Monday, August 1, 2011

ಮನದ ಅಂಗಳದಿ.........೫೧. ಜೀವನವೆಂಬ 'ಆಟ’

ನಮ್ಮ ಜೀವನ ಆರಂಭವಾಗುವುದೇ 'ಆಟ'ದೊಂದಿಗೆ. ಇನ್ನೂ ಮಲಗಿದಲ್ಲಿಂದ ಹೊರಳಿಕೊಳ್ಳಲೂ ಆಗದ ಹಸುಗೂಸು ನಿದ್ದೆಯ ನಡುವಿನಲ್ಲೇ ಆಗಾಗ ನಗುವುದನ್ನು ಹಿರಿಯರು, 'ವಿಧಿ ಮಗೂನ ಆಟ ಆಡಿಸ್ತಾ ಇರ್‍ತಾಳೆ, ಅದಕ್ಕೇ ನಗೋದು' ಎಂದು ಅರ್ಥೈಸುತ್ತಿದ್ದರು. ಅದು ನಿದ್ದೆ ಮಾಡುತ್ತಲೇ ಅತ್ತಾಗ, 'ಮಗು ಕೈಯಲ್ಲಿ ಕೊಟ್ಟಿದ್ದ ಆಟದ ಸಾಮಾನನ್ನ ವಿಧಿ ಕಿತ್ತುಕೊಳ್ತಾಳೆ, ಆಗ ಮಗು ಅಳುತ್ತೆ,' ಎನ್ನುತ್ತಿದ್ದರು. ದಿನ ಕಳೆದಂತೆ ಮಗು ಕೈ-ಕಾಲುಗಳನ್ನು ಆಡಿಸುತ್ತಾ ಕೇಕೆ ಹಾಕಿಕೊಂಡು ತನ್ನಷ್ಟಕ್ಕೆ ತಾನೇ ಆಟವಾಡಿಕೊಳ್ಳಲಾರಂಭಿಸುತ್ತದೆ. ನಂತರದ ದಿನಗಳಲ್ಲಿ ಅದಕ್ಕೆ ಆಟ ಎಷ್ಟೊಂದು ಪ್ರಿಯವಾಗುತ್ತದೆಂದರೆ ಊಟ-ನಿದ್ದೆ ಎಲ್ಲವನ್ನೂ ಬಿಟ್ಟು ಆಟವಾಡುವುದರಲ್ಲೇ ತೊಡಗಿಬಿಡುತ್ತದೆ. ಆಟವಾಡುವಲ್ಲಿನ ಅದರ ತಲ್ಲೀನತೆಯನ್ನು ಶಬ್ದಗಳ ಮೂಲಕ ಸೆರೆಹಿಡಿಯಲು ಅಸಾಧ್ಯವೆನಿಸುತ್ತದೆ. ಮಗುವಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನೊಳಗೊಂಡ ಅದರ ದಿನಚರಿಯೇ ಒಂದು ಆಟವಾಗಿರುತ್ತದೆ. ಕ್ರಮೇಣ ಬೆಳೆದಂತೆ ಅಂಥಾ ಮನಸ್ಥಿತಿಯಿಂದ ಸ್ವಲ್ಪಸ್ವಲ್ಪವೇ ಹೊರಬಂದು ಆಟದಿಂದ ತನ್ನನ್ನೇ ತಾನು ಪ್ರತ್ಯೇಕಿಸಿಕೊಳ್ಳಲಾರಂಭಿಸುತ್ತದೆ. ಇದಕ್ಕೆ ತಂದೆ-ತಾಯಿಯರನ್ನೊಳಗೊಂಡ ಸುತ್ತಲಿನ ಪರಿಸರದ ಒತ್ತಡ, ನಿರೀಕ್ಷೆಗಳೂ ಕಾರಣವಾಗಿರಬಹುದು. ಆಟಕ್ಕೆ ಆಗ ಒಂದು ನಿಗಧಿತ ಅವಧಿ, ನಿರ್ದಿಷ್ಟ ನಿಯಮಾವಳಿಗಳು ಹೇರಲ್ಪಡುತ್ತವೆ. ಆಟ ಸ್ಪರ್ಧೆಯ ಒಂದು ಭಾಗವಾಗುತ್ತದೆ!

