Tuesday, March 27, 2012

‘ಆನಂದ’ ಸಾಗರ.........

‘ಹಾರಿದೆ ಸಾಗರದೊಳಗೆ
ಸುಖವನ್ನೇ ಬಾಚುತ್ತೇನೆಂದು,
ಸಮೃದ್ಧ ಮುತ್ತು ಹವಳ
ಮುತ್ತುವ ಶಾರ್ಕ ವೇಲ್
ನಿಲ್ಲದ ಉಬ್ಬರವಿಳಿತ
ನೀರೂ ಉಪ್ಪುಪ್ಪು!’
ಇದು ಸುಮಾರು ಎಂಟು ವರ್ಷಗಳ ಹಿಂದೆ ಬರೆದಿದ್ದ ‘ಸಂಸಾರ’ವೆಂಬ ‘ಹನಿ’! ‘ಸಂಸಾರ’ವೆಂದರೇ ಬೆದರಿ ಬೆಚ್ಚಿ ಬರೆದ ಹನಿ ಇದು ಎಂದೇನೂ ಅರ್ಥವಲ್ಲ! ನಾವು ಜನ್ಮತಾಳುವುದೇ ಒಂದು ಸಂಸಾರದೊಳಗೆ. ನಮಗೆ ಬುದ್ಧಿ ತಿಳಿಯುವ ಮೊದಲೇ, ಅರಿವಿಲ್ಲದೇ ಅಪ್ಪ-ಅಮ್ಮ, ಅಕ್ಕ-ತಮ್ಮ, ಮುಂತಾದ ಸಂಬಂಧಗಳ ನಡುವೆಯೇ ಜೀವನವು ಅರಳಲಾರಂಭಿಸುತ್ತದೆ. ಸುತ್ತಲೂ ಹಬ್ಬುವ ಬಂಧು-ಬಾಂಧವರ ನಡುವೆ ನಿಜಕ್ಕೂ ನಾವು ಸಾಗರದ ಬಿಂದುವೇ ಆಗಿರುತ್ತೇವೆ, ಬೃಹತ್ತಾಗುವ ಸಾಮರ್ಥ್ಯವನ್ನೂ ಪಡೆದಿರುತ್ತೇವೆ. ಆದರೆ ‘ನನ್ನ’ತನವನ್ನು ಸ್ಥಾಪಿಸುವ ಭರದಲ್ಲಿ ದಿನೇದಿನೇ ಕುಬ್ಜರಾಗಲಾರಂಭಿಸುತ್ತೇವೆ! ಹೀಗೆ ಒಂದು ಸಂಸಾರದೊಳಗೇ ಅವತರಿಸಿ ಅದರ ಬಲೆಯೊಳಗೆ ಒಂದಾಗಿರುವ ನಾವು ಬೆಳೆದಂತೆ ನಮ್ಮದೇ ಒಂದು ಸಂಸಾರವನ್ನು ಸ್ಥಾಪಿಸುವುದನ್ನು(ಕಟ್ಟಿಕೊಳ್ಳುವುದನ್ನು!) ಕನಸಲಾರಂಭಿಸುತ್ತೇವೆ!
ನಿಜಕ್ಕೂ ಸಮಸ್ಯೆ ಎಂದುಕೊಂಡರೆ ಅದು ಪ್ರಾರಂಭವಾಗುವುದೇ ಅಲ್ಲಿಂದ. ಪರಸ್ಪರ ಹೊಂದಾಣಿಕೆ, ಕೇವಲ ಎರಡು ವ್ಯಕ್ತಿಗಳದ್ದಲ್ಲ, ಒಬ್ಬಾಕೆ ಒಬ್ಬಾತನ ಕುಟುಂಬದವರನ್ನೆಲ್ಲಾ ಅನುಸರಿಸಬೇಕಾದ ಪರಿಸ್ಥಿತಿ. ಮೊದಲು ಹೆಣ್ಣುಮಕ್ಕಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಬಲರಾಗದಿದ್ದಾಗ ಇದು ಸಮಸ್ಯೆಯೇ ಎನಿಸಿದ್ದಿರಬಹುದು. ಇನ್ನೂ ಕೆಲವು ಕಡೆಗಳಲ್ಲಿ ಇದೇ ವಾತಾವರಣ ಪ್ರಸ್ತುತವಿರಲೂ ಬಹುದು. ಆದರೂ ದಿನದಿಂದ ದಿನಕ್ಕೆ ಸುಧಾರಣೆಯಾಗುತ್ತಿದೆ ಎಂದುಕೊಳ್ಳುವಲ್ಲಿಯೇ ಅಸಮತೋಲನದ ಛಾಯೆ ಆವರಿಸಲಾರಂಭಿಸಿದೆ......... ಎನ್ನುವಂಥಾ ಗುರುತರವಾದ(!) ಆಲೋಚನೆ ಮಾಡಲೂ ಆಸ್ಪದ ಕೊಡಲಾರದಷ್ಟು ಕೆಲಸದ ಒತ್ತಡ, ಬದುಕ ಯಾಂತ್ರಿಕತೆ ಮಾನಸಿಕ ಜಡತ್ವವನ್ನುಂಟುಮಾಡುತ್ತಿದೆ.
