‘A coward dies many a times but a valiant dies but once.’
ನಾನು ಪಿ.ಯು.ಸಿ. ಯಲ್ಲಿದ್ದಾಗ ಓದಿದ್ದ ` THE VALIENT’ ಎಂಬ ನಾಟಕದಲ್ಲಿದ್ದ ಸಾಲು ಇದು.
ವಿದ್ಯುತ್ ಸಂಪರ್ಕವೇ ಇಲ್ಲದ ಹಳ್ಳಿಯ ಮನೆಯಲ್ಲಿ ರಾತ್ರಿಯ ವೇಳೆಯಲ್ಲಿ ಕತ್ತಲ ಮೂಲೆಗಳನ್ನು ನೋಡಿದಾಗಲೆಲ್ಲಾ ಸದಾ ಹಿರಿಯರು ಹೇಳುತ್ತಿದ್ದ ಕಥೆಗಳಿಂದ, ಮಕ್ಕಳಾದ ನಮ್ಮ ಚರ್ಚೆಯ ಪ್ರಮುಖಾಂಶವಾಗಿ ಪ್ರಚಲಿತದಲ್ಲಿರುತ್ತಿದ್ದ ದೆವ್ವ ಭೂತಗಳ ಕಲ್ಪನೆಯಲ್ಲಿ ನಡುಗುತ್ತಾ ಬಾಲ್ಯವನ್ನು ಕಳೆದಿದ್ದ ನನಗೆ ಈ ಸಾಲು ಬಹಳ ಪ್ರಿಯವಾಗಿತ್ತು. ಮನೆಯಲ್ಲಿ ಅಮ್ಮನಿಂದ ತಮ್ಮನವರೆಗೆ ಎಲ್ಲರೂ ನಿರ್ಭಯರಾಗಿದ್ದುದರಿಂದ ನನ್ನ ‘ಭಯ' ಎಲ್ಲರ ಆಡಿಕೆಯ ವಿಷಯವಾಗಿತ್ತು. ಆ ಭಯ ಎಷ್ಟೊಂದು ವೈಪರೀತ್ಯಕ್ಕೆ ತಲುಪಿತ್ತೆಂದರೆ ಹಗಲು ವೇಳೆಯೂ ಒಬ್ಬಳೇ ನೀರು ಕುಡಿಯಲು ಅಡುಗೆ ಮನೆಗೆ ಹೋಗುವುದಕ್ಕೂ ಜೊತೆಯನ್ನು ಅಪೇಕ್ಷಿಸುವಂತಾಗುತ್ತಿತ್ತು. ನನ್ನ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿದ್ದ ನಮ್ಮ ಗೌರಮ್ಮ(ಸೋದರತ್ತೆ) ಕುಳಿತ ಜಾಗದಿಂದಲೇ, ‘ಪ್ರಭಾ, ನಾನು ನಿನ್ನ ಜೊತೇಲಿದೀನಿ. ಹೋಗು!' ಎಂದು ಹೇಳುತ್ತಾ ನನ್ನನ್ನು ಹುರಿದುಂಬಿಸುತ್ತಿದ್ದರು. ಬೆಳೆದಂತೆ ‘ಅದೆಲ್ಲಾ ನಮ್ಮದೇ ಕಲ್ಪನೆ' ಎಂದು ಎಷ್ಟೇ ಮನಸ್ಸನ್ನು ಸದೃಢ ಪಡಿಸಿಕೊಳ್ಳಲು ಪ್ರಯತ್ನಿಸಿದರೂ ‘ರಾತ್ರಿ-ಕತ್ತಲು'ಗಳ ಭಯ ನನ್ನೊಡನೆ ಪತಿಗೃಹವನ್ನೂ ಪ್ರವೇಶಿಸಿತು. ಇದನ್ನು ಅರಿತುಕೊಂಡ ನನ್ನ ಅತ್ತೆ ಅಪೇಕ್ಷಿತ ಸಂದರ್ಭಗಳಲ್ಲಿ ಜೊತೆಗೆ ಬರುತ್ತಿದ್ದರು. ಅದೇ ಮನೆಯಲ್ಲಿ ಅವರು ಮರಣಹೊಂದಿದಾಗ, ‘ನನಗೆ ಧೈರ್ಯ ನೀಡುತ್ತಲಿದ್ದವರೇ ಇಲ್ಲದಾಗ ಅವರ ಬಗ್ಗೇ ಭಯಪಡಬಾರದು,'ಎಂದುಕೊಂಡು ನನ್ನನ್ನೇ ನಾನು ಸುಧಾರಿಸಿಕೊಳ್ಳಲಾರಂಭಿಸಿದೆ.........ಭಯ ಉಂಟುಮಾಡಬಹುದಾದ ಎಲ್ಲ ರೀತಿಯ ಋಣಾತ್ಮಕ ಅನುಭವವನ್ನು ಹೊಂದುವುದರಲ್ಲಿ ಪರಿಣತಳಾಗಿದ್ದ ನಾನು, ‘ತಲ್ಲಣ' ಎನ್ನುವ ಕಥೆಯ ಮೂಲಕ ಅದನ್ನು ವ್ಯಕ್ತಪಡಿಸಿದ್ದೆ! ನನ್ನ ಮಕ್ಕಳೇ ಚಿಕ್ಕಂದಿನಿಂದಲೂ ಭಯದ ಪರಿಚಯವೇ ಇಲ್ಲದವರಂತೆ ನಿರ್ಭಯವಾಗಿ ಆರಾಮವಾಗಿರುತ್ತಿದ್ದುದನ್ನು ನೋಡಿದಾಗ ಆಶ್ಚರ್ಯವೆನಿಸುತ್ತಿತ್ತು! ಅವರೆದುರು ನಾನು ನೀಡಿದ್ದ ನನ್ನ ನಿರ್ಭಯ ಚಿತ್ರಣದಿಂದಲೋ ಏನೋ, ಅದುವರೆಗೂ ಭಯದಿಂದ ಹೇಡಿಯಂತೆ ಕ್ಷಣಕ್ಷಣವೂ ಸಾವಿನಂಚಿಗೆ ತಲುಪುತ್ತಿದ್ದ ನನಗೆ ‘ನಿರ್ಭಯ'ಳಾಗಬೇಕೆನ್ನುವುದೇ ಹಂಬಲವಾಗಿತ್ತು! ಈಗ ಅದು ನಿರಂತರ ಅಭ್ಯಾಸದಿಂದ ಸಾಕಾರಗೊಳ್ಳುತ್ತಿದೆ.
ಭಯದ ಬಗ್ಗೆ ರಾಬಿನ್ ಶರ್ಮ ಅವರು ತಮ್ಮ ‘The Monk Who Sold His Ferrary’ಯಲ್ಲಿ ಹೀಗೆ ಹೇಳುತ್ತಾರೆ.
'ನಕಾರಾತ್ಮಕ ಪ್ರಜ್ಞಾಪ್ರವಾಹವೇ ಭಯ. ಅದು ನಾವೇ ಸೃಷ್ಟಿಸಿಕೊಂಡಿರುವ ರಾಕ್ಷಸ. ನಮ್ಮಲ್ಲಿರುವ ಭಯಗಳೆಲ್ಲಾ ಮನಸ್ಸಿನೊಳಗೆ ಅನೇಕ ವರ್ಷಗಳಿಂದ ಸಂಗ್ರಹವಾಗಿರುವ ಸ್ವಯಂ ಸೃಷ್ಟಿತ ಕ್ರಿಮಿಗಳೇ ಆಗಿವೆ. ಅವು ನಾವು ಏನಾದರೂ ಮಾಡಹೊರಟಾಗ ತಡೆಯುತ್ತವೆ. ಆಗ ಅವುಗಳ ಶಕ್ತಿ ಇನ್ನಷ್ಟು ಹೆಚ್ಚುತ್ತದೆ. ಆದರೆ ಭಯಗಳನ್ನು ಜಯಿಸಿದರೆ ಜೀವನವನ್ನೇ ಜಯಿಸಿದಂತೆ.....
