Tuesday, May 17, 2011

ಮನದ ಅಂಗಳದಿ.........೪೦. ಬದುಕಿಗೆ.....

ಕೊಚ್ಚಿ ಸಾಗುತ್ತಿರುವ ಜೀವನದ ಹುಚ್ಚು ಪ್ರವಾಹ ಎಲ್ಲೋ ಯಾರನ್ನೋ ಸಂಧಿಸುವಂತೆ ಮಾಡಿ ದೂರ ಸರಿಸಿ ಕೆಲವು ವೇಳೆ ಮತ್ತೆಲ್ಲೋ ಯಾವುದೋ ಸ್ಥಿತಿಗಳಲ್ಲಿ ಪುನಃ ಭೇಟಿಯಾಗುವಂತೆ ಮಾಡುತ್ತದೆ. ಆ ಅವಧಿಯಲ್ಲಿ ನಮ್ಮ ಜೀವನಗಳಲ್ಲಿ ಅಗಾಧ ಬದಲಾವಣೆಗಳೂ ಆಗಿರಬಹುದು. ಅದು ಹಾಗೇ ಆಯಿತು. ಆಕೆಯನ್ನು ಮೊದಲು ನೋಡಿದಾಗಿನ, ಕೆಲವು ವರ್ಷಗಳು ಅಕ್ಕಪಕ್ಕದವರಾಗಿದ್ದ ಸಂದರ್ಭ, ನಂತರ ನೋಡಲು ಹೋಗಿದ್ದ ಈ ಪರಿಸ್ಥಿತಿ.......

