Saturday, April 30, 2011

ಮನದ ಅಂಗಳದಿ.........೩೮. ಪರಿವರ್ತನೆಯ ಐದು ಹೆಜ್ಜೆಗಳು

ಬದುಕಿನಲ್ಲಿ ಪರಿವರ್ತನೆಯೆಂದರೆ ಕೇವಲ ಶಾರೀರಿವಾದುದಕ್ಕೆ ಸೀಮಿತವಲ್ಲ. ಶರೀರ, ಮನಸ್ಸು, ಆತ್ಮ ಈ ಮೂರನ್ನೂ ಏಕತ್ರಗೊಳಿಸುವ, ಸಾರ್ವಕಾಲಿಕಗೊಳಿಸುವ ಅನ್ವಯದ ಸಮಗ್ರ ಸೂತ್ರ ಹಾಗೂ ಸಾರ್ವಕಾಲಿಕ ತಂತ್ರಗಳ ಸಮುಚ್ಛಯ.
*ರಾಬಿನ್ ಶರ್ಮ (The Monk Who Sold His Ferrary)

ನಾನು ಚಿಕ್ಕವಳಿದ್ದಾಗ ಅಕ್ಕ ತಾನು ಓದಿದ ನಂತರ ಒಳ್ಳೆಯದಾಗಿದೆ ಎನಿಸಿದ ಪುಸ್ತಕವನ್ನು ನನಗೆ ಓದಲು ಕೊಡುತ್ತಿದ್ದಳು. ಈಗ ನನ್ನ ಮಗಳು ಈ ರೀತಿಯಾಗಿ ನನಗೆ ಓದಲು ಕೊಟ್ಟ ಪುಸ್ತಕಗಳಲ್ಲಿ ನನ್ನನ್ನು ಬಹಳವಾಗಿ ಆಕರ್ಷಿಸಿದ, ನನ್ನ ಜೀವನ ಶೈಲಿಯನ್ನೇ ಬದಲಾಯಿಸಿದ ಪುಸ್ತಕ ರಾಬಿನ್ ಶರ್ಮ ಅವರ ‘The Monk Who Sold His Ferrary' ವೃತ್ತಿ ಜೀವನದಲ್ಲಿ ಬಹಳ ಗೊಂದಲವಿದ್ದು ನನ್ನಿಂದ ನಾನೇ ದೂರವಾಗುತ್ತಿದ್ದೇನೇನೋ ಎನಿಸುತ್ತಿದ್ದ, ಅನಾರೋಗ್ಯ ಸಮಸ್ಯೆಗಳಿಂದ ಮನಃಶಾಂತಿಯನ್ನೇ ಕಳೆದುಕೊಂಡಿದ್ದ ಸಮಯದಲ್ಲಿ ಈ ಪುಸ್ತಕವನ್ನು ಓದಿದೆ. (ಈಗ ಅದರ ಕನ್ನಡ ಆವೃತ್ತಿ ‘ಫೆರಾರಿ ಮಾರಿದ ಫಕೀರ'ವನ್ನೂ ತಂದುಕೊಟ್ಟಿದ್ದಾಳೆ.) ಅದರಲ್ಲಿರುವ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಬದುಕು ಸಹನಶೀಲವೆನಿಸಿತು. ಈ ಪುಸ್ತಕದ ಬಗ್ಗೆ ಎಲೈನ್ ಹೇಮ್ಸ್ ಹೀಗೆ ಹೇಳುತ್ತಾರೆ, ‘ರಾಬಿನ್ ಶರ್ಮ ಅವರು ಪರಿವರ್ತನೆಯ ಶಾಸ್ತ್ರೀಯ ಸಾಧನಗಳನ್ನು ಸರಳವಾದ ಜೀವನ ದರ್ಶನವಾಗಿ ರೂಪಿಸಿ ಅತ್ಯಾಕರ್ಷಕ ಕೃತಿಯನ್ನು ಸೃಷ್ಟಿಸಿದ್ದಾರೆ. ನಿಮ್ಮ ಜೀವನ ಕ್ರಮವನ್ನೇ ಬದಲಾಯಿಸಬಲ್ಲ ಹಾಗೂ ಸಂತೋಷ ನೀಡುವ ಪುಸ್ತಕ.'

