Saturday, April 2, 2011

ಮನದ ಅಂಗಳದಿ..................೩೩. ಅವಕಾಶ

ಚಲಿಪಾರಣ್ಯದ ಪಕ್ಷಿಗೊಂದು ತರುಗೊಡ್ಡಾಗಲ್ ಫಲಂ ತೀವಿದಾ|
ಮರಗಳ್ ಪುಟ್ಟವೆ ಪುಷ್ಪಮೊಂದು ಬಳಲಲ್ ಭೃಂಗಕ್ಕೆ ಪೂವಿಲ್ಲವೆ||
ನಿರುತಂ ಸತ್ಕವಿಗೋರ್ವ ಗರ್ವಿ ಪುಸಿಯುತ್ತಂ ಲೋಭಿಯಾಗಲ್ ನಿಜಂ|
ಧರೆಯೋಳ್ ದಾತರು ಪುಟ್ಟರೇ ಹರಹರಾ ಶ್ರೀ ಚನ್ನ ಸೋಮೇಶ್ವರಾ||

‘ಕಾಡಿನಲ್ಲಿ ಸುತ್ತುತ್ತಿರುವ ಪಕ್ಷಿಗೆ ಆ ಕಾಡಿನಲ್ಲಿರುವ ಒಂದು ಮರವು ಹಣ್ಣು ಬಿಡದೆ ಹೋದರೆ ಹಣ್ಣುಳ್ಳ ಬೇರೆ ಮರಗಳು ದೊರೆಯುವುದಿಲ್ಲವೇ? ಗಿಡದಲ್ಲಿ ಒಂದು ಹೂ ಬಾಡಿಹೋದರೆ ತುಂಬಿಗೆ ಮಧುವಿರುವ ಬೇರೆ ಹೂ ದೊರೆಯುವುದಿಲ್ಲವೆ? ಹಾಗೆಯೇ ಯಾವನೋ ಒಬ್ಬನು ಗರ್ವದಿಂದ ಸತ್ಕವಿಗೆ ಸುಳ್ಳು ಹೇಳುತ್ತ ಜಿಪುಣನಾಗಿದ್ದರೆ ಆ ಕವಿಗೆ ದ್ರವ್ಯ ಸಹಾಯ ಮಾಡುವವರು ಲೋಕದಲ್ಲಿ ಯಾರೂ ಸಿಕ್ಕುವುದೇ ಇಲ್ಲವೇ?' ಎನ್ನುವ ತಾತ್ಪರ್ಯದ ಈ ಸೋಮೇಶ್ವರ ಶತಕವನ್ನು ನಾನು ಬಹುಷಃ ೭ನೇ ತರಗತಿಯಲ್ಲಿ ಓದಿದ ನೆನಪು. ಅಷ್ಟೇ ಅಲ್ಲ ಕೆಲವು ಸಂದರ್ಭಗಳಲ್ಲಿ ಇದು ನನಗೆ ಆತ್ಮವಿಶ್ವಾಸವನ್ನೂ ತುಂಬಿದೆ. ಆ ಕಾಲದಲ್ಲಿ ರಾಜಾಶ್ರಯ ಅಥವಾ ಧನಿಕರ ಆಶ್ರಯವಿಲ್ಲದೇ ಒಬ್ಬ ಕವಿಗೆ ಬದುಕುವುದು ಕಷ್ಟಕರವಾಗಿತ್ತು ಎನ್ನುವುದನ್ನು ತಿಳಿಸುವುದರೊಟ್ಟಿಗೇ ಯಾರೋ ಒಬ್ಬ ಅಹಂಕಾರಿಯು ಆಶ್ರಯ ಕೊಡದಿದ್ದ ಮಾತ್ರಕ್ಕೆ ಭೂಮಿಯಮೇಲೆ ಆಶ್ರಯದಾತರು ಹುಟ್ಟುವುದೇ ಇಲ್ಲವೆ? ಎಂಬ ಪ್ರಶ್ನೆಯ ಮೂಲಕ ಕವಿಗೆ ಅಭಯವನ್ನೂ ನೀಡುವಂತಿದೆ.