ಮಾತೃತ್ವದ ರಜೆಯ ಅವಧಿ ಮುಗಿಯುತ್ತಾ ಬಂದಾಗಲೂ ಏನೇ ಪ್ರಯತ್ನ ಪಟ್ಟರೂ ಮಗು ಬಾಟಲ್ ಹಾಲನ್ನು ಕುಡಿಯಲು ಅಭ್ಯಾಸ ಮಾಡಿಕೊಳ್ಳದೇ ಇದ್ದಾಗ ಅನಿವಾರ್ಯವಾಗಿ ಕೆಲಸ ಮಾಡುತ್ತಿದ್ದ ಸ್ಥಳದ ಹತ್ತಿದಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡು ಹೋಗಬೇಕಾಯಿತು. ಅಲ್ಲಿಯೇ ಪಕ್ಕದ ಮನೆಯವರಾಗಿದ್ದ ಆಕೆಯ ಒಡನಾಟ ಪ್ರಾರಂಭವಾಗಿದ್ದು. ನನಗೆ ಎನ್ನುವುದಕ್ಕಿಂತಲೂ ಅಮ್ಮನೊಡನೆ ಆಕೆಯ ಬಾಂಧವ್ಯ ಹೆಚ್ಚು ಗಾಢವಾಗಿತ್ತು. ಯಾರೊಡನೆಯೂ ಸಾಮಾನ್ಯವಾಗಿ ಬೆರೆಯದೆ ತಮ್ಮ ಕೆಲಸ, ಬಿಡುವಿನ ವೇಳೆಯಲ್ಲಿ ಓದುವುದು ಎನ್ನುವಂತೆ ತಮ್ಮ ಪಾಡಿಗೆ ತಾವಿರುತ್ತಿದ್ದ ಅಮ್ಮನಿಗೆ ವಯಸ್ಸಿನ ತಾರತಮ್ಯವನ್ನೂ ಮರೆಸುವ ಆಕೆಯೊಂದಿಗಿನ ಸ್ನೇಹ ಸಂತಸದಾಯಕವಾಗಿತ್ತು. ಆಕೆಯೂ ಮಕ್ಕಳಂತೆ 'ಅಮ್ಮಾಜಿ’ ಎಂದೇ ಕರೆಯುತ್ತಿದ್ದರು! ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿ ಮೂರು ಮಕ್ಕಳನ್ನು ಹೊ೦ದಿದ್ದು, ಅವರನ್ನು ಓದಿಸಲೆಂದು ತಮ್ಮ ಎಸ್ಟೇಟ್‌ನಿಂದ ಇಲ್ಲಿ ಬಂದು ನಮ್ಮಂತೆಯೇ ಬಾಡಿಗೆ ಮನೆಯಲ್ಲಿದ್ದ ಆಕೆ ತಮ್ಮ ಕೆಲಸಗಳ ನಡುವೆಯೇ ಆಗಾಗ ಬಂದು ನಮ್ಮ ಮಗುವನ್ನು ಎತ್ತಿ ಆಡಿಸುತ್ತಿದ್ದರು, `ಏನೇ ಸಮಸ್ಯೆ ಇದ್ದರೂ ಮಗುವನ್ನು ಎತ್ತಿ ಆಡಿಸುವಾಗ ಎಲ್ಲಾ ಮರೆತುಹೋಗುತ್ತದೆ,’ ಎನ್ನುತ್ತಲಿದ್ದ ಅವರಿಗೆ ಎಳೆಯ ಕಂದಗಳನ್ನು ಎತ್ತಿ ಆಡಿಸುವುದೆಂದರೆ ಬಹಳ ಪ್ರೀತಿ. ಮಧ್ಯಾಹ್ನ ಮಗು ಮಲಗಿದ ವೇಳೆಯಲ್ಲಿ ಪಗಡೆಯಾಟವಾಡುವುದು,(ಅಮ್ಮ ನಮ್ಮ ಹಳ್ಳಿಯಿಂದ ಪಗಡೇಕಾಯಿ ತಂದು ಅವರಿಗೂ ಆಟ ಕಲಿಸಿದ್ದರು!) ಸಂಜೆ ನಾನು ಶಾಲೆಯಿಂದ ಬಂದ ತಕ್ಷಣ ಮಗುವನ್ನು ನನ್ನ ಜವಾಬ್ಧಾರಿಗೆ ಬಿಟ್ಟು ಇಬ್ಬರೂ ವಾಕಿಂಗ್‌ಗೆ ಹೋಗಿಬರುವುದು ಅವರ ದಿನಚರಿಯಾಗಿತ್ತು. ಅಲ್ಲಿದ್ದಾಗಲೇ ಹುಟ್ಟಿದ ಎರಡನೇ ಮಗುವನ್ನೂ ಅಕ್ಕರೆಯಿಂದ ಬೆಳೆಸಿದರು. ಮಕ್ಕಳಿಬ್ಬರಿಗೂ ಅವರ ಮನೆಯಲ್ಲಿರುವುದೆಂದರೆ ಬಹಳ ಇಷ್ಟ. ತಿಂಡಿ, ಊಟ, ಆಟ ಎಲ್ಲವೂ ಅಲ್ಲೇ! ಮನೆಯಲ್ಲಿದ್ದಾಗಲೂ, ಆಂಟಿ ಊಟ ಹೇಗೆ ಮಾಡ್ತಾರೆ, ರೊಟ್ಟಿ ಹೇಗೆ ಬಡೀತಾರೆ ಎನ್ನುವುದನ್ನು ಅನುಕರಿಸಿ ತೋರಿಸುತ್ತಿದ್ದರು.......ಮಕ್ಕಳು ಚಿಕ್ಕವರಿದ್ದಾಗಲೇ ನಾವು ಜಿಲ್ಲಾ ಕೇಂದ್ರದಲ್ಲಿ ನೆಲೆಸುವ ಸಲುವಾಗಿ ಅಲ್ಲಿಂದ ಶಿಫ್ಟ್ ಆದೆವು. ನನಗೆ ನಗರದಲ್ಲಿ ಖಾಲಿ ಸ್ಥಳ ದೊರಕದಿದ್ದರಿಂದ ಸಮೀಪದ ಹಳ್ಳಿಯೊಂದಕ್ಕೆ ವರ್ಗ ಮಾಡಿಸಿಕೊಳ್ಳಬೇಕಾಯಿತು. ಅಲ್ಲಿ ಇದ್ದಂತಹ ಅನುಕೂಲ, ಒಡನಾಟ,......ಯಾವುದೂ ದೊರೆಯದಂತಾಗಿ,

'ಗರಗರ ತಿರುಗು ಚಕ್ರದ ಅಂಚಿಗೆ
ಒಗೆಯಲ್ಪಟ್ಟ ಕಾಯ,
ವಿರಮಿಸಲು ಬೆಂಬಿಡದ ಭಯ
ಸ್ವಲ್ಪ ತಂಗುವೆನೆಂದರೂ
ತಪ್ಪದ ಅಪಾಯ!.....’