ಇದು ಬದುಕಿನ ಸಮತೋಲನವನ್ನು ಕಳೆದುಕೊಂಡು, ಆಧ್ಯಾತ್ಮಿಕ ಬಿಕ್ಕಟ್ಟನ್ನು ಎದುರಿಸಿದ ಪ್ರತಿಭಾವಂತ ಲಾಯರ್ ಒಬ್ಬನ ಅಸಾಧಾರಣ ಕಥೆ. ವೃತ್ತಿಯ ಅತಿಸ್ಪರ್ಧೆಯ ಅಸಹನೀಯ ಒತ್ತಡಗಳು ಆತನ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಅಸ್ತಿತ್ವವನ್ನೇ ಹಾಳುಗೆಡವಿರುತ್ತದೆ. ಅವುಗಳಿಂದಾಗಿ ಆತನ ದೇಹ ಬಸವಳಿದಿರುತ್ತದೆ. ಮನಸ್ಸು ಭಗ್ನವಾಗಿರುತ್ತದೆ.ಅಂತರಾಷ್ಟ್ರೀಯ ಮಟ್ಟದ ಕ್ರಿಮಿನಲ್‌ಲಾಯರ್ ಎಂಬ ಪ್ರಸಿದ್ಧಿ ಪಡೆಯಲು ಆತ ಪಟ್ಟಿದ್ದ ಅಪಾರ ಶ್ರಮ, ಅಸಹನೀಯ ಒತ್ತಡಗಳು ಅವನ ಅಮೂಲ್ಯ ಅಂತಃಶಕ್ತಿಯನ್ನೇ ಕೆಡವಿಬಿಟ್ಟಿರುತ್ತವೆ. ತೀವ್ರ ಹೃದಯಾಘಾತದ ನಂತರ ಡಾಕ್ಟರು, ‘ಒಂದೋ ವೃತ್ತಿಯನ್ನು ಬಿಡಬೇಕು ಅಥವಾ ಪ್ರಾಣವನ್ನು ಬಿಡಬೇಕು,' ಎನ್ನುವ ಸವಾಲನ್ನು ಎಸೆದಾಗ ಆತ ತನ್ನಲ್ಲಿ ತಾರುಣ್ಯದಲ್ಲಿದ್ದು ಕ್ರಮೇಣ ಕುಂದಿಹೋಗಿದ್ದ ಅಂತಃಶಕ್ತಿಯನ್ನು ಪುನಃ ಜಾಗೃತಗೊಳಿಸಲು ಇದೊಂದು ಸುವರ್ಣಾವಕಾಶವೆಂದು ಭಾವಿಸುತ್ತಾನೆ.

ಈ ಪಾಶ್ಚಿಮಾತ್ಯ ಲಾಯರ್ ಜೂಲಿಯನ್ ತನ್ನ ಎಲ್ಲಾ ಆಸ್ತಿಗಳನ್ನೂ ಮಾರಿ ಪ್ರಾಚೀನ ಸಂಸ್ಕ್ರುತಿಗೆ ಹೆಸರಾದ ಭಾರತಕ್ಕೆ ಜೀವನದ ಸ್ವರೂಪವನ್ನು ಆಮೂಲಾಗ್ರವಾಗಿ ಪರಿವರ್ತನೆಗೀಡುಮಾಡುವ ತಾತ್ವಿಕತೆ ಹಾಗೂ ಅದರ ಅನುಷ್ಟಾನ ವಿಧಾನವನ್ನು ಅರಸಿಕೊಂಡು ಆಧ್ಯಾತ್ಮಿಕ ಯಾತ್ರೆಯನ್ನು ಕೈಗೊಳ್ಳುತ್ತಾನೆ. ಹಿಮಾಲಯದ ತಪ್ಪಲಲ್ಲಿರುವ ಕಾಶ್ಮೀರದಲ್ಲಿ ಹಿಂದೆ ತನ್ನಂತೆಯೇ ಲಾಯರಾಗಿದ್ದು ಈಗ ಸರಳ ಸಾಧು ಜೀವನ ನಡೆಸುತ್ತಿದ್ದ ಯೋಗಿ ಕೃಷ್ಣನ್ ಅವರಿಂದ ಹಿಮಾಲಯದ ಅತ್ಯುನ್ನತ ಸ್ತgಗಳಲ್ಲಿರುವ ‘ಶಿವನ'(ಸಾಕ್ಷಾತ್ಕಾರದ ಓಯಸಿಸ್)ದಲ್ಲಿರುವ ಸಾಧುಗಳು ಬದುಕಿನಲ್ಲಿ ಮಹಾನ್ ಪರಿವರ್ತನೆಯನ್ನು ಮಾಡುವ ಯಾವುದೋ ಒಂದು ವಿಧಾನವನ್ನು ಕಂಡುಹಿಡಿದಿದ್ದಾರೆ ಎಂದು ತಿಳಿಯುತ್ತಾನೆ.