ಮೊದಲಿನಿಂದಲೂ ನನಗೆ ನಮ್ಮ ಸುತ್ತಮುತ್ತ ನಡೆಯುವ ಕ್ರಿಯೆಗಳೆಲ್ಲಾ ಒಂದು ಆಟದ ರೀತಿ ನಡೆಯುತ್ತಿದೆ ಎನಿಸುತ್ತಿತ್ತು. ನಾವು ಅನುಸರಿಸುವ ಸಂಪ್ರದಾಯಗಳು, ದಿನದ ಪ್ರಾರಂಭದಿಂದ ಮುಕ್ತಾಯದವರೆಗೂ ನಡೆಯುವ ಕಾರ್ಯಕಲಾಪಗಳು,.......... ಎಲ್ಲವೂ ಕೆಲವು ನಿಯಮಗಳಿಗೆ ಒಳಪಟ್ಟು ನಡೆಸುವ ಸಾಮೂಹಿಕ ಕ್ರೀಡೆಗಳೆನಿಸಿ ಅಚ್ಚರಿಯಾಗುತ್ತಿತ್ತು ಮತ್ತು ಯಾರಿಗಾದರೂ ಹೇಳಲೂ ವಿಚಿತ್ರವೆನಿಸಿ ಸುಮ್ಮನಿರುತ್ತಿದ್ದೆ. ಒಮ್ಮೆ ನನ್ನ ಆತ್ಮೀಯರೊಬ್ಬರಿಗೆ, 'ಜೀವನಾನೇ ಒಂದು ಆಟವೆನಿಸುತ್ತೆ, ಅಲ್ವಾ?' ಎಂದು ಹೇಳಿದಾಗ ಅವರು, 'ಮಾಡಿಕೊಡುವವರಿದ್ದರೆ ಹಾಗೇ......' ಎಂದು ಪ್ರತಿಕ್ರಿಯಿಸಿಬಿಟ್ಟರು! ಆನಂತರ ಆ ಬಗ್ಗೆ ಯೋಚಿಸುವುದನ್ನೇ ಬಿಟ್ಟುಬಿಟ್ಟಿದ್ದೆ. ಕಳೆದವಾರ ನನ್ನ ಮಗಳು VPP ಮೂಲಕ ತರಿಸಿಕೊಂಡ ಪುಸ್ತಕಗಳು ನಾನೊಬ್ಬಳೇ ಮನೆಯಲ್ಲಿದ್ದಾಗ ಬಂದುದರಿಂದ ಬಿಡಿಸಿಕೊಂಡು ಒಂದನ್ನು ಸಂಭ್ರಮದಿಂದ (ಆ ಪುಸ್ತಕದ ಮೊದಲ ಓದುಗಳು ನಾನಾದ್ದರಿಂದ) ಓದಲಾರಂಭಿಸಿದಾಗ ಅದರಲ್ಲಿದ್ದ ವಿಷಯ ನನಗೆ ಬಹಳ ಸಂತೋಷವನ್ನುಂಟುಮಾಡಿತು!

ನೆಲ್ಲೀಕೆರೆ ವಿಜಯಕುಮಾರ್ ಅವರ 'ಸುಮ್ಮನಿರಬಾರದೇ.......?'(ಪ್ರಯಾಸಕರ ಬದುಕಿಗೊಂದು ಗುಡ್ ಬೈ) ಪುಸ್ತಕದ ಮೂಲಜ್ಞಾನ ನೀಡಿದ 'ಸಿದ್ಧ ಸಮಾಧಿ ಯೋಗ'ದ ಪಿತಾಮಹರಾದ ಶ್ರೀ ಋಷಿಪ್ರಭಾಕರ್ ಅವರು ಬರೆದ ಮುನ್ನುಡಿ(ಗುರುವಾಣಿ)ಯಲ್ಲಿ ಈ ಜೀವನವೇ ಒಂದು ಆಟವಿದ್ದಂತೆ ಎನ್ನುವುದನ್ನು ಬಹಳ ಸಹಜವಾಗಿ ವಿವರಿಸಿದ್ದಾರೆ.