ಬರೆಯುವುದರಿಂದಲೇ ಬದುಕುತ್ತೇನೆ ಎನ್ನುವ ಸಂಕಲ್ಪದೊಂದಿಗೆ ಬದುಕನ್ನು ಆರಂಭಿಸಿ ಅನೇಕ ಸಂಕಷ್ಟಗಳನ್ನು ಎದುರಿಸಿ ಜೀವನ ಯಾತ್ರೆಯನ್ನು ಸಾರ್ಥಕವಾಗಿ ಪೂರೈಸಿದ ಮಹನೀಯರ ಬಗ್ಗೆ ತಿಳಿದಿದ್ದೇವೆ. ಆದರೆ ಇತ್ತೀಚೆಗೆ ಜೀವನವನ್ನು ಸುಗಮವಾಗಿ ಸಾಗಿಸಲು ಒಂದು ವೃತ್ತಿಯನ್ನು ಆಶ್ರಯಿಸಿ, ಪ್ರವೃತ್ತಿಯನ್ನು ನಮ್ಮ ಸಂತಸಕ್ಕಾಗಿಯೇ ಅಲ್ಲದೇ ಸಮಾಜದಲ್ಲಿ ಉತ್ತಮ ಹೆಸರನ್ನು ಗಳಿಸಲು ರೂಢಿಸಿಕೊಳ್ಳುತ್ತಲಿದ್ದೇವೆ. ನಮ್ಮ ಕನಸು ಏನಾಗಿರುತ್ತದೋ ಅದನ್ನೇ ಹೊಂದಲು ಪ್ರಯತ್ನಿಸುತ್ತೇವೆಯಾದ್ದರಿಂದ ನಮ್ಮ ದೃಷ್ಟಿ ಪ್ರಶಸ್ತಿಗಳು, ಸನ್ಮಾನ, .....ಗಳ ಕಡೆಗೆ ಕೇಂದ್ರೀಕೃತವಾಗಿ ಮೂಲತಃ ನಮ್ಮ ಹವ್ಯಾಸದಿಂದ ದೊರೆಯಬಹುದಾದ ಆನಂದ ನಗಣ್ಯವಾಗಲಾರಂಭಿಸುತ್ತದೆ. ಇದರೊಟ್ಟಿಗೇ ಸ್ಪರ್ಧೆ ಏರ್ಪಟ್ಟು ಪ್ರಾರಂಭದಲ್ಲಿದ್ದ ಪರಸ್ಪರ ಸಹಕಾರ, ಪ್ರೋತ್ಸಾಹಗಳೆಲ್ಲವೂ ಮರೆಯಾಗಿ ನಮ್ಮನ್ನು ನಾವೇ ವಿಶೇಷವಾಗಿ ಗೌರವಿಸಿಕೊಳ್ಳುತ್ತಾ ‘ಅಹಂ'ಭಾವವನ್ನು ಪೋಷಿಸಲಾರಂಭಿಸುತ್ತೇವೆ.

‘ಅವಕಾಶ'ಕ್ಕಾಗಿ ನಡೆಯುವ ಹೋರಾಟದಲ್ಲಿ ಪ್ರಭಲರದೇ ಮೇಲುಗೈಯಾಗಿಬಿಡುವುದು ಸರ್ವೇಸಾಮಾನ್ಯವಾಗಿದೆ. ತಮ್ಮತನವನ್ನೇ ಮರೆತು ಇರುವ ಅವಕಾಶಗಳೆಲ್ಲಾ ತಮಗಾಗೇ ರೂಪುಗೊಂಡಿದ್ದು ಎನ್ನುವಂಥಾ ಅವಕಾಶವಾದಿಗಳ ಪಡೆಯೇ ಇರುತ್ತದೆ. ತಮಗೆ, ತಮ್ಮವರಿಗೆ ಹೊಂದುವಂಥಾ ಅವಕಾಶಗಳನ್ನು ಸೃಷ್ಟಿಮಾಡುವವರನ್ನೂ ಕಾಣುತ್ತೇವೆ!

