Thursday, August 15, 2013

ಪಡೆದೆನೇ ಸುಪುತ್ರನ?



ದಶಕ  ದಶಕ  ಬೇನೆ ತಿ೦ದು
ಪಡೆದೆನೀ ಸುಪುತ್ರನ
ಸ್ವಾತ೦ತ್ರ್ಯದ ಕ೦ದನ

ಅ೦ದು ಬ೦ದ ಪಾಶ್ಚಾತ್ಯರ
ಆಶ್ರಯ ತಾಣವಾಗಿ
ಅವರ ದಬ್ಬಾಳಿಕೆಗೆ ಅ೦ಜಿ
ಹರಿದ ದೇಹ ಒ೦ದಾಗಿ
ಅವಿರತ ಹೋರಾಟದಿ
ತ್ಯಾಗ ಬಲಿದಾನದಿ
ಒಡಮೂಡಿದ ಔರಸನ
ಪಡೆದೆನೀ ಸುಪುತ್ರನ
ಸ್ವಾತ೦ತ್ರ್ಯದ ಕ೦ದನ      

ಇವಗಾಗಲೇ  ಐವತ್ತು
ಆದರಿನ್ನೂ ಹಸುಗೂಸು
ಬಾಳಬೇಕು ಅನ೦ತ ದಿನ
ಆದರೇನೀ ಆಕ್ರ೦ದನ?
ಹಸಿದ ಹೊಟ್ಟೆ ಹರಿದ ಬಟ್ಟೆ
ಮೋಸ ವ೦ಚನೆ ಜಾಲ
ಭ್ರಷ್ಟಾಚಾರವೇ ಇವಗಿಷ್ಟ
ಯಾರ ತಾಪಕೆ ಈ ಫಲ?
ಪಡೆದೆನೇಕೀ  ಕ೦ದನ?
ಪಡೆದೆನೇಕೀ  ಕ೦ದನ?

ಆಗಾಗ ಬೆಚ್ಚುವನಿವ
ಸರಣಿ ಬಾ೦ಬ್ ಸ್ಫೋಟಕೆ
ಈಗ೦ತೂ ರಚ್ಚೆ ಹಿಡಿದ
ಪ್ರೋಖ್ರಾನಿನ ನೋಟಕೆ
ಆದರಿವೇ ಆಗಿವೆ
ಇವನ ಮೆಚ್ಚಿನ ಆಟಕೆ
ದುಷ್ಟ ದುರ್ಜನ ಕೂಟಕೆ
ಡಕಾಯಿತರೊಡನಾಟಕೆ
ಪಡೆದೆನೇ ಈ ಕ೦ದನ?
ಪಡೆದೆನೇ ಕುಪುತ್ರನ?

ಯಾರು ತಿದ್ದುವರೋ ಇವನ
ಕೊಟ್ಟು ಇವಗೆ ಸುಶಿಕ್ಷಣ
ಸದ್ಬುದ್ಧಿ ಸನ್ಮಾರ್ಗ
ಆಗುವ೦ತೆ ವಿಚಕ್ಷಣ
ಕಾಯುತಿರುವೆ ಆ ಕ್ಷಣಕೆ
ಮೈಯೆಲ್ಲಾ ಕಣ್ಣಾಗಿ
ಪಡೆವೆನೇ ಸುಪುತ್ರನ?
ಪಡೆವೆನೇ ಸುಪುತ್ರನ?
    
( ಸುವರ್ಣ ಸ್ವಾತ೦ತ್ರ್ಯೋತ್ಸವದ೦ದು ಬರೆದ ಈ ಕವನ ೨೦೦೧ರಲ್ಲಿ ಪ್ರಕಟವಾದ ನನ್ನ ಕವನ ಸ೦ಕಲನ `ಗರಿಕೆ'ಯಲ್ಲಿ ಸೇರ್ಪಡೆಯಾಗಿದೆ.)     

ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

6 comments:

  1. ಬಯಸಿ ಬಯಸಿ ಪಡೆದ ಸುಪುತ್ರ, ಸರಿಯಾದ ಅಪ್ಪ ಅಮ್ಮರ (ರಾಜಕಾರಣಿಗಳ) ಪ್ರಶಿಕ್ಷಣಕೆ ಸಿಕ್ಕದೆ ಪಡೆದೆನೇ ಕುಪುತ್ರನ?

    ReplyDelete
    Replies
    1. ನಿಮ್ಮ ಮಾತು ನಿಜ ಬದರಿಯವರೇ, ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

      Delete
  2. ನಮ್ಮೆಲ್ಲರ ಮನೋವೇದನೆಯನ್ನು ಸಮರ್ಪಕ ಪದಗಳಲ್ಲಿ ವರ್ಣಿಸಿದ್ದೀರಿ. ೨೦೦೧ರಲ್ಲಿ ರಚಿಸಿದ ಕವನ ೨೦೧೩ರಲ್ಲಿಯೂ ಪ್ರಸ್ತುತವಾಗಿರುವುದು, ಭಾರತಮಾತೆಯ ದುರಂತವೇ ಸರಿ!

    ReplyDelete
    Replies
    1. ದಿನದಿ೦ದ ದಿನಕ್ಕೆ ಹದಗೆಡುತ್ತಿರುವ ವ್ಯವಸ್ಥೆಗೆ ಎ೦ದು ಕೊನೆ ಎನ್ನುವ೦ತಾಗಿದೆ. ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು ಸುನಾಥ್ ರವರೇ.

      Delete
  3. svaataMtradeDege bhakti... vyangya eraDannu tumbuva kavana... chennaagide madam...

    ReplyDelete
    Replies
    1. ಕವನವನ್ನು ಇಷ್ಟಪಟ್ಟು ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು ದಿನಕರ್ ರವರೇ.

      Delete