'ಬದುಕೊಂದು ಸರಳ ಆಟವೇ ಹೊರತು ಅದಕ್ಕೆ ಯಾವ ಉದ್ದೇಶವೂ ಇಲ್ಲ. ನಿಮ್ಮ ಮಗುವನ್ನು ಕೇಳಿನೋಡಿ: 'ನೀನು ಏಕೆ ಆಟವಾಡುತ್ತಿರುವೆ?' ಎಂದು. 'ಸುಮ್ಮನೆ' ಎನ್ನುತ್ತದೆಯಲ್ಲವೆ? ಅದು ಬಿಟ್ಟು ಆ ಪ್ರಶ್ನೆಗೆ ಉತ್ತರವಿಲ್ಲ. 'ಯಾಕೆ ಆಡುತ್ತಿರುವೆ?' ಎಂದು ಮತ್ತೆ ಕೇಳಿನೋಡಿ. ಆ ಮಗುವಿನ ದೃಷ್ಟಿಯಲ್ಲಿ ಹುಚ್ಚರಾಗಿಬಿಡುತ್ತೀರಿ, ಅಷ್ಟೆ!

ಜೀವನವಿರುವುದೇ 'ಆಟ' ಆಡುವುದಕ್ಕಾಗಿ. ಯಾವ ಆಟ ಎನ್ನುವುದು ಮುಖ್ಯವಲ್ಲ. ಮಗುವಿಗೆ ಆಟವಾಡುವುದು ಮಾತ್ರ ಗೊತ್ತು. ಯಾವ ಆಟ ಎನ್ನುವುದು ಮುಖ್ಯವಲ್ಲ. ತನಗಿಷ್ಟ ಬಂದ ಆಟವನ್ನಾಡುತ್ತದೆ.ಒಂದು ವೇಳೆ ಇಷ್ಟದ ಆಟವಾಡಲು ಅವಕಾಶವಿಲ್ಲದಾಗ ಸ್ವಲ್ಪ ಸಮಯ ಪ್ರತಿರೋಧಿಸಬಹುದು, ಅಳಬಹುದು. ಆದರೆ ಕೆಲವೇ ನಿಮಿಷಗಳಲ್ಲಿ ಅಳುವುದನ್ನು ನಿಲ್ಲಿಸಿ ಮತ್ತೊಂದು ಆಟವಾಡುತ್ತದೆ. ಯಾವ ಆಟಕ್ಕೆ ಅವಕಾಶವಿದೆಯೋ ಅದೇ ಆಟವನ್ನು ಆನಂದದಿಂದಲೇ ಪ್ರಾರಂಭಿಸುತ್ತದೆ.