ನಾವು ಒಂದು ಸಮಸ್ಯೆ ಎಂದುಕೊಳ್ಳುವುದನ್ನು ‘ಸಮಸ್ಯೆ’ ಎಂದುಕೊಂಡಷ್ಟೂ ಜಟಿಲವೇ ಆಗುತ್ತದೆ. ಅದರ ಪರಿಹಾರದತ್ತ ಮನಸ್ಸನ್ನು ಕೇಂದ್ರೀಕರಿಸಿ ಸ್ವಲ್ಪಸ್ವಲ್ಪವೇ ಮುಂದಡಿಯಿರಿಸಲಾರಂಭಿಸಿದರೆ ಅದನ್ನು ದಾಟಿಯೇ ಮುಂದೆ ಸಾಗಿರುತ್ತೇವೆ. ನಾವಂತೂ ಒಂದು ಸಂಸಾರದೊಳಗೇ ಹುಟ್ಟಿ, ಮತ್ತೊಂದು ಸಂಸಾರವನ್ನು ನಮ್ಮದಾಗಿಸಿಕೊಳ್ಳಹೊರಡುವುದು ಸಂತಸದಿಂದಿರಲು ತಾನೆ. ಯಾರಾದರೂ ‘ಕಷ್ಟಪಡುವುದಕ್ಕಾಗಿಯೇ ಸಂಸಾರ ಕಟ್ಟಿಕೊಂಡೆ’ ಎನ್ನುವುದನ್ನು ಕೇಳಿದ್ದೀರಾ? ಸುಖ-ಸಂತೋಷದಿಂದಿರಲು ನಮ್ಮದೇ ಸುಂದರ ಸಂಸಾರವನ್ನು ಪಡೆದುಕೊಂಡ ನಂತರ ನಮ್ಮ ಗುರಿ ಆನಂದದಿಂದಿರುವುದೇ ಆದರೆ, ನಡುವೆ ಎದುರಿಸಬೇಕಾದ ಎಡರುತೊಡರುಗಳನ್ನು ನಿವಾರಿಸಿಕೊಂಡು, ಪರಸ್ಪರ ಸಹಕರಿಸಿಕೊಂಡು, ‘ಆನಂದ?ದತ್ತಲೇ ಹೆಜ್ಜೆಯಿಡುತ್ತೇವೆ. ನಮ್ಮಲ್ಲಿರುವ ‘ಅಹಮಿಕೆ’ಯನ್ನು ಬದಿಗಿರಿಸಬೇಕು ಅಷ್ಟೆ. ನಮ್ಮಲ್ಲಿ ಎಷ್ಟೆಲ್ಲಾ ಸಾಮರ್ಥ್ಯಗಳಿವೆ, ನಾವು ಏನೆಲ್ಲಾ ಸಾಧಿಸಬಹುದು,........ಎಲ್ಲಾ ಕಡೆಗಣಿಸಿ ಯಃಕಚಿತ್ ಜೀವಿಗಳಾಗಿ ಜೀವನ ನಡೆಸುವುದಾದರೆ ಮನುಷ್ಯಜೀವಿಗಳೇ ಆಗುವ ಅನಿವಾರ್ಯತೆ ಇತ್ತೆ? ( ಆಯ್ಕೆ ನಮ್ಮದಲ್ಲ ಎಂದುಕೊಳ್ಳುವುದು ಬೇಡ!)
ಪರಸ್ಪರ ಆಕರ್ಷಣೆಯಿಂದ ನವಸಂಸಾರಗಳು ಉಗಮವಾಗುತ್ತವೆ, ಕ್ರಮೇಣ ವಿಕರ್ಷಣೆಯತ್ತ ಸಾಗಿ ಒಡೆಯುವ ಹಂತವನ್ನು ತಲುಪುತ್ತವೆ ಎನ್ನುವುದು ಸಾಮಾನ್ಯ ಅನಿಸಿಕೆ. ಆದರೆ ಆಕರ್ಷಣನಿಯಮದ ತಜ್ಞರಾದ ಬಾಬ್ ಡಯಲ್ರವರು ಹೇಳುವಂತೆ, `-`like attracts like’.ನಾವು ಒಂದು ಆಲೋಚನೆಯನ್ನು ಮಾಡಿದಾಗ ಅದೇ ರೀತಿಯ ಆಲೋಚನೆಗಳನ್ನು ಆಕರ್ಷಿಸುತ್ತೇವೆ,? ಎನ್ನುವುದನ್ನು ಅಳವಡಿಸಿಕೊಂಡರೆ ನಮಗೆ ಅಗತ್ಯವೆನಿಸುವ ಉತ್ತಮಾಂಶಗಳನ್ನೇ ಆಕರ್ಷಿಸುತ್ತಾ ಬದುಕನ್ನು ಉನ್ನತೀಕರಿಸಿಕೊಳ್ಳಬಹುದು.
`Peaceful Warrior’ನಲ್ಲಿ ಜೀವನದಲ್ಲಿ ಮೂರು ಪ್ರಮುಖಾಂಶಗಳು: paradox (ವಿರೋದಾಭಾಸ), humour (ಹಾಸ್ಯಪ್ರಜ್ಞೆ) ಮತ್ತು change (ಬದಲಾವಣೆ) ಎಂದಿದೆ. ಹಾಸ್ಯಪ್ರಜ್ಞೆ ಸಂಸಾರವನ್ನು ಸುಗಮವಾಗಿಸುವ ಟಾನಿಕ್ ಇದ್ದಂತೆ!