ಎನ್ನುವಂತೆ ಜೀವನವು ತೀವ್ರ ಯಾಂತ್ರಿಕವಾಗಿ ದಿನಗಳು ಓಡುವ ರಭಸದಲ್ಲಿ ವರ್ಷಗಳೇ ಉರುಳಿ ಹೋದವು. ಪ್ರಾರಂಭದ ವರ್ಷಗಳಲ್ಲಿ ಆಕೆ ಒಂದೆರಡು ಭಾರಿ 'ಅಮ್ಮಾಜಿ’ಯನ್ನು ನೋಡಲು ಬಂದಿದ್ದರು. ಆ ಸಮಯದಲ್ಲಿ ನಾನು ಕೆಲಸಕ್ಕೆ ಹೋಗಿರುತ್ತಿದ್ದರಿಂದ ಅವರನ್ನು ನೋಡಲು ಆಗಲೇ ಇಲ್ಲ. ಕ್ರಮೇಣ ನಮ್ಮ ಸಂಪರ್ಕ ಕಡಿದುಹೋಯಿತು...

ಸುಮಾರು ೧೬ವರ್ಷಗಳ ನಂತರ ಅವರ ಬಂಧುವೊಬ್ಬರ ಮೂಲಕ ಈಗ ಆಕೆ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಅವರನ್ನೊಮ್ಮೆ ನೋಡಿ ಬರುವ ಹಂಬಲವಾಯಿತು. ಎಲ್ಲರೂ ಒಟ್ಟಾಗಿ ಹೋಗಿ ಕಾಣಬೇಕೆನ್ನುವಷ್ಟರಲ್ಲಿ ಅವರನ್ನು ಕಿದ್ವಾಯ್‌ನಿಂದ ನಮ್ಮೂರಿನ ಆಯುರ್ವೇದ ಆಸ್ಪತ್ರೆಗೇ ಕರೆತಂದಿದ್ದಾರೆಂದು ತಿಳಿಯಿತು. ಅವರನ್ನು ಕಂಡಾಗಿನ ಆ ಪರಿಸ್ಥಿತಿ ನನ್ನ ಊಹೆಗೆ ನಿಲುಕದಾಗಿತ್ತು. ಆ ಸುಂದರವಾದ ಸುರುಳಿ ಕೂದಲು, ಸದಾ ಹಸನುಖಿಯಾಗಿ ಹರ್ಷದ ಚಿಲುಮೆಯಂತಿದ್ದ, ಎತ್ತರದ ನಿಲುವಿನ ಆಕೆ ರಸ ಹೀರಿದ ಕಬ್ಬಿನಂತೆ ಗೋಡೆಯ ಕಡೆಗೆ ಮುಖಮಾಡಿ ಹಾಸಿಗೆಗಂಟಿ ಮಲಗಿದ್ದರು. ಅವರೊಡನಿದ್ದ ೪-೫ಸಮೀಪ ಬಂಧುಗಳು ನಮ್ಮನ್ನು ನೋಡಿದ ತಕ್ಷಣವೇ ಗುರುತಿಸಿ ಮಾತನಾಡಲಾರಂಭಿಸಿದರು. ಜೀವನದ ಕರಾಳತೆಯೊಡನೆ ಮುಖಾಮುಖಿಯಾದಂತಿದ್ದ ಆ ಸಂದರ್ಭದಲ್ಲಿ ನನಗೆ ಅವರನ್ನು ಹೇಗೆ ಎದುರಿಸುವುದು ಎನ್ನುವ ಪ್ರಶ್ನೆ ಕಾಡಲಾರಂಭಿಸಿತ್ತು.

ಎಚ್ಚರವಾದ ತಕ್ಷಣವೇ 'ತುಂಬಾ ಸುಸ್ತು ಕಣವ್ವ, ಆಗ್ತಾ ಇಲ್ಲ...’ಎಂದು ನರಳಲಾರಂಭಿಸಿದರೂ ತಾವು ಆಡಿ ಬೆಳೆಸಿದ ಮಕ್ಕಳನ್ನು ನೋಡಿ ಮಾತನಾಡಿಸಿದರು. ದುಃಖದ ಸಂಗತಿಯೆಂದರೆ ಎಳೆಕಂದಗಳ ಒಡನಾಟ ಬಯಸುತ್ತಿದ್ದ ಅವರು ತಮ್ಮದೇ ೪ತಿಂಗಳು ಮತ್ತು ೧೦ತಿಂಗಳ ಎರಡು ಮೊಮ್ಮಕ್ಕಳೊಡನೆ ಸಂತಸ ಪಡಲಾರದ ಸ್ಥಿತಿಯಲ್ಲಿದ್ದರು. ಅವರ ಈ ಸ್ಥಿತಿಯನ್ನು ಕಂಡು ಮರುಗಬೇಕಾಗಿದ್ದ 'ಅಮ್ಮಾಜಿ’ ನಮ್ಮನ್ನಗಲಿ ಆಗಲೇ ೬ವರ್ಷಗಳಾಗಿವೆ.