ಭಯವು ಒಂದು ರೀತಿಯ ಸಿದ್ಧ ಪ್ರತಿಕ್ರಿಯೆ. ನಾವು ಜಾಗೃತರಾಗಿರದಿದ್ದರೆ ನಮ್ಮ ಎಲ್ಲಾ ಚೈತನ್ಯ, ಸೃಜನಶೀಲತೆ, ಸ್ಪೂರ್ತಿಗಳನ್ನು ನುಂಗಿ ಜೀವನವನ್ನೇ ಹಿಂಡುವ ಚಟವಾಗಬಹುದು. ಭಯ ತಲೆಯೆತ್ತಿದಾಗ ಅದನ್ನು ಕೂಡಲೇ ಮೊಟಕಬೇಕು. ಯಾವುದನ್ನು ಮಾಡಲು ನಾವು ಹೆದರುತ್ತೇವೆಯೋ ಅದನ್ನೇ ಹಟಹಿಡಿದು ಮಾಡುವುದೇ ಭಯವನ್ನು ಗೆಲ್ಲುವ ಮಾರ್ಗ. ಅದು ನಮ್ಮದೇ ಆದ ಸೃಷ್ಟಿ. ಯಾವುದೇ ಸೃಷ್ಟಿಯಂತೆ ಅದನ್ನು ಹರಿದು ಹಾಕುವುದೂ ಸಾಧ್ಯ. ವ್ಯವಸ್ಥಿತವಾದ ರೀತಿಯಲ್ಲಿ ಮನಸ್ಸಿನ ಕೋಟೆಯಲ್ಲಿ ಅಡಗಿರುವ ಭಯಗಳನ್ನು ಹುಡುಕಿ ಹೊಸಕಿಹಾಕಬೇಕು. ಅದೊಂದೇ ನಮಗೆ ಸಾಕಷ್ಟು ಮನಶ್ಶಾಂತಿ, ಆತ್ಮವಿಶ್ವಾಸ ಹಾಗೂ ಸಂತೋಷಗಳನ್ನು ನೀಡುತ್ತದೆ.' ಜೀವನದ ಸಾಕ್ಷಾತ್ಕಾರವನ್ನು ಪಡೆದ ಜೂಲಿಯನ್ ತನ್ನ ಜೂನಿಯರ್ ಜಾನ್ ಗೆ ಹೀಗೆ ಹೇಳಿದಾಗ,
‘ಮನುಷ್ಯನ ಮನಸ್ಸು ಸಂಪೂರ್ಣವಾಗಿ ನಿರ್ಭಯವಾಗಿರಲು ಸಾಧ್ಯವೇ?' ಎಂದು ಜಾನ್ ಪ್ರಶ್ನಿಸುತ್ತಾನೆ.
‘ಖಂಡಿತ ಸಾಧ್ಯ, ಶಿವನದಲ್ಲಿನ ಪ್ರತಿಯೊಬ್ಬ ಸಾಧುವೂ ನಿರ್ಭಯವಾಗಿದ್ದ. ಅವರ ನಡಿಗೆಯಲ್ಲೇ ಅದನ್ನು ಕಾಣಬಹುದಾಗಿತ್ತು. ಅವರ ಮಾತಿನಲ್ಲೂ, ಅವರ ಕಣ್ಣಿನಲ್ಲಿ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿದಾಗ ಕಾಣಬಹುದಿತ್ತು........ನಾನೂ ನಿರ್ಭಯನಾಗಿದ್ದೇನೆ. ನನಗೆ ನಾನು ಯಾರೆಂದು ತಿಳಿದಿದೆ. ನನ್ನ ಮೂಲ ಸ್ವರೂಪದಲ್ಲಿ ಅಗಾಧ ಸಾಧ್ಯತೆ ಹಾಗೂ ಅಪಾರ ಶಕ್ತಿಯಿದೆ ಎಂದು ನನಗೆ ಮನದಟ್ಟಾಗಿದೆ. ಇಷ್ಟು ವರ್ಷಗಳ ಕಾಲ ನಿರ್ಲಕ್ಷ್ಯ ಹಾಗೂ ಅಸಮತೋಲನದ ಯೋಚನೆಗಳ ಕಾರಣ ಬಂಧಿತನಾಗಿದ್ದೆ.....ಭಯವನ್ನು ಮನಸ್ಸಿನಿಂದ ಅಳಿಸಿಹಾಕಿದರೆ ಸಾಕು-ನಮ್ಮ ಆರೋಗ್ಯ ವರ್ಧಿಸುತ್ತದೆ, ಯೌವನ ಮರುಕಳಿಸುತ್ತದೆ.' ಎನ್ನುತ್ತಾನೆ ಜೂಲಿಯನ್,
'ಭಯ'ದ ಬಗ್ಗೆ ಜಿಡ್ಡು ಕೃಷ್ಟಮೂರ್ತಿಯವರು ಹೇಳುವುದು ಹೀಗೆ,
'ಜನ ನಮ್ಮ ಬಗ್ಗೆ ಏನೆಂದುಕೊಳ್ಳುವರೋ ಎನ್ನುವ ಭಯವಿರುತ್ತದೆ. ಏನನ್ನೋ ಸಾಧಿಸಲಾರೆವು ಎಂಬ ಭಯ, ಏನನ್ನೋ ಪೂರ್ಣಗೊಳಿಸಲಾರೆವು ಎಂಬ ಭಯ, ಇದ್ದ ಅವಕಾಶವನ್ನು ಕಳೆದುಕೊಂಡೆವು ಅಥವಾ ಕಳೆದುಕೊಂಡೇವು ಎಂಬ ಭಯ ಇರುತ್ತದೆ. ಇದೆಲ್ಲದರಿಂದ ನಮ್ಮಲ್ಲಿ ತಪ್ಪಿತಸ್ಥ ಭಾವನೆ, ನಾವು ಅಪರಾಧಿಗಳೆಂಬ ಭಾವನೆ ಹುಟ್ಟುತ್ತದೆ......