‘ಶಿವನ ಸಾಧುಗಳು ತಮ್ಮ ಜೀವನಧ್ಯೇಯ ಸಾಧನೆಗಾಗಿ ಐದುಹೆಜ್ಜೆಗಳ ಕಾರ್ಯಕ್ರಮವನ್ನು ರೂಪಿಸಿಕೊಂಡಿದ್ದರು. ಅದು ಸರಳವಾಗಿತ್ತು. ಕಾರ್ಯಸಾಧ್ಯವಾಗಿತ್ತು. ಅವು ಹೀಗಿವೆ:

ಮೊದಲನೆಯ ಹೆಜ್ಜೆ- ಪರಿಣಾಮದ ಬಗ್ಗೆ ಸ್ಪಷ್ಟ ಪರಿಕಲ್ಪನೆ ಮಾಡಿಕೊಳ್ಳುವುದು: ತೂಕ ಇಳಿಸಿಕೊಳ್ಳುವುದು ನಮ್ಮ ಗುರಿಯಾದರೆ ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ನಮ್ಮ ತೆಳ್ಳಗಿನ, ಶಕ್ತಿಯುತವಾದ ಶರೀರವನ್ನು ಮನಸ್ಸಿನ ಪಟಲದಲ್ಲಿ ಸೃಷ್ಟಿಸಿಕೊಳ್ಳಬೇಕು. ಈ ಮಾನಸಿಕ ಚಿತ್ರ ಸ್ಪಷ್ಟವಾದಷ್ಟೂ ಪ್ರಕ್ರಿಯೆ ಸಫಲವಾಗುತ್ತದೆ. ಮನಸ್ಸು ಶಕ್ತಿಯ ಬಹುದೊಡ್ಡ ಉಗ್ರಾಣ. ಮನಸ್ಸಿನಲ್ಲಿ ನಡೆಯುವ ಚಿತ್ರದಂತಹ ಸರಳ ಸಂಗತಿ ಉದ್ದೇಶ ಸಾಧನೆಗೆ ರಾಜಮಾರ್ಗವನ್ನು ತೆರೆಯುತ್ತದೆ.

