Sunday, February 27, 2011

ಮನದ ಅಂಗಳದಿ..................30. ದಾನ.

‘ಅನ್ನದಾನವು ಮಹಾದಾನವಾದರೆ ವಿದ್ಯಾದಾನವು ಅದಕ್ಕಿಂತಲೂ ಹೆಚ್ಚಿನದು. ಅನ್ನದಾನದಿಂದ ಆಕ್ಷಣದಲ್ಲಿ ತೃಪ್ತಿಯಾಗುತ್ತದೆ. ಆದರೆ ವಿದ್ಯಾದಾನವು ಜೀವನಪರ್ಯಂತವಿರುತ್ತದೆ,' ಎನ್ನುವ ಅರ್ಥದ ಒಂದು ಸುಭಾಷಿತವಿದೆ. ನಮ್ಮ ಪುರಾಣಗಳಲ್ಲಿಯೂ ಶಿಬಿಚಕ್ರವರ್ತಿಯು ತನ್ನನ್ನು ಆಶ್ರಯಿಸಿ ಬಂದ ಪಾರಿವಾಳದ ಪ್ರಾಣ ಉಳಿಸಲು ತನ್ನ ದೇಹದ ಭಾಗವನ್ನೇ ಕತ್ತರಿಸಿಕೊಟ್ಟದ್ದು, ಜೀಮೂತವಾಹನನು ತಾನೇ ಆಹಾರವಾಗಲು ಹೋಗಿ ಬಂಡೆಗಲ್ಲಿನ ಮೇಲೆ ಮಲಗಿದ್ದು, ಬಲಿಚಕ್ರವರ್ತಿಯು ಮೂರುಹೆಜ್ಜೆ ದಾನ ಬೇಡಿದ ವಾಮನನಿಗೆ ಭೂಮಿ, ಆಕಾಶಕ್ಕೆ ಒಂದೊಂದು ಪಾದವೂರಿದ ನಂತರ ಮೂರನೇ ಹೆಜ್ಜೆಯೂರಲು ತನ್ನ ತಲೆಯನ್ನೇ ತೋರಿಸಿದ್ದು..... ಮುಂತಾದ ಆಕರ್ಷಕ ಹಾಗೂ ರೋಚಕ ಕಥೆಗಳಿವೆ!

‘ದಾನ' ಎನ್ನುವ ಕ್ರಿಯೆ ಎಲ್ಲಾ ಧರ್ಮಗಳಲ್ಲಿಯೂ ಮಹತ್ತರವಾದ ಸ್ಥಾನವನ್ನು ಪಡೆದುಕೊಂಡಿದೆ. ಸಾ0ಪ್ರದಾಯಿಕವಾಗಿ ಆಚರಿಸುವ ಕೆಲವು ಹಬ್ಬಗಳಲ್ಲಿ ದಾನದ್ದೇ ಪ್ರಮುಖ ಭಾಗವಾಗಿರುತ್ತದೆ. ಈಗಿನ ದಿನಗಳಲ್ಲಿ ಭಿಕ್ಷುಕರಿಗೆ, ದೀನರಿಗೆ, ಅಸಹಾಯಕರಿಗೆ, ಧಾರ್ಮಿಕ ಕಾರ್ಯಗಳಿಗೆ, ಸಾಮಾಜಿಕ ಉದ್ದೇಶಗಳಿಗೆ..... ನೀಡುವುದಲ್ಲದೇ ರಕ್ತದಾನ, ನೇತ್ರದಾನ, ಮೂತ್ರಪಿಂಡದಾನ, ದೇಹದಾನ, ಅಂಗಾಂಶದಾನ.....ಮುಂತಾದ ದಾನಗಳಿಂದ ದಾನದ ವೈಶಾಲ್ಯತೆ ಹೆಚ್ಚುತ್ತಾ ಹೋಗಿದೆ.