ಆದರೆ ದೊಡ್ಡವರನ್ನು ಗಮನಿಸಿ ನೋಡಿ. ಒಂದು ಆಟವನ್ನು ಪ್ರಾರಂಭಿಸಿ ಮತ್ತೆಮತ್ತೆ ಅದೇ ಆಟವನ್ನು ಆಡುತ್ತಿರುತ್ತಾರೆ. ಪ್ರತಿದಿನ ಅದೇ ಕಛೇರಿಗೆ ಮತ್ತೆಮತ್ತೆ ಹೋಗುತ್ತಿರುತ್ತಾರೆ. ಅದೇ ಕೆಲಸ ಅವರಿಗಾಗಿ ಕಾದಿರುತ್ತದೆ. ಅಭ್ಯಾಸದಂತೆ ಅದೇ ಕೆಲಸ ನಿರ್ವಹಿಸುತ್ತಾರೆ. ಈ ನೌಕರಿಯಾಟದ ಅಸ್ತಿತ್ವಕ್ಕಾಗಿ ಅವರಿಗೆ ಸಂಬಳ ಬರುತ್ತದೆ. ಆದರೆ ಗಮನಿಸಿ ನೋಡಿ: ತಿಂಗಳ ಕೊನೆಯಲ್ಲಿ ವೇತನ ಪಡೆಯುವ ಸಮಯದ ಹೊರತಾಗಿ ಬಹುತೇಕ ನೌಕರರು ಅಸಂತೋಷದಿಂದಿರುತ್ತಾರೆ. ತನ್ನ ಪಾಲಿನ ಸರ್ಕಾರಿ ಕೆಲಸವನ್ನು ಅಥವಾ ಕಾರ್ಖಾನೆ ಕೆಲಸವನ್ನು ಆಸಕ್ತಿ, ಶ್ರದ್ಧೆಗಳಿಂದ ನಿರ್ವಹಿಸಲು ಉತ್ಸುಕರಾಗಿ ಕಾಯುತ್ತಿರುವ ಒಬ್ಬರನ್ನೂ ನಾನು ನೋಡಿಲ್ಲ. ಅನಿವಾರ್ಯವಾದ್ದರಿಂದ ಅವರು ಕೆಲಸಗಳಿಗೆ ಹೋಗುತ್ತಾರೆ, ಅಷ್ಟೆ......

ತಮ್ಮ ತಮ್ಮ ಕೆಲಸಗಳನ್ನು ಇವರು ಒಂದು ಧೀರ್ಘಕಾಲದ 'ಯುದ್ಧ'ದಂತೆಯೇ ಪರಿಗಣಿಸಿದ್ದಾರೆ. ಪ್ರತಿನಿತ್ಯವೂ ಕಛೇರಿ-ಕಾರ್ಖಾನೆಗಳಿಗೆ 'ಆಟ'ವಾಡಲು ಹೋಗುತ್ತಿದ್ದೇನೆನ್ನುವ ಭಾವ ಅದೆಷ್ಟು ಮಂದಿಗಿದೆ? ಆಧ್ಯಾತ್ಮ ಎಂದರೆ ಸದಾ ಆಟವಾಡುವ ಸ್ಥಿತಿಯಲ್ಲದೇ ಮತ್ತೇನು? ಭೌತಿಕತೆಯಲ್ಲಿ ಬರಿಯ ಯುದ್ಧ ಹಾಗೂ ದುಃಖವಿದೆ. ದೇವರು ನಿಮಗೆ ಆಟವಾಡಲೆಂದು ಹಣ ನೀಡುತ್ತಾನೆ. ಆದರೆ ನೀವು ಆ ಹಣವನ್ನು ಯುದ್ಧಮಾಡಲು ಉಪಯೋಗಿಸುತ್ತೀರಿ.'

ನೆಲ್ಲೀಕೆರೆ ವಿಜಯಕುಮಾರ್ ಅವರು ಈ ಪುಸ್ತಕದ 'ಸಮರ್ಪಣೆ'ಯಲ್ಲಿ,

'ತ್ರಿಕಾಲ ಮದ್ಯವ್ಯಸನದ ಬದುಕಿನಿಂದ

ತ್ರಿಕಾಲ ಸಂಧ್ಯೆಯ ಬದುಕಿನತ್ತ

ಕೈಹಿಡಿದು ನಡೆಸಿದ

'ಸಿದ್ಧ ಸಮಾಧಿ ಯೋಗ'ದ ಪಿತಾಮಹ

ಪೂಜ್ಯ ಗುರೂಜಿ ಶ್ರೀ ಋಷಿಪ್ರಭಾಕರ್‌ರವರಿಗೆ' ಎಂದು ಬರೆದಿದ್ದಾರೆ.

