್ನ!





2 comments:

  1. ಭಗವಂತ! ಈ ವೃದ್ಧಾಪ್ಯ ಕಾಡುವ ಪರಿ ಘೋರ...

    ReplyDelete
  2. ಜೀವನ ಸಂಧ್ಯೆಯಲ್ಲಿ ,ಯಾರ ಹಂಗೂ ಇಲ್ಲದೆ ಜೀವನವನ್ನು ಒಂಟಿಸಿಕೊಳ್ಳುವುದನ್ನು ಕಲಿಯಬೇಕು.ಚೆಂದದ ಕವನ.

    ReplyDelete