ವಿಶ್ವದ ಅತಿದೊಡ್ಡ ಶ್ರೀಮಂತರು ಈಗ ತಮ್ಮ ಸಂಪತ್ತಿನ ಸ್ವಲ್ಪ ಭಾಗವನ್ನು ದಾನರೂಪದಲ್ಲಿ ಕೊಡಲು ಮನಸ್ಸು ಮಾಡಿ ಪರಸ್ಪರ ಅಭಿಪ್ರಾಯ ಸಂಗ್ರಹದಲ್ಲಿ ತೊಡಗಿದ್ದಾರೆ ಎಂದು ಪತ್ರಿಕೆಯಲ್ಲಿ ಸುದ್ದಿಯಾಗಿತ್ತು.

ದಾನದ ಬಗ್ಗೆ ಖಲೀಲ್ ಗಿಬ್ರಾನ್ ತಮ್ಮ ‘ಪ್ರವಾದಿ'ಯಲ್ಲಿ ಈ ರೀತಿ ಹೇಳುತ್ತಾರೆ,

‘ನೀವು ನಿಮ್ಮ ಸ್ವತ್ತುಗಳೊಳಗಿಂದ ಕೊಡುವುದಾದಲ್ಲಿ ಅಲ್ಪವಾದುದನ್ನೇ ಕೊಟ್ಟಂತಾಗುವುದು.ನೀವು ನಿಮ್ಮನ್ನೇ ಕೊಟ್ಟುಕೊಂಡಾಗ ಮಾತ್ರ ನಿಜವಾದ ಕೊಡುಗೆಯಾಗುವುದು. ಏಕೆಂದರೆ ನಿಮ್ಮ ಸ್ವತ್ತುಗಳೆಂದರೇನು? ನಾಳಿಗೆ ನಿಮಗೆ ಬೇಕಾಗಬಹುದೆಂಬ ಭಯದಿಂದ ಕಾದಿಟ್ಟುಕೊಂಡ ಮತ್ತು ಉಳಿಸಿಕೊಂಡ ವಸ್ತುಗಳೇ ಅವು. ಮತ್ತೆ ನಾಳೆ!

ಪುಣ್ಯಕ್ಷೇತ್ರದ ತೀರ್ಥಯಾತ್ರೆಗೆ ಹೊರಟಿರುವ ಯಾತ್ರಿಕರ ಹಿಂದೆ ಹಿಂದೆ ಹೊರಟಿರುವ ಅತಿ ಚತುರವಾದ ನಾಯಿಯು ನಾಳೆ ತನಗೆ ಪ್ರಯೋಜನ ಬಂದೀತೆಂದು ಜಾಡಿಲ್ಲದ ಉಸುಕಿನಲ್ಲಿ ಎಲುವುಗಳನ್ನು ಮುಚ್ಚಿಟ್ಟಲ್ಲಿ ನಾಳೆ ಅದು ಅವುಗಳ ಪ್ರಯೋಜನವನ್ನು ಹೊಂದೀತೆ?........ಬೇಡಿದಾಗ ಕೊಡುವುದು ಒಳ್ಳೆಯದೇ; ಆದರೆ ಬೇಡದಿದ್ದಾಗ ಕೂಡ ತಿಳಿದು ಕೊಡುವುದು ಅದಕ್ಕೂ ಒಳ್ಳೆಯದು. ಕೊಡುಗೈಯವನಿಗೆ ತನ್ನ ಕೊಡುಗೆಗಿಂತ ಕೊಡುಗೆಯನ್ನು ಸ್ವೀಕರಿಸುವವರನ್ನು ಶೋಧಿಸುವುದೇ ಹೆಚ್ಚು ಆನಂದದಾಯಕವಾಗಿದೆ. ನೀವು ಉಳಿಸಿಟ್ಟುಕೊಳ್ಳಬೇಕೆಂದಿರುವುದು ಏನಾದರೂ ಇದೆಯೆ? ಒಂದಿಲ್ಲೊದುದಿನ ನಿಮ್ಮಲ್ಲಿದ್ದುದೆಲ್ಲವನ್ನೂ ಕೊಡಲೇಬೇಕಾಗುವುದು! ಆದುದರಿಂದ ಈಗಲೇ ಕೊಟ್ಟುಬಿಡಿ; ಅಂದರೆ ಕೊಡುವ ಸಂಧಿ ನಿಮ್ಮದೇ ಆಗುವುದು. ನಿಮ್ಮ ಉತ್ತರಾಧಿಕಾರಿಗಳದಾಗುವುದಿಲ್ಲ.'