ಮೂರುಹೊತ್ತೂ ಕುಡಿಯುತ್ತಾ ಹಿಂತಿರುಗಿ ಬರಲಾರದ ಸ್ಥಿತಿಯನ್ನು ತಲುಪಿದ್ದ ತಮ್ಮ ಬದುಕು 'ಸುಮ್ಮನಿದ್ದುಬಿಡುವ ಕಲೆ'ಯನ್ನು ಗುರುಮುಖೇನ ತಮ್ಮದಾಗಿಸಿಕೊಂಡು ಪರಿವರ್ತನೆಹೊಂದಿ ಉತ್ತಮ ಜೀವನ ನಡೆಸುವಂತಾದ ಅನುಭವವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

'ಎಸ್. ಎಸ್.ವೈ.ನಲ್ಲಿ ನೀಡಲಾಗುವ ತರಬೇತಿಗಳು ಒಂದಕ್ಕಿಂತ ಒಂದು ಶಕ್ತಿಯುತವಾಗಿದ್ದು ಒಂದೊಂದೇ ತರಬೇತಿ ಹೊಂದುತ್ತಾ ಹೋದಂತೆ ಬದುಕು ಅತ್ಯಂತ ಸರಳ, ನೇರ, ಪ್ರಾಮಾಣಿಕ ಹಾಗೂ ಪ್ರಯಾಸರಹಿತವಾಗುತ್ತದೆ. ಬಹುತೇಕ 'ಯುದ್ಧ'ವೇ ಆಗಿಹೋಗಿರುವ ನಮ್ಮೆಲ್ಲರ ಜೀವನವು ಮಕ್ಕಳ 'ಆಟ'ದಂತಾಗುತ್ತದೆ.....' ಎನ್ನುತ್ತಾರೆ.

ಸರಳ-ಸುಂದರವಾದ ಬದುಕನ್ನು ನಾವೇ ಜಟಿಲವಾಗಿಸಿಕೊಂಡು ಸಂಕೀರ್ಣಗೊಳಿಸಿಕೊಳ್ಳುತ್ತಾ ಸಾಗುತ್ತೇವೆ. ಅನೇಕ ಒತ್ತಡಗಳಿಂದ ನಮ್ಮ ದೇಹ ಮತ್ತು ಮನಸ್ಸನ್ನು ನಲುಗಿಸಿ ರೋಗಗಳ ಗೂಡಾಗುತ್ತೇವೆ. ಕಡೆಗೆ ಸಾಕಪ್ಪಾ ಈ ಬದುಕು ಎನ್ನುವ ಹಂತವನ್ನು ತಲುಪುತ್ತೇವೆ. ಮೊದಲೇ ಸ್ವಲ್ಪ ಎಚ್ಚೆತ್ತುಕೊಂಡರೆ ಉಲ್ಲಾಸ ಮತ್ತು ಉತ್ಸಾಹಗಳಿಂದ ಬದುಕೆಂಬ ಆಟದಲ್ಲಿ ಭಾಗಿಗಳಾಗಬಹುದು.

15 comments:

  1. ಸು೦ದರವಾಗಿ ಆಟವನ್ನು ವರ್ಣಿಸಿದ್ದೀರಿ ಪ್ರಭಾಮಣಿಯವರೇ..
    ನೀವು ಈ ಎಸ್ ಎಸ್ ವೈ ತರಬೇತಿಯನ್ನು ಪಡೆದಿದ್ದೀರಾ..?ಇಲ್ಲವಾದರೆ, ಸಾಧ್ಯವಿದ್ದರೆ ಅದರಲ್ಲಿ ಭಾಗವಹಿಸಿ.ತು೦ಬಾ ಚನ್ನಾಗಿರುತ್ತದೆ. ಸ೦ಪೂರ್ಣ ಮನೋವೈಜ್ನಾನಿಕ ತಳಹದಿಯ ಮೇಲೆಯೇ ರೂಪಿಸಿದ೦ತಹಾ ಪಠ್ಯಕ್ರಮವಿದೆ.. ಅದರಲ್ಲಿ.ಮತ್ತು ಆಧ್ಯಾತ್ಮದ ಲೇಪನವಿದೆ.
    ವ೦ದನೆಗಳು.