ಎರಡನೆಯ ಹೆಜ್ಜೆ- ನಮ್ಮ ಮೇಲೆಯೇ ನಾವು ಒಂದಿಷ್ಟು ಒತ್ತಡವನ್ನು ಹಾಕಿಕೊಳ್ಳುವುದು: ಹೊಸ ನಿರ್ಧಾರಗಳನ್ನು ಕೈಗೊಂಡ ನಂತರ ಅದನ್ನು ಕಟ್ಟುನಿಟ್ಟಾಗಿ ಅನುಸರಿಸುವುದರಲ್ಲಿ ವಿಫಲರಾಗಲು ಕಾರಣವೇನೆಮದರೆ ಹಳೆಯ ಅಭ್ಯಾಸಕ್ಕೆ ಜಾರುವುದು ಬಹಳ ಸುಲಭ. ಒತ್ತಡ ಹಾಕುವುದು ಯಾವಾಗಲೂ ಕೆಟ್ಟದಲ್ಲ. ಒತ್ತಡವಿದ್ದಾಗಲೇ ಜನ ತಮ್ಮೊಳಗಿನ ಸುಪ್ತಶಕ್ತಿಯ ಚಿಲುಮೆಯಿಂದ ಅವಶ್ಯವಾಗಿರುವ ಚೈತನ್ಯವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಮೇಲೆ ನಾವೇ ಸಕಾರಾತ್ಮಕ ಒತ್ತಡವನ್ನು ಹಾಕಿಕೊಳ್ಳುವುದಕ್ಕೆ ಅನೇಕ ಮಾರ್ಗಗಳಿವೆ. ಹೇಗೆಂದರೆ ಎಲ್ಲರ ಮುಂದೆ ಪ್ರತಿಜ್ಞೆ ಮಾಡುವುದು ಒಂದು ಉತ್ತಮ ಮಾರ್ಗ. ಈ ರೀತಿ ನಮ್ಮ ಗುರಿ ಏನೆಂಬುದು ಎಲ್ಲರೆದುರು ಸಾರ್ವಜನಿಕವಾಗಿ ಜಾಹೀರಾತಾದ ಬಳಿಕ ಅದನ್ನು ಸಾಧಿಸಲು ಗಂಭೀರವಾದ ಪ್ರಯತ್ನ ಮಾಡಲೇಬೇಕಾಗುತ್ತದೆ. ಏಕೆಂದರೆ ಇದರಲ್ಲಿ ಸೋತರೆ ಆಗುವ ಅವಮಾನವನ್ನು ಯಾರೂ ಬಯಸುವುದಿಲ್ಲ. ಶಿವನದಲ್ಲಿ ಇನ್ನೂ ಪರಿಣಾಮಕಾರಿಯಾದ ವಿಧಾನವನ್ನು ಬಳಸುತ್ತಿದ್ದರು. ಉದಾಹರಣೆಗೆ ಒಂದು ವಾರದ ಉಪವಾಸ ಅಥವಾ ಬೆಳಿಗ್ಗೆ ೪ಗಂಟೆಗೆ ಎದ್ದು ಧ್ಯಾನಮಾಡುವುದು ಸಾಧ್ಯವಾಗದಿದ್ದರೆ ಸಮೀಪದ ಕೊರೆಯುವ ತಣ್ಣೀರಿನ ಜಲಪಾತದಲ್ಲಿ ಕೈಕಾಲುಗಳು ಮರಗಟ್ಟುವವರಗೆ ನಿಲ್ಲುವುದಾಗಿ ಪ್ರತಿಜ್ಞೆ ಮಾಡುತ್ತಿದ್ದರು. ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಹಾಗೂ ಗುರಿಯನ್ನು ಶತಾಯಗತಾಯ ಸಾಧಿಸುವ ದೃಷ್ಟಿಯಿಂದ ಈ ಅತಿರೇಕವೆನಿಸುವ ವಿಧಾನಗಳ ಉದಾಹರಣೆ ಇದು. ನಮಗೆ ಇದು ಒಂದು ರೀತಿಯ ಹುಚ್ಚು ಎನಿಸಲೂ ಬಹುದು ಆದರೂ ಈ ಹುಚ್ಚು ತುಂಬಾ ಪರಿಣಾಮಕಾರಿ. ಒಳ್ಳೆಯ ಅಭ್ಯಾಸಗಳಿಂದ ಸಂತೋಷ, ಕೆಟ್ಟ ಅಭ್ಯಾಸಗಳಿಂದ ಕಠೋರ ಶಿಕ್ಷೆ ಪರಿಣಾಮವೆಂದಾಗ ದೌರ್ಬಲ್ಯಗಳು ಸಲೀಸಾಗಿ ಬಿದ್ದುಹೋಗುತ್ತವೆ.