ದಾನಿಗಳ ವಿಧಗಳನ್ನು, ವೈವಿಧ್ಯಗಳನ್ನು ಗಿಬ್ರಾನ್ ಬಹಳ ಚೆನ್ನಾಗಿ ವಿಂಗಡಿಸಿದ್ದಾರೆ. ‘ತಮ್ಮಲ್ಲಿರುವ ಅಮಿತದೊಳಗಿಂದ ಅಲ್ಪವನ್ನು ಮಾತ್ರ ಕೊಡುವವರು ಕೆಲವರಿದ್ದಾರೆ, ಅವರು ಹೆಸರಿಗಾಗಿ ಮಾತ್ರ ಕೊಡುವವರಾಗಿದ್ದಾರೆ. ಅವರ ಈ ಒಳಬಯಕೆ ಅವರ ಕೊಡುಗೆಯನ್ನೇ ಕಹಿಯನ್ನಾಗಿ ಮಾಡುತ್ತದೆ. ಮತ್ತೆ ಕೆಲವರಲ್ಲಿ ಅಲ್ಪ ಮಾತ್ರವಿರುತ್ತದೆ, ಅವರು ಅದೆಲ್ಲವನ್ನೂ ಕೊಟ್ಟುಬಿಡುತ್ತಾರೆ. ಇವರೇ ಬಾಳಿನಲ್ಲಿ ಶ್ರದ್ಧೆಯಿರುವವರು. ಬಾಳಿನ ವಿಫುಲ ಔದಾರ್ಯದಲ್ಲಿ ನಂಬಿಕೆ ಇರುವವರು. ಇಂಥಾ ಇವರ ಕೋಶ ಎಂದೂ ಬರಿದಾಗುವುದಿಲ್ಲ.

ಆನಂದದಿಂದ ಕೊಡುವವರು ಹಲವರಿದ್ದಾರೆ, ಆನಂದವೇ ಅವರ ಕೊಡುಗೆಯ ಪ್ರತಿಫಲವಾಗಿದೆ. ಕೊರಗಿನಿಂದ ಕೊಡುವ ಹಲವರಿದ್ದಾರೆ. ಆ ಕೊರಗಿನಿಂದಲೇ ಅವರು ಪುನೀತರಾಗುತ್ತಾರೆ. ಇನ್ನೂ ಹಲವು ಕೊಡುಗೆದಾರರಿದ್ದಾರೆ; ಅವರಿಗೆ ಈ ಕೊಡುವುದರಲ್ಲಿ ದುಃಖವೆನಿಸುವುದಿಲ್ಲ, ಸಂತೋಷದ ಅಪೇಕ್ಷೆಯಿರುವುದಿಲ್ಲ ಅಥವಾ ಅದೊಂದು ಪುಣ್ಯಕಾರ್ಯವೆಂವ ಅರಿವೂ ಇರುವುದಿಲ್ಲ. ಕೊಳ್ಳದೊಳಗಿನ ಅಡಿವೆ ಮಲ್ಲಿಗೆಯ ಕಂಟಿ, ತನ್ನ ಮಲ್ಲಿಗೆಗಳ ಕಂಪನ್ನು ಸುತ್ತೆಲ್ಲಾ ಹರಡುತ್ತಿರುವಂತೆ ಅವರು ದಾನ ಮಾಡುತ್ತಿರುತ್ತಾರೆ. ಇಂಥವರ ಮೂಲಕವೇ ದೇವರು ದನಿಸುತ್ತಾನೆ; ಅವರ ಕಂಗಳ ಹಿಂದೆ ನಿಂತು ಭೂಮಿಯ ಮೇಲೆ ತನ್ನ ಮುಗುಳುನಗೆ ಬೀರುತ್ತಾನೆ.'

ನಮ್ಮಲ್ಲಿ ಸತ್ಪಾತ್ರರಿಗೆ ಮಾತ್ರ ದಾನ ಮಾಡಬೇಕೆಂಬ ನಂಬಿಕೆ ಇದೆ. ಈ ಬಗ್ಗೆ ಗಿಬ್ರಾನ್ ಹೀಗೆ ಹೇಳುತ್ತಾರೆ,

‘ನೀವು ಆಗಾಗ ಅನ್ನುತ್ತಿರುವಿರಿ: ‘ನಾನು ಕೊಡುವೆನು; ಆದರೆ ಸತ್ಪಾತ್ರರಿಗೆ ಮಾತ್ರ ಕೊಡುವೆ' ನಿಮ್ಮ ತೋಟದಲ್ಲಿಯ ಗಿಡಮರಗಳು ಹಾಗೆನ್ನುವುದಿಲ್ಲ. ತಾವು ಬದುಕಬೇಕೆಂದು ಅವು ಕೊಡುತ್ತವೆ. ಏಕೆಂದರೆ ಉಳಿಸಿಟ್ಟುಕೊಳ್ಳುವುದೇ ವಿನಾಶ!

ತನ್ನ ಹಗಲಿರುಳುಗಳನ್ನು ಸ್ವೀಕರಿಸಲು ಯಾವನು ಪಾತ್ರನೋ ಅವನು ಉಳಿದುದನ್ನಲ್ಲಾ ನಿಮ್ಮಿಂದ ಸ್ವೀಕರಿಸಲು ಪಾತ್ರನಿದ್ದಾನೆ. ಜೀವನ ಸಾಗರದ ನೀರನ್ನು ಕುಡಿಯಲು ಯಾವನು ಪಾತ್ರನೋ ಅವನೇ ನಿಮ್ಮ ಚಿಕ್ಕ ಝರಿಯಿಂದ ತನ್ನ ಪಾತ್ರೆಯನ್ನು ತುಂಬಿಕೊಳ್ಳಲು ಪಾತ್ರನಿದ್ದಾನೆ. ಕೊಡುಗೆಯನ್ನು ಧೈರ್ಯದಿಂದ, ನಿಶ್ಶಂಕೆಯಿಂದ, ಅಲ್ಲಾ ಔದಾರ್ಯದಿಂದ ಸ್ವೀಕರಿಸುವುದಕ್ಕಿಂತ ಹೆಚ್ಚಿನ ಪಾತ್ರತೆ ಯಾವುದು? ಜನರು ತಮ್ಮ ಎದೆ ಬಿಚ್ಚಿ, ಅಭಿಮಾನ ತೊರೆದು, ಬತ್ತಲೆಯಾಗಿ, ಲಜ್ಜಾಹೀನ ಸ್ಥಿತಿಯಿಂದ ತಮ್ಮ ಪಾತ್ರತೆಯ ಸಿದ್ಧತೆಯನ್ನು ನಿಮಗೆ ತೋರಿಸಲು ನೀವಾರು? ಕೊಡುಗೆಗಾರರಾಗಲು ನೀವೇ ಸ್ವತಃ ಪಾತ್ರರಿದ್ದೀರಾ? ಎಂಬುದನ್ನು ಮೊಟ್ಟಮೊದಲು ನೀವೇ ನೋಡಿಕೊಳ್ಳಿರಿ. ಏಕೆಂದರೆ ಬದುಕಿಗೆ ಬದುಕೇ ದಾನಮಾಡುವುದು ನಿಜವಾದುದು. ದಾನಿಯೆಂದು ತಿಳಿದುಕೊಳ್ಳುವ ನೀವು ಕೇವಲ ಸಾಕ್ಷೀಸ್ವರೂಪ.