    ReplyDelete
  2. Content is not visible! Pls do something!



    ¸ÀgÀ¼À-¸ÀÄAzÀgÀªÁzÀ §zÀÄPÀ£ÀÄß £ÁªÉà dn®ªÁV¹PÉÆAqÀÄ ¸ÀAQÃtðUÉƽ¹PÉƼÀÄîvÁÛ ¸ÁUÀÄvÉÛêÉ. C£ÉÃPÀ MvÀÛqÀUÀ½AzÀ £ÀªÀÄä zÉúÀ ªÀÄvÀÄÛ ªÀÄ£À¸Àì£ÀÄß £À®ÄV¹ gÉÆÃUÀUÀ¼À UÀÆqÁUÀÄvÉÛêÉ. PÀqÉUÉ ¸ÁPÀ¥Áà F §zÀÄPÀÄ J£ÀÄߪÀ ºÀAvÀªÀ£ÀÄß vÀ®Ä¥ÀÄvÉÛêÉ. ªÉÆzÀ¯Éà ¸Àé®à JZÉÑvÀÄÛPÉÆAqÀgÉ G¯Áè¸À ªÀÄvÀÄÛ GvÁìºÀUÀ½AzÀ §zÀÄPÉA§ DlzÀ°è ¨sÁVUÀ¼ÁUÀ§ºÀÄzÀÄ.

    ReplyDelete
  3. ಪ್ರಭಾಮಣಿಯವರೆ,
    ಇಲ್ಲಿ ಮೂಡಿದ font ಅರ್ಥವಾಗುತ್ತಿಲ್ಲ!

    ReplyDelete
  4. font ಸಮಸ್ಯೆಯಾಯಿತು, ಸರಿಯಾಗಿ ಓದೋಕೆ ಆಗಲಿಲ್ಲ.

    ReplyDelete
  5. @ವಿಜಯಶ್ರೀಯವರೇ,
    ಎಸ್ ಎಸ್ ವೈ ತರಬೇತಿಯ ಬಗ್ಗೆ ಬಹಳ ಉತ್ತಮ ಮಾಹಿತಿ ನೀಡಿದ್ದಕ್ಕಾಗಿ ಹಾಗೂ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  6. @ ಸುನಾಥ್ ರವರೆ,
    @ಸುಬ್ರಹ್ಮಣ್ಯ ರವರೆ,
    @ಭಾಶೆ ಯವರೇ,
    ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು.ಎಡಿಟ್ ಮಾಡಿ ಮತ್ತೊಮ್ಮೆ ಪೋಸ್ಟ್ ಮಾಡಿದ್ದೇನೆ. ತೊ೦ದರೆಯಾಗಿದ್ದಕ್ಕೆ ಕ್ಷಮಿಸಿ. ನಿಮ್ಮ ಪ್ರತಿಕ್ರಿಯೆಯನ್ನು ನೀಡಿರಿ.

    ReplyDelete
  7. ಜೀವನವೇ ಒಂದು ಆಟ
    ಕೆಲವೊಮ್ಮೆ ಚೆಂಡಾಟ, ನಾವು ಅದರ ಚೆಂಡಾಗಿ ಬಿಡುತ್ತೇವೆ..ಕೆಲವೊಮ್ಮೆ ಗೂಳಿ ಕಾಳಗದ ಕಾದಾಟ ಆಗಿಬಿಡುತ್ತದೆ ನಮ್ಮೆ ಜೀವನ...
    ನಮ್ಮ ಮನಸ್ಥಿತಿ ಸೀಮಿತವಾಗಿರಿವುದಿಲ್ಲ...ಇಂಥ ಸನ್ನಿವೇಶಕ್ಕೆ ತಕ್ಕ ಸಿದ್ಧ ಸಮಾಧಿ ಯೋಗ ಮತ್ತು ಪುಸ್ತಕದ ಬಗ್ಗೆ ಒಲೀಯ ಮಾಹಿತಿ ನೀಡಿದ್ದಿರಿ.. ವಂದನೆಗಳು...

