ದಿನಾಂಕ೦೨-೧೦-೨೦೧೪ ರ೦ದು ನಡೆದ` ಕರ್ನಾಟಕ ಸಾಹಿತ್ಯ ಅಕಾಡಮಿ ಸುವರ್ಣ ಸ೦ಭ್ರಮ' ಜಿಲ್ಲಾ ಕವಿಗೋಷ್ಠಿಯಲ್ಲಿ ವಾಚಿಸಿದ ಕವನವನ್ನು ನಿಮ್ಮೊಡನೆ ಹ೦ಚಿಕೊಳ್ಳುತ್ತಿದ್ದೇನೆ:
ಒಳಗಿನೊಳಗು
ಅಂದು........
ಜನಜಂಗುಳಿಯ ನಡುವೆ
ಹೆಜ್ಜೆಯಿಡುವಾಗ
ಕಂಡುಬರುತ್ತಿದ್ದುದು
ಇಷ್ಟೇ:
ಕಣ್ಣು, ಕಿವಿ,
ಮೂಗು,ಬಾಯಿ
ಎತ್ತರ-ಗಿಡ್ಡ, ತೆಳು-ತೋರ
ಕಪ್ಪು-ಬಿಳುಪು.......
ಅಂಗಾಂಗಗಳಷ್ಟೇ ನರನೆಂಬಂಥಾ
ತಲೆ ಚಿಟ್ಟೆನಿಸುವ
ಆಕಾರಗಳ ಸಾಲು ಸಾಲು,
ಮುಂದೆಮುಂದೆ ಸಾಗಿದಾಗ
ಕಂಡದ್ದೇ ಕಂಡು ರೋಸಿಹೋದಂತೆ
ಕೇಳಲಾರಂಭಿಸಿದ ಮಾತುಗಳು!
ಕೋಪ-ಆಕ್ರೋಶ, ದುಃಖ-ದುಮ್ಮಾನ
ನೋವು-ನಲಿವುಗಳ ಮೇಳ
ಮನದ ಪಿಸುಮಾತುಗಳು
ಹುಸಿಮುನಿಸುಗಳು
ಗುಜುಗುಜು, ಗಲಿಬಿಲಿ
ಎದುರಾದವರ ಭಾವಗಳ
ವಿಶ್ಲೇಷಣೆಯಲೇ
ಕೊಚ್ಚಿಹೋಗುವ ಹುಚ್ಚುತನ
ನಿಶ್ಶಬ್ದವೆಂದರೇನರಿಯದ
ಅಂತ್ಯವಿಲ್ಲದ ಪಯಣ!
ಸಂತೆಯೊಳಗೆ ಸಂತನನರಸುವುದೆಲ್ಲಿ?
ದೇಹ-ಮನಸುಗಳ
ಮೀರಲಾಗದ ಬದುಕೆ?
‘ಇದಮಿತ್ಥಂ?
ಎಂದು
ಪರಿಗಣಿಸಲಾಗದೇ
ತೊಳಲುವ ಜೀವಕೊಂದು
ಆಶಾಕಿರಣ!
ಈಗ ದೇಹಗಳ
ಸಾಲುಸಾಲೇ ಸಾಗಲಿ
ಮನಗಳೊಳಗೆ ಮಹಾ
ಸಮರವೇ ಜರುಗಲಿ
ಕಾಣಿಸದು
ಕೇಳಿಸದು!
ಆಳಆಳಕೆ ಇಳಿಯಬಯಸುತಿದೆ
ಜೀವ
ಒಳಗಿನೊಳಗನು ಒಳಗೊಂಡಂತೆ
ಎಲ್ಲರೊಳಗಿನ ಚೈತನ್ಯವೊಂದೇ
ಎನಿಸುವ ಶಾಂತ
ಭಾವ!
ಸಂತೆ ಗದ್ದಲದ ನೆಪದಲ್ಲಿ ಒಳಗಿನೊಳಗನು ಶಾಂತವಾಗಿಡುವತ್ತ ಪ್ರೇರೇಪಿಸುವ ಕವನ.
ReplyDeleteಸಂತೆಯೊಳಗೊಬ್ಬ ಸಂತ ಸಿಕ್ಕಾಗ ಆ ಸಂತೋಷದ ಸಮಾಧಾನವೇ ಬೇರೆ
ReplyDelete