ಮತ್ತೆ ಸ್ವೀಕರಿಸುವ ಜನರೇ ನೀವೆಲ್ಲರೂ ಸ್ವೀಕರಿಸುವವರೇ. ನೀವು ಕೃತಜ್ಞತಾಭಾವದ ಭಾರದಿಂದ ಬಾಗಬೇಡಿರಿ. ಹಾಗೆ ಮಾಡಿದಿರಾದರೆ ನಿಮಗೂ ನಿಮ್ಮ ದಾತೃಗಳಿಗೂ ನೀವೇ ನೊಗ ಹೇರಿದಂತಾಗುವುದು. ಆದುದರಿಂದ ಪಕ್ಕ ಪಡೆದ ಹಕ್ಕಿಯಂತೆ ದಾನವನ್ನು ಪಡೆದು ದಾತೃವಿನೊಡನೆ ಮೇಲಕ್ಕೇರಿರಿ. ಏಕೆಂದರೆ ನಿಮ್ಮ ಋಣದ ಅತಿಚಿಂತನವನ್ನು ಮಾಡುವುದೆಂದರೆ, ಉದಾರ ಹೃದಯೀ ವಸುಂಧರೆಯಂಥಾ ತಾಯಿ, ಪರಮೇಶ್ವರನಂಥಾ ತಂದೆ ಇದ್ದ ದಾತೃವಿನ ಉದಾರತೆಯ ಬಗ್ಗೆ ಶಂಕೆ ತೋರಿಸಿದಂತೆಯೇ ಸರಿ.'

ದಾನದ ಬಗೆಗಿನ ಖಲೀಲ್ ಗಿಬ್ರಾನ್ ರವರ ಈ ಮಾತುಗಳನ್ನು ಅರ್ಥಮಾಡಿಕೊಂಡು ನಮ್ಮದಾಗಿಸಿಕೊಳ್ಳಲು, ಕಾರ್ಯರೂಪಕ್ಕೆ ತರಲು ನಾವು ಪ್ರಬುದ್ಧತೆಯನ್ನು ಸಾಧಿಸಬೇಕಿದೆ

8 comments:

  1. ದಾನದ ಬಗೆಗೆ ಗಿಬ್ರಾನನ ವಿಚಾರಗಳು ನಮ್ಮನ್ನು ಆಲೋಚನೆಗೆ ಹಚ್ಚುತ್ತವೆ. ಗಿಬ್ರಾನನನ್ನು ನಮಗೆ ಪರಿಚಯಿಸುತ್ತಿರುವ ನಿಮಗೆ ಧನ್ಯವಾದಗಳು.

    ReplyDelete
  2. ಸತ್ಪಾತ್ರರಿಗೆ ಮಾತ್ರ ದಾನ - hosa vichaara lahariyannu aritantaayitu. Daanada bagge Gibraanara vishleshane tumba arthavattagide. Tilisiddakke dhanyavaadagalu.

    ananth

    ReplyDelete
  3. Prbhamani avre,

    Lekhhana chennagide, Gibranra kelavu quotes galannu odidde, nimma lekhana gibran bagge hecchina vivarane needitu, chennagide..

    ReplyDelete
  4. unnatha vicharagalu :) ishtavayithu :)

    ReplyDelete
  5. ಪ್ರಭಾ,
    ನಿಮ್ಮ ಲೇಖನ ನಿಜಕ್ಕೂ ಯೋಚನೆಗೀಡು ಮಾಡುವಂತಿದೆ. ದಾನ ಎಂಬುದು ಮಹಾದಾನ ಎಂದು ಹಿಂದಿನಿಂದಲೂ ರೂಢಿಸಿಕೊಂಡು ಬಂದಂತಹದು.... ಗಿಬ್ರಾನರು ತಮ್ಮ ವಿಚಾರವಾದಲ್ಲಿ ತಿಳಿಸಿದ್ದನ್ನು ನಮ್ಮೆಲ್ಲರ ಮುಂದಿಟ್ಟಿದ್ದೀರಿ ಧನ್ಯವಾದಗಳು ನಿಮಗೆ

    ReplyDelete
  6. vashya daana maduvudu naanu tilidukondidde. tamma lekhanada geebrana taarkikagalu nannannu eega tivra chintanegolapadisive.... taavennuvadu nija

    ReplyDelete