‘ಅವಕಾಶ' ವಂಚಿತ ಪ್ರತಿಭೆಗಳೇ ನಿರಾಶರಾಗದಿರಿ. ಇಲ್ಲಿ ಸಿಗದ ಅವಕಾಶ ಮತ್ತೆಲ್ಲಿಯೂ ಸಿಗಲಾರದೆಂದು ಚಿಂತಿಸದಿರಿ. ಆ ‘ಅವಕಾಶ'ವೆನ್ನುವುದಾದರೂ ಯಾವುದು? ಕೇವಲ ಕೀರ್ತಿಗಾಗಿ ಹಪಹಪಿಯೇ? ಕೀರ್ತಿಯಿಂದ ಆನಂದ ದೊರೆಯುವುದೆ? ಆತ್ಮೋನ್ನತಿಯಾಗುವುದೇ? ನಮ್ಮ ರಾಷ್ಟ್ರ ಕವಿ ಕುವೆಂಪುರವರು ‘ಕೀರ್ತಿಶನಿ ತೊಲಗಾಚೆ' ಎಂದಿರುವುದು ಈ ಕಾರಣಕ್ಕೇ ಇರಬಹುದು.

ನನ್ನ ‘ಗರಿಕೆ' ಕವನದಲ್ಲಿ ‘ಒಂದಾದರೂ ಅವಕಾಶ ಸಿಕ್ಕರೆ ಆಕಾಶಕ್ಕೇರುವೆನೆಂದು ಪರಿತಪಿಸುತ್ತಾ.....'ಎನ್ನುವ ಸಾಲಿದೆ. ಸಾಮಾನ್ಯವಾಗಿ ನಮ್ಮೆಲ್ಲರ ಹಂಬಲವೂ ಅದೇ ಆಗಿರುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿ ‘ನನ್ನನ್ನೇನಾದರೂ ಓದಿಸಿದ್ದರೆ ದೊಡ್ಡ ಆಫೀಸರೇ ಆಗ್ತಿದ್ದೆ' ಎಂದು ಕೊರಗುವುದು, ರಾಜಕಾರಿಣಿ ‘ನನಗೇನಾದರೂ ಟಿಕೆಟ್ ಸಿಕ್ಕಿದ್ದರೆ ಮುಖ್ಯಮಂತ್ರಿಯೇ ಆಗುತ್ತಿದ್ದೆ.' ಎನ್ನುವುದು..... ಇವೆಲ್ಲಾ ಸಾದಾರಣವಾಗಿ ಕೇಳುವ ಮಾತುಗಳೇ ಆಗಿರುತ್ತವೆ. ಏನಿದೆಯೋ ಅದನ್ನು ಬಿಟ್ಟು ಇಲ್ಲದುದಕ್ಕಾಗಿ, ಕಳೆದು ಹೋದ ಕಾಲಕ್ಕಾಗಿ ಚಿಂತಿಸುವುದು, ಯಾರಿಂದಲೋ ಈ ಪರಿಸ್ಥಿತಿ ಉಂಟಾಯಿತೆಂದು ಹಲುಬುವುದು ಕೆಲವೊಮ್ಮೆ ನಮ್ಮ ಬಾಲಿಷತನವಾಗುತ್ತದೆ. ನನ್ನದಾಗಬೇಕಾಗಿದ್ದ ಅವಕಾಶವನ್ನು ನನಗೆ ನೀಡಲಿಲ್ಲವೆ? ನನ್ನದೇ ಆಗಬೇಕೆಂದುಕೊಳ್ಳಲು ನನ್ನಲ್ಲಿರುವ ಯೋಗ್ಯತೆಯಾದರೂ ಏನು? ತಾನೊಬ್ಬನೇ ದಾತನೆಂದು ಭಾವಿಸಿದ್ದರೆ ಅದು ಆ ವ್ಯಕ್ತಿಯ ಅಲ್ಪತನವೇ ಆದೀತು. ನಿಜವಾದ ಸಾಮರ್ಥ್ಯ ನನ್ನಲ್ಲಿದ್ದರೆ ಇದಕ್ಕಿಂತಲೂ ಉತ್ತಮವಾದ ಅವಕಾಶ ನನಗಾಗೇ ಕಾದಿರಲೂ ಬಹುದು. ಎಂದು ಅವಕಾಶದ ಬಗ್ಗೆಯೇ ಚಿಂತಿಸುತ್ತಾ ನಮ್ಮೊಳಗಿನ ಅಮೂಲ್ಯತೆಯನ್ನು ಕಡೆಗಣಿಸುವುದೂ ಬೇಡ.