    ReplyDelete
  8. 'ಆರಡಿ ಮೂರಡಿ ಗ್ರೌಂಡಲ್ಲಿ ಕೊನೇಲಿ ಎಲ್ಲರ ಬ್ಯಾಟಿಂಗು ಅಲ್ಲೀವರ್ಗೂ ಫೀಲ್ಡಿಂಗು' ಸಾಲು ನೆನಪಾಗುತ್ತವೆ..

    _ನನ್ನ 'ಮನಸಿನಮನೆ'ಗೂ ಬನ್ನಿ

    ReplyDelete
  9. ಪ್ರಭಾಮಣಿಯವರೆ,
    ಈಗ ಓದಲು ಸಾಧ್ಯವಾಯಿತು. ಜೀವನವೆನ್ನುವದು ಒಂದು ಆಟ ಎನ್ನುವ ಮನೋಭೂಮಿಕೆಯನ್ನು ಸಿದ್ಧಪಡಿಸಿಕೊಂಡರೆ, ಬಾಳು ಸರಾಗವಾಗುವದರಲ್ಲಿ ಸಂಶಯವಿಲ್ಲ. ಧನ್ಯವಾದಗಳು.

    ReplyDelete
  10. @ ಸುನಾಥ್ ರವರೆ,
    ಮತ್ತೊಮ್ಮೆ ಬ೦ದು ನಿಮ್ಮ ಪ್ರಬುದ್ಧವಾದ ಪ್ರತಿಕ್ರಿಯೆಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  11. @ಗಿರೀಶ್ ರವರೆ,
    ಜೀವನದ ನಮ್ಮ ಪ್ರತಿಯೊ೦ದು ಸ೦ದರ್ಭವೂ ಒ೦ದು ಆಟವಿದ್ದ೦ತೆ. ಉತ್ತಮವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  12. @ಗುರು ರವರೆ,
    ಜೀವನದ ಕಡೆಯ ಆಟದ ಬಗ್ಗೆ ಹೇಳುತ್ತಿದ್ದೀರಿ!ಇನ್ನೂ ಬಹಳ ಸಮಯವಿದೆ ಎ೦ದುಕೊಳ್ಳುತ್ತಾ ಆಟವನ್ನು ಮು೦ದುವರೆಸೊಣ. ಧನ್ಯವಾದಗಳು. ನಿಮ್ಮ ಬ್ಲಾಗ್ ಗೆ ಬ೦ದು ನಿಮ್ಮ 'ಉದಯವಾಣಿ'ಯ ಲೇಖನ ಓದಿ ಪ್ರತಿಕ್ರಿಯಿಸಿದ್ದೇನೆ.

    ReplyDelete
  13. ಒಳ್ಳೆಯ ಅರ್ಥಪೂರ್ಣ ಲೇಖನ .

    ReplyDelete
  14. @ಸುಬ್ರಹ್ಮಣ್ಯರವರೆ,
    ಲೇಖನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  15. ನೆಲ್ಲಿಕೆರೆ ವಿಜಯಕುಮಾರರ ಇನ್ನೊಂದು ಪುಸ್ತಕ ಶಿಸ್ತಿನ ಬದುಕಿಗೊಂದು ಗುಡ್ಬೈ! ಅಸಿಸ್ತಿನಿನಿದ್ರಿ ಸುಕವಾಗಿರಿ... ಒಂದು ಚೆಂದದ ಪುಸ್ತಕ. ನಾನು ಓದಿದ್ದೇನೆ. ನನ್ನ ೧೦ ತಿಂಗಳ ಮಗನ ಆಟ ನೋಡುತ್ತಾ ಇರುವಾಗ ತಮಗನ್ನಿಸಿದ್ದು ನನಗೆ ವೇದ್ಯವಾಗುತ್ತಿದೆ...

    ReplyDelete