ಭಯವೆನ್ನುವುದು ಮನುಷ್ಯನೊಳಗಿನ ವಿನಾಶಕಾರೀ ಶಕ್ತಿ. ಅದು ಮನಸ್ಸನ್ನು ಒಣಗಿಸುತ್ತದೆ. ಆಲೋಚನೆಯನ್ನು ವಿಕೃತಗೊಳಿಸುತ್ತದೆ, ಜಾಣತನದ ಸೂಕ್ಷ್ಮ ಸಿದ್ಧಾಂತಗಳನ್ನು ಹುಟ್ಟಿಹಾಕುತ್ತದೆ, ಅಸಂಗತ ಮೂಢನಂಬಿಕೆ, ನಂಬಿಕೆಗಳಿಗೆ ಜನ್ಮನೀಡುತ್ತದೆ......
ನಮ್ಮೊಳಗಿನ ಭಯವನ್ನು ನಿವಾರಿಸಿಕೊಳ್ಳದೇ ಮತ್ತೊಬ್ಬರನ್ನು ಹಿಂಬಾಲಿಸುವುದು ಅಥವಾ ಮತ್ತೊಬ್ಬರು ನಮ್ಮನ್ನು ಹಿಂಭಾಲಿಸುವುದು ಎರಡಕ್ಕೂ ಅರ್ಥವಿಲ್ಲ. ನಮ್ಮ ದಿನನಿತ್ಯದ ಬದುಕಿನಲ್ಲಿರುವ ಭಯ, ಅದು ಕಾಣಿಸಿಕೊಳ್ಳುವ ವಿವಿಧ ರೂಪಗಳು ಇವನ್ನು ತಿಳಿದುಕೊಳ್ಳುವುದು ಮಾತ್ರ ಅರ್ಥಪೂರ್ಣವಾಗುತ್ತದೆ. ನಾವು ಭಯದಿಂದ ಮುಕ್ತರಾದಾಗ ಮಾತ್ರ ಅಂತರಂಗದ ಅರಿವು, ಅನುಭವ ಅಥವಾ ಜ್ಞಾನದ ಸಂಗ್ರಹವಲ್ಲದ ಏಕಾಂಗಿತನ ನಮ್ಮದಾಗುತ್ತದೆ. ಆಗ ಮಾತ್ರ ವಾಸ್ತವವನ್ನು ಕಾಣುವ ಸ್ಪಷ್ಟತೆ ನಮಗೆ ಲಭಿಸುತ್ತದೆ.
