Monday, March 19, 2012

ಮನದ ಅ೦ಗಳದಿ.........೮೪. ಆತ್ಮಭಾವ

ಎಳವೆಯಲ್ಲಿ ಸಾಮಾನ್ಯವಾಗಿ ಶರೀರವೇ ಸರ್ವಸ್ವವಾಗಿರುತ್ತದೆ. ನಮ್ಮ ಶರೀರದ ಬಗ್ಗೆ ನಮಗೇ ಕುತೂಹಲ, ಆಸಕ್ತಿ. ಶರೀರದ ಮೂಲಕ ಸುಖ ಸಂತೋಷಗಳನ್ನು ಹೊಂದುವ ಕಾತುರ! ಚಿಕ್ಕ ಮಗುವಿಗೆ ಕಚ್ಚಂಗುಳಿ ಕೊಟ್ಟು ನಗಿಸುತ್ತೇವೆ. ಅದಕ್ಕೆ ತನ್ನ ದೇಹದಲ್ಲಿ ಹುದುಗಿರುವ ಸಂತಸದ ಅರಿವು ಹೀಗೇ ಉಂಟಾಗಬಹುದು. ಇದರ ಒಟ್ಟೊಟ್ಟಿಗೇ ಮನಸ್ಸಿನ ಪ್ರಾಮುಖ್ಯತೆಯೂ ಅರ್ಥವಾಗಲಾರಂಭಿಸುತ್ತದೆ. ಜೀವನವು ಹಂತಹಂತವಾಗಿ ಮೇಲೇರಬೇಕಾದ ಸಂದರ್ಭದಲ್ಲಿ ಎಲ್ಲೋ ಒಂದುಕಡೆ ಸ್ಥಗಿತವಾಗಿ ನಿಂತಲ್ಲೇ ಸುತ್ತಲಾರಂಭಿಸಿಬಿಡುತ್ತೇವೆ.
ಶರೀರ, ಮನಸ್ಸು ಎರಡೇ ಅಲ್ಲದೆ ಇನ್ನೂ ಉನ್ನತ ಸ್ತರದಲ್ಲಿ ‘ಆತ್ಮ’ದ ಬೇಕು-ಬೇಡಗಳೂ ಅಡಗಿರುತ್ತವೆ ಎನ್ನುವುದನ್ನು ಶ್ರೀರಾಮ ಶರ್ಮಾ ಆಚಾರ್ಯರವರು ತಮ್ಮ ‘ನಾನು ಯಾರು?’ ಪುಸ್ತಕದಲ್ಲಿ ಹೃದಯಂಗಮವಾಗಿ ತಿಳಿಸಿದ್ದಾರೆ:
‘ಶರೀರಭಾವದಲ್ಲಿ ಜಾಗೃತನಾಗಿರುವ ವ್ಯಕ್ತಿ ಕೇವಲ ಆಹಾರ, ನಿದ್ರೆ, ಭಯ, ಮೈಥುನಗಳ ಸಾಧಾರಣ ಚಟುವಟಿಕೆಗಳಲ್ಲಿ ತೊಡಗಿರುತ್ತಾನೆ. ಅದು ಕೇವಲ ಪಶುಜೀವನ ಮತ್ತು ಏನೂ ಸಾರ್ಥಕವಿಲ್ಲದ್ದು. ಒಂದು ವೇಳೆ ಅವನ ಇಚ್ಛೆಗಳು ಉಗ್ರಸ್ವರೂಪ ತಾಳಿದರೆ ಅಥವಾ ಆತುರಿಕೆ ತೋರಿದರೆ ಆಗ ಅವನು ರಾಕ್ಷಸೀ ಪ್ರವೃತ್ತಿಯವನಾಗುತ್ತಾನೆ. ತನ್ನ ಸ್ವಾರ್ಥವನ್ನು ಸಾಧಿಸಲು ಅನೀತಿ ಹಾಗೂ ಭ್ರಷ್ಟಮಾರ್ಗವನ್ನು ಅನುಸರಿಸಲು ಅವನು ಹಿಂಜರಿಯುವುದಿಲ್ಲ. ಬುದ್ಧಿಪೂರ್ವಕವಾಗಿಯಾದರೂ ಅದನ್ನು ಪರಿಗಣಿಸುವುದಿಲ್ಲ. ಇಂಥಾ ದೃಷ್ಟಿಕೋನವುಳ್ಳ ವ್ಯಕ್ತಿ ತಾನೂ ಸುಖಿಯಾಗಿರುವುದಿಲ್ಲ ಮತ್ತು ಬೇರೆಯವರನ್ನೂ ಸುಖಿಯಾಗಿರಲು ಬಿಡುವುದಿಲ್ಲ. ಕಾಮ ಮತ್ತು ಲೋಭಗಳುಳ್ಳ ವ್ಯಕ್ತಿಗಳಿಗೆ ಎಷ್ಟು ಭೋಗ ಸಿಕ್ಕಿದರೂ ತೃಪ್ತಿಯಾಗುವುದಿಲ್ಲ. ಎಷ್ಟು ದೊರೆತರೂ ಮತ್ತಷ್ಟು ಆಸೆಗಳು ಚಿಗುರೊಡೆಯುತ್ತವೆ. ಇದರಿಂದ ಅಶಾಂತಿ, ಚಿಂತೆ, ಕಾಮನೆಗಳು ಮತ್ತು ವ್ಯಾಕುಲತೆಗಳು ಅನೇಕ ಪಟ್ಟು ಹೆಚ್ಚುತ್ತವೆ........ ಹೀಗೆ ಶರೀರ ಭಾವನೆಯ ದೃಷ್ಠಿಕೋನವು ಮನುಷ್ಯನನ್ನು ದುರಾಸೆ ಮತ್ತು ಅಶಾಂತಿಯತ್ತ ಸೆಳೆಯುತ್ತದೆ. ಜೀವನದ ವಾಸ್ತವಿಕ ಸಫಲತೆ ಮತ್ತು ಸಮೃದ್ಧಿಯೆಂದರೆ ಆತ್ಮಭಾವದಲ್ಲಿ ಜಾಗೃತವಾಗುವಿಕೆ. ಮನುಷ್ಯ ತನ್ನನ್ನು ಆತ್ಮನೆಂದು ಭಾವಿಸಲಾರಂಭಿಸಿದಾಗ ಅವನ ಇಚ್ಛೆಗಳು, ಆಕಾಂಕ್ಷೆ ಮತ್ತು ಅಭಿರುಚಿ ಇವುಗಳು ಆಧ್ಯಾತ್ಮಿಕ ಸುಖಪಡೆಯುವ ಕಾರ್ಯಗಳತ್ತ ತಿರುಗುತ್ತವೆ. .......ದುಷ್ಕರ್ಮಗಳನ್ನು ಮಾಡುವಾಗ ನಮ್ಮ ಅಂತಃಕರಣವು ದಂಗೆ ಏಳುತ್ತದೆ. ಪಾಪಗಳನ್ನು ಮಾಡುವಾಗ ಕಾಲುಗಳು ನಡುಗುತ್ತವೆ. ಎದೆ ಡಬಡಬ ಹೊಡೆದುಕೊಳ್ಳುತ್ತದೆ. ಅಂದರೆ ಆ ಕಾರ್ಯಗಳು ಆತ್ಮನಿಗೆ ಒಪ್ಪಿಗೆ ಇಲ್ಲ ಎಂದು ಅರ್ಥ. ಹಾಗೆಯೇ ಪರೋಪಕಾರ, ಸೇವೆ, ಸಹಾಯಮಾಡುವಿಕೆ, ದಾನ, ಉದಾರತೆ, ತ್ಯಾಗ, ಮುಂತಾದ ಸತ್ಕರ್ಮಗಳನ್ನು ಮಾಡಲನುವಾದಾಗ ಮನಸ್ಸಿನ ಒಳ ಮೂಲೆಯಲ್ಲಿ ಅತ್ಯಂತ ಸಂತೋಷ, ಹಗುರತನ, ಆನಂದ ಮತ್ತು ಉಲ್ಲಾಸವುಂಟಾಗುತ್ತದೆ. ಇದರ ಅರ್ಥವೇನೆಂದರೆ ಇವು ಆತ್ಮನ ಹಿತಾಸಕ್ತಿಗೆ ಅನುಕೂಲವಾದದ್ದು, ಇಷ್ಟವಾದದ್ದು ಎಂದು.
ಪಶು, ಪಕ್ಷಿಗಳು ಮತ್ತು ಅವಿಕಸಿತ ಪ್ರಾಣಿಗಳಲ್ಲಿ ಈ ‘ನಾನು’ ಎಂಬ ಭಾವನೆಯೇ ಇರುವುದಿಲ್ಲ. ಅವು ಭೌತಿಕ ಸುಖ-ದುಖಗಳನ್ನು ಅನುಭವಿಸುತ್ತಿರುತ್ತವೆ. ಆದರೆ ತಮ್ಮನ್ನು ಕುರಿತು ಹೆಚ್ಚು ಯೋಚಿಸಲಾರವು. ಉದಾಹರಣೆಗೆ ಕತ್ತೆಯು ಹೊರೆಯನ್ನು ಹೊರುತ್ತದೆ. ಅದಕ್ಕೆ ನನ್ನ ಮೇಲೆ ಏಕೆ ಹೊರೆಯನ್ನು ಹೊರಿಸುತ್ತಾರೆ? ಹೊರೆ ಹೊರಿಸುವನೊಂದಿಗಿನ ತನ್ನ ಸಂಬಂಧವೇನು? ನಾನು ಏಕೆ ಬಲಿಪಶುವಾಗುತ್ತಿದ್ದೇನೆ? ಎಂಬುದರ ಬಗ್ಗೆ ವಿಚಾರಮಾಡುವುದಕ್ಕಾಗುವುದಿಲ್ಲ. ಹಸಿರು ಹುಲ್ಲು ಸಿಕ್ಕಿದಾಗ ಸಂತೋಷ ಹಾಗೂ ಶಾಂತಿ ಅನುಭವಿಸುತ್ತದೆ. ಹೊರೆ ಹೊರಿಸಿದಾಗ ಕಷ್ಟ ಅನುಭವಿಸುತ್ತದೆ. ಆದರೆ ನಮ್ಮಂತೆ ವಿಚಾರ ಮಾಡಲಾಗುವುದಿಲ್ಲ. ಈ ಜೀವಿಗಳಲ್ಲಿ ಶರೀರವೇ ಆತ್ಮಸ್ವರೂಪವಾಗಿರುತ್ತದೆ. ಕ್ರಮಶಃ ಮನುಷ್ಯ ವಿಕಾಸದ ಹಾದಿಯಲ್ಲಿ ಮುಂದುವರೆದು ಇಲ್ಲಿಯವರೆಗೆ ತಲುಪಿದ್ದಾನೆ. ಆದರೆ ಎಷ್ಟು ಜನರು ಆತ್ಮಸ್ವರೂಪ ತಿಳಿಯಲು ಕಾತುರರಾಗಿದ್ದಾರೆ? ಜನಗಳು ಆತ್ಮಜ್ಞಾನದ ಬಗ್ಗೆ ಗಿಣಿಪಾಠದಂತೆ ಕೆಲವು ವಿಷಯಗಳನ್ನು ಓದಿ, ಅನೇಕ ವೇಳೆ ಚರ್ಚೆಯಲ್ಲಿ ಭಾಗವಹಿಸಿ ಸಮಯಕ್ಕನುಗುಣವಾಗಿ ಅದನ್ನೇ ಮತ್ತೊಬ್ಬರಿಗೆ ತಿಳಿಸಿ ತಾವು ಆತ್ಮಜ್ಞಾನಿಗಳೆಂದು ತಿಳಿಯುತ್ತಾರೆ................. ಸಮಾಜದಲ್ಲಿ ಸಭ್ಯ ನಾಗರೀಕರೆಂದು ಹೇಳಿಕೊಳ್ಳುವ ವ್ಯಕ್ತಿಗಳು ವಾಸ್ತವದಲ್ಲಿ ತಮ್ಮ ಶರೀರವನ್ನೇ ಆತ್ಮಸ್ವರೂಪವೆಂದು ತಿಳಿದಿರುತ್ತಾರೆ. ಧಾರ್ಮಿಕ ಆಚರಣೆಯನ್ನು ತಮ್ಮ ಮನಃಸಂತೋಷಕ್ಕಾಗಿ ಮಾಡುತ್ತಾರೆ. ಆದರೆ ಅದಕ್ಕೂ ಆತ್ಮಜ್ಞಾನಕ್ಕೂ ಎಳ್ಳಷ್ಟೂ ಸಂಬಂಧವಿಲ್ಲ.
ನಮಗೆ ಆತ್ಮಸ್ವರೂಪದ ಪರಿಚಯವಾದರೆ ಸಂಪೂರ್ಣ ಭ್ರಮೆ ದೂರವಾಗುತ್ತದೆ. ಮುಷ್ಠಿಮಾಡಿದ ಕೈ ಸಡಿಲವಾಗುತ್ತದೆ. ಒಮ್ಮೆ ಒಂದು ಕೋತಿ ಧಾನ್ಯ ತುಂಬಿದ ಪಾತ್ರೆಯಿಂದ ಧಾನ್ಯ ತೆಗೆಯಲು ಕೈ ಹಾಕಿತು. ತನ್ನ ಮುಷ್ಠಿಯಲ್ಲಿ ಧಾನ್ಯ ಹಿಡಿಯಿತು. ಅದನ್ನು ಹೊರತರಲು ಆಗದೆ ದುಃಖದಿಂದ ಕೂಗಾಡಲು ಪ್ರಾರಂಭಿಸಿತು. ಅದು ಚಿಕ್ಕ ಬಾಯುಳ್ಳ ಪಾತ್ರೆಯಾದ್ದರಿಂದ ಕೈ ಹೊರಬರಲು ಸಾಧ್ಯವಾಗಲಿಲ್ಲ. ಆದರೆ ಅದಕ್ಕೆ ತನ್ನ ಕೈ ಮುಷ್ಠಿಯಾಗಿದೆ ಎಂದು ಅರಿವಾಗುತ್ತಿದ್ದಂತೆಯೇ ಅದು ತನ್ನ ಕೈಯನ್ನು ಸಡಿಲಮಾಡಿತು. ಆ ಧಾನ್ಯ ಒಳಗೆ ಬಿದ್ದು ಕೈ ಹೊರಬರಲು ಸಾಧ್ಯವಾಯಿತು. ನಾವು ಕಾಮಕ್ರೋಧಾದಿಗಳ ದಾಸರಾಗಿರುವುದರಿಂದ ಅವುಗಳು ನಮ್ಮನ್ನು ಸತಾಯಿಸುತ್ತವೆ. ನಾವು ಯಾವಾಗ ಅವನ್ನು ಹಿಮ್ಮೆಟ್ಟಿಸುತ್ತೇವೆಯೋ ಆಗ ಅರಿಷಡ್ವರ್ಗಗಳು ಮಾಯವಾಗುತ್ತವೆ. ಹೇಗೆ ಕುರಿಗಳಿಂದ ಪಾಲಿಸಲ್ಪಟ್ಟ ಸಿಂಹದ ಮರಿ ತನ್ನ ಪ್ರತಿಬಿಂಭವನ್ನು ನೀರಿನಲ್ಲಿ ನೋಡಿದಾಗ ಅದಕ್ಕೆ ತಾನು ಕುರಿಯಲ್ಲ ಸಿಂಹವೆಂದು ತಿಳಿದು, ಸಿಂಹದ ಲಕ್ಷಣಗಳನ್ನು ತೋರಿಸಲು ಅನುವಾಯಿತೋ ಹಾಗೆಯೇ ನಮಗೆ ಆತ್ಮಬೋಧವಾದ ಕ್ಷಣದಿಂದ ಈ ಕುರಿಯ ಲಕ್ಷಣಗಳು ಮರೆಯಾಗುತ್ತವೆ.
..........ಸಾಮಾನ್ಯವಾಗಿ ಮನುಷ್ಯನನ್ನು ಗಮನಿಸಿದಾಗ ಅವನು ಶರೀರಕ್ಕಾಗಿಯೇ ಎಲ್ಲವನ್ನೂ ಮಾಡುತ್ತಾನೆ. ಶರೀರವನ್ನೇ ‘ನಾನು? ಎಂದು ಭಾವಿಸಿದ್ದಾನೆ. ಆದರೆ ಶರೀರವು ಆತ್ಮನ ಮಂದಿರವಾಗಿದೆ. ಆದ್ದರಿಂದ ಜೀವನವನ್ನು ಶುದ್ಧ, ಸರಳ, ಸ್ವಾಭಾವಿಕ ಮತ್ತು ಪುಣ್ಯ ಪ್ರತಿಷ್ಠೆಯಿಂದ ತುಂಬಿರುವಂತೆ ಮಾಡುವ ರಾಜಮಾರ್ಗವೆಂದರೆ ನಮ್ಮನ್ನು ನಾವು ಶರೀರಭಾವದಿಂದ ಮೇಲಕ್ಕೇರಿಸಿ ಆತ್ಮಭಾವವನ್ನು ಜಾಗೃತಗೊಳಿಸಿಕೊಳ್ಳುವುದು. ಇದರಿಂದ ನಿಜವಾದ ಸುಖ, ಶಾಂತಿ ಮತ್ತು ಜೀವನದ ಲಕ್ಷ್ಯ ದೊರೆಯುತ್ತದೆ.’

3 comments:

  1. Madam Namaste....
    lekhana tumbaa chennaagide. ನಮ್ಮನ್ನು ನಾವು ಶರೀರಭಾವದಿಂದ ಮೇಲಕ್ಕೇರಿಸಿ ಆತ್ಮಭಾವವನ್ನು ಜಾಗೃತಗೊಳಿಸಿಕೊಳ್ಳುವುದು..........
    Eee saalu manuja kulakke kaNtereyuvantaddu. Hagalalli nidrisutta, iruLalli kaNterediruva manushyaru naavu embude viparyaasa!

    ReplyDelete
  2. ಮೇಡಮ್,
    ಇದು ಬೆಳಕು ತುಂಬಿದ ಲೇಖನವಾಗಿದೆ.

    ReplyDelete
  3. Thanks for sharing this madam. The analogy of monkey and donkey were good.

    ReplyDelete