Monday, July 31, 2023

'ಕರ್ಮವೀರ' ಪತ್ರಿಕೆಯಲ್ಲಿ ನನ್ನ ಕವನ, 'ಏಕತ್ವ'🌼


ಜುಲೈ30,2023ರ 'ಕರ್ಮವೀರ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕವನ, 'ಏಕತ್ವ'🌼

ಏಕತ್ವ

ಸೆಣೆಸುವಿಕೆಯಿಲ್ಲ
ಸ್ಪರ್ಧೆಗಿಳಿಯುತ್ತಲೂ ಇಲ್ಲ
ಸುತ್ತಿನವರ 
ಸ್ತುತಿ ನಿಂದೆಗಳು
ಮತ್ತೆ ಮತ್ತೆ 
ಕಾಡುತ್ತಲೂ ಇಲ್ಲ
ಗೌಜು ಗದ್ದಲಗಳ 
ಬಳಿಯಲೂ
ಸುಳಿದಿಲ್ಲ

ಈ ಎಲ್ಲಾ
ಇಲ್ಲ ಇಲ್ಲಗಳ 
ನಡುವೆಯೂ
ಎಲ್ಲೋ ಒಂದು 
ಕೊಂಡಿ ಕಳಚಿ
ಮೇಲ್ನೋಟದ ತಾಟಸ್ಥ್ಯ
ಒಳಗೆ ತಾಳ ತಪ್ಪಿ
ತಾಳೆಯಾಗದ
ಅಸಮತೋಲನ

ತಲೆಕಾಲುಗಳನ್ನೆಲ್ಲಾ 
ಒಳಗೆಳೆದುಕೊಂಡ 
ಆಮೆಯ 
ಹೃದಯದ ಬಡಿತ
ಹೇಗಿರುತ್ತದೋ ಎಂದು 
ಸಂದೇಹಿಸದಂತೆ
ಲವಲೇಶ 
ಬಾಹ್ಯ ಸೋಂಕಿಲ್ಲದೇ
ದೀರ್ಘ ಶ್ವಾಸೋಚ್ಚಾಸದಲಿ 
ಶತಾಯುರ್ ವಜ್ರದೇಹಾಯ...

ಹೊರನಿರ್ಲಿಪ್ತತೆಯೊಂದಿಗೇ
ಒಳತನವೂ ಬಲಿತು
ಒಳಹೊರ ಭಾವಗಳೆಲ್ಲಾ
ಏಕೀಭವಿಸಿ
ಭವ ಮೀರುವ
ಆಂತರ್ಯದರಿವಿನತ್ತ
ಗಮಿಸಬೇಕಿದೆ
ಸಂಪೂರ್ಣ ಚಿತ್ತ.
 
                 ~ಪ್ರಭಾಮಣಿ ನಾಗರಾಜ




 

 

No comments:

Post a Comment