‘ಅಯ್ಯಾ ಸಂಸಾರವೆಂಬ ಹಾಯಿ ಹೊಡೆದು ಆನು ಬೆಚ್ಚುತ್ತಿದ್ದೇನೆ,
ಬೆದರುತ್ತಿದ್ದೇನೆ. ಎಲೆಲೆ ಸಂಸಾರ ವೈರಿ! ನಿನ್ನವ ನಿನ್ನವ
ನಿನ್ನವನೆನಿಸಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ, ದೇವರ ದೇವ!’
ಎಂದು ವಚನಕಾರರಾದ ಸಿದ್ಧರಾಮೇಶ್ವರರವರು ಹೇಳಿದ್ದಾರೆ. ಇಲ್ಲಿ ಸಂಸಾರವೆನ್ನುವುದು ಅವರ ಆಧ್ಯಾತ್ಮಿಕ ಸಾಧನೆಗೆ ಅಡ್ಡವೆನಿಸಿರಲೂ ಬಹುದು ಅಥವಾ ಸಾಕಿನ್ನು ಈ ಸಂಸಾರದ ವ್ಯಾಮೋಹ, ಮುಕ್ತಿಯ ಕರುಣಿಸು ಎಂಬ ಕೋರಿಕೆಯೂ ಆಗಿರಬಹುದು. ಅಥವಾ...... ಈ ಸಂಸಾರವೆಂಬ ಸಂಕುಚಿತತೆಯಿಂದ ಅವರು ಬೇಸತ್ತಿರಬಹುದೆ?
ಈ ಸಂಸಾರವನ್ನು ಶರಧಿಗೆ ಹೋಲಿಸಿರುವುದು, ಅದರಲ್ಲಿ ಈ ಮೊದಲು ನಾವು ಕಂಡುಕೊಂಡಂತೆ ಏನೆಲ್ಲಾ ಕಷ್ಟಕೋಟಲೆಗಳಿವೆ ಎಂಬ ಅರ್ಥದಲ್ಲಿ ಅಲ್ಲ ಎನಿಸುತ್ತದೆ. ಮೇಲ್ನೋಟಕ್ಕೆ ಅದು ಹಾಗೇ ಕಂಡುಬಂದರೂ ನಾವು ನಮ್ಮ ಸಂಸಾರವೆಂದರೆ ‘ಪತಿ-ಪತ್ನಿ, ಮಕ್ಕಳು' ಎಂಬ ಸಂಕುಚಿತ ಭಾವದಿಂದ ಹೊರಬಂದು ‘ವಸುದೈವ ಕುಟುಂಬಕಂ’ ಎಂಬಂತೆ ಈ ಜಗತ್ತೇ ಒಂದು ಸಂಸಾರ ಸಾಗರ, ಅದರಲ್ಲಿನ ಬಿಂದುಗಳು ನಾವು ಎಂಬ ವೈಶಾಲ್ಯದತ್ತ ದೃಷ್ಟಿಹರಿಸಬೇಕೆನ್ನುವುದೇ ಉದ್ದೇಶವೆನಿಸುತ್ತದೆ. ‘ನಮ್ಮ ಈ ಸಂಸಾರ ‘ಆನಂದ’ ಸಾಗರ.........’
(ಈ ಲೇಖನವು `ಸಿಹಿ ಗಾಳಿ' ಮಾಸ ಪತ್ರಿಕೆಯ ಮಾರ್ಚ್ ೨೦೧೨ರ ಸ೦ಚಿಕೆಯಲ್ಲಿನ `ಸ೦ಸಾರ ಶರಧಿ' ಅ೦ಕಣದಲ್ಲಿ ಪ್ರಕಟವಾಗಿದೆ.)

3 comments:

  1. ಮೇಡಮ್,
    ಸಂಸಾರದ ಸಾರವನ್ನು ಸರಿಯಾಗಿ ಗ್ರಹಿಸಿ ಹೇಳಿದ್ದೀರಿ. ಮುಖ್ಯವಾಗಿ ವಿನೋದಪ್ರಜ್ಞೆಯೇ ನಮ್ಮನ್ನು ಸಂಸಾರಸಾಗರದಲ್ಲಿ ತೇಲಿಸುವ ಬೆಂಡಾಗಬಲ್ಲದು ಎನ್ನುವುದು ನಿಜ.

    ReplyDelete
  2. ಕರ್ಮಫಲವಾಗಿ ಮೂಡಿಬಂದ ಋಣಾನುಬಂಧದ ಪರಿಣಾಮ

    ReplyDelete