ಈ ಮೊದಲು ಅವರು ಹೇಗಿದ್ದರು ಎನ್ನುವ ನೆನಪು ನನ್ನ ಮಗಳಿಗೆ ಅಲ್ಪಸ್ವಲ್ಪ ಇತ್ತು ಆದರೆ ನನ್ನ ಮಗನಿಗೆ ಸ್ವಲ್ಪವೂ ಇರಲಿಲ್ಲ. ಮನೆಗೆ ಬಂದ ತಕ್ಷಣ ಹಳೆಯ ಆಲ್ಬಂಗಳನ್ನು ಹುಡುಕಿ ಮಕ್ಕಳಿಗೆ ಅವರ ಆಗಿನ ಚಿತ್ರ ತೋರಿಸಿದೆ. ಗೊಂದಲ ಹೊಂದಿದ ಮನಸ್ಸಿಗೆ ಸಾಂತ್ವನ ನೀಡುವ ಓದಿನ ಅಗತ್ಯ ಬೇಕಿತ್ತು. ಅನುಪಮಾ ನಿರಂಜನರ 'ನೆನಪು ಸಿಹಿಕಹಿ’ಗಾಗಿ ಹುಡುಕಿದೆ. ಅಕ್ಕ ತೆಗೆದುಕೊಂಡು ಹೋಗಿದ್ದು ನೆನಪಾಯಿತು. ಮಹಾ ಶ್ವೆತಾದೇವಿಯವರ `ಸ್ಥನದಾಯಿನಿ'ಯ ನೆನಪಾಯಿತು. ಮಗಳು ಓದಲು ಕೊಟ್ಟ Ryandi Pash ಅವರ 'THE LAST LECTURE’ ಓದಲು ನಿರ್ಧರಿಸಿದೆ. ಅಮೇರಿಕ ಜನರಿಂದ ’ಪಿಟ್ಸ್ ಬರ್ಗ್ ನ ಸಂತ’ ಎಂದು ಕರೆಸಿಕೊಂಡ, ಬಾಲ್ಯದಲ್ಲಿ ಕಂಡ ಅನೇಕ ಕನಸುಗಳನ್ನು ನನಸು ಮಾಡಿಕೊಂಡ, ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್, ವಿಜ್ಞಾನಿ,....ಯಾದ Ryandi Pash ಕೇವಲ ನಲವತ್ತೇಳನೇ ವಯಸ್ಸಿಗೇ ಕ್ಯಾನ್ಸರ್ ಗೆ ಬಲಿಯಾದರೂ ತಾನು ಇನ್ನು ನಾಲ್ಕೇ ತಿಂಗಳು ಜೀವಿಸಿರುತ್ತೇನೆ ಎಂದು ತಿಳಿದಾಗಲೂ ತನ್ನ 'THE LAST LECTURE’ ಮೂಲಕ ಸಾವಿನ ಸಾಂಗತ್ಯದಲ್ಲೂ ಬದುಕಿನ ಸಾರ್ಥಕತೆಯನ್ನು ಸಾರುತ್ತಾನೆ.......

ಆದರೂ ಆಕೆ ಅನುಭವಿಸುತ್ತಿದ್ದ ಸುಸ್ತು, ಸಂಕಟಗಳನ್ನು ನೆನಪುಮಾಡಿಕೊಳ್ಳುವಾಗ ಇಲ್ಲಿಯವರೆಗಿನ ಈ ಬದುಕಿಗೆ ಕೃತಜ್ಞತೆ ಸಲ್ಲಿಸುವ ಸಮಯದಲ್ಲಾದರೂ ಸ್ವಲ್ಪ ನೆಮ್ಮದಿ ಲಭಿಸದಿದ್ದರೆ ಈ ಬದುಕಿಗೇನು ಅರ್ಥ? ಎನ್ನುವ ಪ್ರಶ್ನೆ ಕಾಡುತ್ತದೆ. ಅದಕ್ಕಾಗಿ 'ಬದುಕಿಗೆ’ ನನ್ನದೊಂದು ಬಿನ್ನಹ,