'ಭಯದಿಂದ ಮುಕ್ತರಾಗುವುದು ಹೇಗೆ?' ಎಂಬ ಪ್ರಶ್ನೆ ಮುಖ್ಯವಲ್ಲವೇ ಅಲ್ಲ. ಭಯದಿಂದ ಮುಕ್ತರಾಗುವ ಒಂದು ದಾರಿ, ಒಂದು ವಿಧಾನ, ಒಂದು ಕ್ರಮವನ್ನು ಹುಡುಕುತ್ತಾ ಹೊರಟರೆ ಆಗ ನೀವು ಶಾಶ್ವತವಾಗಿ ಭಯಕ್ಕೆ ಸಿಕ್ಕಿಬೀಳುತ್ತೀರಿ. ಆದರೆ ಭಯವನ್ನು ಅರ್ಥಮಾಡಿಕೊಂಡರೆ, ಹಸಿವನ್ನು ನೇರವಾಗಿ ಕಾಣುವಂತೆ ಭಯವನ್ನೂ ನೇರವಾಗಿ ಕಾಣುವುದಕ್ಕೆ ಆದರೆ, ಉದಾಹರಣೆಗೆ ನಿಮ್ಮ ಕೆಲಸವನ್ನು ಕಳೆದುಕೊಳ್ಳುವ ಭಯ ನೇರವಾಗಿ ಎದುರಾದರೆ, ಆಗ ನೀವು ಏನಾದರೂ ಮಾಡುತ್ತೀರಿ. ಏನಾದರೂ ಮಾಡುವ ಆ ಕ್ಷಣ ಎಲ್ಲ ರೀತಿಯ ಭಯ ಇಲ್ಲವಾಗುವುದು ನಿಮಗೆ ತಿಳಿಯುತ್ತದೆ.'
ನಮ್ಮದೇ ಸೃಷ್ಟಿಯಾಗಿದ್ದು ನಮ್ಮ ಪ್ರಗತಿಗೇ ಅಡ್ಡವಾಗಿರುವ ಈ 'ಭಯ'ವನ್ನು ಸಕಾರಾತ್ಮಕವಾಗಿ ಕಾರ್ಯಪ್ರವೃತ್ತರಾಗಿ ಇಲ್ಲವಾಗಿಸಿ, ನಮ್ಮದೇ ನಿರ್ಭಯದ ಪಥದಲ್ಲಿ ಮುಂದೆ ಸಾಗೋಣ.
ಭಯದ ಬಗ್ಗೆ ವಿಚಾರ ಪೂರ್ಣ ಬರಹ.ಅಭಿನಂದನೆಗಳು.ಬ್ಲಾಗಿಗೆ ಬನ್ನಿ.ನಮಸ್ಕಾರ.
ReplyDeletebhaya da varnane chennagide....
ReplyDeleteನಿಜ, ವಿವೇಕಾನಂದರೂ ಸಹ ಇದನ್ನೇ ಹೇಳಿದ್ದಾರೆ, ಅಲ್ಲವೆ?
ReplyDeleteಭಯ ಒಂದು ಮಾನಸಿಕ ಸ್ಥಿತಿ..
ReplyDeleteಈ ಲೇಖನಕ್ಕೆ ಹೇಗಪ್ಪಾ ಪ್ರತಿಕ್ರಿಯಿಸೋದು ಅಂತ ಸಣ್ಣ ಭಯವಾಯಿತು !!
ನಿಮ್ಮ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ..
ನಿಮ್ಮ ಓದಿಗೆ ನನ್ನ ಸಲಾಮ್..
ಪ್ರೀತಿಯಿಂದ...
Nice one. Thanks
ReplyDeletenicely written.. very nice article.
ReplyDeletetumba chennagide
ReplyDeleteಸಿಮೆಂಟು ಮರಳಿನ ಮಧ್ಯೆ has left a new comment on your post "ಮನದ ಅಂಗಳದಿ.........೩೯.ಭಯ":
ReplyDeleteಭಯ ಒಂದು ಮಾನಸಿಕ ಸ್ಥಿತಿ..
ಈ ಲೇಖನಕ್ಕೆ ಹೇಗಪ್ಪಾ ಪ್ರತಿಕ್ರಿಯಿಸೋದು ಅಂತ ಸಣ್ಣ ಭಯವಾಯಿತು !!
ನಿಮ್ಮ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ..
ನಿಮ್ಮ ಓದಿಗೆ ನನ್ನ ಸಲಾಮ್..
ಪ್ರೀತಿಯಿಂದ...
ಭಯದ ಬಗ್ಗೆ ಒಳ್ಳೆ ಒಳ್ಳೆ ಮಾಹಿತಿ ನೀಡಿದ್ದಿರ ...ಧನ್ಯವಾದಗಳು
ReplyDeleteಒಂದು ಅಂಗ್ಲ ವಾಕ್ಯ ನೆನಪಿಗೆ ಬಂತು " Fortune Favours the Bold " GLADIATOR ಮೊವಿಯಿಂದ
chendada lekhana
ReplyDelete