ಈ ಬದುಕೇ ನಮಗೊಂದು ಅವಕಾಶವಾಗಿದೆ. ಈ ಬದುಕಿನಲ್ಲಿ ನಾವು ಏನನ್ನಾದರೂ ಸಾಧಿಸಬಹುದು. ಈ ವಿಶ್ವ ವಿಶಾಲವಾಗಿದೆ. ನಮ್ಮ ಸುತ್ತಮುತ್ತಲಿರುವ ಉನ್ನತ ಸ್ಥಾನದಲ್ಲಿರುವವರು ನಮಗೆ ದೊರೆಯಬಹುದಾದ ಅವಕಾಶವನ್ನು ನೀಡಲಿಲ್ಲವೆಂದು ಕೊರಗುವುದು ಬೇಡ. ನಮ್ಮ ವೃತ್ತಿಯನ್ನೋ, ಪ್ರವೃತ್ತಿಯನ್ನೋ ನಮ್ಮ ಮನಸ್ಸಿಗೆ ಒಪ್ಪುವಂತೆ ಮಾಡುತ್ತಾ ಅದರಲ್ಲಿ ದೊರೆಯುವ ಆತ್ಮ ಸಂತೋಷವನ್ನು ಹೊಂದುತ್ತಾ ಮುನ್ನಡಿಯಿಡೋಣ. ಒಂದಲ್ಲಾ ಒಂದು ದಿನ ನಮ್ಮದಾಗಲೇ ಬೇಕಾದ ಅವಕಾಶ ನಮ್ಮನ್ನರಸುತ್ತಾ ಬಂದೇಬರುತ್ತದೆ. ಆದರೆ ಆ ದಿನಕ್ಕಾಗಿ ಕಾಯುತ್ತಾ ಕೂರುವುದು ಬೇಡ.

8 comments:

  1. ಸಮಾಧಾನದ ಬದುಕಿಗಾಗಿ ಅವಶ್ಯವಾದ ಅತ್ಯುತ್ತಮ ನೀತಿಯಿದು.

    ReplyDelete
  2. ಮೇಡಂ;ಉತ್ತಮ ಲೇಖನ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.

    ReplyDelete
  3. prabhamaniyavare, sanmaanada hinde biddavarige samaadhaana marichike annodanna bahala chennaagi nirupisiddira,dhanyavaadagalu.

    ReplyDelete
  4. ಅವಕಾಶಗಳು ತುಂಬ ಇವೆ ಈ ಪ್ರಪಂಚದಲ್ಲಿ,ಅವುಗಳನ್ನು ಉಪಯೋಗಿಸಿಕೊಳ್ಳುವ ರೀತಿ ಬಹಳ ಮುಖ್ಯ...
    ಲೇಖನ ಚೆನ್ನಾಗಿದೆ ಮೇಡಂ

    ReplyDelete
  5. ತು೦ಬ ಚೆನ್ನಾಗಿ ಬರಿತೀರ..ಮು೦ದುವರೆಸಿ.

    ReplyDelete
  6. ಒಳ್ಳೆಯ ಲೇಖನ ಕೊಟ್ಟಿದ್ದೀರಿ, ಧನ್ಯವಾದಗಳು.

    ReplyDelete
  7. iruvadanna anubhavisuva bagge maarmikavaagi heliddiraa... chendada baraha.

    ReplyDelete