ಮೂರನೆಯ ಹೆಜ್ಜೆ- ಗುರಿಸಾಧನೆಗೆ ಸಮಯದ ಮಿತಿಯನ್ನು ನಿರ್ಧರಿಸುವುದು: ‘ಡೆಡ್ ಲೈನ್' ಇಲ್ಲದಿದ್ದರೆ ಗಿರಿಸಾಧನೆಗೆ ಜೀವ ಚೈತನ್ಯ ಬರುವುದಿಲ್ಲ. ನಾಳೆಯೇ ಮಾಡಬೇಕಾದ ಕೆಲಸಕ್ಕೆ ನಾವು ನೀಡುವಷ್ಟು ಗಮನವನ್ನು ಯಾವಾಗಲೋ ಮಾಡಲಿರುವ ಕೆಲಸಕ್ಕೆ ಕೊಡುವುದಿಲ್ಲ.

ನಾಲ್ಕನೆಯ ಹೆಜ್ಜೆ- ೨೧ರ ಮಾಂತ್ರಿಕ ಸೂತ್ರ: ಶಿವನದ ಎಲ್ಲಾ ಜ್ಞಾನಿಗಳ ಪ್ರಕಾರ ಯಾವುದೇ ಒಂದು ಹೊಸ ಅಭ್ಯಾಸ ಅಥವಾ ಜೀವನಶೈಲಿ ಗಟ್ಟಿಯಾಗಿ ನೆಲೆ ನಿಲ್ಲಬೇಕಾದರೆ ೨೧ದಿನವಾದರೂ ಅವ್ಯಾಹತವಾಗಿ ಸಾಧನೆ ಮಾಡಬೇಕು. ಹೊಸ ಅಭ್ಯಾಸವನ್ನು ಬಲವಾಗಿ ಸ್ಥಾಪಿಸಬೇಕಾದರೆ ಅದರ ಕಡೆಗೆ ನಮ್ಮ ಸಮಸ್ತ ಶಕ್ತಿಯನ್ನೂ ಕೇಂದ್ರೀಕರಿಸಿ ಪ್ರಯೋಗಿಸಬೇಕು. ಆಗ ಹಳೆಯ ಅಭ್ಯಾಸ ತನ್ನಷ್ಟಕ್ಕೇ ಕಳಚಿಕೊಳ್ಳುತ್ತದೆ. ಸಾಮಾನ್ಯವಾಗಿ ೨೧ದಿನಗಳ ಕಾಲಾವಧಿಯಲ್ಲಿ ಹೊಸ ಅಭ್ಯಾಸ ಸ್ಥಾಪಿತವಾಗುತ್ತದೆ. ಯಾವುದೇ ಹೊಸ ಚಟುವಟಿಕೆಯನ್ನು ೨೧ದಿನಗಳ ಕಾಲ ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ರೀತಿಯಲ್ಲಿ ಪ್ರತಿದಿನವೂ ಮಾಡುವುದರಿಂದ ಅದು ಬಲಿಷ್ಟ ಅಭ್ಯಾಸವಾಗಿ ಬೆಳೆಯುತ್ತದೆ. ಬೇಗ ಏಳುವ, ಧ್ಯಾನಮಾಡುವ, ಒಂದು ತಾಸು ಓದುವ ಅಥವಾ ಇನ್ಯಾವುದೇ ಚಟುವಟಿಕಟಯಾಗಲೀ ಹಲ್ಲುಜ್ಜುವಂತಹ ಅನಿವಾರ್ಯ ಅಭ್ಯಾಸವಾಗಿಬಿಡುತ್ತದೆ.

ಐದನೆಯ ಹೆಜ್ಜೆ- ಸಾಧನೆಯ ಪ್ರಕ್ರಿಯೆಯನ್ನು ಆನಂದಿಸುವುದು: ಶಿವನ ಸಾಧುಗಳು ‘ನಗುವಿಲ್ಲದ, ಪ್ರೀತಿಯಿಲ್ಲದ ದಿನವೆಂದರೆ ಜೀವವಿಲ್ಲದ ದಿನ'ವೆಂದು ನಂಬಿದ್ದರು. ಗುರಿಸಾಧನೆಯ ಮಾರ್ಗದಲ್ಲಿ ಮುನ್ನಡೆಯುತ್ತಿರುವಾಗ ಸಂತೋಷವಾಗಿರಬೇಕು. ಎಲ್ಲಾ ಚರಾಚರ ವಸ್ತುಗಳಲ್ಲಿರುವ ಸೌಂದರ್ಯವನ್ನು ಆನಂದಿಸಬೇಕು.'