’ಬೇಕಾದಂತೆ ಬಳಸಿಕೊ
ನಿನ್ನ ತೆಕ್ಕೆಯಲ್ಲಿ ಬಂಧಿ ನಾನಿಲ್ಲಿ
ಆದರೆ......
ಬಂದಮುಕ್ತಳಾಗುವಾಗ
ತೃಪ್ತಿಯಲಿ ತುಟಿಯರಳಲಿ! ’

9 comments:

  1. ಪ್ರಭಾಮಣಿ ಮೇಡಂ;ಮನ ಕಲಕುವ ಬರಹ.ರಾಂಡಿ ಪಾಶ್ ಅವರ ಲಾಸ್ಟ್ ಲೆಕ್ಚರ್ ಓದಿದ್ದೇನೆ.ಅದ್ಭುತ ಪುಸ್ತಕ.ನಮಸ್ಕಾರ.

    ReplyDelete
  2. Very nice lines at the end. Nice write up madam.
    Swarna

    ReplyDelete
  3. ನಮ್ಮ ನೆಂಟರಲ್ಲಿ ಒಬ್ಬರು ಕ್ಯಾನ್ಸರ್ ರೋಗದಿಂದ ನರಳಿ ಕೊನೆಯುಸಿರೆಳೆದರು.. ಅವರ ನೆನಪಾಗಿ ಕಣ್ಣುಗಳು ತುಂಬಿ ಬಂದವು. ಬದುಕಿನ ಪ್ರವಾಹ ಯಾರನ್ನು ಎಲ್ಲಿಗೆ ಕೊಂಡೊಯ್ಯುವುದೋ ಯಾರನ್ನು ಎಲ್ಲಿಗೆ ಕೆಡವುದೋ ತಿಳಿಯುವುದಿಲ್ಲ. ನಿಮ್ಮ ಬಿನ್ನಹ ಮನಸ್ಸು ತಟ್ಟಿತು..

    ’ಬೇಕಾದಂತೆ ಬಳಸಿಕೊ
    ನಿನ್ನ ತೆಕ್ಕೆಯಲ್ಲಿ ಬಂಧಿ ನಾನಿಲ್ಲಿ
    ಆದರೆ......
    ಬಂದಮುಕ್ತಳಾಗುವಾಗ
    ತೃಪ್ತಿಯಲಿ ತುಟಿಯರಳಲಿ! ’

    ಸಾಲುಗಳು ಹಿಡಿಸಿತು..

    ReplyDelete
  4. tumba sundara lekhana
    adaralloo
    ಬೇಕಾದಂತೆ ಬಳಸಿಕೊ
    ನಿನ್ನ ತೆಕ್ಕೆಯಲ್ಲಿ ಬಂಧಿ ನಾನಿಲ್ಲಿ
    ಆದರೆ......
    ಬಂದಮುಕ್ತಳಾಗುವಾಗ
    ತೃಪ್ತಿಯಲಿ ತುಟಿಯರಳಲಿ
    tumbaa ishtada saalugalu

    ReplyDelete
  5. ಚೆನ್ನಾಗಿ ಇದ್ದವರು , ಹಾಸಿಗೆ ಹಿಡಿದಾಗ ... ಬೇಜಾರಗುವುದಂತು ಸಹಜ ....
    RANDY PAUCH ಅವರ ವೀಡಿಯೊ ನೋಡಿದ್ದೇ ... ಬುಕ್ ಇದೆ ಅಂತ ತಿಳಿದಿರಲಿಲ್ಲ
    http://www.youtube.com/watch?v=ji5_MqicxSo

    ReplyDelete
  6. Madam,i liked the last 4 lines..
    'The Last Lecture' is a very good book and must read one.
    @Sandeep:that book has been translated to Kannada by S.Umesh and that audio also there in kannada,which voice is given by Ramesh Aravind(cine actor)

    ReplyDelete
  7. lekhana manatattuvantide.badukige ittha binnaha chennaagide.

    ReplyDelete
  8. lekhana mana kaluki koneya saalu manadalli uliyitu. Raandi yavara pustaka odabeku

    ReplyDelete