ಪಾಶ್ಚಾತ್ಯ ಲಾಯರ್ ಒಬ್ಬ ನಮ್ಮ ಭಾರತದ ಋಷಿಮುನಿಗಳಿಂದ ಪರಂಪರಾಗತವಾಗಿ ಕಲಿಸಲ್ಪಟ್ಟ ಪ್ರಾಚೀನ ತತ್ವಜ್ಞಾನ ಹಾಗೂ ಅನುಷ್ಟಾನ ತಂತ್ರಗಳನ್ನು ತನ್ನದಾಗಿಸಿಕೊಂಡು ತನ್ನ ದೇಶಕ್ಕೆ ಹೋಗಿ ಅಲ್ಲಿ ಅವಶ್ಯಕತೆಯಿರುವವರಿಗೆ ಹಂಚುವ ಕಾರ್ಯದಲ್ಲಿ ಪ್ರವೃತ್ತನಾಗುತ್ತಾನೆ. ನಾವೂ ಈ ತಂತ್ರಗಳನ್ನು ನಮ್ಮದಾಗಿಸಿಕೊಂಡು ಜೀವನವನ್ನು ಸಂತಸದಿಂದ ಸಾರ್ಥಕಗೊಳಿಸಿಕೊಳ್ಳೊಣ.

6 comments:

  1. ಮೇಡಂ, ನಾನೂ ಈ ಪುಸ್ತಕದಿಂದ ಪ್ರಭಾವಿತನಾಗಿದ್ದೇನೆ. ಉತ್ತಮ ಪುಸ್ತಕ. ಹಿಂದಿನ ಪೋಸ್ಟಿನ ಹನಿಗಳು ತುಂಬಾ ಚೆನ್ನಾಗಿವೆ. ಧನ್ಯವಾದಗಳು.

    ReplyDelete
  2. ಒಂದು ಅತ್ಯುತ್ತಮ ಪುಸ್ತಕದ ಬಗೆಗೆ ತಿಳಿಸಿದಿರಿ. ಧನ್ಯವಾದಗಳು.

    ReplyDelete
  3. ಉತ್ತಮವಾಗಿದೆ.. ಈ ಐದು ಹೆಜ್ಜೆಗಳು ನಿಜಕ್ಕೂ ನಮ್ಮ ಜೀವನವನ್ನು ಬದಲಿಸಬಹುದು.. ಇವುಗಳನ್ನು ನಾನು ಅನುಸರಿಸಲು ಪ್ರಯತ್ನಿಸುತ್ತೇನೆ ಹಾಗು ಖಂಡಿತವಾಗಿ next "The monk who sold his Ferrari" ಪುಸ್ತಕ ಕೊಳ್ಳುತ್ತೇನೆ.

    ReplyDelete
  4. ಈ ಪುಸ್ತಕ ಮತ್ತು ಅದರಲ್ಲಿರುವ ಮಾಹಿತಿ ನೀಡಿದಕ್ಕೆ , ಧನ್ಯವಾದಗಳು .
    ರಾಬಿನ್ ಶರ್ಮ ಒಳ್ಳೆ ಬರಹಗಾರ , ಅವರದೇ ಆದ " THE LEADER WHO HAD NO TITLE " ಓದುತ್ತ ಇದ್ದಿನೆ .
    ಕಂಡಿತ MONK WHO SOLD FERRARI ಓದುತ್ತೇನೆ

    ReplyDelete
  5. ಬರಹ ಚನ್ನಾಗಿದೆ ಇಡಿ ಪುಸ್ತಕವನ್ನ, ಬರಹದಲ್ಲಿ ಕಟ್ಟಿ ಕೊಟ್ಟಿದಕ್ಕೆ ವ೦ದನೆಗಳು .

    ReplyDelete
  6. prabhamaniyavare baalyadalli poshakaru,odahuttidavaru gurugalaadare,gruhastaraadamele, pati,mattu makkalu...,adarallu hennumakkalu..arivu,aasareyuu aaguttaare.parivartaneya bagge uttama maahitiyannu nidiruvudakkaagi..dhanyavaadagalu.

    ReplyDelete